ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂವಿಧಾನ ಹತ್ಯಾ ದಿವಸ್ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಕರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ


ತುರ್ತುಪರಿಸ್ಥಿತಿ ವಿರೋಧಿ ಆಂದೋಲನವು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ಸಂರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿತು: ಪ್ರಧಾನಮಂತ್ರಿ

Posted On: 25 JUN 2025 9:32AM by PIB Bengaluru

ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಐವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ದೃಢವಾಗಿ ನಿಂತ ಅಸಂಖ್ಯಾತ ಭಾರತೀಯರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ.

ಸಾಂವಿಧಾನಿಕ ಮೌಲ್ಯಗಳ ಮೇಲಿನ ಗಂಭೀರ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ, ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ, ಅಸಂಖ್ಯಾತ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ತಳ್ಳಿದ ದಿನ ಅದಾಗಿತ್ತು ಎಂದು ಅವರು ಹೇಳಿದ್ದಾರೆ.

ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು ಬಲಪಡಿಸಲು ಮತ್ತು ವಿಕಸಿತ ಭಾರತದ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದ್ದಾರೆ.

ತುರ್ತು ಪರಿಸ್ಥಿತಿ ವಿರೋಧಿ ಆಂದೋಲನವು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ಸಂರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿದ ಕಲಿಕೆಯ ಅನುಭವವಾಗಿದೆ ಎಂದು ಅವರು ಹೇಳಿದ್ದಾರೆ.

1975 ರಿಂದ 1977 ರವರೆಗಿನ ಆ ನಾಚಿಕೆಗೇಡಿನ ಅವಧಿಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು, ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವವರು ಅಥವಾ ಆ ಸಮಯದಲ್ಲಿ ಕಷ್ಟ ಅನುಭವಿಸಿದ  ಕುಟುಂಬಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕೆಂದು ಶ್ರೀ ಮೋದಿ ಕರೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ʼಎಕ್ಸ್‌ʼನಲ್ಲಿ ಈ ಕುರಿತು ಪ್ರಧಾನಿಯವರು ಸರಣಿ ಪೋಸ್ಟ್‌ ಗಳನ್ನು ಮಾಡಿದ್ದಾರೆ:

"ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಲ್ಪಟ್ಟು ಇಂದಿಗೆ 50 ವರ್ಷಗಳನ್ನು ಪೂರೈಸುತ್ತದೆ. ಭಾರತದ ಜನರು ಈ ದಿನವನ್ನು ಸಂವಿಧಾನ ಹತ್ಯಾ ದಿವಸ್ ಎಂದು ಆಚರಿಸುತ್ತಾರೆ. ಈ ದಿನದಂದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗೊತ್ತಲಾಯಿತು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಲಾಯಿತು ಮತ್ತು ಅನೇಕ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಬಂಧನದಲ್ಲಿಟ್ಟಂತೆ ಇತ್ತು! #SamvidhanHatyaDiwas"

"ನಮ್ಮ ಸಂವಿಧಾನದ ಚೈತನ್ಯವನ್ನು ಉಲ್ಲಂಘಿಸಿದ, ಸಂಸತ್ತಿನ ಧ್ವನಿಯನ್ನು ಹತ್ತಿಕ್ಕಿದ ಮತ್ತು ನ್ಯಾಯಾಲಯಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ ರೀತಿಯನ್ನು ಯಾವುದೇ ಭಾರತೀಯ ಎಂದಿಗೂ ಮರೆಯುವುದಿಲ್ಲ. 42 ನೇ ತಿದ್ದುಪಡಿ ಅವರ ಕುತಂತ್ರಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಬಡವರು, ವಂಚಿತರು ಮತ್ತು ದೀನದಲಿತರನ್ನು ನಿರ್ದಿಷ್ಟವಾಗಿ ಗುರಿಯಾಗಿಸಲಾಯಿತು, ಅವರ ಘನತೆಯನ್ನು ಅವಮಾನಿಸಲಾಯಿತು. #SamvidhanHatyaDiwas"

"ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ದೃಢವಾಗಿ ನಿಂತ ಎಲ್ಲರಿಗೂ ನಾವು ನಮಸ್ಕರಿಸುತ್ತೇವೆ! ಇವರು ಭಾರತದಾದ್ಯಂತ, ಪ್ರತಿಯೊಂದು ಪ್ರದೇಶದಿಂದ, ವಿಭಿನ್ನ ಸಿದ್ಧಾಂತಗಳಿಂದ ಬಂದವರು, ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸುವ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಎತ್ತಿಹಿಡಿಯುವ ಒಂದೇ ಉದ್ದೇಶಕ್ಕಾಗಿ ಪರಸ್ಪರ ಒಗ್ಗಟ್ಟಿನಿಂದ ಕೆಲಸ ಮಾಡಿದವರು. ಅವರ ಸಾಮೂಹಿಕ ಹೋರಾಟವೇ ಆಗಿನ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮತ್ತು ಹೊಸ ಚುನಾವಣೆಗಳನ್ನು ನಡೆಸುವಂತೆ ಮಾಡಿತು, ಆದರೆ ಅವರು ಚುನಾವಣೆಯಲ್ಲಿ ಹೀನಾಯವಾಗಿ ಸೋತರು. #SamvidhanHatyaDiwas"

"ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು ಬಲಪಡಿಸುವ ಮತ್ತು ವಿಕಸಿತ ಭಾರತದ ನಮ್ಮ ಕನಸನ್ನು ನನಸಾಗಿಸಲು ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ನಾವು ಪ್ರಗತಿಯ ಹೊಸ ಎತ್ತರವನ್ನು ಏರೋಣ ಮತ್ತು ಬಡವರು ಮತ್ತು ದೀನದಲಿತರ ಕನಸುಗಳನ್ನು ನನಸಾಗಿಸೋಣ. #SamvidhanHatyaDiwas"

"ತುರ್ತು ಪರಿಸ್ಥಿತಿ ಹೇರಿದಾಗ ನಾನು ಯುವ ಆರ್‌ ಎಸ್‌ ಎಸ್ ಪ್ರಚಾರಕನಾಗಿದ್ದೆ. ತುರ್ತು ಪರಿಸ್ಥಿತಿ ವಿರೋಧಿ ಚಳುವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ಸಂರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿತು. ಅಲ್ಲದೆ, ರಾಜಕೀಯ ವರ್ಣಪಟಲದಾದ್ಯಂತದ ಜನರಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಆ ಅನುಭವಗಳಲ್ಲಿ ಕೆಲವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿರುವುದು ನನಗೆ ಸಂತೋಷ ತಂದಿದೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಪ್ರಮುಖ ನಾಯಕರಾದ ಶ್ರೀ ಎಚ್.ಡಿ. ದೇವೇಗೌಡರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. #SamvidhanHatyaDiwas"

@BlueKraft  

@H_D_Devegowda 

#SamvidhanHatyaDiwas”

"'ದಿ ಎಮರ್ಜೆನ್ಸಿ ಡೈರೀಸ್' ತುರ್ತು ಪರಿಸ್ಥಿತಿಯ ವರ್ಷಗಳಲ್ಲಿ ನನ್ನ ಪ್ರಯಾಣವನ್ನು ವಿವರಿಸುತ್ತದೆ. ಇದು ಆ ಕಾಲದ ಅನೇಕ ನೆನಪುಗಳನ್ನು ಮರುಕಲೀಸಿತು.

ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಅಥವಾ ಆ ಸಮಯದಲ್ಲಿ ಕಷ್ಟಗಳನ್ನು ಅನುಭವಿಸಿದ ಕುಟುಂಬಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ನಾನು ಎಲ್ಲರನ್ನು ಕೋರುತ್ತೇನೆ. ಇದು 1975 ರಿಂದ 1977 ರವರೆಗಿನ ನಾಚಿಕೆಗೇಡಿನ ಸಮಯದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತದೆ.

#SamvidhanHatyaDiwas"

 

 

*****


(Release ID: 2139438)