ಪ್ರಧಾನ ಮಂತ್ರಿಯವರ ಕಛೇರಿ

ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ಕುರಿತ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 25 OCT 2020 11:31AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್ 27ರಂದು ಸಂಜೆ 4.45ಕ್ಕೆ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ಕುರಿತ ರಾಷ್ಟ್ರೀಯ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುವರು. ಸಮಾವೇಶದ ಘೋಷ ವಾಕ್ಯ ‘ಜಾಗೃತ ಭಾರತ, ಸಮೃದ್ಧ ಭಾರತ, सतर्क भारत, समृद्ध भारत (Vigilant India, Prosperous India) ಎಂಬುದಾಗಿದೆ. 
ಸಮಾವೇಶದ ಉದ್ಘಾಟನಾಗೋಷ್ಠಿಯನ್ನು ಲೈವ್ ಸ್ಟ್ರೀಮ್ ಮಾಡಲಾಗುವುದು ಮತ್ತು ಅದು ಈ ಲಿಂಕ್ ನಲ್ಲಿ ಲಭ್ಯವಿರಲಿದೆ.

https://pmindiawebcast.nic.in/


ಹಿನ್ನೆಲೆ:
ಕೇಂದ್ರೀಯ ಅಪರಾಧ ತನಿಖಾ ಸಂಸ್ಥೆ (ಸಿಬಿಐ) ಪ್ರತಿವರ್ಷದಂತೆ ಈ ವರ್ಷವೂ ಇದೇ ಅಕ್ಟೋಬರ್ 27ರಿಂದ ನವೆಂಬರ್ 2ರವರೆಗೆ ‘ಜಾಗೃತ ಅರಿವು ಸಪ್ತಾಹ’ವನ್ನು ಆಯೋಜಿಸುತ್ತಿದ್ದು, ಅದರ ಅಂಗವಾಗಿ ಈ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದ ಚಟುವಟಿಕೆಗಳಲ್ಲಿ ಜಾಗೃತ ವಿಷಯಗಳನ್ನು ಗುರಿಯಾಗಿಟ್ಟುಕೊಂಡು ಅರಿವು ಮೂಡಿಸುವುದು ಮತ್ತು ನಾಗರಿಕರ ಸಹಭಾಗಿತ್ವದಲ್ಲಿ ಸಾರ್ವಜನಿಕ ಜೀವನದಲ್ಲಿರುವವರಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಾಗುವುದು.
ಮೂರು ದಿನಗಳ ಈ ಸಮಾವೇಶದಲ್ಲಿ, ವಿದೇಶಗಳ ವ್ಯಾಪ್ತಿಯಲ್ಲಿ ತನಿಖೆಯಲ್ಲಿ ಎದುರಾಗುವ ಸವಾಲುಗಳು; ಭ್ರಷ್ಟಾಚಾರದ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ನಿಗಾ ಇಡಲು ಮುನ್ನೆಚ್ಚರಿಕೆ ಜಾಗೃತಗೊಳಿಸುವುದು; ಬ್ಯಾಂಕ್ ವಂಚನೆಗಳ ನಿಯಂತ್ರಣ ಮತ್ತು ಹಣಕಾಸು ಸೇರ್ಪಡೆಗಳಲ್ಲಿ ವ್ಯವಸ್ಥಿತ ಸುಧಾರಣೆಗಳು; ಪ್ರಗತಿಯ ಶಕ್ತಿಯಾಗಿ ಪರಿಣಾಮಕಾರಿ ಲೆಕ್ಕ ಪರಿಶೋಧನೆ ನಡೆಸುವುದು; ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆಗೆ ಮಾಡಿರುವ ತಿದ್ದುಪಡಿಗಳನ್ನು ಬಳಸಿಕೊಳ್ಳುವುದು; ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ; ಕ್ಷಿಪ್ರ ಮತ್ತು ಅತ್ಯಂತ ಹೆಚ್ಚು ಪರಿಣಾಮಕಾರಿ ತನಿಖೆಗೆ ಬಹು ಸಂಸ್ಥೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸುವುದು; ಆರ್ಥಿಕ ಅಪರಾಧಗಳಲ್ಲಿನ ಹೊಸ ಬೆಳವಣಿಗೆಗಳು; ಸೈಬರ್ ಅಪರಾಧಗಳು ಮತ್ತು ಅಪರಾಧ ತನಿಖಾ ಏಜೆನ್ಸಿಗಳ ನಡುವೆ ದೇಶದ ವಿರುದ್ಧದ ಅಪರಾಧ ಕೃತ್ಯಗಳನ್ನು ಹತ್ತಿಕ್ಕುವ ಕ್ರಮಗಳ ನಿಯಂತ್ರಣ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು.
ಈ ಸಮಾವೇಶ ನೀತಿ ನಿರೂಪಕರು ಮತ್ತು ಅವುಗಳನ್ನು ಪಾಲನೆ ಮಾಡುವವರನ್ನು ಒಂದೇ ವೇದಿಕೆಗೆ ತರಲಿದೆ ಮತ್ತು ವ್ಯವಸ್ಥಿತ ಸುಧಾರಣೆಗಳು ಮತ್ತು ಮುನ್ನೆಚ್ಚರಿಕೆಯ ಜಾಗೃತ ಕ್ರಮಗಳ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಆ ಮೂಲಕ ಉತ್ತಮ ಆಡಳಿತ ಮತ್ತು ಜವಾಬ್ದಾರಿಯುತ ಆಡಳಿತವನ್ನು ಒದಗಿಸುವುದಾಗಿದೆ. ಭಾರತದಲ್ಲಿ ವ್ಯಾಪಾರಕ್ಕೆ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಇದು ಅತ್ಯಂತ ಮಹತ್ವದ ಕೊಡುಗೆಯ ಅಂಶವಾಗಿದೆ.
ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ (ಸ್ವತಂತ್ರ ಹೊಣೆಗಾರಿಕೆ) ಸಚಿವ, ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಭ್ರಷ್ಟಾಚಾರ ವಿರೋಧಿ ಘಟಕಗಳು, ಜಾಗೃತ ದಳಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಅಪರಾಧ ಘಟಕಗಳು/ಸಿಐಡಿ ಮುಖ್ಯಸ್ಥರು, ಸಿವಿಒಗಳು, ಸಿಬಿಐ ಅಧಿಕಾರಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳು ಪಾಲ್ಗೊಳ್ಳುವರು.


****



(Release ID: 1667523) Visitor Counter : 203