ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದಲ್ಲಿ 'ನಮಾಮಿ ಗಂಗೆ' ಮತ್ತು 'ಅಮೃತ್' ನಡಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ

Posted On: 15 SEP 2020 3:11PM by PIB Bengaluru

ಬಿಹಾರದಲ್ಲಿ 'ನಮಾಮಿ ಗಂಗೆ' ಮತ್ತು 'ಅಮೃತ್' ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇಂದು ಉದ್ಘಾಟನೆಯಾದ ನಾಲ್ಕು ಯೋಜನೆಗಳಲ್ಲಿ ಪಾಟ್ನಾ ನಗರದ ಬ್ಯೂರ್ ಮತ್ತು ಕರಮ್-ಲೀಚಕ್ನಲ್ಲಿನ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು 'ಅಮೃತ್' ಯೋಜನೆಯಡಿ ಸಿವಾನ್ ಮತ್ತು ಛಾಪ್ರಾದಲ್ಲಿ ನೀರು-ಸಂಬಂಧಿತ ಯೋಜನೆಗಳು ಸೇರಿವೆ. ಇದಲ್ಲದೆ, ಮುಂಗೇರ್ ಮತ್ತು ಜಮಾಲ್ಪುರದ ನೀರು ಸರಬರಾಜು ಯೋಜನೆಗಳಿಗೆ ಮತ್ತು ನಮಾಮಿ ಗಂಗೆ ಅಡಿಯಲ್ಲಿ ಮುಜಾಫರ್ಪುರದ ನದಿ ತಟದ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.

ಕೊರೊನಾ ಸಂದರ್ಭದಲ್ಲಿಯೂ ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

ರಾಜ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ನೂರಾರು ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ಜೊತೆಗೆ ಬಿಹಾರದ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅವರು ಉಲ್ಲೇಖಿಸಿದರು.

ಭಾರತದ ಪ್ರವರ್ತಕ ಸಿವಿಲ್ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ನೆನಪಿಗಾಗಿ ಆಚರಿಸಲಾಗುವ ಎಂಜಿನಿಯರ್ ದಿನಾಚರಣೆಯ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಎಂಜಿನಿಯರ್ಗಳು ನೀಡಿದ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಲಕ್ಷಾಂತರ ಎಂಜಿನಿಯರ್ಗಳನ್ನು ತಯಾರಿಸುವ ಮೂಲಕ ಬಿಹಾರವು ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಶ್ರೀ ಮೋದಿ ಹೇಳಿದರು.

ಬಿಹಾರವು ಐತಿಹಾಸಿಕ ನಗರಗಳ ತವರು ಮತ್ತು ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಗುಲಾಮಗಿರಿಯ ಯುಗದ ವಿರೂಪಗಳನ್ನು ನಿರ್ಮೂಲನೆ ಮಾಡಲು ಸ್ವಾತಂತ್ರ್ಯದ ನಂತರ ದೂರದೃಷ್ಟಿಯ ನಾಯಕರು ಬಿಹಾರವನ್ನು ಮುನ್ನಡೆಸಿದರು. ನಂತರ ಬದಲಾದ ಆದ್ಯತೆಗಳೊಂದಿಗೆ ಅಭಿವೃದ್ಧಿಯು ಕಳೆದುಹೋಯಿತು. ಇದು ನಗರ ಮೂಲಸೌಕರ್ಯಗಳ ಅವನತಿ ಮತ್ತು ರಾಜ್ಯದ ಗ್ರಾಮೀಣ ಮೂಲಸೌಕರ್ಯಗಳ ಕುಸಿತಕ್ಕೆ ಕಾರಣವಾಯಿತು ಎಂದು ಶ್ರೀ ಮೋದಿ ಹೇಳಿದರು.

ಆಡಳಿತದಲ್ಲಿ ಸ್ವಾರ್ಥವು ಸೇರಿಕೊಂಡರೆ ಮತ್ತು ಮತ ಬ್ಯಾಂಕ್ ರಾಜಕೀಯ ಆರಂಭವಾದರೆ ದೀನ ದುರ್ಬಲರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದರು. ನೀರು ಮತ್ತು ಒಳಚರಂಡಿ ಮುಂತಾದ ಮೂಲಭೂತ ಅಗತ್ಯಗಳನ್ನು ಪಡೆಯದೆ ಬಿಹಾರದ ಜನರು ದಶಕಗಳಿಂದ ನೋವನ್ನು ಸಹಿಸಿಕೊಂಡಿದ್ದಾರೆ. ಜನರು ಅನಿವಾರ್ಯವಾಗಿ ಕೊಳಕು ನೀರನ್ನು ಕುಡಿಯುವ ಮೂಲಕ ರೋಗಗಳಿಗೆ ತುತ್ತಾಗುತ್ತಾರೆ ಮತ್ತು ಅವರ ಗಳಿಕೆಯ ಬಹುಪಾಲು ಭಾಗವು ಚಿಕಿತ್ಸೆಗೆ ಹೋಗುತ್ತದೆ ಎಂದು ಅವರು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಬಿಹಾರದ ಬಹತೇಕ ಜನರು ಸಾಲ, ರೋಗ, ಅಸಹಾಯಕತೆ, ಅನಕ್ಷರತೆಯನ್ನು ತಮ್ಮ ಹಣೆಬರೆಹ ಎಂದು ಒಪ್ಪಿಕೊಂಡಿದ್ದರು.

ಕಳೆದ ಕೆಲವು ವರ್ಷಗಳಿಂದ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಸಮಾಜದ ಹೆಚ್ಚು ಬಾಧಿತ ವರ್ಗಕ್ಕೆ ವಿಶ್ವಾಸವನ್ನು ಮರಳಿ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ, ಪಂಚಾಯತ್ ರಾಜ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರ ಭಾಗವಹಿಸುವಿಕೆ ಹೆಚ್ಚುತ್ತಿದೆ ಮತ್ತು ಅವರ ಆತ್ಮವಿಶ್ವಾಸ ಹೆಚ್ಚುತ್ತಿದೆ ಎಂದರು. 2014 ರಿಂದ, ಮೂಲಸೌಕರ್ಯ ಸಂಬಂಧಿತ ಯೋಜನೆಗಳ ಸಂಪೂರ್ಣ ನಿಯಂತ್ರಣವನ್ನು ಗ್ರಾಮ ಪಂಚಾಯಿತಿಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಈಗ, ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳು ಸ್ಥಳೀಯ ಅಗತ್ಯಗಳನ್ನು ಪೂರೈಸಲು ಸಮರ್ಥವಾಗಿವೆ ಮತ್ತು ಬಿಹಾರದ ನಗರಗಳಲ್ಲಿನ ಕುಡಿಯುವ ನೀರು ಮತ್ತು ಒಳಚರಂಡಿ ಮುಂತಾದ ಮೂಲಸೌಕರ್ಯಗಳಲ್ಲಿ ನಿರಂತರ ಸುಧಾರಣೆ ಕಂಡುಬರುತ್ತಿದೆ.

ಕಳೆದ 4-5 ವರ್ಷಗಳಲ್ಲಿ ಬಿಹಾರದ ನಗರ ಪ್ರದೇಶಗಳಲ್ಲಿ ಮಿಷನ್ ಅಮೃತ್ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಮುಂಬರುವ ವರ್ಷಗಳಲ್ಲಿ, ಬಿಹಾರವು ದೇಶದ ಪ್ರತಿ ಮನೆಗೂ ಕೊಳವೆ ನೀರು ಸರಬರಾಜು ಇರುವ ರಾಜ್ಯಗಳ ಸಾಲಿಗೆ ಸೇರಲಿದೆ. ದೊಡ್ಡ ಗುರಿಯನ್ನು ಸಾಧಿಸಲು ಬಿಹಾರದ ಜನರು ಕೊರೊನಾದ ಬಿಕ್ಕಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಇತರ ರಾಜ್ಯಗಳಿಂದ ಬಿಹಾರಕ್ಕೆ ಮರಳಿದ ವಲಸೆ ಕಾರ್ಮಿಕರ ಕೆಲಸದಿಂದಾಗಿ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ 57 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನೀರಿನ ಸಂಪರ್ಕವನ್ನು ಒದಗಿಸುವಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ ದೊಡ್ಡ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಜಲ ಜೀವನ್ ಮಿಷನ್ ಅನ್ನು ಬಿಹಾರದ ಶ್ರಮಶೀಲ ಸಹೋದ್ಯೋಗಿಗಳಿಗೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಒಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ದೇಶಾದ್ಯಂತ ಎರಡು ಕೋಟಿಗೂ ಹೆಚ್ಚು ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಇಂದು, ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸ ಕೊಳವೆನೀರಿನ ಸಂಪರ್ಕಕ್ಕೆ ಕಲ್ಪಿಸಲಾಗುತ್ತಿದೆ. ಶುದ್ಧ ನೀರು ಬಡವರ ಜೀವನವನ್ನು ಸುಧಾರಿಸುವುದಲ್ಲದೆ, ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ನಗರ ಪ್ರದೇಶಗಳಲ್ಲಿಯೂ, ಅಮೃತ್ ಯೋಜನೆಯಡಿ ಬಿಹಾರದ 12 ಲಕ್ಷ ಕುಟುಂಬಗಳಿಗೆ ಶುದ್ಧ ನೀರು ಒದಗಿಸುವ ಕೆಲಸ ಪ್ರಗತಿಯಲ್ಲಿದೆ ಮತ್ತು ಪೈಕಿ ಸುಮಾರು 6 ಲಕ್ಷ ಕುಟುಂಬಗಳಿಗೆ ಈಗಾಗಲೇ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ನಗರಗಳ ಜನಸಂಖ್ಯೆ ವಸಾ ವೇಗವಾಗಿ ಹೆಚ್ಚುತ್ತಿದೆ ಮತ್ತು ನಗರೀಕರಣವು ಇಂದು ವಾಸ್ತವವಾಗಿದೆ. ಆದರೆ ಹಲವು ದಶಕಗಳಿಂದ ನಗರೀಕರಣವನ್ನು ಒಂದು ಅಡಚಣೆ ಎಂದು ಪರಿಗಣಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ನಗರೀಕರಣದ ದೊಡ್ಡ ಬೆಂಬಲಿಗರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ, ಅಂಬೇಡ್ಕರ್ ನಗರೀಕರಣವನ್ನು ಸಮಸ್ಯೆಯೆಂದು ಪರಿಗಣಿಸಲಿಲ್ಲ, ಬಡವರಿಗೆ ಸಹ ಅವಕಾಶಗಳನ್ನು ನೀಡುವ, ಜೀವನ ಮಟ್ಟ ಸುಧಾರಣೆಗೆ ದಾರಿ ಮಾಡಿಕೊಡುವ ನಗರಗಳನ್ನು ಅವರು ಊಹಿಸಿಕೊಂಡಿದ್ದರು. ಪ್ರತಿಯೊಬ್ಬರೂ, ವಿಶೇಷವಾಗಿ ನಮ್ಮ ಯುವಕರು, ಮುಂದುವರಿಯಲು ಹೊಸ ಮತ್ತು ಮಿತಿಯಿಲ್ಲದ ಸಾಧ್ಯತೆಗಳನ್ನು ಪಡೆಯುವಂತಹ ನಗರಗಳು ಇರಬೇಕು ಎಂದು ಅವರು ಹೇಳಿದ್ದರು. ಪ್ರತಿ ಕುಟುಂಬವು ಸಮೃದ್ಧಿ ಮತ್ತು ಸಂತೋಷದಿಂದ ಜೀವನವನ್ನು ನಡೆಸುವ ನಗರಗಳು ಇರಬೇಕು. ಪ್ರತಿಯೊಬ್ಬರೂ, ಬಡವರು, ದಲಿತರು, ಹಿಂದುಳಿದವರು, ಮಹಿಳೆಯರು ಗೌರವದ ಬದುಕು ನಡೆಸುವ ನಗರಗಳು ಇರಬೇಕು ಎಂದು ಅವರು ಹೇಳಿದರು.

ನಾವು ಇಂದು ದೇಶದಲ್ಲಿ ಹೊಸ ನಗರೀಕರಣಕ್ಕೆ ಸಾಕ್ಷಿಯಾಗಿದ್ದೇವೆ. ಕೆಲವು ವರ್ಷಗಳ ಹಿಂದೆ ನಗರೀಕರಣ ಎಂದರೆ ಕೆಲವು ಆಯ್ದ ನಗರಗಳಲ್ಲಿ ಕೆಲವು ಪ್ರದೇಶಗಳನ್ನು ಮಾತ್ರ ಅಭಿವೃದ್ಧಿಪಡಿಸುವುದು ಎಂದರ್ಥವಾಗಿತ್ತು. ಆದರೆ ಈಗ ಆಲೋಚನೆ ಬದಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಹೊಸ ನಗರೀಕರಣಕ್ಕೆ ಬಿಹಾರದ ಜನರು ತಮ್ಮ ಸಂಪೂರ್ಣ ಕೊಡುಗೆ ನೀಡುತ್ತಿದ್ದಾರೆ. ಆತ್ಮನಿರ್ಭರ ಬಿಹಾರ, ಆತ್ಮನಿರ್ಭರ ಭಾರತ್ ಧ್ಯೇಯಕ್ಕೆ ಅನುಗುಣವಾಗಿ ನಗರಗಳನ್ನು ಸಿದ್ಧಪಡಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಚಿಂತನೆಯೊಂದಿಗೆ, ಅಮೃತ್ ಮಿಷನ್ ಅಡಿಯಲ್ಲಿ, ಬಿಹಾರದ ಅನೇಕ ನಗರಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಬಿಹಾರದ 100 ಕ್ಕೂ ಹೆಚ್ಚು ಪುರಸಭೆಗಳ ವ್ಯಾಪ್ತಿಯಲ್ಲಿ 4.5 ಲಕ್ಷಕ್ಕೂ ಹೆಚ್ಚು ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ಕಾರಣದಿಂದಾಗಿ, ನಮ್ಮ ಸಣ್ಣ ನಗರಗಳ ರಸ್ತೆ ಮತ್ತು ಬೀದಿಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆಯಾಗಿದೆ. ನೂರಾರು ಕೋಟಿ ರೂ.ಗಳ ವಿದ್ಯುತ್ ಉಳಿತಾಯವಾಗುತ್ತಿದೆ ಮತ್ತು ಜನರ ಜೀವನವು ಸುಲಭವಾಗುತ್ತಿದೆ ಎಂದರು. ರಾಜ್ಯದ ಸುಮಾರು 20 ದೊಡ್ಡ ಮತ್ತು ಪ್ರಮುಖ ನಗರಗಳು ಗಂಗಾ ನದಿಯ ದಡದಲ್ಲಿವೆ. ಗಂಗಾ ನದಿಯ ಸ್ವಚ್ಛತೆ, ಗಂಗಾ ನೀರಿನ ಸ್ವಚ್ಛತೆ ನಗರಗಳಲ್ಲಿ ವಾಸಿಸುವ ಕೋಟ್ಯಂತರ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಗಂಗಾ ನದಿಯ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು 6000 ಕೋಟಿ ರೂ.ಗೂ ಹೆಚ್ಚಿನ 50 ಕ್ಕೂ ಹೆಚ್ಚು ಯೋಜನೆಗಳಿಗೆ ಬಿಹಾರದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಗಂಗಾ ನದಿ ತೀರದಲ್ಲಿರುವ ಎಲ್ಲಾ ನಗರಗಳಲ್ಲಿ ಚರಂಡಿಗಳ ಕೊಳಚೆ ನೀರು ನೇರವಾಗಿ ಗಂಗಾ ನದಿಗೆ ಬೀಳದಂತೆ ತಡೆಯಲು ಸರ್ಕಾರ ಅನೇಕ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ಪಾಟ್ನಾದಲ್ಲಿ ಇಂದು ಉದ್ಘಾಟನೆಯಾದ ಬ್ಯೂರ್ ಮತ್ತು ಕರಮ್-ಲಿಚ್ಚಕ್ ಯೋಜನೆಯಿಂದ ಪ್ರದೇಶದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು. ಇದರೊಂದಿಗೆ ಗಂಗಾ ತೀರದಲ್ಲಿರುವ ಗ್ರಾಮಗಳನ್ನು 'ಗಂಗಾ ಗ್ರಾಮ' ಎಂದು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

***



(Release ID: 1654540) Visitor Counter : 177