ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿಯ ಮುನ್ನಾದಿನವಾದ ಇಂದು ಗುಜರಾತ್ನ ಕೆವಾಡಿಯಾದಲ್ಲಿ 1219 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ ಪ್ರಧಾನಮಂತ್ರಿ
                    
                    
                        
ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ವಿದ್ಯುತ್ ಬಸ್ಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥವಾಗಿ ಪ್ರಧಾನಿಯವರಿಂದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯ ಬಿಡುಗಡೆ
ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸಿದ್ದರು
                    
                
                
                    Posted On:
                30 OCT 2025 11:07PM by PIB Bengaluru
                
                
                
                
                
                
                ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯ ಮುನ್ನಾದಿನವಾದ ಇಂದು ಕೆವಾಡಿಯಾದಲ್ಲಿ ₹1219 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರಿಗೆ ಮೀಸಲಾಗಿರುವ ಬಿರ್ಸಾ ಮುಂಡಾ ಭವನ - ಜಿಎಸ್ಇಸಿ ಮತ್ತು ಸರ್ದಾರ್ ಸರೋವರ ನರ್ಮದಾ ನಿಗಮ ಲಿ. ಉದ್ಯೋಗಿಗಳಿಗೆ ವಸತಿ ಸಂಕೀರ್ಣ, ಆತಿಥ್ಯ ಜಿಲ್ಲೆಯ ಮೊದಲ ಹಂತ ಮತ್ತು ಬೋನ್ಸಾಯ್ ಉದ್ಯಾನಗಳು ಸೇರಿವೆ.
ಕೆವಾಡಿಯಾದಲ್ಲಿ ವಿದ್ಯುತ್ ಬಸ್ಗಳಿಗೆ ಸಮೂಹಿಕ ಚಾಲನೆ ನೀಡಿದ ಶ್ರೀ ಮೋದಿಯವರು, ಈ ಉಪಕ್ರಮವು ಈ ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಆರಾಮದಾಯಕ ಮತ್ತು ಸುಸ್ಥಿರ ಸಾರಿಗೆ ಸೌಲಭ್ಯಗಳನ್ನು ನೀಡುತ್ತದೆ ಎಂದು ಆಶಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿ ಆಚರಣೆಯ ಭಾಗವಾಗಿ, ಭಾರತದ ಉಕ್ಕಿನ ಮನುಷ್ಯ ಎಂದು ಹೆಸರು ಪಡೆದ ಅವರಿಗೆ ಗೌರವ ಸಲ್ಲಿಸುವ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಪ್ರಧಾನಿಯವರು ಬಿಡುಗಡೆ ಮಾಡಿದರು.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುಟುಂಬದ ಸದಸ್ಯರನ್ನು ಕೂಡಾ ಭೇಟಿ ಮಾಡಿದರು. ಅವರೊಂದಿಗೆ ಸಂವಹನ ನಡೆಸಲು ಮತ್ತು ಸರ್ದಾರ್ ಪಟೇಲ್ ಅವರು ರಾಷ್ಟ್ರಕ್ಕೆ ನೀಡಿದ ಸ್ಮರಣೀಯ ಕೊಡುಗೆಯನ್ನು ಸ್ಮರಿಸಲು ಬಹಳ ಸಂತೋಷವಾಗಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆವಾಡಿಯಾದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂಡಾ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಪೂರ್ತಿದಾಯಕ ಜೀವನ ಮತ್ತು ಪರಂಪರೆಯನ್ನು ಚಿತ್ರಿಸಲಾಗಿತ್ತು. ಈ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ಪಟೇಲ್ ಅವರ ಸಕ್ರಿಯ ಪಾತ್ರ, ರಾಷ್ಟ್ರದ ಏಕೀಕರಣಕ್ಕೆ ಅವರ ಪ್ರಮುಖ ಕೊಡುಗೆ ಮತ್ತು ಸ್ವಾತಂತ್ರ್ಯದ ನಂತರದ ಆರಂಭಿಕ ವರ್ಷಗಳಲ್ಲಿ ಅವರು ಎದುರಿಸಿದ ಸವಾಲುಗಳ ನಿವಾರಣೆಯಲ್ಲಿ ಅವರ ನಾಯಕತ್ವದ ಪಾತ್ರವನ್ನು ಎತ್ತಿ ತೋರಿಸುತ್ತದೆ.
Xನ ಪ್ರತ್ಯೇಕ ಪೋಸ್ಟ್ ಗಳಲ್ಲಿ ಪ್ರಧಾನಿಯವರು;
“ಕೆವಾಡಿಯಾದ ಮೂಲಸೌಕರ್ಯಕ್ಕೆ ಉತ್ತೇಜನ!
ಇಂದು ಸಂಜೆ 1219 ಕೋಟಿ ರೂ. ಮೌಲ್ಯದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು ಅಥವಾ ಅವುಗಳ ಶಂಕುಸ್ಥಾಪನೆಯನ್ನು ಮಾಡಲಾಯಿತು.
ಉದ್ಘಾಟನೆಯಾಗುತ್ತಿರುವ ಕಾಮಗಾರಿಗಳು ಈ ಕೆಳಗಿನಂತಿವೆ:
ಭಗವಾನ್ ಬಿರ್ಸಾ ಮುಂಡಾ ಅವರ ಗೌರವಾರ್ಥ ಐಕಾನಿಕ್ ಕೇಂದ್ರವಾದ ಬಿರ್ಸಾ ಮುಂಡಾ ಭವನ.
GSEC ಮತ್ತು SSNNL ಉದ್ಯೋಗಿಗಳಿಗೆ ವಸತಿ ಸಂಕೀರ್ಣ.
ಆತಿಥ್ಯ ಜಿಲ್ಲೆಯ ಮೊದಲ ಹಂತ.
ಬೊನ್ಸಾಯ್ ಉದ್ಯಾನವನ.”
“ಸರ್ದಾರ್ ಪಟೇಲ್ ಅವರ 150ನೇ ಜಯಂತಿಯ ಮುನ್ನಾದಿನವಾದ ಇಂದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೆವಾಡಿಯಾಗೆ ತಲುಪಿದೆ. ಮೊದಲ ಕಾರ್ಯಕ್ರಮವೆಂದರೆ ಕೆವಾಡಿಯಾಕ್ಕೆ ಭೇಟಿ ನೀಡುವ ಜನರಿಗೆ ಆರಾಮದಾಯಕ ಮತ್ತು ಸುಸ್ಥಿರ ಸಾರಿಗೆಯನ್ನು ಖಚಿತಪಡಿಸುವ ಎಲೆಕ್ಟ್ರಿಕ್ ಬಸ್ಗಳಿಗೆ ಹಸಿರು ನಿಶಾನೆ ತೋರುವುದು.”
“ಸರ್ದಾರ್ ಪಟೇಲ್ ಅವರ 150ನೇ ಜಯಂತಿಯ ಮುನ್ನಾದಿನವಾದ ಇಂದು, ಅವರ ಗೌರವಾರ್ಥವಾಗಿ ವಿಶೇಷ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಯಿತು.”
“ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುಟುಂಬವನ್ನು ಭೇಟಿಯಾಗಿ, ಅವರೊಂದಿಗೆ ಸಂವಹನ ನಡೆಸಿ ನಮ್ಮ ರಾಷ್ಟ್ರಕ್ಕೆ ಸರ್ದಾರ್ ಪಟೇಲ್ ಅವರ ಸ್ಮರಣೀಯ ಕೊಡುಗೆಯನ್ನು ಸ್ಮರಿಸಲು ಸಂತೋಷವಾಯಿತು.”
“ಕೆವಾಡಿಯಾದಲ್ಲಿ ನಡೆದ ಸರ್ದಾರ್ ಪಟೇಲ್ ಅವರ ಜೀವನವನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ,  ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಭಾರತವನ್ನು ಏಕೀಕರಿಸುವಲ್ಲಿ ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಸಿಕ್ಕಿದ ನಂತರ ಸವಾಲುಗಳನ್ನು ಎದುರಿಸುವಲ್ಲಿ ಅವರ ಪಾತ್ರ ಸೇರಿದಂತೆ ಅವರ ಜೀವನವನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ” ಎಂದು ಪೋಸ್ಟ್ ಮಾಡಿದ್ದಾರೆ.
 
*****
 
                
                
                
                
                
                (Release ID: 2184511)
                Visitor Counter : 4