ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಬಿ ಎಸ್ ಎಫ್ ಪದಕ ಪ್ರದಾನ ಸಮಾರಂಭ ಮತ್ತು ರುಸ್ತಂಜಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು
ಬಿ ಎಸ್ ಎಫ್ ಸಿಬ್ಬಂದಿಗೆ ನೀಡಲಾದ ಗೌರವವು ರಾಷ್ಟ್ರದ ಮೇಲಿನ ಅಚಲ ನಿಷ್ಠೆ, ಕರ್ತವ್ಯದ ಮೇಲಿನ ಸಮರ್ಪಣಾ ಮನೋಭಾವ ಮತ್ತು ಸಂಪೂರ್ಣ ಬದ್ಧತೆಯ ಸಂಕೇತವಾಗಿದೆ
ಮೋದಿ ಸರ್ಕಾರವು ಮುಂದಿನ ಒಂದು ವರ್ಷದಲ್ಲಿ ಡ್ರೋನ್ ಗಳು, ರಾಡಾರ್ ಗಳು, ಆಧುನಿಕ ಕ್ಯಾಮೆರಾಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡ ‘ಸ್ಮಾರ್ಟ್ ಬಾರ್ಡರ್ ಪ್ರಾಜೆಕ್ಟ್’ ಅನ್ನು ಪ್ರಾರಂಭಿಸುವ ಮೂಲಕ ಅಭೇದ್ಯವಾದ ಗಡಿ ಜಾಲವನ್ನು ಸ್ಥಾಪಿಸಲಿದೆ
ತ್ರಿಪುರಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ನುಸುಳುವಿಕೆಯನ್ನು ತಡೆಯಲು ಬದ್ಧವಾಗಿದ್ದು, ಬಿ ಎಸ್ ಎಫ್ ಅವುಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು
ನುಸುಳುವಿಕೆಯನ್ನು ತಡೆಯಲು ಜಿಲ್ಲಾಡಳಿತಗಳು, ಪೊಲೀಸ್ ಠಾಣೆಗಳು, ಪಂಚಾಯತ್ ಗಳು ಮತ್ತು ಪಟವಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ತ್ರಿಪುರಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಬಿ ಎಸ್ಎ ಫ್ ಗೆ ಗೃಹ ಸಚಿವರು ನಿರ್ದೇಶನ ನೀಡಿದರು
ಗಡಿ ಭದ್ರತೆಯು ಕೇವಲ ಒಂದು ಪ್ರತ್ಯೇಕ ಕರ್ತವ್ಯವಲ್ಲ; ಇದು ಪ್ರಾದೇಶಿಕ ಜವಾಬ್ದಾರಿಯಾಗಿದೆ
ಆಂತರಿಕ ಭದ್ರತೆಗಾಗಿ ಮೋದಿ ಸರ್ಕಾರದ ದೃಷ್ಟಿಕೋನವು ಸಮಸ್ಯೆಗಳನ್ನು ಅವುಗಳ ಬೇರುಗಳಿಂದಲೇ ನಿರ್ಮೂಲನೆ ಮಾಡುವುದಾಗಿದೆ — ನಕ್ಸಲಿಸಂ ನಂತರ, ಈಗ ನುಸುಳುವಿಕೆಯನ್ನು ನಿರ್ಮೂಲನೆ ಮಾಡಲಾಗುವುದು
ಶ್ರೀ ಅಮಿತ್ ಶಾ ಅವರು ಸೈಬರ್ ಬೆದರಿಕೆಗಳು, ಹೈಬ್ರಿಡ್ ಯುದ್ಧ ಮತ್ತು ಡ್ರೋನ್ ಯುದ್ಧಗಳನ್ನು ಎದುರಿಸಲು ಹೊಸ ಗಡಿ ಭದ್ರತಾ ಕಾರ್ಯತಂತ್ರವನ್ನು ಒತ್ತಿ ಹೇಳಿದರು
ಗಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಭದ್ರತಾ ಜಾಲವನ್ನು ಸ್ಥಾಪಿಸಲು ಮೋದಿ ಸರ್ಕಾರವು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ
ಸರ್ಕಾರಗಳು ಕೇವಲ ಮಾತುಕತೆಗಳಲ್ಲಿ ತೊಡಗಿದ್ದಾಗ, ಭಯೋತ್ಪಾದಕ ದಾಳಿಗಳು ಮತ್ತು ನಕ್ಸಲ್ ಗುಂಪುಗಳು ಯಾವುದೇ ಭಯವಿಲ್ಲದೆ ಸಾಮೂಹಿಕ ಹತ್ಯೆಗಳನ್ನು ನಡೆಸುತ್ತಿದ್ದ ಯುಗ ಮುಗಿದಿದೆ, ಇದು ಹೊಸ ರಕ್ಷಣಾ ಸಿದ್ಧಾಂತ — ಮೋದಿ ಸಿದ್ಧಾಂತ
ಮೋದಿ ಅವರು ಉನ್ನತಾಧಿಕಾರದ ಜನಸಂಖ್ಯಾ ಮಿಷನ್ ರಚನೆಯನ್ನು ಘೋಷಿಸಿದ್ದು, ಸಮಿತಿ ರಚನೆಯಾದ ತಕ್ಷಣ ಅದರ ಕೆಲಸ ಪ್ರಾರಂಭವಾಗಲಿದೆ
ಭಾರತದಲ್ಲಿ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗೆ ನಾವು ಅವಕಾಶ ನೀಡುವುದಿಲ್ಲ ಮತ್ತು ಪ್ರತಿಯೊಬ್ಬ ನುಸುಳುಕೋರನನ್ನು ಗುರುತಿಸಿ ಹೊರಹಾಕಲಾಗುವುದು
ಮುಂದಿನ ಎರಡು ತಿಂಗಳೊಳಗೆ, ಮೋದಿ ಸರ್ಕಾರವು ಎಲ್ಲಾ ಸಿಎಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರಮುಖ ಕಾರ್ಯಕ್ರಮವೊಂದನ್ನು ಪರಿಚಯಿಸಲಿದೆ
ಪ್ರಕಟಣಾ ದಿನಾಂಕ:
22 MAY 2026 5:26PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಪದಕ ಪ್ರದಾನ ಸಮಾರಂಭ ಮತ್ತು ರುಸ್ತಂಜಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗುಪ್ತಚರ ದಳದ (ಐಬಿ) ನಿರ್ದೇಶಕರು, ಕಾರ್ಯದರ್ಶಿ (ಗಡಿ ನಿರ್ವಹಣೆ) ಮತ್ತು ಬಿ ಎಸ್ ಎಫ್ ನ ಮಹಾನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಈ ಪದಕ ಪ್ರದಾನ ಸಮಾರಂಭವು ಬಿ ಎಸ್ ಎಫ್ ನ ಅಚಲ ಸಮರ್ಪಣೆ, ಕರ್ತವ್ಯದ ಮೇಲಿನ ಬದ್ಧತೆ ಮತ್ತು ರಾಷ್ಟ್ರದ ಮೇಲಿನ ಸಂಪೂರ್ಣ ಶ್ರದ್ಧೆಯನ್ನು ಸಂಕೇತಿಸುತ್ತದೆ ಎಂದು ಹೇಳಿದರು. 1965ರ ಯುದ್ಧದ ನಂತರ ಗಡಿ ಭದ್ರತೆಯಲ್ಲಿದ್ದ ಲೋಪದೋಷಗಳ ವಿವರವಾದ ಮೌಲ್ಯಮಾಪನವು, ಶಾಂತಿಕಾಲದಲ್ಲೂ ಭಾರತದ ಗಡಿಗಳನ್ನು ರಕ್ಷಿಸಲು ಒಂದು ಪ್ರತ್ಯೇಕ ಪಡೆಯ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳುವಂತೆ ಮಾಡಿತು ಎಂದು ಅವರು ಹೇಳಿದರು. ಆ ಸಮಯದಲ್ಲಿ ಪದ್ಮವಿಭೂಷಣ ಕೆ.ಎಫ್. ರುಸ್ತಂಜಿ ಅವರ ನೇತೃತ್ವದಲ್ಲಿ ಬಿ ಎಸ್ ಎಫ್ ಅನ್ನು ಸ್ಥಾಪಿಸಲಾಯಿತು ಮತ್ತು ಅಂದಿನಿಂದ ಅದು ದೇಶದ ಗಡಿಗಳ ಭದ್ರತೆಯನ್ನು ಖಚಿತಪಡಿಸಿದೆ. ಶ್ರೀ ರುಸ್ತಂಜಿ ಅವರು ಹಾಕಿಕೊಟ್ಟ ಬಲವಾದ ಅಡಿಪಾಯವು, ಬಿ ಎಸ್ ಎಫ್ ರಾಷ್ಟ್ರೀಯ ಭದ್ರತೆಯ ಕ್ಷೇತ್ರದಲ್ಲಿ ಒಂದು ಮಹಾನ್ ಸಂಸ್ಥೆಯನ್ನು ನಿರ್ಮಿಸಲು ಶಕ್ತಗೊಳಿಸಿದೆ ಮತ್ತು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
ಇಂದು ಗಡಿ ಭದ್ರತೆಯ ಕ್ಷೇತ್ರದಲ್ಲಿ ಹಲವು ಹೊಸ ಸವಾಲುಗಳು ಎದುರಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಾನೂನುಬಾಹಿರ ನುಸುಳುವಿಕೆ, ಮಾದಕ ದ್ರವ್ಯಗಳ ಕಳ್ಳಸಾಗಣೆ, ಜಾನುವಾರು ಕಳ್ಳಸಾಗಣೆ, ನಕಲಿ ನೋಟುಗಳು, ಸಂಘಟಿತ ಅಪರಾಧ ಹಾಗೂ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ಬಿ ಎಸ್ ಎಫ್ ಎದುರಿಸುತ್ತಿರುವ ಹಲವಾರು ಸವಾಲುಗಳಲ್ಲಿ ಸೇರಿವೆ. ಆದಾಗ್ಯೂ, ಬಿ ಎಸ್ ಎಫ್ ಈ ಸವಾಲುಗಳನ್ನು ಎದುರಿಸಲು ನಿರಂತರವಾಗಿ ಯೋಜನಾಬದ್ಧ ಪ್ರಯತ್ನಗಳನ್ನು ಮಾಡಿದೆ. ಬಿ ಎಸ್ ಎಫ್ ತನ್ನ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ಮತ್ತು ಈ ಎಲ್ಲಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ದೇಶವನ್ನು ರಕ್ಷಿಸಿದೆ ಎಂದು ಶ್ರೀ ಶಾ ಹೇಳಿದರು. ಮುಂಬರುವ ದಿನಗಳಲ್ಲಿ ಪಡೆಯ ಪಾತ್ರವು ಇನ್ನಷ್ಟು ಸಂಘಟಿತ ಮತ್ತು ಸಮಗ್ರವಾಗಬೇಕಿದೆ ಎಂದು ಅವರು ಹೇಳಿದರು.

ಗಡಿ ಭದ್ರತೆಯು ಇನ್ನು ಮುಂದೆ ಕೇವಲ ಸಾಂಪ್ರದಾಯಿಕ ವಿಧಾನಗಳನ್ನೇ ಅವಲಂಬಿಸಿರಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಭದ್ರತಾ ಜಾಲವನ್ನು ಬಲಪಡಿಸಲು ರಾಜ್ಯ ಪೊಲೀಸ್, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್), ಇತರ ಸಶಸ್ತ್ರ ಪಡೆಗಳು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಸಿ ಬಿ), ಗುಪ್ತಚರ ಸಂಸ್ಥೆಗಳು ಮತ್ತು ರಾಜ್ಯ ಆಡಳಿತಗಳ ನಡುವೆ ನಿಕಟ ಸಮನ್ವಯದ ಅಗತ್ಯವಿರುತ್ತದೆ. ಗಡಿ ಭದ್ರತೆಯನ್ನು ಇನ್ನು ಮುಂದೆ ಕೇವಲ ಒಂದು ಪ್ರತ್ಯೇಕ ಜವಾಬ್ದಾರಿಯಾಗಿ ನೋಡದೆ, ವಿಶಾಲವಾದ ಪ್ರಾದೇಶಿಕ ಜವಾಬ್ದಾರಿಯಾಗಿ ನೋಡಬೇಕು ಎಂದು ಅವರು ಹೇಳಿದರು. ಗಡಿಯಾಚೆಗಿನ ನುಸುಳುವಿಕೆಯಿಂದ ಉಂಟಾಗುವ ಜನಸಂಖ್ಯಾ ಬದಲಾವಣೆಗಳ ವಿರುದ್ಧ ಮತ್ತು ಮಾದಕ ದ್ರವ್ಯಗಳು ಹಾಗೂ ನಕಲಿ ನೋಟುಗಳ ಮೂಲಕ ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಶ್ರೀ ಶಾ ಹೇಳಿದರು. ಸೈಬರ್ ಬೆದರಿಕೆಗಳು, ಹೈಬ್ರಿಡ್ ಯುದ್ಧ ಮತ್ತು ಡ್ರೋನ್ ಆಧಾರಿತ ಸವಾಲುಗಳನ್ನು ಎದುರಿಸಲು ಭಾರತವು ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಿಯಾಚಿನ್ ಮತ್ತು ಕಾಶ್ಮೀರದ ಹಿಮಭರಿತ ಪರ್ವತಗಳು, ಕುಪ್ವಾರ, ಕೇರನ್ ಮತ್ತು ಉರಿಯಂತಹ ಕಠಿಣ ಪ್ರದೇಶಗಳು, ರಾಜಸ್ಥಾನದ ಮರುಭೂಮಿಗಳು, ಕಚ್ ರಣ್, ಸರ್ ಕ್ರೀಕ್ ನ ಜೌಗು ಪ್ರದೇಶಗಳು, ಸುಂದರಬನದ ದಟ್ಟ ಕಾಡುಗಳು, ತ್ರಿಪುರಾ, ಮೇಘಾಲಯ ಮತ್ತು ಮಿಜೋರಾಂನ ಕಠಿಣ ಪೂರ್ವ ಗಡಿಗಳು ಮತ್ತು ಬ್ರಹ್ಮಪುತ್ರಕ್ಕೆ ಸಂಪರ್ಕ ಹೊಂದಿದ ಸೂಕ್ಷ್ಮ ನದಿ ತೀರದ ಪ್ರದೇಶಗಳು ಸೇರಿದಂತೆ ದೇಶದ ಕೆಲವು ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಗಡಿ ಭದ್ರತಾ ಪಡೆಯು ದೃಢವಾಗಿ ನಿಂತಿದೆ ಎಂದು ಹೇಳಿದರು. ಇದೇ ಕಾರಣಕ್ಕಾಗಿ 1965 ರಲ್ಲಿ ಕೇವಲ 25 ಬೆಟಾಲಿಯನ್ ಗಳು ಮತ್ತು ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಾರಂಭವಾದ ಬಿ ಎಸ್ ಎಫ್, ಇಂದು 2.70 ಲಕ್ಷ ಸಿಬ್ಬಂದಿ ಬಲದೊಂದಿಗೆ ವಿಶ್ವದ ಅತಿ ದೊಡ್ಡ ಗಡಿ ಕಾವಲು ಪಡೆಯಾಗಿ ಬೆಳೆದಿದೆ ಎಂದು ಅವರು ಹೇಳಿದರು.
2014 ರಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ರಕ್ಷಣೆ ಮತ್ತು ಗಡಿ ಭದ್ರತಾ ನೀತಿಗಳು ಬದಲಾವಣೆಗೆ ಒಳಗಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉರಿ, ಪುಲ್ವಾಮಾ ಮತ್ತು ಪಹಲ್ಗಾಮ್ ನಂತಹ ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಪಾಕಿಸ್ತಾನದ ಒಳಗಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸರ್ಜಿಕಲ್ ಸ್ಟ್ರೈಕ್, ವೈಮಾನಿಕ ದಾಳಿಗಳು ಮತ್ತು ಆಪರೇಷನ್ ಸಿಂಧೂರ್ ಮೂಲಕ ಭಾರತವು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದೆ ಎಂದು ಹೇಳಿದರು. ಭಯೋತ್ಪಾದಕ ದಾಳಿಗಳಿಗೆ ಮಾತುಕತೆಯ ಮೂಲಕ ಪ್ರತಿಕ್ರಿಯಿಸುವ ಯುಗ ಮುಗಿದಿದೆ ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಭಾರತವು ತನ್ನ ಭದ್ರತಾ ಚೌಕಟ್ಟನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಇದನ್ನು ಅವರು ಹೊಸ ರಕ್ಷಣಾ ಸಿದ್ಧಾಂತ ಎಂದು ಬಣ್ಣಿಸಿದರು, ಇದರಲ್ಲಿ ಬಿ ಎಸ್ ಎಫ್ ಪ್ರಮುಖ ಪಾತ್ರ ವಹಿಸಿದೆ ಎಂದರು.
ದೇಶದ ಗಡಿಯನ್ನು 'ಸ್ಮಾರ್ಟ್ ಬಾರ್ಡರ್' ಆಗಿ ಪರಿವರ್ತಿಸಲು ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯವು ತಾಂತ್ರಿಕ ಬೆಂಬಲವನ್ನು ನೀಡಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ಮಾರ್ಟ್ ಬಾರ್ಡರ್ ಪರಿಕಲ್ಪನೆಯಡಿಯಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಮುಂದಿನ ಒಂದು ವರ್ಷದೊಳಗೆ ಅಭೇದ್ಯವಾದ ಗಡಿ ಭದ್ರತಾ ಜಾಲವನ್ನು ರಚಿಸುವ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಗೃಹ ಸಚಿವಾಲಯವು ಶೀಘ್ರದಲ್ಲೇ ಡ್ರೋನ್ ಗಳು, ರಾಡಾರ್ ಗಳು, ಆಧುನಿಕ ಕ್ಯಾಮೆರಾಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡ ʼಸ್ಮಾರ್ಟ್ ಬಾರ್ಡರ್ ಪ್ರಾಜೆಕ್ಟ್ʼ ಅನ್ನು ಪರಿಚಯಿಸಲಿದೆ. ಈ ಉಪಕ್ರಮ ಪ್ರಾರಂಭವಾದ ನಂತರ, ಗಡಿ ಭದ್ರತಾ ಪಡೆಯ ಕೆಲಸವು ಗಣನೀಯವಾಗಿ ಸುಲಭ ಮತ್ತು ಶಕ್ತಿಶಾಲಿಯಾಗಲಿದೆ ಎಂದು ಗೃಹ ಸಚಿವರು ಹೇಳಿದರು.
ಗಡಿ ಭದ್ರತಾ ಪಡೆಯ ಸ್ಥಾಪನೆಯ 60ನೇ ವರ್ಷದಲ್ಲಿ, ಸರ್ಕಾರವು ಸ್ಮಾರ್ಟ್ ಬಾರ್ಡರ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲಿದೆ ಮತ್ತು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದೊಂದಿಗಿನ ಸಂಪೂರ್ಣ ಗಡಿಗಳನ್ನು ಅಭೇದ್ಯವಾಗಿಸಲಿದೆ, ಆ ಮೂಲಕ ಬಿ ಎಸ್ ಎಫ್ ಗೆ ಗಮನಾರ್ಹ ತಾಂತ್ರಿಕ ಬೆಂಬಲವನ್ನು ನೀಡಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಧೈರ್ಯ, ಶೌರ್ಯ, ಸಮರ್ಪಣೆ ಮತ್ತು ದೇಶಭಕ್ತಿಯೊಂದಿಗೆ, ಪಡೆಗೆ ಬಲವಾದ ತಾಂತ್ರಿಕ ಬೆಂಬಲವನ್ನೂ ಒದಗಿಸಲಾಗುವುದು, ಇದು ಎರಡೂ ಗಡಿಗಳ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ನುಸುಳುವಿಕೆಯನ್ನು ತಡೆಯುವುದು ಮಾತ್ರವಲ್ಲದೆ, ದೇಶದಿಂದ ಪ್ರತಿಯೊಬ್ಬ ನುಸುಳುಕೋರನನ್ನು ಗುರುತಿಸಿ ಹೊರಹಾಕಲು ನಿರ್ಧರಿಸಿದೆ ಮತ್ತು ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ನುಸುಳುವಿಕೆಯ ಮೂಲಕ ಜನಸಂಖ್ಯೆಯನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ಪಿತೂರಿಗಳನ್ನು ಬಿ ಎಸ್ ಎಫ್ ತಡೆಯಬೇಕು ಎಂದು ಅವರು ಹೇಳಿದರು. ತ್ರಿಪುರಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ಈಗ ಕಾನೂನುಬಾಹಿರ ನುಸುಳುವಿಕೆಯನ್ನು ಸ್ಪಷ್ಟವಾಗಿ ವಿರೋಧಿಸುವ ನೀತಿಗಳನ್ನು ಅನುಸರಿಸುತ್ತಿವೆ ಎಂದು ಶ್ರೀ ಶಾ ಹೇಳಿದರು. ಗಡಿಗಳನ್ನು ರಕ್ಷಿಸುವುದು ಮಾತ್ರವಲ್ಲದೆ ಗ್ರಾಮ ಮಟ್ಟದ ಅಧಿಕಾರಿಗಳು, ಪೊಲೀಸ್ ಠಾಣೆಗಳು, ಜಿಲ್ಲಾಧಿಕಾರಿಗಳು, ಡಿಡಿಒಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳುವುದು ಬಿ ಎಸ್ ಎಫ್ ನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಹೊಸ ನುಸುಳುಕೋರರು, ಅವರ ಪ್ರವೇಶದ ಮಾರ್ಗಗಳು ಮತ್ತು ಜಾನುವಾರು ಕಳ್ಳಸಾಗಣೆ ಸೇರಿದಂತೆ ಕಳ್ಳಸಾಗಣೆಯಲ್ಲಿ ತೊಡಗಿರುವ ಜಾಲಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಅಂತಹ ಎಲ್ಲಾ ಮಾರ್ಗಗಳನ್ನು ವ್ಯವಸ್ಥಿತವಾಗಿ ಗುರುತಿಸಿ ಮುಚ್ಚಬೇಕು ಎಂದು ಅವರು ಹೇಳಿದರು. ನುಸುಳುಕೋರರನ್ನು ತಡೆಯಲು ಮತ್ತು ತೆಗೆದುಹಾಕಲು ಒಂದು ಸುಸಂಘಟಿತ ವ್ಯವಸ್ಥೆಯನ್ನು ನಿರ್ಮಿಸಲು ಲಭ್ಯವಿರುವ ಮಾಹಿತಿಯನ್ನು ಬಳಸಿಕೊಳ್ಳಬೇಕು. ಹಲವು ವರ್ಷಗಳಿಂದ ಅವಿರತವಾಗಿ ಮುಂದುವರಿದಿರುವ ನುಸುಳುವಿಕೆಯನ್ನು ನಿರ್ಣಾಯಕವಾಗಿ ತಡೆಯುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಸರ್ಕಾರದ ದೃಢವಾದ ಪ್ರಯತ್ನಗಳಿಂದಾಗಿ, ಐದು ದಶಕಗಳಷ್ಟು ಹಳೆಯದಾದ ನಕ್ಸಲಿಸಂ ಸಮಸ್ಯೆಯನ್ನು ಈಗ ಭಾರತದಿಂದ ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭದ್ರತಾ ನೀತಿಯು ಕೇವಲ ಸಮಸ್ಯೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರಬಾರದು, ಬದಲಿಗೆ ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದರು. ನುಸುಳುವಿಕೆಯನ್ನು ಎದುರಿಸುವಲ್ಲಿ ಬಿ ಎಸ್ ಎಫ್ ಇದೇ ರೀತಿಯ ದೃಢವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ವೈಬ್ರೆಂಟ್ ವಿಲೇಜಸ್-1 ಮತ್ತು ವೈಬ್ರೆಂಟ್ ವಿಲೇಜಸ್-2 ಎಂಬುದು ಗಡಿ ಭದ್ರತಾ ಪಡೆಯ ಸಹಕಾರದೊಂದಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಿ ಎಸ್ ಎಫ್ ನ ಅಧಿಕಾರ ವ್ಯಾಪ್ತಿಯನ್ನು 15 ಕಿಲೋಮೀಟರ್ ನಿಂದ 50 ಕಿಲೋಮೀಟರ್ ಗೆ ವಿಸ್ತರಿಸಲಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಭೂಮಿ ಹಂಚಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಸಹ ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉನ್ನತಾಧಿಕಾರದ ಜನಸಂಖ್ಯಾ ಮಿಷನ್ ಅನ್ನು ಘೋಷಿಸಿದ್ದಾರೆ ಮತ್ತು ಅದರ ಸಮಿತಿ ರಚನೆಯಾದ ತಕ್ಷಣ ಕೆಲಸ ಪ್ರಾರಂಭವಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ಗಡಿಗಳಲ್ಲಿ ಬಲವಾದ ಭದ್ರತಾ ಜಾಲವನ್ನು ಸ್ಥಾಪಿಸಬೇಕಾಗಿದೆ, ಇದಕ್ಕಾಗಿ ದೊಡ್ಡ ಅಭಿಯಾನವನ್ನೂ ಪ್ರಾರಂಭಿಸಬೇಕಾಗಿದೆ ಎಂದು ಅವರು ಹೇಳಿದರು. ಬಿ ಎಸ್ ಎಫ್ ನ 60ನೇ ವರ್ಷವು ಸ್ಮಾರ್ಟ್ ಬಾರ್ಡರ್ ನಿರ್ಮಿಸಲು ಮತ್ತು ಬಿ ಎಸ್ ಎಫ್ ಸಿಬ್ಬಂದಿಯ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ವರ್ಷವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂದಿನ ಎರಡು ತಿಂಗಳೊಳಗೆ, ಶ್ರೀ ನರೇಂದ್ರ ಮೋದಿ ಸರ್ಕಾರವು ಬಿ ಎಸ್ ಎಫ್ ಸಿಬ್ಬಂದಿ ಮತ್ತು ಎಲ್ಲಾ ಸಿಎಪಿಎಫ್ ಜವಾನರ ಕಲ್ಯಾಣಕ್ಕಾಗಿ ಪ್ರಮುಖ ಕಾರ್ಯಕ್ರಮವೊಂದನ್ನು ಪರಿಚಯಿಸಲಿದೆ ಎಂದು ಶ್ರೀ ಶಾ ಹೇಳಿದರು.
ಮಾದಕ ದ್ರವ್ಯಗಳ ವಿರುದ್ಧ ಸರ್ಕಾರವು ದೇಶಾದ್ಯಂತ ದೊಡ್ಡ ಅಭಿಯಾನವನ್ನು ಪ್ರಾರಂಭಿಸಲಿದೆ, ಇದರಲ್ಲಿ ಗಡಿ ಭದ್ರತಾ ಪಡೆಯು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮಾದಕ ದ್ರವ್ಯ ಕಳ್ಳಸಾಗಣೆಯನ್ನು ತಡೆಗಟ್ಟಲು ಗಡಿಯ ಎರಡೂ ಕಡೆಯಿಂದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಪಡೆಯ ಜಾಗರೂಕತೆಯನ್ನು ಅವರು ಶ್ಲಾಘಿಸಿದರು. ಮುಂದಿನ ಮೂರರಿಂದ ನಾಲ್ಕು ವರ್ಷಗಳು ಗಡಿ ಭದ್ರತೆಯಲ್ಲಿ ಪರಿವರ್ತನಾ ಬದಲಾವಣೆಗಳನ್ನು ತರಲಿವೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಸಾಮರ್ಥ್ಯಗಳನ್ನು ಬಲಪಡಿಸಿದರೆ, ಅದು ಜವಾಬ್ದಾರಿಗಳನ್ನೂ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಭಾರತವನ್ನು ನುಸುಳುವಿಕೆ ಮುಕ್ತವಾಗಿಸುವ ಗುರಿಯನ್ನು ಸಾಧಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಸ್ಥಳೀಯ ಸಮುದಾಯಗಳೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಸಮನ್ವಯವನ್ನು ಸುಧಾರಿಸಲು ಗೃಹ ಸಚಿವರು ಬಿ ಎಸ್ ಎಫ್ ಸಿಬ್ಬಂದಿಗೆ ಕರೆ ನೀಡಿದರು.
******
(ಪ್ರಕಟಣೆ ಐ.ಡಿ.: 2264315)
ವಿಸಿಟರ್ ಕೌಂಟರ್ : 18