ಪ್ರಧಾನ ಮಂತ್ರಿಯವರ ಕಛೇರಿ
80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿಕಸಿತ ಭಾರತದತ್ತ ಭಾರತದ ಮುಂದಿನ ದಾಪುಗಾಲು ಹಾಕಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಪಷ್ಟ ಕರೆ
प्रविष्टि तिथि:
15 AUG 2026 12:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ತಮ್ಮ 80 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, 2047ರ ವೇಳೆಗೆ ವಿಕಸಿತ ಭಾರತದತ್ತ ಭಾರತದ ಪ್ರಯಾಣವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಸ್ಪಷ್ಟ ಕರೆಗಳನ್ನು ನೀಡಿದರು. ದೇಶದ ಕೆಲಸದ ಸಂಸ್ಕೃತಿ, ಚಿಂತನೆ ಮತ್ತು ಮಹತ್ವಾಕಾಂಕ್ಷೆಯ ಪ್ರಮಾಣದಲ್ಲಿ ಬದಲಾವಣೆಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ನಾಗರಿಕರು, ಸರ್ಕಾರಗಳು, ಉದ್ಯಮ, ರೈತರು, ಯುವಜನರು ಮತ್ತು ಸಮಾಜದ ಇತರ ವರ್ಗಗಳ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು.
ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಮುಂದಿನ ಹಂತದ ಸುಧಾರಣೆಗಳು: ಸುಧಾರಣೆಗಳ ವೇಗವನ್ನು ಹೆಚ್ಚಿಸುವಂತೆ ಕರೆ ನೀಡಿದ ಪ್ರಧಾನಮಂತ್ರಿಯವರು, ಭಾರತಕ್ಕೆ ಸುಧಾರಣೆಗಳು ಒತ್ತಾಯವಲ್ಲ ಅಥವಾ ಸಂಚಲನ ಪದವಲ್ಲ, ಬದಲಿಗೆ ಅವು ದೃಢನಿಶ್ಚಯದ ವಿಷಯವಾಗಿವೆ ಎಂದು ಹೇಳಿದರು. ಸರ್ಕಾರ, ಸಮಾಜ, ಕೈಗಾರಿಕೆ, ಉತ್ಪಾದಕರು ಮತ್ತು ರೈತರು ಸಾಂಪ್ರದಾಯಿಕ ವ್ಯವಸ್ಥೆ, ಚಿಂತನೆ ಮತ್ತು ಗುರಿಗಳನ್ನು ಸುಧಾರಿಸಬೇಕಾಗಿದೆ ಎಂದು ಅವರು ಹೇಳಿದರು. 2047ರ ಆಕಾಂಕ್ಷೆಗಳಿಗೆ ಅನುಗುಣವಾಗಿ ವ್ಯವಸ್ಥೆಗಳು, ನೀತಿಗಳು ಮತ್ತು ನಿಯಮಗಳನ್ನು ರೂಪಿಸುವುದರೊಂದಿಗೆ ಕೇಂದ್ರ, ರಾಜ್ಯಗಳು ಮತ್ತು ಉದ್ಯಮಗಳು ಒಟ್ಟಾಗಿ ಸಾಗಬೇಕು ಮತ್ತು ಸುಧಾರಣೆಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.
2. ವಿಕಸಿತ ಭಾರತಕ್ಕಾಗಿ 'ಸಪ್ತ ಧಾರಾ': ಮುಂಬರುವ ಐದು-ಏಳು ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ದೇಶಕ್ಕೆ ಹೊಸ ವೇಗವನ್ನು ನೀಡಲು "ಸಪ್ತ ಧಾರಾ" ಎಂಬ ಸಪ್ತ ಶಕ್ತಿಯ ಧಾರೆಗಳ ಅನುಷ್ಠಾನಕ್ಕೆ ಪ್ರಧಾನಮಂತ್ರಿ ಕೆಂಪು ಕೋಟೆಯಿಂದ ಕರೆ ನೀಡಿದರು. ಆ ಏಳು ಧಾರೆಗಳು/ತೊರೆಗಳು ಹೀಗಿವೆ:
ಉತ್ಪಾದನಾ ಶಕ್ತಿ: ಭಾರತವು ಬಿಡಿಭಾಗಗಳು ಮತ್ತು ವಿನ್ಯಾಸದಿಂದ ಸಂಪೂರ್ಣ ಉತ್ಪನ್ನಗಳ ತಯಾರಿಕೆಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಜಾಗತಿಕ ಪೂರೈಕೆ ಸರಪಳಿಯ ವಿಶ್ವಾಸಾರ್ಹ ಕೇಂದ್ರವಾಗಬೇಕು. ವೆಚ್ಚ, ಗುಣಮಟ್ಟ ಮತ್ತು ಪ್ರಮಾಣ, ಸ್ಪರ್ಧಾತ್ಮಕ ಕಾರ್ಖಾನೆಗಳು, ಬಳಕೆದಾರ ಸ್ನೇಹಿ ಉತ್ಪನ್ನಗಳು, ಆಕರ್ಷಕ ಪ್ಯಾಕೇಜಿಂಗ್ ಮತ್ತು ಶೂನ್ಯ ದೋಷದ ನಿಖರ ಉತ್ಪಾದನೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಕರೆ ನೀಡಿದ ಅವರು, "ಗುಣಮಟ್ಟ, ಗುಣಮಟ್ಟ, ಗುಣಮಟ್ಟ" ಭಾರತೀಯ ಉತ್ಪಾದನೆಯ ಮಂತ್ರವಾಗಬೇಕು ಎಂದರು.
ಕೃಷಿ ಮತ್ತು ಆಹಾರ ಉತ್ಪಾದನೆ: ಕೃಷಿಯಿಂದ ರಫ್ತು ಮಾರುಕಟ್ಟೆಯತ್ತ ಸಾಗಲು ಮತ್ತು ಭಾರತದ ಸಾಂಪ್ರದಾಯಿಕ ಆಹಾರಗಳು, ಸಿರಿಧಾನ್ಯಗಳು, ಸಾಂಬಾರ ಪದಾರ್ಥಗಳು, ಹಣ್ಣುಗಳು ಮತ್ತು ಹೂವುಗಳನ್ನು ಜಾಗತಿಕ ಬ್ರಾಂಡ್ಗಳಾಗಿ ಪರಿವರ್ತಿಸಲು ಪ್ರಧಾನಮಂತ್ರಿ ಕರೆ ನೀಡಿದರು. ಜಾಗತಿಕ ಮಾನದಂಡ ನಿಯತಾಂಕಗಳನ್ನು ಪೂರೈಸುವ ರಾಸಾಯನಿಕ ಮುಕ್ತ ಕೃಷಿ ಮತ್ತು ಕೃಷಿ ಉತ್ಪನ್ನಗಳಿಗೆ ಅವರು ಒತ್ತು ನೀಡಿದರು.
ತಂತ್ರಜ್ಞಾನ ಮತ್ತು ನಾವೀನ್ಯತೆ: ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಾಹ್ಯಾಕಾಶ, ರೊಬೊಟಿಕ್ಸ್ ಮತ್ತು ಡೇಟಾ ಸೆಂಟರ್ಗಳು ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ಕೇವಲ ಜಗತ್ತಿನ ಮಾರುಕಟ್ಟೆಯಾಗಿ ಉಳಿಯದೆ ನಾವೀನ್ಯತೆಯ ಕೇಂದ್ರವಾಗಬೇಕು ಎಂದು ಹೇಳಿದರು. ಮೇಡ್-ಇನ್-ಇಂಡಿಯಾ 6ಜಿ ಪ್ರತಿ ಮೂಲೆಯನ್ನು ತಲುಪುವುದು ದೇಶದ ಗುರಿಯಾಗಬೇಕು ಎಂದು ಅವರು ಹೇಳಿದರು.
ಗತಿ ಶಕ್ತಿ: ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲುಗಳು, ಆಧುನಿಕ ಹೆದ್ದಾರಿಗಳು, ಒಳನಾಡಿನ ಜಲಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಬಹು ಮಾದರಿ ಲಾಜಿಸ್ಟಿಕ್ಸ್ ಮೂಲಕ ತಡೆರಹಿತ ಮತ್ತು ವೇಗದ ಸಂಪರ್ಕಕ್ಕೆ ಪ್ರಧಾನಮಂತ್ರಿ ಕರೆ ನೀಡಿದರು. ಬಂದರುಗಳು ಸರಕುಗಳನ್ನು ತುಂಬುವ ಮತ್ತು ಇಳಿಸುವುದನ್ನು ಮೀರಿ ಬಂದರು ಆಧಾರಿತ ಅಭಿವೃದ್ಧಿ ಮತ್ತು ಬೆಳವಣಿಗೆಯ ಚಾಲಕರಾಗಬೇಕು ಎಂದು ಅವರು ಹೇಳಿದರು.
ರಕ್ಷಣಾ ಶಕ್ತಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಕರೆ ನೀಡಿದ ಪ್ರಧಾನಮಂತ್ರಿ, ಮುಂದಿನ ಪೀಳಿಗೆಯ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಜಾಗತಿಕ ಪೂರೈಕೆದಾರನಾಗುವತ್ತ ಸಾಗಬೇಕು ಎಂದು ಹೇಳಿದರು. ಡ್ರೋನ್ ಗಳು ಮತ್ತು ಪ್ರತಿಕ್ರಿಯಾ ಡ್ರೋನ್ ವ್ಯವಸ್ಥೆಗಳನ್ನು (ಕೌಂಟರ್ ಡ್ರೋನ್ ವ್ಯವಸ್ಥೆಗಳನ್ನು) ಅಭಿವೃದ್ಧಿಪಡಿಸಲು ಮತ್ತು ಹೈಪರ್ಸಾನಿಕ್ ರಕ್ಷಣಾ ತಂತ್ರಜ್ಞಾನಗಳಲ್ಲಿ ನಾಯಕತ್ವ ವಹಿಸಲು ಅವರು ನಿರ್ದಿಷ್ಟ ಕರೆ ನೀಡಿದರು. ಸೈಬರ್ ಭದ್ರತೆಯು ಭಾರತೀಯ ಯುವಜನರ ಸಾಮರ್ಥ್ಯಗಳನ್ನು ಭಾರತ ಮತ್ತು ಜಗತ್ತಿಗೆ ಬಳಸಿಕೊಳ್ಳಬಹುದಾದ ಕ್ಷೇತ್ರವಾಗಿದೆ ಎಂದು ಅವರು ಒತ್ತಿ ಹೇಳಿದರು.
ಹಸಿರು ಆರ್ಥಿಕತೆ ಮತ್ತು ನೀಲಿ ಆರ್ಥಿಕತೆ: ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಇಂಧನ ಸಂಗ್ರಹಣೆ, ಹಸಿರು ಚಲನಶೀಲತೆ ಮತ್ತು ಹಸಿರು ಉತ್ಪಾದನೆಯಲ್ಲಿ ಜಾಗತಿಕ ಮಟ್ಟವನ್ನು ಸಾಧಿಸಲು ಪ್ರಧಾನಮಂತ್ರಿ ಕರೆ ನೀಡಿದರು. ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ, ಸಾಗರ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆಯ ಇತರ ಕ್ಷೇತ್ರಗಳಲ್ಲಿ ಭಾರತದ ಕರಾವಳಿಯು ನೀಡುವ ಅವಕಾಶಗಳನ್ನು ಅವರು ಉಲ್ಲೇಖಿಸಿದರು.
ಭಾರತದ ಮೃದು ಶಕ್ತಿ: ಯೋಗ, ಆಯುರ್ವೇದ, ಸಮಗ್ರ ಆರೋಗ್ಯ ರಕ್ಷಣೆ ಮತ್ತು ಭಾರತದಲ್ಲಿ ಗುಣಪಡಿಸುವಿಕೆಯ ನಿಟ್ಟಿನಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ಕೊಂಡೊಯ್ಯುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಕರಕುಶಲ ವಸ್ತುಗಳು, ಸಂಸ್ಕೃತಿ, ಚಲನಚಿತ್ರಗಳು, ವಿಎಫ್ಎಕ್ಸ್, ಅನಿಮೇಷನ್, ಗೇಮಿಂಗ್ ಮತ್ತು ಡಿಜಿಟಲ್ ವಿಷಯ ಸಾಮಗ್ರಿಗಳು ಭಾರತವು ಜಾಗತಿಕವಾಗಿ ತನ್ನ ಶಕ್ತಿಯನ್ನು ಸ್ಥಾಪಿಸುವ ಕ್ಷೇತ್ರಗಳಾಗಿವೆ ಎಂದು ಅವರು ಎತ್ತಿ ತೋರಿಸಿದರು. ವಿದೇಶಿ ಪ್ರವಾಸಿಗರು, ಜಾಗತಿಕ ಕ್ರೀಡಾಕೂಟಗಳು ಮತ್ತು ಸಂಗೀತ ಕಚೇರಿಗಳನ್ನು ಭಾರತಕ್ಕೆ ಆಕರ್ಷಿಸಲು ಹೆಚ್ಚಿನ ಪ್ರಯತ್ನಗಳಿಗೆ ಅವರು ಕರೆ ನೀಡಿದರು.
3. ಭಾರತದ ಮಹತ್ವಾಕಾಂಕ್ಷೆಗಳ ವ್ಯಾಪ್ತಿ-ಪ್ರಮಾಣವನ್ನು ಹೆಚ್ಚಿಸಿ: ದೇಶವು ದೊಡ್ಡದಾಗಿ ಯೋಚಿಸುವಂತೆ ಕರೆ ನೀಡಿದ ಪ್ರಧಾನಮಂತ್ರಿಯವರು, ಮುಂಬರುವ ದಶಕದಲ್ಲಿ ಭಾರತವು ಫಾರ್ಚೂನ್ 500 ಕಂಪನಿಗಳಲ್ಲಿ 50 ಕಂಪನಿಗಳನ್ನು ಏಕೆ ಹೊಂದಿರಬಾರದು ಎಂದು ಕೇಳಿದರು. ಭಾರತೀಯ ಬ್ಯಾಂಕೊಂದು ವಿಶ್ವದ ಅಗ್ರ ಐದು ಬ್ಯಾಂಕುಗಳಲ್ಲಿ ಒಂದಾಗಬೇಕು ಮತ್ತು ಒಂದು ಅಥವಾ ಎರಡು ಭಾರತೀಯ ಔಷಧೀಯ ಕಂಪನಿಗಳು ವಿಶ್ವದ ಐದು ಅತಿದೊಡ್ಡ ಔಷಧ ಕಂಪನಿಗಳಲ್ಲಿ ಸ್ಥಾನ ಪಡೆಯಬೇಕು ಎಂದು ಅವರು ಹೇಳಿದರು. ಭಾರತೀಯ ಕಾನೂನು ಸಂಸ್ಥೆಗಳು, ರೇಟಿಂಗ್ ಏಜೆನ್ಸಿಗಳು, ಸಲಹಾ ಸಂಸ್ಥೆಗಳು ಮತ್ತು ಲೆಕ್ಕಪತ್ರ ಸಂಸ್ಥೆಗಳು ವಿಶ್ವದ ಪ್ರಮುಖ ಸಂಸ್ಥೆಗಳಾಗಿ ಹೊರಹೊಮ್ಮಬೇಕು, ಭಾರತೀಯ ತಂತ್ರಜ್ಞಾನ ಕಂಪನಿಗಳು ಜಾಗತಿಕ ನಾಯಕರಾಗಬೇಕು ಮತ್ತು ಭಾರತೀಯ ಬ್ರ್ಯಾಂಡ್ಗಳು ಜಗತ್ತನ್ನು ಆಕರ್ಷಿಸುವ ದೇಶದ ಗುರುತಾಗಿ ಹೊರಹೊಮ್ಮಬೇಕು ಎಂದು ಅವರು ಕರೆ ನೀಡಿದರು.
4. ಭಾರತೀಯ ಗುಣಮಟ್ಟವನ್ನು ಜಾಗತಿಕ ಗುರುತನ್ನಾಗಿ ಮಾಡಿ: ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಗುರುತಿಸುವಂತೆ ತಯಾರಕರು, ಉದ್ಯಮಿಗಳು ಮತ್ತು ಎಂಎಸ್ಎಂಇಗಳಿಗೆ ಪ್ರಧಾನಮಂತ್ರಿ ಬಲವಾದ ಮನವಿ ಮಾಡಿದರು. ಭಾರತವು ವೆಚ್ಚ, ಗುಣಮಟ್ಟ ಮತ್ತು ಪ್ರಮಾಣದಲ್ಲಿ ಜಾಗತಿಕ ಮಾನದಂಡಗಳನ್ನು ಪೂರೈಸಬೇಕು ಮತ್ತು ವಿಶ್ವ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸುವ ಉತ್ಪನ್ನಗಳನ್ನು ನೀಡಬೇಕು ಎಂದು ಅವರು ಹೇಳಿದರು. ಭಾರತದ ವ್ಯಾಪಾರ ಒಪ್ಪಂದಗಳಿಂದ ಸೃಷ್ಟಿಯಾದ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ಗುಣಮಟ್ಟ ಹಾಗು ಸ್ಪರ್ಧಾತ್ಮಕತೆಯ ಜಾಗತಿಕ ನಿಯತಾಂಕಗಳನ್ನು ಪೂರೈಸಿ/ಅನುಸರಿಸಿ ಭಾರತೀಯ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗಳಿಗೆ ಕೊಂಡೊಯ್ಯುವಂತೆ ಅವರು ಎಂಎಸ್ಎಂಇಗಳನ್ನು ಆಗ್ರಹಿಸಿದರು.
5. ಕೆಲಸದ ಸಂಸ್ಕೃತಿಯನ್ನು ಬದಲಾಯಿಸಿ ಮತ್ತು ಭಾರತದ ಗುರಿಗಳ ವ್ಯಾಪ್ತಿ ಪ್ರಮಾಣವನ್ನು ಹೊಂದಿಸಿ: ಈ ಶತಮಾನದ ಮುಂದಿನ ಕಾಲು ಭಾಗವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಮತ್ತು ದೇಶವು ತನ್ನ ವೇಗವನ್ನು ಸ್ಥಗಿತಗೊಳಿಸಲು ಅಥವಾ ನಿಧಾನಗತಿಗೆ ಹೋಗಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಕೆಲಸದ ಸಂಸ್ಕೃತಿ, ಚಿಂತನೆ ಮತ್ತು ಕೆಲಸದ ವೇಗವನ್ನು ಬದಲಾಯಿಸುವಂತೆ ಕರೆ ನೀಡಿದ ಅವರು, ಕಳೆದ ಐದು-ಏಳು ದಶಕಗಳಲ್ಲಿ ಸಾಧಿಸದ ಕಾರ್ಯಗಳನ್ನು ಮುಂದಿನ ಐದು-ಏಳು ವರ್ಷಗಳಲ್ಲಿ ಸಾಧಿಸಬೇಕಾಗಿದೆ ಎಂದು ಹೇಳಿದರು.
6. ನಶಾ ಮುಕ್ತ ಭಾರತ - ಪ್ರತಿ ಕುಟುಂಬವೂ ಸೇರಬೇಕು: ಮಾದಕ ದ್ರವ್ಯ ಸೇವನೆಯು ಭಾರತದ ಯುವಜನರು ಎದುರಿಸುತ್ತಿರುವ ಪ್ರಮುಖ ಸವಾಲು ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಮಾದಕ ದ್ರವ್ಯ ಮುಕ್ತ ಭಾರತವು ಸಾಮೂಹಿಕ ಜವಾಬ್ದಾರಿಯಾಗಬೇಕು ಎಂದು ಹೇಳಿದರು. ಮೈ ಭಾರತ್ ಸ್ವಯಂಸೇವಕರು, ಎನ್ಜಿಒಗಳು, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ಮುಖಂಡರನ್ನು ಒಳಗೊಂಡ 100 ವಾರಗಳ ನಶಾ ಮುಕ್ತ ಭಾರತ್ ಅಭಿಯಾನವನ್ನು ಉಲ್ಲೇಖಿಸಿದ ಅವರು, ಪ್ರತಿ ಕುಟುಂಬವು ಅಭಿಯಾನದ ಭಾಗವಾಗಬೇಕು ಮತ್ತು ನಶಾ ಮುಕ್ತ ಭಾರತದ ಕನಸನ್ನು ನನಸಾಗಿಸಲು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
7. ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಹಿಳಾ ಮೀಸಲಾತಿ ಅನುಷ್ಠಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಪ್ರಧಾನಮಂತ್ರಿ ನೇರ ಮನವಿ ಮಾಡಿದರು. ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಉಲ್ಲೇಖಿಸಿದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಪ್ರಾತಿನಿಧ್ಯ ಸಿಗುವಂತೆ ಮತ್ತು ಭಾರತದ ನೀತಿಗಳನ್ನು ರೂಪಿಸಲು ಕೊಡುಗೆ ನೀಡಲು ಸಾಧ್ಯವಾಗುವಂತೆ ರಾಜಕೀಯ ಪಕ್ಷಗಳು ಆದಷ್ಟು ಬೇಗ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
8. ಜನಗಣತಿಯಲ್ಲಿ ಭಾಗವಹಿಸುವಿಕೆಯ ನೇತೃತ್ವ ವಹಿಸಲು ಯುವಜನರು: ನೀತಿಗಳು, ಯೋಜನೆಗಳು ಮತ್ತು ದೇಶದ ಭವಿಷ್ಯದ ಯೋಜನೆಗೆ ನಿಖರವಾದ ಮಾಹಿತಿ ಅಗತ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಸ್ತುತ ನಡೆಯುತ್ತಿರುವ ಜನಗಣತಿಯಲ್ಲಿ ತಮ್ಮ ಕುಟುಂಬಗಳು ನಿಖರವಾಗಿ ಭಾಗವಹಿಸಲು ಸಹಾಯ ಮಾಡಲು ಯುವಜನರಿಗೆ ಕರೆ ನೀಡಿದರು. ಯುವಜನರು ತಮ್ಮ ಕುಟುಂಬದವರೊಂದಿಗೆ ಕುಳಿತುಕೊಳ್ಳಬೇಕು, ನಮೂನೆಯನ್ನು ಅರ್ಥಮಾಡಿಕೊಳ್ಳಬೇಕು, ನಮೂದಿಸಿದ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಬೇಕು ಮತ್ತು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
9. ಸ್ವಾರ್ಥಕ್ಕಿಂತ ಮೇಲೆ ರಾಷ್ಟ್ರ; ಗುರುತಾಗಿ ಕರ್ತವ್ಯ: ಪಂಚ ಪ್ರಾಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವುದನ್ನು ಮುಂದುವರಿಸುವಂತೆ ನಾಗರಿಕರಿಗೆ ಕರೆ ನೀಡಿದರು ಮತ್ತು ರಾಷ್ಟ್ರದ ಹಿತಾಸಕ್ತಿಯು ಸ್ವಾರ್ಥಕ್ಕಿಂತ ಮಿಗಿಲಾಗಿರಬೇಕು ಮತ್ತು ಕರ್ತವ್ಯವು ನಮ್ಮ ಗುರುತಾಗಿರಬೇಕು ಎಂಬ ಸಂಕಲ್ಪವನ್ನು ಪುನರುಚ್ಚರಿಸಿದರು.
10. ಕನಸುಗಳನ್ನು ಸಂಕಲ್ಪವಾಗಿಸಿ ಮತ್ತು ಸಂಕಲ್ಪವನ್ನು ಯಶಸ್ಸಾಗಿ ಪರಿವರ್ತಿಸಿ: ವಿಕಸಿತ ಭಾರತದತ್ತ ಸಾಮೂಹಿಕ ರಾಷ್ಟ್ರೀಯ ಪ್ರಯತ್ನದ ಕರೆಯೊಂದಿಗೆ ಮಾತುಗಳನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಸಮಯ, ಅವಕಾಶ ಮತ್ತು ಸಂಕಲ್ಪವು ಭಾರತಕ್ಕೆ ಸೇರಿದೆ ಎಂದು ಹೇಳಿದರು. ಕನಸುಗಳನ್ನು ಸಂಕಲ್ಪವಾಗಿ, ಸಂಕಲ್ಪವನ್ನು ಶಕ್ತಿಯಾಗಿ ಮತ್ತು ಶಕ್ತಿಯನ್ನು ಯಶಸ್ಸಾಗಿ ಪರಿವರ್ತಿಸಲು, ಪ್ರತಿ ಹೆಜ್ಜೆಯನ್ನು ಅಭಿವೃದ್ಧಿಯತ್ತ ಹೆಜ್ಜೆಯನ್ನಾಗಿ ಮಾಡಲು, ಒಟ್ಟಾಗಿ ಸಾಗಲು ಮತ್ತು ಸಾಮೂಹಿಕವಾಗಿ ವಿಕಸಿತ ಭಾರತವನ್ನು ನಿರ್ಮಿಸಲು ಅವರು ನಾಗರಿಕರಿಗೆ ಕರೆ ನೀಡಿದರು.
*****
(रिलीज़ आईडी: 2299830)
आगंतुक पटल : 27