ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ವಿ-ಬಿ-ಜಿ-ರಾಮ್-ಜಿಗಾಗಿ ರಾಜ್ಯಗಳಿಗೆ 25,863 ಕೋಟಿ ರೂಪಾಯಿಗಳ  ಮೊದಲ ಕಂತನ್ನು ಬಿಡುಗಡೆ ಮಾಡಿದ ಶಿವರಾಜ್ ಸಿಂಗ್ ಚೌಹಾಣ್


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ಒಂದೇ ದಿನದಲ್ಲಿ ವಿ-ಬಿ-ಜಿ-ರಾಮ್-ಜಿ ಯಶಸ್ವಿಯಾಗಿ ಮತ್ತು ಸುಗಮವಾಗಿ ಜಾರಿಯಾಗಿದೆ: ಶಿವರಾಜ್ ಸಿಂಗ್ ಚೌಹಾಣ್

ಯಾವುದೇ ರಾಜ್ಯದಲ್ಲಿ ದೈನಂದಿನ ವೇತನ 300 ರೂಪಾಯಿಗಳ ಗಿಂತ ಕಡಿಮೆಯಿರುವುದಿಲ್ಲ; ಸಮಯೋಚಿತ ವೇತನ ಪಾವತಿ, ಪಾರದರ್ಶಕತೆ ಮತ್ತು ಗುಣಮಟ್ಟದ ಆಸ್ತಿಗಳ ಸೃಷ್ಟಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ

प्रविष्टि तिथि: 05 JUL 2026 1:03PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 'ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' [VB-G-RAM-G] ಅನುಷ್ಠಾನವನ್ನು ಪರಿಶೀಲಿಸಿದರು. ಸಭೆಯ ಸಂದರ್ಭದಲ್ಲಿ, ಅವರು ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ 25,863 ಕೋಟಿ ರೂಪಾಯಿಗಳ ಮೊದಲ ಕಂತನ್ನು (ಮದರ್ ಸ್ಯಾಂಕ್ಷನ್) ಬಿಡುಗಡೆ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, 2026ರ ಜುಲೈ 1ರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಿ-ಬಿ-ಜಿ-ರಾಮ್-ಜಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಈ ಯೋಜನೆಯು ದೇಶಾದ್ಯಂತ ಯಶಸ್ವಿಯಾಗಿ ಜಾರಿಯಾಗಿದೆ ಮತ್ತು ನರೇಗಾ (MGNREGA) ದಿಂದ ವಿ-ಬಿ-ಜಿ-ರಾಮ್-ಜಿಗೆ ಪರಿವರ್ತನೆಯು ಸುಗಮವಾಗಿ ನಡೆದಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ಯಾವುದೇ ತಾಂತ್ರಿಕ ಅಥವಾ ಕಾರ್ಯಾಚರಣೆಯ ಸಮಸ್ಯೆಗಳು ವರದಿಯಾಗಿಲ್ಲ.

ಬಡ ಕಾರ್ಮಿಕರಿಗೆ ಸೇವೆ ಸಲ್ಲಿಸುವುದು ದೇವರಿಗೆ ಸೇವೆ ಸಲ್ಲಿಸಿದಂತೆ ಎಂದು ಅವರು ಹೇಳಿದರು. ಗ್ರಾಮೀಣ ಕಾರ್ಮಿಕರಿಗೆ ಘನತೆಯುಳ್ಳ ಉದ್ಯೋಗ, ಸಮಯೋಚಿತ ವೇತನ ಪಾವತಿ ಮತ್ತು ಬಾಳಿಕೆ ಬರುವ ಗ್ರಾಮೀಣ ಆಸ್ತಿಗಳ ಸೃಷ್ಟಿಯನ್ನು ಖಚಿತಪಡಿಸುವುದು ಸರ್ಕಾರದ ಉದ್ದೇಶವಾಗಿದೆ.

ನರೇಗಾ ದೇಶಾದ್ಯಂತ ಜಾರಿಯಾಗಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿದ್ದರೆ, ವಿ-ಬಿ-ಜಿ-ರಾಮ್-ಜಿಯನ್ನು ಒಂದೇ ದಿನದಲ್ಲಿ ರಾಷ್ಟ್ರವ್ಯಾಪಿ ಜಾರಿಗೆ ತರಲಾಗಿದೆ ಎಂದು ಶ್ರೀ ಚೌಹಾಣ್ ತಿಳಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವ, ರಾಜ್ಯಗಳ ಸಹಕಾರ ಮತ್ತು ದೇಶದ ಆಡಳಿತಾತ್ಮಕ ಸಾಮರ್ಥ್ಯದಿಂದಾಗಿ ಇದು ಸಾಧ್ಯವಾದ ಪ್ರಮುಖ ಸಾಧನೆ ಎಂದು ಅವರು ಬಣ್ಣಿಸಿದರು. ಇದು ಪ್ರಧಾನಮಂತ್ರಿಯವರ ಬದ್ಧತೆ, ಉತ್ತಮ ಆಡಳಿತ ಮತ್ತು ಪರಿಣಾಮಕಾರಿ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಆರಂಭಿಕ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ಮೊದಲ ವಾರದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಪ್ರಾರಂಭವಾಗಿದೆ ಮತ್ತು ಲಕ್ಷಾಂತರ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಹೇಳಿದರು. ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಕ್ಕಾಗಿ ಅವರು ಆಂಧ್ರಪ್ರದೇಶ, ಕೇರಳ ಮತ್ತು ರಾಜಸ್ಥಾನವನ್ನು ವಿಶೇಷವಾಗಿ ಶ್ಲಾಘಿಸಿದರು. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಆದಷ್ಟು ಬೇಗ ಕೆಲಸವನ್ನು ಪ್ರಾರಂಭಿಸುವಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಅವರು ಕರೆ ನೀಡಿದರು ಮತ್ತು ಯೋಜನೆಯನ್ನು ಅಧಿಸೂಚಿಸಲು ಹಾಗೂ ಅಗತ್ಯ ಬಜೆಟ್ ನಿಬಂಧನೆಗಳನ್ನು ಮಾಡಲು ಜಾರ್ಖಂಡ್‌ಗೆ ಮನವಿ ಮಾಡಿದರು. ಆರ್‌ಬಿಐ ಖಾತೆಗಳು ಅಥವಾ ಇತರ ಔಪಚಾರಿಕತೆಗಳು ಬಾಕಿ ಇರುವ ರಾಜ್ಯಗಳಿಗೆ ಅವುಗಳನ್ನು ಸಮಯಬದ್ಧವಾಗಿ ಪೂರ್ಣಗೊಳಿಸಲು ಸೂಚಿಸಲಾಯಿತು.

ವಿ-ಬಿ-ಜಿ-ರಾಮ್-ಜಿಯಡಿ ವೇತನ ದರಗಳನ್ನು ಸರಾಸರಿ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ದೇಶದ ಯಾವುದೇ ರಾಜ್ಯದಲ್ಲಿ ಈಗ ದೈನಂದಿನ ವೇತನ 300 ರೂಪಾಯಿಗಳ ಗಿಂತ ಕಡಿಮೆಯಿರುವುದಿಲ್ಲ. ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗ್ರಾಮೀಣ ಕಾರ್ಮಿಕರ ಆದಾಯ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಇಂದು ಬಿಡುಗಡೆಯಾದ 25,863 ಕೋಟಿ ರೂಪಾಯಿಗಳ ಮೊದಲ ಕಂತು, ರಾಜ್ಯಗಳಿಗೆ ಸಾಕಷ್ಟು ಹಣ ಲಭ್ಯವಾಗುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ, ಇದರಿಂದಾಗಿ 15 ದಿನಗಳೊಳಗೆ ವೇತನವನ್ನು ಪಾವತಿಸಬಹುದು. ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕೆಂದು ಅವರು ಕೋರಿದರು.

ವಿ-ಬಿ-ಜಿ-ರಾಮ್-ಜಿಯ ಪರಿಣಾಮಕಾರಿ ಅನುಷ್ಠಾನಕ್ಕೆ ನಿಧಿಯ ಕೊರತೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯಗಳಿಂದ ಬಂದ ಬೇಡಿಕೆಯ ಆಧಾರದ ಮೇಲೆ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. ಅಂತರ್ಗತ ಮತ್ತು ಸಹಭಾಗಿತ್ವದ ಗ್ರಾಮೀಣಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ಕೆ ಮಾಡಬೇಕು ಎಂದು ಅವರು ತಿಳಿಸಿದರು.

ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಒತ್ತು ನೀಡಿದ ಸಚಿವರು, ಮುಖ ಗುರುತಿಸುವಿಕೆ (Face Authentication), ಜಿಯೋ-ಟ್ಯಾಗಿಂಗ್ ಮತ್ತು ಇತರ ತಾಂತ್ರಿಕ ಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಹೇಳಿದರು. ಈ ಯೋಜನೆಯಲ್ಲಿ ಯಾವುದೇ ಅಕ್ರಮ ಅಥವಾ ವಂಚನೆಗೆ ಆಸ್ಪದವಿಲ್ಲ ಮತ್ತು ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಗುಣಮಟ್ಟದ ಆಸ್ತಿಗಳ ಸೃಷ್ಟಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ರಾಜ್ಯಗಳಿಗೆ ನಿರಂತರ ಬೆಂಬಲ ನೀಡಲು ಸಚಿವಾಲಯವು, ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ, ಕ್ಷೇತ್ರ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಅವರು ತಿಳಿಸಿದರು. ಈ ಅಧಿಕಾರಿಗಳು ರಾಜ್ಯಗಳೊಂದಿಗೆ ನಿಯಮಿತ ಸಮನ್ವಯವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳುತ್ತಾರೆ.

ತಮ್ಮ ಭಾಷಣದಲ್ಲಿ, ಸಮಯೋಚಿತ ವೇತನ ಪಾವತಿಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಭಾರತ ಸರ್ಕಾರವು ಸಮಯಕ್ಕೆ ಸರಿಯಾಗಿ ಮೊದಲ ಕಂತನ್ನು ಬಿಡುಗಡೆ ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನು ಪೂರೈಸಿದ್ದರೆ, ಅರ್ಹ ಪ್ರತಿಯೊಬ್ಬ ಕಾರ್ಮಿಕರಿಗೂ ನಿಗದಿತ ಸಮಯದ ಮಿತಿಯೊಳಗೆ ವೇತನ ಸಿಗುವಂತೆ ರಾಜ್ಯಗಳು ತಮ್ಮ ಪಾಲಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ನಿರೀಕ್ಷಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ, ರಾಜ್ಯ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್, ವಿವಿಧ ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳ ಗ್ರಾಮೀಣಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್, ಜಂಟಿ ಕಾರ್ಯದರ್ಶಿ ಸುಶ್ರೀ ರೋಹಿಣಿ ಆರ್. ಭಾಜಿಭಾಕರೆ ಮತ್ತು ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.


*****


(रिलीज़ आईडी: 2281294) आगंतुक पटल : 80
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Assamese , Punjabi , Gujarati , Tamil , Telugu , Malayalam