ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ “ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ ನಿರ್ಮಾಣ’’ ಕುರಿತ ಗೋಷ್ಠಿಯನ್ನುದ್ದೇಶಿ ಭಾಷಣ ಮಾಡಿದ ಪ್ರಧಾನಮಂತ್ರಿ

प्रविष्टि तिथि: 16 JUN 2026 10:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ “ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ ನಿರ್ಮಾಣ’’ ಕುರಿತಾದ ಔಟ್ರೀಚ್ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಇಂಧನ, ಆಹಾರ, ಆರೋಗ್ಯ, ಸೈಬರ್ ಮತ್ತು ಆರ್ಥಿಕ ಭದ್ರತೆ ಬೆಸೆದುಕೊಂಡಿರುವ ಅಂತರ ಸಂಪರ್ಕಿತ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ನಿರ್ಮಿಸುವುದು ಮಾನವೀಯತೆಯ ಪ್ರಗತಿ ಮತ್ತು ಸಮೃದ್ಧಿಗೆ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಅನಿಶ್ಚಿತತೆಯ ಜಗತ್ತಿನಲ್ಲಿ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸಂಕುಚಿತ ಹಿತಾಸಕ್ತಿಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಇದು ಅಂತಾರಾಷ್ಟ್ರೀಯ ರಂಗದಲ್ಲಿ ನಂಬಿಕೆಯ ಕೊರತೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳನ್ನು ಉಲ್ಲೇಖಿಸಿದ ಅವರು, ಜಾಗತಿಕ ಪಾಲುದಾರಿಕೆಗಳಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ನಿರ್ಮಿಸುವತ್ತ ಗಮನಹರಿಸಲು ರಾಷ್ಟ್ರಗಳಿಗೆ ಕರೆ ನೀಡಿದರು.

ಅಂತಾರಾಷ್ಟ್ರೀಯ ಸಹಕಾರ ಕುರಿತಂತೆ ಭಾರತದ ಧೋರಣೆಯನ್ನು ಹಂಚಿಕೊಂಡ ಪ್ರಧಾನಿ ಅವರು, ಭಾರತವು ಸದಾ “ಮಾನವೀಯತೆ ಮೊದಲು’’ ಎಂಬ ತತ್ವವನ್ನು ಅನುಸರಿಸಿದೆ ಮತ್ತು ಆ ಚಿಂತನೆಯು ಅದರ ಪ್ರಯತ್ನಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದರು. ಅದಕ್ಕಾಗಿ ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಮಿಷನ್ ಲೈಫ್ ಅಥವಾ ಏಕ್ ಪೆಡ್ ಮಾ ಕೆ ನಾಮ್ (ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ) ಅಭಿಯಾನದ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈ ಅಂತರ್ಗತ ವಿಧಾನವು ವಿಶ್ವದ ವಿವಿಧ ಭಾಗಗಳನ್ನು ಅಪ್ಪಳಿಸಿದ ನೈಸರ್ಗಿಕ ವಿಕೋಪಗಳು - ಅದು ಶ್ರೀಲಂಕಾದಲ್ಲಿ ಚಂಡಮಾರುತ, ಅಫ್ಘಾನಿಸ್ತಾನದಲ್ಲಿ ಭೂಕಂಪ, ಮೊಜಾಂಬಿಕ್‌ನಲ್ಲಿ ಪ್ರವಾಹ ಅಥವಾ ಜಮೈಕಾದಲ್ಲಿ ಚಂಡಮಾರುತ - ಬಂದಾಗ ಭಾರತವು ಮೊದಲು ಪ್ರತಿಕ್ರಿಯಿಸುವಂತೆ ಮಾಡಿದೆ ಎಂದು ಹೇಳಿದರು.

ಭಾರತದ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ”ಸರ್ವ್ ಜನ್ ಹಿತಯೇ, ಸರ್ವ್ ಜನ್ ಸುಖಯೇ’’ (ಸರ್ವರಿಗೂ ಕಲ್ಯಾಣ ಮತ್ತು ಸರ್ವರಿಗೂ ಸಂತೋಷ) ಎಂಬ ಅದರ ಮಂತ್ರವು ಆರ್ಥಿಕ ಸೇರ್ಪಡೆ, ಆರೋಗ್ಯ ಭದ್ರತೆ, ಡಿಜಿಟಲ್ ಗುರುತು, ತಂತ್ರಜ್ಞಾನ ನೇತೃತ್ವದ ಜನರ ಸಬಲೀಕರಣ ಮತ್ತು ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಬೆಳೆಸುವಲ್ಲಿ ಗಮನಾರ್ಹ ಫಲಿತಾಂಶಗಳಿಗೆ ಕಾರಣವಾಗಿದೆ ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ಪಾಲುದಾರಿಕೆಗಳು ದಾನಿ-ಸ್ವೀಕರಿಸುವವರ ಮಾದರಿಯನ್ನು ಮೀರಿ ಒಗ್ಗಟ್ಟು ಮತ್ತು ಸಮಾನ ಮಾಲೀಕತ್ವದತ್ತ ಸಾಗಬೇಕು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅಂತಾರಾಷ್ಟ್ರೀಯ ಕಾನೂನಿನ ಗೌರವದ ಕೊರತೆಯು ಅಂತಾರಾಷ್ಟ್ರೀಯ ಒಗ್ಗಟ್ಟನ್ನು ನಿರ್ಮಿಸಲು ದೊಡ್ಡ ಅಡಚಣೆಯಾಗಿದೆ ಮತ್ತು ಅದನ್ನು ಆದ್ಯತೆಯಾಗಿ ಪರಿಹರಿಸಬೇಕಾಗಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಪಾಲುದಾರಿಕೆಗಾಗಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಒತ್ತಿ ಹೇಳಿದರು.

 

*****


(रिलीज़ आईडी: 2273963) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Telugu , Malayalam