ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

2021-22ನೇ ಸಾಲಿನ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ ಮತ್ತು ಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್‌.ಬಿ.ಎಸ್) ದರಕ್ಕೆ ಸಂಪುಟದ ಅನುಮೋದನೆ

Posted On: 16 JUN 2021 3:36PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ, ಪಿ ಮತ್ತು ಕೆ ರಸಗೊಬ್ಬರಕ್ಕೆ  2021-22 (ಪ್ರಸಕ್ತ ಹಂಗಾಮಿನವರೆಗೆ) ಪೌಷ್ಟಿಕಾಂಶ ಆಧಾರಿತ ರಸಗೊಬ್ಬರಗಳ ದರ ನಿಗದಿ ಮಾಡಲು ರಸಗೊಬ್ಬರ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಎನ್.ಬಿ.ಎಸ್.ಗೆ ಅನುಮೋದಿತ ದರಗಳು ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರಲಿದ್ದು, ಈ ಕೆಳಕಂಡಂತಿದೆ:

ಪ್ರತಿ ಕೆ.ಜಿ.ಗೆ ಸಬ್ಸಿಡಿ ದರ (ರೂ.ಗಳಲ್ಲಿ)

 

ಎನ್ (ಸಾರಜನಕ)

 

ಪಿ(ರಂಜಕ)

 

ಕೆ(ಪೊಟ್ಯಾಷ್)

 

ಎಸ್.(ಗಂಧಕ)

 

18.789

 

45.323

 

10.116

 

2.374

 

 

ಭಾರತ ಸರ್ಕಾರ ರಸಗೊಬ್ಬರಗಳು ಅಂದರೆ ಯೂರಿಯಾ ಮತ್ತು 22 ಶ್ರೇಣಿಯ ಪಿ ಮತ್ತು ಕೆ ರಸಗೊಬ್ಬರ (ಡಿಎಪಿ ಸೇರಿದಂತೆ)ಗಳು ಉತ್ಪಾದಕರು/ರಫ್ತುದಾರರಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಪಿ ಮತ್ತು ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010ರಿಂದ ಅನ್ವಯವಾಗುವಂತೆ ಎನ್.ಬಿ.ಎಸ್. ಯೋಜನೆಯಡಿಯಲ್ಲಿ ನಿರ್ವಹಿಸಲಾಗುತ್ತಿದೆ. ತನ್ನ ರೈತ ಸ್ನೇಹಿ ನಿಲುವಿಗೆ ಅನುಗುಣವಾಗಿ ಸರ್ಕಾರ ಪಿ ಮತ್ತು ಕೆ ರಸಗೊಬ್ಬರವನ್ನು ಕೈಗೆಟಕುವ ದರದಲ್ಲಿ ರೈತರಿಗೆ ದೊರಕಿಸಲು ಬದ್ಧವಾಗಿದೆ. ಸಬ್ಸಿಡಿಯನ್ನು ರಸಗೊಬ್ಬರ ಕಂಪನಿಗಳಿಗೆ ಎನ್.ಬಿ.ಎಸ್. ದರದ ರೀತ್ಯ ಬಿಡುಗಡೆ ಮಾಡಲಾಗುತ್ತದೆ, ಹೀಗಾಗಿ ಅವರು ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡುತ್ತಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಎಪಿ ಮತ್ತು ಇತರ ಪಿ ಮತ್ತು ಕೆ ರಸಗೊಬ್ಬರಗಳ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳ ದರ ತೀವ್ರ ಹೆಚ್ಚಳವಾಗಿದೆ. ಡಿಎಪಿ ಇತ್ಯಾದಿ ಸಿದ್ಧ ವಸ್ತುಗಳ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಚ್ಚಳವಾಗಿದೆ. ಈ ತೀವ್ರ ಹೆಚ್ಚಳದ ಹೊರತಾಗಿಯೂ ಭಾರತದಲ್ಲಿ ಡಿಎಪಿ ದರವನ್ನು ಆರಂಭದಲ್ಲಿ ಕಂಪನಿಗಳು ಹೆಚ್ಚಿಸಲಿಲ್ಲ. ಆದಾಗ್ಯೂ, ಕೆಲವು ಕಂಪನಿಗಳು ಈ ಹಣಕಾಸು ವರ್ಷದ ಆರಂಭದಲ್ಲಿ ಡಿಎಪಿ ದರವನ್ನು ಹೆಚ್ಚಿಸಿದವು.  

ಸರ್ಕಾರ ರೈತರ ಕಾಳಜಿಗೆ ಪೂರ್ಣ ಸಂವೇದನಾಶೀಲವಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮಗಳನ್ನು ಕೈಗೊಂಡಿದೆ, ಇದು ರೈತ ಸಮುದಾಯವನ್ನು ಡಿಎಪಿ ಸೇರಿದಂತೆ ಪಿ ಮತ್ತು ಕೆ ರಸಗೊಬ್ಬರಗಳ ದರ ಏರಿಕೆಯ ಪರಿಣಾಮದಿಂದ ಪಾರು ಮಾಡುತ್ತದೆ. ಆ ಪ್ರಕಾರ ಪ್ರಥಮ ಹೆಜ್ಜೆಯಾಗಿ, ಸರ್ಕಾರ ರೈತರಿಗೆ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯತೆಯನ್ನು ಖಾತ್ರಿಪಡಿಸುವಂತೆ ರಸಗೊಬ್ಬರ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಸರ್ಕಾರದ ವತಿಯಿಂದ ದೇಶದಲ್ಲಿ ರಸಗೊಬ್ಬರದ ಲಭ್ಯತೆಯ ಬಗ್ಗೆ ನಿಗಾ ಇಡಲಾಗುತ್ತದೆ.

ಡಿಎಪಿಯ ದರದ ನಿಟ್ಟಿನಲ್ಲಿ ಸರ್ಕಾರ ಡಿಎಪಿ ಇತ್ಯಾದಿಯ ಹಳೆಯ ದಾಸ್ತಾನನ್ನು ಹಳೆಯ ದರದಲ್ಲೇ ಮಾರಾಟ ಮಾಡುವಂತೆ ಸೂಚಿಸಿದೆ. ಹೆಚ್ಚುವರಿಯಾಗಿ, ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಹಠಾತ್ ಉಲ್ಬಣದಿಂದಾಗಿ ದೇಶ ಮತ್ತು ಅದರ ನಾಗರಿಕರು (ರೈತರು ಸೇರಿದಂತೆ) ಹಿಂದೆಂದೂ ಕಾಣದಂತಹ ಸಂಕಷ್ಟದ ಸಮಯದಲ್ಲಿ ಸಾಗಿದ್ದಾರೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಕೋವಿಡ್- 19 ಸಾಂಕ್ರಾಮಿಕ ಸಮಯದಲ್ಲಿ ಜನರು ಎದುರಿಸುತ್ತಿರುವ ಕಷ್ಟಗಳನ್ನು ಪರಿಗಣಿಸಿ ಭಾರತ ಸರ್ಕಾರ ಈಗಾಗಲೇ ಹಲವಾರು ವಿಶೇಷ ಪ್ಯಾಕೇಜ್‌ ಗಳನ್ನು ಘೋಷಿಸಿದೆ. ಇದೇ ರೀತಿ, ಭಾರತದಲ್ಲಿ ಡಿಎಪಿ ದರದ ಈ ಬಿಕ್ಕಟ್ಟನ್ನು ರೈತರಿಗೆ ಅಸಾಧಾರಣ ಪರಿಸ್ಥಿತಿ ಮತ್ತು ಸಂಕಟವೆಂದು ಪರಿಗಣಿಸಿ, ಭಾರತ ಸರ್ಕಾರ ಎನ್.ಬಿ.ಎಸ್ ಯೋಜನೆಯಡಿ ಸಬ್ಸಿಡಿ ದರವನ್ನು ರೈತರಿಗೆ ವಿಶೇಷ ಪ್ಯಾಕೇಜ್ ರೂಪದಲ್ಲಿ ಹೆಚ್ಚಿಸಿದೆ, ಈ ರೀತಿಯಾಗಿ ಡಿಎಪಿಯ ಎಂಆರ್.ಪಿ. (ಇತರ ಪಿ ಮತ್ತು ಕೆ. ರಸಗೊಬ್ಬರಗಳನ್ನು ಒಳಗೊಂಡಂತೆ) ಕಳೆದ ವರ್ಷದ ಮಟ್ಟದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನವರೆಗೆ ಮುಂದುವರಿಯುತ್ತದೆ. ರೈತರ ಕಷ್ಟಗಳನ್ನು ತಗ್ಗಿಸಲು ಕೋವಿಡ್ -19 ಪ್ಯಾಕೇಜ್‌ ನಂತೆ ಇದನ್ನು ಒಂದು ಬಾರಿ ಕ್ರಮವಾಗಿ ಜಾರಿ ಮಾಡಲಾಗಿದೆ. ಕೆಲವು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಇಳಿಯಬಹುದು ಎಂದು ನಿರೀಕ್ಷಿಸಲಾಗಿದ್ದು, ಭಾರತ ಸರ್ಕಾರ ಅದಕ್ಕೆ ಅನುಗುಣವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಆ ಸಮಯದಲ್ಲಿ ಸಬ್ಸಿಡಿ ದರಗಳ ಬಗ್ಗೆ ನಿರ್ಧರಿಸುತ್ತದೆ. ಈ ವ್ಯವಸ್ಥೆಗೆ ಅಂದಾಜು ಹೆಚ್ಚುವರಿ ಸಬ್ಸಿಡಿ ಹೊರೆ ಸುಮಾರು 14,775 ಕೋಟಿ ರೂ. ಆಗಿದೆ.

******



(Release ID: 1727658) Visitor Counter : 242