ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮಬಂಗಾಳದ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಆಚರಣೆಗೆ ನೇತೃತ್ವ ವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಯೋಗ ನಮ್ಮೆಲ್ಲರನ್ನೂ ಬೆಸೆಯುತ್ತದೆ ಮತ್ತು ನಮ್ಮನ್ನು ಒಟ್ಟಿಗೆ ತರುತ್ತದೆ: ಪ್ರಧಾನಮಂತ್ರಿ

ಯೋಗವು ಜೀವನ ವಿಧಾನವಾದಾಗ, ಅದು ಮಾನವ ಐಕ್ಯತೆಯ ಭದ್ರ ಬುನಾದಿಯಾಗುತ್ತದೆ: ಪ್ರಧಾನಮಂತ್ರಿ

ಯೋಗವು ನಮ್ಮ ದೇಹವನ್ನು ಹೊಂದಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ; ಇದು ನಮ್ಮ ಶಕ್ತಿಯಮಟ್ಟವನ್ನು ಉನ್ನತ ಹಂತದಲ್ಲಿರಿಸುತ್ತದೆ: ಪ್ರಧಾನಮಂತ್ರಿ

ಯೋಗವು ನಮಗೆ ಸಮತೋಲಿತ ಜೀವನ ನಡೆಸುವ ಕಲೆ ಕಲಿಸುತ್ತದೆ: ಪ್ರಧಾನಮಂತ್ರಿ

ಯೋಗವು ಮಾನಸಿಕ ಯೋಗಕ್ಷೇಮದಿಂದ ದೈಹಿಕ ಯೋಗಕ್ಷೇಮಕ್ಕೆ ಮಾರ್ಗ ತೋರಿಸುತ್ತದೆ: ಪ್ರಧಾನಮಂತ್ರಿ

प्रविष्टि तिथि: 21 JUN 2026 9:28AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದೆ 12ನೇ ಅಂತಾರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಿದ್ದರು. ಶ್ರೀ ನರೇಂದ್ರ ಮೋದಿ ಸಾವಿರಾರು ಯೋಗ ಸಾಧಕರೊಂದಿಗೆ ಸಾಮಾನ್ಯ ಯೋಗ ಶಿಷ್ಟಾಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ತಿಳಿಸಿದ ಶ್ರೀ ನರೇಂದ್ರ ಮೋದಿ, ಜೂನ್ 21 ಅನ್ನು ವಿಶ್ವದ ಹಲವು ಭಾಗಗಳಲ್ಲಿ ವರ್ಷದ ಅತಿ ಉದ್ದದ ದಿನವೆಂದು ಗುರುತಿಸಲಾಗಿದೆ ಮತ್ತು ಯೋಗ ಮಾನವೀಯತೆಯ ಅತಿದೊಡ್ಡ ಸಾಮೂಹಿಕ ಆಚರಣೆಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದರು.

ಕೋಲ್ಕತ್ತಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಜಗತ್ತಿನ ನಾನಾ ಭಾಗಗಳಿಂದ ಯೋಗದ ಸ್ಪೂರ್ತಿದಾಯಕ ದೃಶ್ಯಗಳನ್ನು ವೀಕ್ಷಿಸಲಾಗುತ್ತಿದೆ ಎಂದು ಹೇಳಿದರು. ”ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಬಂಗಾಳ ಮತ್ತು ಈಶಾನ್ಯದಿಂದ ಸೌರಾಷ್ಟ್ರದ ಪಶ್ಚಿಮ ಪ್ರದೇಶದವರೆಗೆ, ಇಡೀ ರಾಷ್ಟ್ರವು ಯೋಗದ ಉತ್ಸಾಹದಿಂದ ಚೈತನ್ಯಗೊಂಡಂತೆ ಕಂಡುಬಂದಿತು. ಯೋಗದ ಏಕೀಕರಣ ಶಕ್ತಿಯನ್ನು ಪ್ರತಿಬಿಂಬಿಸುವ, ಯೋಗಕ್ಷೇಮ ಮತ್ತು ಸಾಮರಸ್ಯಕ್ಕೆ ಹಂಚಿಕೆಯ ಬದ್ಧತೆಯ ಮೂಲಕ ದೇಶ ಮತ್ತು ಜಗತ್ತು ಸಂಪರ್ಕಗೊಂಡಂತೆ ತೋರುತ್ತಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

“ಸ್ವಚ್ಛತಾ ಸೇ ಸ್ವಾಗತ್’’ ಉಪಕ್ರಮದಡಿಯಲ್ಲಿ ಕೋಲ್ಕತ್ತಾದ ಜನರು ಮಾಡಿದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಅವರನ್ನು ಶ್ಲಾಘಿಸಿದರು. ಸ್ವಚ್ಛತೆಯನ್ನು ಕಾಪಾಡುವಲ್ಲಿ ನಾಗರಿಕರು ಪ್ರದರ್ಶಿಸಿದ ಬದ್ಧತೆ, ಕಠಿಣ ಪರಿಶ್ರಮ ಮತ್ತು ನಾಗರಿಕ ಜವಾಬ್ದಾರಿ ದೇಶಾದ್ಯಂತ ಜನರಿಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ಯೋಗ ದಿನವನ್ನು ಆಚರಿಸುವುದು ವಿಶೇಷ ಮಹತ್ವದ್ದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.ಭಗವಾನ್ ರಾಮಕೃಷ್ಣ ಪರಮಹಂಸರು ವಾಸಿಸುತ್ತಿದ್ದ ಮತ್ತು ಬೋಧಿಸಿದ ಭೂಮಿ ಬಂಗಾಳ ಎಂದು ಅವರು ನೆನಪಿಸಿಕೊಂಡರು, ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಜ್ಞಾನ ಮತ್ತು ಯೋಗ ಸಂಪ್ರದಾಯಗಳನ್ನು ಜಗತ್ತಿಗೆ ಪರಿಚಯಿಸಿದ ಸ್ಥಳ ಮತ್ತು ಯೋಗ ಚಿಂತನೆ ಮತ್ತು ಅಭ್ಯಾಸದ ಪ್ರಗತಿಗೆ ಮಹರ್ಷಿ ಅರಬಿಂದೋ ಮತ್ತು ಲಹಿರಿ ಮಹಾಶಯರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಬೋಧನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ನಿಜವಾದ ಮಾನವ ಗುರುತು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಅರ್ಥಪೂರ್ಣ ಸಂಪರ್ಕಗಳ ಮೂಲಕ ರೂಪುಗೊಳ್ಳುತ್ತದೆ. ಇದು ಯೋಗದ ಹೃದಯಭಾಗದಲ್ಲಿರುವ ತತ್ವವಾಗಿದೆ ಎಂದು ಹೇಳಿದರು. ಇಡೀ ಜೀವನವು ಯೋಗ ಎಂಬ ಮಹರ್ಷಿ ಅರಬಿಂದೋ ಅವರ ನಂಬಿಕೆಯನ್ನು ಸಹ ಅವರು ಉಲ್ಲೇಖಿಸಿದರು. ಯೋಗವು ಒಬ್ಬರ ಸ್ವಭಾವದ ಭಾಗವಾದಾಗ, ಅದು ಮಾನವ ಏಕತೆಯ ಅಡಿಪಾಯವನ್ನು ಬಲಪಡಿಸುತ್ತದೆ ಎಂದರು. ”ಯೋಗವು ಕೇವಲ ದೈಹಿಕ ವ್ಯಾಯಾಮದ ಒಂದು ರೂಪವಲ್ಲ ಮತ್ತು ಯಾವುದೇ ನಿರ್ದಿಷ್ಟ ವಯಸ್ಸಿನ ಗುಂಪಿಗೆ ಸೀಮಿತವಾಗಿರಲು ಸಾಧ್ಯವಿಲ್ಲ. ಇದು ಮಾನವ ಜೀವನದ ಪ್ರತಿಯೊಂದು ಹಂತವನ್ನು ಶ್ರೀಮಂತಗೊಳಿಸುವ ಪ್ರಜ್ಞೆ, ಚೈತನ್ಯ ಮತ್ತು ಆಂತರಿಕ ಜ್ಞಾನದ ಮೂಲವಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ ”ಆರೋಗ್ಯಕರ ವಯಸ್ಸಿಗೆ ಯೋಗ’’ವನ್ನು ಉಲ್ಲೇಖಿಸಿ ಅವರು ಯೋಗವು ವಯಸ್ಸಾದಂತೆಯೂ ಆರೋಗ್ಯಕರ, ಕ್ರಿಯಾಶೀಲ ಮತ್ತು ಶಕ್ತಿಯುತವಾಗಿರಲು ಪಥವನ್ನು ಹಾಕಿಕೊಡುತ್ತದೆ ಎಂದು ಹೇಳಿದರು.

ಆರೋಗ್ಯಕರ ವೃದ್ಧಾಪ್ಯ ಎಂದರೆ ಮುಂದುವರಿದ ವರ್ಷಗಳು ಮಾನವ ಸಾಮರ್ಥ್ಯವನ್ನು ಕುಂಠಿತಗೊಳಿಸದಂತೆ ನೋಡಿಕೊಳ್ಳುವುದು ಎಂದು ಪ್ರಧಾನಮಂತ್ರಿ ಹೇಳಿದರು. ಯೋಗವು ಜೀವನದುದ್ದಕ್ಕೂ ನಿರಂತರ ಬೆಳವಣಿಗೆ ಮತ್ತು ಸ್ವಯಂ ಸುಧಾರಣೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು. ವ್ಯಕ್ತಿಗಳು ಇಪ್ಪತ್ತಕ್ಕಿಂತ ನಲವತ್ತರಲ್ಲಿ ಹೆಚ್ಚು ಹೊಂದಿಕೊಳ್ಳುವವರಾಗಿ, ಮೂವತ್ತಕ್ಕಿಂತ ಐವತ್ತರಲ್ಲಿ ಹೆಚ್ಚು ಶಕ್ತಿಯುತರಾಗಿ ಮತ್ತು ಐವತ್ತಕ್ಕಿಂತ ಎಪ್ಪತ್ತರಲ್ಲಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚು ಸ್ಥಿತಿಸ್ಥಾಪಕರಾಗಲು ಶ್ರಮಿಸಬೇಕು ಎಂಬ ಆಕಾಂಕ್ಷೆಯನ್ನು ಅವರು ವ್ಯಕ್ತಪಡಿಸಿದರು. ಯೋಗವು ಆರೋಗ್ಯವನ್ನು ಸುಧಾರಿಸಲು, ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಜೀವನಶೈಲಿಯ ಅಸ್ವಸ್ಥತೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದರು. "ಯೋಗದ ನಿಯಮಿತ ಅಭ್ಯಾಸವು ವ್ಯಕ್ತಿಗಳನ್ನು ತಮ್ಮ ದೇಹ ಮತ್ತು ಮನಸ್ಸಿನ ಜೀವಿತಾವಧಿಯ ಕಲಿಯುವವರನ್ನಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಸ್ವಯಂ ಅರಿವು ಉತ್ತಮ ಸ್ವಯಂ ನಿರ್ವಹಣೆ ಮತ್ತು ಆರೋಗ್ಯಕರ ಜೀವನ ವಿಧಾನಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

“ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’’ಎಂಬ ವಿಷಯವು ವೃದ್ಧರಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಎಲ್ಲಾ ವಯಸ್ಸಿನ ಜನರಿಗೆ ಪ್ರಸ್ತುತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆರೋಗ್ಯ, ಯೋಗಕ್ಷೇಮ ಮತ್ತು ವೈಯಕ್ತಿಕ ಬೆಳವಣಿಗೆಯ ಅನ್ವೇಷಣೆಯಲ್ಲಿ ಯೋಗವನ್ನು ಜೀವಮಾನದ ಒಡನಾಡಿಯನ್ನಾಗಿ ಮಾಡುತ್ತದೆ ಎಂದರು.

ಭಗವದ್ಗೀತೆಯ ಬೋಧನೆಗಳನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ”ಸಮತೋಲಿತ ಆಹಾರ ಪದ್ಧತಿಗಳು, ಸಮತೋಲಿತ ಮನರಂಜನೆ, ಸಮತೋಲಿತ ಕ್ರಿಯೆಗಳು ಮತ್ತು ಸಮತೋಲಿತ ನಿದ್ರೆ ಮತ್ತು ಎಚ್ಚರವು ಯೋಗವನ್ನು ದುಃಖವನ್ನು ನಿವಾರಿಸುವ ಸಾಧನವಾಗಲು ಅನುವು ಮಾಡಿಕೊಡುತ್ತದೆ’’ ಎಂದು ಹೇಳಿದರು. ಸಮತೋಲನವು ಯೋಗದ ಅಡಿಪಾಯವಾಗಿದೆ ಮತ್ತು ಅದು ತೃಪ್ತಿಕರ ಜೀವನಕ್ಕೆ ಅಷ್ಟೇ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು. ಯೋಗವು ಸಮತೋಲಿತ ರೀತಿಯಲ್ಲಿ ಬದುಕುವ ಕಲೆಯನ್ನು ಕಲಿಸುತ್ತದೆ. ಇದು ವ್ಯಕ್ತಿಗಳಿಗೆ ಏನು ಮಾಡಬೇಕು ಮತ್ತು ಏನನ್ನು ತಪ್ಪಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತದೆ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಯೋಗವು ಕೇವಲ ದೈಹಿಕ ಯೋಗಕ್ಷೇಮಕ್ಕೆ ಸೀಮಿತವಾಗಿಲ್ಲ, ಬದಲಿಗೆ, ಇದು ಮಾನಸಿಕ ಸ್ವಾಸ್ಥ್ಯದಿಂದ ದೈಹಿಕ ಸ್ವಾಸ್ಥ್ಯಕ್ಕೆ ಮಾರ್ಗವನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ”ಯುಕ್ತ ಚೇಷ್ಟಸ್ಯ ಕರ್ಮಸು’’ ಎಂಬ ಅಭಿವ್ಯಕ್ತಿಯನ್ನು ಉಲ್ಲೇಖಿಸಿ, ಯೋಗವು ವ್ಯಕ್ತಿಗಳು ಯಾವುದು ಸರಿ ಮತ್ತು ಯಾವುದು ಅಲ್ಲ ಎಂಬುದರ ನಡುವೆ ವ್ಯತ್ಯಾಸವನ್ನು ಗುರುತಿಸುವ ಬುದ್ಧಿವಂತಿಕೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. “ಅಂತಹ ಅರಿವು ಆಂತರಿಕ ಶಾಂತಿಯ ಮೂಲವಾಗುತ್ತದೆ ಮತ್ತು ಜಾಗತಿಕ ಸಾಮರಸ್ಯದತ್ತ ಹಾದಿಗಳನ್ನು ಸೃಷ್ಟಿಸುತ್ತದೆ. ಯೋಗವು ಇನ್ನು ಮುಂದೆ ವೈಯಕ್ತಿಕ ಜೀವನಶೈಲಿಯ ಪದ್ಧತಿಯಾಗಿ ಮಾತ್ರ ಪ್ರಸ್ತುತವಾಗಿಲ್ಲ; ಜಗತ್ತಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಇದು ಅಗತ್ಯವಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.

ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರತಿ ವರ್ಷ ಲಕ್ಷಾಂತರ ಜನರು ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ದಿನವು ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಬಗ್ಗೆ ಸಾಮೂಹಿಕ ಬದ್ಧತೆಯನ್ನು ನವೀಕರಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಯೋಗವು ಒಂದೇ ದಿನ ಅಥವಾ ಒಂದೇ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ತಮ್ಮ ಜೀವನ, ಅವರ ಕುಟುಂಬಗಳು ಮತ್ತು ಭವಿಷ್ಯದ ಪೀಳಿಗೆಯ ಜೀವನದ ಶಾಶ್ವತ ಭಾಗವಾಗುವಂತೆ ನೋಡಿಕೊಳ್ಳಲು ಅವರು ಜನತೆಗೆ ಕರೆ ನೀಡಿದರು.

ಈ ವರ್ಷ “ಯೋಗ 365’’ ಉಪಕ್ರಮದ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. “ಈ ಉಪಕ್ರಮದ ಅಡಿಯಲ್ಲಿ 100 ದಿನಗಳ ಆನ್‌ಲೈನ್ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮತ್ತು ಇದು ಅಭೂತಪೂರ್ವ ಸಾರ್ವಜನಿಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. 130 ದೇಶಗಳಿಂದ ಮೂರು ದಶಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಇದು ಯೋಗದ ಹೆಚ್ಚುತ್ತಿರುವ ಜಾಗತಿಕ ಸ್ವೀಕಾರ ಮತ್ತು ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿ, ಆರೋಗ್ಯಕರ ಸಮಾಜವು ಬಲವಾದ, ಹೆಚ್ಚು ಸಮೃದ್ಧ ಮತ್ತು ಹೆಚ್ಚು ಆತ್ಮವಿಶ್ವಾಸದ ರಾಷ್ಟ್ರಕ್ಕೆ ಅಡಿಪಾಯ ಹಾಕುತ್ತದೆ ಎಂದು ಹೇಳಿದರು. ಎಲ್ಲರ ಯೋಗಕ್ಷೇಮಕ್ಕಾಗಿ ಹಾರೈಸುತ್ತಾ, ಅವರು ”ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ’’ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ) ಎಂಬ ಪ್ರಾಚೀನ ಪ್ರಾರ್ಥನೆಯನ್ನು ಪ್ರಾರ್ಥಿಸಿದರು.

 

*****

 


(रिलीज़ आईडी: 2276543) आगंतुक पटल : 9
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Malayalam