ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಮ್ಮು ಮತ್ತು ಕಾಶ್ಮೀರದಲ್ಲಿ 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಚೆನಾಬ್ ಸೇತುವೆ ಮತ್ತು ಭಾರತದ ಮೊದಲ ಕೇಬಲ್ ಆಧಾರಿತ ರೈಲು ಸೇತುವೆ ಅಂಜಿ ಸೇತುವೆಯನ್ನು ಉದ್ಘಾಟಿಸಿದ‌ ಪ್ರಧಾನಮಂತ್ರಿ

ಇಂದು ಮಾಡಲಾದ ಬೃಹತ್ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ತಿರುವು: ಪ್ರಧಾನಮಂತ್ರಿ

’ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ' ಎಂದು ನಾವು ಸದಾ ಮಾತೆ ಭಾರತಿಯನ್ನು ಆಳವಾದ ಗೌರವದಿಂದ ಪ್ರಾರ್ಥಿಸಿದ್ದೇವೆ, ಇಂದು, ಇದು ನಮ್ಮ ರೈಲ್ವೆ ಜಾಲದಲ್ಲಿಯೂ ವಾಸ್ತವವಾಗಿದೆ: ಪ್ರಧಾನಮಂತ್ರಿ

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ ಯೋಜನೆ ಹೊಸ, ಸಶಕ್ತ ಜಮ್ಮು ಮತ್ತು ಕಾಶ್ಮೀರದ ಸಂಕೇತವಾಗಿದೆ ಮತ್ತು ಭಾರತದ ವರ್ಧಿಸುತ್ತಿರುವ ಶಕ್ತಿಯ ಪ್ರತಿಧ್ವನಿಸುವ  ಘೋಷಣೆಯಾಗಿದೆ: ಪ್ರಧಾನಮಂತ್ರಿ

ಚೆನಾಬ್ ಮತ್ತು ಅಂಜಿ ಸೇತುವೆಗಳು ಜಮ್ಮು ಮತ್ತು ಕಾಶ್ಮೀರದ ಸಮೃದ್ಧಿಯ ಹೆಬ್ಬಾಗಿಲುಗಳಾಗಿ ಕಾರ್ಯನಿರ್ವಹಿಸಲಿವೆ: ಪ್ರಧಾನಮಂತ್ರಿ

ಜಮ್ಮು ಮತ್ತು ಕಾಶ್ಮೀರ ಭಾರತದ ಮುಕುಟ ರತ್ನ: ಪ್ರಧಾನಮಂತ್ರಿ

ಭಾರತ ಭಯೋತ್ಪಾದನೆಗೆ ತಲೆಬಾಗುವುದಿಲ್ಲ, ಜಮ್ಮು ಮತ್ತು ಕಾಶ್ಮೀರದ ಯುವಜನರು ಈಗ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡಲು ಮನಸ್ಸು ಮಾಡಿದ್ದಾರೆ: ಪ್ರಧಾನಮಂತ್ರಿ

ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ್ ಎಂಬ ಹೆಸರು ಕೇಳಿದಾಗಲೆಲ್ಲಾ ಅದು ಅದರ ನಾಚಿಕೆಗೇಡಿನ ಸೋಲನ್ನು ನೆನಪಿಸುತ್ತದೆ: ಪ್ರಧಾನಮಂತ್ರಿ

Posted On: 06 JUN 2025 3:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು. ವೀರ ಜೋರಾವರ್ ಸಿಂಗ್ ಅವರ ಭೂಮಿಗೆ ನಮನ ಸಲ್ಲಿಸುತ್ತಾ, ಇಂದಿನ ಕಾರ್ಯಕ್ರಮವು ಭಾರತದ ಏಕತೆ ಮತ್ತು ದೃಢಸಂಕಲ್ಪದ ಭವ್ಯ ಆಚರಣೆಯಾಗಿದೆ ಎಂದು ಹೇಳಿದರು. ಮಾತಾ ವೈಷ್ಣೋದೇವಿಯ ಆಶೀರ್ವಾದದಿಂದ ಕಾಶ್ಮೀರ ಕಣಿವೆ ಈಗ ಭಾರತದ ವಿಶಾಲ ರೈಲ್ವೆ ಜಾಲಕ್ಕೆ ಸಂಪರ್ಕ ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. "ನಾವು ಯಾವಾಗಲೂ ಮಾತೆ ಭಾರತಿಯನ್ನು ಆಳವಾದ ಭಕ್ತಿಯಿಂದ ಪ್ರಾರ್ಥಿಸುತ್ತೇವೆ, 'ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ' ಎಂದು ಹೇಳುತ್ತೇವೆ, ಇಂದು, ಇದು ನಮ್ಮ ರೈಲ್ವೆ ಜಾಲದಲ್ಲಿಯೂ ಸಹ ವಾಸ್ತವವಾಗಿದೆ" ಎಂದು ಪ್ರಧಾನಿ ಉದ್ಗರಿಸಿದರು, ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ ಯೋಜನೆಯು ಕೇವಲ ಹೆಸರಲ್ಲ, ಜಮ್ಮು ಮತ್ತು ಕಾಶ್ಮೀರದ ಹೊಸ ಶಕ್ತಿಯ ಸಂಕೇತ ಮತ್ತು ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು. ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಬದ್ಧತೆಗೆ ಅನುಗುಣವಾಗಿ, ಅವರು ಚೆನಾಬ್ ಮತ್ತು ಅಂಜಿ ರೈಲು ಸೇತುವೆಗಳನ್ನು ಉದ್ಘಾಟಿಸಿದರು ಮತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು, ಇದು ಜಮ್ಮು ಮತ್ತು ಕಾಶ್ಮೀರದೊಳಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಶ್ರೀ ಮೋದಿ ಅವರು ಜಮ್ಮುವಿನಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು, ಈ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸಿದರು, ₹46,000 ಕೋಟಿ ಮೌಲ್ಯದ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ, ಪ್ರಗತಿ ಮತ್ತು ಸಮೃದ್ಧಿಗೆ ಚಾಲನೆ ನೀಡುತ್ತವೆ ಎಂದು ಹೇಳಿದರು. ಪ್ರಧಾನಿಯವರು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು ಮತ್ತು ಬೆಳವಣಿಗೆ ಹಾಗು ಪರಿವರ್ತನೆಯ ಹೊಸ ಯುಗಕ್ಕಾಗಿ  ಜನರನ್ನು ಅಭಿನಂದಿಸಿದರು.

ಜಮ್ಮು ಮತ್ತು ಕಾಶ್ಮೀರದ ಪೀಳಿಗೆಗಳು ರೈಲ್ವೆ ಸಂಪರ್ಕದ ಬಗ್ಗೆ ಬಹಳ ಹಿಂದಿನಿಂದಲೂ ಕನಸು ಕಂಡಿದ್ದವು ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, ಆ ಕನಸು ಈಗ ನನಸಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ಏಳನೇ ಅಥವಾ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೂ ಶ್ರೀ ಅಬ್ದುಲ್ಲಾ ಯೋಜನೆಯ ಪೂರ್ಣಗೊಳ್ಳುವಿಕೆಯನ್ನು ನಿರೀಕ್ಷಿಸುತ್ತಿದ್ದರು ಎಂದು ಹೇಳಿದರು. ಈ ಬಹುನಿರೀಕ್ಷಿತ ಆಕಾಂಕ್ಷೆಯ ಈಡೇರಿಕೆಯು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಜನರಿಗೆ ಒಂದು ಐತಿಹಾಸಿಕ ಕ್ಷಣವಾಗಿದೆ, ಇದು ವರ್ಧಿತ ಸಂಪರ್ಕ ಮತ್ತು ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದೂ ಶ್ರೀ ಮೋದಿ ಒತ್ತಿ ಹೇಳಿದರು.

ತಮ್ಮ ಅಧಿಕಾರಾವಧಿಯಲ್ಲಿ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆ ವೇಗ ಪಡೆದುಕೊಂಡು ಈಗ ಯಶಸ್ವಿಯಾಗಿ ಪೂರ್ಣಗೊಂಡಿರುವುದು ತಮ್ಮ ಸರ್ಕಾರಕ್ಕೆ ಲಭಿಸಿದ ಒಂದು ಸೌಭಾಗ್ಯ ಎಂದು ಹೇಳಿದ ಶ್ರೀ ಮೋದಿ, ಕಠಿಣ ಭೂಪ್ರದೇಶ, ತೀವ್ರ ಹವಾಮಾನ ಪರಿಸ್ಥಿತಿಗಳು ಮತ್ತು ಪರ್ವತಗಳಲ್ಲಿ ಬೀಳುವ ಬಂಡೆಗಳು ಮುಂತಾದ ಸವಾಲುಗಳನ್ನು ಒತ್ತಿ ಹೇಳಿದರು, ಇದು ಯೋಜನೆಯನ್ನು ಅತ್ಯಂತ ಕಠಿಣ ಮತ್ತು ಬಹಳ ಪರಿಶ್ರಮ ಬೇಡುವ   ಸವಾಲನ್ನಾಗಿ ಮಾಡಿದೆ. ಆದಾಗ್ಯೂ, ತಮ್ಮ ಸರ್ಕಾರವು ನಿರಂತರವಾಗಿ ಸವಾಲುಗಳನ್ನು ಎದುರಿಸಲು ಮತ್ತು ದೃಢನಿಶ್ಚಯದಿಂದ ಅವುಗಳನ್ನು ಜಯಿಸಲು ಈ ಆಯ್ಕೆ ಮಾಡಿಕೊಂಡಿದೆ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಲವಾರು ಸರ್ವ ಋತು  ಮೂಲಸೌಕರ್ಯ ಯೋಜನೆಗಳು ಬದ್ಧತೆಯನ್ನು ನಿರೂಪಿಸುತ್ತವೆ ಎಂಬುದರತ್ತಲೂ  ಪ್ರಧಾನಿ ಬೆಟ್ಟು ಮಾಡಿದರು. ಇತ್ತೀಚೆಗೆ ತೆರೆಯಲಾದ ಸೋನ್‌ಮಾರ್ಗ್ ಸುರಂಗ ಮತ್ತು ಚೆನಾಬ್ ಸೇತುವೆ ಹಾಗು ಅಂಜಿ ಸೇತುವೆಯ ಮೇಲೆ ಪ್ರಯಾಣಿಸಿದ ತಮ್ಮ ಅನುಭವವನ್ನು ಅವರು ಗಮನಾರ್ಹ ಮೈಲಿಗಲ್ಲುಗಳು ಎಂದು ಉಲ್ಲೇಖಿಸಿದರು. ಭಾರತದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಎಂಜಿನಿಯರಿಂಗ್ ಪ್ರತಿಭೆ ಮತ್ತು ಅಚಲ ಸಮರ್ಪಣೆಯನ್ನು ಶ್ರೀ ಮೋದಿ ಶ್ಲಾಘಿಸಿದರು, ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆ ಭಾರತದ ಮಹತ್ವಾಕಾಂಕ್ಷೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಜನರು ಐಫೆಲ್ ಟವರ್ ನೋಡಲು ಪ್ಯಾರಿಸ್‌ಗೆ ಪ್ರಯಾಣಿಸುತ್ತಾರೆ, ಚೆನಾಬ್ ಸೇತುವೆ ಎತ್ತರದಲ್ಲಿ ಅದನ್ನು ಮೀರಿಸುತ್ತದೆ, ಇದು ನಿರ್ಣಾಯಕ ಮೂಲಸೌಕರ್ಯ ಸಾಧನೆ ಮಾತ್ರವಲ್ಲದೆ ಉದಯೋನ್ಮುಖ ಪ್ರವಾಸಿ ಆಕರ್ಷಣೆಯಾಗಿದೆ ಎಂದು ಅವರು ಹೇಳಿದರು. ಅದೇ ರೀತಿ, ಅಂಜಿ ಸೇತುವೆಯನ್ನು ಭಾರತದ ಮೊದಲ ಕೇಬಲ್ ಆಧಾರಿತ ರೈಲ್ವೆ ಸೇತುವೆ ಹಾಗು ಅದು ತಾಂತ್ರಿಕ ಅದ್ಭುತ ಎಂದು ಪ್ರಧಾನಿ ಬಣ್ಣಿಸಿದರು. ಈ ರಚನೆಗಳು ಕೇವಲ ಉಕ್ಕು ಮತ್ತು ಕಾಂಕ್ರೀಟ್ ಮಾತ್ರವೇ ಅಲ್ಲ, ಬದಲಾಗಿ ಕಠಿಣವಾದ ಪಿರ್ ಪಂಜಾಲ್ ಪರ್ವತಗಳಲ್ಲಿ ತಲೆ ಎತ್ತಿ ನಿಂತಿರುವ ಭಾರತದ ಶಕ್ತಿಯ ಜೀವಂತ ಸಂಕೇತಗಳಾಗಿವೆ ಎಂದು ಅವರು ಪ್ರತಿಪಾದಿಸಿದರು. ಈ ಸಾಧನೆಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ ಎಂದು ಶ್ರೀ ಮೋದಿ ಘೋಷಿಸಿದರು, ಭಾರತದ ಪ್ರಗತಿಯ ಕನಸು ಎಷ್ಟು ದೊಡ್ಡದೋ, ಅದರ ಸ್ಥಿತಿಸ್ಥಾಪಕತ್ವ, ಸಾಮರ್ಥ್ಯ ಮತ್ತು ದೃಢಸಂಕಲ್ಪವೂ ಅಷ್ಟೇ ದೊಡ್ಡದಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಶುದ್ಧ ಉದ್ದೇಶಗಳು ಮತ್ತು ಅವಿರತ ಸಮರ್ಪಣಾ ಭಾವ ಭಾರತದ ಪರಿವರ್ತನೆಯ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ಅವರು ಒತ್ತಿ ಹೇಳಿದರು.

ಚೆನಾಬ್ ಸೇತುವೆ ಮತ್ತು ಅಂಜಿ ಸೇತುವೆ ಎರಡೂ ಜಮ್ಮು ಮತ್ತು ಕಾಶ್ಮೀರದ ಸಮೃದ್ಧಿಗೆ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಒತ್ತಿ ಹೇಳಿದ ಪ್ರಧಾನಿ, "ಈ ಮಹತ್ವದ ಯೋಜನೆಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವುದಲ್ಲದೆ, ಆರ್ಥಿಕತೆಯ ವಿವಿಧ ವಲಯಗಳಿಗೆ ಪ್ರಯೋಜನವನ್ನು ನೀಡುತ್ತವೆ, ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ" ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ನಡುವಿನ ವರ್ಧಿತ ರೈಲು ಸಂಪರ್ಕವು ಸ್ಥಳೀಯ ಉದ್ಯಮಿಗಳಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಕಾಶ್ಮೀರದ ಸೇಬುಗಳು ಈಗ ಕಡಿಮೆ ವೆಚ್ಚದಲ್ಲಿ ಭಾರತದಾದ್ಯಂತ ಪ್ರಮುಖ ಮಾರುಕಟ್ಟೆಗಳನ್ನು ತಲುಪುತ್ತವೆ, ಇದರಿಂದಾಗಿ ವ್ಯಾಪಾರವು ಹೆಚ್ಚು ದಕ್ಷತೆಯನ್ನು ಹೊಂದುತ್ತದೆ  ಎಂದು ಶ್ರೀ ಮೋದಿ ನುಡಿದರು.  ಇದಲ್ಲದೆ, ಒಣ ಹಣ್ಣುಗಳು ಮತ್ತು ಕಾಶ್ಮೀರದ ಪ್ರಸಿದ್ಧ ಪಶ್ಮಿನಾ ಶಾಲುಗಳು, ಇತರ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಜೊತೆಗೆ, ಈಗ ದೇಶದ ಮೂಲೆ ಮೂಲೆಗೆ ಸುಲಭವಾಗಿ ಸಾಗಿಸಲ್ಪಡುತ್ತವೆ, ಇದು ಪ್ರದೇಶದ ಕರಕುಶಲ ಉದ್ಯಮವನ್ನು ಬಲಪಡಿಸುತ್ತದೆ. ಈ ಸುಧಾರಿತ ಸಂಪರ್ಕವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.

ಶ್ರೀ ಮೋದಿ ಅವರು ಸಂಗಲ್ದಾನ್‌ನ ವಿದ್ಯಾರ್ಥಿಯೊಬ್ಬರ ಹೃದಯಸ್ಪರ್ಶಿ ಕಾಮೆಂಟ್ ಅನ್ನು ಹಂಚಿಕೊಂಡರು, ಆ ವಿದ್ಯಾರ್ಥಿಯು ಇಲ್ಲಿಯವರೆಗೆ ತಮ್ಮ ಹಳ್ಳಿಯ ಹೊರಗೆ ಪ್ರಯಾಣಿಸಿದವರು ಮಾತ್ರ ನಿಜ ಜೀವನದಲ್ಲಿ ರೈಲನ್ನು ನೋಡಿದ್ದಾರೆ ಎಂದು ಹೇಳಿದ್ದರು. ಹೆಚ್ಚಿನ ಗ್ರಾಮಸ್ಥರು ವೀಡಿಯೊಗಳಲ್ಲಿ ಮಾತ್ರ ರೈಲುಗಳನ್ನು ನೋಡಿದ್ದಾರೆ, ಶೀಘ್ರದಲ್ಲೇ ನಿಜವಾದ ರೈಲು ತಮ್ಮ ಕಣ್ಣೆದುರೇ ಹಾದುಹೋಗುತ್ತದೆ ಎಂದು ನಂಬಲು ಅವರಿಗೆ ಸಾಧ್ಯವಾಗಲಿಲ್ಲ. ಹೊಸ ಸಂಪರ್ಕದ ಬಗ್ಗೆ ಉತ್ಸುಕರಾಗಿ ಅನೇಕ ನಿವಾಸಿಗಳು ಈಗಾಗಲೇ ರೈಲು ವೇಳಾಪಟ್ಟಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು. ಈಗ, ಹವಾಮಾನವು ರಸ್ತೆಗಳು ತೆರೆದಿರುತ್ತವೆಯೇ ಅಥವಾ ಮುಚ್ಚಿರುತ್ತವೆಯೇ ಎಂಬುದನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದ ಯುವತಿಯೊಬ್ಬಳ ಚಿಂತನಶೀಲ ಹೇಳಿಕೆಯನ್ನು ಅವರು ಎತ್ತಿ ತೋರಿಸಿದರು. ಈ ಹೊಸ ರೈಲು ಸೇವೆಯು ಎಲ್ಲಾ ಋತುಗಳಲ್ಲಿಯೂ ಜನರಿಗೆ ಸಹಾಯ ಮಾಡುತ್ತದೆ. "ಜಮ್ಮು ಮತ್ತು ಕಾಶ್ಮೀರವು ಭಾರತ ಮಾತೆಯ ಕಿರೀಟವಾಗಿದೆ, ಬೆರಗುಗೊಳಿಸುವ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ - ಪ್ರತಿಯೊಂದೂ ಆಯಾ ಪ್ರದೇಶದ ಅಗಾಧ ಶಕ್ತಿ ಮತ್ತು ಸೌಂದರ್ಯವನ್ನು ಪ್ರತಿನಿಧಿಸುತ್ತದೆ" ಎಂದು ಪ್ರಧಾನಿ ವಿವರಿಸಿದರು, ಅದರ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳು, ಆಧ್ಯಾತ್ಮಿಕ ಪ್ರಜ್ಞೆ, ಉಸಿರು ಬಿಗಿ ಹಿಡಿಯುವಂತೆ ಮಾಡುವ ಭೂದೃಶ್ಯಗಳು, ಔಷಧೀಯ ಗಿಡಮೂಲಿಕೆಗಳು, ಪ್ರವರ್ಧಮಾನಕ್ಕೆ ಬರುತ್ತಿರುವ ತೋಟಗಳು ಮತ್ತು ರೋಮಾಂಚಕ ಯುವ ಪ್ರತಿಭೆಯನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ಅವರು   ಗುಣಗಳು ಭಾರತದ ಕಿರೀಟದಲ್ಲಿ ಅಮೂಲ್ಯ ರತ್ನಗಳಂತೆ ಹೊಳೆಯುತ್ತವೆ ಎಂದು ಹೇಳಿದರು. ದಶಕಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದಾಗಿ ಹೇಳಿದ  ಪ್ರಧಾನಿ, ಈ ಪ್ರದೇಶದ ಸಾಮರ್ಥ್ಯದ ಬಗ್ಗೆ ತಮ್ಮ ಆಳವಾದ ತಿಳುವಳಿಕೆಯನ್ನು ದೃಢಪಡಿಸಿದರು ಹಾಗು  ಜಮ್ಮು ಮತ್ತು ಕಾಶ್ಮೀರದ ನಿರಂತರ ಅಭಿವೃದ್ಧಿ ಮತ್ತು ಉನ್ನತಿಗೆ, ಹಾಗು  ಜನರಿಗೆ ಸಮೃದ್ಧಿಯನ್ನು ಖಚಿತಪಡಿಸುವ ನಿಟ್ಟಿನಲ್ಲಿ . ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

“ಜಮ್ಮು ಮತ್ತು ಕಾಶ್ಮೀರವು ಬಹಳ ಹಿಂದಿನಿಂದಲೂ ಭಾರತದ ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆಯ ಆಧಾರಸ್ತಂಭವಾಗಿದೆ" ಎಂದು ಪ್ರಧಾನಿ ದೃಢಪಡಿಸಿದರು. ಭಾರತವು ಜಾಗತಿಕ ಜ್ಞಾನ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದ್ದಂತೆ, ಈ ಪರಿವರ್ತನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾಗವಹಿಸುವಿಕೆಯೂ ಹೆಚ್ಚುತ್ತದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಶ್ರೀನಗರದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಗಳ ಜೊತೆಗೆ ಐಐಟಿ, ಐಐಎಂ, ಏಮ್ಸ್ ಮತ್ತು ಎನ್‌ಐಟಿಯಂತಹ ಪ್ರಮುಖ ಸಂಸ್ಥೆಗಳ ಉಪಸ್ಥಿತಿಯು ಪ್ರದೇಶದಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಬಲಪಡಿಸುತ್ತಿದೆ ಎಂಬುದರತ್ತಲೂ ಶ್ರೀ ಮೋದಿ ಗಮನಸೆಳೆದರು. ಸಂಶೋಧನಾ ಪರಿಸರ ವ್ಯವಸ್ಥೆಯ ವಿಸ್ತರಣೆ, ನಾವೀನ್ಯತೆ ಮತ್ತು ಕಲಿಕೆಯ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುವುದರತ್ತ  ಅವರು ಬೆಟ್ಟು ಮಾಡಿದರು,

ಇತ್ತೀಚಿನ ವರ್ಷಗಳಲ್ಲಿ ಎರಡು ರಾಜ್ಯಮಟ್ಟದ ಕ್ಯಾನ್ಸರ್ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಳೆದ ಐದು ವರ್ಷಗಳಲ್ಲಿ, ಏಳು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದ್ದು, ಇದು ರೋಗಿಗಳಿಗೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಬಿಬಿಎಸ್ ಸೀಟುಗಳು 500 ರಿಂದ 1,300 ಕ್ಕೆ ಏರಿದ್ದು, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶವನ್ನು ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಹೆಚ್ಚುವರಿಯಾಗಿ, ರಿಯಾಸಿ ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜು ಲಭಿಸುತ್ತಿದೆ, ಇದು ಪ್ರದೇಶಕ್ಕೆ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಎಂದ ಅವರು  ಶ್ರೀ ಮಾತಾ ವೈಷ್ಣೋ ದೇವಿ ವೈದ್ಯಕೀಯ ಶ್ರೇಷ್ಠತೆಯ ಸಂಸ್ಥೆಯನ್ನು ಪ್ರಧಾನಿ ಶ್ಲಾಘಿಸಿದರು, ಇದು ಆಧುನಿಕ ಆಸ್ಪತ್ರೆ ಮಾತ್ರವಲ್ಲದೆ ಭಾರತದ ಶ್ರೀಮಂತ ಪರೋಪಕಾರದ ಸಂಪ್ರದಾಯದ ಸಾಕಾರವಾಗಿದೆ ಎಂದು ಬಣ್ಣಿಸಿದರು. ಭಾರತದಾದ್ಯಂತದ ಭಕ್ತರ ಕೊಡುಗೆಗಳನ್ನು ಅವರು ಶ್ಲಾಘಿಸಿದರು, ಅವರ ದೇಣಿಗೆಗಳು ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದವು ಎಂದರು. ತಮ್ಮ ಶುಭಾಶಯಗಳನ್ನು ಹೇಳಿದ  ಶ್ರೀ ಮೋದಿ, ಈ ಉದಾತ್ತ ಪ್ರಯತ್ನದಲ್ಲಿ ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯ ಮಂಡಳಿಯ ಸಮರ್ಪಿತ ಪ್ರಯತ್ನಗಳಿಗಾಗಿ ಅವರನ್ನು ಅಭಿನಂದಿಸಿದರು. ಆಸ್ಪತ್ರೆಯ ಸಾಮರ್ಥ್ಯವನ್ನು 300 ರಿಂದ 500 ಹಾಸಿಗೆಗಳಿಗೆ ವಿಸ್ತರಿಸಲಾಗುವುದು, ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಸುಧಾರಿಸಲಾಗುವುದು ಎಂದು ಅವರು ಘೋಷಿಸಿದರು. ಈ ಅಭಿವೃದ್ಧಿಯು ಕತ್ರಾದಲ್ಲಿ ಮಾತಾ ವೈಷ್ಣೋ ದೇವಿಗೆ ಭೇಟಿ ನೀಡುವ ಭಕ್ತರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂದೂ  ಪ್ರಧಾನಿ ಹೇಳಿದರು.

ತಮ್ಮ ಸರ್ಕಾರವು 11 ವರ್ಷಗಳನ್ನು ಪೂರೈಸಿದೆ, ಬಡವರ ಉನ್ನತಿ ಮತ್ತು ನಾಗರಿಕರ ಸಬಲೀಕರಣಕ್ಕಾಗಿ ಅವಧಿಯನ್ನು ಮೀಸಲಿಟ್ಟಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದ ಹಲವಾರು ಪ್ರಮುಖ ಕಲ್ಯಾಣ ಉಪಕ್ರಮಗಳನ್ನು ವಿವರಿಸಿದರು. ಪಕ್ಕಾ ಮನೆಗಳನ್ನು ಒದಗಿಸುವ ಮೂಲಕ 4 ಕೋಟಿ ಬಡ ಕುಟುಂಬಗಳ ಕನಸನ್ನು ನನಸಾಗಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಅವರು ಪಟ್ಟಿ ಮಾಡಿದರು. 10 ಕೋಟಿ ಮನೆಗಳಿಂದ ಹೊಗೆಯನ್ನು ತೊಡೆದುಹಾಕಲು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡಿದ ಉಜ್ವಲ ಯೋಜನೆ. 50 ಕೋಟಿ ಹಿಂದುಳಿದ ನಾಗರಿಕರು ₹5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆಯನ್ನು ಪಡೆಯಲು ಅನುವು ಮಾಡಿಕೊಟ್ಟ ಆಯುಷ್ಮಾನ್ ಭಾರತ್. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಆಹಾರ ಭದ್ರತೆಯನ್ನು ಖಾತ್ರಿಪಡಿಸಿತು, ಪ್ರತಿ ತಟ್ಟೆಗೆ ಸಾಕಷ್ಟು ಪೌಷ್ಟಿಕಾಂಶವನ್ನು ತುಂಬಿಸಿತು, ಜೊತೆಗೆ ಜನ ಧನ್ ಯೋಜನೆಯು 50 ಕೋಟಿಗೂ ಹೆಚ್ಚು ಬಡ ವ್ಯಕ್ತಿಗಳಿಗೆ ಮುಕ್ತ ಬ್ಯಾಂಕಿಂಗ್ ಪ್ರವೇಶವನ್ನು ಒದಗಿಸಿತು ಮತ್ತು ಅವರನ್ನು ಹಣಕಾಸು ವ್ಯವಸ್ಥೆಗೆ ತಂದಿತು ಎಂದು ಅವರು ಹೇಳಿದರು. ಕತ್ತಲೆಯಲ್ಲಿ ವಾಸಿಸುವ 2.5 ಕೋಟಿ ಕುಟುಂಬಗಳಿಗೆ ವಿದ್ಯುತ್ ಒದಗಿಸುವ ಸೌಭಾಗ್ಯ ಯೋಜನೆ ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾದ ಸ್ವಚ್ಛ ಭಾರತ ಮಿಷನ್ ಅನ್ನು ಪ್ರಧಾನಿ ಉಲ್ಲೇಖಿಸಿದರು, ಇದು ಬಯಲು ಮಲವಿಸರ್ಜನೆಯ ಸವಾಲನ್ನು ನಿವಾರಿಸಿತು. ಜಲ ಜೀವನ್ ಮಿಷನ್ 12 ಕೋಟಿ ಮನೆಗಳಿಗೆ ನಲ್ಲಿ ನೀರನ್ನು ಒದಗಿಸಿದೆ, ಇದು ಮಹಿಳೆಯರ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ, ಜೊತೆಗೆ  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 10 ಕೋಟಿ ಸಣ್ಣ ರೈತರಿಗೆ ನೇರ ಆರ್ಥಿಕ ನೆರವು ನೀಡಿದೆ, ಇದು ಗ್ರಾಮೀಣ ಭಾರತವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಯಶಸ್ವಿಯಾಗಿ ದಾಟಿ, ನವ-ಮಧ್ಯಮ ವರ್ಗಕ್ಕೆ ಪರಿವರ್ತನೆಗೊಂಡಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಬಡವರು ಮತ್ತು ಉದಯೋನ್ಮುಖ ಮಧ್ಯಮ ವರ್ಗವನ್ನು ಬಲಪಡಿಸಲು, ಪ್ರಮುಖ ಸುಧಾರಣೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. ಒಂದು ಶ್ರೇಣಿ ಒಂದು ಪಿಂಚಣಿ, , ₹ 12 ಲಕ್ಷದವರೆಗಿನ ಸಂಬಳದ ಮೇಲೆ ತೆರಿಗೆ ವಿನಾಯಿತಿ, ಮನೆ ಖರೀದಿದಾರರಿಗೆ ಆರ್ಥಿಕ ಬೆಂಬಲ ಮತ್ತು ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣಕ್ಕೆ ಸಹಾಯದಂತಹ ಉಪಕ್ರಮಗಳನ್ನು ಪ್ರಧಾನಿ ಉಲ್ಲೇಖಿಸಿದರು, ಸರ್ಕಾರವು ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ, ಎಲ್ಲರಿಗೂ ಪ್ರಗತಿಯನ್ನು ಒದಗಿಸುತ್ತದೆ ಎಂದು ದೃಢಪಡಿಸಿದರು. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ತಮ್ಮ  ಸರ್ಕಾರವು ಪ್ರಾಮಾಣಿಕ, ತೆರಿಗೆ ಪಾವತಿಸುವ ಮಧ್ಯಮ ವರ್ಗಕ್ಕಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರವು ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ನಿರಂತರವಾಗಿ ಸೃಷ್ಟಿಸುತ್ತಿದೆ, ಪ್ರವಾಸೋದ್ಯಮವು ಆರ್ಥಿಕ ಬೆಳವಣಿಗೆ ಮತ್ತು ಸಂಪರ್ಕದ ಗಮನಾರ್ಹ ಚಾಲಕಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಪ್ರವಾಸೋದ್ಯಮವು ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ ಜನರಲ್ಲಿ ಏಕತೆಯನ್ನು ಬೆಳೆಸುತ್ತದೆ ಎಂದು ಒತ್ತಿ ಹೇಳಿದರು. ಈ ಪ್ರಗತಿಯನ್ನು ಅಡ್ಡಿಪಡಿಸಲು ಪಾಕಿಸ್ತಾನ ಪದೇ ಪದೇ ಪ್ರಯತ್ನಿಸುತ್ತಿರುವುದನ್ನು ಖಂಡಿಸಿದ ಪ್ರಧಾನಿ, ಇದು ಮಾನವೀಯತೆ, ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಸಮೃದ್ಧಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಪಾಕಿಸ್ತಾನವು ಕಾಶ್ಮೀರಿ ಮತ್ತು ಮಾನವೀಯತೆಯ ಮೇಲೆ ದಾಳಿ ಮಾಡಿದೆ, ಇದು ಭಾರತದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಶ್ರಮಶೀಲ ಕಾಶ್ಮೀರಿಗಳ ಗಳಿಕೆಯನ್ನು ಕುಂಠಿತಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ಪ್ರವಾಸಿಗರ ಮೇಲಿನ ಉದ್ದೇಶಪೂರ್ವಕ ದಾಳಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ವರ್ಷಗಳಿಂದ ದಾಖಲೆಯ ಹೆಚ್ಚಿನ ಸಂದರ್ಶಕರ ಸಂಖ್ಯೆಯನ್ನು ಕಂಡಿದ್ದ ಪ್ರವಾಸೋದ್ಯಮ ಉದ್ಯಮವನ್ನು ಹಾಳುಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಪಾಕಿಸ್ತಾನದ ದುರುದ್ದೇಶಪೂರಿತ ಉದ್ದೇಶವು ಕುದುರೆ ಸವಾರರು, ಪೋರ್ಟರ್‌ಗಳು, ಗೈಡ್‌ಗಳು, ಅತಿಥಿ ಗೃಹ ಮಾಲೀಕರು ಮತ್ತು ಅಂಗಡಿಯವರು ಸೇರಿದಂತೆ ಸ್ಥಳೀಯ ಕಾರ್ಮಿಕರ ಮೇಲೆ ನೇರವಾಗಿ ಪರಿಣಾಮ ಬೀರಿದೆ, ಅವರ ಜೀವನೋಪಾಯವನ್ನು ನಾಶಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. ಭಯೋತ್ಪಾದಕರ ವಿರುದ್ಧ ನಿಂತ ಯುವ ಆದಿಲ್‌ನ ಧೈರ್ಯವನ್ನು ಅವರು ಶ್ಲಾಘಿಸಿದರು, ಪ್ರಾಮಾಣಿಕ ಶ್ರಮದ ಮೂಲಕ ತನ್ನ ಕುಟುಂಬವನ್ನು ಪೋಷಿಸಲು ಶ್ರಮಿಸುವಾಗ ದುರಂತದಲ್ಲಿ ಆತ  ತನ್ನ ಪ್ರಾಣವನ್ನು ಕಳೆದುಕೊಂಡರು ಎಂದ ಪ್ರಧಾನ ಮಂತ್ರಿಯವರು  ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು, ಭಯೋತ್ಪಾದನೆ ಎಂದಿಗೂ ಪ್ರದೇಶದ ಪ್ರಗತಿಯನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಅವರು ಖಚಿತವಾಗಿ ನುಡಿದರು.

ಜಮ್ಮು ಮತ್ತು ಕಾಶ್ಮೀರದ ಜನರ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದ ಪ್ರಧಾನಿ, ಪಾಕಿಸ್ತಾನದ ಪಿತೂರಿಯ ವಿರುದ್ಧ ಅವರ ದೃಢ ನಿಲುವು ಪ್ರಬಲ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಯುವಜನರು ಈಗ ಭಯೋತ್ಪಾದನೆಯನ್ನು ನೇರವಾಗಿ ಎದುರಿಸಲು ದೃಢನಿಶ್ಚಯ ಮಾಡಿದ್ದಾರೆ ಎಂದು ಅವರು ಹೇಳಿದರು. ಭಯೋತ್ಪಾದನೆಯ ವಿನಾಶಕಾರಿ ಪರಿಣಾಮವನ್ನು ಶ್ರೀ ಮೋದಿ ಖಂಡಿಸಿದರು, ಅದು ಕಣಿವೆಯಲ್ಲಿ ಶಾಲೆಗಳನ್ನು ಸುಟ್ಟುಹಾಕಿತು, ಆಸ್ಪತ್ರೆಗಳನ್ನು ಧ್ವಂಸಮಾಡಿತು ಮತ್ತು ಪೀಳಿಗೆಗಳನ್ನು ಛಿದ್ರಗೊಳಿಸಿತು ಎಂಬುದನ್ನು ನೆನಪಿಸಿಕೊಂಡರು. ಭಯೋತ್ಪಾದನೆಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದನ್ನು ಸಹ ಒಂದು ಪ್ರಮುಖ ಸವಾಲನ್ನಾಗಿ ಮಾಡಿತು, ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಂಡಿತು ಎಂದು ಅವರು ಬೆಟ್ಟು ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಜನರು ಪ್ರದರ್ಶಿಸಿದ ಶಕ್ತಿ ಮತ್ತು ದೃಢಸಂಕಲ್ಪವು ಒಂದು ಮಹತ್ವದ ತಿರುವು ಎಂದು ಪ್ರಧಾನಿ ದೃಢಪಡಿಸಿದರು, ಇದು ಶಾಂತಿ, ಪ್ರಗತಿ ಮತ್ತು ಉಜ್ವಲ ಭವಿಷ್ಯದ ಬಗ್ಗೆ ಅವರ ಬದ್ಧತೆಯನ್ನು ಸೂಚಿಸುತ್ತದೆ ಎಂದರು.

ಜಮ್ಮು ಮತ್ತು ಕಾಶ್ಮೀರವು ಹಲವು ವರ್ಷಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ ಎಂದು ಶ್ರೀ ಮೋದಿ ಹೇಳಿದರು, ಇದರಿಂದಾಗಿ ಅನೇಕರು ತಮ್ಮ ಕನಸುಗಳನ್ನು ತ್ಯಜಿಸಿ ಹಿಂಸೆಯನ್ನು ತಮ್ಮ ಹಣೆಬರಹವಾಗಿ ಸ್ವೀಕರಿಸಿದರು. ಆದಾಗ್ಯೂ, ತಮ್ಮ ಸರ್ಕಾರವು ವಾಸ್ತವವನ್ನು ಬದಲಾಯಿಸಿದೆ, ಜಮ್ಮು ಮತ್ತು ಕಾಶ್ಮೀರದ ಯುವಜನರು ಮತ್ತೆ ಕನಸು ಕಾಣಲು ಮತ್ತು ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಟ್ಟಿದೆ ಎಂದು ಅವರು ಒತ್ತಿ ಹೇಳಿದರು. ಕಾಶ್ಮೀರದ ಯುವಜನರು ಈಗ ಗದ್ದಲದ ಮಾರುಕಟ್ಟೆಗಳು, ರೋಮಾಂಚಕ ಶಾಪಿಂಗ್ ಮಾಲ್‌ಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಸಿನಿಮಾ ಮಂದಿರಗಳನ್ನು ನೋಡುವುದರಲ್ಲಿ ಸಂತೋಷಪಡುತ್ತಾರೆ ಎಂದು ಪ್ರಧಾನಿ ಹೇಳಿದರು. ಸ್ಥಳೀಯರು ಜಮ್ಮು ಮತ್ತು ಕಾಶ್ಮೀರವನ್ನು ಚಲನಚಿತ್ರ ಚಿತ್ರೀಕರಣದ ಪ್ರಮುಖ ತಾಣವಾಗಿ ಪುನರುಜ್ಜೀವನಗೊಳಿಸಲು ಮತ್ತು ಅದನ್ನು ಕ್ರೀಡೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಆಶಿಸುತ್ತಾರೆ ಎಂಬುದನ್ನೂ ಅವರು ಗಮನಿಸಿದರು. ಜಮ್ಮು ಮತ್ತು ಕಾಶ್ಮೀರದ ಹೊಸ, ಆಶಾವಾದಿ ಮುಖವನ್ನು ಪ್ರತಿಬಿಂಬಿಸುವ ಸಾವಿರಾರು ಭಕ್ತರು ಸೇರಿದ್ದ ಮಾತಾ ಖೀರ್ ಭವಾನಿ ಮೇಳವನ್ನು ಶ್ರೀ ಮೋದಿ ಉಲ್ಲೇಖಿಸಿದರು. ಮುಂಬರುವ ಅಮರನಾಥ ಯಾತ್ರೆಯ ಸುತ್ತಲಿನ ಉತ್ಸಾಹ ಮತ್ತು ಈದ್ ಹಬ್ಬದ ಉತ್ಸಾಹವನ್ನು ಅವರು ಎತ್ತಿ ತೋರಿಸಿದರು, ಇದು ಈ ಪ್ರದೇಶದ ಸ್ಥಿತಿಸ್ಥಾಪಕತ್ವ ಮತ್ತು ಪ್ರಗತಿಯನ್ನು ಪ್ರದರ್ಶಿಸುತ್ತದೆ. ಪಹಲ್ಗಾಮ್ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ವೇಗವು ಅಲುಗಾಡುವುದಿಲ್ಲ ಎಂದು ದೃಢವಾಗಿ ಪ್ರತಿಪಾದಿಸಿದ ಪ್ರಧಾನಿ, ಈ ಪ್ರದೇಶದ ಬೆಳವಣಿಗೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದರು, ಜಮ್ಮು ಮತ್ತು ಕಾಶ್ಮೀರದ ಯುವಜನರ ಕನಸುಗಳಿಗೆ ಬೆದರಿಕೆ ಹಾಕುವ ಯಾವುದೇ ಅಡೆತಡೆಯನ್ನು ಸ್ವತಃ ಎದುರಿಸಬೇಕಾಗುತ್ತದೆ ಎಂದು ಘೋಷಿಸಿದರು.

ಒಂದು ತಿಂಗಳ ಹಿಂದೆ, ಇದೇ ರಾತ್ರಿ ಭಾರತವು ಆಪರೇಷನ್ ಸಿಂದೂರ್ ನಡೆಸಿ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ನಿರ್ಣಾಯಕ ಹೊಡೆತ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ, "ಆಪರೇಷನ್ ಸಿಂದೂರ್’ ಎಂಬ ಹೆಸರನ್ನು ಕೇಳಿದಾಗಲೆಲ್ಲಾ ಪಾಕಿಸ್ತಾನ ತನ್ನ ಅವಮಾನಕರ ಸೋಲನ್ನು ನೆನಪಿಸಿಕೊಳ್ಳುತ್ತದೆ" ಎಂದು ಹೇಳಿದರು. ಪಾಕಿಸ್ತಾನದ ಮಿಲಿಟರಿ ಮತ್ತು ಭಯೋತ್ಪಾದಕ ಜಾಲಗಳು ಭಾರತದ ದಿಟ್ಟ ನಡೆಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಕೆಲವೇ ನಿಮಿಷಗಳಲ್ಲಿ, ದಶಕಗಳಿಂದ ಅವರು ನಿರ್ಮಿಸಿದ್ದ ಭಯೋತ್ಪಾದಕ ಮೂಲಸೌಕರ್ಯವು ನಾಶವಾಯಿತು ಎಂದು ಅವರು ಒತ್ತಿ ಹೇಳಿದರು. ಜಮ್ಮು, ಪೂಂಚ್ ಮತ್ತು ಇತರ ಜಿಲ್ಲೆಗಳಲ್ಲಿ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ಪ್ರತಿಕ್ರಿಯಿಸಿದ ಪಾಕಿಸ್ತಾನ ಆಘಾತ ಮತ್ತು ಹತಾಶೆಯಲ್ಲಿ ಉಳಿದಿದೆ ಎಂದು ಶ್ರೀ ಮೋದಿ ಹೇಳಿದರು. ಪಾಕಿಸ್ತಾನದ ಕ್ರೂರ ದಾಳಿಯನ್ನು ಅವರು ಖಂಡಿಸಿದರು, ಅದು ಮನೆಗಳನ್ನು ಹೇಗೆ ನಾಶಪಡಿಸಿತು, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಿತು ಮತ್ತು ದೇವಾಲಯಗಳು, ಮಸೀದಿಗಳು ಮತ್ತು ಗುರುದ್ವಾರಗಳ ಮೇಲೆ ಶೆಲ್ ದಾಳಿ ಮಾಡಿತು ಎಂದು ಜಗತ್ತು ಗಮನಿಸಿದೆ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದ ಜನರ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದ ಪ್ರಧಾನಿ, ಪಾಕಿಸ್ತಾನದ ಆಕ್ರಮಣವನ್ನು ಎದುರಿಸುವಲ್ಲಿ ಅವರ ಧೈರ್ಯವನ್ನು ಪ್ರತಿಯೊಬ್ಬ ಭಾರತೀಯರು ನೋಡಿದ್ದಾರೆ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕನು ಸಂತ್ರಸ್ತ ಕುಟುಂಬಗಳ ಜೊತೆಗೆ ಪೂರ್ಣ ಶಕ್ತಿಯಿಂದ ನಿಂತಿದ್ದಾನೆ, ಆ ಮೂಲಕ ಅಚಲ ಬೆಂಬಲ ಮತ್ತು ಒಗ್ಗಟ್ಟನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದವರು ನುಡಿದರು.

ಗಡಿಯಾಚೆಗಿನ ಗುಂಡಿನ ದಾಳಿಯಿಂದ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು  ಸರ್ಕಾರಿ ಸಹಾಯಕ್ಕಾಗಿ ಈಗಾಗಲೇ ನೇಮಕಾತಿ ಪತ್ರಗಳನ್ನು ಪಡೆದಿವೆ  ಎಂದು ಪ್ರಧಾನಿ ಘೋಷಿಸಿದರು. ಶೆಲ್ ದಾಳಿಯಿಂದ ಹಾನಿಗೊಳಗಾದ 2,000 ಕ್ಕೂ ಹೆಚ್ಚು ಕುಟುಂಬಗಳು ಎದುರಿಸುತ್ತಿರುವ ಕಷ್ಟವನ್ನು ಗುರುತಿಸಿದ ಶ್ರೀ ಮೋದಿ, ಅವರ ನೋವು ದೇಶದ ನೋವು ಎಂದು ದೃಢಪಡಿಸಿದರು. ಮನೆ ದುರಸ್ತಿಗಾಗಿ ಹಿಂದೆ ಆರ್ಥಿಕ ನೆರವು ನೀಡಲಾಗುತ್ತಿತ್ತು, ಇದು ಸಂತ್ರಸ್ತರಾದವರಿಗೆ ಪರಿಹಾರವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಈಗ ಬೆಂಬಲವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಘೋಷಿಸಿದರು, ಸಂತ್ರಸ್ತ  ಕುಟುಂಬಗಳಿಗೆ ಹೆಚ್ಚಿನ ಸಹಾಯವನ್ನು ನೀಡುತ್ತದೆ. ಗಡಿಯಾಚೆಗಿನ ಶೆಲ್ ದಾಳಿಯಿಂದ ಮನೆಗಳು ಹಾನಿಗೊಳಗಾದ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ಘೋಷಿಸಿದರು. ತೀವ್ರ ಹಾನಿಗೊಳಗಾದ ಕುಟುಂಬಗಳಿಗೆ ಈಗ ₹2 ಲಕ್ಷ ನೀಡಲಾಗುವುದು, ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹1 ಲಕ್ಷ ಹೆಚ್ಚುವರಿ ಸಹಾಯವನ್ನು ನೀಡಲಾಗುವುದು ಎಂದು ಅವರು ಹೇಳಿದರು. ಸಂತ್ರಸ್ತ  ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ, ನಿರಂತರ ಪರಿಹಾರವನ್ನು ಖಚಿತಪಡಿಸಿಕೊಳ್ಳುವ ಮತ್ತು ಅವರ ಮನೆಗಳು ಹಾಗು ಜೀವನವನ್ನು ಪುನರ್ನಿರ್ಮಿಸಲು ಸಹಾಯ ಮಾಡುವ ತಮ್ಮ ಸರ್ಕಾರದ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.

"ಸರ್ಕಾರವು ಗಡಿ ನಿವಾಸಿಗಳನ್ನು ದೇಶದ ಮುಂಚೂಣಿ ರಕ್ಷಕರು ಎಂದು ಗುರುತಿಸುತ್ತದೆ" ಎಂದು ಪ್ರಧಾನಿ ದೃಢಪಡಿಸಿದರು. ಕಳೆದ ದಶಕದಲ್ಲಿ, ಗಡಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಮತ್ತು ಭದ್ರತೆಯನ್ನು ಬಲಪಡಿಸಲು ಅಭೂತಪೂರ್ವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಮುಖ ಉಪಕ್ರಮಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಸುಮಾರು 10,000 ಹೊಸ ಬಂಕರ್‌ಗಳನ್ನು ನಿರ್ಮಿಸಲಾಗಿದೆ, ಇದು ಆಪರೇಷನ್ ಸಿಂದೂರ್ ನಂತರದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರ ವಿಭಾಗಕ್ಕಾಗಿ ಎರಡು ಹೊಸ ಗಡಿ ಬೆಟಾಲಿಯನ್‌ಗಳ ರಚನೆಯನ್ನು ಪ್ರಧಾನಿ ಘೋಷಿಸಿದರು, ಇದು ಪ್ರದೇಶದಲ್ಲಿ ಭದ್ರತಾ ಕಾರ್ಯಾಚರಣೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ, ಎರಡು ಸಮರ್ಪಿತ ಮಹಿಳಾ ಬೆಟಾಲಿಯನ್‌ಗಳನ್ನು ಸಹ ಯಶಸ್ವಿಯಾಗಿ ಸ್ಥಾಪಿಸಲಾಗಿದೆ, ಇದು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ ಎಂಬ ಮಾಹಿತಿಯನ್ನು  ಅವರು ಹಂಚಿಕೊಂಡರು.

ಭಾರತದ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಸವಾಲಿನ ಭೂಪ್ರದೇಶಗಳಲ್ಲಿ ನಡೆಯುತ್ತಿರುವ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಸಂಪರ್ಕ ಮತ್ತು ಭದ್ರತೆಯನ್ನು ಸುಧಾರಿಸಲು ನೂರಾರು ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಘೋಷಿಸಿದರು. ಕಥುವಾ-ಜಮ್ಮು ಹೆದ್ದಾರಿಯನ್ನು ಆರು ಪಥಗಳ ಎಕ್ಸ್‌ಪ್ರೆಸ್‌ವೇ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಮತ್ತು ಅಖ್ನೂರ್-ಪೂಂಚ್ ಹೆದ್ದಾರಿಯನ್ನು ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ವೈಬ್ರಂಟ್ ವಿಲೇಜ್ ಕಾರ್ಯಕ್ರಮದಡಿಯಲ್ಲಿ, ಗಡಿ ಗ್ರಾಮಗಳಲ್ಲಿ ಅಭಿವೃದ್ಧಿ ಉಪಕ್ರಮಗಳನ್ನು ವೇಗಗೊಳಿಸಲಾಗಿದ್ದು, ನಿವಾಸಿಗಳಿಗೆ ಉತ್ತಮ ಜೀವನ ಪರಿಸ್ಥಿತಿಗಳು ಮತ್ತು ಅವಕಾಶಗಳನ್ನು ಖಾತ್ರಿಪಡಿಸಲಾಗಿದೆ. ಈ ಹಿಂದೆ ಸರ್ವ ಋತು ಸಂಪರ್ಕದ ಕೊರತೆಯಿದ್ದ ಜಮ್ಮು ಮತ್ತು ಕಾಶ್ಮೀರದ 400 ಹಳ್ಳಿಗಳನ್ನು ಈಗ ಹೊಸದಾಗಿ ನಿರ್ಮಿಸಲಾದ 1,800 ಕಿಲೋಮೀಟರ್ ರಸ್ತೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಗಡಿ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಬಲಪಡಿಸುವ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ₹4,200 ಕೋಟಿಗೂ ಹೆಚ್ಚು ಹಣವನ್ನು ಮಂಜೂರು ಮಾಡುತ್ತಿದೆ ಎಂದು ಅವರು ಘೋಷಿಸಿದರು.

ಜಮ್ಮು ಮತ್ತು ಕಾಶ್ಮೀರದ ಯುವಜನರಿಗೆ ವಿಶೇಷ ಮನವಿ ಮಾಡಿದ ಪ್ರಧಾನ ಮಂತ್ರಿಯವರು, ಭಾರತದ ಉತ್ಪಾದನಾ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಗ್ರಹಿಸಿದರು. ಆಪರೇಷನ್ ಸಿಂದೂರ್ ಆತ್ಮನಿರ್ಭರ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ ಮತ್ತು ಇಂದು ಜಗತ್ತು ಭಾರತದ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಗುರುತಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಯಶಸ್ಸಿಗೆ ಸಶಸ್ತ್ರ ಪಡೆಗಳು 'ಮೇಕ್ ಇನ್ ಇಂಡಿಯಾ'ದಲ್ಲಿ ಇಟ್ಟಿರುವ ನಂಬಿಕೆಗೆ ಕಾರಣವೆಂದು ಹೇಳಿದ ಪ್ರಧಾನಿ, ಪ್ರತಿಯೊಬ್ಬ ಭಾರತೀಯನೂ ಈಗ ಅವರ ಬದ್ಧತೆಯನ್ನು ಅನುಕರಿಸಬೇಕು ಎಂದು ಹೇಳಿ, ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾದ ಮಿಷನ್ ಮ್ಯಾನುಫ್ಯಾಕ್ಚರಿಂಗ್ ಉಪಕ್ರಮವನ್ನು ಎತ್ತಿ ತೋರಿಸಿದರು, ಇದು ಭಾರತದ ಉತ್ಪಾದನಾ ವಲಯವನ್ನು ಚುರುಕುಗೊಳಿಸುವ ಗುರಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಯುವ ನಾವೀನ್ಯಕಾರರು ಮತ್ತು ಉದ್ಯಮಿಗಳು ಆಂದೋಲನಕ್ಕೆ  ಸೇರಬೇಕು  ಕರೆ ನೀಡಿದರು, ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಭಾರತಕ್ಕೆ ಅವರ ಆಧುನಿಕ ಚಿಂತನೆ, ನಾವೀನ್ಯತೆ, ಆಲೋಚನೆಗಳು ಮತ್ತು ಕೌಶಲ್ಯಗಳು ಅಗತ್ಯವಿದೆ ಎಂದೂ ಪ್ರಧಾನಿ ಹೇಳಿದರು. ಕಳೆದ ದಶಕದಲ್ಲಿ ಭಾರತವು ಪ್ರಮುಖ ರಕ್ಷಣಾ ರಫ್ತುದಾರನಾಗಿ ಹೊರಹೊಮ್ಮಿದೆ ಮತ್ತು ಮುಂದಿನ ಗುರಿ ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರ ರಾಷ್ಟ್ರವನ್ನಾಗಿಸುವುದಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ಉದ್ದೇಶದತ್ತ ವೇಗವಾಗಿ ಸಾಗಿದಷ್ಟೂ, ದೇಶಾದ್ಯಂತ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಲಕ್ಷಾಂತರ ಜನರಿಗೆ ಪ್ರಯೋಜನವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಆದ್ಯತೆ ನೀಡಲು ಪ್ರತಿಯೊಬ್ಬ ಭಾರತೀಯರು ಬದ್ಧರಾಗಬೇಕೆಂದು ಕರೆ ನೀಡಿದ ಶ್ರೀ ಮೋದಿ, ಈ ಸರಕುಗಳು ನಮ್ಮ ಸಹ-ನಾಗರಿಕರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಿಜವಾದ ಪ್ರತಿಬಿಂಬವಾಗಿವೆ ಎಂದು ಒತ್ತಿ ಹೇಳಿದರು. ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಆಯ್ಕೆ ಮಾಡುವುದು ರಾಷ್ಟ್ರಕ್ಕೆ ನಿಜವಾದ ಸೇವೆಯಾಗಿದೆ, ಅದು ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಕಾರ್ಮಿಕರನ್ನು ಸಬಲೀಕರಣಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ರಾಷ್ಟ್ರವು ಗಡಿಗಳಲ್ಲಿ ತನ್ನ ಸಶಸ್ತ್ರ ಪಡೆಗಳನ್ನು ಗೌರವಿಸುವಂತೆಯೇ, ಮಾರುಕಟ್ಟೆಯಲ್ಲಿ 'ಭಾರತದಲ್ಲಿ ತಯಾರಿಸಲಾಗಿದೆ' ಎಂಬ ಹೆಮ್ಮೆಯನ್ನು ಎತ್ತಿಹಿಡಿಯಬೇಕು, ಭಾರತದ ಶಕ್ತಿ ರಕ್ಷಣೆ ಮತ್ತು ವಾಣಿಜ್ಯ ಎರಡರಲ್ಲೂ ಪ್ರತಿಫಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಆಗ್ರಹಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಅಭಿವೃದ್ಧಿಯತ್ತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಉಜ್ವಲ ಮತ್ತು ಸಮೃದ್ಧ ಭವಿಷ್ಯ ಕಾಯುತ್ತಿದೆ ಎಂದು ಪ್ರಧಾನಿ ದೃಢಪಡಿಸಿದರು. ಶಾಂತಿ ಮತ್ತು ಸಮೃದ್ಧಿ ಪ್ರಯಾಣದ ಅಡಿಪಾಯವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಸಹಯೋಗ ಮತ್ತು ಪ್ರಗತಿಯ ಮನೋಭಾವವನ್ನು ಅವರು ಒತ್ತಿ ಹೇಳಿದರು. ಮಾತಾ ವೈಷ್ಣೋ ದೇವಿಯ ಆಶೀರ್ವಾದದಿಂದ ನಡೆಸಲ್ಪಡುವ ಬೆಳವಣಿಗೆಯ ಹಾದಿಯನ್ನು ಬಲಪಡಿಸುವ ತಮ್ಮ ಅಚಲ ಸಂಕಲ್ಪವನ್ನು ಪ್ರಧಾನಿ ವ್ಯಕ್ತಪಡಿಸಿದರು. ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರಕ್ಕೆ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ದೃಢನಿಶ್ಚಯ ಮತ್ತು ಏಕತೆಯೊಂದಿಗೆ ದೃಷ್ಟಿಕೋನವನ್ನು ಸಾಧಿಸಲು ಶ್ರಮಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು   ಗಮನಾರ್ಹ ಯೋಜನೆಗಳಿಗಾಗಿ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಪ್ರಗತಿಯ ಉತ್ಸಾಹವನ್ನು ಕೊಂಡಾಡುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ವಿ. ಸೋಮಣ್ಣ ಮತ್ತು ಡಾ. ಜಿತೇಂದ್ರ ಸಿಂಗ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಚೆನಾಬ್ ಮತ್ತು ಅಂಜಿ ರೈಲು ಸೇತುವೆಗಳು

ನದಿಯಿಂದ 359 ಮೀಟರ್ ಎತ್ತರದಲ್ಲಿರುವ ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಭೂಕಂಪ ಮತ್ತು ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಸೇತುವೆಯ ಪ್ರಮುಖ ಪ್ರಯೋಜನವೆಂದರೆ ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು. ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಕೇವಲ 3 ಗಂಟೆಗಳು ಸಾಕಾಗುತ್ತದೆ, ಇದು ಅಸ್ತಿತ್ವದಲ್ಲಿರುವ ಪ್ರಯಾಣದ ಸಮಯವನ್ನು 2-3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ಅಂಜಿ ಸೇತುವೆ ಭಾರತದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯಾಗಿದ್ದು, ಇದು ಸವಾಲಿನ ಭೂಪ್ರದೇಶದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲಿದೆ.

ಸಂಪರ್ಕ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳು

ಪ್ರಧಾನಮಂತ್ರಿಯವರು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯು.ಎಸ್.ಬಿ.ಆರ್.ಎಲ್-USBRL) ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 43,780 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 272 ಕಿಮೀ ಉದ್ದದ ಯು.ಎಸ್.ಬಿ.ಆರ್.ಎಲ್. ಯೋಜನೆಯು 36 ಸುರಂಗಗಳು (119 ಕಿಮೀ ಉದ್ದ) ಮತ್ತು 943 ಸೇತುವೆಗಳನ್ನು ಒಳಗೊಂಡಿದೆ. ಪ್ರಾದೇಶಿಕ ಚಲನಶೀಲತೆಯನ್ನು ಪರಿವರ್ತಿಸುವ ಮತ್ತು ಸಾಮಾಜಿಕ-ಆರ್ಥಿಕ ಏಕೀಕರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಯು ಕಾಶ್ಮೀರ ಕಣಿವೆ ಮತ್ತು ದೇಶದ ಉಳಿದ ಭಾಗಗಳ ನಡುವೆ ಸರ್ವಋತು, ತಡೆರಹಿತ ರೈಲು ಸಂಪರ್ಕವನ್ನು ಸ್ಥಾಪಿಸುತ್ತದೆ.

ಪ್ರಧಾನಮಂತ್ರಿಯವರು ಶ್ರೀ ಮಾತಾ ವೈಷ್ಣೋದೇವಿ ಕತ್ರಾದಿಂದ ಶ್ರೀನಗರಕ್ಕೆ ಮತ್ತು ಹಿಂತಿರುಗಲು ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅವು ನಿವಾಸಿಗಳು, ಪ್ರವಾಸಿಗರು, ಯಾತ್ರಿಕರು ಸೇರಿದಂತೆ ಇತರರಿಗೆ ತ್ವರಿತ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಪ್ರಯಾಣ ಆಯ್ಕೆಯನ್ನು ನೀಡುತ್ತವೆ.

ಗಡಿ ಪ್ರದೇಶಗಳಲ್ಲಿ ಕೊನೆಯ ಹಂತದವರೆಗೂ  ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿಯವರು ವಿವಿಧ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ -701 ರಲ್ಲಿ ರಫಿಯಾಬಾದ್ ನಿಂದ ಕುಪ್ವಾರಾವರೆಗಿನ ರಸ್ತೆ ವಿಸ್ತರಣೆ ಯೋಜನೆ ಮತ್ತು 1,952 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎನ್.ಎಚ್. -444 ರಲ್ಲಿ ಶೋಪಿಯಾನ್ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀನಗರದ ರಾಷ್ಟ್ರೀಯ ಹೆದ್ದಾರಿ -1 ರ ಸಂಗ್ರಾಮ ಜಂಕ್ಷನ್ ಮತ್ತು ರಾಷ್ಟ್ರೀಯ ಹೆದ್ದಾರಿ -44 ರ ಬೆಮಿನಾ ಜಂಕ್ಷನ್‌ನಲ್ಲಿ ಎರಡು ಫ್ಲೈಓವರ್ ಯೋಜನೆಗಳನ್ನು ಸಹ ಅವರು ಉದ್ಘಾಟಿಸಿದರು. ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಯಾಣಿಕರಿಗೆ ಸಂಚಾರ ಸೌಲಭ್ಯವನ್ನು ಹೆಚ್ಚಿಸುತ್ತವೆ.

ಪ್ರಧಾನಿಯವರು ಕತ್ರಾದಲ್ಲಿ 350 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಶ್ರೇಷ್ಠತಾ ಸಂಸ್ಥೆಯ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಇದು ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುವ ರಿಯಾಸಿ ಜಿಲ್ಲೆಯ ಮೊದಲ ವೈದ್ಯಕೀಯ ಕಾಲೇಜಾಗಲಿದೆ.

 

 

*****


(Release ID: 2134769)