ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ -19ಕ್ಕೆ ಸಾರ್ವಜನಿಕ ಆರೋಗ್ಯ ಸ್ಪಂದನೆಯನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ


ರಾಜ್ಯವಾರು ಮತ್ತು ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ಪರಾಮರ್ಶಿಸಿದ ಪ್ರಧಾನಮಂತ್ರಿ

ಆರೋಗ್ಯ ಆರೈಕೆ ಮೂಲಸೌಕರ್ಯ ಹೆಚ್ಚಳಗ್ಗೆ ಪ್ರಮುಖ ಸೂಚ್ಯಂಕಗಳ ಕುರಿತಂತೆ ರಾಜ್ಯಗಳಿಗೆ ನೆರವು ಮತ್ತು ಮಾರ್ಗದರ್ಶನ ನೀಡಲು ಪ್ರಧಾನಮಂತ್ರಿ ನಿರ್ದೇಶನ

ಔಷಧಗಳ ಲಭ್ಯತೆಯ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ

ಭಾರತದ ಲಸಿಕಾ ಅಭಿಯಾನದ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ

ಸೂಕ್ಷ್ಮತೆ ಇರಬೇಕಾದ ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ವೇಗ ಕಡಿಮೆ ಆಗಬಾರದು: ಪ್ರಧಾನಮಂತ್ರಿ

Posted On: 06 MAY 2021 2:51PM by PIB Bengaluru

ಪ್ರಧಾನಮಂತ್ರಿ ಮೋದಿ ಅವರಿಂದು ದೇಶದಲ್ಲಿ ಕೋವಿಡ್ -19 ಸಂಬಂಧಿತ ಪರಿಸ್ಥಿತಿಯ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಿದರು. ಅವರಿಗೆ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಸ್ಫೋಟದ ಬಗ್ಗೆ ವಿವರ ನೀಡಲಾಯಿತು. 1 ಲಕ್ಷಕ್ಕಿಂತ ಹೆಚ್ಚಿನ ಸಕ್ರಿಯ ಪ್ರಕರಣಗಳಿರುವ 12 ರಾಜ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ರೋಗದ ಹೆಚ್ಚಿನ ಹೊರೆ ಇರುವ ಜಿಲ್ಲೆಗಳ ಬಗ್ಗೆ ಪ್ರಧಾನಮಂತ್ರಿ ಅವರಿಗೆ ತಿಳಿಸಲಾಯಿತು.

ರಾಜ್ಯಗಳು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕುರಿತಂತೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಮುಖ ಸೂಚಕಗಳ ಬಗ್ಗೆ ರಾಜ್ಯಗಳಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು.

ತ್ವರಿತ ಮತ್ತು ಸಮಗ್ರ ಕಂಟೈನ್ಮೆಂಟ್ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಚರ್ಚಿಸಲಾಯಿತು. ಸೋಂಕು ದೃಢಪಟ್ಟ ಪ್ರಕರಣ ಶೇ. 10 ಅಥವಾ ಅದಕ್ಕಿಂತ ಹೆಚ್ಚಿರುವ ಮತ್ತು ಐಸಿಯು ಅಥವಾ ಆಕ್ಸಿಜನ್ ಸರಿತ ಹಾಸಿಗೆಯ ಸಾಮರ್ಥ್ಯದ ಶೇಕಡ 60ರಷ್ಟು ಭರ್ತಿ ಆಗಿರುವ ಕಾಳಜಿಯ ಜಿಲ್ಲೆಗಳನ್ನು ಗುರುತಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂಬುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು..

ಪ್ರಧಾನಮಂತ್ರಿಯವರು ಔಷಧಗಳ ಲಭ್ಯತೆಯ ಪರಾಮರ್ಶೆಯನ್ನೂ ನಡೆಸಿದರು. ರೆಮ್ ಡಿಸಿವರ್ ಸೇರಿದಂತೆ ಔಷಧ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುತ್ತಿರುವ ಬಗ್ಗೆಯೂ ಅವರಿಗೆ ವಿವರಿಸಲಾಯಿತು.

ಪ್ರಧಾನಮಂತ್ರಿಯವರು ಲಸಿಕೆ ನೀಡಿಕೆಯ ಪ್ರಗತಿ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಸೂಚಿಗಳ ಕುರಿತಂತೆಯೂ ಪರಾಮರ್ಶೆ ನಡೆಸಿದರು. 17.7 ಕೋಟಿ ಲಸಿಕೆಗಳನ್ನು ರಾಜ್ಯಗಳಿಗೆ ಪೂರೈಸಲಾಗಿದೆ ಎಂಬ ಮಾಹಿತಿಯನ್ನು ಅವರಿಗೆ ನೀಡಲಾಯಿತು. ಲಸಿಕೆಯ ವ್ಯರ್ಥ ಕುರಿತು ರಾಜ್ಯವಾರು ಮಾಹಿತಿಯನ್ನು ಪ್ರಧಾನಮಂತ್ರಿ ಪರಿಶೀಲಿಸಿದರು. 45 ವರ್ಷ ಮೇಲ್ಪಟ್ಟ ಅರ್ಹ ಜನಸಂಖ್ಯೆಯ ಸುಮಾರು ಶೇ.31ರಷ್ಟು ಜನರಿಗೆ ಕನಿಷ್ಠ 1 ಡೋಸ್ ನೀಡಲಾಗಿದೆ ಎಂಬ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಸೂಕ್ಷ್ಮ ಪರಿಸ್ಥಿತಿಯ ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ವೇಗ ತಗ್ಗಬಾರದು ಎಂದು ಪ್ರಧಾನಮಂತ್ರಿ ಹೇಳಿದರು. ಲಾಕ್ ಡೌನ್ ಹೊರತಾಗಿಯೂ ನಾಗರಿಕರಿಗೆ ಲಸಿಕೆ ನೀಡುವ ಸೌಲಭ್ಯ ಕಲ್ಪಿಸಬೇಕು ಮತ್ತು ಲಸಿಕೆಯ ಕಾರ್ಯದಲ್ಲಿ ತೊಡಗಿಕೊಂಡ ಆರೋಗ್ಯ ಕಾರ್ಯಕರ್ತರನ್ನು ಇತರ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದರು.

ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಾ. ಹರ್ಷವರ್ಧನ್, ಪೀಯೂಷ್ ಗೋಯಲ್, ಮನ್ಸುಖ್ ಮಾಂಡವೀಯ ಮೊದಲಾದ ಸಚಿವರು ಮತ್ತು ಉನ್ನತಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

***



(Release ID: 1716505) Visitor Counter : 224