ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಭಾರತೀಯ ನಾಗರಿಕತೆಯ ಕೇಂದ್ರ ಮೌಲ್ಯ ಸೇವಾ ಅಥವಾ ಸೇವೆ: ಪ್ರಧಾನಮಂತ್ರಿ 

‘ಸೇವೋ ಪರಮೋ ಧರ್ಮಃ’ ಎಂಬುದು ಶತಮಾನಗಳ ಬದಲಾವಣೆಗಳು ಮತ್ತು ಸವಾಲುಗಳ ಮೂಲಕ ಭಾರತವನ್ನು ಸುಸ್ಥಿರಗೊಳಿಸಿದ ನೈತಿಕತೆಯ ನೀತಿಯಾಗಿದೆ, ಇದು ನಮ್ಮ ನಾಗರಿಕತೆಗೆ ಅದರ ಆಂತರಿಕ ಶಕ್ತಿಯನ್ನು ನೀಡಿದೆ: ಪ್ರಧಾನಮಂತ್ರಿ 

ಶ್ರೀ ಸತ್ಯ ಸಾಯಿ ಬಾಬಾ ಸೇವೆಯನ್ನು ಮಾನವ ಜೀವನದ ಹೃದಯಭಾಗದಲ್ಲಿ ಇರಿಸಿದರು: ಪ್ರಧಾನಮಂತ್ರಿ 

ಶ್ರೀ ಸತ್ಯ ಸಾಯಿ ಬಾಬಾ ಆಧ್ಯಾತ್ಮಿಕತೆಯನ್ನು ಸಾಮಾಜಿಕ ಸೇವೆ ಮತ್ತು ಮಾನವ ಕಲ್ಯಾಣಕ್ಕಾಗಿ ಸಲಕರಣೆಯಾಗಿ ಪರಿವರ್ತಿಸಿದರು: ಪ್ರಧಾನಮಂತ್ರಿ 

ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಮನೋಭಾವವನ್ನು ಮತ್ತಷ್ಟು ಬಲಪಡಿಸಲು ನಾವು ಸಂಕಲ್ಪ ಮಾಡೋಣ; ವಿಕಸಿತ ಭಾರತವನ್ನು ನಿರ್ಮಿಸಲು, ನಾವು ನಮ್ಮ ಸ್ಥಳೀಯ ಆರ್ಥಿಕತೆಯನ್ನು ಸಬಲೀಕರಣಗೊಳಿಸಬೇಕು: ಪ್ರಧಾನಮಂತ್ರಿ 

प्रविष्टि तिथि: 19 NOV 2025 1:30PM by PIB Bengaluru

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಇಂದು ನಡೆದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು "ಸಾಯಿ ರಾಮ್" ನೊಂದಿಗೆ ಪ್ರಾರಂಭಿಸಿದರು ಮತ್ತು ಪುಟ್ಟಪರ್ತಿಯ ಪವಿತ್ರ ಭೂಮಿಯಲ್ಲಿ ಎಲ್ಲರೊಂದಿಗೆ ಇರುವುದು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಲ್ಪ ಸಮಯದ ಹಿಂದೆ, ಬಾಬಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸುವ ಅವಕಾಶ ತಮಗೆ ಸಿಕ್ಕಿತು ಎಂಬುದನ್ನೂ ಅವರು ಹಂಚಿಕೊಂಡರು. ಬಾಬಾ ಅವರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದು ಸದಾ ಹೃದಯವನ್ನು ತುಂಬುವ ಆಳವಾದ ಭಾವನಾತ್ಮಕ ಕ್ಷಣ ಎಂದವರು ಬಣ್ಣಿಸಿದರು. 

ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ವರ್ಷವು ಈ ಪೀಳಿಗೆಗೆ ಕೇವಲ ಆಚರಣೆ ಮಾತ್ರವಲ್ಲ, ಜೊತೆಗೆ ಅದು ದೈವಿಕ ಆಶೀರ್ವಾದವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಬಾಬಾ ಅವರು ಭೌತಿಕ ರೂಪದಲ್ಲಿ ಇಲ್ಲದಿದ್ದರೂ, ಅವರ ಬೋಧನೆಗಳು, ಅವರ ಪ್ರೀತಿ ಮತ್ತು ಅವರ ಸೇವಾ ಮನೋಭಾವವು ಪ್ರಪಂಚದಾದ್ಯಂತ ಕೋಟ್ಯಂತರ ಜನರಿಗೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದು ಹೇಳಿದರು. 140ಕ್ಕೂ ಹೆಚ್ಚು ದೇಶಗಳಲ್ಲಿ, ಅಸಂಖ್ಯಾತ ಬದುಕುಗಳು ನವೀಕೃತ ಬೆಳಕು, ದಿಕ್ಕು ಮತ್ತು ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ ಎಂಬುದನ್ನೂ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

ಶ್ರೀ ಸತ್ಯಸಾಯಿ ಬಾಬಾ ಅವರ ಜೀವನವು ವಸುಧೈವ ಕುಟುಂಬಕಂ ಎಂಬ ಆದರ್ಶದ ಜೀವಂತ ಸಾಕಾರವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, "ಆದ್ದರಿಂದ, ಈ ಜನ್ಮ ಶತಮಾನೋತ್ಸವ ವರ್ಷವು ಸಾರ್ವತ್ರಿಕ ಪ್ರೀತಿ, ಶಾಂತಿ ಮತ್ತು ಸೇವೆಯ ಭವ್ಯ ಹಬ್ಬದ ಆಚರಣೆಯಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ₹100ರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ಸರ್ಕಾರಕ್ಕೆ ದಕ್ಕಿದ ಉತ್ತಮ ಅದೃಷ್ಟ ಎಂದು ಅವರು ನುಡಿದರು, ಇದು ಬಾಬಾ ಅವರ ಸೇವಾ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದಾದ್ಯಂತದ ಭಕ್ತರು, ಸಹೋದ್ಯೋಗಿ ಸ್ವಯಂಸೇವಕರು ಮತ್ತು ಬಾಬಾ ಅನುಯಾಯಿಗಳಿಗೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದರು.

"ಭಾರತೀಯ ನಾಗರಿಕತೆಯ ಕೇಂದ್ರ ಮೌಲ್ಯ ಸೇವಾ ಅಥವಾ ಸೇವೆ" ಎಂದು ಪ್ರಧಾನಮಂತ್ರಿ  ಉದ್ಗರಿಸಿದರು, ಭಾರತದ ಎಲ್ಲಾ ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂಪ್ರದಾಯಗಳು ಅಂತಿಮವಾಗಿ ಈ ಒಂದು ಆದರ್ಶದತ್ತ ಸಾಗುತ್ತವೆ ಎಂದು ಒತ್ತಿ ಹೇಳಿದರು. ಯಾರೇ ಆದರೂ ಭಕ್ತಿ, ಜ್ಞಾನ ಅಥವಾ ಕರ್ಮದ ಹಾದಿಯಲ್ಲಿ ನಡೆಯಲಿ, ಕೊನೆಯಲ್ಲಿ ಅದು  ಸೇವೆಗೆ ಜೋಡಿಸಲ್ಪಡುತ್ತದೆ. ಎಲ್ಲಾ ಜೀವಿಗಳಲ್ಲಿರುವ ದೈವಿಕತೆಗೆ ಸೇವೆ ಸಲ್ಲಿಸದೆ ಇದ್ದರೆ ಅದು ಭಕ್ತಿಯೇ ಎಂದು ಪ್ರಶ್ನಿಸಿದ ಅವರು ಇತರರ ಬಗ್ಗೆ ಸಹಾನುಭೂತಿಯನ್ನು ಜಾಗೃತಗೊಳಿಸದಿದ್ದರೆ ಅದು ಜ್ಞಾನ ಎನಿಸಿಕೊಳ್ಳುತ್ತದೆಯೇ ಮತ್ತು ಸಮಾಜಕ್ಕೆ ಸೇವೆಯಾಗಿ ತನ್ನ ಕೆಲಸವನ್ನು ಸಮರ್ಪಿಸುವ ಮನೋಭಾವವಿಲ್ಲದಿದ್ದರೆ ಅದು ಕರ್ಮ ಎನಿಸಿಕೊಳ್ಳುತ್ತದೆಯೇ ಎಂದು ಅವರು ಪ್ರಶ್ನಿಸಿದರು. "'ಸೇವಾ ಪರಮೋ ಧರ್ಮಃ' ಎಂಬುದು ಶತಮಾನಗಳ ಬದಲಾವಣೆಗಳು ಮತ್ತು ಸವಾಲುಗಳ ಮೂಲಕ ಭಾರತವನ್ನು ಉಳಿಸಿಕೊಂಡಿರುವ ನೈತಿಕ ನೀತಿಯಾಗಿದೆ, ನಮ್ಮ ನಾಗರಿಕತೆಗೆ ಅದು ಆಂತರಿಕ ಶಕ್ತಿಯನ್ನು ನೀಡುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು, ಅನೇಕ ಮಹಾನ್ ಸಂತರು ಮತ್ತು ಸುಧಾರಕರು ಈ ಕಾಲಾತೀತ ಸಂದೇಶವನ್ನು ತಮ್ಮ ಕಾಲಕ್ಕೆ ಸೂಕ್ತವಾದ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ದಿದ್ದಾರೆ ಎಂದ ಅವರು ಶ್ರೀ ಸತ್ಯಸಾಯಿ ಬಾಬಾ ಅವರು ಪ್ರತೀ ಮಾನವ ಜೀವನದ ಹೃದಯಭಾಗದಲ್ಲಿ ಸೇವೆಯನ್ನು ಇರಿಸಿದ್ದಾರೆ ಎಂದೂ ಒತ್ತಿ ಹೇಳಿದರು. "ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ" ಎಂದು ಬಾಬಾ ಅವರ ಮಾತುಗಳನ್ನು ಅವರು ನೆನಪಿಸಿಕೊಂಡರು ಮತ್ತು ಬಾಬಾ ಅವರಿಗೆ ಸೇವೆಯು ಕ್ರಿಯೆಯಲ್ಲಿ ಪ್ರೀತಿ ಇತ್ತು ಎಂಬುದನ್ನೂ ದೃಢಪಡಿಸಿದರು. ಶಿಕ್ಷಣ, ಆರೋಗ್ಯ ರಕ್ಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಬಾಬಾ ಅವರ ಸಂಸ್ಥೆಗಳು ಈ ತತ್ವಶಾಸ್ತ್ರದ ಜೀವಂತ ಪುರಾವೆಯಾಗಿ ನಿಂತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂಸ್ಥೆಗಳು ಆಧ್ಯಾತ್ಮಿಕತೆ ಮತ್ತು ಸೇವೆ ಪ್ರತ್ಯೇಕವಾಗಿಲ್ಲ, ಬದಲು ಅವು ಒಂದೇ ಸತ್ಯದ ವಿಭಿನ್ನ ಅಭಿವ್ಯಕ್ತಿಗಳಾಗಿವೆ ಎಂದೂ ಅವರು ಒತ್ತಿ ಹೇಳಿದರು. ಒಬ್ಬರ ದೈಹಿಕ ಉಪಸ್ಥಿತಿಯಲ್ಲಿ ಜನರನ್ನು ಪ್ರೇರೇಪಿಸುವುದು ಅಸಾಮಾನ್ಯವಲ್ಲವಾದರೂ, ಬಾಬಾ ಅವರ ಸಂಸ್ಥೆಗಳ ಸೇವಾ ಚಟುವಟಿಕೆಗಳು ಅವರ ದೈಹಿಕ ಅನುಪಸ್ಥಿತಿಯ ಹೊರತಾಗಿಯೂ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇವೆ ಎಂದು ಶ್ರೀ ಮೋದಿ ಹೇಳಿದರು. ನಿಜವಾದ ಮಹಾನ್ ಆತ್ಮಗಳ ಪ್ರಭಾವವು ಕಾಲಾನಂತರದಲ್ಲಿ ಕಡಿಮೆಯಾಗುವುದಿಲ್ಲ – ಬದಲು ವಾಸ್ತವವಾಗಿ ಅದು ಬೆಳೆಯುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.

ಶ್ರೀ ಸತ್ಯಸಾಯಿ ಬಾಬಾ ಅವರ ಸಂದೇಶವು ಎಂದಿಗೂ ಪುಸ್ತಕಗಳು, ಪ್ರವಚನಗಳು ಅಥವಾ ಆಶ್ರಮದ ಗಡಿಗಳಿಗೆ ಸೀಮಿತವಾದುದಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಬಾಬಾ ಅವರ ಬೋಧನೆಗಳ ಪ್ರಭಾವ ಜನರಲ್ಲಿ ಗೋಚರಿಸುತ್ತದೆ ಎಂದು ಹೇಳಿದರು. ನಗರಗಳಿಂದ ದೂರದ ಹಳ್ಳಿಗಳವರೆಗೆ, ಶಾಲೆಗಳಿಂದ ಬುಡಕಟ್ಟು ವಸತಿ ಪ್ರದೇಶಗಳವರೆಗೆ, ಭಾರತದಾದ್ಯಂತ ಸಂಸ್ಕೃತಿ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಯ ಗಮನಾರ್ಹ ಹರಿವು ಇದೆ. 

ಬಾಬಾ ಅವರ ಲಕ್ಷಾಂತರ ಅನುಯಾಯಿಗಳು ನಿಸ್ವಾರ್ಥವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. "ಮಾನವ ಸೇವಾ ಹಿ ಮಾಧವ ಸೇವಾ" ಎಂಬುದು ಬಾಬಾ ಅವರ ಭಕ್ತರಿಗೆ ಅತ್ಯುನ್ನತ ಆದರ್ಶವಾಗಿದೆ ಎಂದು ಅವರು ಗಮನಿಸಿದರು. ಬಾಬಾ ಸಹಾನುಭೂತಿ, ಕರ್ತವ್ಯ, ಶಿಸ್ತು ಮತ್ತು ಜೀವನ ತತ್ವಶಾಸ್ತ್ರದ ಸಾರವನ್ನು ಒಳಗೊಂಡಿರುವ ಅನೇಕ ಆಲೋಚನೆಗಳನ್ನು ನೀಡಿದರು ಎಂದು ಪ್ರಧಾನಮಂತ್ರಿ  ಹೇಳಿದರು. ಬಾಬಾ ಅವರ ಮಾರ್ಗದರ್ಶಿ ತತ್ವಗಳಾದ "ಸದಾ ಸಹಾಯ ಮಾಡಿ, ಎಂದಿಗೂ ನೋಯಿಸಬೇಡಿ" ಮತ್ತು "ಕಡಿಮೆ ಮಾತು, ಹೆಚ್ಚಿನ ಕೆಲಸ" ಗಳನ್ನು ಅವರು ನೆನಪಿಸಿಕೊಂಡರು ಮತ್ತು ಶ್ರೀ ಸತ್ಯಸಾಯಿ ಬಾಬಾ ಅವರ ಜೀವನ ಮಂತ್ರಗಳು ಸದಾ ಎಲ್ಲರ ಹೃದಯಗಳಲ್ಲಿ ಪ್ರತಿಧ್ವನಿಸುತ್ತಿರುತ್ತವೆ ಎಂದು ದೃಢಪಡಿಸಿದರು.

ಶ್ರೀ ಸತ್ಯಸಾಯಿ ಬಾಬಾ ಅವರು ಸಮಾಜ ಮತ್ತು ಜನರ ಕಲ್ಯಾಣಕ್ಕಾಗಿ ಆಧ್ಯಾತ್ಮಿಕತೆಯನ್ನು ಬಳಸಿದರು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅದನ್ನು ನಿಸ್ವಾರ್ಥ ಸೇವೆ, ವ್ಯಕ್ತಿತ್ವ ನಿರ್ಮಾಣ ಮತ್ತು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಜೋಡಿಸಿದರು. ಬಾಬಾ ಯಾವುದೇ ತತ್ವ ಅಥವಾ ಸಿದ್ಧಾಂತವನ್ನು ಹೇರಲಿಲ್ಲ, ಬದಲಿಗೆ ಬಡವರಿಗೆ ಸಹಾಯ ಮಾಡಲು ಮತ್ತು ಅವರ ದುಃಖವನ್ನು ನಿವಾರಿಸಲು ಕೆಲಸ ಮಾಡಿದರು ಎಂಬುದನ್ನು ಒತ್ತಿ ಹೇಳಿದರು. ಗುಜರಾತ್ ಭೂಕಂಪದ ನಂತರ, ಬಾಬಾ ಅವರ ಸೇವಾ ದಳವು ಪರಿಹಾರ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿತ್ತು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಅವರ ಅನುಯಾಯಿಗಳು ಹಲವಾರು ದಿನಗಳ ಕಾಲ ಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದರು, ಸಂತ್ರಸ್ತ ಕುಟುಂಬಗಳಿಗೆ ಸಹಾಯ ತಲುಪುವಲ್ಲಿ, ಅಗತ್ಯ ಸಾಮಗ್ರಿಗಳನ್ನು ಒದಗಿಸುವಲ್ಲಿ ಮತ್ತು ಮಾನಸಿಕ ಬೆಂಬಲವನ್ನು ನೀಡುವಲ್ಲಿ ಗಣನೀಯ ಕೊಡುಗೆ ನೀಡಿದರು ಎಂದರು.

ಒಂದೇ ಒಂದು ಸಭೆಯು ಯಾರೊಬ್ಬರ ಹೃದಯವನ್ನು ಬೇಕಾದರೂ ಕರಗಿಸಬಹುದು ಅಥವಾ ಅವರ ಜೀವನದ ದಿಕ್ಕನ್ನು ಬದಲಾಯಿಸಬಹುದು, ಅದು ಆ ವ್ಯಕ್ತಿಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಇರುವ ಅನೇಕರ ಬದುಕು ಕೂಡಾ ಬಾಬಾ ಅವರ ಸಂದೇಶದಿಂದ ಆಳವಾಗಿ ರೂಪಾಂತರಗೊಂಡಿದೆ ಎಂಬುದರತ್ತ ಅವರು ಗಮನ ಸೆಳೆದರು. 

ಶ್ರೀ ಸತ್ಯಸಾಯಿ ಬಾಬಾ ಅವರಿಂದ ಪ್ರೇರಿತರಾಗಿ, ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಮತ್ತು ಅದರ ಅಂಗಸಂಸ್ಥೆಗಳು ಸಂಘಟಿತ, ಸಾಂಸ್ಥಿಕ ಮತ್ತು ದೀರ್ಘಕಾಲೀನ ರೀತಿಯಲ್ಲಿ ಸೇವೆಯನ್ನು ಮುಂದುವರಿಸುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಇಂದು ಇದು ಪ್ರಾಯೋಗಿಕ ಮಾದರಿಯಾಗಿ ನಮ್ಮ ಮುಂದೆ ನಿಂತಿದೆ ಎಂದು ಹೇಳಿದರು. ನೀರು, ವಸತಿ, ಆರೋಗ್ಯ ರಕ್ಷಣೆ, ಪೋಷಣೆ, ವಿಪತ್ತು ಬೆಂಬಲ ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಗಮನಾರ್ಹ ಕೆಲಸವನ್ನು ಅವರು ಶ್ಲಾಘಿಸಿದರು. ಪ್ರಧಾನಮಂತ್ರಿ ಅವರು ಹಲವಾರು ಸೇವಾ ಉಪಕ್ರಮಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು: ರಾಯಲಸೀಮಾದಲ್ಲಿ ತೀವ್ರ ಕುಡಿಯುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಟ್ರಸ್ಟ್ 3,000 ಕಿಲೋಮೀಟರ್ಗಳಿಗೂ ಹೆಚ್ಚು ಪೈಪ್ಲೈನ್ ಹಾಕಿತು; ಒಡಿಶಾದಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗೆ 1,000 ಮನೆಗಳನ್ನು ನಿರ್ಮಿಸಿತು; ಮತ್ತು ಅದು ಬಿಲ್ಲಿಂಗ್ ಕೌಂಟರ್ ಇಲ್ಲದಿರುವುದನ್ನು ಕಂಡು ಬಡ ಜನರು ಆಶ್ಚರ್ಯಪಡುವಂತಹ ಆಸ್ಪತ್ರೆಗಳನ್ನು ನಡೆಸುತ್ತಿದೆ. ಚಿಕಿತ್ಸೆ ಉಚಿತವಾಗಿದ್ದು, ರೋಗಿಗಳು ಮತ್ತು ಅವರ ಕುಟುಂಬಗಳು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ ಎಂಬುದರತ್ತಲೂ ಅವರು ಗಮನ ಸೆಳೆದರು. ಇಂದು, 20,000ಕ್ಕೂ ಹೆಚ್ಚು ಸುಕನ್ಯಾ ಸಮೃದ್ಧಿ ಯೋಜನಾ ಖಾತೆಗಳನ್ನು ಹೆಣ್ಣುಮಕ್ಕಳ ಹೆಸರಿನಲ್ಲಿ ತೆರೆಯಲಾಗಿದೆ, ಅವರ ಶಿಕ್ಷಣ ಮತ್ತು ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂಬ ಮಾಹಿತಿಯನ್ನೂ  ಪ್ರಧಾನಮಂತ್ರಿ  ಈ ಸಂದರ್ಭ ಹಂಚಿಕೊಂಡರು.

ಹತ್ತು ವರ್ಷಗಳ ಹಿಂದೆ ಭಾರತ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರ ಉಜ್ವಲ ಭವಿಷ್ಯದ ಮೇಲೆ ಗಮನ ಹರಿಸಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿತು ಎಂಬುದನ್ನು ಉಲ್ಲೇಖಿಸಿದ ಶ್ರೀ ಮೋದಿ, ಇದು ನಮ್ಮ ಹೆಣ್ಣುಮಕ್ಕಳಿಗೆ ಶೇ. 8.2 ರಷ್ಟು ಅತಿ ಹೆಚ್ಚು ಬಡ್ಡಿದರವನ್ನು ನೀಡುವ ದೇಶದ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಭಾರತದಾದ್ಯಂತ ಹೆಣ್ಣುಮಕ್ಕಳಿಗಾಗಿ ಈ ಯೋಜನೆಯಡಿಯಲ್ಲಿ 4 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಮತ್ತು ಇಲ್ಲಿಯವರೆಗೆ ಈ ಖಾತೆಗಳಲ್ಲಿ ₹3.25 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಮಾಡಲಾಗಿದೆ ಎಂದು ಅವರು ಹಂಚಿಕೊಂಡರು. ಶ್ರೀ ಸತ್ಯ ಸಾಯಿ ಕುಟುಂಬದವರು 20,000 ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯುವಲ್ಲಿ ಕೈಗೊಂಡ ಉದಾತ್ತ ಉಪಕ್ರಮವನ್ನು ಪ್ರಧಾನಮಂತ್ರಿ  ಶ್ಲಾಘಿಸಿದರು. ತಮ್ಮ ಕ್ಷೇತ್ರವನ್ನು ಉಲ್ಲೇಖಿಸುತ್ತಾ ಅವರು, ಕಳೆದ ವರ್ಷ ಫೆಬ್ರವರಿಯಲ್ಲಿ ವಾರಣಾಸಿಯಲ್ಲಿ ಹೆಣ್ಣುಮಕ್ಕಳಿಗಾಗಿ 27,000 ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲಾಯಿತು ಮತ್ತು ಪ್ರತಿ ಖಾತೆಗೆ ₹300 ವರ್ಗಾಯಿಸಲಾಯಿತು ಎಂದು ಅವರು ಹೇಳಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುವಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ದೃಢಪಡಿಸಿದರು.

ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತದಲ್ಲಿ ನಾಗರಿಕರಿಗೆ ಸಾಮಾಜಿಕ ಭದ್ರತಾ ಚೌಕಟ್ಟನ್ನು ಗಮನಾರ್ಹವಾಗಿ ಬಲಪಡಿಸುವ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಡವರು ಮತ್ತು ಹಿಂದುಳಿದವರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. 2014ರಲ್ಲಿ ಕೇವಲ 25 ಕೋಟಿ ಜನರು ಮಾತ್ರ ಈ ಸೌಲಭ್ಯ ಪಡೆದಿದ್ದರು, ಆದರೆ ಇಂದು ಈ ಸಂಖ್ಯೆ ಸುಮಾರು 100 ಕೋಟಿ ತಲುಪಿದೆ. ಭಾರತದ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಈ ದಿನದಂದು, ಟ್ರಸ್ಟ್ ಬಡ ರೈತ ಕುಟುಂಬಗಳಿಗೆ 100 ಹಸುಗಳನ್ನು ದಾನ ಮಾಡುತ್ತಿರುವ ಗೋದಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ತಮಗೆ ಸಿಕ್ಕಿದೆ ಎಂಬುದನ್ನೂ ಶ್ರೀ ಮೋದಿ ಹಂಚಿಕೊಂಡರು. ಭಾರತೀಯ ಸಂಪ್ರದಾಯದಲ್ಲಿ, ಹಸುವನ್ನು ಜೀವನ, ಸಮೃದ್ಧಿ ಮತ್ತು ಕರುಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಹಸುಗಳು ತಮ್ಮನ್ನು ಸ್ವೀಕರಿಸುವ ಕುಟುಂಬಗಳ ಆರ್ಥಿಕ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಸ್ಥಿರತೆಯನ್ನು ಬೆಂಬಲಿಸುತ್ತವೆ. ಗೋ ರಕ್ಷಣೆಯ ಮೂಲಕ ಸಮೃದ್ಧಿಯ ಸಂದೇಶವು ಪ್ರಪಂಚದಾದ್ಯಂತ ಗೋಚರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ, ಕೆಲವು ವರ್ಷಗಳ ಹಿಂದೆ ವಾರಣಾಸಿಯಲ್ಲಿ 480ಕ್ಕೂ ಹೆಚ್ಚು ಗಿರ್ ಹಸುಗಳನ್ನು ವಿತರಿಸಲಾಗಿತ್ತು ಮತ್ತು ಇಂದು ಅಲ್ಲಿ ಗಿರ್ ಹಸುಗಳು ಮತ್ತು ಕರುಗಳ ಸಂಖ್ಯೆ ಸುಮಾರು 1,700ಕ್ಕೆ ಬೆಳೆದಿದೆ ಎಂದು ಅವರು ನೆನಪಿಸಿಕೊಂಡರು. ವಾರಣಾಸಿಯಲ್ಲಿ ಹೊಸ ಸಂಪ್ರದಾಯವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹಂಚಿಕೊಂಡರು, ಅಲ್ಲಿ ವಿತರಿಸಲಾದ ಹಸುವಿನಿಂದ ಜನಿಸಿದ ಹೆಣ್ಣು ಕರುವನ್ನು ಇತರ ಪ್ರದೇಶಗಳ ರೈತರಿಗೆ ಉಚಿತವಾಗಿ ನೀಡಲಾಗುತ್ತದೆ, ಇದರಿಂದಾಗಿ ಹಸುಗಳ ಸಂಖ್ಯೆ ಹೆಚ್ಚಾಗುತ್ತದೆ. 7-8 ವರ್ಷಗಳ ಹಿಂದೆ ಆಫ್ರಿಕಾದ ರುವಾಂಡಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತವು 200 ಗಿರ್ ಹಸುಗಳನ್ನು ಉಡುಗೊರೆಯಾಗಿ ನೀಡಿತ್ತು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ರುವಾಂಡಾದಲ್ಲಿ "ಗಿರಿಂಕಾ" ಎಂಬ ಇದೇ ರೀತಿಯ ಸಂಪ್ರದಾಯವಿದೆ, ಅಂದರೆ "ನಿಮಗೆ ಹಸು ಸಿಗಲಿ" ಎಂಬುದು ಅದರ ಅರ್ಥ, ಅಲ್ಲಿ ಮೊದಲು ಜನಿಸಿದ ಹೆಣ್ಣು ಕರುವನ್ನು ನೆರೆಯ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಅವರು ನುಡಿದರು. ಈ ಪದ್ಧತಿಯು ರುವಾಂಡಾದಲ್ಲಿ ಪೋಷಣೆ, ಹಾಲು ಉತ್ಪಾದನೆ, ಆದಾಯ ಮತ್ತು ಸಾಮಾಜಿಕ ಏಕತೆಯನ್ನು ಹೆಚ್ಚಿಸಿದೆ.

ಬ್ರೆಜಿಲ್ ದೇಶವು ಭಾರತದ ಗಿರ್ ಮತ್ತು ಕಾಂಕ್ರೇಜ್ ಜಾನುವಾರು ತಳಿಗಳನ್ನು ಪಡೆದುಕೊಂಡು ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ನಿರ್ವಹಣೆಯ ಮೂಲಕ ಅವುಗಳನ್ನು ಅಭಿವೃದ್ಧಿಪಡಿಸಿದೆ, ಇದು ಅವುಗಳನ್ನು ಅತ್ಯುತ್ತಮ ಹೈನುಗಾರಿಕೆ ಕಾರ್ಯಕ್ಷಮತೆಯ ಮೂಲವನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿ  ಒತ್ತಿ ಹೇಳಿದರು. ಸಂಪ್ರದಾಯ, ಕರುಣೆ ಮತ್ತು ವೈಜ್ಞಾನಿಕ ಚಿಂತನೆಗಳು ಒಟ್ಟಾಗಿ ಹಸುವನ್ನು ನಂಬಿಕೆ, ಸಬಲೀಕರಣ, ಪೋಷಣೆ ಮತ್ತು ಆರ್ಥಿಕ ಪ್ರಗತಿಯ ಸಂಕೇತವಾಗಿ ಹೇಗೆ ಪರಿವರ್ತಿಸುತ್ತವೆ ಎಂಬುದನ್ನು ಇಂತಹ ಉದಾಹರಣೆಗಳು ತೋರಿಸುತ್ತವೆ ಎಂದು ಅವರು ಹೇಳಿದರು. ಈ ಸಂಪ್ರದಾಯವನ್ನು ಇಲ್ಲಿ ಉದಾತ್ತ ಉದ್ದೇಶದಿಂದ ಮುಂದುವರಿಸಲಾಗುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ಭಾರತದತ್ತ "ಕರ್ತವ್ಯ ಕಾಲ"ದ ಮನೋಭಾವದೊಂದಿಗೆ ರಾಷ್ಟ್ರವು ಮುಂದುವರಿಯುತ್ತಿದೆ ಮತ್ತು ಈ ಗುರಿಯನ್ನು ಸಾಧಿಸಲು ಸಕ್ರಿಯ ನಾಗರಿಕರ ಭಾಗವಹಿಸುವಿಕೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ವರ್ಷವು ಈ ಪ್ರಯಾಣದಲ್ಲಿ ಸ್ಫೂರ್ತಿಯ ಪ್ರಮುಖ ಮೂಲವಾಗಿದೆ ಎಂದು ಒತ್ತಿ ಹೇಳಿದರು. ಈ ವಿಶೇಷ ವರ್ಷದಲ್ಲಿ "ಸ್ಥಳೀಯರಿಗೆ ಆದ್ಯತೆ" (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ)  ಎಂಬ ಮಂತ್ರವನ್ನು ಬಲಪಡಿಸಲು ಎಲ್ಲರನ್ನೂ  ಆಗ್ರಹಿಸಿದ ಅವರು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವುದು ಅತ್ಯಗತ್ಯ ಎಂದು ಹೇಳಿದರು. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಅದು ಕುಟುಂಬ, ಸಣ್ಣ ಉದ್ಯಮ ಮತ್ತು ಸ್ಥಳೀಯ ಪೂರೈಕೆ ಸರಪಳಿಯನ್ನು ನೇರವಾಗಿ ಸಬಲೀಕರಣಗೊಳಿಸುತ್ತದೆ, ಇದು ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ  ನೆನಪಿಸಿದರು.

ಶ್ರೀ ಸತ್ಯಸಾಯಿ ಬಾಬಾ ಅವರಿಂದ ಪ್ರೇರಿತರಾಗಿರುವ,  ಹಾಜರಿರುವ ಎಲ್ಲರೂ ನಿರಂತರವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಗುರುತಿಸಿದ ಶ್ರೀ ಮೋದಿ, ಈ ಪವಿತ್ರ ಭೂಮಿ ನಿಜವಾಗಿಯೂ ಒಂದು ವಿಶಿಷ್ಟ ಶಕ್ತಿಯನ್ನು ಹೊಂದಿದೆ ಎಂಬುದರತ್ತಲೂ ಬೆಟ್ಟು ಮಾಡಿದರು. ಇಲ್ಲಿ ಪ್ರತಿಯೊಬ್ಬ ಸಂದರ್ಶಕರ ಮಾತು ಕರುಣೆಯನ್ನು ಪ್ರತಿಬಿಂಬಿಸುತ್ತದೆ, ಆಲೋಚನೆಗಳು ಶಾಂತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಕಾರ್ಯಗಳು ಸೇವೆಯನ್ನು ಪ್ರತಿಬಿಂಬಿಸುತ್ತವೆ. ಎಲ್ಲೆಲ್ಲಿ ಅಭಾವ ಅಥವಾ ದುಃಖವಿದೆಯೋ ಅಲ್ಲೆಲ್ಲಾ ಭಕ್ತರು ಭರವಸೆ ಮತ್ತು ಬೆಳಕಿನ ದಾರಿದೀಪವಾಗಿ ನಿಲ್ಲುತ್ತಾರೆ ಎಂದು ಪ್ರಧಾನಮಂತ್ರಿ  ವಿಶ್ವಾಸ ವ್ಯಕ್ತಪಡಿಸಿದರು. ಈ ಮನೋಭಾವದಿಂದ, ಪ್ರೀತಿ, ಶಾಂತಿ ಮತ್ತು ಸೇವೆಯ ಈ ಪವಿತ್ರ ಧ್ಯೇಯವನ್ನು ಮುಂದುವರಿಸಿದ್ದಕ್ಕಾಗಿ ಸತ್ಯಸಾಯಿ ಕುಟುಂಬ, ಸಂಸ್ಥೆಗಳು, ಸ್ವಯಂಸೇವಕರು ಮತ್ತು ಪ್ರಪಂಚದಾದ್ಯಂತದ ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುವ ಮೂಲಕ ಅವರು  ಮಾತುಗಳನ್ನು ಮುಕ್ತಾಯಗೊಳಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್ ಚಂದ್ರಬಾಬು ನಾಯ್ಡು, ಕೇಂದ್ರ ಸಚಿವರಾದ ಶ್ರೀ ಕೆ ರಾಮಮೋಹನ್ ನಾಯ್ಡು, ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮಾ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಪವಿತ್ರ ದೇಗುಲ ಮತ್ತು ಮಹಾಸಮಾಧಿಗೆ ಭೇಟಿ ನೀಡಿ, ಅವರಿಗೆ ನಮನ ಮತ್ತು ಗೌರವ ಸಲ್ಲಿಸಿದರು. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಶ್ರೀ ಮೋದಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜೀವನ, ಬೋಧನೆಗಳು ಮತ್ತು ಕಾಲಾತೀತ ಪರಂಪರೆಯನ್ನು ಗೌರವಿಸಲು ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು.

 

*****

 

 


(रिलीज़ आईडी: 2191710) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Gujarati , Tamil , Telugu , Malayalam