ಪ್ರಧಾನ ಮಂತ್ರಿಯವರ ಕಛೇರಿ

ಆತ್ಮಾವಲಂಬಿಯಾಗಿ ಮತ್ತು ಸ್ವಾವಲಂಬಿಯಾಗಿ ಎನ್ನುವುದು ಕೊರೊನಾ ಸಾಂಕ್ರಾಮಿಕ ಕಲಿಸಿದ ಅತಿದೊಡ್ಡ ಪಾಠ: ಪ್ರಧಾನಿ

Posted On: 24 APR 2020 2:57PM by PIB Bengaluru

ಆತ್ಮಾವಲಂಬಿಯಾಗಿ ಮತ್ತು ಸ್ವಾವಲಂಬಿಯಾಗಿ ಎನ್ನುವುದು ಕೊರೊನಾ ಸಾಂಕ್ರಾಮಿಕ ಕಲಿಸಿದ ಅತಿದೊಡ್ಡ ಪಾಠ: ಪ್ರಧಾನಿ

ಕೋವಿಡ್ -19 ವಿರುದ್ಧದ ಹೋರಾಟದಲ್ಲ 'ದೋ ಗಜ್ ದೂರಿ' ಎಂಬುದು ಗ್ರಾಮೀಣ ಭಾರತದ ಮಂತ್ರವಾಗಿದೆ ಎಂದು ಪ್ರಧಾನಿ ಹೇಳಿಕೆ

-ಗ್ರಾಮ್ ಸ್ವರಾಜ್ಯ ಆ್ಯಪ್ ಮತ್ತು ಸ್ವಾಮಿತ್ವ ಯೋಜನೆಗೆ ಪ್ರಧಾನಿ ಚಾಲನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪಂಚಾಯ್ತಿ ರಾಜ್ ದಿನ 2020 ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತದ ಸರಪಂಚರೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಏಕೀಕೃತ ಗ್ರಾಮ ಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಹಾಗೂ ಸ್ವಾಮಿತ್ವ ಯೋಜನೆಯನ್ನು ಉದ್ಘಾಟಿಸಿದರು.

ಗ್ರಾಮ ಸ್ವರಾಜ್ ಆ್ಯಪ್, ಗ್ರಾಮಪಂಚಾಯ್ತಿಗಳ ಅಭಿವೃದ್ಧಿ ಯೋಜನೆ ತಯಾರಿಸಲು ಮತ್ತು ಜಾರಿಗೊಳಿಸಲು ನೆರವಾಗಲಿದೆ. ಪೋರ್ಟಲ್ ಸಕಾಲಿಕ ನಿಗಾ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುತ್ತದೆ. ಪೋರ್ಟಲ್ ಗ್ರಾಮ ಪಂಚಾಯ್ತಿಯ ಮಟ್ಟದ ಡಿಜಿಟಲೀಕರಣದಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಆರು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ಸ್ವಾಮಿತ್ವ ಯೋಜನೆ, ಡ್ರೋನ್ಗಳು ಮತ್ತು ಇತ್ತೀಚಿನ ಸಮೀಕ್ಷಾ ವಿಧಾನಗಳನ್ನು ಬಳಸಿಕೊಂಡು ಗ್ರಾಮೀಣ ಜನವಸತಿ ಭೂಮಿಯ ನಕ್ಷೆ ತಯಾರಿಸಲು ನೆರವಾಗುತ್ತದೆ. ಯೋಜನೆ ಯೋಜನೆ, ಆದಾಯ ಸಂಗ್ರಹಣೆಯನ್ನು ಮುಖ್ಯವಾಹಿನಿಗೆ ತರುವುದನ್ನು ಖಚಿತಪಡಿಸಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಯ ಮೇಲಿನ ಹಕ್ಕಿಗೆ ಸ್ಪಷ್ಟತೆ ಒದಗಿಸುತ್ತದೆ. ಇದು ಮಾಲೀಕರುಗಳಿಗೆ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಯೋಜನೆಯ ಮೂಲಕ ಹಂಚಿಕೆ ಮಾಡಲಾಗುವ ಒಡೆತನದ ಪತ್ರಗಳ ಮೂಲಕವೂ ಇತ್ಯರ್ಥಪಡಿಸಲಾಗುತ್ತದೆ.

ದೇಶಾದ್ಯಂತದ ಸರಪಂಚರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೊರೊನಾ ಸಾಂಕ್ರಾಮಿಕವು ಜನರ ಕಾರ್ಯ ವಿಧಾನವನ್ನೇ ಬದಲಾಯಿಸಿದ್ದು, ಉತ್ತಮ ಪಾಠವನ್ನೂ ಕಲಿಸಿದೆ ಎಂದರು. ಪ್ರತಿಯೊಬ್ಬರೂ ಸದಾ ಸ್ವವಲಂಬಿಗಳಾಗಿರಬೇಕು ಎಂಬುದನ್ನು ಇದು ಕಲಿಸಿದೆ ಎಂದರು.

ಮಹಾಮಾರಿ ನಮ್ಮ ಮುಂದೆ ಹೊಸ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಇಟ್ಟಿದೆ, ಇದನ್ನು ನಾವು ಊಹಿಸಿಕೊಂಡಿರಲೂ ಇಲ್ಲ, ಈಗ ಇದು ನಾವು ಆತ್ವಾವಲಂಬಿಗಳಾಗಬೇಕು ಮತ್ತು ಸ್ವಾವಲಂಬಿಗಳಾಗಬೇಕು ಎಂಬ ಬಲವಾದ ಸಂದೇಶದ ಉತ್ತಮ ಪಾಠವನ್ನು ನಮಗೆ ಕಲಿಸಿದೆ ಎಂದರು. ನಾವು ಸಮಸ್ಯೆಯ ಪರಿಹಾರಕ್ಕಾಗಿ ದೇಶದ ಹೊರಗೆ ನೋಡಬಾರದು ಎಂಬುದನ್ನೂ ಕಲಿಸಿದೆ ಎಂದರು. ಇದು ನಾವು ಕಲಿತ ಅತಿ ದೊಡ್ಡ ಪಾಠ ಎಂದರು.”

ಗ್ರಾಮಪಂಚಾಯ್ತಿಗಳನ್ನು ಮತ್ತಷ್ಟು ಬಲಪಡಿಸಲು ಗ್ರಾಮಗಳಿಗೆ ಸ್ವಾವಲಂಬನೆ ನೀಡಲು ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಸುಮಾರು 1.25 ಲಕ್ಷ ಪಂಚಾಯ್ತಿಗಳನ್ನು ಬ್ರಾಡ್ ಬ್ಯಾಂಡ್ ಮೂಲಕ ಸಂಪರ್ಕಿಸಲಾಗಿದೆ, ಇದು ಹಿಂದೆ ಕೇವಲ 100 ಮಾತ್ರ ಇತ್ತು ಎಂದರು. ಅದೇ ರೀತಿ, ಸಮಾನ ಸೇವಾ ಕೇಂದ್ರಗಳ ಸಂಖ್ಯೆಯೂ 3 ಲಕ್ಷ ದಾಟಿದೆ”, ಎಂದು ಹೇಳಿದರು.

ಭಾರತದಲ್ಲಿಯೇ ಮೊಬೈಲ್ ಫೋನ್ ತಯಾರಿಕೆ ಆರಂಭಿಸಿದ ತರುವಾಯ, ಸ್ಮಾರ್ಟ್ ಫೋನ್ ಗಳ ದರದಲ್ಲಿ ಇಳಿಕೆಯಾಗಿದೆ ಮತ್ತು ಕಡಿಮೆ ದರದ ಸ್ಮಾರ್ಟ್ ಫೋನ್ ಗಳು ಪ್ರತಿಯೊಂದು ಗ್ರಾಮವನ್ನೂ ತಲುಪಿದೆ ಹಾಗೂ ಗ್ರಾಮೀಣ ಮಟ್ಟದಲ್ಲೂ ಡಿಜಿಟಲ್ ಮೂಲಸೌಕರ್ಯ ಬಲವರ್ಧನೆ ಮಾಡಿದೆ ಎಂದರು.

ಪಂಚಾಯತಿಗಳ ಪ್ರಗತಿ ದೇಶ ಮತ್ತು ಪ್ರಜಾಪ್ರಭುತ್ವದ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆಎಂದೂ ಪ್ರಧಾನಮಂತ್ರಿ ತಿಳಿಸಿದರು.

ಗ್ರಾಮಪಂಚಾಯ್ತಿಗಳ ಪ್ರತಿನಿಧಿಗಳು ಮತ್ತು ಪ್ರಧಾನಮಂತ್ರಿಯವರೊಂದಿಗೆ ನೇರ ಮಾತುಕತೆಗೆ ಇಂದು ಸಂದರ್ಭ ಅವಕಾಶ ಮಾಡಿಕೊಟ್ಟಿತ್ತು.

ಸರಪಂಚರೊಂದಿಗೆ ನಡೆದ ಸಂವಾದದ ವೇಳೆ ಪ್ರಧಾನಮಂತ್ರಿಯವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ವಿವರಿಸಲುದೋ ಗಜ್ ದೂರಿಎಂಬ ಮಂತ್ರ ನೀಡಿರುವುದಕ್ಕಾಗಿ ಅಭಿನಂದಿಸಿದರು.

"ದೋ ಗಜ್ ದೇಹ್ ಕಿ ದೂರಿ" ಎಂಬ ಗ್ರಾಮೀಣ ಭಾರತದ ಘೋಷಣೆ ಜನರ ಬುದ್ಧಿವಂತಿಕೆಯನ್ನು ತೋರುತ್ತದೆ ಎಂದರು. ಘೋಷಣೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಇದು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದರು.

ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಭಾರತವು ಸವಾಲನ್ನು ಸಕ್ರಿಯವಾಗಿ ತೆಗೆದುಕೊಂಡಿದೆ ಮತ್ತು ಹೊಸ ಚೈತನ್ಯ ಮತ್ತು ಹೊಸ ಮಾರ್ಗಗಳೊಂದಿಗೆ ಮುಂದುವರಿಯುವ ಸಂಕಲ್ಪವನ್ನು ತೋರಿಸಿದೆ ಎಂದು ಪ್ರಧಾನಿ ಹೇಳಿದರು.

ಗ್ರಾಮಗಳ ಸಂಘಟಿತ ಶಕ್ತಿ ದೇಶಕ್ಕೆ ಮುಂದೆ ಸಾಗಲು ಶಕ್ತಿ ನೀಡಿದೆಎಂದರು.

ಪ್ರಯತ್ನಗಳ ನಡುವೆಯೂ, ಯಾವುದೇ ಒಬ್ಬ ವ್ಯಕ್ತಿಯ ನಿರ್ಲಕ್ಷ್ಯ ಇಡೀ ಗ್ರಾಮಕ್ಕೇ ಅಪಾಯ ತರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ವಿನಾಯಿತಿಗೆ ಅವಕಾಶ ಇರಬಾರದು ಎಂದರು.

ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲು ಮನವಿ ಮಾಡಿದ ಪ್ರಧಾನಮಂತ್ರಿಯವರು, ಗ್ರಾಮದ ಹಿರಿಯರು, ದಿವ್ಯಾಂಗದವರು ಮತ್ತು ಇತರ ಅಗತ್ಯ ಇರುವವರ ಬಗ್ಗೆ ಕಾಳಜಿ ವಹಿಸಲು ಮತ್ತು ದಿಗ್ಬಂಧನ, ಸಾಮಾಜಿಕ ಅಂತರ ಮತ್ತು ಮಾಸ್ಕ್ ನಿಂದ ಮುಖ ಮುಚ್ಚಿಕೊಳ್ಳುವುದನ್ನು ಖಾತ್ರಿ ಪಡಿಸಲು ತಿಳಿಸಿದರು.

ಕೋವಿಡ್ -19 ವಿವಿಧ ಆಯಾಮಗಳ ಕುರಿತಂತೆ ಗ್ರಾಮದ ಎಲ್ಲ ಕುಟುಂಬಗಳಿಗೂ ಮಾಹಿತಿ ಒದಗಿಸಲು ಸರಪಂಚರಿಗೆ ಆಗ್ರಹಿಸಿದರು.

ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮನವಿ ಮಾಡಿದ ಅವರು, ಗ್ರಾಮದ ಪ್ರತಿಯೊಬ್ಬರೂ ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪಂಚಾಯ್ತಿಯ ಪ್ರತಿನಿಧಿಗಳಿಗೆ ತಿಳಿಸಿದರು.

ಗ್ರಾಮಗಳ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಖಾತ್ರಿಪಡಿಸಲು ಗಂಭೀರ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಆಯುಷ್ಮಾನ್ ಭಾರತ ಯೋಜನೆ ಗ್ರಾಮೀಣ ಬಡಜನರಿಗೆ ದೊಡ್ಡ ಪರಿಹಾರವಾಗಿ ಹೊರಹೊಮ್ಮಿದ್ದು, ಯೋಜನೆಯಡಿ 1 ಕೋಟಿಗೂ ಹೆಚ್ಚು ಹೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.

ಗ್ರಾಮೀಣ ಉತ್ಪನ್ನಗಳಿಗೆ ಉತ್ತಮ ದರ ದೊರಕಿಸಲು -ನಾಮ್, ಜಿಇಎಂ ಪೋರ್ಟಲ್ ನಂಥ ಡಿಜಿಟಲ್ ವೇದಿಕೆಗಳ ಬಳಕೆಗೆ ಅವರು ಆಗ್ರಹಿಸಿದರು.

ಜಮ್ಮು ಕಾಶ್ಮೀರ, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಅಸ್ಸಾಂನ ಪರಪಂಚರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.

ಗ್ರಾಮ ಸ್ವರಾಜ್ಯಕ್ಕೆ ಮಹಾತ್ಮಾ ಗಾಂಧಿ ಅವರ ಸ್ವರಾಜ್ ಕಲ್ಪನೆ ಆಧಾರ ಎಂದು ಅವರು ಸ್ಮರಿಸಿದರು. ಶಾಸ್ತ್ರಗಳನ್ನು ಉಲ್ಲೇಖಿಸಿದ ಅವರು, ಎಲ್ಲ ಶಕ್ತಿಯ ಮೂಲವೂ ಏಕತೆ ಆಗಿದೆ ಎಂದರು.

ಪಂಚಾಯತ್ ರಾಜ್ ದಿನದ ಸಂದರ್ಭದಲ್ಲಿ ಮತ್ತು ಕೊರೊನಾ ನಿಗ್ರಹಕ್ಕಾಗಿ ಸಂಘಟಿತರ ಪ್ರಯತ್ನ, ಏಕತೆ ಮತ್ತು ಸಂಕಲ್ಪದಿಂದ ಶ್ರಮಿಸುತ್ತಿರುವ ಸರಪಂಚರಿಗೆ ಪ್ರಧಾನಮಂತ್ರಿ ಶುಭ ಕೋರಿದರು.

***



(Release ID: 1617987) Visitor Counter : 323