ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಪ್ರಿಲ್ 28-29 ರಂದು ಉತ್ತರ ಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ


ವಾರಣಾಸಿಯಲ್ಲಿ ನಡೆಯಲಿರುವ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ, ಅಲ್ಲಿ ಅವರು ಸುಮಾರು 6,350 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಈ ಯೋಜನೆಗಳು ರೈಲು, ರಸ್ತೆ, ಜಲ, ಆರೋಗ್ಯ, ಪ್ರವಾಸೋದ್ಯಮ ಮತ್ತು ನಗರ ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳನ್ನು ವ್ಯಾಪಿಸಿವೆ

ಬನಾರಸ್-ಪುಣೆ (ಹಡಪ್ಸರ್) ಮತ್ತು ಅಯೋಧ್ಯೆ-ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ಎಂಬ ಎರಡು ಹೊಸ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ

ಹರ್ದೋಯಿಯಲ್ಲಿ 594 ಕಿ.ಮೀ ಉದ್ದದ ಪ್ರವೇಶ-ನಿಯಂತ್ರಿತ ಗ್ರೀನ್ಫೀಲ್ಡ್ (ಹೊಸದಾಗಿ ರಚನೆಯಾದ) ಗಂಗಾ ಎಕ್ಸ್ ಪ್ರೆಸ್ ವೇ ಯನ್ನು ಉದ್ಘಾಟಿಸಲಿದ್ದಾರೆ ಪ್ರಧಾನಮಂತ್ರಿ

ಸುಮಾರು 36,230 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ ನಿರ್ಮಿಸಲಾದ ಗಂಗಾ ಎಕ್ಸ್ ಪ್ರೆಸ್ ವೇ ಮೀರತ್ ಮತ್ತು ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 10-12 ಗಂಟೆಗಳಿಂದ ಸುಮಾರು 6 ಗಂಟೆಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ

ಶಹಜಹಾನ್ಪುರ ಜಿಲ್ಲೆಯಲ್ಲಿ 3.5 ಕಿಮೀ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಒದಗಿಸಿರುವುದು ಪ್ರಮುಖ ಅಂಶವಾಗಿದೆ, ಇದು ಯೋಜನೆಯ ಆರ್ಥಿಕ ಪ್ರಯೋಜನಗಳ ಜೊತೆಗೆ  ವ್ಯೂಹಾತ್ಮಕ  ಪ್ರಯೋಜನ ಮೌಲ್ಯವನ್ನು ಸೇರಿಸಿದೆ

ಪ್ರಕಟಣಾ ದಿನಾಂಕ: 26 APR 2026 3:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 28-29 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 28 ರಂದು ಸಂಜೆ 5 ಗಂಟೆಗೆ ಪ್ರಧಾನಮಂತ್ರಿಯವರು ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ, ಅವರು ವಾರಣಾಸಿಯಲ್ಲಿ ಸುಮಾರು 6,350 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಏಪ್ರಿಲ್ 29 ರಂದು, ಬೆಳಿಗ್ಗೆ 8:30 ರ ಸುಮಾರಿಗೆ, ಪ್ರಧಾನಮಂತ್ರಿಯವರು ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ದೇವರ ದರ್ಶನ ಪಡೆದು ಬಳಿಕ ಪೂಜೆ ನೆರವೇರಿಸಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ಹರ್ದೋಯಿಗೆ ಪ್ರಯಾಣಿಸಲಿದ್ದಾರೆ ಮತ್ತು ಬೆಳಿಗ್ಗೆ 11:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಗಂಗಾ ಎಕ್ಸ್ ಪ್ರೆಸ್ ವೇ ಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಾರಣಾಸಿಯಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ, ಇದು ಪ್ರದೇಶದಾದ್ಯಂತದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. ಪ್ರಧಾನಮಂತ್ರಿಯವರು 1,050 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 48 ಕ್ಕೂ ಹೆಚ್ಚು ಪೂರ್ಣಗೊಂಡ ಯೋಜನೆಗಳನ್ನು ರಾಷ್ಟ್ರಗಳಿಗೆ ಸಮರ್ಪಿಸಲಿದ್ದಾರೆ. ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ವಾರಣಾಸಿ-ಅಜಂಗಢ ರಸ್ತೆ ಅಗಲೀಕರಣ, ಕಝಕ್ಪುರ ಮತ್ತು ಕಡಿಪುರದಲ್ಲಿ ಬಹಳ ಮುಖ್ಯವಾದ  ರೈಲು ಮೇಲ್ಸೇತುವೆಗಳ ಉದ್ಘಾಟನೆ ಮತ್ತು ಭಗವಾನ್ಪುರದಲ್ಲಿ 55 ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕದ (ಎಸ್‌ಟಿಪಿ) ಉದ್ಘಾಟನೆ ಸಹಿತ ಇತರ ಯೋಜನೆಗಳು ಸೇರಿವೆ.

ಪ್ರಧಾನಮಂತ್ರಿಯವರು ವೈವಿಧ್ಯಮಯ ಸಮುದಾಯ ಕೇಂದ್ರಿತ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ 30 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಚಂದ್ರಾವತಿ ಘಾಟ್ ಪುನರಾಭಿವೃದ್ಧಿ, ಸಾರನಾಥ ಬಳಿಯ ಸಾರಂಗನಾಥ ದೇವಾಲಯದ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ನಾಗ್ವಾದ ಸಂತ ರವಿದಾಸ್ ಉದ್ಯಾನವನದ ಸುಂದರೀಕರಣ ಮತ್ತು ಸಾರ್ವಜನಿಕ ಸೌಲಭ್ಯಗಳ ವರ್ಧನೆ, ಕ್ರೀಡಾ ಸೌಕರ್ಯಗಳು ಸೇರಿವೆ.. ಯುಪಿ ಕಾಲೇಜಿನಲ್ಲಿ ಸಿಂಥೆಟಿಕ್ ಹಾಕಿ ಟರ್ಫ್, ರಾಮನಗರದಲ್ಲಿ 100 ಹಾಸಿಗೆಗಳ ವೃದ್ಧಾಶ್ರಮ ಮತ್ತು ಭೇಲಾಪುರ ನೀರು ಸಂಸ್ಕರಣಾ ಘಟಕದಲ್ಲಿ 1 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಇವು  ಒಳಗೊಂಡಿದೆ. ಸಾಂಪ್ರದಾಯಿಕ ಔಷಧವನ್ನು ಆಧುನಿಕ ಆರೋಗ್ಯ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬದ್ಧತೆಯನ್ನು ಪ್ರತಿಬಿಂಬಿಸುವಂತೆ  ಟಿಬೆಟಿಯನ್ ಅಧ್ಯಯನಗಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋವಾ ರಿಗ್ಪಾ ಭವನ ಮತ್ತು ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ಸುಮಾರು 5,300 ಕೋಟಿ ರೂ.ಗಳ 112 ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಅಮೃತ್ 2.0 ಅಡಿಯಲ್ಲಿ 13 ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಗಳು, ಶ್ರೀ ಶಿವ ಪ್ರಸಾದ್ ಗುಪ್ತಾ ವಿಭಾಗೀಯ ಜಿಲ್ಲಾ ಆಸ್ಪತ್ರೆಯಲ್ಲಿ 500 ಹಾಸಿಗೆಗಳ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಭೋಜುವೀರ್ ಮತ್ತು ಸಿಗ್ರಾದಲ್ಲಿ ಮಾರುಕಟ್ಟೆ ಸಂಕೀರ್ಣಗಳು ಮತ್ತು ಕಚೇರಿ ಸ್ಥಳಗಳ ನಿರ್ಮಾಣ, ಕೊಳಗಳ ನವೀಕರಣ ಮತ್ತು ಪುನರುಜ್ಜೀವನ, 198 ಹಾಸಿಗೆಗಳ ಆಸ್ಪತ್ರೆಯ ಪುನರಾಭಿವೃದ್ಧಿ, 100 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣ ಮತ್ತು ಅಸ್ಸಿ ಘಾಟ್, ದಶಾಶ್ವಮೇಧ ಘಾಟ್ ಮತ್ತು ನಮೋ ಘಾಟ್ ಸೇರಿದಂತೆ ಪ್ರಮುಖ ಘಾಟ್ ಗಳಲ್ಲಿ ಪ್ರವಾಸೋದ್ಯಮ ಸೌಲಭ್ಯಗಳ ಅಭಿವೃದ್ಧಿ ಸೇರಿವೆ. ಆಡಳಿತ ಮತ್ತು ಸಮಾಜ ಕಲ್ಯಾಣ ಮೂಲಸೌಕರ್ಯಗಳನ್ನು ಬಲಪಡಿಸಲು, ಪ್ರಧಾನಮಂತ್ರಿಯವರು ಸಮಗ್ರ ವಿಭಾಗೀಯ ಕಚೇರಿ, ನಗರ ನಿಗಮ ಕಚೇರಿ ಕಟ್ಟಡ ಮತ್ತು ರಾಮನಗರದಲ್ಲಿ ಸರ್ಕಾರಿ ಮಕ್ಕಳ ಆಶ್ರಯ ಮನೆ ಮತ್ತು ಬಾಲಾಪರಾಧಿ ನ್ಯಾಯ ಮಂಡಳಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬನಾಸ್ ಡೈರಿಗೆ ಸಂಬಂಧಿಸಿದ ಉತ್ತರ ಪ್ರದೇಶದ ಹಾಲು ಪೂರೈಕೆದಾರರಿಗೆ ಪ್ರಧಾನಮಂತ್ರಿಯವರು 105 ಕೋಟಿ ರೂ.ಗಳಿಗೂ ಹೆಚ್ಚು ಬೋನಸ್ ವರ್ಗಾವಣೆ ಮಾಡಲಿದ್ದಾರೆ.

ಗಂಗಾ ನದಿಗೆ ಅಡ್ಡಲಾಗಿ ರೈಲು ಮತ್ತು ರಸ್ತೆ ಸೇತುವೆ ನಿರ್ಮಾಣ ಸೇರಿದಂತೆ ವಾರಣಾಸಿ ಜಂಕ್ಷನ್-ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಮೂರನೇ ಮತ್ತು ನಾಲ್ಕನೇ ರೈಲ್ವೆ ಮಾರ್ಗ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ರೈಲು ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ, ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವ ಮೂಲಕ, ಬಹು-ಮಾದರಿ ಸಂಪರ್ಕವನ್ನು ಬಲಪಡಿಸುವ ಮೂಲಕ ಮತ್ತು ಸುಗಮ ಸಂಚಾರ ಸಂಚಾರವನ್ನು ಖಾತ್ರಿಪಡಿಸುವ ಮೂಲಕ ವಾರಣಾಸಿ ಹಾಗು ಚಂದೌಲಿ ಜಿಲ್ಲೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದೊಂದಿಗೆ ರೈಲು ಸಂಪರ್ಕವನ್ನು ಬಲಪಡಿಸುತ್ತಲೇ  ಕಾಶಿ ವಿಶ್ವನಾಥ ಧಾಮ, ರಾಮನಗರ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ -19 ರ ಪ್ರವೇಶವನ್ನು ಸುಧಾರಿಸುತ್ತದೆ.

ಬನಾರಸ್-ಪುಣೆ (ಹಡಪ್ಸರ್) ಮತ್ತು ಅಯೋಧ್ಯೆ-ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ಎಂಬ ಎರಡು ಹೊಸ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಕೈಗೆಟುಕುವ ಮತ್ತು ಆಧುನಿಕ ಪ್ರಯಾಣದ ಆಯ್ಕೆಗಳನ್ನು ಒದಗಿಸುತ್ತವೆ ಮತ್ತು ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತವೆ. ಬನಾರಸ್-ಪುಣೆ ಸೇವೆಯು ಕಾಶಿ ವಿಶ್ವನಾಥ ಧಾಮಕ್ಕೆ ಪ್ರವೇಶವನ್ನು ಸುಲಭ ಹಾಗು ಸುಗಮಗೊಳಿಸಿದರೆ, ಅಯೋಧ್ಯೆ-ಮುಂಬೈ ಸೇವೆಯು ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆ, ಪ್ರಮುಖ ಧಾರ್ಮಿಕ ಸ್ಥಳಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ.

ಹರ್ದೋಯ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಹರ್ದೋಯ್ ಜಿಲ್ಲೆಯಲ್ಲಿ ಗಂಗಾ ಎಕ್ಸ್ ಪ್ರೆಸ್ ವೇ ಯನ್ನು ಉದ್ಘಾಟಿಸಲಿದ್ದಾರೆ, ಇದು ದೇಶದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಗಂಗಾ ಎಕ್ಸ್ ಪ್ರೆಸ್ ವೇ 594 ಕಿಲೋಮೀಟರ್ ಉದ್ದದ, 6-ಪಥ (8 ಪಥಗಳಿಗೆ ವಿಸ್ತರಿಸಬಹುದಾದ), ಪ್ರವೇಶ-ನಿಯಂತ್ರಿತ ಗ್ರೀನ್ಫೀಲ್ಡ್ ಹೈಸ್ಪೀಡ್ ಕಾರಿಡಾರ್ ಆಗಿದ್ದು, ಒಟ್ಟು ಸುಮಾರು 36,230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಕ್ಸ್ ಪ್ರೆಸ್ ವೇ ಮೀರತ್, ಬುಲಂದ್ ಶಹರ್, ಹಾಪುರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವೋ, ರಾಯ್ಬರೇಲಿ, ಪ್ರತಾಪಗಢ ಮತ್ತು ಪ್ರಯಾಗ್ ರಾಜ್  -ಹೀಗೆ 12 ಜಿಲ್ಲೆಗಳನ್ನು ಹಾದುಹೋಗುತ್ತದೆ. ಆ ಮೂಲಕ ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವ ಪ್ರದೇಶಗಳನ್ನು ಒಂದೇ ಅಡೆ-ತಡೆರಹಿತ ಹೈಸ್ಪೀಡ್ ಕಾರಿಡಾರ್ ಮೂಲಕ ಸಂಪರ್ಕಿಸುತ್ತದೆ.

ಯೋಜನೆಯು ಮೀರತ್ ಮತ್ತು ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 10-12 ಗಂಟೆಗಳಿಂದ ಸುಮಾರು 6 ಗಂಟೆಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ, ಇದು ಸಾರಿಗೆ ಸಂಚಾರವನ್ನು ಸುಲಭ ಮಾಡುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.

ಶಹಜಹಾನ್ಪುರ ಜಿಲ್ಲೆಯಲ್ಲಿ 3.5 ಕಿ.ಮೀ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು (ಏರ್ ಸ್ಟ್ರಿಪ್) ಒದಗಿಸಿರುವುದು ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ. ಈ ದ್ವಿ-ಬಳಕೆಯ ಮೂಲಸೌಕರ್ಯವು ರಾಷ್ಟ್ರೀಯ ಭದ್ರತಾ ಸನ್ನದ್ಧತೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಪ್ರಯೋಜನಗಳನ್ನು ಮೀರಿ ಕಾರ್ಯತಂತ್ರದ ಮೌಲ್ಯವನ್ನು ಸೇರಿಸುತ್ತದೆ.

ಗಂಗಾ ಎಕ್ಸ್ ಪ್ರೆಸ್ ವೇ ಯನ್ನು ಪ್ರಮುಖ ಆರ್ಥಿಕ ಕಾರಿಡಾರ್ ಆಗಿ ಯೋಜಿಸಲಾಗಿದೆ, ಅದರ ಜೋಡಣೆಯುದ್ದಕ್ಕೂ 12 ಜಿಲ್ಲೆಗಳಲ್ಲಿ ಸುಮಾರು 2,635 ಹೆಕ್ಟೇರ್ಗಳಲ್ಲಿ ಸಮಗ್ರ ಉತ್ಪಾದನೆ ಮತ್ತು ಲಾಜಿಸ್ಟಿಕ್ ಕಾರಿಡಾರ್ಗಳ ಅಭಿವೃದ್ಧಿಯೊಂದಿಗೆ ಸಂಯೋಜಿಸಲಾಗಿದೆ. ಎಕ್ಸ್ ಪ್ರೆಸ್ ವೇ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ, ಪೂರೈಕೆ ಸರಪಳಿಯ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ಸುಧಾರಿತ ಸಂಪರ್ಕವು ರೈತರಿಗೆ ನಗರ ಮತ್ತು ರಫ್ತು ಮಾರುಕಟ್ಟೆಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ, ಉತ್ತಮ ಬೆಲೆ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಮತ್ತು ಗ್ರಾಮೀಣ ಆದಾಯವನ್ನು ಬಲಪಡಿಸುತ್ತದೆ. ಈ ಯೋಜನೆಯು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಹೊಸ ಆರ್ಥಿಕ ಅವಕಾಶಗಳನ್ನು ತೆರೆಯುತ್ತದೆ ಮತ್ತು ಪ್ರದೇಶದಾದ್ಯಂತ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಗಂಗಾ ಎಕ್ಸ್ ಪ್ರೆಸ್ ವೇ ರಾಜ್ಯದಲ್ಲಿ ವಿಶಾಲವಾದ ಎಕ್ಸ್ ಪ್ರೆಸ್ ವೇ ಜಾಲಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ, ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇ, ಜೇವರ್ ಲಿಂಕ್ ಎಕ್ಸ್ ಪ್ರೆಸ್ ವೇ, ಫರೂಕಾಬಾದ್ ಲಿಂಕ್ ಎಕ್ಸ್ ಪ್ರೆಸ್ ವೇ ಮತ್ತು ಮೀರತ್ ನಿಂದ ಹರಿದ್ವಾರದವರೆಗೆ ಉದ್ದೇಶಿತ ವಿಸ್ತರಣೆ ಸೇರಿದಂತೆ ಹಲವಾರು ಲಿಂಕ್ ಕಾರಿಡಾರ್ಗಳು ಒಂದೋ ಕಾರ್ಯನಿರ್ವಹಿಸುತ್ತವೆ ಅಥವಾ ಅವುಗಳನ್ನು ಯೋಜಿಸಲಾಗಿದೆ. ಈ ಉದಯೋನ್ಮುಖ ಎಕ್ಸ್ ಪ್ರೆಸ್ ವೇ ಜಾಲ  ಉತ್ತರ ಪ್ರದೇಶದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಹೈಸ್ಪೀಡ್ ರಸ್ತೆ ಸಂಪರ್ಕವನ್ನು ವಿಸ್ತರಿಸುತ್ತದೆ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ.

ಗಂಗಾ ಎಕ್ಸ್ ಪ್ರೆಸ್ ವೇ ಕೇವಲ ಸಾರಿಗೆ ಯೋಜನೆಯಲ್ಲ, ಅದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ, ಕೈಗಾರಿಕಾ ಹೂಡಿಕೆಯನ್ನು ಆಕರ್ಷಿಸುತ್ತದೆ, ಕೃಷಿ ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ರಾಜ್ಯದಾದ್ಯಂತ ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆಯಾದ್ದರಿಂದ ಅದು ಒಂದು ಪರಿವರ್ತನೆ ತರುವ ಯೋಜನೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2255820) ವಿಸಿಟರ್ ಕೌಂಟರ್ : 8