ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ರಾಷ್ಟ್ರೀಯ ಎಐ ಮೂಲಸೌಕರ್ಯ ಬಲಪಡಿಸಲು ಅಸ್ತಿತ್ವದಲ್ಲಿರುವ 38,000 ಜಿಪಿಯುಗಳ ಜೊತೆಗೆ 20,000 ಜಿಪಿಯುಗಳನ್ನು ಸೇರಿಸಲಿರುವ ಭಾರತ; 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026'ರ ಎರಡನೇ ದಿನದಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಘೋಷಣೆ
ಭಾರತದ ಎಐ ಕಾರ್ಯತಂತ್ರವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಪ್ರಧಾನಮಂತ್ರಿ ಶ್ರೀ ಮೋದಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ: ಶ್ರೀ ವೈಷ್ಣವ್
ಮುಂದಿನ ಎರಡು ವರ್ಷಗಳಲ್ಲಿ ಎಐ ಕ್ಷೇತ್ರದಲ್ಲಿ 200 ಬಿಲಿಯನ್ ಡಾಲರ್ ಗೂ ಹೆಚ್ಚು ಹೂಡಿಕೆಯ ನಿರೀಕ್ಷೆ
ಸಾರ್ವಭೌಮ ಎಐ ಮಾದರಿಗಳು ಜಾಗತಿಕ ಮಾನದಂಡಗಳಿಗೆ ಸರಿಸಮನಾಗಿವೆ, ಅಗ್ರ ಮೂರು ಎಐ ರಾಷ್ಟ್ರಗಳಲ್ಲಿ ಭಾರತಕ್ಕೆ ಸ್ಥಾನ
ಎಐ ದುರುಪಯೋಗ ತಡೆಯಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಭಾರತದ ಎಐ ಸುರಕ್ಷತಾ ಸಂಸ್ಥೆ ಪಾಲುದಾರಿಕೆ: ಶ್ರೀ ವೈಷ್ಣವ್
ಪ್ರಕಟಣಾ ದಿನಾಂಕ:
17 FEB 2026 5:14PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026'ರ ಎರಡನೇ ದಿನದಂದು, ಮುಂಬರುವ ವಾರಗಳಲ್ಲಿ 20,000 ಜಿಪಿಯುಗಳ ಸೇರ್ಪಡೆಯೊಂದಿಗೆ ಭಾರತವು ತನ್ನ ಕಂಪ್ಯೂಟ್ ಸಾಮರ್ಥ್ಯವನ್ನು ಅಸ್ತಿತ್ವದಲ್ಲಿರುವ 38,000 ಜಿಪಿಯುಗಳಿಗಿಂತ ಹೆಚ್ಚು ವಿಸ್ತರಿಸಲಿದೆ ಎಂದು ಘೋಷಿಸಿದರು. ಇದು ಕಂಪ್ಯೂಟ್ ಮೂಲಸೌಕರ್ಯದ ಗಮನಾರ್ಹ ವಿಸ್ತರಣೆ ಮತ್ತು ಜವಾಬ್ದಾರಿಯುತ ಎಐ ನಿಯೋಜನೆಯ ಮೇಲೆ ಕೇಂದ್ರೀಕರಿಸುವ ಮೂಲಕ ಭಾರತದ ಎಐ ಕಾರ್ಯತಂತ್ರದ ಮುಂದಿನ ಹಂತವನ್ನು ಗುರುತಿಸುತ್ತದೆ ಎಂದು ಅವರು ಹೇಳಿದರು.
ಶೃಂಗಸಭೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಜವಾಬ್ದಾರಿಯುತ ಎಐ ಅಭಿವೃದ್ಧಿ ಮತ್ತು ಆರೋಗ್ಯ ಹಾಗೂ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ವ್ಯಾಪಕವಾದ ನಿಯೋಜನೆಯ ಮೇಲೆ ಗಮನವನ್ನು ಮುಂದುವರಿಸಲಾಗುವುದು, ಇದರಿಂದ ಎಐ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.

ಭಾರತದ ಎಐ ಕಾರ್ಯತಂತ್ರವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಪ್ರದರ್ಶಿಸುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ಎಐ ಮೂಲಸೌಕರ್ಯವು ಕೆಲವು ಕಂಪನಿಗಳ ನಿಯಂತ್ರಣದಲ್ಲಿರುವ ಇತರ ಅನೇಕ ದೇಶಗಳಿಗಿಂತ ಭಿನ್ನವಾಗಿ, ಭಾರತವು ತನ್ನ ಜನಸಂಖ್ಯೆಯ ವ್ಯಾಪಕ ವರ್ಗಕ್ಕೆ ಎಐ ಕಂಪ್ಯೂಟ್ ಪ್ರವೇಶವನ್ನು ಒದಗಿಸಿದೆ ಎಂದರು.
ಈ ಸಂವಾದದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಖಾತೆ ಸಚಿವರಾದ ಶ್ರೀ ಜಿತಿನ್ ಪ್ರಸಾದ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಎಸ್. ಕೃಷ್ಣನ್; ಮತ್ತು ಇಂಡಿಯಾ ಎಐ ಮಿಷನ್ ನ ಸಿಇಒ ಶ್ರೀ ಅಭಿಷೇಕ್ ಸಿಂಗ್ ಪಾಲ್ಗೊಂಡಿದ್ದರು.
ಫೆಬ್ರವರಿ 16-20 ರವರೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯು ರಾಷ್ಟ್ರ ಮತ್ತು ಸರ್ಕಾರಗಳ ಮುಖ್ಯಸ್ಥರು, ಸಚಿವರು, ಜಾಗತಿಕ ತಂತ್ರಜ್ಞಾನ ನಾಯಕರು, ಸಂಶೋಧಕರು, ಬಹುಪಕ್ಷೀಯ ಸಂಸ್ಥೆಗಳು, ಉದ್ಯಮದ ಪಾಲುದಾರರು, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿದೆ.
ಶೃಂಗಸಭೆಯಲ್ಲಿ ಜಾಗತಿಕವಾಗಿ ಬಲವಾದ ಭಾಗವಹಿಸುವಿಕೆಯನ್ನು ಸಚಿವರು ಉಲ್ಲೇಖಿಸಿದರು, ಉನ್ನತ ಕಾರ್ಯನಿರ್ವಾಹಕರು ಸುಮಾರು 20 ಅಧಿವೇಶನಗಳನ್ನು ನಡೆಸುತ್ತಿದ್ದಾರೆ ಮತ್ತು ಜಾಗತಿಕ ಎಐ ನಾಯಕರ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಎಐ ಶೃಂಗಸಭೆ ಎಂದು ಕರೆಯಲ್ಪಡುವ ಇದನ್ನು ಆಯೋಜಿಸಲು ಇಡೀ ತಂಡವು ಹಗಲಿರುಳು ಶ್ರಮಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಹೂಡಿಕೆಯ ಅವಕಾಶದ ಬಗ್ಗೆ ತಮ್ಮ ಆಶಾವಾದವನ್ನು ಹಂಚಿಕೊಂಡ ಶ್ರೀ ವೈಷ್ಣವ್ ಅವರು, ಮುಂದಿನ ಎರಡು ವರ್ಷಗಳಲ್ಲಿ 200 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಹೂಡಿಕೆ ಬರುವ ಸಾಧ್ಯತೆಯಿದೆ ಎಂದು ತಿಳಿಸಿದರು. ಡೀಪ್-ಟೆಕ್ ನವೋದ್ಯಮಗಳಿಗೆ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ಬದ್ಧತೆಯನ್ನು ಅವರು ಗಮನಿಸಿದರು ಮತ್ತು ಎಐ ಸ್ಟ್ಯಾಕ್ ನ ಎಲ್ಲಾ ಐದು ಹಂತಗಳಲ್ಲಿ ಹೂಡಿಕೆಗಳು ಬರುತ್ತಿವೆ ಎಂದು ಹೇಳಿದರು. ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ದೊಡ್ಡ ಪರಿಹಾರಗಳು ಮತ್ತು ಪ್ರಮುಖ ಅಪ್ಲಿಕೇಶನ್ ಗಳಿಗಾಗಿ ಹಣವನ್ನು ಮೀಸಲಿಡುತ್ತಿವೆ ಎಂದು ಅವರು ಹೇಳಿದರು.

ಐಟಿ ಉದ್ಯಮವು ಭಾರತದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಮತ್ತು ಪ್ರತಿಯೊಂದು ತಂತ್ರಜ್ಞಾನದ ಸ್ಥಿತ್ಯಂತರವನ್ನು ಉದ್ಯಮ, ಶಿಕ್ಷಣ ಕ್ಷೇತ್ರ ಮತ್ತು ಸರ್ಕಾರ ಜಂಟಿಯಾಗಿ ನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು. ಪ್ರಸ್ತುತ ಮೂರು ರಂಗಗಳಲ್ಲಿ ಕೆಲಸ ನಡೆಯುತ್ತಿದೆ: ಅಸ್ತಿತ್ವದಲ್ಲಿರುವ ಕಾರ್ಯಪಡೆಗೆ ಮರು-ಕೌಶಲ್ಯ ಮತ್ತು ಕೌಶಲ್ಯ ವೃದ್ಧಿ, ಹೊಸ ಪ್ರತಿಭೆಗಳ ಸಮೂಹ ರಚಿಸುವುದು ಮತ್ತು ಭವಿಷ್ಯದ ಪೀಳಿಗೆಯು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು. ಈ ಮೂರೂ ಪ್ರಯತ್ನಗಳು ಸಮಾನಾಂತರವಾಗಿ ಸಾಗುತ್ತಿವೆ ಎಂದು ಅವರು ಹೇಳಿದರು.
ಇಂಧನ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡಾ 50 ಕ್ಕಿಂತ ಹೆಚ್ಚು ಶುದ್ಧ ಮೂಲಗಳಿಂದ ಬರುವ ಅಪರೂಪದ ದೇಶಗಳಲ್ಲಿ ಭಾರತವೂ ಒಂದಾಗಿದೆ, ಪ್ರಸ್ತುತ ಇದು ಸುಮಾರು ಶೇಕಡಾ 51 ರಷ್ಟಿದೆ, ಇದು ದೇಶಕ್ಕೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾದ 'ಫ್ಯೂಚರ್ ಸ್ಕಿಲ್ಸ್' ಕಾರ್ಯಕ್ರಮವನ್ನು ಈಗ ಎಐ-ಆಧಾರಿತ ಮರು-ಕೌಶಲ್ಯಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಶಿಕ್ಷಣ ಸಚಿವಾಲಯ ಮತ್ತು ಎಐಸಿಟಿಇ ಪಠ್ಯಕ್ರಮವನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದ್ದು, ಪ್ರತಿಭೆಗಳ ಸಮೂಹ ಅಪ್ಡೇಟ್ ಆಗಿರುವುದನ್ನು ಮತ್ತು ಯುವಕರು ಹೊಸ ಅವಕಾಶಗಳೊಂದಿಗೆ ಸಜ್ಜಾಗುವುದನ್ನು ಖಚಿತಪಡಿಸಿಕೊಳ್ಳುತ್ತಿವೆ ಎಂದರು.
ಭಾರತದ ಸಾರ್ವಭೌಮ ಎಐ ಮಾದರಿಗಳ ಬಗ್ಗೆ ಮಾತನಾಡಿದ ಸಚಿವರು, ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾದ ಹಲವಾರು ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಮೌಲ್ಯೀಕರಿಸಲಾಗಿದೆ ಎಂದು ತಿಳಿಸಿದರು. ಜಾಗತಿಕ ಮಾದರಿಗಳೊಂದಿಗೆ ಹೋಲಿಸಿದಾಗ, ಹಲವಾರು ಭಾರತೀಯ ಮಾದರಿಗಳು ಅನೇಕ ದೊಡ್ಡ ಅಂತರರಾಷ್ಟ್ರೀಯ ಎಐ ವ್ಯವಸ್ಥೆಗಳಿಗಿಂತ ಉತ್ತಮವಾಗಿ ರೇಟ್ ಮಾಡಲ್ಪಟ್ಟಿವೆ, ಇದು ಭಾರತದ ನಾವೀನ್ಯತೆ ಸಾಮರ್ಥ್ಯಗಳನ್ನು ಉಲ್ಲೇಖಿಸುತ್ತದೆ. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯವು ಜಾಗತಿಕವಾಗಿ ಅಗ್ರ ಮೂರು ಎಐ ರಾಷ್ಟ್ರಗಳಲ್ಲಿ ಭಾರತವನ್ನು ಗುರುತಿಸಿದೆ ಎಂದು ಅವರು ಹೇಳಿದರು.
ಎಐನ ಸಂಭಾವ್ಯ ದುರುಪಯೋಗದ ಬಗ್ಗೆ ಮಾತನಾಡಿದ ಐಟಿ ಸಚಿವರು, ಎಐ ಅನ್ನು ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಿ ಒಳ್ಳೆಯದಕ್ಕಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ-ಕಾನೂನು ವಿಧಾನದ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ವಿಧಾನವು ತಾಂತ್ರಿಕ ಪರಿಹಾರಗಳನ್ನು ನಿಯಂತ್ರಕ ಚೌಕಟ್ಟುಗಳೊಂದಿಗೆ ಸಂಯೋಜಿಸುತ್ತದೆ. ಭಾರತದ ಎಐ ಸುರಕ್ಷತಾ ಸಂಸ್ಥೆ (ಎಐ ಸೇಫ್ಟಿ ಇನ್ಸ್ಟಿಟ್ಯೂಟ್) ಯು ಬಹು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ವರ್ಚುವಲ್ ಸಂಸ್ಥೆಯಾಗಿದ್ದು, ಎಐ ದುರುಪಯೋಗವನ್ನು ತಡೆಗಟ್ಟಲು ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು.
ವಲಯವಾರು ನಿಯೋಜನೆಯ ಕುರಿತು ಮಾತನಾಡಿದ ಶ್ರೀ ವೈಷ್ಣವ್ ಅವರು ಎಐ ಅನ್ನು 'ಐದನೇ ಕೈಗಾರಿಕಾ ಕ್ರಾಂತಿ' ಎಂದು ಬಣ್ಣಿಸಿದರು, ಇದು ಆರ್ಥಿಕತೆ ಮತ್ತು ಸಮಾಜದ ಪ್ರತಿಯೊಂದು ವಲಯದ ಮೇಲೆ ಪರಿಣಾಮ ಬೀರುತ್ತದೆ. ಶೃಂಗಸಭೆಯಲ್ಲಿ ಪ್ರದರ್ಶಿಸಲಾದ ಆರೋಗ್ಯ ರಕ್ಷಣಾ ಪರಿಹಾರಗಳು ವೈದ್ಯಕೀಯ ಸೇವೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಬಲ್ಲವು ಮತ್ತು ಶಿಕ್ಷಣದ ಪರಿಹಾರಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಸೂಕ್ತವಾದ ಕಲಿಕೆಯನ್ನು ಸಕ್ರಿಯಗೊಳಿಸುತ್ತವೆ ಎಂದು ಅವರು ಹೇಳಿದರು.
ಚಿಪ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸೆಮಿಕಂಡಕ್ಟರ್ ಮಿಷನ್ ಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು, ಸೆಮಿಕಂಡಕ್ಟರ್ 2.0 ರಲ್ಲಿ ವಿನ್ಯಾಸವು ಪ್ರಾಥಮಿಕ ಗಮನವಾಗಿರುತ್ತದೆ ಎಂದು ಹೇಳಿದರು. ಪ್ರಸ್ತುತ ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಂದಾಗಿ ಮುಂಬರುವ ವರ್ಷಗಳಲ್ಲಿ ಭಾರತದಿಂದ ಕನಿಷ್ಠ 50 ಡೀಪ್-ಟೆಕ್ ನವೋದ್ಯಮಗಳು ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಸುಸ್ಥಿರತೆಯ ಕುರಿತು ಮಾತನಾಡಿದ ಸಚಿವರು, ಎಐ ಡೇಟಾ ಕೇಂದ್ರಗಳಿಗೆ ಚಾಲನೆ ನೀಡಲು ಶುದ್ಧ ಇಂಧನದಲ್ಲಿ ಹೂಡಿಕೆ ಮಾಡಲಾಗುತ್ತಿದೆ ಮತ್ತು ವಿದ್ಯುತ್ ಹಾಗೂ ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದರು. ಉದಯೋನ್ಮುಖ ನಾವೀನ್ಯತೆಗಳು ಎಐ ಮೂಲಸೌಕರ್ಯದ ಇಂಧನ ಬಳಕೆಯನ್ನು ಶೇಕಡಾ 35 ರಷ್ಟು ಕಡಿಮೆ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತಿವೆ ಎಂದರು.
ಶೃಂಗಸಭೆಯ ಮೊದಲ ದಿನದಂದು 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜವಾಬ್ದಾರಿಯುತ ನಾವೀನ್ಯತೆಗಾಗಿ ಎಐ ಬಳಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಈ ಉಪಕ್ರಮವನ್ನು 'ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್' ಗುರುತಿಸುವಿಕೆಗಾಗಿ ಸಲ್ಲಿಸಲಾಗುತ್ತಿದೆ.
ಭಾರತವು ಎಐ ಅನ್ನು ಜವಾಬ್ದಾರಿಯುತವಾಗಿ ಮುನ್ನಡೆಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಸಮಾಜದ ಒಳಿತಿಗಾಗಿ ಎಲ್ಲಾ ವಲಯಗಳಲ್ಲಿ ವ್ಯಾಪಕವಾದ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದ ಸಚಿವರು ತಮ್ಮ ಮಾತು ಮುಗಿಸಿದರು.
******
(ಪ್ರಕಟಣೆ ಐ.ಡಿ.: 2229299)
ವಿಸಿಟರ್ ಕೌಂಟರ್ : 6