ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೈಪ್ರಸ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

Posted On: 16 JUN 2025 3:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದರು. ಅಧ್ಯಕ್ಷರ ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರು ಬರಮಾಡಿಕೊಂಡು, ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು. ನಿನ್ನೆ, ವಿಶೇಷ ಸೌಹಾರ್ದದ ಸಂಕೇತವಾಗಿ ಅಧ್ಯಕ್ಷ ಕ್ರಿಸ್ಟೋಡೌಲಿಡೀಸ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಇದು ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ವಿಶ್ವಾಸ ಮತ್ತು ಶಾಶ್ವತ ಸ್ನೇಹವನ್ನು ಪ್ರತಿಬಿಂಬಿಸುತ್ತದೆ.

ಉಭಯ ನಾಯಕರು ಭಾರತ-ಸೈಪ್ರಸ್ ಸಂಬಂಧಗಳ ಆಧಾರವಾಗಿರುವ ಹಂಚಿಕೆಯ ಮೌಲ್ಯಗಳನ್ನು ಪುನರುಚ್ಚರಿಸಿದರು. ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಏಪ್ರಿಲ್ 2025ರಲ್ಲಿ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ಮತ್ತು ಸಹಕಾರ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಸೈಪ್ರಸ್ ಗೆ ಧನ್ಯವಾದ ಅರ್ಪಿಸಿದರು. ಇದು ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳ ಬಲವಾದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಮಂತ್ರಿ ಅವರು ಸೈಪ್ರಸ್ ನ ಏಕತೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು, ಅಂತರರಾಷ್ಟ್ರೀಯ ಕಾನೂನು ಮತ್ತು ಇಯು ಅಕ್ವಿಸ್ ಆಧಾರದ ಮೇಲೆ ಸೈಪ್ರಸ್ ಪ್ರಶ್ನೆಯ ಶಾಂತಿಯುತ ಪರಿಹಾರಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.

ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ಸಂಶೋಧನೆ, ಸಾಂಸ್ಕೃತಿಕ ಸಹಕಾರ ಮತ್ತು ಜನ-ಜನರ ನಡುವಿನ ಬಾಂಧವ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ವಿವಿಧ ಆಯಾಮಗಳಲ್ಲಿನ ಪ್ರಸ್ತುತ ಸಹಕಾರವನ್ನು ಅವಲೋಕಿಸಿದರು. ಇದೇ ವೇಳೆ, ಫಿನ್ಟೆಕ್, ಸ್ಟಾರ್ಟ್ಅಪ್ ಗಳು, ರಕ್ಷಣಾ ಉದ್ಯಮ, ಸಂಪರ್ಕ, ನಾವೀನ್ಯತೆ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ (AI) ಮತ್ತು ಮೊಬಿಲಿಟಿ ಮುಂತಾದ ಹೊಸ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸಿದರು. ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪಂಚವಾರ್ಷಿಕ ಮಾರ್ಗಸೂಚಿಯೊಂದನ್ನು ಸ್ಥಾಪಿಸಲು ಎರಡೂ ದೇಶಗಳು ಒಪ್ಪಿಕೊಂಡವು. ಸೈಬರ್ ಮತ್ತು ಕಡಲ ಭದ್ರತಾ ಸಂವಾದಗಳನ್ನು ಸ್ಥಾಪಿಸಲು ಹಾಗೂ ಭಯೋತ್ಪಾದನೆ, ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ವಿಷಯಗಳ ಕುರಿತು ನೈಜ-ಸಮಯದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಒಂದು ವ್ಯವಸ್ಥೆಯನ್ನು ರೂಪಿಸಲು ಅವರು ಒಪ್ಪಿಕೊಂಡರು. 2025ರ ಜನವರಿಯಲ್ಲಿ ಸಹಿ ಹಾಕಲಾದ ದ್ವಿಪಕ್ಷೀಯ ರಕ್ಷಣಾ ಸಹಕಾರ ಕಾರ್ಯಕ್ರಮವನ್ನು ನಾಯಕರು ಶ್ಲಾಘಿಸಿದರು, ಇದು ಎರಡೂ ದೇಶಗಳ ನಡುವಿನ ರಕ್ಷಣಾ ಪಾಲುದಾರಿಕೆಗೆ ಮೂರ್ತರೂಪ ನೀಡಲಿದೆ. ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ-ಗ್ರೀಸ್-ಸೈಪ್ರಸ್ (IGC) ವ್ಯಾಪಾರ ಮತ್ತು ಹೂಡಿಕೆ ಮಂಡಳಿಯ ಸ್ಥಾಪನೆಯನ್ನು ಅವರು ಸ್ವಾಗತಿಸಿದರು. ವ್ಯಾಪಾರ, ಪ್ರವಾಸೋದ್ಯಮ, ಜ್ಞಾನ ಮತ್ತು ನಾವೀನ್ಯತೆಯ ಸಂಪರ್ಕಗಳನ್ನು ಬಲಪಡಿಸಲು ವಾಯು ಸಂಪರ್ಕವನ್ನು ಹೆಚ್ಚಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ [IMEC] ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ನಾಯಕರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಸೇರಿದಂತೆ ಬಹುಪಕ್ಷೀಯತೆ ಮತ್ತು ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಸೈಪ್ರಸ್ ನ ಬೆಂಬಲವನ್ನು ಪುನರುಚ್ಚರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಗೆ ಧನ್ಯವಾದ ಅರ್ಪಿಸಿದರು. ಪಶ್ಚಿಮ ಏಷ್ಯಾ ಮತ್ತು ಯುರೋಪ್ ನಲ್ಲಿ ನಡೆಯುತ್ತಿರುವ ಸಂಘರ್ಷಗಳು ಸೇರಿದಂತೆ ಜಾಗತಿಕ ಸಮಸ್ಯೆಗಳ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರಧಾನಮಂತ್ರಿಯವರು ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಈ ಭೇಟಿಯ ಸಮಯದಲ್ಲಿ ನಿಕೋಸಿಯಾ ವಿಶ್ವವಿದ್ಯಾಲಯದಲ್ಲಿ ಭಾರತ ಅಧ್ಯಯನ ಐ ಸಿ ಸಿ ಆರ್ ಪೀಠವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಭೆಯ ನಂತರ ಭಾರತ-ಸೈಪ್ರಸ್ ಪಾಲುದಾರಿಕೆಯ ಕುರಿತು ಜಂಟಿ ಘೋಷಣೆಯನ್ನು ಹೊರಡಿಸಲಾಯಿತು. [ಲಿಂಕ್]

 

*****
 


(Release ID: 2136679)