ಪ್ರಧಾನ ಮಂತ್ರಿಯವರ ಕಛೇರಿ

ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನ ಉದ್ಘಾಟಿಸಿದ ಪ್ರಧಾನ ಮಂತ್ರಿ

Posted On: 26 JUN 2020 2:24PM by PIB Bengaluru

ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಲ್ಲಿಂದ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ‘ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನ ಉದ್ಘಾಟಿಸಿದರು. ಈ ಅಭಿಯಾನದಡಿ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಮತ್ತು ಸ್ಥಳೀಯ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುವುದು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪ್ರತಿಯೊಬ್ಬರೂ ಈ ಕೋವಿಡ್ – 19 ಸಾಂಕ್ರಾಮಿಕ ರೋಗದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಲಸಿಕೆ ಕಂಡುಹಿಡಿಯುವವರೆಗೂ, ಎರಡು ಗಜದ ದೂರವನ್ನು ಪಾಲಿಸುವುದು, ಮುಖಗವಸು ಧರಿಸುವುದು ಪಾಲಿಸಬಹುದಾದ ಅತ್ಯುತ್ತಮ ಮುಂಜಾಗೃತಾ ಕ್ರಮಗಳಾಗಿವೆ ಎಂದು ಒತ್ತಿ ಹೇಳಿದರು.  

ಉತ್ತರಪ್ರದೇಶ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಂಡದ್ದನ್ನು ಮತ್ತು ಈ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ತೊಡಗಿಸಿಕೊಂಡ ಬಗೆಯ ಕುರಿತು ಪ್ರಧಾನ ಮಂತ್ರಿಗಳು ಸಂತೃಪ್ತಿ ವ್ಯಕ್ತಪಡಿಸಿದರು. ಇತರ ರಾಜ್ಯಗಳು ‘ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ ಗಾರ್ ಅಭಿಯಾನ’ ದಿಂದ ಸಾಕಷ್ಟು ಕಲಿಯಲಿವೆ ಮತ್ತು ಇದರಿಂದ ಸ್ಫೂರ್ತಿ ಪಡೆಯಲಿವೆ ಎಂದು ಅವರು ಹೇಳಿದರು

ಜಗತ್ತಿನಲ್ಲೇ ಕೊರೊನಾ ಒಂದು ಹೆಮ್ಮಾರಿಯಾಗಿ ಪರಿಣಮಿಸಿರುವ ಬಿಕ್ಕಟ್ಟಿನ ಸಮಯದಲ್ಲಿ ಉತ್ತರ ಪ್ರದೇಶ ತೋರಿದ ಧೈರ್ಯ ಮತ್ತು ಜಾಣ್ಮೆಯನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ರಾಜ್ಯ ಯಶಸ್ವಿಯಾದ ರೀತಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಭೂತಪೂರ್ವವಾಗಿದೆ ಮತ್ತು ಇದು ಪ್ರಶಂಸೆಗೆ ಪಾತ್ರವಾದುದು ಎಂದು ಅವರು ಹೇಳಿದರು

ಉತ್ತರ ಪ್ರದೇಶದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕರ್ಮಿಗಳು, ಪೋಲಿಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳು, ಸಾರಿಗೆ ಸೇವೆಗಳು ಮತ್ತು ಕಾರ್ಮಿಕರು ನೀಡಿದ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು.

ನೂರಾರು ಶ್ರಮಿಕ್ ಎಕ್ಸ್ ಪ್ರೆಸ್ ರೈಲುಗಳಿಗೆ ಅನುವು ಮಾಡಿಕೊಡುವ ಮೂಲಕ ಉತ್ತರ ಪ್ರದೇಶ  ಸರ್ಕಾರ ರಾಜ್ಯದ ವಲಸೆ ಕಾರ್ಮಿಕರನ್ನು ಮರಳಿ ಕರೆತರಲು ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನ ಮಂತ್ರಿಯವರು ಪ್ರಶಂಸಿಸಿದರು.

ಕಳೆದ ಕೆಲವು ವಾರಗಳಲ್ಲಿ ದೇಶಾದ್ಯಂತದಿಂದ 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರ ಪ್ರದೇಶದಲ್ಲಿನ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ ಎಂದು ಅವರು ಹೇಳಿದರು

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವರು ಮತ್ತು ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. 

ಬಡವರು ಹಸಿವಿನಿಂದ ಬಳಲದಿರುವಂತೆ ಖಚಿತಪಡಿಸಲು ಉತ್ತರ ಪ್ರದೇಶ ಸರ್ಕಾರ ಮಾಡಿದ ಅತ್ಯುತ್ತಮ ಕಾರ್ಯವನ್ನು ಪ್ರಧಾನ ಮಂತ್ರಿಯವರು ಪ್ರಶಂಸಿಸಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಉತ್ತರ ಪ್ರದೇಶ  ಸರ್ಕಾರ ಉಚಿತ ಪಡಿತರ ನೀಡಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದು ಅವರು ಹೇಳಿದರು. ಪಡಿತರ ಚೀಟಿ ಇಲ್ಲದವರಿಗೂ ಈ ಸೌಲಭ್ಯ ಒದಗಿಸಲಾಗಿದೆ. ಇದರ ಜೊತೆಗೆ ಸುಮಾರು ರೂ 5000 ಉತ್ತರ ಪ್ರದೇಶದ 75 ಲಕ್ಷ ಬಡ ಮಹಿಳೆಯರ ಜನ್ ಧನ್ ಖಾತೆಗೆ ನೇರವಾಗಿ ವರ್ಗಾಯಿಸಲಾಯಿತು ಎಂದು ಕೂಡಾ ಅವರು ಹೇಳಿದರು.   

ಭಾರತವನ್ನು ಸ್ವಾವಲಂಬಿ ಪಥದಲ್ಲಿ ವೇಗವಾಗಿ ಮುನ್ನಡೆಸುವ ಅಭಿಯಾನದಲ್ಲಿ ಹಾಗೂ ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನದಲ್ಲಿಯೂ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಜೊತೆಗೆ ಗರೀಬ್ ಕಲ್ಯಾಣ್ ರೋಜ್ ಗಾರ್  ಅಭಿಯಾನದಡಿಯಲ್ಲಿ ಕಾರ್ಮಿಕರ ಆದಾಯವನ್ನು ಹೆಚ್ಚಿಸಲು ಗ್ರಾಮಗಳಲ್ಲಿ ಅನೇಕ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದೂ ಸಹ ಅವರು ಹೇಳಿದರು. ಇವುಗಳಲ್ಲಿ ಸುಮಾರು 60 ಲಕ್ಷ ಜನರಿಗೆ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಡಿ ಎಓ ಎಸ್ ಎಂ ಇ ಗಳಲ್ಲಿ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಇದನ್ನು ಹೊರತುಪಡಿಸಿ ಮುದ್ರಾ ಯೋಜನೆಯಡಿಯಲ್ಲಿ ಸಾವಿರಾರು ಜನರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ರೂ 10 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು. 

ಆತ್ಮ ನಿರ್ಭರ್ ರೋಜ್ ಗಾರ್ ಅಭಿಯಾನೆಯಡಿಯಲ್ಲಿ ದೇಶಾದ್ಯಂತ ಇಂತಹ ಸ್ಥಳೀಯ ಉತ್ಪನ್ನಗಳನ್ನು  ಉತ್ತೇಜಿಸಲು ಕೈಗಾರಿಕೆಗಳ ಸಮೂಹಗಳನ್ನು ರಚಿಸುವ ಮೂಲಕ ಉತ್ತರ ಪ್ರದೇಶ ಅಪಾರ ಪ್ರಯೋಜನ ಪಡೆಯಲಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. 

ಕೃಷಿಯಲ್ಲಿ ಇತ್ತೀಚೆಗೆ ಘೋಷಿಸಲಾದ ಸುಧಾರಣೆಗಳನ್ನು ಪ್ರಧಾನ ಮಂತ್ರಿಯವರು ಎತ್ತಿ ತೋರಿದರು. ಇದರಲ್ಲಿ ಕಾನೂನಿನಡಿ ರೈತರ ಮೇಲೆ ಹೇರಲಾದ ವಿವಿಧ ಸಂಕೋಲೆಗಳಿಂದ ಅವರನ್ನು ಮುಕ್ತಗೊಳಿಸಲಾಯಿತು. ಈಗ ಕೃಷಿಕರು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಮುಕ್ತರಾಗಿದ್ದಾರೆ ಮತ್ತು ಬಿತ್ತನೆ ಸಮಯದಲ್ಲೇ ತಮ್ಮ ಉತ್ಪನ್ನಗಳ ಬೆಲೆಯನ್ನು ಅವರು ನಿಗದಿಪಡಿಸಬಹುದು ಎಂದು ಅವರು ಹೇಳಿದರು.

ನಮ್ಮ ಜಾನುವಾರುಗಳಿಗಾಗಿ ಅನೇಕ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅಂದರೆ ಜಾನುವಾರುಗಳು ಮತ್ತು ಡೈರಿ ಕ್ಷೇತ್ರಕ್ಕೆಂದೇ 15 ಸಾವಿರ ಕೋಟಿ ರೂಪಾಯಿಗಳ ವಿಶೇಷ ಮೂಲ ಸೌಕರ್ಯ ನಿಧಿಯನ್ನು ಸೃಷ್ಟಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ಕುಷಿ ನಗರ್ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸುವುದರ ಕುರಿತು  ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಇದು ಬೌದ್ಧ ಯಾತ್ರಾ ಸ್ಥಳಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಇದು ಪೂರ್ವಾಂಚಲದ ವಾಯು ಮಾರ್ಗಕ್ಕೆ ಪುಷ್ಟಿ ನೀಡುತ್ತದೆ ಮತ್ತು ದೇಶ ವಿದೇಶಗಳಲ್ಲಿರುವ  ಮಹಾತ್ಮಾ ಬುದ್ಧನ ಕೋಟ್ಯಾಂತರ ಭಕ್ತರು ಸುಲಭವಾಗಿ  ಉತ್ತರ ಪ್ರದೇಶವನ್ನು ತಲುಪಬಹುದಾಗಿದೆ.

ಕೇವಲ 3 ವರ್ಷಗಳಲ್ಲಿ ಬಡವರಿಗಾಗಿ 30 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ, ಉತ್ತರ ಪ್ರದೇಶ ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ, ಉತ್ತರ ಪ್ರದೇಶ ಸರ್ಕಾರ 3 ಲಕ್ಷ ಯುವಕರಿಗೆ ಪಾರದರ್ಶಕತೆಯಿಂದ ಸರ್ಕಾರಿ ಉದ್ಯೋಗಗಳನ್ನು ನೀಡಿದೆ ಪ್ರಧಾನ ಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಕೈಗೊಂಡ ಕ್ರಮಗಳು ಮತ್ತು ಪೂರ್ವಾಂಚಲ ಪ್ರದೇಶದಲ್ಲಿನ ಮೆದುಳಿನ ಉರಿಯೂತ (ಎನ್ಸೆಫೆಲೈಟಿಸ್) ಸಂಖ್ಯೆ ಕಳೆದ 3 ವರ್ಷಗಳಲ್ಲಿ 90% ರಷ್ಟು ಕಡಿಮೆಯಾಗಿದೆ ಎಂಬುದರ ಬಗ್ಗೆ ಶ್ರೀ ಮೋದಿಯವರು ಪ್ರಸ್ತಾಪಿಸಿದರು. 

ವಿದ್ಯುತ್, ನೀರು ಮತ್ತು ರಸ್ತೆಗಳಂತಹ ಮೂಲಭೂತ ಸೌಕರ್ಯಗಳಲ್ಲಿನ ಊಹಿಸಲಾರದಂತಹ ಅಭಿವೃದ್ಧಿಯ ಕುರಿತು  ಪ್ರಧಾನ ಮಂತ್ರಿಗಳು ಮಾತನಾಡಿದರು.  

ವಿವಿಧ ಫಲಾನುಭವಿಗಳು ಮತ್ತು ಪಾಲುದಾರರ ಜೊತೆ ಪ್ರಧಾನ ಮಂತ್ರಿಗಳು ಮಾತನಾಡಿದರು. ಗೋಂಡಾದಲ್ಲಿ ಸ್ವಸಹಾಯ ಗುಂಪನ್ನು ನಡೆಸುತ್ತಿರುವ ಶ್ರೀಮತಿ ವಿನೀತಾ ಪಾಲ್, ಬಹ್ರಿಚ್ ಜಿಲ್ಲೆಯ ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಫಲಾನುಭವಿ ಶ್ರೀ ತಿಲಕ್ ರಾಮ್, ಸಂತ ಕಬೀರ್ ನಗರ್ ಜಿಲ್ಲೆಯ ಉದ್ಯಮಿ ಶ್ರೀ ಅಮರೇಂದ್ರ ಕುಮಾರ್ ಇವರೆಲ್ಲರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮುಂಬೈನಿಂದ ಹಿಂದಿರುಗಿದ ಶ್ರೀ ಕುರ್ಬಾನ್ ಅಲಿ, ಗೋರಖ್ ಪುರ್ ಜಿಲ್ಲೆಯ ಶ್ರೀ ನಾಗೇಂದ್ರ ಸಿಂಗ್, ಜಲೌನ್ ಜಿಲ್ಲೆಯ ಶ್ರೀ ದೀಪು ಮುಂತಾದ ವಲಸೆ ಕಾರ್ಮಿಕರ ಜೊತೆಯೂ ಅವರು ಸಂವಾದ ನಡೆಸಿದರು.  

 



(Release ID: 1635293) Visitor Counter : 247