ಪ್ರಧಾನ ಮಂತ್ರಿಯವರ ಕಛೇರಿ
ತೆಲಂಗಾಣದ ಹೈದರಾಬಾದ್ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ತೆಲಂಗಾಣದಾದ್ಯಂತ ಉತ್ತಮ ಮೂಲಸೌಕರ್ಯ ಮತ್ತು ಸುಗಮ ಸಂಪರ್ಕದತ್ತ ಇದು ಪ್ರಮುಖ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ
ಇಂದು, ಭಾರತವು ಸುಧಾರಣಾ ಎಕ್ಸ್ಪ್ರೆಸ್ನಲ್ಲಿ ಮುನ್ನಡೆಯುತ್ತಿದೆ; ಅದೇ ಸಮಯದಲ್ಲಿ, ಇಂದಿನ ಭಾರತವು ಆಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ: ಪ್ರಧಾನಮಂತ್ರಿ
ಹಿಂದೆ, ಭಾರತವು ಪ್ರಮುಖ ಜಾಗತಿಕ ಆರ್ಥಿಕತೆಯಾಗಿದ್ದಾಗ ನಮ್ಮ ಜವಳಿ ಉದ್ಯಮವು ದೊಡ್ಡ ಪಾತ್ರವನ್ನು ವಹಿಸಿತ್ತು; ನಾವು ಈಗ ಆ ಪರಂಪರೆಯನ್ನು ಮತ್ತೆ ಬಲಪಡಿಸುತ್ತಿದ್ದೇವೆ; ವಾರಂಗಲ್ನಲ್ಲಿರುವ ಪಿಎಂ ಮಿತ್ರ ಪಾರ್ಕ್ ದೇಶದ ಜವಳಿ ಕ್ರಾಂತಿಯನ್ನು ವೇಗಗೊಳಿಸುತ್ತದೆ: ಪ್ರಧಾನಮಂತ್ರಿ
ಕಳೆದ 12 ವರ್ಷಗಳಲ್ಲಿ, ಆಧುನಿಕ ಸಂಪರ್ಕವು ಭಾರತ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ; ಅದು ರಸ್ತೆಗಳಾಗಿರಲಿ, ರೈಲ್ವೆಗಳಾಗಿರಲಿ ಅಥವಾ ವಿಮಾನ ನಿಲ್ದಾಣಗಳಾಗಿರಲಿ, ಪ್ರತಿಯೊಂದು ರೀತಿಯ ಸಂಪರ್ಕದಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ: ಪ್ರಧಾನಮಂತ್ರಿ
ಇಂದು ಜಗತ್ತಿನಾದ್ಯಂತ ಪ್ರತಿಯೊಬ್ಬ ವ್ಯಕ್ತಿಯು ಇಂಧನ ಭದ್ರತೆಯ ಮಹತ್ವವನ್ನು ಅನುಭವಿಸುತ್ತಿದ್ದಾರೆ; ಇದಕ್ಕೆ ಅನುಗುಣವಾಗಿ, ನಮ್ಮ ಕೇಂದ್ರ ಸರ್ಕಾರವು ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
10 MAY 2026 5:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಹೈದರಾಬಾದ್ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಮತ್ತು ಜಾಗತಿಕ ಪ್ರಾಮುಖ್ಯತೆಯ ಕೇಂದ್ರವಾಗಿ ಹೈದರಾಬಾದ್ನ ಪರಿವರ್ತನಾ ಮಹತ್ವವನ್ನು ಉಲ್ಲೇಖಿಸಿದರು. ತೆಲಂಗಾಣ ಮತ್ತು ಇಡೀ ರಾಷ್ಟ್ರಕ್ಕೆ ತ್ವರಿತ ಅಭಿವೃದ್ಧಿಯನ್ನು ನೀಡುವಲ್ಲಿ ಈ ಪ್ರದೇಶದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಅವರು, ಇಂದು ಪ್ರಾರಂಭಿಸಲಾದ ಬಹು ದೊಡ್ಡ ಪ್ರಮಾಣದ ಯೋಜನೆಗಳು ತೆಲಂಗಾಣವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೇಗೆ ರೂಪಿಸುತ್ತವೆ/ಸ್ಥಾಪಿಸುತ್ತವೆ ಎಂಬುದನ್ನು ವಿವರಿಸಿದರು. ಈ ಯೋಜನೆಗಳ ಉದ್ಘಾಟನೆಗಳು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿವಿಧ ವಲಯಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವಾಗ ಸುಧಾರಣಾ ಎಕ್ಸ್ಪ್ರೆಸ್ನಲ್ಲಿ ಭಾರತದ ಪ್ರಗತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಜಹೀರಾಬಾದ್ ಕೈಗಾರಿಕಾ ಪ್ರದೇಶವನ್ನು ಈ ರೂಪಾಂತರದ ಮೈಲಿಗಲ್ಲು ಎಂದು ಕರೆದರು. ಇದು ಕೈಗಾರಿಕಾ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವ ಭಾರತ ಸರ್ಕಾರದ ರಾಷ್ಟ್ರೀಯ ಧ್ಯೇಯವನ್ನು ಪ್ರತಿನಿಧಿಸುತ್ತದೆ. ತಲೆ ಎತ್ತುತ್ತಿರುವ ಸಂಕೀರ್ಣವು ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಕಾರ್ಯನಿರ್ವಹಿಸುತ್ತದೆ, ವಿಶ್ವ ದರ್ಜೆಯ ಮೂಲಸೌಕರ್ಯ, ಅತ್ಯುತ್ತಮ ವಿದ್ಯುತ್ ಸರಬರಾಜು ಮತ್ತು ಸುಧಾರಿತ ಐಸಿಟಿ ನೆಟ್ವರ್ಕ್ಗಳನ್ನು ಹೊಂದಿದ್ದು, ಜಾಗತಿಕ ಹೂಡಿಕೆದಾರರಿಗೆ ಕಾರ್ಯಾಚರಣೆಯನ್ನು ಸ್ಥಾಪಿಸಲು ಅಗತ್ಯವಿರುವ ಪ್ರತಿಯೊಂದು ಸೌಲಭ್ಯವನ್ನು ನೀಡುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ಗಣನೀಯ ಆರ್ಥಿಕ ಬದ್ಧತೆಯನ್ನು ವಿವರಿಸಿದ ಪ್ರಧಾನಮಂತ್ರಿ, ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿಗಳು ಈ ಸೌಲಭ್ಯಗಳಿಗೆ ಹರಿದು ಬರುತ್ತಿವೆ ಮತ್ತು ತೆಲಂಗಾಣ ಹಾಗು ಹೈದರಾಬಾದ್ನ ಸಾವಿರಾರು ಯುವ ನಾಗರಿಕರಿಗೆ ಉದ್ಯೋಗ ಮಾರ್ಗಗಳನ್ನು ಸೃಷ್ಟಿಸುತ್ತವೆ ಎಂದು ಗಮನಿಸಿದರು. ಇದರ ಬಹು ಗುಣಕ ಪರಿಣಾಮವನ್ನು ಉಲ್ಲೇಖಿಸಿದ ಶ್ರೀ ಮೋದಿ, "ಇಲ್ಲಿ ತಯಾರಾಗುವ ವಾಹನಗಳು, ಯಂತ್ರೋಪಕರಣಗಳು ಮತ್ತು ವಲಯದಲ್ಲಿ ಸ್ಥಾಪಿಸಲಾದ ಆಹಾರ ಸಂಸ್ಕರಣಾ ಕೈಗಾರಿಕೆಗಳು ತೆಲಂಗಾಣದ ಕಾರ್ಮಿಕರು ಮತ್ತು ರೈತರನ್ನು ಸಮಾನವಾಗಿ ಸಬಲೀಕರಣಗೊಳಿಸುತ್ತವೆ" ಎಂದೂ ಒತ್ತಿ ಹೇಳಿದರು.
ಜವಳಿ ಕೈಗಾರಿಕೆಗಳು ಪರಿವರ್ತನಾತ್ಮಕ ಪಾತ್ರ ವಹಿಸಿದಾಗ ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತದ ಐತಿಹಾಸಿಕ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಸಮಕಾಲೀನ ಉಪಕ್ರಮಗಳ ಮೂಲಕ ಈ ಕಾರ್ಯತಂತ್ರದ ವಲಯವನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಬದ್ಧತೆಯನ್ನು ದೃಢಪಡಿಸಿದರು. ವಾರಂಗಲ್ನಲ್ಲಿರುವ ಪಿಎಂ ಮಿತ್ರ ಪಾರ್ಕ್ ರಾಷ್ಟ್ರೀಯ ಜವಳಿ ಕ್ರಾಂತಿಯನ್ನು ಹೇಗೆ ವೇಗವರ್ಧಿಸುತ್ತದೆ ಮತ್ತು ಪಿಎಲ್ಐ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳಿಂದ ಭಾಗವಹಿಸುವ ಘಟಕಗಳಿಗೆ ಸಮಗ್ರ ಪ್ರಯೋಜನಗಳನ್ನು ಹೇಗೆ ಒದಗಿಸಲಾಗುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು. ಫಲಾನುಭವಿ ಉದ್ಯಮಗಳು ಈಗಾಗಲೇ ಪಿಎಲ್ಐ ಯೋಜನೆಯ ಬೆಂಬಲವನ್ನು ಪಡೆಯಲು ಪ್ರಾರಂಭಿಸಿವೆ ಎಂಬುದನ್ನು ಉಲ್ಲೇಖಿಸಿದ ಶ್ರೀ ಮೋದಿ, "ಈ ಜವಳಿ ಪಾರ್ಕ್ ಹೆಚ್ಚಿನ ಸಂಖ್ಯೆಯ ಜನರಿಗೆ, ವಿಶೇಷವಾಗಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ" ಎಂದು ಒತ್ತಿ ಹೇಳಿದರು.
ರಸ್ತೆಗಳು, ರೈಲ್ವೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಆಧುನಿಕ ಸಂಪರ್ಕ ಮೂಲಸೌಕರ್ಯದಲ್ಲಿ ಭಾರತ ಸರ್ಕಾರದ 12 ವರ್ಷಗಳ ಅಭೂತಪೂರ್ವ ಹೂಡಿಕೆ ಪಥವನ್ನು ವಿವರಿಸಿದ ಪ್ರಧಾನಮಂತ್ರಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿಯೇ ಸುಮಾರು ಒಂದು ಲಕ್ಷ ಎಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದರತ್ತ ಗಮನ ಸೆಳೆದರು. ಈ ರಾಷ್ಟ್ರೀಯ ಗಮನದಿಂದ ತೆಲಂಗಾಣ ಗಣನೀಯ ಪ್ರಯೋಜನಗಳನ್ನು ಸಾಧಿಸಿದೆ ಎಂದೂ ಅವರು ಹೇಳಿದರು, ಕಳೆದ 12 ವರ್ಷಗಳಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಜಾಲವು ದ್ವಿಗುಣಗೊಂಡಿದೆ ಎಂದವರು ನುಡಿದರು.. ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ತೆಲಂಗಾಣ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆಯಿಂದ ಲಭಿಸುವ ತಕ್ಷಣದ ಪ್ರಯೋಜನಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ, ವ್ಯವಸ್ಥಿತ ಮೂಲಸೌಕರ್ಯ ಹೂಡಿಕೆಯ ಸ್ಪಷ್ಟ ಪರಿಣಾಮವನ್ನು ಒತ್ತಿ ಹೇಳಿದರು. "ತೆಲಂಗಾಣ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣವು ಹೆಚ್ಚಿನ ಅನುಕೂಲತೆಯನ್ನು ತರುತ್ತದೆ" ಎಂದು ಶ್ರೀ ಮೋದಿ ಗಮನಿಸಿದರು.
ತೆಲಂಗಾಣದ ರೂಪಾಂತರಗೊಂಡ ರೈಲ್ವೆ ಹೂಡಿಕೆ ವಿವರಗಳನ್ನು 2014 ಕ್ಕೆ ಹಿಂದಿನ ಮೂಲದೊಂದಿಗೆ ಹೋಲಿಸಿದಾಗ ಆಗಿರುವ ಭಾರೀ ಏರಿಕೆಯತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಅವಿಭಜಿತ ಆಂಧ್ರಪ್ರದೇಶದ ರೈಲ್ವೆ ಬಜೆಟ್ 2014 ಕ್ಕಿಂತ ಮೊದಲು ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ತೆಲಂಗಾಣದ ಪ್ರಸ್ತುತ ವಾರ್ಷಿಕ ರೈಲ್ವೆ ಹಂಚಿಕೆ ಐದೂವರೆ ಸಾವಿರ ಕೋಟಿ ರೂಪಾಯಿಗಳನ್ನು ಮೀರಿದೆ. ಸರಿಸುಮಾರು 50 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳು ಏಕಕಾಲದಲ್ಲಿ ಅನುಷ್ಠಾನದಲ್ಲಿವೆ ಎಂದು ಹೇಳಿದ ಅವರು, ತೆಲಂಗಾಣಕ್ಕೆ ಸೇವೆ ಸಲ್ಲಿಸುವ ಐದು ವಂದೇ ಭಾರತ್ ಮತ್ತು ಆರು ಅಮೃತ್ ಭಾರತ್ ರೈಲುಗಳ ಸಂಚಾರವನ್ನು ಉಲ್ಲೇಖಿಸಿದರು, ಇದು ಆಧುನಿಕ ರೈಲು ಸಾರಿಗೆಯಲ್ಲಿನ ರೂಪಾಂತರಕ್ಕೆ ಉದಾಹರಣೆಯಾಗಿದೆ. ಕಾಜಿಪೇಟೆ-ವಿಜಯವಾಡ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯ ಆಯ್ದ ವಿಭಾಗಗಳ ಉದ್ಘಾಟನೆ ಮತ್ತು ಬೈಪಾಸ್ ಮಾರ್ಗದ ಅಡಿಯಲ್ಲಿ ಕಾಜಿಪೇಟೆ ರೈಲು ಮಾರ್ಗದ ಸಮರ್ಪಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, "ಈ ಸೌಲಭ್ಯಗಳು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಸಾರಿಗೆಯನ್ನು ವೇಗಗೊಳಿಸುತ್ತದೆ" ಎಂದು ಪ್ರತಿಪಾದಿಸಿದರು.
21ನೇ ಶತಮಾನದ ಜಾಗತಿಕ ಸಂದರ್ಭದಲ್ಲಿ ಇಂಧನ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಂಧನ ಅಡಚಣೆಗಳು ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಬಹುದಾದರೂ, ಪ್ರಪಂಚದಾದ್ಯಂತದ ಪ್ರತಿಯೊಬ್ಬ ವ್ಯಕ್ತಿಯೂ ಈಗ ಇಂಧನ ಭದ್ರತೆಯ ಕಾರ್ಯತಂತ್ರದ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ರಾಷ್ಟ್ರೀಯ ಇಂಧನ ಭದ್ರತೆಯನ್ನು ಬಲಪಡಿಸಲು ಭಾರತ ಸರ್ಕಾರವು ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು, ಮಲ್ಕಾಪುರದಲ್ಲಿ ಇಂಡಿಯನ್ ಆಯಿಲ್ನ ಹೊಸ ಟರ್ಮಿನಲ್ ಉದ್ಘಾಟನೆಯನ್ನು ಮಹತ್ವದ ಕಾರ್ಯತಂತ್ರದ ಹೆಜ್ಜೆ ಎಂದು ಗುರುತಿಸಿದರು. ಸುಸ್ಥಿರ ಪ್ರಾದೇಶಿಕ ಅಭಿವೃದ್ಧಿಗಾಗಿ ಯೋಜನೆಯ ಮಹತ್ವವನ್ನು ವಿವರಿಸಿದ ಶ್ರೀ ಮೋದಿ, "ಈ ಟರ್ಮಿನಲ್ ತೆಲಂಗಾಣದ ಬೆಳೆಯುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ" ಎಂದು ದೃಢವಾಗಿ ನುಡಿದರು. .
ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಸೌರಶಕ್ತಿ ಉತ್ಪಾದಕರಲ್ಲಿ ಭಾರತವು ಅಗ್ರಸ್ಥಾನಕ್ಕೆ ಏರಿರುವುದನ್ನು ಉಲ್ಲೇಖಿಸುತ್ತಾ, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದಲ್ಲಿ ಅಭೂತಪೂರ್ವ ಪ್ರಗತಿಯನ್ನು ಪ್ರಧಾನಮಂತ್ರಿ ಗಮನಿಸಿದರು ಮತ್ತು ಸರ್ಕಾರದ ಅನುಕ್ರಮ ಇಂಧನ ವೈವಿಧ್ಯೀಕರಣ ತಂತ್ರವನ್ನು ವಿವರಿಸಿದರು. ಅಗ್ಗದ ಪೈಪ್ಗಳ ಮೂಲಕ ನೈಸರ್ಗಿಕ ಅನಿಲ ವಿತರಣೆಯನ್ನು ಉತ್ತೇಜಿಸುವ ಮತ್ತು ರಾಷ್ಟ್ರವ್ಯಾಪಿ ಸಿಎನ್ಜಿ ಆಧಾರಿತ ವ್ಯವಸ್ಥೆಗಳನ್ನು ಮುನ್ನಡೆಸುತ್ತ ಸಾರ್ವತ್ರಿಕ ಎಲ್ಪಿಜಿ ವ್ಯಾಪ್ತಿಯನ್ನು ಹೇಗೆ ವಿಸ್ತರಿಸಲಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು. ಇಂತಹ ಸಮಗ್ರ ಉಪಕ್ರಮಗಳು ಭಾರತವು ಪ್ರಸ್ತುತ ಜಾಗತಿಕ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಒಪ್ಪಿಕೊಂಡ ಪ್ರಧಾನಮಂತ್ರಿ, ಇಂಧನ ಸಂರಕ್ಷಣೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದರು, ಆಮದು ಮಾಡಿಕೊಂಡ ಇಂಧನ ಉತ್ಪನ್ನಗಳನ್ನು ನಿಜವಾದ ಅವಶ್ಯಕತೆಗೆ ಅನುಗುಣವಾಗಿ ವಿವೇಚನೆಯಿಂದ ಬಳಸಬೇಕು ಎಂದು ಒತ್ತಿ ಹೇಳಿದರು. ಸಂಯಮದಿಂದ ಲಭಿಸುವ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಪ್ರಯೋಜನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, "ವಿದೇಶಿ ಕರೆನ್ಸಿಯನ್ನು ಉಳಿಸಲು ಮತ್ತು ಯುದ್ಧ ಬಿಕ್ಕಟ್ಟುಗಳ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಅಗತ್ಯವಿರುವಷ್ಟು ಮಾತ್ರ ಬಳಸಲು ನಾವು ಪ್ರಯತ್ನಗಳನ್ನು ಮಾಡಬೇಕು" ಎಂದು ಒತ್ತಿ ಹೇಳಿದರು.
ತೆಲಂಗಾಣದ ಯುವಜನರನ್ನು ಹೊಸ ಆಕಾಂಕ್ಷೆಗಳ ಶಿಲ್ಪಿಗಳು ಮತ್ತು ರಾಜ್ಯದ ರೈತ ಸಮುದಾಯಗಳನ್ನು ನವೀಕೃತ ಭರವಸೆಯ ಹರಿಕಾರರು ಎಂದು ಗುರುತಿಸಿದ ಪ್ರಧಾನಮಂತ್ರಿ, ಅಭಿವೃದ್ಧಿ ಹೊಂದಿದ ತೆಲಂಗಾಣವನ್ನು ನಿರ್ಮಿಸಲು ಅರ್ಥಪೂರ್ಣವಾಗಿ ಕೊಡುಗೆ ನೀಡುವ ಕೈಗಾರಿಕೆಗಳು, ಎಂಎಸ್ಎಂಇಗಳು ಮತ್ತು ನವೋದ್ಯಮಗಳ ಸಾಮೂಹಿಕ ಸಂಕಲ್ಪವನ್ನು ಒಪ್ಪಿಕೊಂಡರು. ತೆಲಂಗಾಣದ ಅಭಿವೃದ್ಧಿಯು ರಾಷ್ಟ್ರೀಯ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ, ರಾಜ್ಯ ಮತ್ತು ರಾಷ್ಟ್ರೀಯ ಸಮೃದ್ಧಿಯ ನಡುವೆ ಸಹಜ ಸಾಂದರ್ಭಿಕ ಸಂಬಂಧವನ್ನು ಸ್ಥಾಪಿಸುತ್ತದೆ ಎಂಬ ಮೂಲಭೂತ ತತ್ವವನ್ನು ಅವರು ಪ್ರತಿಪಾದಿಸಿದರು. ತೆಲಂಗಾಣದಾದ್ಯಂತದ ಪ್ರತಿಯೊಂದು ಕುಟುಂಬಕ್ಕೂ ಪ್ರಾಮಾಣಿಕ ಭರವಸೆಯನ್ನು ನೀಡುವ ಮೂಲಕ, ರಾಜ್ಯದ ನಾಗರಿಕರ ಸಾಮೂಹಿಕ ಕನಸುಗಳು ಮತ್ತು ಆಕಾಂಕ್ಷೆಗಳನ್ನು ನನಸಾಗಿಸಲು ಭಾರತ ಸರ್ಕಾರವು ತನ್ನ ಅಭಿವೃದ್ಧಿ-ಕೇಂದ್ರಿತ ಪ್ರಯತ್ನಗಳನ್ನು ಮುನ್ನಡೆಸಲು ಬದ್ದವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಏಕೆಂದರೆ ತೆಲಂಗಾಣ ಅಭಿವೃದ್ಧಿಗೊಂಡರೆ, ಭಾರತವು ಅಭಿವೃದ್ಧಿ ಹೊಂದುತ್ತದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
*****
(ಪ್ರಕಟಣೆ ಐ.ಡಿ.: 2259609)
ವಿಸಿಟರ್ ಕೌಂಟರ್ : 2