ಪ್ರಧಾನ ಮಂತ್ರಿಯವರ ಕಛೇರಿ

‘ಮನ್ ಕಿ ಬಾತ್ 2.0’ 13 ನೇ ಸಂಚಿಕೆಯಲ್ಲಿ ಪ್ರಧಾನಿ ಭಾಷಣ

Posted On: 28 JUN 2020 11:39AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. 2020ರಲ್ಲಿ ಮನದ ಮಾತು ತನ್ನ ಪಯಣದ ಅರ್ಧ ದಾರಿಯನ್ನು ಕ್ರಮಿಸಿದೆ. ಇದರ ಮೂಲಕ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಜಾಗತಿಕ ಮಹಾಮಾರಿ ಬಂತು, ಮಾನವ ಜನಾಂಗಕ್ಕೆ ಇದರಿಂದ ಯಾವ ರೀತಿಯ ಸಂಕಟ ಬಂತೋ ಅದರ ಬಗ್ಗೆ ನಮ್ಮ ಮಾತುಕತೆ ಸ್ವಾಭಾವಿಕವಾಗಿ ಸ್ವಲ್ಪ ಹೆಚ್ಚೇ ಆಗಿದೆ. ಆದರೆ ಈ ದಿನಗಳಲ್ಲಿ “ಈ ವರ್ಷ ಯಾವಾಗ ಮುಗಿಯುವುದು?” ಎನ್ನುವ ಒಂದು ವಿಷಯದ ಬಗ್ಗೆ ಜನರ ಮಧ್ಯೆ ಸತತವಾಗಿ ಚರ್ಚೆಗಳು ಆಗುತ್ತಲೇ ಇವೆ. ಯಾರಾದರೂ ಮತ್ತೊಬ್ಬರಿಗೆ ದೂರವಾಣಿ ಕರೆ ಮಾಡಿದರೂ ಸಹ ‘ಈ ವರ್ಷ ಯಾಕೆ ಬೇಗ ಮುಗಿಯುತ್ತಿಲ್ಲ’ ಎನ್ನುವ ವಿಷಯದಿಂದಲೇ ಸಂಭಾಷಣೆ ಶುರುವಾಗುತ್ತದೆ. ‘ಈ ವರ್ಷ ಒಳ್ಳೆಯದಲ್ಲ’ ಎಂದು ಯಾರೋ ಬರೆಯುತ್ತಿದ್ದಾರೆ, ಗೆಳೆಯರ ಜೊತೆ ಮಾತನಾಡುತ್ತಿದ್ದಾರೆ; ‘2020 ಶುಭವಾದ ವರ್ಷವಲ್ಲ’ ಎಂದು ಇನ್ಯಾರೋ ಹೇಳುತ್ತಿದ್ದಾರೆ. ಯಾವುದಾದರೂ ರೀತಿಯಲ್ಲಿ ಈ ವರ್ಷ ಅತೀ ವೇಗವಾಗಿ ಮುಗಿದು ಹೋಗಲಿ ಎಂದೇ ಎಲ್ಲರೂ ಆಶಿಸುತ್ತಿದ್ದಾರೆ.

ಸ್ನೇಹಿತರೇ, ಹೀಗೆ ಏಕೆ ಆಗುತ್ತಿದೆ, ಇಂತಹ ಸಂಭಾಷಣೆಗಳಿಗೆ ಏನಾದರೂ ಕಾರಣವಿರಲೇ ಬೇಕು ಎಂದು ನಾನು ಕೆಲವೊಮ್ಮೆ ಯೋಚಿಸುತ್ತೇನೆ.  ಕೊರೋನಾದಂತಹ ಸಂಕಟ ಬರುತ್ತದೆ ಮತ್ತು ಇದರ ವಿರುದ್ಧದ ಹೋರಾಟ ಇಷ್ಟು ಧೀರ್ಘವಾಗಿರುತ್ತದೆ ಎಂದು ಆರೇಳು ತಿಂಗಳುಗಳ ಕೆಳಗೆ ನಮಗೇನು ಗೊತ್ತಿತ್ತು? ಈ ಸಂಕಟವಂತೂ ಹೆಚ್ಚುತ್ತಲೇ ಇದೆ, ಇದರ ಜೊತೆಗೆ ದೇಶದಲ್ಲಿ ದಿನವೂ ಹೊಸ ರೀತಿಯ sಸವಾಲುಗಳು ನಮ್ಮ ಮುಂದೆ ಬರುತ್ತಲೇ ಇವೆ. ಕೆಲವೇ ದಿನಗಳ ಹಿಂದೆ ದೇಶದ ಪೂರ್ವ ಸಮುದ್ರ ತೀರಕ್ಕೆ ಅಮ್ಫಾನ್ ಚಂಡಮಾರುತ ಅಪ್ಪಳಿಸಿದರೆ ಪಶ್ಚಿಮ ತೀರಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಿತು. ಎಷ್ಟೊಂದು ರಾಜ್ಯಗಳಲ್ಲಿ ನಮ್ಮ ರೈತ ಸೋದರ ಸೋದರಿಯರು ಮಿಡತೆಗಳ ದಾಳಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ದೇಶದ ಹಲವಾರು ಪ್ರದೇಶಗಳಲ್ಲಿ ಆಗುತ್ತಿರುವ ಭೂಕಂಪಗಳು ಸಹ ನಿಲ್ಲುವ ಲಕ್ಷಣಗಳನ್ನೇ ತೋರಿಸುತ್ತಿಲ್ಲ. ಇವೆಲ್ಲವುಗಳ ಮಧ್ಯೆ ನಮ್ಮ ಕೆಲವು ನೆರೆಹೊರೆಯವರಿಂದ ಏನಾಗುತ್ತಿದೆಯೋ ಅದರ ಸವಾಲುಗಳನ್ನೂ ದೇಶವು ಎದುರಿಸುತ್ತಿದೆ. ವಾಸ್ತವವಾಗಿ ಒಂದೇ ಬಾರಿಗೆ ಈ ಪ್ರಮಾಣದ ವಿಪತ್ತುಗಳು ಅಪರೂಪವಾಗಿ ನೋಡಲು ಮತ್ತು ಕೇಳಲು ಸಿಗುತ್ತವೆ. ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಯಾವುದಾದರೂ ಚಿಕ್ಕ ಪುಟ್ಟ ಘಟನೆಗಳು ಸಂಭವಿಸಿದರೂ ಜನರು ಅವುಗಳನ್ನೂ ಕೂಡ ಈ ಸವಾಲುಗಳ ಜೊತೆಗೆ ಸೇರಿಸಿ ನೋಡುತ್ತಿದ್ದಾರೆ.

ಗೆಳೆಯರೇ, ಕಷ್ಟಗಳು ಬರುತ್ತವೆ, ಸಂಕಟಗಳು ಬರುತ್ತವೆ, ಆದರೆ ಈ ವಿಪತ್ತುಗಳ ಕಾರಣದಿಂದ ನಾವು 2020 ನೇ ವರ್ಷವನ್ನು ಕೆಟ್ಟದ್ದು ಎಂದು ಭಾವಿಸಬೇಕೆ? ಯಾವ ಕಾರಣದಿಂದ ಮೊದಲಿನ ಆರು ತಿಂಗಳುಗಳು ಹೀಗೆ ಕಳೆದಿದೆಯೋ ಅದೇ ಕಾರಣದಿಂದ ಇಡೀ ವರ್ಷ ಹೀಗೆಯೇ ಇರುತ್ತದೆ ಎಂದು ಯೋಚಿಸುವುದು ಸರಿಯೇ? ಖಂಡಿತ ಅಲ್ಲ. ನನ್ನ ಪ್ರೀತಿಯ ದೇಶವಾಸಿಗಳೇ, ಖಂಡಿತವಾಗಿಯೂ ಬೇಡ. ಒಂದು ವರ್ಷದಲ್ಲಿ ಒಂದು ಸವಾಲು ಎದುರಾಗಲಿ ಅಥವಾ 50 ಸವಾಲುಗಳು ಬರಲಿ, ಸಂಖ್ಯೆಗಳು ಹೆಚ್ಚು ಕಡಿಮೆ ಆಗುವುದರಿಂದ ಆ ವರ್ಷವು ಕೆಟ್ಟದ್ದಾಗುವುದಿಲ್ಲ. ಭಾರತದ ಇತಿಹಾಸವೇ ವಿಪತ್ತುಗಳು ಮತ್ತು ಸವಾಲುಗಳ ವಿರುದ್ಧ ಗೆಲುವು ಸಾಧಿಸಿ ಹೆಚ್ಚು ಪ್ರಕಾಶಮಾನವಾಗಿ ಬೆಳಗುವುದಾಗಿದೆ. ನೂರಾರು ವರ್ಷಗಳಿಂದ, ಬಹಳಷ್ಟು ಆಕ್ರಮಣಕಾರರು ಭಾರತದ ಮೇಲೆ ದಾಳಿ ಮಾಡಿದರು, ನಮ್ಮನ್ನು ಬಿಕ್ಕಟ್ಟಿಗೆ ಸಿಲುಕಿಸಿದರು, ಭಾರತ ದೇಶ ನಾಶವಾಗುತ್ತದೆ, ಭಾರತದ ಸಂಸ್ಕೃತಿ ಕೊನೆಗೊಳ್ಳುತ್ತದೆ ಎಂದು ಜನರು ಭಾವಿಸಿದ್ದರು, ಆದರೆ, ಈ ಬಿಕ್ಕಟ್ಟುಗಳಿಂದ ಭಾರತವು ಮುಂದೆ ಇನ್ನಷ್ಟು ಭವ್ಯವಾಗಿ ಬೆಳೆಯಿತು.

ಸ್ನೇಹಿತರೇ, ನಮ್ಮಲ್ಲಿ ‘ಸೃಷ್ಟಿ ಶಾಶ್ವತ, ಸೃಷ್ಟಿ ನಿರಂತರ’ ಎನ್ನುವ ಮಾತಿದೆ.

ನನಗೆ ಒಂದು ಹಾಡಿನ ಕೆಲವು ಸಾಲುಗಳು ನೆನಪಾಗುತ್ತಿವೆ –

ದಿನ ದಿನವೂ ಝುಳು ಝುಳು ಹರಿಯುವ ಗಂಗೆಯ ಧಾರೆ ಏನು ಹೇಳುತ್ತಿದೆ,

ಯುಗಯುಗಾಂತರಗಳಿಂದ ಹರಿಯುತ್ತಿರುವ ಈ ಪುಣ್ಯ ಧಾರೆ ನಮ್ಮದೆಂದು

ಅದೇ ಹಾಡಿನಲ್ಲಿ ಮುಂದೆ ಹೀಗೆ ಬರೆಯಲಾಗಿದೆ:

ಕ್ಷಯಿಸುವುದು ಕ್ಷಯಿಸುತ್ತದೆ, ಬಂಡೆ ಕಲ್ಲುಗಳ ಒಡ್ಡು ಕಟ್ಟಿ ನೀವದನ್ನು ನಿಲ್ಲಿಸಬಲ್ಲಿರಾ?

ಭಾರತದಲ್ಲಿ ಕೂಡ ಒಂದು ಕಡೆ ದೊಡ್ಡ ದೊಡ್ಡ ಸಂಕಟಗಳು ಬರುತ್ತಲೇ ಇವೆ, ಅಲ್ಲಿಯೇ ಎಲ್ಲಾ ಸಂಕಟಗಳನ್ನೂ ದೂರ ಮಾಡುತ್ತಾ ಹಲವು ಹೊಸ ಸೃಷ್ಟಿಗಳು ಕೂಡ ಆಗಿದೆ. ಹೊಸ ಹೊಸ ಸಾಹಿತ್ಯಗಳ ರಚನೆಯಾಗಿದೆ, ಹೊಸ ಸಂಶೋಧನೆಗಳಾಗಿವೆ, ಹೊಸ ಸಿದ್ಧಾಂತಗಳ ಸ್ಥಾಪನೆಯಾಗಿವೆ. ಅಂದರೆ ಸಂಕಟದ ಹೊರತಾಗಿಯೂ ಪ್ರತಿ ಕ್ಷೇತ್ರದಲ್ಲೂ ಸೃಜನಶೀಲತೆಯ ಪ್ರಕ್ರಿಯೆ ಮುಂದುವರೆದಿದೆ; ನಮ್ಮ ಸಂಸ್ಕೃತಿ ಹೂವಾಗಿ ಅರಳಿ ಏಳ್ಗೆ ಕಾಣುತ್ತಿದೆ ಮತ್ತು ದೇಶ ಮುಂದುವರೆಯುತ್ತಲೇ ಇದೆ. ಭಾರತವು ಯಾವಾಗಲೂ ಸಂಕಟಗಳನ್ನು ಸಫಲತೆಯ ಏಣಿಯನ್ನಾಗಿ ಬದಲಾಯಿಸಿದೆ. ಇದೇ ಭಾವನೆಯೊಂದಿಗೆ ನಾವು ಇಂದೂ ಕೂಡ ಈ ಎಲ್ಲಾ ಸಂಕಟಗಳ ಮಧ್ಯೆ ಮುಂದುವರೆಯುತ್ತಲೇ ಇರಬೇಕು. ನೀವೂ ಕೂಡ ಈ ವಿಚಾರಗಳೊಂದಿಗೆ ಮುಂದುವರೆಯುತ್ತೀರಿ, 130 ಕೋಟಿ ದೇಶವಾಸಿಗಳು ಪ್ರಗತಿ ಹೊಂದಿದಾಗ ಈ ವರ್ಷ ದೇಶಕ್ಕೆ ಹೊಸ ಕೀರ್ತಿಯನ್ನು ತಂದುಕೊಟ್ಟ ವರ್ಷವೆಂಬುದು ಸಾಬೀತಾಗುತ್ತದೆ. ಇದೇ ವರ್ಷದಲ್ಲಿ ದೇಶವು ಹೊಸ ಗುರಿಯನ್ನು ಪಡೆದುಕೊಳ್ಳುತ್ತದೆ. ಹೊಸ ಆಕಾಂಕ್ಷೆಗಳನ್ನು ತುಂಬಿಕೊಂಡು ಹೊಸ ಎತ್ತರಕ್ಕೆ ಏರುತ್ತದೆ. 130 ಕೋಟಿ ದೇಶವಾಸಿಗಳ ಶಕ್ತಿಯ ಮೇಲೆ, ನಿಮ್ಮೆಲ್ಲರ ಮೇಲೆ ಮತ್ತು ದೇಶದ ಮಹಾನ್ ಪರಂಪರೆಯ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ.

 ನನ್ನ ಪ್ರೀತಿಯ ದೇಶವಾಸಿಗಳೇ, ಕಷ್ಟ ಎಷ್ಟೇ ದೊಡ್ಡದಾಗಿದ್ದರೂ ಭಾರತದ ಸಂಸ್ಕಾರ, ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡುವ ಪ್ರೇರಣೆಯನ್ನು ನೀಡುತ್ತದೆ. ಕಷ್ಟದ ಸಮಯದಲ್ಲಿ ಭಾರತವು ಜಗತ್ತಿಗೆ ಸಹಾಯ ಮಾಡಿದ ರೀತಿ, ಇಂದು ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದೆ. ಇದರಿಂದ ಜಗತ್ತು ಭಾರತದ ವಿಶ್ವ ಬಂಧುತ್ವದ ಭಾವನೆಯನ್ನು ಸ್ವತಃ ಅನುಭವಿಸಿದೆ ಮತ್ತು ಇದರ ಜೊತೆಯಲ್ಲೇ ವಿಶ್ವವು ನಮ್ಮ ಸಾರ್ವಭೌಮತ್ವ ಮತ್ತು ಗಡಿ ರಕ್ಷಣೆಯಲ್ಲಿ ಭಾರತದ ಶಕ್ತಿ ಮತ್ತು ಬದ್ಧತೆಯನ್ನು ಸಹಾ ನೋಡಿದೆ. ಲಡಾಖ್‍ನಲ್ಲಿ ಭಾರತದ ಭೂಭಾಗದತ್ತ ಕಣ್ಣೆತ್ತಿ ನೋಡುವವರಿಗೆ ಸರಿಯಾದ ಉತ್ತರ ಸಿಕ್ಕಿದೆ. ಭಾರತಕ್ಕೆ ಸ್ನೇಹ ನಿಭಾಯಿಸುವುದೂ ತಿಳಿದಿದೆ, ಹಾಗೆಯೇ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸರಿಯಾದ ಉತ್ತರ ಕೊಡುವುದೂ ತಿಳಿದಿದೆ. ತಾಯಿ ಭಾರತಿಯ ಗೌರವಕ್ಕೆ ಎಂದಿಗೂ ಚ್ಯುತಿ ಬರಲು ಬಿಡುವುದಿಲ್ಲ ಎನ್ನುವುದನ್ನು ನಮ್ಮ ವೀರ ಸೈನಿಕರು ತೋರಿಸಿಕೊಟ್ಟಿದ್ದಾರೆ.

ಸ್ನೇಹಿತರೇ, ಲಡಾಖ್‍ನಲ್ಲಿ ಹುತಾತ್ಮರಾದ ನಮ್ಮ ವೀರ ಸೈನಿಕರ ಶೌರ್ಯಕ್ಕೆ ಇಡೀ ದೇಶವು ನಮಿಸುತ್ತಿದೆ, ಶ್ರದ್ಧಾಂಜಲಿ ಅರ್ಪಿಸುತ್ತಿದೆ. ಇಡೀ ದೇಶ ಅವರಿಗೆ ಕೃತಜ್ಞವಾಗಿದೆ, ಅವರಿಗೆ ತಲೆಬಾಗಿದೆ. ಈ ಗೆಳೆಯರ ಬಂಧು ಬಾಂಧವರಂತೆಯೇ ಪ್ರತಿ ಭಾರತೀಯನೂ ಇವರನ್ನು ಕಳೆದುಕೊಂಡಿರುವ ದುಖಃವನ್ನು ಅನುಭವಿಸುತ್ತಿದ್ದಾನೆ. ತಮ್ಮ ವೀರ ಮಕ್ಕಳ ಬಲಿದಾನಕ್ಕೆ ಅವರ ಸಂಬಂಧಿಗಳಲ್ಲಿ ಇರುವ ಹೆಮ್ಮೆಯ ಭಾವನೆ, ದೇಶಕ್ಕಾಗಿ ತೋರಿಸುವ ಹುರುಪು – ಇದುವೇ ದೇಶದ ಶಕ್ತಿ. ಯಾರ ಮಕ್ಕಳು ಹುತಾತ್ಮರಾಗಿದ್ದಾರೋ, ಅವರ ತಂದೆ ತಾಯಿಯರು ತಮ್ಮ ಇನ್ನೊಬ್ಬ ಮಗನನ್ನೂ, ಕುಟುಂಬದ ಬೇರೆ ಮಕ್ಕಳನ್ನೂ ಸಹ ಸೇನೆಗೆ ಕಳುಹಿಸುವ ಮಾತನ್ನು ಆಡುತ್ತಿದ್ದಾರೆ, ಇದನ್ನು ನೀವೂ ನೋಡಿರಬಹುದು. ಬಿಹಾರ ರಾಜ್ಯದ ವಾಸಿ ಹುತಾತ್ಮ ಕುಂದನ್ ಕುಮಾರ್ ಅವರ ತಂದೆಯ ಮಾತುಗಳಂತೂ ಕಿವಿಯಲ್ಲಿ ಗುಯ್‍ಗುಡುತ್ತಿವೆ. ತಮ್ಮ ಮೊಮ್ಮಕ್ಕಳನ್ನೂ ಕೂಡ ದೇಶದ ರಕ್ಷಣೆಗಾಗಿ ಸೇನೆಗೆ ಕಳುಹಿಸುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಇದೇ ಹುಮ್ಮಸ್ಸು, ಪ್ರತೀ ಹುತಾತ್ಮರ ಪರಿವಾರದ್ದಾಗಿದೆ. ವಾಸ್ತವದಲ್ಲಿ ಈ ನಾಗರೀಕರ ತ್ಯಾಗ ಪೂಜನೀಯವಾದುದು. ಭಾರತ ಮಾತೆಯ ರಕ್ಷಣೆಗಾಗಿ ಯಾವ ಸಂಕಲ್ಪದಿಂದ ನಮ್ಮ ಸೈನಿಕರು ಬಲಿದಾನಗೈದರೋ ಅದೇ ಸಂಕಲ್ಪವನ್ನು ನಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕು, ಪ್ರತಿಯೊಬ್ಬ ದೇಶವಾಸಿಯೂ ಮಾಡಿಕೊಳ್ಳಬೇಕು. ನಮ್ಮ ಪ್ರತಿ ಪ್ರಯತ್ನವೂ ಇದೇ ದಿಕ್ಕಿನಲ್ಲಿ ಇರಬೇಕಾಗಿದೆ. ಇದರಿಂದ ಗಡಿ ರಕ್ಷಣೆಗಾಗಿ ದೇಶದ ಬಲ ಹೆಚ್ಚಿ, ದೇಶವು ಮತ್ತಷ್ಟು ಕ್ಷೇಮವಾಗಿ ಆತ್ಮನಿರ್ಭರವಾಗಬೇಕು. ಇದೇ ನಮ್ಮ ಹುತಾತ್ಮರಿಗೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ ಕೂಡ ಆಗಿದೆ.

ಅಸ್ಸಾಂನಿಂದ ರಜನಿಯವರು – “ಪೂರ್ವ ಲಡಾಖ್‍ನಲ್ಲಿ ಆದ ಘಟನೆಗಳನ್ನು ನೋಡಿದ ಮೇಲೆ ಸ್ವದೇಶೀ ವಸ್ತುಗಳನ್ನೇ ಖರೀದಿ ಮಾಡುತ್ತೇನೆ ಅಷ್ಟೆ ಅಲ್ಲ, ಲೋಕಲ್‍ಗಾಗಿ ವೋಕಲ್ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ದೇನೆ” ಎಂದು ನನಗೆ ಬರೆದು ತಿಳಿಸಿದ್ದಾರೆ. ಈ ರೀತಿಯ ಸಂದೇಶಗಳು ನನಗೆ ದೇಶದ ಮೂಲೆ ಮೂಲೆಗಳಿಂದ ಬರುತ್ತಿವೆ. ಬಹಳಷ್ಟು ಜನರು ಈ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದು ನನಗೆ ಪತ್ರ ಬರೆದು ತಿಳಿಸಿದ್ದಾರೆ. ಇದೇ ರೀತಿ ತಮಿಳುನಾಡಿನ ಮಧುರೈನಿಂದ ಮೋಹನ್ ರಾಮಮೂರ್ತಿ ಅವರು “ನಾನು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಹೊಂದುವುದನ್ನು ನೋಡಲು ಇಚ್ಚಿಸುತ್ತೇನೆ” ಎಂದು ಬರೆದಿದ್ದಾರೆ.

ಗೆಳೆಯರೇ, ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ದೇಶವು ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನ ಬಹಳಷ್ಟು ದೇಶಗಳಿಗಿಂತ ಮುಂದೆ ಇತ್ತು. ನಮ್ಮಲ್ಲಿ ಬಹಳಷ್ಟು ಶಸ್ತ್ರಾಸ್ತ್ರ ಕಾರ್ಖಾನೆಗಳು ಇದ್ದವು.  ಆ ಸಮಯದಲ್ಲಿ ಎಷ್ಟೋ ದೇಶಗಳು ನಮಗಿಂತ ತುಂಬಾ ಹಿಂದೆ ಇದ್ದವು. ಅವೆಲ್ಲಾ ಈಗ ನಮಗಿಂತ ಮುಂದಿವೆ. ಸ್ವಾತಂತ್ರ್ಯ ಬಂದ ನಂತರ ರಕ್ಷಣಾ ಕ್ಷೇತ್ರದಲ್ಲಿ ನಾವು ಎಷ್ಟು ಪ್ರಯತ್ನ ಮಾಡಬೇಕಿತ್ತೋ, ನಮ್ಮ ಹಳೆಯ ಅನುಭವಗಳ ಲಾಭ ಪಡೆದುಕೊಳ್ಳಬೇಕಿತ್ತೋ ಅದನ್ನು ನಾವು ಪಡೆದುಕೊಳ್ಳಲಿಲ್ಲ. ಆದರೆ ಇಂದು ರಕ್ಷಣಾ ಕ್ಷೇತ್ರದಲ್ಲಿ, ತಾಂತ್ರಿಕತೆಯ ಕ್ಷೇತ್ರದಲ್ಲಿ ಭಾರತವು ಮುಂದುವರೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ, ಭಾರತವು ಆತ್ಮನಿರ್ಭರತೆಯತ್ತ ಹೆಜ್ಜೆ ಇಡುತ್ತಿದೆ.

ಸ್ನೇಹಿತರೆ, ಯಾವುದೇ ಧ್ಯೇಯ people’s participation ಅಂದರೆ ಜನರ ಸಹಭಾಗಿತ್ವ ಇಲ್ಲದೆ ಸಂಪೂರ್ಣವಾಗಲಾರದು, ಸಫಲವಾಗಲಾರದು. ಆದ್ದರಿಂದ ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಒಬ್ಬ ನಾಗರೀಕನಾಗಿ ನಮ್ಮೆಲ್ಲರ ಸಂಕಲ್ಪ, ಸಮರ್ಪಣೆ ಮತ್ತು ಸಹಕಾರ ಬಹಳ ಮುಖ್ಯ. ಮತ್ತು ಅದು ಅನಿವಾರ್ಯವೂ ಕೂಡ. ನೀವು local ವಸ್ತುಗಳನ್ನು ಖರೀದಿಸಿ, local ಗಾಗಿ vocal ಆಗಿ. ಹಾಗಾದಾಗ ಮಾತ್ರ ನೀವು ದೇಶವನ್ನು ಬಲಿಷ್ಠ್ಟವನ್ನಾಗಿ ಮಾಡುವುದರಲ್ಲಿ ನಿಮ್ಮ ಪಾತ್ರವನ್ನು ವಹಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಇದೂ ಕೂಡ ಒಂದು ರೀತಿಯ ದೇಶಸೇವೆಯೇ ಆಗಿದೆ. ನೀವು ಯಾವುದೇ ವೃತ್ತಿಯಲ್ಲಿರಲಿ, ಪ್ರತಿಯೊಂದರಲ್ಲಿ ಸಹ ದೇಶ ಸೇವೆ ಮಾಡುವುದಕ್ಕೆ ಬಹಳಷ್ಟು ಅವಕಾಶ ಇರುತ್ತದೆ. ದೇಶದ ಅವಶ್ಯಕತೆಯನ್ನು ಅರ್ಥೈಸಿಕೊಂಡು ಯಾವುದೇ ಕೆಲಸವನ್ನು ಮಾಡಿದರೂ ಅದು ದೇಶಸೇವೆಯೇ ಆಗುತ್ತದೆ. ನಿಮ್ಮ ಈ ಸೇವೆ ದೇಶವನ್ನು ಯಾವುದೋ ಒಂದು ರೀತಿಯಲ್ಲಿ ಶಕ್ತಿಶಾಲಿಯನ್ನಾಗಿ ಮಾಡುತ್ತದೆ, ಮತ್ತು ನಮ್ಮ ದೇಶವು ಎಷ್ಟು ಬಲಿಷ್ಠವಾಗುತ್ತದೆಯೋ, ಜಗತ್ತಿನಲ್ಲಿ ಶಾಂತಿಯ ಸಂಭಾವ್ಯತೆ ಕೂಡ ಬಲಿಷ್ಠವಾಗುತ್ತದೆ ಎನ್ನುವುದನ್ನು ಸಹ ನಾವು ನೆನಪಿಟ್ಟು ಕೊಂಡಿರಬೇಕು. 

ನಮ್ಮಲ್ಲಿ ಒಂದು ಮಾತಿದೆ.

ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಹಿ ಪರೆಷಾನ್ ಪರಿಪೀಡನಾಯ !

ಖಲಸ್ಯ ಸಾಧೋ ವಿಪರೀತಂ ಏತತ್, ಜ್ಞಾನಾಯ ದಾನಾಯ ಚ ರಕ್ಷಣಾಯ !!

ಅಂದರೆ, ಒಂದುವೇಳೆ ಸ್ವಭಾವದಿಂದ ಯಾವುದೇ ವ್ಯಕ್ತಿಯು ದುಷ್ಟನಾಗಿದ್ದರೆ ಅವನು ವಿದ್ಯೆಯ ಪ್ರಯೋಗವನ್ನು ವಿವಾದದಲ್ಲಿ, ಧನವನ್ನು ಅಹಂಕಾರದಲ್ಲಿ ಮತ್ತು ಶಕ್ತಿಯ ಪ್ರಯೋಗವನ್ನು ಇನ್ನೊಬ್ಬರಿಗೆ ತೊಂದರೆ ಕೊಡುವುದರಲ್ಲಿ ವಿನಿಯೋಗಿಸುತ್ತಾನೆ. ಆದರೆ ಸಜ್ಜನರ ವಿದ್ಯೆಯು ಜ್ಞಾನಕ್ಕಾಗಿ, ಹಣವು ಸಹಾಯಕ್ಕಾಗಿ, ಮತ್ತು ಶಕ್ತಿಯು ರಕ್ಷಣೆ ಮಾಡುವುದಕ್ಕಾಗಿ ಉಪಯೋಗಿಸಲ್ಪಡುತ್ತದೆ ಎಂದು ಅರ್ಥ.

ಭಾರತದ ಸಂಕಲ್ಪ – ಭಾರತದ ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಸಂರಕ್ಷಣೆ; ಭಾರತದ ಗುರಿ – ಆತ್ಮನಿರ್ಭರತೆಯ ಭಾರತ; ಭಾರತದ ಪರಂಪರೆ – ನಂಬಿಕೆ ಮತ್ತು ಸ್ನೇಹ; ಭಾರತದ ಭಾವನೆ – ಬಂಧುತ್ವ. ನಾವು ಇದೇ ಆದರ್ಶಗಳ ಜೊತೆಗೆ ಮುನ್ನಡೆಯೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾದ ಸಂಕಷ್ಟದ ಸಮಯದಲ್ಲಿ ದೇಶವು ಲಾಕ್‍ಡೌನ್‍ನಿಂದ ಹೊರಗೆ ಬಂದಿದೆ. ಈಗ ನಾವು ಅನ್‍ಲಾಕ್ ಹಂತದಲ್ಲಿ ಇದ್ದೇವೆ. ಅನ್‍ಲಾಕ್‍ನ ಈ ಸಮಯದಲ್ಲಿ ಕೊರೋನಾವನ್ನು ಸೋಲಿಸುವುದು, ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದು ಮತ್ತು ಅದಕ್ಕೆ ಶಕ್ತಿಯನ್ನು ತುಂಬುವುದು – ಈ ಎರಡು ವಿಷಯಗಳ ಕುರಿತು ನಾವು ಬಹಳಷ್ಟು ಗಮನ ಹರಿಸಬೇಕಾಗಿದೆ. ಸ್ನೇಹಿತರೇ, ಲಾಕ್‍ಡೌನ್‍ಗಿಂತ ಹೆಚ್ಚು ಎಚ್ಚರಿಕೆಯನ್ನು ನಾವು ಅನ್‍ಲಾಕ್ ಹಂತದಲ್ಲಿ ತೆಗೆದುಕೊಳ್ಳಬೇಕಿದೆ. ನಿಮ್ಮ ಎಚ್ಚರಿಕೆಯೇ ನಿಮ್ಮನ್ನು ಕೊರೋನಾ ದಿಂದ ರಕ್ಷಿಸುತ್ತದೆ. ಒಂದು ವೇಳೆ ನೀವು ಮಾಸ್ಕ್ ಧರಿಸದಿದ್ದರೆ, 2 ಗಜಗಳ ಅಂತರವನ್ನು ಪಾಲಿಸದಿದ್ದರೆ ಅಥವಾ ಅಗತ್ಯವಿರುವ ಬೇರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ನೀವು ನಿಮ್ಮ ಜೊತೆಗೆ ಬೇರೆಯವರನ್ನೂ ಮುಖ್ಯವಾಗಿ ಮನೆಯಲ್ಲಿರುವ ಮಕ್ಕಳು ಮತ್ತು ವೃದ್ಧರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ ಎಂದರ್ಥ. ಆದ್ದರಿಂದ ಎಲ್ಲಾ ದೇಶವಾಸಿಗಳಲ್ಲಿ ನನ್ನ ವಿನಂತಿ ಏನೆಂದರೆ ನೀವು ಅಸಡ್ಡೆ ತೋರಿಸಬೇಡಿ, ನಿಮ್ಮ ರಕ್ಷಣೆ ಮಾಡಿಕೊಳ್ಳಿ ಜೊತೆಗೆ ಬೇರೆಯವರನ್ನೂ ರಕ್ಷಿಸಿ. - ನಾನು ಇದನ್ನು ಮತ್ತೆ ಮತ್ತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಗೆಳೆಯರೇ, ಅನ್‍ಲಾಕ್‍ನ ಈ ಸಮಯದಲ್ಲಿ ಭಾರತದಲ್ಲಿ ದಶಕಗಳಿಂದ ಬಂಧಿಯಾಗಿದ್ದ ಕೆಲವು ವಿಷಯಗಳೂ ಅನ್‍ಲಾಕ್ ಆಗುತ್ತಿವೆ. ಬಹಳ ವರ್ಷಗಳಿಂದ ನಮ್ಮ ಗಣಿಗಾರಿಕೆ ಕ್ಷೇತ್ರವು ಲಾಕ್‍ಡೌನ್ ಆಗಿತ್ತು. ವಾಣಿಜ್ಯ ಹರಾಜಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಕೆಲವೇ ದಿನಗಳ ಹಿಂದೆ ಅಂತರಿಕ್ಷ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಮಾಡಲಾಗಿದೆ. ಆ ಸುಧಾರಣೆಯ ಸಹಾಯದಿಂದ ವರ್ಷಗಳಿಂದ ಲಾಕ್‍ಡೌನ್‍ನಲ್ಲಿ ಸಿಕ್ಕಿಕೊಂಡಿದ್ದ ಈ ಕ್ಷೇತ್ರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದರಿಂದ ಆತ್ಮನಿರ್ಭರತೆಯ ಭಾರತದ ಅಭಿಯಾನಕ್ಕೆ ಬರೀ ವೇಗ ಸಿಗುವುದಷ್ಟೆ ಅಲ್ಲದೇ ದೇಶವು ತಾಂತ್ರಿಕತೆಯಲ್ಲಿ ಕೂಡ ಮುಂದುವರೆಯುತ್ತದೆ.

ನೀವು ಕೃಷಿ ಕ್ಷೇತ್ರವನ್ನೇ ನೋಡಿ, ಈ ಕ್ಷೇತ್ರದಲ್ಲಿಯೂ ಕೂಡ ಬಹಳಷ್ಟು ವಿಚಾರಗಳು ದಶಕಗಳಿಂದ ಲಾಕ್‍ಡೌನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಈ ಕ್ಷೇತ್ರವನ್ನೂ ಸಹ ಈಗ ಅನ್‍ಲಾಕ್ ಮಾಡಲಾಗಿದೆ. ಇದರಿಂದ ಒಂದುಕಡೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ, ಯಾರಿಗಾದರೂ ಮಾರುವ ಸ್ವಾತಂತ್ರ್ಯ ಸಿಕ್ಕಿದೆ, ಮತ್ತೊಂದು ಕಡೆ ಅವರಿಗೆ ಹೆಚ್ಚು ಲಾಭ ಸಿಗುವುದು ಸಹ ನಿಶ್ಚಿತವಾಗಿದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ನಮ್ಮ ದೇಶವು ಈ ಎಲ್ಲಾ ಸಂಕಟಗಳ ಮಧ್ಯೆ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡು ಪ್ರಗತಿಯ ಹೊಸ ಪಥವನ್ನು ತೆರೆಯುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ತಿಂಗಳೂ ನಾವು ನಮ್ಮನ್ನು ಭಾವುಕರನ್ನಾಗಿಸುವ

ಕೆಲವು ವಿಷಯಗಳನ್ನು ಓದಿರುತ್ತೇವೆ, ನೋಡಿರುತ್ತೇವೆ. ಅವು, ಹೇಗೆ ಪ್ರತಿಯೊಬ್ಬ ಭಾರತೀಯನೂ ಪರಸ್ಪರ ಸಹಾಯ ಮಾಡಲು ಸಿದ್ಧನಾಗಿದ್ದಾನೆ, ಹೇಗೆ ತನ್ನಿಂದ ಸಾಧ್ಯವಾದಷ್ಟು ಮಾಡುವಲ್ಲಿ ನಿರತನಾಗಿದ್ದಾನೆ ಎಂಬುದನ್ನು  ನಮಗೆ ನೆನಪಿಸುತ್ತದೆ.

ಅರುಣಾಚಲ ಪ್ರದೇಶದ ಇಂತಹುದೇ ಒಂದು ಪ್ರೇರಣೆ ನೀಡುವ ವಿಷಯ ಮಾಧ್ಯಮದಲ್ಲಿ ನನಗೆ ಓದಲು ಸಿಕ್ಕಿತು. ಇಲ್ಲಿನ ಸಿಯಾಂಗ್ ಜಿಲ್ಲೆಯ ಮಿರೆಮ್ ಗ್ರಾಮ ಒಂದು ವಿಶಿಷ್ಟವಾದ ಕೆಲಸ ಮಾಡಿ ತೋರಿಸಿದೆ ಮತ್ತು ಅದು ಸಮಸ್ತ ಭಾರತಕ್ಕೆ ಒಂದು ಉದಾಹರಣೆಯಾಗಿದೆ. ಈ ಗ್ರಾಮದ ಬಹಳಷ್ಟು ಜನರು ಹೊರಗೆ ಇದ್ದು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಅವರೆಲ್ಲ ತಮ್ಮ ಗ್ರಾಮದತ್ತ ಹಿಂತಿರುಗಿ ಬರುವುದನ್ನು ಈ ಗ್ರಾಮದ ಜನರು ನೋಡಿದರು. ಅವರು ಗ್ರಾಮಕ್ಕೆ ಬರುವ ಮೊದಲೇ ಗ್ರಾಮದ ಹೊರಗೆ quarantine ಮಾಡುವ ನಿರ್ಧಾರ ಮಾಡಿದರು. ಅವರೆಲ್ಲರೂ ಒಟ್ಟುಗೂಡಿ ಹಳ್ಳಿಯಿಂದ ಸ್ವಲ್ಪ ದೂರದಲ್ಲಿ 14 ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿದರು. ತಮ್ಮ ಜನ ಹಿಂತಿರುಗಿ ಬಂದಾಗ ಅವರನ್ನು ಈ ಗುಡಿಸಲುಗಳಲ್ಲಿ ಕೆಲವು ದಿನ quarantine ನಲ್ಲಿ ಇರಿಸುವ ನಿರ್ಧಾರ ಮಾಡಿದರು. ಈ ಗುಡಿಸಲುಗಳಲ್ಲಿ ಶೌಚಾಲಯ, ವಿದ್ಯುತ್, ನೀರು ಸೇರಿದಂತೆ ದಿನನಿತ್ಯದ ಅವಶ್ಯಕತೆಗಳಿಗಾಗಿ ಪ್ರತಿಯೊಂದು ರೀತಿಯ ಸೌಲಭ್ಯಗಳೂ ಸಿಗುವಂತೆ ಮಾಡಿದ್ದರು. ನಿಸ್ಸಂಶಯವಾಗಿ, ಮಿರೆಮ್ ಗ್ರಾಮದ ಜನರ ಈ ಸಾಮೂಹಿಕ ಪ್ರಯತ್ನ ಮತ್ತು ಅರಿವು ಎಲ್ಲರ ಗಮನವನ್ನು ಸೆಳೆಯಿತು.

ಸ್ನೇಹಿತರೇ, ನಮ್ಮಲ್ಲಿ ಒಂದು ಮಾತನ್ನು ಹೇಳುತ್ತಾರೆ –

ಸ್ವಭಾವಂ ನ ಜಹಾತಿ ಏವ ಸಾಧು ಆಪದ್ರತೋಪಿ ಸನ !

ಕರ್ಪೂರ ಪಾವಕ ಸ್ಪೃಷ್ಟ ಸೌರಭಂ ಲಭತೆತರಾಮ್ !!

ಅಂದರೆ, ಹೇಗೆ ಕರ್ಪೂರವು ಬೆಂಕಿಯಲ್ಲಿ ಉರಿಯುತ್ತಿದ್ದರೂ ತನ್ನ ಸುಗಂಧವನ್ನು ಬಿಡುವುದಿಲ್ಲವೋ ಹಾಗೆಯೆ ಸಜ್ಜನರು ಆಪತ್ಕಾಲದಲ್ಲಿ ಕೂಡ ತಮ್ಮ ಗುಣ, ಸ್ವಭಾವವನ್ನು ಬಿಡುವುದಿಲ್ಲ. ಇಂದು ನಮ್ಮ ದೇಶದ ಕಾರ್ಮಿಕ ಶಕ್ತಿ, ಶ್ರಮಿಕ ಸ್ನೇಹಿತರು ಇದ್ದಾರಲ್ಲ, ಅವರೂ ಕೂಡ ಇದಕ್ಕೆ ಜೀವಂತ ಉದಾಹರಣೆ. ಇತ್ತೀಚಿನ ದಿನಗಳಲ್ಲಿ ಇಡೀ ದೇಶಕ್ಕೆ ಪ್ರೇರಣೆ ನೀಡುವಂತಹ ನಮ್ಮ ವಲಸೆ ಕಾರ್ಮಿಕರ ಇಂತಹ ಕಥೆಗಳು ಬರುತ್ತಿವೆ. ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಹಿಂತಿರುಗಿ ಬಂದ ಕಾರ್ಮಿಕರು ಕಲ್ಯಾಣಿ ನದಿಯು ಪ್ರಾಕೃತಿಕ ಸ್ವರೂಪ ಮತ್ತೆ ಪಡೆದುಕೊಳ್ಳುವಂತೆ ಮಾಡಲು ಕೆಲಸ ಪ್ರಾರಂಭಿಸಿದ್ದಾರೆ. ನದಿಯ ಜೀರ್ಣೋದ್ಧಾರ ಆಗುವುದನ್ನು ನೋಡಿ ಅಕ್ಕಪಕ್ಕದ ರೈತರು, ನೆರೆಹೊರೆಯ ಜನರು ಕೂಡ ಉತ್ಸಾಹಿತರಾಗಿದ್ದಾರೆ. ಹಳ್ಳಿಗೆ ಬಂದ ಮೇಲೆ  isolation ಅಥವಾ quarantine centres ನಲ್ಲಿ ಇರುತ್ತಲೇ ನಮ್ಮ ಕಾರ್ಮಿಕ ಗೆಳೆಯರು ಯಾವ ರೀತಿ ತಮ್ಮ ಕೌಶಲ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರೆ ತಮ್ಮ ಸುತ್ತಮುತ್ತಲ ವಸ್ತುಸ್ಥಿತಿಯನ್ನು ಅದ್ಭುತವಾಗಿ ಬದಲಾಯಿಸುತ್ತಿದ್ದಾರೆ. ಆದರೆ ಸ್ನೇಹಿತರೆ, ಇಂತಹ ಯಶೋಗಾಥೆಗಳು ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಆಗುತ್ತಿವೆ ಅವು ನಮ್ಮ ಬಳಿಗೆ ತಲುಪುತ್ತಿಲ್ಲ. ನಮ್ಮ ದೇಶದ ಸ್ವಭಾವ ಹೇಗಿದೆ ಎಂದರೆ ನಿಮ್ಮ ಹಳ್ಳಿಯಲ್ಲಿ, ನಿಮ್ಮ ಸುತ್ತಮುತ್ತಲಿನಲ್ಲಿ ಇಂತಹ ಅನೇಕ ಘಟನೆಗಳು ಆಗಿರಬಹುದು. ಒಂದುವೇಳೆ ನಿಮ್ಮ ಗಮನಕ್ಕೆ ಇಂತಹ ವಿಷಯಗಳು ಬಂದರೆ ನೀವು ಇಂತಹ ಪ್ರೇರಣೆ ನೀಡುವ ವಿಷಯಗಳನ್ನು ನನಗೆ ಖಂಡಿತವಾಗಿಯೂ ಬರೆದು ತಿಳಿಸಿ. ಸಂಕಟದ ಈ ಸಮಯದಲ್ಲಿ ಇಂತಹ ಸಕಾರಾತ್ಮಕ ಘಟನೆಗಳು, ಕಥೆಗಳು ಬೇರೆಯವರಿಗೆ ಕೂಡ ಪ್ರೇರಣೆ ನೀಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾ ವೈರಸ್ ನಿಶ್ಚತವಾಗಿಯೂ ನಮ್ಮ ಬದುಕಿನ ಶೈಲಿಯನ್ನೇ ಬದಲಿಸಿದೆ. ಲಂಡನ್ ನಿಂದ ಮುದ್ರಣವಾಗುವ ಫೈನಾನ್ಸಿಯಲ್ ಟೈಮ್ಸ್ ನಲ್ಲಿ ಒಂದು ಆಸಕ್ತಿದಾಯಕ ಲೇಖನವನ್ನು ನಾನು ಓದಿದೆ. ಈ ಕೊರೋನಾ ಹಿನ್ನೆಲೆಯಲ್ಲಿ, ಶುಂಠಿ, ಅರಿಶಿಣ ಸೇರಿದಂತೆ ಇತರ ಮಸಾಲೆ ವಸ್ತುಗಳಿಗೆ ಏಷ್ಯಾ ಮಾತ್ರವಲ್ಲದೆ ಅಮೆರಿಕದಲ್ಲೂ ಬೇಡಿಕೆ ಹೆಚ್ಚಿದೆ ಎಂದು ಅದರಲ್ಲಿ ಬರೆಯಲಾಗಿತ್ತು.  ಈಗ, ಇಡೀ ಜಗತ್ತಿನ ಧ್ಯಾನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ವಸ್ತುಗಳೊಂದಿಗೆ ನಮ್ಮ ಸಂಬಂಧ ಸಾಕಷ್ಟಿದೆ. ಇದರ ಸಹಾಯದೊಂದಿಗೆ ನಾವೀಗ ಅತ್ಯಂತ ಸಹಜ ಮತ್ತು ಸರಳ ಭಾಷೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕುರಿತು ಸುಲಭವಾಗಿ ಅರ್ಥವಾಗುವಂತೆ ವಿಶ್ವದ ಜನರಿಗೆ ತಿಳಿಸಬೇಕಿದೆ. ಈ ಮೂಲಕ, ನಾವು ಆರೋಗ್ಯಕರ ವಿಶ್ವದ ನಿರ್ಮಾಣಕ್ಕೆ ನಮ್ಮ ಕೊಡುಗೆಯನ್ನೂ ನೀಡಲು ಸಾಧ್ಯವಾಗುವಂತೆ ಮಾಡಬೇಕಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾದಂಥ ಸಂಕಟ ಬರದಿದ್ದರೆ, ಜೀವನವೆಂದರೆ ಏನು, ಜೀವನ ಯಾತಕ್ಕಾಗಿ ಹಾಗೂ ಜೀವನ ಹೇಗೆ ಎನ್ನುವ ಕುರಿತು ನಾವು ಯೋಚಿಸುತ್ತಿರಲಿಲ್ಲ. ಬಹುಶಃ ನಮಗೆ ಈ ಕುರಿತು ನೆನಪೂ ಬರುತ್ತಿರಲಿಲ್ಲ. ಇದೇ ಕಾರಣದಿಂದ ಬಹಳಷ್ಟು ಜನರು ಇಂದು ಮಾನಸಿಕ ಉದ್ವೇಗದಿಂದ ಬದುಕುತ್ತಿದ್ದಾರೆ. ಇನ್ನೊಂದು ಕಡೆ, ಲಾಕ್‍ಡೌನ್ ಕಾರಣದಿಂದ ಖುಷಿಯ ಸಣ್ಣ ಸಣ್ಣ ಕ್ಷಣಗಳನ್ನು ಬದುಕಿನಲ್ಲಿ ಮರು ಪಡೆದಿರುವ ಕುರಿತಾಗಿಯೂ ಜನರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅನೇಕ ಜನರು ಪಾರಂಪರಿಕ ಒಳಾಂಗಣ ಆಟಗಳನ್ನು ಆಡಿದ ಬಗ್ಗೆ ಹಾಗೂ ಇಡೀ ಕುಟುಂಬದೊಂದಿಗೆ ಆನಂದವಾಗಿದ್ದ ಅನುಭವಗಳನ್ನು ಸಹ ತಿಳಿಸಿದ್ದಾರೆ.

ಸಹವಾಸಿಗಳೇ, ನಮ್ಮ ದೇಶದಲ್ಲಿ ಪಾರಂಪರಿಕ ಆಟಗಳ ಸಮೃದ್ಧ ಆನುವಂಶಿಕತೆಯೇ ಇದೆ. ಅವುಗಳಲ್ಲಿ ಒಂದು ಆಟದ ಹೆಸರನ್ನು ನೀವು ಕೇಳಿದ್ದಿರಬಹುದು-ಅದು ಪಗಡೆ. ಈ ಆಟವನ್ನು ತಮಿಳುನಾಡಿನಲ್ಲಿ “ಪಲ್ಲಾಂಗುಳಿ’ ಎಂದು, ಕರ್ನಾಟಕದಲ್ಲಿ “ಅಳಿಗುಳಿ ಮಣೆ’ ಎಂದು ಮತ್ತು ಆಂಧ್ರಪ್ರದೇಶದಲ್ಲಿ “ವಾಮನ ಗುಂಟಲೂ’ ಎನ್ನುವ ಹೆಸರಿನಲ್ಲಿ ಆಡಲಾಗುತ್ತದೆ. ಇದೊಂದು ರೀತಿಯ ತಂತ್ರಗಾರಿಕೆಯ ಆಟವಾಗಿದೆ. ಇದರಲ್ಲಿ ಮಣೆಯ ಉಪಯೋಗ ಮಾಡಲಾಗುತ್ತದೆ. ಅನೇಕ ಗುಳಿಗಳಿರುತ್ತವೆ, ಅವುಗಳಲ್ಲಿ ಬಳಸುವ ಗೋಲಿ ಅಥವಾ ಬೀಜಗಳನ್ನು ಆಟಗಾರರು ಹಿಡಿಯಬೇಕಿರುತ್ತದೆ. ಈ ಆಟವನ್ನು ದಕ್ಷಿಣ ಭಾರತದಿಂದ ದಕ್ಷಿಣ-ಪೂರ್ವ ಏಷ್ಯಾ ಹಾಗೂ ಇಡೀ ಜಗತ್ತಿನಲ್ಲಿ ಆಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಜತೆಗಾರರೇ, ಇಂದು ಪ್ರತಿಯೊಂದು ಮಗುವೂ ಹಾವು-ಏಣಿ ಆಟವನ್ನು ಆಡುವುದನ್ನು ತಿಳಿದಿದೆ. ಆದರೆ, ಇದು ಸಹ ಭಾರತೀಯ ಪಾರಂಪರಿಕ ರೂಪದ ಆಟವೇ ಆಗಿದ್ದು, ಇದಕ್ಕೆ ಮೋಕ್ಷ ಪಟ ಅಥವಾ ಪರಮಪದ ಎಂದು ಹೇಳಲಾಗುತ್ತದೆ. ನಮ್ಮಲ್ಲಿನ ಇನ್ನೊಂದು ಪಾರಂಪರಿಕ ಆಟವೆಂದರೆ, ಹರಳಿನ ಆಟ. ಇದನ್ನು ದೊಡ್ಡವರು ಚಿಕ್ಕವರೆಲ್ಲರೂ ಆಡುತ್ತಾರೆ. ಒಂದೇ ಗಾತ್ರದ ಐದು ಕಲ್ಲಿನ ಹರಳುಗಳನ್ನು ಆಯ್ದುಕೊಂಡು ಈ ಆಟವನ್ನು ಆಡಲು ಸಿದ್ಧರಾಗಬಹುದು. ಒಂದು ಕಲ್ಲನ್ನು ಮೇಲಕ್ಕೆ ಎಸೆದು ಅದು ಮೇಲೆ ಗಾಳಿಯಲ್ಲಿರುವ ಅಲ್ಪ ಅವಧಿಯಲ್ಲೇ ಕೆಳಗ್ಗೆ ಬಿದ್ದಿರುವ ಉಳಿದ ಕಲ್ಲುಗಳನ್ನು ಆರಿಸಬೇಕಿರುತ್ತದೆ. ಸಾಮಾನ್ಯವಾಗಿ, ನಮ್ಮ ನೆಲದ ಒಳಾಂಗಣ ಆಟಗಳನ್ನು ಆಡಲು ಯಾವುದೇ ದೊಡ್ಡ ಸಾಧನಗಳ ಅಗತ್ಯವಿಲ್ಲ. ಯಾರಾದರೂ ಒಂದು ಚಾಕ್ ಪೀಸ್ ಅಥವಾ ಕಲ್ಲನ್ನು ತಂದರೂ ಅದರಿಂದಲೇ ನೆಲದ ಮೇಲೆ ಒಂದು ಚಿತ್ರ ಬಿಡಿಸಿ ಆಡವಾಡಲು ಆರಂಭಿಸುತ್ತಾರೆ. ಯಾವ ಆಟದಲ್ಲಿ ದಾಳಗಳ ಅಗತ್ಯವಿದೆಯೋ ಅಲ್ಲೆಲ್ಲ ಕವಡೆಗಳು ಅಥವಾ ಹುಣಸೆಹಣ್ಣಿನ ಬೀಜಗಳಿಂದಲೇ ಕೆಲಸವಾಗುತ್ತದೆ.

ಸ್ನೇಹಿತರೇ, ಈ ಮಾತುಗಳನ್ನು ನಾನು ಆಡುತ್ತಿದ್ದಂತೆಯೇ ನಿಮ್ಮಲ್ಲಿ ಎಷ್ಟೋ ಜನರು ನಿಮ್ಮ ಬಾಲ್ಯಕ್ಕೆ ಹೋಗಿದ್ದಿರಬಹುದು, ನಿಮಗೆಷ್ಟು ಬಾಲ್ಯದ ದಿನಗಳ ನೆನಪು ಬರುತ್ತಿರಬಹುದು ಎಂಬುದು ನನಗೆ ಅರಿವಾಗುತ್ತಿದೆ.  ನಾನೇನು ಹೇಳುತ್ತೇನೆಂದರೆ, ಆ ದಿನಗಳನ್ನು ತಾವು ಮರೆತಿದ್ದಾದರೂ ಯಾಕೆ? ಅಂಥ ಆಟಗಳನ್ನೆಲ್ಲ ಯಾಕೆ ಮರೆತಿರಿ? ಮನೆಯ ಅಜ್ಜ-ಅಜ್ಜಿ, ಅಪ್ಪ-ಅಮ್ಮಂದಿರು ಹಾಗೂ ಇತರ ಹಿರಿಯರಲ್ಲಿ ನನ್ನ ಒತ್ತಾಯವೆಂದರೆ,  ಹೊಸ ಪೀಳಿಗೆಗೆ ಈ ಆಟಗಳ ಬಗ್ಗೆ ತಾವು ತಿಳಿಸಿಕೊಡದಿದ್ದರೆ ಇನ್ಯಾರು ತಿಳಿಸಿಯಾರು? ಹೀಗಾಗಿ, ಇವುಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡಿ. ಆನ್ ಲೈನ್ ಶಿಕ್ಷಣದ ಬಗ್ಗೆ ಚರ್ಚೆ ನಡೆದಿರುವ  ಸಂದರ್ಭದಲ್ಲಿ, ಸಮನ್ವಯ ಸಾಧಿಸಲು  ಅನುಕೂಲವಾಗುವಂತೆ, ಆನ್ ಲೈನ್ ಆಟಗಳಿಂದ ಮುಕ್ತಿ ಪಡೆದು ನಾವು ನಮ್ಮ ಪರಂಪರಾಗತ ಆಟಗಳನ್ನು ಆಡಲೇಬೇಕಾಗಿದೆ. ನಮ್ಮ ಯುವ ಪೀಳಿಗೆಗೆ, ನಮ್ಮ ಸ್ಟಾರ್ಟ್ ಅಪ್‍ಗಳಿಗೂ ಇಲ್ಲಿ ಒಂದು ಹೊಸ ಅವಕಾಶವಿದೆ. ಬಹಳ ಉತ್ತಮ ಅವಕಾಶ ಇದಾಗಿದೆ. ನಾವು ಭಾರತದ ಪಾರಂಪರಿಕ ಒಳಾಂಗಣ ಆಟಗಳನ್ನು ಹೊಸ ಹಾಗೂ ಆಕರ್ಷಕ ರೂಪದಲ್ಲಿ ಪ್ರಸ್ತುತಪಡಿಸೋಣ. ಇದಕ್ಕೆ ಸಂಬಂಧಿಸಿದ ಆಟಿಕೆಗಳನ್ನು ತಯಾರಿಸುವವರು, ಪೂರೈಕೆ ಮಾಡುವವರು, ಸ್ಟಾರ್ಟ್ ಅಪ್ ಆರಂಭಿಸುವವರು ಸಾಕಷ್ಟು ಜನಪ್ರಿಯವಾಗುತ್ತಾರೆ. ಮತ್ತು ನಾವು ಇದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ, ನಮ್ಮ ಭಾರತೀಯ ಆಟಗಳು ಸ್ಥಳೀಯವಾಗಿವೆ, ಲೋಕಲ್‍ಗೆ ವೋಕಲ್ ಬಗ್ಗೆ ನಾವು ಹಿಂದೆಯೇ ಪ್ರತಿಜ್ಞೆ ಮಾಡಿದ್ದೇವೆ. ನನ್ನ ಬಾಲ ಸ್ನೇಹಿತರಿಗೆ, ಪ್ರತಿ ಮನೆಯ ಮಕ್ಕಳಿಗೆ ಹಾಗೂ ಪುಟ್ಟ ಜತೆಗಾರರಿಗೆ ನಾನೊಂದು ಒತ್ತಾಯ ಮಾಡುತ್ತೇನೆ. ಮಕ್ಕಳೇ, ನೀವು ನನ್ನ ಮಾತನ್ನು ಒಪ್ಪಿಕೊಳ್ಳುತ್ತೀರಿ ಅಲ್ಲವೇ? ನೋಡಿ, ನಾನೇನು ಹೇಳುತ್ತೀನೋ ಅದನ್ನು ಖಂಡಿತವಾಗಿ ಮಾಡಿ. ಯಾವಾಗ ಸ್ವಲ್ಪ ಸಮಯ ಸಿಗುತ್ತದೆಯೋ ಆಗ ಪಾಲಕರಲ್ಲಿ ಕೇಳಿಕೊಂಡು ಮೊಬೈಲ್ ತೆಗೆದುಕೊಳ್ಳಿ. ತಮ್ಮ ಅಪ್ಪ-ಅಮ್ಮ ಹಾಗೂ ಅಜ್ಜ-ಅಜ್ಜಿ ಮತ್ತು ಮನೆಯಲ್ಲಿ ಯಾರೆಲ್ಲ ಹಿರಿಯರು ಇರುತ್ತಾರೋ ಅವರನ್ನೆಲ್ಲ ಮಾತನಾಡಿಸಿ, ಸಂದರ್ಶನ ಮಾಡಿ, ತಮ್ಮ ಮೊಬೈಲ್ ಫೆÇೀನ್ ನಲ್ಲಿ ರೆಕಾರ್ಡ್ ಮಾಡಿ. ನೀವು ಟಿವಿಯಲ್ಲಿ ನೋಡಿರುತ್ತೀರಿ. ಪತ್ರಕರ್ತ ಹೇಗೆ ಸಂದರ್ಶನ ಮಾಡುತ್ತಾರೋ ಹಾಗೆಯೇ ನೀವೂ ಸಂದರ್ಶನ ಮಾಡಿ. ನೀವು ಅವರಿಗೆ ಏನು ಪ್ರಶ್ನೆ ಕೇಳುತ್ತೀರಿ? ಈ ಬಗ್ಗೆ ನಾನು ಸಲಹೆ ಕೊಡುತ್ತೇನೆ.   ಬಾಲ್ಯದಲ್ಲಿ ಅವರ ಜೀವನಶೈಲಿ ಹೇಗಿತ್ತು? ಅವರು ಯಾವ ಯಾವ ಆಟಗಳನ್ನು ಆಡುತ್ತಿದ್ದರು? ಯಾವಾಗಲಾದರೂ ನಾಟಕ ನೋಡಲು ಹೋಗುತ್ತಿದ್ದರಾ? ಸಿನಿಮಾ ನೋಡಲು ಹೋಗುತ್ತಿದ್ದರಾ? ಯಾವಾಗಲಾದರೂ ರಜೆಯಲ್ಲಿ ಮಾವನ ಮನೆಗೆ ಹೋಗುತ್ತಿದ್ದರಾ? ಹೊಲಕ್ಕೆ ಹೋಗುತ್ತಿದ್ದರಾ? ಹಬ್ಬಗಳನ್ನು ಹೇಗೆ ಮಾಡುತ್ತಿದ್ದರು? ಎಂದೆಲ್ಲ ಅನೇಕ ಪ್ರಶ್ನೆಗಳನ್ನು ಅವರಿಗೆ ಕೇಳಬಹುದು. ಅವರಿಗೂ 40, 50, 60 ವರ್ಷಗಳ ಹಿಂದಕ್ಕೆ ಹೋಗಿ ತಮ್ಮ ಜೀವನವನ್ನು ನೆನಪಿಸಿಕೊಳ್ಳಲು ಬಹಳ ಆನಂದವಾಗುತ್ತದೆ. ಮತ್ತು ಈ ಮೂಲಕ ನಿಮಗೂ 40-50 ವರ್ಷಗಳ ಹಿಂದಿನ ಹಿಂದುಸ್ತಾನ ಹೇಗಿತ್ತು, ನೀವು ವಾಸಿಸುತ್ತಿರುವ ಪ್ರದೇಶ ಹೇಗಿತ್ತು? ಅಲ್ಲಿನ ಪರಿಸರ ಹೇಗಿತ್ತು? ಜನರ ಜೀವನ ವಿಧಾನಗಳು ಹೇಗಿದ್ದವು? ಎನ್ನುವ ಎಲ್ಲ ಮಾಹಿತಿಯನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನೀವೇ ನೋಡಿ, ನಿಮಗೆ ಇದು ಬಹಳ ಮೋಜೆನಿಸುತ್ತದೆ. ಅಲ್ಲದೆ, ಕುಟುಂಬದ ಈ ಅಮೂಲ್ಯ ನೆನಪಿನ ಖಜಾನೆಯನ್ನು ನೀವು ಒಂದೊಳ್ಳೆಯ ವಿಡಿಯೋ ಆಲ್ಬಮ್ ನಂತೆಯೂ ನಿರ್ಮಿಸಬಹುದು.  

ಸಂಗಾತಿಗಳೇ, ಆತ್ಮಕತೆ ಅಥವಾ ಜೀವನಚರಿತ್ರೆಗಳು ಇತಿಹಾಸದ ಸತ್ಯವನ್ನು ಬಹಳ ಸಮೀಪದಿಂದ ಅರಿಯಲು ಬಹಳ ಉಪಯೋಗವಾಗುತ್ತವೆ ಎನ್ನುವುದು ದಿಟ. ತಾವೂ ಸಹ ತಮ್ಮ ಹಿರಿಯರೊಂದಿಗೆ ಮಾತನಾಡಿದರೆ, ಅವರ ಕಾಲ, ಅವರ ಬಾಲ್ಯ, ಯೌವನದ ದಿನಗಳ ಕುರಿತು ಸುಲಭವಾಗಿ ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಹಿರಿಯರಿಗೂ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ತಾವು ತಮ್ಮ ಬಾಲ್ಯ, ಬದುಕಿನ ಬಗ್ಗೆ ತಮ್ಮ ಮನೆಯ ಮಕ್ಕಳಿಗೆ ಈ ರೀತಿ ತಿಳಿಸಬಹುದಾಗಿದೆ. 

ಸಹವಾಸಿಗಳೇ, ದೇಶದ ಬಹುತೇಕ ಭಾಗದಲ್ಲಿ ಈಗ ಮುಂಗಾರು ಆಗಮಿಸಿದೆ. ಹವಾಮಾನ ವಿಜ್ಞಾನಿಗಳೂ ಈ ಬಾರಿಯ ಮಳೆಯ ಕುರಿತು ಸಾಕಷ್ಟು ಉತ್ಸಾಹಿತರಾಗಿದ್ದಾರೆ, ಸಾಕಷ್ಟು ಭರವಸೆಯನ್ನೂ ಇರಿಸಲಾಗಿದೆ. ಉತ್ತಮ ಮಳೆಯಾದರೆ ನಮ್ಮ ರೈತರ ಬೆಳೆಯೂ ಸಹ ಉತ್ತಮವಾಗುತ್ತದೆ, ವಾತಾವರಣವೂ ಹಸಿರಿನಿಂದ ತುಂಬುತ್ತದೆ. ಮಳೆಯ ಕಾಲದಲ್ಲಿ ಪ್ರಕೃತಿ ಕೂಡ ತನ್ನನ್ನು ತಾನು ನವೀಕರಿಸಿಕೊಳ್ಳುತ್ತದೆ. ಮಾನವ ಪ್ರಾಕೃತಿಕ ಸಂಪನ್ಮೂಲಗಳನ್ನು ಎಷ್ಟೆಲ್ಲ ದುರ್ಬಳಕೆ ಮಾಡುತ್ತಾನೆ, ಪ್ರಕೃತಿ ಒಂದು ರೀತಿಯಲ್ಲಿ ಮಳೆಗಾಲದಲ್ಲಿ ಈ ನಷ್ಟವನ್ನು ಭರಿಸಿಕೊಳ್ಳುತ್ತದೆ. ಮರುಪೂರಣ ಮಾಡಿಕೊಳ್ಳುತ್ತದೆ. ಆದರೆ, ನಾವೂ ಭೂ ಮಾತೆಗೆ ಸಹಕಾರ ನೀಡಿದರೆ ಮಾತ್ರ ಈ ಮರುಪೂರಣ ಕಾರ್ಯ ನಡೆಯಲು ಸಾಧ್ಯ. ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. ನಮ್ಮಿಂದ ನಡೆಯುವ ಕಿರು ಪ್ರಯತ್ನವೂ ಸಹ ಪ್ರಕೃತಿಗೆ, ಪರಿಸರಕ್ಕೆ ಬಹಳ ಸಹಾಯ ಮಾಡುತ್ತದೆ. ನಮ್ಮ ಅನೇಕ ದೇಶ ಬಾಂಧವರು ಈ ದಿಸೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದ ಮಂಡ್ಯದಲ್ಲಿ 80-85 ವಯೋಮಾನದ ಒಬ್ಬ ಹಿರಿಯರಿದ್ದಾರೆ. ಅವರು ಕಾಮೇಗೌಡ, ಅವರೊಬ್ಬ ಸಾಮಾನ್ಯ ರೈತ. ಆದರೆ ಅವರ ವ್ಯಕ್ತಿತ್ವ ಅಸಾಧಾರಣ. ಅವರು ಮಾಡಿರುವ ಕೆಲಸವನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. 80-85 ವರ್ಷದ ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಆದರೆ, ಜತೆಜತೆಗೇ ತಮ್ಮ ಜಮೀನಿನಲ್ಲಿ ಹೊಸ ಕೆರೆಯೊಂದನ್ನು ನಿರ್ಮಿಸುವ ಕೈಂಕರ್ಯವನ್ನೂ ಮಾಡುತ್ತಾರೆ. ಅವರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಬಯಸುತ್ತಾರೆ. ಜಲ ಸಂರಕ್ಷಣೆಗಾಗಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸುವ ಕಾಯಕದಲ್ಲಿ ಅವರು ತಲ್ಲೀನರಾಗಿರುತ್ತಾರೆ. 80-85 ವಯೋಮಾನದ ಕಾಮೇಗೌಡರು ಇಲ್ಲಿಯವರೆಗೆ ಸುಮಾರು 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಇವೆಲ್ಲವನ್ನೂ ಅವರು ತಮ್ಮ ಪ್ರಯತ್ನದಿಂದ, ಪರಿಶ್ರಮದಿಂದಲೇ ನಿರ್ಮಿಸಿದ್ದಾರೆ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು. ಇವರ ಕೆರೆಗಳಿಂದ ಇಂದು ಆ ಇಡೀ ಪ್ರದೇಶಕ್ಕೆ ಹೊಸ ಜೀವನ ಸಿಕ್ಕಿದೆ. 

ಸ್ನೇಹಿತರೇ, ಗುಜರಾತಿನ ವಡೋದರದಲ್ಲೂ ಒಂದು ಉದಾಹರಣೆ ಬಹಳ ಪ್ರೇರಣಾದಾಯಕವಾಗಿದೆ. ಇಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನ ಸೇರಿ ಒಂದು ಹೃದಯಂಗಮ ಅಭಿಯಾನವನ್ನು ನಡೆಸಿದರು. ಈ ಅಭಿಯಾನದ ಕಾರಣದಿಂದ ಇಂದು ವಡೋದರಲ್ಲಿ ಒಂದು ಸಾವಿರ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಾಗಿದೆ. ಈ ಮೂಲಕ, ಪ್ರತಿ ವರ್ಷ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಸರಿಸುಮಾರು 10 ಕೋಟಿ ಲೀಟರ್ ನೀರನ್ನು ರಕ್ಷಿಸಿ ಸಂಗ್ರಹಿಸಲಾಗುತ್ತಿದೆ.

ಸ್ನೇಹಿತರೇ, ಈ ಮಳೆಗಾಲದಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಗೆಂದು ನಾವೂ ಸಹ ಇದೇ ರೀತಿಯಲ್ಲಿ ಚಿಂತನೆ ಮಾಡುವ, ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಸಾಗಬೇಕಿದೆ. ಈಗ ಬಹಳಷ್ಟು ಕಡೆಗಳಲ್ಲಿ ಗಣೇಶ ಚತುರ್ಥಿಯ ಸಿದ್ಧತೆಗಳು ನಡೆದಿರಬೇಕು. ಈ ಬಾರಿ, ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಬಗ್ಗೆ ನಾವು ಪ್ರಯತ್ನಿಸಬಹುದಲ್ಲವೇ? ಹಾಗೂ ಅವುಗಳನ್ನು ಪೂಜಿಸಬಹುದಲ್ಲವೇ? ಹೀಗೆ ಮಾಡುವ ಮೂಲಕ ನಾವು ನದಿ, ಕೆರೆಗಳಲ್ಲಿ ವಿಸರ್ಜಿಸಿದ ಬಳಿಕ ನೀರಿಗೆ ಹಾಗೂ ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಸಂಕಟ ತರುವ ಗಣೇಶ ಮೂರ್ತಿಗಳನ್ನು ಪೂಜೆ ಮಾಡುವುದರಿಂದ  ದೂರವಿರಬಹುದು. ತಾವು ಇದನ್ನು ಖಂಡಿತವಾಗಿ ನೆರವೇರಿಸುತ್ತೀರಿ ಎನ್ನುವ ವಿಶ್ವಾಸ ನನಗಿದೆ. ಈ ಎಲ್ಲ ಮಾತುಗಳ ಮಧ್ಯೆ, ಮಳೆಗಾಲದಲ್ಲಿ ಅನೇಕ ರೋಗಗಳು ಬರುತ್ತವೆ ಎನ್ನುವುದನ್ನೂ ನಾವು ನೆನಪಿಡಬೇಕಿದೆ. ಕೊರೋನಾ ಕಾಲದಲ್ಲಿ ಇವುಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಆಯುರ್ವೇದದ ಔಷಧಗಳು, ಕಷಾಯಗಳು, ಬಿಸಿ ನೀರು…ಇವುಗಳನ್ನು ಬಳಕೆ ಮಾಡುತ್ತ ಆರೋಗ್ಯದಿಂದಿರಿ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಜೂನ್ 28ರಂದು ಭಾರತ ದೇಶವು ನಮ್ಮ ಹಿಂದಿನ ಪ್ರಧಾನಮಂತ್ರಿಯೊಬ್ಬರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರು ಅತ್ಯಂತ ಸೂಕ್ಷ್ಮ ಸಮಯದಲ್ಲಿ ದೇಶವನ್ನು ಮುನ್ನಡೆಸಿದ್ದಾರೆ. ಅವರೇ ಹಿಂದಿನ ಪ್ರಧಾನಿ                ಪಿ.ವಿ. ನರಸಿಂಹರಾವ್. ಅವರ ಜನ್ಮಶತಾಬ್ದಿ ವರ್ಷ ಇಂದಿನಿಂದ ಆರಂಭವಾಗುತ್ತಿದೆ.   ಪಿ.ವಿ. ನರಸಿಂಹರಾವ್ ಅವರ ಬಗ್ಗೆ ಮಾತನಾಡುವಾಗ, ಸ್ವಾಭಾವಿಕ ರೂಪದಲ್ಲಿ ಹಾಗೂ ರಾಜಕೀಯ ನೇತಾರನ ರೂಪದಲ್ಲಿ ಅವರ ಚಿತ್ರ ಕಣ್ಮುಂದೆ ಬರುತ್ತದೆ. ಅವರು ಅನೇಕ ಭಾμÉಗಳನ್ನು ಅರಿತಿದ್ದರು ಎನ್ನುವುದೂ ಸತ್ಯ. ಭಾರತೀಯ ಹಾಗೆಯೇ ವಿದೇಶಿ ಭಾಷೆಗಳಲ್ಲಿಯೂ ಅವರು ಮಾತನಾಡುತ್ತಿದ್ದರು.  ಒಂದು ರೀತಿಯಲ್ಲಿ ಅವರು ಭಾರತೀಯ ಮೌಲ್ಯಗಳಿಂದ ರೂಪುಗೊಂಡಿದ್ದರೆ, ಇನ್ನೊಂದು ಕಡೆ ಪಾಶ್ಚಾತ್ಯ ಸಾಹಿತ್ಯದ ಹಾಗೂ ವಿಜ್ಞಾನದ ಬಗ್ಗೆಯೂ ಜ್ಞಾನ ಹೊಂದಿದ್ದರು. ಅವರು ಭಾರತದ ಅತ್ಯಂತ ಅನುಭವಿ ನೇತಾರರಲ್ಲಿ ಒಬ್ಬರಾಗಿದ್ದರು. ಅವರ ಜೀವನದ ಮತ್ತೊಂದು ಅಂಶವೂ ಉಲ್ಲೇಖನೀಯವಾಗಿದೆ, ಅದರ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಸ್ನೇಹಿತರೇ, ನರಸಿಂಹರಾವ್ ಅವರು ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ನಿಜಾಮ ವಂದೇ ಮಾತರಂ ಗೀತೆಗೆ ಅನುಮತಿ ನೀಡಲು ನಿರಾಕರಿಸಿದ್ದ ಸಮಯದಲ್ಲಿ ಆತನ ವಿರುದ್ಧ ನಡೆದಿದ್ದ ಆಂದೋಲನದಲ್ಲಿ ನರಸಿಂಹರಾವ್ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಸಣ್ಣ ವಯಸ್ಸಿನಿಂದಲೇ ಶ್ರೀಮಾನ್ ನರಸಿಂಹ ರಾವ್ ಅವರು ಅನ್ಯಾಯದ ವಿರುದ್ಧ ದನಿ ಎತ್ತುವಲ್ಲಿ ಮುಂಚೂಣಿಯಲ್ಲಿದ್ದರು. ತಮ್ಮ ದನಿಯನ್ನು ಎತ್ತುವಲ್ಲಿ  ಅವರು ಯಾವುದೇ ಪ್ರಯತ್ನವನ್ನೂ ಬಾಕಿ ಉಳಿಸುತ್ತಿರಲಿಲ್ಲ. ನರಸಿಂಹ ರಾವ್ ಅವರು ಇತಿಹಾಸವನ್ನು ಸಹ ಬಹಳ ಚೆನ್ನಾಗಿ ಅರಿತಿದ್ದರು. ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಮೇಲೆ ಬಂದಿದ್ದು, ಶಿಕ್ಷಣದ ಮೇಲೆ ಅವರ ಹಿಡಿತ, ಕಲಿಯುವ  ಪ್ರವೃತ್ತಿ ಹಾಗೂ ಇವೆಲ್ಲದರ ಜತೆಗೆ, ಅವರ ನೇತೃತ್ವ ಸಾಮಥ್ರ್ಯ ಎಲ್ಲವೂ ಸ್ಮರಣೀಯ. ನರಸಿಂಹ ರಾವ್ ಅವರ ಜನ್ಮಶತಾಬ್ದಿ ವರ್ಷದಲ್ಲಿ ತಾವೆಲ್ಲ ಅವರ ಜೀವನ ಹಾಗೂ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ನಾನು ಆಗ್ರಹಿಸುತ್ತೇನೆ. ನಾನು ಮತ್ತೊಮ್ಮೆ, ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿ “ಮನ್ ಕಿ ಬಾತ್’ ನಲ್ಲಿ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಯಿತು. ಮುಂದಿನ ಬಾರಿ ನಾವು ಇನ್ನಷ್ಟು ಹೊಸ ವಿಷಯಗಳ ಬಗ್ಗೆ ಮಾತಾಡೋಣ. ತಾವು, ತಮ್ಮ ಸಂದೇಶ ಹಾಗೂ ಅನ್ವೇಷಣಾತ್ಮಕ ಹೊಸ ವಿಚಾರಧಾರೆಗಳನ್ನು ನನಗೆ ಖಂಡಿತವಾಗಿ ಕಳಿಸಿ. ನಾವೆಲ್ಲರೂ ಸೇರಿ ಮುಂದೆ ಸಾಗೋಣ. ಮುಂದಿನ ದಿನಗಳು ಇನ್ನಷ್ಟು ಸಕಾರಾತ್ಮಕವಾಗುತ್ತವೆ.  ನಾನು ಮೊದಲೇ ಹೇಳಿದಂತೆ, ಇದೇ ವರ್ಷವನ್ನು ಅಂದರೆ, 2020ರಲ್ಲಿಯೇ ನಾವು ಸಾಧನಗೈಯ್ಯೋಣ, ನಾವು ಉತ್ತಮವಾಗಿಸೋಣ, ನಾವೂ ಮುಂದೆ ಸಾಗೋಣ, ದೇಶವೂ ಹೊಸ ಔನ್ನತ್ಯವನ್ನು ಸಾಧಿಸಲಿ. ಭಾರತಕ್ಕೆ ಈ ದಶಕ ಹೊಸ ದಿಕ್ಕನ್ನು ನೀಡುವ ವರ್ಷವಾಗಿ 2020 ಸಾಬೀತಾಗುತ್ತದೆ ಎನ್ನುವ ಭರವಸೆ ನನಗಿದೆ. ಇದೇ ಭರವಸೆಯೊಂದಿಗೆ ತಾವೂ ಮುಂದೆ ಸಾಗಿ ಆರೋಗ್ಯವಂತರಾಗಿರಿ, ಧನಾತ್ಮಕ ದೃಷ್ಟಿಕೋನದಿಂದಿರಿ. ಈ ಶುಭಕಾಮನೆಗಳೊಂದಿಗೆ ತಮಗೆಲ್ಲರಿಗೂ ಅಪಾರ ಧನ್ಯವಾದಗಳು.

ನಮಸ್ಕಾರ.   

***



(Release ID: 1635084) Visitor Counter : 263