ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಮಹೊಬಾದಲ್ಲಿ ಉಜ್ವಲಾ 2.0 ಗೆ ಚಾಲನೆ ನೀಡಿದ ಪ್ರಧಾನಮಂತ್ರಿ


ಬುಂಡೇಲಖಂಡದ ಮಣ್ಣಿನ ಮಗ ಮೇಜರ್ ಧ್ಯಾನ್ ಚಂದ್ ಅಥವಾ ದಾದಾ ಧ್ಯಾನ್ ಚಂದ್ ಸ್ಮರಣೆ

ಹೆಚ್ಚಿನ ಜನರು ವಿಶೇಷವಾಗಿ ಮಹಿಳೆಯರ ಜೀವನ ಅನಿರೀಕ್ಷಿತ ರೀತಿಯಲ್ಲಿ ಉಜ್ವಲಾ ಯೋಜನೆಯಿಂದ ಪ್ರಕಾಶಿಸುತ್ತಿದೆ: ಪ್ರಧಾನಮಂತ್ರಿ

ಸಹೋದರಿಯರ ಆರೋಗ್ಯ, ಅನುಕೂಲ ಮತ್ತು ಸಬಲೀಕರಣದ ನಿರ್ಣಯವು ಉಜ್ವಲ ಯೋಜನೆಯಿಂದ ಹೆಚ್ಚಿನ ಉತ್ತೇಜನ ಪಡೆದಿದೆ: ಪ್ರಧಾನಮಂತ್ರಿ

ವಸತಿ, ವಿದ್ಯುಚ್ಛಕ್ತಿ, ನೀರು, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆ ಮತ್ತಿತರ ಮೂಲ ಸೌಕರ್ಯಗಳನ್ನು ದಶಕಗಳ ಹಿಂದೆಯೇ ಒದಗಿಸಬಹುದಿತ್ತು : ಪ್ರಧಾನಮಂತ್ರಿ

ಉಜ್ವಲಾ 2.0 ಯೋಜನೆ ಲಕ್ಷಾಂತರ ವಲಸೆ ಕಾರ್ಮಿಕ ಕುಟುಂಬಗಳಿಗೆ ಗರಿಷ್ಠ ಪ್ರಯೋಜನ ಒದಗಿಸಲಿದೆ: ಪ್ರಧಾನಮಂತ್ರಿ

ಜೈವಿಕ ಇಂಧನ, ದೇಶದ ಮತ್ತು ಗ್ರಾಮಗಳ ಅಭಿವೃದ್ಧಿಯಲ್ಲಿ ಸ್ವಾವಲಂಬನೆಯ ಎಂಜಿನ್ ಆಗಿದೆ: ಪ್ರಧಾನಮಂತ್ರಿ

ಸಮರ್ಥ ಭಾರತದ ಸಂಕಲ್ಪವನ್ನು  ಸಾಧಿಸುವಲ್ಲಿ ಸಹೋದರಿಯರು ವಿಶೇಷ ಪಾತ್ರವನ್ನು ವಹಿಸಲಿದ್ದಾರೆ: ಪ್ರಧಾನಮಂತ್ರಿ

Posted On: 10 AUG 2021 3:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉಜ್ವಲಾ 2.0 (ಪ್ರಧಾನಮಂತ್ರಿ ಉಜ್ವಲಾ ಯೋಜನೆಪಿಎಂಯುವೈ)ಗೆ ಉತ್ತರಪ್ರದೇಶದ ಮಹೊಬಾದಲ್ಲಿ ಅಡುಗೆ ಅನಿಲ (ಎಲ್ ಪಿಜಿ) ಸಂಪರ್ಕಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮುಂಬರುವ ರಕ್ಷಾಬಂಧನದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸಹೋದರಿಯರನ್ನುದ್ದೇಶಿಸಿ ಮಾತನಾಡುತ್ತಿರುವುದು ತಮಗೆ ಹರ್ಷತಂದಿದೆ ಎಂದರು. ಹೆಚ್ಚಿನ ಸಂಖ್ಯೆಯ ಜನರು ವಿಶೇಷವಾಗಿ ಮಹಿಳೆಯರ ಜೀವನ ಉಜ್ವಲಾ ಯೋಜನೆಯಿಂದಾಗಿ ಅನಿರೀಕ್ಷಿತ ರೀತಿಯಲ್ಲಿ ಪ್ರಕಾಶಿಸುತ್ತಿದೆ ಎಂದರು 2016ರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದ ಮಂಗಲಪಾಂಡೆಯ  ಹುಟ್ಟೂರಾದ ಉತ್ತರಪ್ರದೇಶದ ಬಲಿಯಾದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಇಂದು ಎರಡನೇ ಆವೃತ್ತಿಯ ಉಜ್ವಲಾ ಯೋಜನೆಗೆ ಉತ್ತರಪ್ರದೇಶದ ವೀರಭೂಮಿ ಮಹೊಬಾದಿಂದ ಚಾಲನೆ ನೀಡಲಾಗುತ್ತಿದೆ ಎಂದರು. ಬುಂಡೇಲಖಂಡ್ ಮತ್ತೊಬ್ಬ ಮಣ್ಣಿನ ಮಗ ಮೇಜರ್ ಧ್ಯಾನ್ ಚಂದ್ ಅಥವಾ ದಾದಾ ಧ್ಯಾನ್ ಚಂದ್ ಅವರನ್ನು ಪ್ರಧಾನಮಂತ್ರಿ ಸ್ಮರಿಸಿದರು. ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ನಾಮಕರಣ ಮಾಡಲಾಗಿದೆ. ಇದು ಕ್ರೀಡೆಯಲ್ಲಿ ಭವಿಷ್ಯವನ್ನು ಅರಸಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಲಿದೆ ಎಂದರು.

ವಸತಿ, ವಿದ್ಯುಚ್ಛಕ್ತಿ, ನೀರು, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆ ಮತ್ತಿತರ ಹಲವು ಮೂಲಸೌಕರ್ಯಗಳಿಗಾಗಿ ದೇಶದ ಜನತೆ ದಶಕಗಳ ಕಾಲ ಕಾಯುವಂತಾಗಿತ್ತು ಎಂದು ಪ್ರಧಾನಮಂತ್ರಿ ಅವರು ಟೀಕಿಸಿದರು. ಇಂತಹ ಹಲವು ಸಮಸ್ಯೆಗಳನ್ನು ದಶಕಗಳ ಹಿಂದೆಯೇ ಪರಿಹರಿಸಬಹುದಾಗಿತ್ತು ಎಂದರು. ನಮ್ಮ ಸಹೋದರಿಯರು ಮನೆ ಹಾಗೂ ಅಡುಗೆ ಕೋಣೆಗಳಿಂದ ಈಚೆ ಬಂದು ರಾಷ್ಟ್ರ ನಿರ್ಮಾಣಕ್ಕೆ ವ್ಯಾಪಕವಾಗಿ ಕೊಡುಗೆ ನೀಡಬೇಕಾದರೆ ಮೊದಲು ಅವರು ಮನೆ ಮತ್ತು ಅಡುಗೆ ಕೋಣೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. ಆದ್ದರಿಂದ ಕಳೆದ ಆರೇಳು ವರ್ಷಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಸಮರೋಪಾದಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ; ಬಡಕುಟುಂಬಗಳಿಗೆ ಎರಡು ಕೋಟಿಗೂ ಅಧಿಕ ಮನೆಗಳನ್ನು ನೀಡಲಾಗಿದೆ. ಅದರಲ್ಲಿ ಬಹುತೇಕ ಮಹಿಳೆಯರ ಹೆಸರಿನಲ್ಲಿವೆ; ಗ್ರಾಮೀಣ ರಸ್ತೆಗಳು; ಮೂರು ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, ಆಯುಷ್ಮಾನ್ ಭಾರತ್ ಅಡಿ 50 ಕೋಟಿ ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಲಸಿಕೆ ಪಡೆಯಲು ಹಾಗು ಪೌಷ್ಟಿಕಾಂಶಕ್ಕೆ ನೇರ ನಗದು ವರ್ಗಾವಣೆ; ಕೊರೊನಾ ಅವಧಿಯಲ್ಲಿ ಮಹಿಳೆಯರಿಗೆ ಜನ್-ಧನ್ ಖಾತೆ ಮೂಲಕ ಸರ್ಕಾರದಿಂದ 30 ಸಾವಿರ ಕೋಟಿ ರೂಪಾಯಿ ಜಮೆ; ನಮ್ಮ ಸಹೋದರಿಯರಿಗೆ ಜಲಜೀವನ್ ಮಿಷನ್ ಅಡಿ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಜನೆಗಳು ಮಹಿಳೆಯರ ಜೀವನದಲ್ಲಿ ಗಮನಾರ್ಹ ಪರಿವರ್ತನೆಗಳನ್ನು ತಂದಿದೆ ಎಂದು ಅವರು ಹೇಳಿದರು

ನಮ್ಮ ಸಹೋದರಿಯರ ಆರೋಗ್ಯ, ಅನುಕೂಲ ಮತ್ತು ಸಬಲೀಕರಣಕ್ಕಾಗಿ ಕೈಗೊಂಡ ಕ್ರಮಗಳಿಂದಾಗಿ ಉಜ್ವಲ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಜನೆಯ ಮೊದಲ ಹಂತದಲ್ಲಿ ಎಂಟು ಕೋಟಿ ಬಡವರು, ದಲಿತರು, ಶೋಷಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಯೋಜನೆಯ ಲಾಭದ ಅನುಭವವಾಗಿದೆ. ಉಜ್ವಲಾ ಯೋಜನೆ, ಎಲ್ ಪಿಜಿ ಅನಿಲ ಮೂಲಸೌಕರ್ಯ ವಿಸ್ತರಣೆಯನ್ನು ಹಲವು ಪಟ್ಟು ಹೆಚ್ಚಿಸಿದೆ. ಕಳೆದ ಆರೇಳು ವರ್ಷಗಳಲ್ಲಿ 11 ಸಾವಿರಕ್ಕೂ ಅಧಿಕ ಎಲ್ ಪಿಜಿ ವಿತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. 2014ರಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ ಎರಡು ಸಾವಿರ ಎಲ್ ಪಿಜಿ ವಿತರಣಾ ಕೇಂದ್ರಗಳಿದ್ದವು. ಈಗ ಅವುಗಳ ಸಂಖ್ಯೆ ನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ. 2014ರಿಂದೀಚೆಗೆ ಕಳೆದ ಏಳು ವರ್ಷಗಳಲ್ಲಿ ಹೆಚ್ಚಿನ ಅಡುಗೆ ಅನಿಲ ಸಂಪರ್ಕಗಳನ್ನು ನೀಡಿರುವುದರಿಂದ ನಾವು ಶೇಕಡ 100ರಷ್ಟು ಅಡುಗೆ ಅನಿಲ ಸಂಪರ್ಕ ಸಾಧಿಸುವತ್ತಾ ಸಾಗಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು

ಉತ್ತರ ಪ್ರದೇಶದಾದ್ಯಂತ ಮತ್ತು ಬುಂಡೇಲ್ ಖಂಡ ಸೇರಿದಂತೆ ಇತರೆ ರಾಜ್ಯಗಳ ಗ್ರಾಮಗಳಿಂದ ನಗರಗಳಿಗೆ ಅಥವಾ ರಾಜ್ಯಗಳಿಗೆ ವಲಸೆ ಹೋಗುವ ಕುಟುಂಬಗಳಿಗೆ ಇದು ನೆರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ವಿಳಾಸ ದಾಖಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಉಜ್ವಲಾ 2.0 ಅಡಿ ಅಂತಹ ಲಕ್ಷಾಂತರ ಕುಟುಂಬಗಳಿಗೆ ಗರಿಷ್ಠ ಪ್ರಯೋಜನವನ್ನು ಒದಗಿಸಲಾಗುವುದು. ಇದೀಗ ಅಂತಹ ಕೂಲಿಕಾರರು ವಿಳಾಸ ದೃಢೀಕರಣಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿಲ್ಲ. ವಲಸೆ ಕಾರ್ಮಿಕರ ಪ್ರಾಮಾಣಿಕತೆಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ನಂಬಿಕೆ  ಎಂದು ಹೇಳಿದರು. ಇದಕ್ಕೆ ಮಾಡಬೇಕಾಗಿರುವುದೆಂದರೆ ವಿಳಾಸದ ಸ್ವಯಂ ದೃಢೀಕರಣ ಪತ್ರ ನೀಡಿ, ಅಡುಗೆ ಅನಿಲ ಸಂಪರ್ಕವನ್ನು ಪಡೆಯಬಹುದಾಗಿದೆ.

ಕೊಳವೆ ಮೂಲಕ ಅಡುಗೆ ಅನಿಲ ಒದಗಿಸುವ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಶ್ರೀ ನರೇಂದ್ ಮೋದಿ ಹೇಳಿದರು. ಸಿಲಿಂಡರ್ ಗಿಂತ ಪಿಎನ್ ಜಿ ಬಲೆ ಅತ್ಯಂತ ಕಡಿಮೆ  ಮತ್ತು ಉತ್ತರ ಪ್ರದೇಶ ಸೇರಿದಂತೆ ಪೂರ್ವ ಭಾರತದ ಹಲವು ಜಿಲ್ಲೆಗಳಲ್ಲಿ ಪಿಎನ್ ಜಿ ಒದಗಿಸುವ ಕೆಲಸ ಭರದಿಂದ ಸಾಗಿದೆ. ಮೊದಲನೇ ಹಂತದಲ್ಲಿ ಉತ್ತರ ಪ್ರದೇಶದ 50ಕ್ಕೂ ಅಧಿಕ ಜಿಲ್ಲೆಗಳಲ್ಲಿ 12 ಲಕ್ಷಕ್ಕೂ ಅಧಿಕ ಮನೆಗಳಿಗೆ ಪಿಎನ್ ಜಿ ಅನಿಲ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ನಾವು ಇದೀಗ ಗುರಿಯ ಸನಿಹದಲ್ಲಿದ್ದೇವೆ ಎಂದರು.

ಜೈವಿಕ ಇಂಧನದ ಪ್ರಯೋಜನಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಜೈವಿಕ ಇಂಧನ ಕೇವಲ ಶುದ್ಧ ಇಂಧನ ಮಾತ್ರವಲ್ಲ, ಇವು ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವ ಇಂಜಿನ್, ದೇಶದ ಅಭಿವೃದ್ಧಿಯ ಇಂಜಿನ್ ಮತ್ತು ಗ್ರಾಮಗಳ ಅಭಿವೃದ್ಧಿಯ ಇಂಜಿನ್ ಕೂಡ ಆಗಿದೆ ಹಾಗೂ ಅಭಿವೃದ್ಧಿ ಎಂಜಿನ್ ಅನ್ನು ವೇಗಗೊಳಿಸುವ ಮಾಧ್ಯಮವೂ ಆಗಿದೆ ಎಂದರು. ಜೈವಿಕ ಇಂಧನ ಮನೆ ಹಾಗೂ ಕೃಷಿ ತ್ಯಾಜ್ಯದಿಂದ ಮತ್ತು ತೋಟಗಳಿಂದ ಮತ್ತು ಹಾಳಾದ ಧಾನ್ಯಗಳಿಂದ ಉತ್ಪಾದಿಸಬಹುದಾಗಿದೆ. ನಾವು ಕಳೆದ ಆರೇಳು ವರ್ಷಗಳಲ್ಲಿ ಶೇಕಡ 10ರಷ್ಟು ಇಂಧನ ಮಿಶ್ರಣದ ಗುರಿಯನ್ನು ಹೊಂದಿದ್ದೆವು. ಗುರಿಯ ಸನಿಹದಲ್ಲಿದ್ದೇವೆ ಮತ್ತು ಮುಂದಿನ ನಾಲ್ಕೈದು ವರ್ಷಗಳಲ್ಲಿ ನಾವು ಶೇ.20ರಷ್ಟು ನಾವು ಮಿಶ್ರ ಇಂಧನ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದರು. ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 7 ಸಾವಿರ ಕೋಟಿ ರೂಪಾಯಿ ಮೌಲ್ಯದ ಎಥೆನಾಲ್ ಖರೀದಿಸಲಾಗಿದೆ. ಹಲವು ಎಥೆನಾಲ್ ಮತ್ತು ಜೈವಿಕ ಇಂಧನ ಸಂಬಂಧಿ ಘಟಕಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಕಬ್ಬಿನ ತ್ಯಾಜ್ಯದಿಂದ ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದನೆ, ರಾಜ್ಯದ 70 ಜಿಲ್ಲೆಗಳಲ್ಲಿ ಸಿಬಿಜಿ ಘಟಕಗಳ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ‘ಪರಾಲಿಯಿಂದ ಜೈವಿಕ ಇಂಧನವನ್ನು ಉತ್ಪಾದಿಸುವ ಘಟಕಗಳು ಬುದಾನ್ ಮತ್ತು ಗೋರಖ್ ಪುರಗಳಲ್ಲಿ ಆರಂಭವಾಗಲಿವೆ.

ದೇಶ ಇದೀಗ ಮೂಲಸೌಕರ್ಯಗಳ ಈಡೇರಿಕೆಯ ನಂತರ ಉತ್ತಮ ಜೀವನದ ಕನಸು ಸಹಕಾರ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ನಾವು ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಬೇಕಾಗಿದೆ. ನಾವೆಲ್ಲರೂ ಒಗ್ಗೂಡಿ ಸಮರ್ಥ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಬೇಕಿದೆ. ಅದರಲ್ಲಿ ನಮ್ಮ ಸಹೋದರಿಯರು ವಿಶೇಷ ಪಾತ್ರವನ್ನು ವಹಿಸಲಿದ್ದಾರೆ.

 

***



(Release ID: 1744498) Visitor Counter : 357