ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರದ ಕರಕಟ್ ನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
30 MAY 2025 2:55PM by PIB Bengaluru
ಬಿಹಾರದ ಸ್ವಾಭಿಮಾನಿ ಮತ್ತು ಶ್ರಮಿಕ ಸಹೋದರ ಸಹೋದರಿಯರೆ, ನಿಮಗೆಲ್ಲರಿಗೂ ನಮಸ್ಕಾರಗಳು.
ಬಿಹಾರದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜಿತನ್ ರಾಮ್ ಮಾಂಝಿ ಜಿ, ಲಲ್ಲನ್ ಸಿಂಗ್ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ನಿತ್ಯಾನಂದ್ ರಾಯ್ ಜಿ, ಸತೀಶ್ ಚಂದ್ರ ದುಬೇ ಜಿ, ರಾಜಭೂಷಣ್ ಜಿ, ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಸಾಮ್ರಾಟ್ ಚೌಧರಿ ಜಿ, ವಿಜಯ್ ಕುಮಾರ್ ಸಿನ್ಹಾ ಜೀ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಸಚಿವರೆ, ಜನ ಪ್ರತಿನಿಧಿಗಳೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ಇಂದು ಈ ಪವಿತ್ರ ಭೂಮಿಯಲ್ಲಿ ಬಿಹಾರದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಇಲ್ಲಿ ಸಮರ್ಪಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ನೀವೆಲ್ಲರೂ ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ, ನಿಮ್ಮ ವಾತ್ಸಲ್ಯ, ಬಿಹಾರದ ಈ ಪ್ರೀತಿ, ನಾನು ಅದನ್ನು ಯಾವಾಗಲೂ ಬಹಳವಾಗಿ ಗೌರವಿಸುತ್ತೇನೆ. ಇಂದು ಬಿಹಾರದಲ್ಲಿ ಇಷ್ಟೊಂದು ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರ ಆಗಮನವು ಬಿಹಾರದ ನನ್ನ ಎಲ್ಲಾ ಕಾರ್ಯಕ್ರಮಗಳ ಪೈಕಿ ಅತ್ಯಂತ ಅದ್ಭುತವಾದ ಘಟನೆಯಾಗಿದೆ. ನಾನು ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ವಿಶೇಷ ಗೌರವ ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೇ,
ಈ ಸಸಾರಾಮ್ ಭೂಮಿಯು ಸಸಾರಾಮ್ ಎಂಬ ಹೆಸರಿನಲ್ಲಿ ರಾಮನನ್ನು ಹೊಂದಿದೆ. ಸಸಾರಾಮ್ನ ಜನರಿಗೆ ಭಗವಾನ್ ರಾಮ ಮತ್ತು ಅವನ ಕುಲದ ಸಂಪ್ರದಾಯ ತಿಳಿದಿದೆ. ಅದೆಂದರೆ, ಜೀವ ತ್ಯಾಗ ಮಾಡಬಹುದು, ಆದರೆ ಭರವಸೆಯನ್ನು ಎಂದಿಗೂ ಮುರಿಯಬಾರದು(प्राण जाए पर वचन न जाई।'). ಭಗವಾನ್ ಶ್ರೀರಾಮನ ಈ ಸಂಪ್ರದಾಯವು ಈಗ ಹೊಸ ಭಾರತದ ನೀತಿಯಾಗಿದೆ. ಇತ್ತೀಚೆಗೆ ಜಮ್ಮ-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಾಗ, ನಮ್ಮ ಅನೇಕ ಮುಗ್ಧ ನಾಗರಿಕರು ಕೊಲ್ಲಲ್ಪಟ್ಟರು. ಈ ಘೋರ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ನಾನು ಬಿಹಾರಕ್ಕೆ ಬಂದಿದ್ದೆ, ಈ ಬಿಹಾರ ಭೂಮಿಯಿಂದಲೇ ನಾನು ದೇಶಕ್ಕೆ, ಬಿಹಾರ ಭೂಮಿಯಲ್ಲಿ, ಕಣ್ಣುಗಳನ್ನು ನೋಡುತ್ತಾ, ಭಯೋತ್ಪಾದನೆಯ ಸೂತ್ರದಾರರ ಅಡಗುತಾಣಗಳನ್ನು ನೆಲಸಮ ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಈ ಬಿಹಾರ ಭೂಮಿಯಲ್ಲಿ, ಅವರಿಗೆ ಊಹಿಸಿದ್ದಕ್ಕಿಂತ ಕೆಟ್ಟ ಶಿಕ್ಷೆ ಸಿಗುತ್ತದೆ ಎಂದು ನಾನು ಹೇಳಿದ್ದೆ. ಇಂದು ನಾನು ಬಿಹಾರಕ್ಕೆ ನನ್ನ ಭರವಸೆಯನ್ನು ಪೂರೈಸಿದ ನಂತರ ಬಂದಿದ್ದೇನೆ. ಪಾಕಿಸ್ತಾನದಲ್ಲಿ ಕುಳಿತು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದ ಜನರನ್ನು, ಅವರ ಅಡಗುತಾಣಗಳನ್ನು ನಮ್ಮ ಸೈನ್ಯವು ಅವಶೇಷಗಳನ್ನಾಗಿ ಮಾಡಿದೆ. ಪಾಕಿಸ್ತಾನ ಮತ್ತು ಜಗತ್ತು ಭಾರತೀಯ ಹೆಣ್ಣು ಮಕ್ಕಳ ಸಿಂದೂರದ ಶಕ್ತಿಯನ್ನು ಕಂಡಿದೆ. ಪಾಕಿಸ್ತಾನಿ ಸೈನ್ಯದ ರಕ್ಷಣೆಯಲ್ಲಿ ತಮ್ಮನ್ನು ಸುರಕ್ಷಿತವೆಂದು ಪರಿಗಣಿಸಿದ್ದ ಭಯೋತ್ಪಾದಕರನ್ನು, ನಮ್ಮ ಸೈನ್ಯವು ಒಂದೇ ಏಟಿಗೆ ಹೊಡೆದುರುಳಿಸಿದೆ. ನಾವು ಪಾಕಿಸ್ತಾನದ ವಾಯುನೆಲೆಗಳನ್ನು, ಅವರ ಮಿಲಿಟರಿ ಅಡಗುತಾಣಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸಿದ್ದೇವೆ, ಇದು ಹೊಸ ಭಾರತ, ಇದು ನವ ಭಾರತದ ಶಕ್ತಿ.
ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,
ಈ ಬಿಹಾರ ವೀರ್ ಕುನ್ವರ್ ಸಿಂಗ್ ಅವರ ಭೂಮಿ. ಇಲ್ಲಿಂದ ಸಾವಿರಾರು ಯುವಕರು ದೇಶದ ಭದ್ರತೆಗಾಗಿ ಸೈನ್ಯದಲ್ಲಿ, ಬಿಎಸ್ಎಫ್ ನಲ್ಲಿ ತಮ್ಮ ಯೌವನವನ್ನು ತ್ಯಾಗ ಮಾಡಿದ್ದಾರೆ. ಆಪರೇಷನ್ ಸಿಂದೂರ್ ನಲ್ಲಿ, ನಮ್ಮ ಬಿಎಸ್ಎಫ್ ನ ಅಭೂತಪೂರ್ವ ಶೌರ್ಯ ಮತ್ತು ಅದಮ್ಯ ಧೈರ್ಯವನ್ನು ಜಗತ್ತು ಕಂಡಿದೆ. ನಮ್ಮ ಗಡಿಗಳಲ್ಲಿ ನಿಯೋಜಿಸಲಾದ ಧೈರ್ಯಶಾಲಿ ಬಿಎಸ್ಎಫ್ ಸೈನಿಕರು ಅಭೇದ್ಯ ಭದ್ರತಾ ಬಂಡೆ ಆಗಿದ್ದಾರೆ, ಭಾರತ ಮಾತೆಯ ರಕ್ಷಣೆಯೇ ನಮ್ಮ ಬಿಎಸ್ಎಫ್ ಸೈನಿಕರಿಗೆ ಅತ್ಯುನ್ನತವಾಗಿದೆ. ಮಾತೃಭೂಮಿಗೆ ಸೇವೆ ಸಲ್ಲಿಸುವ ಪವಿತ್ರ ಕರ್ತವ್ಯವನ್ನು ನಿರ್ವಹಿಸುವಾಗ, ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಇಮ್ತಿಯಾಜ್ ಮೇ 10ರಂದು ಗಡಿಯಲ್ಲಿ ಹುತಾತ್ಮರಾದರು. ಬಿಹಾರದ ಈ ಧೈರ್ಯಶಾಲಿ ಪುತ್ರನಿಗೆ ನಾನು ನನ್ನ ಗೌರವಯುತ ನಮನ ಸಲ್ಲಿಸುತ್ತೇನೆ. ಇಂದು ಆಪರೇಷನ್ ಸಿಂದೂರ್ನಲ್ಲಿ ಶತ್ರುಗಳು ಭಾರತದ ಶಕ್ತಿಯನ್ನು ನೋಡಿದ್ದಾರೆ ಎಂದು ನಾನು ಬಿಹಾರದ ಮಣ್ಣಿನಿಂದ ಪುನರುಚ್ಚರಿಸಲು ಬಯಸುತ್ತೇನೆ, ಆದರೆ ಇದು ನಮ್ಮ ಬತ್ತಳಿಕೆಯ ಒಂದು ಬಾಣ ಎಂದು ಶತ್ರು ಅರ್ಥ ಮಾಡಿಕೊಳ್ಳಬೇಕು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ನಿಂತಿಲ್ಲ ಅಥವಾ ನಿಲ್ಲುವುದಿಲ್ಲ. ಭಯೋತ್ಪಾದನೆ ಮತ್ತೆ ಮೇಲೇರಿದರೆ, ಭಾರತ ಅದನ್ನು ಪುಡಿ ಮಾಡುತ್ತದೆ.
ಸ್ನೇಹಿತರೆ,
ನಮ್ಮ ಹೋರಾಟ ದೇಶದ ಪ್ರತಿ ಶತ್ರುವಿನ ವಿರುದ್ಧ ನಡೆಯಲಿದೆ. ಅದು ಗಡಿಯಾಚೆಗಿರಲಿ ಅಥವಾ ದೇಶದೊಳಗಿರಲಿ, ಹಿಂದಿನ ವರ್ಷಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿ ಹರಡುವವರನ್ನು ನಾವು ಹೇಗೆ ನಿರ್ಮೂಲನೆ ಮಾಡಿದ್ದೇವೆ ಎಂಬುದಕ್ಕೆ ಬಿಹಾರದ ಜನರು ಸಾಕ್ಷಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದಿನವರೆಗೆ ಸಸಾರಾಮ್, ಕೈಮೂರ್ ಮತ್ತು ನೆರೆಯ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬಲ್ಲಿರಾ? ನಕ್ಸಲಿಸಂ ಹೇಗೆ ಪ್ರಬಲವಾಗಿತ್ತು, ನಕ್ಸಲರು ಯಾವಾಗ ಮತ್ತು ಎಲ್ಲಿ ಮುಖವಾಡ ಧರಿಸಿ, ಕೈಯಲ್ಲಿ ಬಂದೂಕುಗಳನ್ನು ಹಿಡಿದು ಬೀದಿಗಳಲ್ಲಿ ಬರುತ್ತಾರೆ ಎಂದು ಎಲ್ಲರೂ ಭಯಪಡುತ್ತಿದ್ದರು. ಸರ್ಕಾರಿ ಯೋಜನೆಗಳು ಬರುತ್ತಿದ್ದವು, ಆದರೆ ಅವು ನಾಗರಿಕರನ್ನು ತಲುಪಲಿಲ್ಲ. ನಕ್ಸಲ್ ಪೀಡಿತ ಹಳ್ಳಿಗಳಲ್ಲಿ ಆಸ್ಪತ್ರೆ ಅಥವಾ ಮೊಬೈಲ್ ಟವರ್ ಇರಲಿಲ್ಲ. ಕೆಲವೊಮ್ಮೆ ಶಾಲೆಗಳನ್ನೇ ಸುಟ್ಟು ಹಾಕಲಾಗುತ್ತಿತ್ತು, ಕೆಲವೊಮ್ಮೆ ರಸ್ತೆಗಳನ್ನು ನಿರ್ಮಿಸುವ ಜನರನ್ನು ಕೊಲ್ಲಲಾಗುತ್ತಿತ್ತು. ಈ ಜನರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ. ಆ ಸಂದರ್ಭಗಳಲ್ಲೂ ಇಲ್ಲಿ ಅಭಿವೃದ್ಧಿ ಕೈಗೊಳ್ಳಲು ನಿತೀಶ್ ಜಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. 2014ರ ನಂತರ, ನಾವು ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡಿದ್ದೇವೆ. ಮಾವೋವಾದಿಗಳನ್ನು ಅವರ ದುಷ್ಕೃತ್ಯಗಳಿಗಾಗಿ ನಾವು ಶಿಕ್ಷಿಸಲು ಪ್ರಾರಂಭಿಸಿದ್ದೇವೆ. ನಾವು ಯುವಕರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತಂದಿದ್ದೇವೆ. ಇಂದು ದೇಶವು 11 ವರ್ಷಗಳ ಬಲವಾದ ಬದ್ಧತೆಯ ಫಲವನ್ನು ಪಡೆಯಲು ಪ್ರಾರಂಭಿಸಿದೆ. 2014ಕ್ಕಿಂತ ಮೊದಲು, ದೇಶದ 125ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು, ಈಗ ಕೇವಲ 18 ಜಿಲ್ಲೆಗಳು ಮಾತ್ರ ನಕ್ಸಲ್ ಪೀಡಿತವಾಗಿವೆ. ಈಗ ಸರ್ಕಾರ ರಸ್ತೆಗಳು ಮತ್ತು ಉದ್ಯೋಗವನ್ನು ಸಹ ಒದಗಿಸುತ್ತಿದೆ. ಮಾವೋವಾದಿ ಹಿಂಸಾಚಾರವು ಸಂಪೂರ್ಣವಾಗಿ ನಿರ್ಮೂಲನೆಯಾಗುವ ದಿನ ದೂರವಿಲ್ಲ. ಶಾಂತಿ, ಭದ್ರತೆ, ಶಿಕ್ಷಣ ಮತ್ತು ಅಭಿವೃದ್ಧಿಯು ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಹಳ್ಳಿಯನ್ನು ತಲುಪುತ್ತದೆ.
ಸ್ನೇಹಿತರೆ,
ಭದ್ರತೆ ಮತ್ತು ಶಾಂತಿ ಇದ್ದಾಗ ಮಾತ್ರ ಅಭಿವೃದ್ಧಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿತೀಶ್ ಜಿ ನೇತೃತ್ವದಲ್ಲಿ ಜಂಗಲ್ ರಾಜ್ ಸರ್ಕಾರವನ್ನು ತೆಗೆದುಹಾಕಿದಾಗ, ಬಿಹಾರವೂ ಪ್ರಗತಿಯ ಹಾದಿಯಲ್ಲಿ ಮುಂದುವರಿಯಲು ಪ್ರಾರಂಭಿಸಿತು. ಹಾಳಾದ ಹೆದ್ದಾರಿಗಳು, ಕೆಟ್ಟ ರೈಲ್ವೆ ಮಾರ್ಗಗಳು, ಸೀಮಿತ ವಿಮಾನ ಸಂಪರ್ಕ, ಆ ಯುಗವು ಈಗ ಇತಿಹಾಸವಾಗಿದೆ, ಅದನ್ನು ಹಿಂದೆ ಹಾಕಲಾಗಿದೆ.
ಸ್ನೇಹಿತರೆ,
ಒಂದು ಕಾಲದಲ್ಲಿ, ಬಿಹಾರಕ್ಕೆ ಒಂದೇ ವಿಮಾನ ನಿಲ್ದಾಣವಿತ್ತು – ಅದು ಪಾಟ್ನಾದಲ್ಲಿ. ಇಂದು, ದರ್ಭಂಗಾ ವಿಮಾನ ನಿಲ್ದಾಣವೂ ಪ್ರಾರಂಭವಾಗಿದೆ. ಈಗ ಇಲ್ಲಿಂದ ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಿಗೆ ವಿಮಾನ ಸಂಚಾರ ಮಾಡಬಹುದು. ಪಾಟ್ನಾ ವಿಮಾನ ನಿಲ್ದಾಣದ ಟರ್ಮಿನಲ್ ಆಧುನೀಕರಿಸಬೇಕು ಎಂಬುದು ಬಿಹಾರದ ಜನರ ಬಹುಕಾಲದ ಬೇಡಿಕೆಯಾಗಿತ್ತು, ಈಗ ಈ ಬೇಡಿಕೆಯೂ ಈಡೇರಿದೆ. ನಿನ್ನೆ ಸಂಜೆ, ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿತು. ಈ ಹೊಸ ಟರ್ಮಿನಲ್ ಈಗ 1 ಕೋಟಿ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಬಿಹ್ತಾ ವಿಮಾನ ನಿಲ್ದಾಣದಲ್ಲಿ 1,400 ಕೋಟಿ ರೂ. ಹೂಡಿಕೆಯನ್ನು ಸಹ ಮಾಡಲಾಗುತ್ತಿದೆ.
ಸ್ನೇಹಿತರೆ,
ಇಂದು, ಬಿಹಾರದ ಎಲ್ಲೆಡೆ ಚತುಷ್ಪಥ ಮತ್ತು 6 ಪಥದ ರಸ್ತೆಗಳ ಜಾಲ ನಿರ್ಮಿಸಲಾಗುತ್ತಿದೆ. ಪಾಟ್ನಾದಿಂದ ಬಕ್ಸಾರ್, ಗಯಾಜಿಯಿಂದ ದೋಭಿ, ಪಾಟ್ನಾದಿಂದ ಬೋಧ್ ಗಯಾಜಿ, ಪಾಟ್ನಾ-ಅರಾ-ಸಸಾರಂ ಹಸಿರು ವಲಯ ಕಾರಿಡಾರ್ ಸೇರಿದಂತೆ ಎಲ್ಲೆಡೆ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಗಂಗಾ, ಸೋನ್, ಗಂಡಕ್, ಕೋಸಿ ಸೇರಿದಂತೆ ಎಲ್ಲಾ ಪ್ರಮುಖ ನದಿಗಳ ಮೇಲೆ ಹೊಸ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಇಂತಹ ಯೋಜನೆಗಳು ಬಿಹಾರದಲ್ಲಿ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ. ಈ ಯೋಜನೆಗಳು ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸುತ್ತವೆ. ಪ್ರವಾಸೋದ್ಯಮ ಮತ್ತು ವ್ಯವಹಾರ ಎರಡೂ ಇದರಿಂದ ಪ್ರಯೋಜನ ಪಡೆಯುತ್ತವೆ.
ಸ್ನೇಹಿತರೆ,
ಬಿಹಾರದಲ್ಲಿ ರೈಲ್ವೆ ಸ್ಥಿತಿಯೂ ಈಗ ವೇಗವಾಗಿ ಬದಲಾಗುತ್ತಿದೆ. ಇಂದು ಬಿಹಾರದಲ್ಲಿ ವಿಶ್ವ ದರ್ಜೆಯ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ, ರೈಲ್ವೆ ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ಪರಿವರ್ತಿಸಲಾಗುತ್ತಿದೆ. ಅವುಗಳ ಸಂಖ್ಯೆನ್ನು 3 ಪಟ್ಟು ಹೆಚ್ಚಿಸಲಾಗುತ್ತಿದೆ. ಛಪ್ರಾ, ಮುಜಫರ್ಪುರ, ಕಟಿಹಾರ್ನಂತಹ ಪ್ರದೇಶಗಳಲ್ಲಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಸೋನ್ ನಗರ ಮತ್ತು ಅಂಡಾಲ್ ನಡುವೆ ಬಹು ಮಾರ್ಗ(ಮಲ್ಟಿಟ್ರ್ಯಾಕಿಂಗ್)ಗಳ ಕೆಲಸ ನಡೆಯುತ್ತಿದೆ, ಇದು ರೈಲುಗಳ ಸಂಚಾರವನ್ನು ವೇಗಗೊಳಿಸುತ್ತದೆ. ಈಗ 100ಕ್ಕೂ ಹೆಚ್ಚು ರೈಲುಗಳು ಸಸಾರಂನಲ್ಲಿ ನಿಲುಗಡೆಯಾಗುತ್ತಿವೆ. ಅಂದರೆ, ನಾವು ಹಳೆಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ ಮತ್ತು ರೈಲ್ವೆ ಆಧುನೀಕರಿಸುತ್ತಿದ್ದೇವೆ.
ಸಹೋದರ ಸಹೋದರಿಯರೆ,
ಈ ಕೆಲಸಗಳನ್ನು ಮೊದಲೇ ಮಾಡಬಹುದಿತ್ತು. ಆದರೆ ಬಿಹಾರಕ್ಕೆ ಆಧುನಿಕ ರೈಲುಗಳನ್ನು ಒದಗಿಸುವ ಜವಾಬ್ದಾರಿ ಹೊತ್ತವರು, ರೈಲ್ವೆ ನೇಮಕಾತಿ ಹೆಸರಿನಲ್ಲಿ ನಿಮ್ಮ ಭೂಮಿ ಲೂಟಿ ಮಾಡಿದ್ದಾರೆ, ಬಡವರ ಭೂಮಿಯನ್ನು ಅವರ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ, ಇವು ಅವರ ಸಾಮಾಜಿಕ ನ್ಯಾಯದ ವಿಧಾನಗಳು, ಬಡವರನ್ನು ಲೂಟಿ ಮಾಡುವುದು, ಅವರ ಹಕ್ಕುಗಳನ್ನು ಲೂಟಿ ಮಾಡುವುದು, ಅವರ ಅಸಹಾಯಕತೆಯ ಲಾಭ ಪಡೆದುಕೊಳ್ಳುವುದು ಮತ್ತು ನಂತರ ರಾಜ ಮನೆತನದ ಜೀವನ ಆನಂದಿಸುವುದು. ಬಿಹಾರದ ಜನರು ಜಂಗಲ್ ರಾಜ್ ಜನರ ಸುಳ್ಳು ಮತ್ತು ವಂಚನೆಗಳ ಬಗ್ಗೆ ಇನ್ನಷ್ಟು ಜಾಗರೂಕರಾಗಿರುವುದು ಬಹಳ ಮುಖ್ಯ.
ಸ್ನೇಹಿತರೆ,
ವಿದ್ಯುತ್ ಇಲ್ಲದೆ ಅಭಿವೃದ್ಧಿ ಅಪೂರ್ಣ. ವಿದ್ಯುತ್ ಇದ್ದಾಗ, ಕೈಗಾರಿಕಾ ಅಭಿವೃದ್ಧಿ ಇರುತ್ತದೆ, ವಿದ್ಯುತ್ ಇದ್ದಾಗ, ಜೀವನ ಸುಲಭವಾಗುತ್ತದೆ. 21ನೇ ಶತಮಾನವು ತಂತ್ರಜ್ಞಾನ ಚಾಲಿತ ಶತಮಾನವಾಗಿದೆ. ಆದ್ದರಿಂದ, ಪ್ರತಿ ಹಂತದಲ್ಲೂ ವಿದ್ಯುತ್ ಅಗತ್ಯವಾಗಲಿದೆ. ಹಿಂದಿನ ವರ್ಷಗಳಲ್ಲಿ, ಬಿಹಾರದಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಂದು ಬಿಹಾರದಲ್ಲಿ ವಿದ್ಯುತ್ ಬಳಕೆ 10 ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ 4 ಪಟ್ಟು ಹೆಚ್ಚಾಗಿದೆ. ನಬಿನಗರದಲ್ಲಿ ಒಂದು ದೊಡ್ಡ ಎನ್ಟಿಪಿಸಿ ವಿದ್ಯುತ್ ಯೋಜನೆ ನಿರ್ಮಿಸಲಾಗುತ್ತಿದೆ, ಇದಕ್ಕಾಗಿ 30 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಇದು ಬಿಹಾರಕ್ಕೆ 1500 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯ ಒದಗಿಸುತ್ತದೆ. ಬಕ್ಸಾರ್ ಮತ್ತು ಪಿರ್ಪೈಂಟಿಯಲ್ಲಿಯೂ ಹೊಸ ಉಷ್ಣ ವಿದ್ಯುತ್ ಸ್ಥಾವರಗಳನ್ನು ಪ್ರಾರಂಭಿಸಲಾಗುವುದು.
ಸಹೋದರ-ಸಹೋದರಿಯರೆ,
ಈಗ ನಮ್ಮ ಗಮನ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿದೆ. ನಾವು ಬಿಹಾರವನ್ನು ಹಸಿರು ಇಂಧನದತ್ತ ಕೊಂಡೊಯ್ಯಬೇಕಾಗಿದೆ. ಆದ್ದರಿಂದ, ಕಜ್ರಾದಲ್ಲಿ ಸೌರ ಉದ್ಯಾನವನವನ್ನು ಸಹ ನಿರ್ಮಿಸಲಾಗುತ್ತಿದೆ. ಪಿಎಂ-ಕುಸುಮ್ ಯೋಜನೆಯಡಿ, ರೈತರಿಗೆ ಸೌರಶಕ್ತಿಯಿಂದ ಗಳಿಸುವ ಆಯ್ಕೆಗಳನ್ನು ನೀಡಲಾಗುತ್ತಿದೆ. ಜಮೀನುಗಳು ನವೀಕರಿಸಬಹುದಾದ ಕೃಷಿ ಫೀಡರ್ಗಳಿಂದ ವಿದ್ಯುತ್ ಪಡೆಯುತ್ತಿವೆ. ನಮ್ಮ ಪ್ರಯತ್ನಗಳ ಫಲಿತಾಂಶವೆಂದರೆ, ಇಲ್ಲಿನ ಜನರ ಜೀವನ ಸುಧಾರಿಸಿದೆ. ಮಹಿಳೆಯರು ಸುರಕ್ಷಿತರಾಗಿದ್ದಾರೆ.
ಸ್ನೇಹಿತರೆ,
ರಾಜ್ಯಕ್ಕೆ ಆಧುನಿಕ ಮೂಲಸೌಕರ್ಯ ಬಂದಾಗ, ಹಳ್ಳಿಗಳು, ಬಡವರು, ರೈತರು ಮತ್ತು ಸಣ್ಣ ಕೈಗಾರಿಕೆಗಳು ಹೆಚ್ಚು ಪ್ರಯೋಜನ ಪಡೆಯುತ್ತವೆ. ಏಕೆಂದರೆ, ಅವರು ದೇಶ ಮತ್ತು ವಿದೇಶಗಳ ದೊಡ್ಡ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ರಾಜ್ಯಕ್ಕೆ ಹೊಸ ಹೂಡಿಕೆ ಬಂದಾಗ, ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಕಳೆದ ವರ್ಷ ನಡೆದ ಬಿಹಾರ ವ್ಯಾಪಾರ ಶೃಂಗಸಭೆಯಲ್ಲಿ, ಹೆಚ್ಚಿನ ಸಂಖ್ಯೆಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಮುಂದೆ ಬಂದವು, ರಾಜ್ಯಕ್ಕೆ ಕೈಗಾರಿಕೆ ಬಂದಾಗ, ಜನರು ಕಾರ್ಮಿಕರಿಗಾಗಿ ವಲಸೆ ಹೋಗಬೇಕಾಗಿಲ್ಲ, ರೈತರು ಸಹ ಹೊಸ ಆಯ್ಕೆಗಳನ್ನು ಪಡೆಯುತ್ತಾರೆ. ಸಾರಿಗೆ ಸೌಲಭ್ಯಗಳ ಸುಧಾರಣೆಯೊಂದಿಗೆ, ಅವರ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ಸಾಗಿಸಬಹುದು.
ಸಹೋದರ, ಸಹೋದರಿಯರೆ,
ನಮ್ಮ ಸರ್ಕಾರ ಬಿಹಾರದ ರೈತರ ಆದಾಯ ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಇಲ್ಲಿ 75 ಲಕ್ಷಕ್ಕೂ ಹೆಚ್ಚು ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ನಮ್ಮ ಸರ್ಕಾರ ಮಖಾನಾ ಮಂಡಳಿ ಸ್ಥಾಪನೆಯನ್ನು ಘೋಷಿಸಿದೆ. ಬಿಹಾರದ ಮಖಾನಾಗಳಿಗೆ ನಾವು ಜಿಐ ಟ್ಯಾಗ್ ನೀಡಿದ್ದೇವೆ, ಇದು ಮಖಾನಾ ರೈತರಿಗೆ ಸಾಕಷ್ಟು ಪ್ರಯೋಜನ ನೀಡಿದೆ. ಈ ವರ್ಷದ ಬಜೆಟ್ನಲ್ಲಿ, ನಾವು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆಯನ್ನು ಸಹ ಘೋಷಿಸಿದ್ದೇವೆ. ಕೇವಲ 2-3 ದಿನಗಳ ಹಿಂದೆ, ಮುಂಗಾರು ಹಂಗಾಮಿಗೆ ಭತ್ತ ಸೇರಿದಂತೆ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ, ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಪಡೆಯುತ್ತಾರೆ, ಅವರ ಆದಾಯವೂ ಹೆಚ್ಚಾಗುತ್ತದೆ.
ಸ್ನೇಹಿತರೆ,
ಬಿಹಾರವನ್ನು ಹೆಚ್ಚು ವಂಚಿಸಿದ ಜನರು, ಅವರ ಆಳ್ವಿಕೆಯಲ್ಲಿ ಬಿಹಾರದ ಬಡ ಮತ್ತು ವಂಚಿತ ವರ್ಗಗಳು ಬಿಹಾರವನ್ನು ತೊರೆಯಬೇಕಾಯಿತು, ಇಂದು ಅಧಿಕಾರ ಪಡೆಯಲು ಸಾಮಾಜಿಕ ನ್ಯಾಯದ ಬಗ್ಗೆ ಸುಳ್ಳು ಹೇಳುತ್ತಿರುವ ಅದೇ ಜನರು. ದಶಕಗಳಿಂದ ಬಿಹಾರದ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಶೌಚಾಲಯಗಳೇ ಇರಲಿಲ್ಲ, ದಶಕಗಳಿಂದ ನಮ್ಮ ಈ ಸಹೋದರ ಸಹೋದರಿಯರಿಗೆ ಬ್ಯಾಂಕ್ ಖಾತೆಗಳೇ ಇರಲಿಲ್ಲ, ಅವರಿಗೆ ಬ್ಯಾಂಕ್ಗಳಲ್ಲಿ ಪ್ರವೇಶ ಮುಚ್ಚಲಾಗಿತ್ತು, ಅವರಿಗೆ ಬಾಗಿಲು ಪ್ರವೇಶಿಸಲು ಸಹ ಅವಕಾಶವಿರಲಿಲ್ಲ. ದಲಿತ ಮತ್ತು ಹಿಂದುಳಿದ ವರ್ಗಗಳ ಹೆಚ್ಚಿನ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು, ಅವರಿಗೆ ಸರಿಯಾದ ಮನೆಯೂ ಇರಲಿಲ್ಲ, ಅವರು ನಿರಾಶ್ರಿತರಾಗಿದ್ದರು, ಕೋಟ್ಯಂತರ ಜನರಿಗೆ ತಲೆಯ ಮೇಲೆ ಸೂರು ಕೂಡ ಇರಲಿಲ್ಲ. ನಾನು ನಿಮ್ಮನ್ನು ಕೇಳುತ್ತೇನೆ, ಬಿಹಾರದ ಜನರ ಈ ಅವಸ್ಥೆ, ಈ ನೋವು, ಈ ಸಂಕಟ, ಇದು ಕಾಂಗ್ರೆಸ್ ಮತ್ತು ಆರ್ಜೆಡಿಯ ಸಾಮಾಜಿಕ ನ್ಯಾಯವೇ? ಸ್ನೇಹಿತರೆ, ಇದಕ್ಕಿಂತ ದೊಡ್ಡ ಅನ್ಯಾಯ ಇನ್ನೊಂದಿಲ್ಲ, ಬಡವರನ್ನು ಇಂತಹ ಅಸಹಾಯಕ ಸ್ಥಿತಿಯಲ್ಲಿ ಬದುಕುವಂತೆ ಆ ಜನರು ನೀತಿಗಳನ್ನು ರೂಪಿಸಲು ಒಗ್ಗಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಆರ್ಜೆಡಿಯ ಜನರು ದಲಿತರು ಮತ್ತು ಹಿಂದುಳಿದ ಜನರ ನೋವುಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಈ ಜನರು ಬಿಹಾರದಲ್ಲಿರುವ ಬಡತನ ತೋರಿಸಲು ವಿದೇಶಿಯರನ್ನು ಕರೆತರುತ್ತಿದ್ದರು. ಈಗ ದಲಿತ, ವಂಚಿತ ಮತ್ತು ಹಿಂದುಳಿದ ಸಮಾಜವು ಕಾಂಗ್ರೆಸ್ ಅನ್ನು ತ್ಯಜಿಸಿದಾಗ, ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಮಾಜಿಕ ನ್ಯಾಯದ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಸಹೋದರ ಸಹೋದರಿಯರೆ,
ಎನ್ಡಿಎ ಯುಗದಲ್ಲಿ ಬಿಹಾರ ಮತ್ತು ದೇಶದಲ್ಲಿ ಸಾಮಾಜಿಕ ನ್ಯಾಯದ ಹೊಸ ಉದಯ ಕಂಡುಬಂದಿದೆ. ನಾವು ಬಡವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ. ಈ ಸೌಲಭ್ಯಗಳನ್ನು 100% ಫಲಾನುಭವಿಗಳಿಗೆ ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. 4 ಕೋಟಿ ಹೊಸ ಮನೆಗಳು, 3 ಕೋಟಿ ಸಹೋದರಿಯರನ್ನು ಲಖ್ಪತಿ ದೀದಿ ಮಾಡುವ ಕಾರ್ಯಕ್ರಮ, 12 ಕೋಟಿಗೂ ಹೆಚ್ಚು ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕ, 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧ ವ್ಯಕ್ತಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಪ್ರತಿ ತಿಂಗಳು ಉಚಿತ ಪಡಿತರ ಸೌಲಭ್ಯ, ನಮ್ಮ ಸರ್ಕಾರ ಪ್ರತಿಯೊಬ್ಬ ಬಡ ಮತ್ತು ನಿರ್ಗತಿಕ ವ್ಯಕ್ತಿಯೊಂದಿಗೆ ನಿಲ್ಲುತ್ತಿದೆ.
ಸ್ನೇಹಿತರೆ,
ಯಾವುದೇ ಗ್ರಾಮವನ್ನು ನಾವು ಬಿಡಬಾರದು, ಯಾವುದೇ ಅರ್ಹ ಕುಟುಂಬವು ಸರ್ಕಾರಿ ಯೋಜನೆಗಳಿಂದ ವಂಚಿತವಾಗಬಾರದು ಎಂಬುದನ್ನು ನಾವು ಬಯಸುತ್ತೇವೆ. ಈ ಚಿಂತನೆಯಿಂದ ಬಿಹಾರ ಸರ್ಕಾರ ಡಾ. ಭೀಮರಾವ್ ಅಂಬೇಡ್ಕರ್ ಸಮಗ್ರ ಸೇವಾ ಅಭಿಯಾನ ಪ್ರಾರಂಭಿಸಿದೆ ಎಂಬುದು ನನಗೆ ಸಂತೋಷವಾಗಿದೆ. ಈ ಅಭಿಯಾನದಲ್ಲಿ, ಸರ್ಕಾರವು 22 ಪ್ರಮುಖ ಯೋಜನೆಗಳನ್ನು ಒಟ್ಟುಗೂಡಿಸುವ ಮೂಲಕ ಪ್ರತಿ ಹಳ್ಳಿ ಮತ್ತು ಪ್ರದೇಶವನ್ನು ತಲುಪುತ್ತಿದೆ. ಪ್ರತಿಯೊಬ್ಬ ದಲಿತ, ಮಹಾದಲಿತ, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಬಡವರ ಮನೆಗೆ ನೇರವಾಗಿ ತಲುಪುವುದು ನಮ್ಮ ಗುರಿಯಾಗಿದೆ. ಇಲ್ಲಿಯವರೆಗೆ 30 ಸಾವಿರಕ್ಕೂ ಹೆಚ್ಚು ಅಭಿಯಾನಗಳನ್ನು ನಡೆಸಲಾಗಿದೆ, ಲಕ್ಷಾಂತರ ಜನರು ಈ ಅಭಿಯಾನಕ್ಕೆ ಸೇರಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಸರ್ಕಾರವೇ ಫಲಾನುಭವಿಗಳನ್ನು ತಲುಪಿದಾಗ, ಯಾವುದೇ ತಾರತಮ್ಯ ಮತ್ತು ಭ್ರಷ್ಟಾಚಾರ ಇರುವುದಿಲ್ಲ, ಆಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ಸಂಭವಿಸುತ್ತದೆ.
ಸ್ನೇಹಿತರೆ,
ನಾವು ನಮ್ಮ ಬಿಹಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್, ಕರ್ಪೂರಿ ಠಾಕೂರ್, ಬಾಬು ಜಗಜೀವನ್ ರಾಮ್ ಮತ್ತು ಜೆಪಿ ಅವರ ಕನಸಿನ ಬಿಹಾರವನ್ನಾಗಿ ಮಾಡಬೇಕು. ಅಭಿವೃದ್ಧಿ ಹೊಂದಿದ ಬಿಹಾರ,ಅಭಿವೃದ್ಧಿ ಹೊಂದಿದ ಭಾರತ ನಮ್ಮ ಗುರಿಯಾಗಿದೆ! ಏಕೆಂದರೆ, ಬಿಹಾರ ಪ್ರಗತಿ ಸಾಧಿಸಿದಾಗಲೆಲ್ಲಾ, ಭಾರತವು ವಿಶ್ವದಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ. ಒಟ್ಟಾಗಿ ನಾವು ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂಬ ವಿಶ್ವಾಸ ನನಗಿದೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ, ಮುಷ್ಟಿ ಮುಚ್ಚಿ ನನ್ನೊಂದಿಗೆ ಹೇಳಿ...
ಭಾರತ್ ಮಾತಾ ಕಿ ಜೈ.
ಧ್ವನಿ ದೂರದವರೆಗೆ ತಲುಪಬೇಕು. ಗಡಿಯಲ್ಲಿ ನಿಂತಿರುವ ನಮ್ಮ ಸೈನಿಕರು ಹೆಮ್ಮೆ ಪಡಬೇಕು.
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ತುಂಬು ಧನ್ಯವಾದಗಳು.
*****
(Release ID: 2133008)