ಪ್ರಧಾನ ಮಂತ್ರಿಯವರ ಕಛೇರಿ

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ: ಪ್ರಧಾನಿ ನರೇಂದ್ರ ಮೋದಿ ಭಾಷಣ


ಸಾಂಕ್ರಾಮಿಕ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಪಾರ ಕೊಡುಗೆಗೆ ಮೆಚ್ಚುಗೆ

ಧರ್ಮ ಕಾರಣಕ್ಕೆ ಕಡೆಗಣಿಸುವಂತಿಲ್ಲ

ದೇಶದ ಸಂಪನ್ಮೂಲ ಪ್ರತಿಯೊಬ್ಬರಿಗೂ ಸೇರಿದ್ದು, ಸಕಲರಿಗೂ ಪ್ರಯೋಜನವಾಗಬೇಕು: ಪ್ರಧಾನಿ ನರೇಂದ್ರ ಮೋದಿ

Posted On: 22 DEC 2020 12:45PM by PIB Bengaluru

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಅವರು ವಿಶ್ವವಿದ್ಯಾಲಯದ ಶತಮಾನೋತ್ಸವ ಸ್ಮರಣಾರ್ಥ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದರು.

ʼದೇಶದ ಬಗ್ಗೆ ನಿಜವಾದ ಕಾಳಜಿ ಇರುವವರ ಮೊದಲ ಮತ್ತು ಪ್ರಮುಖ ಕರ್ತವ್ಯವೆಂದರೆ ಜಾತಿ, ಮತ, ಧರ್ಮವನ್ನು ಪರಿಗಣಿಸದೆ, ಸಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು' ಸರ್ ಸಯ್ಯದ್ ಅವರ ಹೇಳಿಕೆಯನ್ನು ಪ್ರಧಾನಿಯವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ದತ್ತವಾದ ಹಕ್ಕುಗಳನ್ನು ಒದಗಿಸುವ ಭರವಸೆಯ ಹಾದಿಯಲ್ಲಿ ದೇಶ ಮುಂದುವರಿದಿದ್ದು, ಧರ್ಮದ ಕಾರಣದಿಂದಾಗಿ ಯಾರೂ ಹಿಂದೆ ಉಳಿಯಬಾರದು ಮತ್ತು ಇದು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಪ್ರತಿಜ್ಞೆಗೆ ಆಧಾರವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರು. 

ಸರ್ಕಾರದ ಯೋಜನೆಗಳ ಯಾವುದೇ ತಾರತಮ್ಯವಿಲ್ಲದ ಪ್ರಯೋಜನಗಳ ಬಗ್ಗೆ ಶ್ರೀ ಮೋದಿ ಉದಾಹರಣೆಗಳನ್ನು ನೀಡಿದರು. ಯಾವುದೇ ತಾರತಮ್ಯವಿಲ್ಲದೆ 40 ಕೋಟಿಗೂ ಹೆಚ್ಚು ಬಡವರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಯಾವುದೇ ತಾರತಮ್ಯ ತೋರದೇ 2 ಕೋಟಿಗೂ ಹೆಚ್ಚು ಬಡವರಿಗೆ ಮನೆಗಳನ್ನು ನೀಡಲಾಗಿದೆ. 8 ಕೋಟಿಗೂ ಹೆಚ್ಚು ಮಹಿಳೆಯರು ತಾರತಮ್ಯವಿಲ್ಲದೆ ಅನಿಲ ಸಂಪರ್ಕ ಪಡೆಯುತ್ತಿದ್ದಾರೆ. ಆಯುಷ್ಮಾನ್ ಯೋಜನೆಯಡಿ ಸುಮಾರು 50 ಕೋಟಿ ಜನರು ಯಾವುದೇ ತಾರತಮ್ಯವಿಲ್ಲದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು. “ದೇಶದ ಸಂಪನ್ಮೂಲಗಳು ಪ್ರತಿಯೊಬ್ಬ ನಾಗರಿಕರಿಗೂ ಸೇರಿವೆ ಮತ್ತು ಅವುಗಳ ಪ್ರಯೋಜನ ಎಲ್ಲರಿಗೂ ತಲುಪಬೇಕು. ನಮ್ಮ ಸರ್ಕಾರ ಈ ತಿಳುವಳಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.” ಎಂದು ಅವರು ಹೇಳಿದರು.

ರಾಷ್ಟ್ರ ಮತ್ತು ಸಮಾಜದ ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂಬುದು ನವ ಭಾರತದ ದೃಷ್ಟಿಯಾಗಿದೆ. ಅಪಪ್ರಚಾರದ ಮೂಲಕ ದಾರಿತಪ್ಪಿಸುವವ ಬಗ್ಗೆ ಜಾಗರೂಕರಾಗಿರಬೇಕು ಮತ್ತು ರಾಷ್ಟ್ರದ ಹಿತಾಸಕ್ತಿಯು ಪ್ರಮುಖವಾಗಿರಬೇಕು ಶ್ರೀ ಮೋದಿ ಕೇಳಿದರು. ರಾಜಕಾರಣ ಕಾಯಬಹುದು ಆದರೆ ಸಮಾಜ ಕಾಯುವುದಿಲ್ಲ. ಯಾವುದೇ ವರ್ಗಕ್ಕೆ ಸೇರಿದ ಬಡವರು ಕಾಯಲು ಸಾಧ್ಯವಿಲ್ಲ. ನಾವು ಸಮಯವನ್ನು ವ್ಯರ್ಥ ಮಾಡುವಂತಿಲ್ಲ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು. ರಾಷ್ಟ್ರದ ಗುರಿ ಸಾಧನೆಗಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಎಂದು ಶ್ರೀ ಮೋದಿ ಹೇಳಿದರು.

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಮಾಜಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಿಯವರು ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು. ಉಚಿತ ಪರೀಕ್ಷೆಗಳನ್ನು ನಡೆಸಲು ಸಾವಿರಾರು ಜನರನ್ನು ತೊಡಗಿಸಿದ್ದು, ಐಸೋಲೇಷನ್ ವಾರ್ಡ್‌ಗಳ ನಿರ್ಮಾಣ, ಪ್ಲಾಸ್ಮಾ ಬ್ಯಾಂಕುಗಳ ನಿರ್ಮಾಣ ಮತ್ತು ಪಿಎಂ ಕೇರ್ ಫಂಡ್‌ಗೆ ಹೆಚ್ಚಿನ ಮೊತ್ತವನ್ನು ಕೊಡುಗೆಯಾಗಿ ನೀಡಿದ್ದು, ಇವುಗಳು ಸಮಾಜದಲ್ಲಿ ನಿಮಗಿರುವ ಹೊಣೆಗಾರಿಕೆಗಳನ್ನು ಪೂರೈಸುವ ಗಂಭೀರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಇಂತಹ ಸಂಘಟಿತ ಪ್ರಯತ್ನಗಳಿಂದ ಭಾರತವು ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸುತ್ತಿದೆ ಮತ್ತು ದೇಶವನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ಅವರು ಹೇಳಿದರು.

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯವು ಕಳೆದ 100 ವರ್ಷಗಳಲ್ಲಿ ವಿಶ್ವದ ಹಲವು ದೇಶಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಸಹ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದರು. ಉರ್ದು, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಕುರಿತು ಇಲ್ಲಿ ನಡೆಸಿದ ಸಂಶೋಧನೆಗಳು, ಇಸ್ಲಾಮಿಕ್ ಸಾಹಿತ್ಯ ಕುರಿತ ಸಂಶೋಧನೆಗಳು ಇಡೀ ಇಸ್ಲಾಮಿಕ್ ಜಗತ್ತಿನೊಂದಿಗೆ ಭಾರತದ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿವೆ ಎಂದು ಅವರು ಹೇಳಿದರು. ವಿಶ್ವವಿದ್ಯಾನಿಲಯದ ಸಹಕಾರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಪೂರೈಸುವ ಹೊಣೆಗಾರಿಕೆಯನ್ನೂ ವಿಶ್ವವಿದ್ಯಾಲಯ ಹೊಂದಿದೆ ಎಂದು ಅವರು ಹೇಳಿದರು.

ಶೌಚಾಲಯಗಳ ಕೊರತೆಯಿಂದಾಗಿ ಮುಸ್ಲಿಂ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾಗಿದ್ದ ಪ್ರಮಾಣವು ಶೇಕಡಾ 70 ಕ್ಕಿಂತಲೂ ಹೆಚ್ಚಾಗಿದ್ದ ಸಮಯವನ್ನು ಪ್ರಧಾನಿ ನೆನಪಿಸಿಕೊಂಡರು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶಾಲಾ ಬಾಲಕಿಯರಿಗಾಗಿ ಸರ್ಕಾರ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಈಗ ಶಾಲೆಯಿಂದ ಹೊರಗುಳಿದಿರುವ ಮುಸ್ಲಿಂ ಹೆಣ್ಣುಮಕ್ಕಳ ಪ್ರಮಾಣವು ಶೇಕಡಾ 30 ಕ್ಕೆ ಇಳಿದಿದೆ ಎಂದರು.

 ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯವು ಶಾಲಾ ತೊರೆದಿರುವ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ "ಬ್ರಿಡ್ಜ್ ಕೋರ್ಸ್‌ಗಳ" ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಗಮನ ಹರಿಸಿದೆ ಎಂದರು. ಕಳೆದ 6 ವರ್ಷಗಳಲ್ಲಿ ಸುಮಾರು ಒಂದು ಕೋಟಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಸರ್ಕಾರ ವಿದ್ಯಾರ್ಥಿವೇತನ ನೀಡಿದೆ. ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು, ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು, ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಯ ಲಾಭವನ್ನು ಪಡೆಯಬೇಕು ಎಂದು ಅವರು ಒತ್ತಿ ಹೇಳಿದರು.

ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸುವ ಮೂಲಕ ಆಧುನಿಕ ಮುಸ್ಲಿಂ ಸಮಾಜವನ್ನು ನಿರ್ಮಾಣದ ಪ್ರಯತ್ನವನ್ನು ದೇಶವು ಮಾಡಿದೆ ಎಂದು ಪ್ರಧಾನಿ ಹೇಳಿದರು. ಒಬ್ಬ ಮಹಿಳೆ ವಿದ್ಯಾಭ್ಯಾಸ ಮಾಡಿದರೆ ಇಡೀ ಕುಟುಂಬ ಶಿಕ್ಷಣ ಪಡೆಯುತ್ತದೆ. ಶಿಕ್ಷಣವು ಉದ್ಯೋಗ ಮತ್ತು ಉದ್ಯಮಶೀಲತೆಗೆ ಕಾರಣವಾಗುತ್ತದೆ. ಉದ್ಯೋಗ ಮತ್ತು ಉದ್ಯಮಶೀಲತೆಯು ಆರ್ಥಿಕ ಸ್ವಾತಂತ್ರ್ಯವನ್ನು ತರುತ್ತದೆ. ಆರ್ಥಿಕ ಸ್ವಾತಂತ್ರ್ಯದಿಂದ ಸಬಲೀಕರಣವಾಗುತ್ತದೆ. ಒಬ್ಬ ಸಶಕ್ತ ಮಹಿಳೆಯು ಪ್ರತಿ ನಿರ್ಧಾರದಲ್ಲೂ, ಪ್ರತಿ ಹಂತದಲ್ಲೂ, ಬೇರೆಯವರಂತೆ ಸಮಾನವಾಗಿ ಕೊಡುಗೆ ನೀಡುತ್ತಾಳೆ ಎಂದು ಮೊದಲಿನಿಂದಲೂ ಹೇಳಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ತನ್ನ ಸಮಕಾಲೀನ ಪಠ್ಯಕ್ರಮದಿಂದ ಅನೇಕರನ್ನು ಆಕರ್ಷಿಸಿದೆ ಎಂದು ಪ್ರಧಾನಿ ಹೇಳಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಈ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಇರುವ ಅಂತರಶಿಕ್ಷಣ ವಿಷಯಗಳನ್ನು ಹೊಂದಿದೆ. ಎಂದು ಅವರು ಹೇಳಿದರು. ದೇಶ ಮೊದಲು ಎಂಬ ಧ್ಯೇಯದೊಂದಿಗೆ ನಮ್ಮ ದೇಶದ ಯುವಜನತೆ ದೇಶವನ್ನು ಮುನ್ನಡೆಸಲು ಬದ್ಧರಾಗಿದ್ದಾರೆ. ಭಾರತದ ಯುವಜನರ ಈ ಆಕಾಂಕ್ಷೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹು ಪ್ರವೇಶ ಮತ್ತು ನಿರ್ಗಮನ ಅಂಶಗಳು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ. ಇದು ಇಡೀ ಕೋರ್ಸ್‌ನ ಶುಲ್ಕದ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣದಲ್ಲಿ ದಾಖಲಾತಿ ಮತ್ತು ಸೀಟುಗಳನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಶಿಕ್ಷಣವು ಆನ್‌ಲೈನ್ ಆಗಿರಲಿ, ಆಫ್‌ಲೈನ್ ಆಗಿರಲಿ, ಅದು ಎಲ್ಲರನ್ನೂ ತಲುಪುವಂತೆ ಮತ್ತು ಎಲ್ಲರ ಜೀವನವನ್ನು ಪರಿವರ್ತಿಸುವಂತೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ವಿಶ್ವವಿದ್ಯಾಲಯದ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಎಎಮ್‌ಯುನ 100 ಹಾಸ್ಟೆಲ್‌ಗಳು, ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಪಠ್ಯೇತರ ಚಟುವಟಿಕೆಯಾಗಿ ತೆರೆಮರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

***



(Release ID: 1682657) Visitor Counter : 223