ಪ್ರಧಾನ ಮಂತ್ರಿಯವರ ಕಛೇರಿ

ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಪ್ರಧಾನಿ ಚರ್ಚೆ

Posted On: 08 APR 2020 3:33PM by PIB Bengaluru

ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಪ್ರಧಾನಿ ಚರ್ಚೆ

ಪ್ರತಿಯೊಂದು ಜೀವವನ್ನೂ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ: ಪ್ರಧಾನಿ

ಇಂದಿನ ಚರ್ಚೆಯು ರಚನಾತ್ಮಕ ಮತ್ತು ಸಕಾರಾತ್ಮಕ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ, ಭಾರತದ ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಪುನರುಚ್ಚರಿಸುತ್ತದೆ: ಪ್ರಧಾನಿ

ದೇಶದ ಪರಿಸ್ಥಿತಿಸಾಮಾಜಿಕ ತುರ್ತುಸ್ಥಿತಿಯಂತಿದೆ; ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಮತ್ತು ನಾವು ಜಾಗರೂಕರಾಗಿ ಮುಂದುವರಿಯಬೇಕಿದೆ: ಪ್ರಧಾನಿ

ರಾಜ್ಯಗಳು, ಜಿಲ್ಲಾಡಳಿತಗಳು ಮತ್ತು ತಜ್ಞರು ವೈರಸ್ಹರಡುವಿಕೆಯನ್ನು ತಡೆಯಲು ಲಾಕ್ಡೌನ್ ವಿಸ್ತರಣೆಗೆ ಸೂಚಿಸಿದ್ದಾರೆ: ಪ್ರಧಾನಿ

ನಾಯಕಕರಿಂದ ಫೀಡ್ ಬ್ಯಾಕ್, ನೀತಿ ಕ್ರಮಗಳ ಸಲಹೆ, ಲಾಕ್ಡೌನ್ ಮತ್ತು ಮುಂದಿನ ಹಾದಿಯ ಬಗ್ಗೆ  ಚರ್ಚೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಇಡೀ ವಿಶ್ವವೇ ಇಂದು COVID-19 ಗಂಭೀರ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಪ್ರಸ್ತುತ ಪರಿಸ್ಥಿತಿ ಮಾನವಕುಲದ ಇತಿಹಾಸದಲ್ಲಿ ಒಂದು ಯುಗ ಬದಲಾವಣೆಯ ಘಟನೆಯಾಗಿದ್ದು, ಇದರ ಪರಿಣಾಮವನ್ನು ಎದುರಿಸಲು ನಾವು ಸಿದ್ಧರಿಬೇಕು ಎಂದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿರುವುದನ್ನು ಅವರು ಶ್ಲಾಘಿಸಿದರು. ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ರಾಜಕೀಯದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಮೂಲಕ ದೇಶವು ರಚನಾತ್ಮಕ ಮತ್ತು ಸಕಾರಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಪ್ರಯತ್ನದಲ್ಲಿ ಪ್ರತಿಯೊಬ್ಬ ನಾಗರಿಕನು ಸಾಮಾಜಿಕ ಅಂತರ, ಜನತಾ ಕರ್ಫ್ಯೂ ಅಥವಾ ಲಾಕ್ಡೌನ್ ಹೀಗೆ ಯಾವುದೇ ಇರಲಿ ಅದರ ಅನುಸರಣೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ಬದ್ಧತೆಯ ಮೂಲಕ ನೀಡುತ್ತಿರುವ ಕೊಡುಗೆಯನ್ನು ಅವರು ಶ್ಲಾಘಿಸಿದರು.  

ಸಂಪನ್ಮೂಲಗಳ ಮಿತಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಪರಿಣಾಮದ ಬಗ್ಗೆ ಪ್ರಧಾನಿ ಒತ್ತಿಹೇಳಿದರು. ಆದರೂ, ವೈರಸ್ ಹರಡುವ ವೇಗವನ್ನು ನಿಯಂತ್ರಿಸಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಮತ್ತು ನಾವು ಯಾವಾಗಲೂ ಜಾಗರೂಕತೆಯಿಂದ ಇರಬೇಕು ಎಂದು ಅವರು ಎಚ್ಚರಿಸಿದರು.

ದೇಶದ ಪರಿಸ್ಥಿತಿಸಾಮಾಜಿಕ ತುರ್ತುಸ್ಥಿತಿಗೆಸಮಾನವಾಗಿದೆ ಎಂದು ಪ್ರಧಾನಿ ಹೇಳಿದರು. ಪರಿಸ್ಥಿತಿಯು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮತ್ತು ಜಾಗರೂಕರಾಗಿ ಮುಂದುವರಿಯುವಂತೆ ಮಾಡಿದೆ ಎಂದರು. ಲಾಕ್ಡೌನ್ ವಿಸ್ತರಿಸುವಂತೆ ಹಲವಾರು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ತಜ್ಞರು ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಬದಲಾಗುತ್ತಿರುವ ಸನ್ನಿವೇಶಗಳಲ್ಲಿ, ದೇಶವು ತನ್ನ ಕೆಲಸದ ಸಂಸ್ಕೃತಿ ಮತ್ತು ಕಾರ್ಯ ಶೈಲಿಯಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದರು. ಸರ್ಕಾರದ ಆದ್ಯತೆಯು ಪ್ರತಿಯೊಂದು ಜೀವವನ್ನೂ ಉಳಿಸುವುದೇ ಆಗಿದೆ ಎಂದು ಹೇಳಿದರು. COVID-19 ಪರಿಣಾಮವಾಗಿ ದೇಶವು ಗಂಭೀರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸೌಲಭ್ಯಗಳ ವಿತರಣೆಯ ಪರಿಸ್ಥಿತಿ ಸೇರಿದಂತೆ ಹೊಸ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದರು.

ಸಭೆ ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ನಾಯಕರು, ಕೈಗೊಂಡ ಸಮಯೋಚಿತ ಕ್ರಮಗಳನ್ನು ಶ್ಲಾಘಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶವು ಅವರ ಬೆಂಬಲಕ್ಕೆಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರು. ಆರೋಗ್ಯ ಕಾರ್ಯಕರ್ತರ ಆರೋಗ್ಯ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸುವುದು, ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವ ಅಗತ್ಯತೆ ಮತ್ತು ಹಸಿವು ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವ ಬಗ್ಗೆ ಪಕ್ಷಗಳ ನಾಯಕರು ಮಾತನಾಡಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವ ಆರ್ಥಿಕ ಮತ್ತು ಇತರ ನೀತಿ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು. ಲಾಕ್ಡೌನ್ ವಿಸ್ತರಿಸುವ ಬಗ್ಗೆ ಮತ್ತು ಲಾಕ್ಡೌನ್ ನ್ನು ಹಂತಹಂತವಾಗಿ ತೆಗೆಯುವ ಬಗ್ಗೆ ನಾಯಕರು ಸಲಹೆಗಳನ್ನು ನೀಡಿದರು.

ನಾಯಕರ ರಚನಾತ್ಮಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಿಯವರು, ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವ ಅವರ ಬದ್ಧತೆಯು ದೇಶದ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಪುನರುಚ್ಚರಿಸುತ್ತದೆ ಎಂದರು.

ಕೇಂದ್ರ ಸಂಸದೀಯ ಸಚಿವರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು.

 

***



(Release ID: 1612257) Visitor Counter : 185