ಪ್ರಧಾನ ಮಂತ್ರಿಯವರ ಕಛೇರಿ

21 ದಿನಗಳ ಕಾಲ ಇಡೀ ದೇಶದಲ್ಲಿ ಸಂಪೂರ್ಣ ದಿಗ್ಬಂಧನಕ್ಕೆ ಪ್ರಧಾನಮಂತ್ರಿ ಕರೆ

Posted On: 24 MAR 2020 11:01PM by PIB Bengaluru

21 ದಿನಗಳ ಕಾಲ ಇಡೀ ದೇಶದಲ್ಲಿ ಸಂಪೂರ್ಣ ದಿಗ್ಬಂಧನಕ್ಕೆ ಪ್ರಧಾನಮಂತ್ರಿ ಕರೆ
ಕೋವಿಡ್ -19 ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ -19 ಮಹಾಮಾರಿಯನ್ನು ನಿಗ್ರಹಿಸಲು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಮುಂದಿನ 21 ದಿನಗಳ ಕಾಲ ಇಡೀ ದೇಶಕ್ಕೆ ಸಂಪೂರ್ಣ ದಿಗ್ಬಂಧನಕ್ಕೆ ಕರೆ ನೀಡಿದ್ದಾರೆ.
ದೂರದರ್ಶನದ ಮೂಲಕ ದೇಶವನ್ನುದ್ದೇಶಿಸಿ ಮಾಡಿದ ವಿಶೇಷ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರಾಷ್ಟ್ರಗಳು ಕೂಡ ಈ ವೈರಾಣುವನ್ನು ನಿಯಂತ್ರಿಸಲಾಗದೆ ಕೈಚೆಲ್ಲಿದ್ದಾರೆ. ಇದನ್ನು ನಿಗ್ರಹಿಸಲು ಸಾಮಾಜಿಕ ಅಂತರವೊಂದೇ ಮಾರ್ಗ ಎಂದು ತಿಳಿಸಿದ್ದಾರೆ.
 “ಈ ಮಹಾಮಾರಿಗೆ ಸಂಬಂಧಿಸಿದಂತೆ ವಿಶ್ವದ ಮುಂದುವರಿದ ದೇಶಗಳು ಕೂಡ ಹೇಗೆ ಅಸಾಯಕವಾಗಿವೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಈ ದೇಶಗಳು ಅಗತ್ಯ ಪ್ರಯತ್ನ ಮಾಡುತ್ತಿಲ್ಲ ಅಥವಾ ಅವರ ಬಳಿ ಸಂಪನ್ಮೂಲದ ಕೊರತೆ ಇದೆ ಎಂದಲ್ಲ. ಎಲ್ಲ ಪ್ರಯತ್ನಗಳು ಮತ್ತು ಸನ್ನದ್ಧತೆಯ ನಡುವೆಯೂ ಕೊರೋನಾ ವೈರಾಣು ಎಷ್ಟು ತ್ವರಿತ ವೇಗದಲ್ಲಿ ಹಬ್ಬುತ್ತಿದೆ ಎಂದರೆ, ಈ ರಾಷ್ಟ್ರಗಳಿಗೂ ಈ ಪಿಡುಗು ನಿಗ್ರಹಿಸುವುದು ಕಷ್ಟವಾಗಿದೆ.
ಕಳೆದ ಎರಡು ತಿಂಗಳುಗಳಿಂದ ಈ ರಾಷ್ಟ್ರಗಳಲ್ಲಿ ನಡೆದಿರುವುದರ ವಿಶ್ಲೇಷಣೆಯಿಂದ ಮತ್ತು ತಜ್ಞರ ಅಭಿಪ್ರಾಯದ ರೀತ್ಯ, ಕೊರೋನಾ ವೈರಾಣುವಿನ ವಿರುದ್ಧ ಹೋರಾಟಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ ಎಂಬುದು ಸಾಬೀತಾಗಿದೆ” ಎಂದು ತಿಳಿಸಿದರು.
ಇದನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿಯವರು, “ಕೆಲವರ ನಿರ್ಲಕ್ಷ್ಯತನ, ಕೆಲವರ ಬೇಜವಾಬ್ದಾರಿತನ, ನಿಮ್ಮನ್ನೂ ನಿಮ್ಮ ಮಕ್ಕಳನ್ನೂ, ನಿಮ್ಮ ಪಾಲಕರನ್ನೂ, ನಿಮ್ಮ ಕುಟುಂಬವನ್ನೂ, ಇಡೀ ದೇಶವನ್ನು ಭೀಕರ ಸಂಕಷ್ಟಕ್ಕೆ ತಳ್ಳಲಿದೆ. ಇದೇ ರೀತಿಯ ನಿರ್ಲಕ್ಷ್ಯತನ ಮುಂದುವರಿದರೆ, ದೇಶ ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
 ದೇಶದ ವಿವಿಧ ಭಾಗಗಳಲ್ಲಿ ರಾಜ್ಯ ಸರ್ಕಾರಗಳು ಕಳೆದ ಕೆಲವು ದಿನಗಳಿಂದ ವಿಧಿಸಿರುವ ದಿಗ್ಬಂಧನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು.
ಇಂದು ಮಧ್ಯರಾತ್ರಿಯಿಂದಲೇ ಇಡೀ ದೇಶ ಸಂಪೂರ್ಣವಾಗಿ ಲಾಕ್ ಡೌನ್ ಆಗಲಿದೆ, 21 ದಿನಗಳ ಕಾಲ ತಮ್ಮ ಮನೆಯಿಂದ ಹೊರಗೆ ಬಾರದಂತೆ ಜನರ ಮೇಲೆ ಸಂಪೂರ್ಣ ಬಂದ್ ವಿಧಿಸಲಾಗುತ್ತಿದೆ.
ಆರೋಗ್ಯ ವಲಯದ ತಜ್ಞರ ಅನುಭವ ಮತ್ತು ಇತರ ರಾಷ್ಟ್ರಗಳ ಅನುಭವದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸೋಂಕಿನ ಸರಪಣಿಯನ್ನು ತುಂಡರಿಸಲು 21 ದಿನಗಳ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಇದು ಜನತಾ ಕರ್ಪ್ಯೂಗಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ, ಮತ್ತು  ಕಠಿಣವಾಗಿರುತ್ತದೆ ಎಂದೂ ಅವರು ಹೇಳಿದರು. ದೇಶವನ್ನು ಮತ್ತು ಪ್ರತಿಯೊಬ್ಬ ನಾಗರಿಕರನ್ನು ಕೊರೋನಾ ಮಹಾಮಾರಿಯಿಂದ ರಕ್ಷಿಸಲು ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಮಹಾಮಾರಿಯಿಂದ ಆಗುತ್ತಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, “ಈ ದಿಗ್ಬಂಧನದಿಂದ ದೇಶ ಖಂಡಿತವಾಗಿಯೂ ಆರ್ಥಿಕವಾಗಿ ದೊಡ್ಡ ಹೊಡೆತ ತಿನ್ನಲಿದೆ. ಆದಾಗ್ಯೂ, ಪ್ರತಿಯೊಬ್ಬ ಭಾರತೀಯರ ಜೀವವನ್ನು ರಕ್ಷಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಹೀಗಾಗಿ ಎಲ್ಲರೂ ದೇಶದಲ್ಲಿ ಈಗ ಎಲ್ಲಿದ್ದೀರೋ ಅಲ್ಲೇ ಉಳಿಯಿರಿ.”ಎಂದು ಮನವಿ ಮಾಡಿದರು.
 
ಮುಂದಿನ 3 ವಾರಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗದಿದ್ದರೆ, ದೇಶ 21 ವರ್ಷ ಹಿಂದಕ್ಕೆ ಹೋಗುತ್ತದೆ ಮತ್ತು ಹಲವಾರು ಕುಟುಂಬಗಳು ನಾಶವಾಗಿ ಹೋಗುತ್ತವೆ. ಹೀಗಾಗಿ ಮುಂದಿನ 21 ದಿನಗಳ ಕಾಲ ಮನೆಯ ಒಳಗೆ ಉಳಿಯುವ ಒಂದೇ ಒಂದು ಕೆಲಸ ಮಾಡಲು ಅವರು ಮನವಿ ಮಾಡಿದರು.
ಕೊರೋನಾವನ್ನು ನಿಗ್ರಹಿಸುವಲ್ಲಿ ಸಮರ್ಥವಾಗುತ್ತಿರುವ ಕೆಲವು ರಾಷ್ಟ್ರಗಳ ಅನುಭವವೇ ನಮಗೆ ಆಶಾಕಿರಣವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಯಾವ ರಾಷ್ಟ್ರಗಳು ಲಾಕ್ ಡೌನ್ ಆಚರಿಸಿದವೋ, ಎಲ್ಲಿ ಜನರು ಕಾನೂನು ಪಾಲಿಸಿದರೋ ಅವರು ಈ ಮಹಾಮಾರಿಯನ್ನು ಮೆಟ್ಟಿನಿಂತಿದ್ದಾರೆ.
“ಭಾರತ ಇಂದು ಎಂಥ ಪರಿಸ್ಥಿತಿಯಲ್ಲಿದೆ ಎಂದರೆ, ನಮ್ಮ ಪ್ರಸಕ್ತ ಕ್ರಮಗಳು ನಾವು ಈ ವಿಪತ್ತಿನ ಪರಿಣಾಮವನ್ನು ಎಷ್ಟರ ಮಟ್ಟಿಗೆ ತಗ್ಗಿಸುತ್ತೇವೆ ಎಂಬುದನ್ನು ದೃಢಪಡಿಸುತ್ತದೆ. ಇದು ನಮ್ಮ ಸಂಕಲ್ಪವನ್ನು ನಿರಂತರವಾಗಿ ಬಲಪಡಿಸುವ ಸಮಯವಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಮುನ್ನಚ್ಚರಿಕೆಯನ್ನು ಪಾಲಿಸುವ ಸಮಯವಾಗಿದೆ. ಶ್ವಾಸ ಇದ್ದರೆ, ವಿಶ್ವಾಸ ಇರುತ್ತದೆ ಎಂಬುದನ್ನು ನೀವು ಮನಗಾಣಬೇಕು. ಇದು ಸಂಯಮ ಮತ್ತು ಶಿಸ್ತು ಪಾಲನೆಯ ಸಮಯವಾಗಿದೆ. ಲಾಕ್ ಡೌನ್ ಪರಿಸ್ಥಿತಿ ಇರುವತನಕ, ನಾವು ಸಂಕಲ್ಪ ಮುಂದುವರಿಸೋಣ, ಕೊಟ್ಟ ವಚನದಂತೆ ನಡೆದುಕೊಳ್ಳೋಣ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದಾದ್ಯಂತ ನಾಗರಿಕರು ದೈನಂದಿನ ಜೀವನದಲ್ಲಿ ಹೆಚ್ಚು ಅನಾನುಕೂಲತೆ ಎದುರಿಸದಂತೆ ತ್ವರಿತವಾಗಿ ಕ್ರಮಕೈಗೊಳ್ಳಲು ಶ್ರಮಿಸುತ್ತಿವೆ ಎಂದು ಹೇಳಿರುವ ಪ್ರಧಾನಿ, ಎಲ್ಲ ಅಗತ್ಯ ವಸ್ತುಗಳ ಸುಗಮ ಪೂರೈಕೆಯ ಖಾತ್ರಿಗೂ ಕ್ರಮವಹಿಸಲಾಗಿದೆ ಎಂದರು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸರ್ಕಾರಗಳೊಂದಿಗೆ ನಾಗರಿಕ ಸಮಾಜದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಹ ಈ ಸಂಕಷ್ಟದ ಕಾಲದಲ್ಲಿ ಬಡ ಜನರ ಸಮಸ್ಯೆಯನ್ನು ತಗ್ಗಿಸಲು ನಿರಂತರವಾಗಿ ಶ್ರಮಿಸುತ್ತಿವೆ ಎಂದೂ ಹೇಳಿದರು.
 ಕೇಂದ್ರ ಸರ್ಕಾರ ವೈದ್ಯಕೀಯ ಮೂಲಸೌಕರ್ಯ ಮತ್ತು ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಯನ್ನು ಬಲಪಡಿಸಲು ಹದಿನೈದು ಸಾವಿರ ಕೋಟಿ (ರೂ. 15,000,00,00,000) ರೂಪಾಯಿಗಳನ್ನು ಒದಗಿಸಿದೆ ಎಂದೂ ಪ್ರಧಾನಮಂತ್ರಿ ಮೋದಿ ತಿಳಿಸಿದರು.
 
ಇಂಥ ಸಮಯದಲ್ಲಿ ಹಬ್ಬುವ ವದಂತಿಗಳು ಮತ್ತು ಮೂಢನಂಬಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅವರು ಜನತೆಗೆ ಮನವಿ ಮಾಡಿದರು. ಈ ಸೋಂಕಿನ ಯಾವುದೇ ಗುಣಲಕ್ಷಣಗಳು ಕಂಡು ಬಂದರೆ, ವೈದ್ಯರನ್ನು ಸಂಪರ್ಕಿಸದೆ ಸ್ವತಃ ಔಷಧ ಸೇವಿಸದಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರೂ ಸರ್ಕಾರದ, ಸ್ಥಳೀಯ ಪ್ರಾಧಿಕಾರಗಳು ನೀಡುವ ಸೂಚನೆಗಳನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.  
ಸಂಕಷ್ಟದ ಕಾಲದಲ್ಲಿ ಜನತಾ ಕರ್ಪ್ಯೂವನ್ನು ಯಶಸ್ವಿಗೊಳಿಸಲು ಒಗ್ಗೂಡಿದ ಮತ್ತು ಸಂಪೂರ್ಣ ಜವಾಬ್ದಾರಿ ಮತ್ತು ಸಂವೇದನಾಶೀಲತೆಯಿಂದ ಕೊಡುಗೆ ನೀಡುತ್ತಿರುವ ಎಲ್ಲ ಭಾರತೀಯರನ್ನೂ ಪ್ರಧಾನಮಂತ್ರಿಯವರು ಶ್ಲಾಘಿಸಿದರು. " ಒಂದು ದಿನದ ಜನತಾ-ಕರ್ಫ್ಯೂನ ಆಚರಣೆ ಮೂಲಕ, ನಮ್ಮ ರಾಷ್ಟ್ರ ಬಿಕ್ಕಟ್ಟಿನ ಸಮಯದಲ್ಲಿ, ಮಾನವ ಕುಲ ಎದುರಿಸುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯರೂ ಹೇಗೆ ಒಟ್ಟಾಗಿ ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನಗಳನ್ನು ಮಾಡುತ್ತಾರೆ ಎಂಬುದನ್ನು ಭಾರತ ಸಾಬೀತುಪಡಿಸಿತು" ಎಂದು ಅವರು ಹೇಳಿದರು.
21 ದಿನಗಳ ಲಾಕ್ ಡೌನ್ ದೀರ್ಘ ಕಾಲ ಎಂಬುದು ನಿಜ, ಆದರೆ, ಇದು ನಿಮ್ಮ ಮತ್ತು ನಿಮ್ಮ ಕುಟುಂಬದವರ ಸುರಕ್ಷತೆಗೆ ಅತ್ಯಂತ ಅತ್ಯಗತ್ಯ ಎಂದೂ ಪ್ರಧಾನಮಂತ್ರಿ ತಿಳಿಸಿದರು. ಪ್ರತಿಯೊಬ್ಬ ಭಾರತೀಯರೂ ಈ ಸಂಕಷ್ಟದ ಸಮಯದಲ್ಲಿ ಯಶಸ್ವಿಯಾಗಿ ಹೋರಾಡುವುದಷ್ಟೇ ಅಲ್ಲ, ಜಯ ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.



***



(Release ID: 1608022) Visitor Counter : 279