ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಆರ್ಥಿಕ, ಸಾಮಾಜಿಕ ಮಂಡಳಿಯ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣ

Posted On: 17 JUL 2020 8:49PM by PIB Bengaluru

ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಆರ್ಥಿಕ, ಸಾಮಾಜಿಕ ಮಂಡಳಿಯ ಅಧಿವೇಶನ ಉದ್ದೇಶಿಸಿ

ಪ್ರಧಾನ ಮಂತ್ರಿಯವರ ಭಾಷಣ

 

ಗೌರವಾನ್ವಿತರೇ,

ಮಹಿಳೆಯರೇ ಮತ್ತು ಮಹನೀಯರೇ

ವರ್ಷ ನಾವು ವಿಶ್ವಸಂಸ್ಥೆ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಮಾನವ ಪ್ರಗತಿಗೆ ವಿಶ್ವಸಂಸ್ಥೆ ನೀಡಿದ ಅನೇಕ ಕೊಡುಗೆಗಳನ್ನು ಗುರುತಿಸುವ ಸಂದರ್ಭ ಇದು. ಇಂದಿನ ಜಗತ್ತಿನಲ್ಲಿ ವಿಶ್ವಸಂಸ್ಥೆಯ ಪಾತ್ರ ಮತ್ತು ಪ್ರಸ್ತುತತೆಯನ್ನು ನಿರ್ಣಯಿಸಲು ಮತ್ತು ಅದರ ಉತ್ತಮ ಭವಿಷ್ಯವನ್ನು ರೂಪಿಸಲು ಇದು ಒಂದು ಅವಕಾಶ.

ಗೌರವಾನ್ವಿತರೇ,

ಎರಡನೆಯ ಮಹಾಯುದ್ಧದ ನಂತರ ರಚನೆಯಾದ ವಿಶ್ವಸಂಸ್ಥೆಯ 50 ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಸೇರಿತ್ತು. ಅಂದಿನಿಂದ ಬಹಳಷ್ಟು ಬದಲಾಗಿದೆ. ಇಂದು ವಿಶ್ವಸಂಸ್ಥೆ 193 ಸದಸ್ಯ ರಾಷ್ಟ್ರಗಳನ್ನು ಒಟ್ಟುಗೂಡಿಸಿದೆ. ಅದರ ಸದಸ್ಯತ್ವ ಬೆಳೆದಂತೆಯೇ, ಅದರಿಂದ ನಿರೀಕ್ಷೆಗಳೂ ಹೆಚ್ಚಾಗಿವೆ. ಅದೇ ಸಂದರ್ಭದಲ್ಲಿ ಬಹುಪಕ್ಷೀಯತೆ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ.

ಗೌರವಾನ್ವಿತರೇ,

ಮೊದಲಿನಿಂದಲೂ ಭಾರತವು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ, ಸಾಮಾಜಿಕ ಮಂಡಳಿಯನ್ನು (ECOSOC) ಸಕ್ರಿಯವಾಗಿ ಬೆಂಬಲಿಸಿದೆ. ECOSOC ಮೊದಲ ಅಧ್ಯಕ್ಷರು ಭಾರತೀಯರಾಗಿದ್ದರು. ಸುಸ್ಥಿರ ಅಭಿವೃದ್ಧಿ ಗುರಿಗಳು ಸೇರಿದಂತೆ ECOSOC ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತ ಸಹಕರಿಸಿದೆ. ಇಂದು, ನಮ್ಮ ದೇಶೀಯ ಪ್ರಯತ್ನಗಳ ಮೂಲಕ, ನಾವು ಮತ್ತೆ ಅಜೆಂಡಾ 2030 ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಅವುಗಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಾವು ನೆರವಾಗುತ್ತಿದ್ದೇವೆ.

ಗೌರವಾನ್ವಿತರೇ,

ಭಾರತವು ಜಗತ್ತಿನ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದೆ. ನಮ್ಮ ಶಕ್ತಿ ಮತ್ತು ಜವಾಬ್ದಾರಿಯನ್ನು ನಾವು ಗಮನದಲ್ಲಿರಿಸಿಕೊಂಡಿದ್ದೇವೆ. ಭಾರತವು ತನ್ನ ಅಭಿವೃದ್ಧಿಯ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾದರೆ, ಜಾಗತಿಕ ಗುರಿಗಳ ಸಾಧನೆಯಲ್ಲಿ ಅದು ಬಹಳ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಾವು ನಮ್ಮ ರಾಜ್ಯಗಳು, ಸ್ಥಳೀಯ ಸರ್ಕಾರಗಳು, ನಾಗರಿಕ ಸಮಾಜ, ಸಮುದಾಯಗಳು ಮತ್ತು ನಮ್ಮ ಜನರನ್ನು ತೊಡಗಿಸಿಕೊಳ್ಳುವ ಮೂಲಕ "ಇಡೀ ಸಮಾಜದ" ವಿಧಾನವನ್ನು ಅಳವಡಿಸಿಕೊಂಡಿದ್ದೇವೆ.

ನಮ್ಮ ಧ್ಯೇಯವಾಕ್ಯವೆಂದರೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' - ಇದರರ್ಥ 'ಎಲ್ಲರೊಂದಿಗೆ, ಎಲ್ಲರ ಬೆಳವಣಿಗೆ, ಎಲ್ಲರ ನಂಬಿಕೆಯೊಂದಿಗೆ'. ಇದು ಯಾರನ್ನೂ ಹಿಂದೆ ಬಿಡಬಾರದು ಎಂಬ ಪ್ರಮುಖ ಸುಸ್ಥಿರ ಅಭಿವೃದ್ಧಿ ಗುರಿಗಳ ತತ್ತ್ವವನ್ನು ಪ್ರತಿಫಲಿಸುತ್ತದೆ. ಪೌಷ್ಠಿಕಾಂಶ, ಆರೋಗ್ಯ ಶಿಕ್ಷಣ, ವಿದ್ಯುತ್ ಅಥವಾ ವಸತಿಯಂತಹ ಕ್ಷೇತ್ರಗಳಲ್ಲಿ ನಮ್ಮ ಅಂತರ್ಗತ ಕಾರ್ಯಕ್ರಮಗಳ ಮೂಲಕ ನಾವು ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.

ಗೌರವಾನ್ವಿತರೇ,

ಕಳೆದ ವರ್ಷ, ನಮ್ಮ ಆರು ಲಕ್ಷ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವ ಮೂಲಕ ನಮ್ಮ ರಾಷ್ಟ್ರಪಿತ  ಮಹಾತ್ಮ ಗಾಂಧಿಯವರ 150 ನೇ ಜಯಂತಿಯನ್ನು ಆಚರಿಸಿದ್ದೇವೆ.

ಐದು ವರ್ಷಗಳಲ್ಲಿ, ನಾವು 110 ದಶಲಕ್ಷಕ್ಕೂ ಹೆಚ್ಚು ಮನೆಯ ಶೌಚಾಲಯಗಳನ್ನು ನಿರ್ಮಿಸಿದ್ದೇವೆ, ಇದು ನಮ್ಮ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿಯನ್ನು ಶೇ.38 ರಿಂದ ಶೇ.100 ಕ್ಕೆ ಸುಧಾರಿಸಿದೆ. ನಮ್ಮ ಜಾಗೃತಿ ಮೂಡಿಸುವ ಬೃಹತ್ ಕಾರ್ಯಕ್ರಮಗಳು ನಮ್ಮ ಮಹಿಳೆಯರನ್ನು ಸಬಲೀಕರಣ ಮಾಡಿವೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ನಾವು ಲಿಂಗ ಸಮಾನತೆಯನ್ನು ಸಾಧಿಸಿದ್ದೇವೆ. ಗ್ರಾಮೀಣ ಭಾರತದಲ್ಲಿ ಸುಮಾರು 70 ಮಿಲಿಯನ್ ಮಹಿಳೆಯರು ನಮ್ಮ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳ ಭಾಗವಾಗಿದ್ದಾರೆ. ಅವರು ಜೀವನ ಮತ್ತು ಜೀವನೋಪಾಯವನ್ನು ದೊಡ್ಡ ಪ್ರಮಾಣದಲ್ಲಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ನಮ್ಮ ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದಾರೆ. ಕಳೆದ ಆರು ವರ್ಷಗಳಲ್ಲಿ, ನಾವು ಬ್ಯಾಂಕುಗಳಿಂದ ದೂರವಿದ್ದವರಿಗೆ 400 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಅದರಲ್ಲಿ 220 ಮಿಲಿಯನ್ ಮಹಿಳೆಯರ ಸುಪರ್ದಿನಲ್ಲಿವೆ. ಆರ್ಥಿಕ ಸೇರ್ಪಡೆಗಾಗಿ ನಾವು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡಿದ್ದೇವೆ. ಇದು ವಿಶಿಷ್ಟ ಗುರುತಿನ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಎಲ್ಲರಿಗೂ ಮೊಬೈಲ್ ಸಂಪರ್ಕದ ತ್ರಿಜ್ಯವನ್ನು ಆಧರಿಸಿದೆ. 700 ಮಿಲಿಯನ್ ಜನರಿಗೆ 150 ಬಿಲಿಯನ್ ಡಾಲರ್ ನೇರ ಲಾಭ ವರ್ಗಾವಣೆಯನ್ನು ಮಾಡಲು ಇದು ನಮಗೆ ಅವಕಾಶ ಮಾಡಿಕೊಟ್ಟಿದೆ. ನಮ್ಮ ಆಹಾರ ಭದ್ರತಾ ಕಾರ್ಯಕ್ರಮಗಳು 813 ಮಿಲಿಯನ್ ನಾಗರಿಕರನ್ನು ತಲುಪುತ್ತಿವೆ.

ನಮ್ಮಎಲ್ಲರಿಗೂ ವಸತಿಕಾರ್ಯಕ್ರಮವು ಭಾರತ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ 2022 ವೇಳೆಗೆ ಪ್ರತಿಯೊಬ್ಬ ಭಾರತೀಯನೂ ಸುರಕ್ಷಿತ ಸೂರು ಹೊಂದಿರುವುದನ್ನು ಖಚಿತಪಡಿಸುತ್ತದೆ. ಹೊತ್ತಿಗೆ, ಕಾರ್ಯಕ್ರಮದಡಿಯಲ್ಲಿ 40 ಮಿಲಿಯನ್ ಹೊಸ ಮನೆಗಳನ್ನು ನಿರ್ಮಿಸಲಾಗುತ್ತದೆ. ಇದು ಅನೇಕ ದೇಶಗಳಲ್ಲಿನ ಒಟ್ಟು ಮನೆಗಳ ಸಂಖ್ಯೆಗಿಂತ ಹೆಚ್ಚಿನದಾಗಿದೆ. ನಮ್ಮಆಯುಷ್ಮಾನ್ ಭಾರತ್ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ಸಂರಕ್ಷಣಾ ಕಾರ್ಯಕ್ರಮವಾಗಿದ್ದು, 500 ಮಿಲಿಯನ್ ಜನರನ್ನು ಒಳಗೊಂಡಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ, ನಮ್ಮ ತಳಮಟ್ಟದ ಆರೋಗ್ಯ ವ್ಯವಸ್ಥೆಯು ವಿಶ್ವದ ಅತ್ಯುತ್ತಮ ಚೇತರಿಕೆ ದರಗಳಲ್ಲಿ ಒಂದಾಗಲು ಭಾರತಕ್ಕೆ ಸಹಾಯ ಮಾಡುತ್ತಿದೆ. 2025 ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿದ್ದೇವೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಮಾಣ ಮತ್ತು ಯಶಸ್ಸಿನಿಂದ ಹಾಗೂ ನಾವು ಅಳವಡಿಸಿಕೊಂಡಿರುವ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳಿಂದ ಕಲಿಯಬಹುದಾಗಿದೆ.

ಗೌರವಾನ್ವಿತರೇ,

ಅಭಿವೃದ್ಧಿಯ ಹಾದಿಯಲ್ಲಿ ಮುಂದೆ ಸಾಗುತ್ತಿರುವಾಗ, ನಮ್ಮ ಭೂಮಿಯ ಕಡೆಗೆ ನಮ್ಮ ಹೊಣೆಗಾರಿಕೆಯನ್ನು ನಾವು ಮರೆಯುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ನಾವು ವಾರ್ಷಿಕವಾಗಿ 38 ದಶಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದ್ದೇವೆ. ನಮ್ಮ ಹಳ್ಳಿಗಳನ್ನು ವಿದ್ಯುದ್ದೀಕರಿಸುವ ಮೂಲಕ, 80 ದಶಲಕ್ಷ ಬಡ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಮೂಲಕ ಮತ್ತು ಇಂಧನ ದಕ್ಷತೆಯ ಕ್ರಮಗಳನ್ನು ಪರಿಚಯಿಸುವ ಮೂಲಕ ಇದನ್ನು ಸಾಧಿಸಲಾಗಿದೆ. 2030 ವೇಳೆಗೆ 450 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಮತ್ತು 26 ದಶಲಕ್ಷ ಹೆಕ್ಟೇರ್ ಬಂಜರು ಭೂಮಿಯನ್ನು ಪುನಃಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಹಿಂದಿನಿಂದಲೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂಪ್ರದಾಯವನ್ನು ಹೊಂದಿದ್ದೇವೆ. ಸ್ವಚ್ಛತೆ ಕಾಪಾಡಿಕೊಳ್ಳಲು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಬೃಹತ್ ಅಭಿಯಾನಗಳನ್ನು ನಾವು ಪ್ರಾರಂಭಿಸಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಸ್ಥಾಪಿಸುವ ನಮ್ಮ ಉಪಕ್ರಮವು ಹವಾಮಾನ ಕ್ರಿಯೆಯ ಪ್ರಾಯೋಗಿಕ ಅಭಿವ್ಯಕ್ತಿಯಾಗಿತ್ತು. ಅಂತೆಯೇ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದ ಒಕ್ಕೂಟವು ಸಮಗ್ರ ವಿಧಾನಕ್ಕಾಗಿ ಎಲ್ಲಾ ಸಂಬಂಧಿತ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ನಮ್ಮ ಪ್ರದೇಶದಲ್ಲಿ ಮೊದಲ ಪ್ರತಿಸ್ಪಂದಕ - ಅಗತ್ಯವಿರುವಾಗ ಸ್ನೇಹಿತ- ರಾಷ್ಟ್ರವಾಗಿರುವುದಕ್ಕೆ ನಾವು ಯಾವಾಗಲೂ ಹೆಮ್ಮೆಪಡುತ್ತೇವೆ.. ಅದು ಭೂಕಂಪಗಳು, ಚಂಡಮಾರುತಗಳು ಅಥವಾ ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ಬಿಕ್ಕಟ್ಟು ಆಗಿರಲಿ, ಭಾರತವು ತ್ವರಿತವಾಗಿ ಮತ್ತು ಒಗ್ಗಟ್ಟಿನಿಂದ ಸ್ಪಂದಿಸಿದೆ. ಕೋವಿಡ್ ವಿರುದ್ಧದ ನಮ್ಮ ಜಂಟಿ ಹೋರಾಟದಲ್ಲಿ, ನಾವು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಮತ್ತು ಇತರ ನೆರವನ್ನು ನೀಡಿದ್ದೇವೆ. ನಮ್ಮ ನೆರೆಹೊರೆಯಲ್ಲಿ ಸಾರ್ಕ್ ಕೋವಿಡ್ ತುರ್ತು ನಿಧಿಯನ್ನು ಸ್ಥಾಪಿಸಲು ನಾವು ಸಹಾಯ ಮಾಡಿದ್ದೇವೆ.

ಗೌರವಾನ್ವಿತರೇ,

ಕೋವಿಡ್-19 ಸಾಂಕ್ರಾಮಿಕವು ಎಲ್ಲಾ ರಾಷ್ಟ್ರಗಳ ಸ್ಥಿತಿಸ್ಥಾಪಕತ್ವವನ್ನು ತೀವ್ರವಾಗಿ ಪರೀಕ್ಷಿಸಿದೆ. ಭಾರತದಲ್ಲಿ, ಸರ್ಕಾರ ಮತ್ತು ಸಮಾಜದ ಪ್ರಯತ್ನಗಳನ್ನು ಒಟ್ಟುಗೂಡಿಸುವ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಜನಾಂದೋಲನವನ್ನಾಗಿ ಮಾಡಲು ನಾವು ಪ್ರಯತ್ನಿಸಿದ್ದೇವೆ. ಬಡವರ ಮನೆಗಳಿಗೆ ಸೌಲಭ್ಯಗಳನ್ನು ತಲುಪಿಸಲು ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಾವು 300 ಬಿಲಿಯನ್ ಡಾಲರ್ಗಳಿಗಿಂತ ಹೆಚ್ಚಿನ ಪ್ಯಾಕೇಜ್ ಘೋಷಿಸಿದ್ದೇವೆ. ಇದು ಆರ್ಥಿಕತೆಯನ್ನು ಮತ್ತೆ ಹಾದಿಗೆ ತರುತ್ತದೆ, ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತದೆ ಮತ್ತು ತಂತ್ರಜ್ಞಾನ-ಚಾಲಿತ ವ್ಯವಸ್ಥೆಯನ್ನು ಜಾರಿಗೆ ತರುತ್ತದೆ. ಜಾಗತಿಕ ಆರ್ಥಿಕತೆಯೊಂದಿಗೆ ಸಂಯೋಜಿಸಲ್ಪಟ್ಟ ಸ್ವಾವಲಂಬಿ ಮತ್ತು ಸ್ಥಿತಿಸ್ಥಾಪಕ ಭಾರತದ 'ಆತ್ಮನಿರ್ಭರ ಭಾರತ' ದೃಷ್ಟಿಕೋನವನ್ನು ನಾವು ಮುಂದಿಟ್ಟಿದ್ದೇವೆ.

ಗೌರವಾನ್ವಿತರೇ,

ಸುಸ್ಥಿರ ಶಾಂತಿ ಮತ್ತು ಸಮೃದ್ಧಿಯನ್ನು ಬಹುಪಕ್ಷೀಯ ಹಾದಿಯ ಮೂಲಕ ಸಾಧಿಸಬಹುದು ಎಂದು ಭಾರತ ದೃಢವಾಗಿ ನಂಬುತ್ತದೆ. ಭೂದೇವಿಯ ಮಕ್ಕಳಾದ ನಾವು ನಮ್ಮ ಸಾಮಾನ್ಯ ಸವಾಲುಗಳನ್ನು ಎದುರಿಸಲು ಮತ್ತು ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸಲು ಕೈಜೋಡಿಸಬೇಕು. ಆದಾಗ್ಯೂ, ಬಹುಪಕ್ಷೀಯತೆಯು ಸಮಕಾಲೀನ ಪ್ರಪಂಚದ ವಾಸ್ತವವನ್ನು ಪ್ರತಿನಿಧಿಸುವ ಅಗತ್ಯವಿದೆ. ಸುಧಾರಿತ ವಿಶ್ವಸಂಸ್ಥೆಯೊಂದಿಗೆ ಮಾತ್ರ ಸುಧಾರಿತ ಬಹುಪಕ್ಷೀಯತೆಯು ಮನುಕುಲದ ಆಕಾಂಕ್ಷೆಗಳನ್ನು ಪೂರೈಸಬಲ್ಲದು. ಇಂದು, ವಿಶ್ವಸಂಸ್ಥೆಯು 75 ವರ್ಷಗಳನ್ನು ಆಚರಿಸುತ್ತಿರುವಾಗ, ಅದರ ಪ್ರಸ್ತುತತೆಯನ್ನು ಹೆಚ್ಚಿಸಲು, ಅದರ ಪರಿಣಾಮಕಾರಿತ್ವವನ್ನು ಸುಧಾರಿಸಲು ಮತ್ತು ಹೊಸ ರೀತಿಯ ಮಾನವ ಕೇಂದ್ರಿತ ಜಾಗತೀಕರಣದ ಆಧಾರವಾಗಿಸಲು, ಜಾಗತಿಕ ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸುವ ಪ್ರತಿಜ್ಞೆ ಮಾಡೋಣ. ವಿಶ್ವಸಂಸ್ಥೆಯು ಮೂಲತಃ ಎರಡನೆಯ ಮಹಾಯುದ್ಧದ ರೋಷದಿಂದ ಜನ್ಮ ತಾಳಿತು. ಇಂದು, ಸಾಂಕ್ರಾಮಿಕದ ದಾರುಣತೆಯು ಅದರ ಪುನರ್ಜನ್ಮ ಮತ್ತು ಸುಧಾರಣೆಗೆ ಸಂದರ್ಭವನ್ನು ಒದಗಿಸಿದೆ. ಅವಕಾಶವನ್ನು ನಾವು ಕಳೆದುಕೊಳ್ಳಬಾರದು.

ಗೌರವಾನ್ವಿತರೇ,

ಮಹತ್ವದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಜಾಗತಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸುಧಾರಿಸಲು ಮತ್ತು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ನಮ್ಮ ಅಗಾಧ ಬದ್ಧತೆಯೊಂದಿಗೆ ವಿಶ್ವಸಂಸ್ಥೆಯ ಕಾರ್ಯಸೂಚಿಯನ್ನು ಸಂಪೂರ್ಣವಾಗಿ ಬೆಂಬಲಿಸುವಲ್ಲಿ ಭಾರತ ತನ್ನ ಪಾತ್ರವನ್ನು ನಿರ್ವಹಿಸುತ್ತದೆ.

ನಮಸ್ಕಾರ,

ಧನ್ಯವಾದಗಳು.

***



(Release ID: 1639597) Visitor Counter : 982