ಪ್ರಧಾನ ಮಂತ್ರಿಯವರ ಕಛೇರಿ
ಕೆನಡಾ ಪ್ರಧಾನಮಂತ್ರಿ ಅವರೊಂದಿಗೆ ಪ್ರಧಾನಮಂತ್ರಿ ಮೋದಿ ಅವರಿಂದ ಜಂಟಿ ಪತ್ರಿಕಾ ಹೇಳಿಕೆ
ಪ್ರಕಟಣಾ ದಿನಾಂಕ:
02 MAR 2026 1:40PM by PIB Bengaluru
ಗೌರವಾನ್ವಿತ ಕೆನಡಾ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ ಅವರೆ, ಎರಡೂ ದೇಶಗಳ ಗಣ್ಯ ಪ್ರತಿನಿಧಿಗಳೆ, ಮಾಧ್ಯಮ ಮಿತ್ರರೆ,
ನಮಸ್ಕಾರ!
ಕೆನಡಾ ಪ್ರಧಾನಮಂತ್ರಿ ಕಾರ್ನಿ ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಪ್ರಧಾನ ಮಂತ್ರಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಇದನ್ನು ನಾವು ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸುತ್ತೇವೆ.
ಕಳೆದ ವರ್ಷ ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಅವರು ನನಗೆ ಮತ್ತು ನನ್ನ ನಿಯೋಗಕ್ಕೆ ಆತ್ಮೀಯ ಸ್ವಾಗತ ನೀಡಿದ್ದರು. ಆ ಗೌರವಪೂರ್ಣ ಆತಿಥ್ಯವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಇಂದು ನನ್ನ ಸೌಭಾಗ್ಯವಾಗಿದೆ. ಎರಡು ದೇಶಗಳ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಗಳ ನಾಯಕತ್ವ ಪ್ರತಿಬಿಂಬಿಸುವ ವೃತ್ತಿ ವಿವರ ಹೊಂದಿರುವುದು ಜಗತ್ತಿನಲ್ಲೇ ಬಹಳ ಕಡಿಮೆ.
ನಮ್ಮ ಮೊದಲ ಸಭೆಯಿಂದಲೇ ನಮ್ಮ ಸಂಬಂಧವು ನವೀಕೃತ ಶಕ್ತಿ, ಪರಸ್ಪರ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವದಿಂದ ತುಂಬಿದೆ. ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಆವೇಗಕ್ಕೆ ನನ್ನ ಸ್ನೇಹಿತ ಪ್ರಧಾನಿ ಕಾರ್ನಿ ಅವರು ಕಾರಣ ಎಂದು ನಾನು ಹೇಳಲು ಬಯಸುತ್ತೇನೆ.
ಸ್ನೇಹಿತರೆ,
ಭಾರತ ಮತ್ತು ಕೆನಡಾ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಅಚಲ ನಂಬಿಕೆ ಹೊಂದಿವೆ. ನಾವು ವೈವಿಧ್ಯತೆಯನ್ನು ಆಚರಿಸುತ್ತೇವೆ. ಮಾನವತೆಯ ಕಲ್ಯಾಣವು ನಮ್ಮ ಹಂಚಿಕೆಯ ದೃಷ್ಟಿಕೋನವಾಗಿದೆ. ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುವುದು ಈ ದೃಷ್ಟಿಕೋನವೇ ಆಗಿದೆ. ಇಂದು ಈ ದೃಷ್ಟಿಕೋನವನ್ನು ಮುಂದಿನ ಹಂತದ ಪಾಲುದಾರಿಕೆಯಾಗಿ ಪರಿವರ್ತಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ.
2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 50 ಶತಕೋಟಿ ಡಾಲರ್ಗಳಿಗೆ ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಆರ್ಥಿಕ ಸಹಕಾರದ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯುವುದು ನಮಗೆ ಆದ್ಯತೆಯಾಗಿದೆ. ಅದರಂತೆ, ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಂತಿಮಗೊಳಿಸುವುದನ್ನು ತ್ವರಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಇದು ಎರಡೂ ದೇಶಗಳಲ್ಲಿ ಹೂಡಿಕೆ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕೆನಡಾದ ಪಿಂಚಣಿ ನಿಧಿಗಳು ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡಿವೆ. ಇದು ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಅವರ ಆಳವಾದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಇಂದು ನಾವು ಎರಡೂ ದೇಶಗಳ ವ್ಯಾಪಾರ ನಾಯಕರನ್ನು ಸಹ ಭೇಟಿಯಾಗುತ್ತೇವೆ. ಅವರ ಒಳನೋಟಗಳು ಮತ್ತು ಶಿಫಾರಸುಗಳು ನಮ್ಮ ಆರ್ಥಿಕ ಪಾಲುದಾರಿಕೆಯ ಮಾರ್ಗಸೂಚಿ ರೂಪಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ನಾವು ನೈಸರ್ಗಿಕ ಅಥವಾ ಸಹಜ ಪಾಲುದಾರರಾಗಿದ್ದೇವೆ. ಕೆನಡಾ-ಭಾರತ ನಾವೀನ್ಯತೆ ಪಾಲುದಾರಿಕೆ ಮೂಲಕ, ನಾವು ವಿಚಾರಗಳನ್ನು ಜಾಗತಿಕ ಪರಿಹಾರಗಳಾಗಿ ಪರಿವರ್ತಿಸುತ್ತೇವೆ.
ಕಳೆದ ತಿಂಗಳು ಭಾರತದಲ್ಲಿ ನಡೆದ ಐ ಇಂಪ್ಯಾಕ್ಟ್ ಶೃಂಗಸಭೆಯ ಯಶಸ್ಸಿಗೆ ಕೆನಡಾ ನೀಡಿದ ಅಮೂಲ್ಯ ಕೊಡುಗೆಗಾಗಿ ನಾನು ಪ್ರಧಾನ ಮಂತ್ರಿ ಕಾರ್ನೆ ಅವರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಕೃತಕ ಬುದ್ಧಿಮತ್ತೆಯ ಹೊರತಾಗಿ, ಕ್ವಾಂಟಮ್ ತಂತ್ರಜ್ಞಾನಗಳು, ಸೂಪರ್ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್ಗಳ ಕ್ಷೇತ್ರಗಳಲ್ಲಿ ನಾವು ನಮ್ಮ ಸಹಕಾರವನ್ನು ಇನ್ನಷ್ಟು ಗಾಢಗೊಳಿಸುತ್ತೇವೆ.
ನಿರ್ಣಾಯಕ ಖನಿಜಗಳ ಕುರಿತು ಇಂದು ಮುಕ್ತಾಯಗೊಂಡ ತಿಳಿವಳಿಕೆ ಒಪ್ಪಂದವು ಚೇತರಿಕೆಯ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ. ಬಾಹ್ಯಾಕಾಶ ವಲಯದಲ್ಲಿ ನಾವು ನಮ್ಮ ಎರಡೂ ದೇಶಗಳ ಸ್ಟಾರ್ಟಪ್ಗಳು ಮತ್ತು ಕೈಗಾರಿಕೆಗಳನ್ನು ಸಂಪರ್ಕಿಸುತ್ತೇವೆ.
ಸ್ನೇಹಿತರೆ,
ಪ್ರಧಾನ ಮಂತ್ರಿ ಕಾರ್ನೆ ಅವರಿಗೆ ಪರಿಸರವು ಪ್ರತ್ಯೇಕ ಕಾರ್ಯಸೂಚಿಯಲ್ಲ, ಆದರೆ ಅದು ಆರ್ಥಿಕ ಸ್ಥಿರತೆಯ ಅವಿಭಾಜ್ಯ ಅಂಗವಾಗಿದೆ. ಇಂಧನ ವಲಯದಲ್ಲಿ, ಹೈಡ್ರೋಕಾರ್ಬನ್ಗಳ ಮೇಲೆ ಮಾತ್ರವಲ್ಲದೆ ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹಣೆಯ ಮೇಲೂ ವಿಶೇಷ ಒತ್ತು ನೀಡುವ ಮುಂದಿನ ಪೀಳಿಗೆಯ ಪಾಲುದಾರಿಕೆಯನ್ನು ನಾವು ರೂಪಿಸುತ್ತಿದ್ದೇವೆ.
ಕೆನಡಾವು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ(ಒಕ್ಕೂಟ) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದೆ ಎಂಬುದನ್ನು ತಿಳಿದು ನಮಗೆ ಸಂತೋಷವಾಗಿದೆ. ನಮ್ಮ ಹಂಚಿಕೆಯ ಪ್ರಯತ್ನಗಳನ್ನು ಮತ್ತಷ್ಟು ಮುನ್ನಡೆಸಲು, ಈ ವರ್ಷದ ಕೊನೆಯಲ್ಲಿ ನಾವು ಭಾರತ-ಕೆನಡಾ ನವೀಕರಿಸಬಹುದಾದ ಇಂಧನ ಮತ್ತು ಶೇಖರಣಾ ಶೃಂಗಸಭೆ ಆಯೋಜಿಸುತ್ತೇವೆ.
ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ, ಯುರೇನಿಯಂನ ದೀರ್ಘಾವಧಿಯ ಪೂರೈಕೆಗಾಗಿ ನಾವು ಒಂದು ಮಹತ್ವದ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ. ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳು ಮತ್ತು ಸುಧಾರಿತ ರಿಯಾಕ್ಟರ್ಗಳ ಮೇಲೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.
ಕೃಷಿ, ಕೃಷಿ ತಂತ್ರಜ್ಞಾನ ಮತ್ತು ಆಹಾರ ಭದ್ರತೆಯಲ್ಲಿ ಮೌಲ್ಯವರ್ಧನೆ ನಮ್ಮ ಹಂಚಿಕೆಯ ಆದ್ಯತೆಗಳಾಗಿವೆ. ಈ ದಿಕ್ಕಿನಲ್ಲಿ, ಭಾರತದಲ್ಲಿ ಭಾರತ-ಕೆನಡಾ ಪಲ್ಸ್ ಪ್ರೋಟೀನ್ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗುವುದು.
ಸ್ನೇಹಿತರೆ,
ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಸಹಕಾರವು ನಮ್ಮ ಪರಸ್ಪರ ನಂಬಿಕೆಯ ಆಳ ಮತ್ತು ನಮ್ಮ ಸಂಬಂಧದ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತಿದೆ. ನಮ್ಮ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಭಾಗಿತ್ವ ಬಲಪಡಿಸಲು, ಕಡಲ ಕ್ಷೇತ್ರದ ಜಾಗೃತಿ ಹೆಚ್ಚಿಸಲು ಮತ್ತು ಮಿಲಿಟರಿ ವಿನಿಮಯ ವಿಸ್ತರಿಸಲು ನಾವು ಕೆಲಸ ಮಾಡುತ್ತೇವೆ. ಈ ಉತ್ಸಾಹದಲ್ಲಿ ನಾವು ಇಂದು ಭಾರತ-ಕೆನಡಾ ರಕ್ಷಣಾ ಸಂವಾದ ಏರ್ಪಡಿಸಲು ನಿರ್ಧರಿಸಿದ್ದೇವೆ.
ಸ್ನೇಹಿತರೆ,
ಜನರಿಂದ ಜನರಿಗೆ ಸಂಬಂಧಗಳು ನಮ್ಮ ಸಂಬಂಧದ ನಿಜವಾದ ಶಕ್ತಿ. ಇಂದು ಅವುಗಳನ್ನು ಮತ್ತಷ್ಟು ಬಲಪಡಿಸಲು ನಾವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಕೃತಕ ಬುದ್ಧಿಮತ್ತೆ, ಆರೋಗ್ಯ ರಕ್ಷಣೆ, ಕೃಷಿ ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳ ನಡುವೆ ಹೊಸ ಪಾಲುದಾರಿಕೆಗಳನ್ನು ಇಂದು ಘೋಷಿಸಲಾಗುತ್ತಿದೆ. ಕೆನಡಾದ ವಿಶ್ವವಿದ್ಯಾಲಯಗಳಿಂದ ಭಾರತದಲ್ಲಿ ಕ್ಯಾಂಪಸ್ಗಳ ಸ್ಥಾಪನೆಗೆ ಅನುಕೂಲ ಕಲ್ಪಿಸಲು ನಾವು ಒಪ್ಪಿಕೊಂಡಿದ್ದೇವೆ.
ಸ್ಥಳೀಯ ಮತ್ತು ಬುಡಕಟ್ಟು ಸಮುದಾಯಗಳು ನಮ್ಮ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಹೆಚ್ಚಿನ ಸಾಂಸ್ಕೃತಿಕ ವಿನಿಮಯ ಉತ್ತೇಜಿಸಲು ಇಂದು ಎರಡೂ ಕಡೆಯಿಂದಲೂ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಸ್ನೇಹಿತರೆ,
ಭಾರತಕ್ಕೆ ಸಂಬಂಧಿಸಿದಂತೆ ಕೆನಡಾವು ಇಂಡೋ-ಪೆಸಿಫಿಕ್ ವಲಯದಲ್ಲಿ ಪ್ರಮುಖ ಪಾಲುದಾರನಾಗಿದೆ. ಹಿಂದೂ ಮಹಾಸಾಗರದ ಅಂಚಿನ ಸಂಘದಲ್ಲಿ ಸಂವಾದ ಪಾಲುದಾರನಾಗುವ ಅದರ ಆಸಕ್ತಿಯನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಕಡಲ ಸಹಕಾರಕ್ಕೆ ಹೊಸ ಆಳವನ್ನು ನೀಡುತ್ತದೆ.
ಭಯೋತ್ಪಾದನೆ, ಉಗ್ರವಾದ ಮತ್ತು ಮೂಲಭೂತವಾದಗಳು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ, ಒಟ್ಟಾರೆಯಾಗಿ ಮಾನವತೆಗೆ ಹಂಚಿಕೆಯ ಮತ್ತು ಗಂಭೀರ ಸವಾಲುಗಳಾಗಿವೆ ಎಂಬುದನ್ನು ನಾವು ಒಪ್ಪುತ್ತೇವೆ. ಈ ಬೆದರಿಕೆಗಳನ್ನು ಎದುರಿಸುವಲ್ಲಿ ನಮ್ಮ ನಿಕಟ ಸಹಕಾರವು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅತ್ಯಂತ ಮುಖ್ಯವಾಗಿದೆ.
ವಿಶ್ವಾದ್ಯಂತ ಇರುವ ಉದ್ವಿಗ್ನತೆಯ ಬಗ್ಗೆ ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ. ನಾವು ಯಾವಾಗಲೂ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಕರೆ ನೀಡಿದ್ದೇವೆ. ಎರಡು ಪ್ರಜಾಪ್ರಭುತ್ವಗಳು ಒಟ್ಟಾಗಿ ನಿಂತಾಗ, ಶಾಂತಿಯ ಧ್ವನಿ ಇನ್ನಷ್ಟು ಶಕ್ತಿಶಾಲಿಯಾಗಿ ಪ್ರತಿಧ್ವನಿಸುತ್ತದೆ.
ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿ ನಮಗೆ ಆಳವಾದ ಕಳವಳದ ವಿಷಯವಾಗಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಎಲ್ಲಾ ವಿವಾದಗಳ ಪರಿಹಾರವನ್ನು ಭಾರತ ಬೆಂಬಲಿಸುತ್ತದೆ. ಈ ಪ್ರದೇಶದಲ್ಲಿ ಇರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
ಗೌರವಾನಾವಿತರೆ,
ನಿಮ್ಮ ಭೇಟಿಯು ನಮ್ಮ ಸಹಕಾರದ ಪ್ರತಿಯೊಂದು ಆಯಾಮಕ್ಕೂ ನವೀಕೃತ ಶಕ್ತಿ ನೀಡಿದೆ. ಭಾರತಕ್ಕೆ ನಿಮ್ಮ ಆಳವಾದ ಬದ್ಧತೆ ಮತ್ತು ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕಾಗಿ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2240251)
ವಿಸಿಟರ್ ಕೌಂಟರ್ : 39
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam