ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಹಾಗು ಶ್ರೀಲಂಕಾ ಪ್ರಧಾನಿ ನಡುವೆ ದೂರವಾಣಿ ಸಮಾಲೋಚನೆ

Posted On: 06 AUG 2020 9:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ಮಹಿಂದಾ ರಾಜಪಕ್ಸ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು ಮತ್ತು ಶ್ರೀಲಂಕಾದಲ್ಲಿ ನಿನ್ನೆ ಯಶಸ್ವಿಯಾಗಿ ಸಂಸದೀಯ ಚುನಾವಣೆಯನ್ನು ನಡೆಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಕೋವಿಡ್ ಸಾಂಕ್ರಾಮಿಕದ ಅಡತಡೆಗಳ ನಡುವೆಯೂ ಶ್ರೀಲಂಕಾದಲ್ಲಿ ಪರಿಣಾಮಕಾರಿಯಾಗಿ ಚುನಾವಣೆಗಳನ್ನು ನಡೆಸಿದ್ದಕ್ಕಾಗಿ ಅಲ್ಲಿನ ಸರ್ಕಾರ ಮತ್ತು ಚುನಾವಣಾ ಸಂಸ್ಥೆಗಳ ಕಾರ್ಯವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಅಲ್ಲದೆ, ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಶ್ರೀಲಂಕಾದ ಎಲ್ಲ ಜನತೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಇದು ಎರಡೂ ದೇಶಗಳ ನಡುವಿನ ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಮುಂಬರುವ ಚುನಾವಣಾ ಫಲಿತಾಂಶದಲ್ಲಿ ಶ್ರೀ ಲಂಕಾ ಪುದುಜನ ಪೆರಮುನ (ಎಸ್ಎಲ್ ಪಿಪಿ) ಪಕ್ಷ ಉತ್ತಮ ಸಾಧನೆ ತೋರುವ ಸೂಚನೆ ಇದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅದಕ್ಕಾಗಿ ಗೌರವಾನ್ವಿತ ಶ್ರೀ ಮಹಿಂದಾ ರಾಜಪಕ್ಸ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.

ಹಿಂದಿನ ಸೌಹಾರ್ದ ಮತ್ತು ಫಲಪ್ರದ ಸಮಾಲೋಚನೆಗಳನ್ನು ನೆನಪಿಸಿಕೊಂಡ ಉಭಯ ನಾಯಕರು, ಶತಮಾನಗಳದಷ್ಟು ಹಳೆಯದಾದ ಮತ್ತು ಭಾರತ – ಶ್ರೀಲಂಕಾ ನಡುವಿನ ಬಹು ಆಯಾಮಗಳ ನಡುವಿನ ಸಂಬಂಧ ಬಲವರ್ಧನೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ದ್ವಿಪಕ್ಷೀಯ ಸಂಬಂಧದ ಎಲ್ಲ ವಲಯಗಳಲ್ಲಿ ತ್ವರಿತ ಪ್ರಗತಿಯ ಮಹತ್ವವನ್ನು ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು, ಗೌರವಾನ್ವಿತ ರಾಜಪಕ್ಸ ಅವರಿಗೆ ಭಾರತದಲ್ಲಿನ ಬೌದ್ಧರ ಯಾತ್ರಾ ನಗರಿ, ಖುಷಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುತ್ತಿರುವುದಾಗಿ ಹೇಳಿದರು ಮತ್ತು ಆ ನಗರಿ ಶ್ರೀಲಂಕಾದಿಂದ ಪ್ರವಾಸಿಗರನ್ನು ಆದಷ್ಟು ಶೀಘ್ರ ಎದುರು ನೋಡಲಿದೆ ಎಂದು ಹೇಳಿದರು.

ಕೋವಿಡ್-19 ಒಡ್ಡಿರುವ ಸವಾಲುಗಳನ್ನು ಎದುರಿಸಲು ಉಭಯ ದೇಶಗಳು ನಿರಂತರ ಸಂಪರ್ಕದಲ್ಲಿರಲು ಉಭಯ ನಾಯಕರು ಒಪ್ಪಿದರು ಮತ್ತು ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೇರಿಸುವ ಸಂಕಲ್ಪ ಮಾಡಿದರು.

****



(Release ID: 1648201) Visitor Counter : 170