ಪ್ರಧಾನ ಮಂತ್ರಿಯವರ ಕಛೇರಿ
ಮೇ 29 ಮತ್ತು 30 ರಂದು ಪ್ರಧಾನಮಂತ್ರಿಗಳು ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ
ಪ್ರಗತಿಯು ಉದ್ದೇಶವನ್ನು ಪೂರೈಸುವ ಮತ್ತು ಪ್ರಕೃತಿಯು ಬೆಳವಣಿಗೆಯನ್ನು ಪೋಷಿಸುವ ಸಿಕ್ಕಿಂ@50 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ
ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ನಲ್ಲಿರುವ ಅಲಿಪುರ್ದುವಾರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಯೋಜನೆಯ ಶಿಲಾನ್ಯಾಸವನ್ನು ಪ್ರಧಾನಮಂತ್ರಿ ನೆರವೇರಿಸಲಿದ್ದಾರೆ
ಬಿಹಾರದ ಕರಕಟ್ ನಲ್ಲಿ, ಸುಮಾರು 48,520 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಶಿಲಾನ್ಯಾಸ ಮಾಡಲಿದ್ದಾರೆ ಮತ್ತು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ
ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ, ಸುಮಾರು 20,900 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ
Posted On:
28 MAY 2025 10:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 29 ಮತ್ತು 30 ರಂದು ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಮೇ 29 ರಂದು, ಪ್ರಧಾನಮಂತ್ರಿಯವರು ಸಿಕ್ಕಿಂಗೆ ಭೇಟಿ ನೀಡಲಿದ್ದು, ಅಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ "ಸಿಕ್ಕಿಂ@50: ಪ್ರಗತಿ ಉದ್ದೇಶವನ್ನು ಪೂರೈಸುವ ಮತ್ತು ಪ್ರಕೃತಿ ಬೆಳವಣಿಗೆಯನ್ನು ಪೋಷಿಸುವ ತಾಣ" ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ಸಿಕ್ಕಿಂನಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಸಹ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ, ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಮಧ್ಯಾಹ್ನ 2:15 ರ ಸುಮಾರಿಗೆ ಅಲಿಪುರ್ದುವಾರ್ ನಲ್ಲಿ ಅಲಿಪುರ್ದುವಾರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಸಿಟಿ ಗ್ಯಾಸ್ ವಿತರಣಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೆ, ಪ್ರಧಾನಮಂತ್ರಿಯವರು ಬಿಹಾರಕ್ಕೆ ಭೇಟಿ ನೀಡಲಿದ್ದು, ಸಂಜೆ ಸುಮಾರು 5:45 ಗಂಟೆಗೆ ಪಾಟ್ನಾ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಮೇ 30 ರಂದು, ಬೆಳಿಗ್ಗೆ ಸುಮಾರು 11 ಗಂಟೆಗೆ, ಅವರು ಬಿಹಾರದ ಕರಕಟ್ ನಲ್ಲಿ 48,520 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ ಅವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅನಂತರ, ಪ್ರಧಾನಮಂತ್ರಿಯವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಕಾನ್ಪುರ ನಗರದಲ್ಲಿ ಮಧ್ಯಾಹ್ನ ಸುಮಾರು 2:45 ಗಂಟೆಗೆ ಸುಮಾರು 20,900 ಕೋಟಿ ರೂಪಾಯಿಗಳ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟಿಸಲಿದ್ದಾರೆ. ನಂತರ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಿಕ್ಕಿಂನಲ್ಲಿ ಪ್ರಧಾನಮಂತ್ರಿ
ಸಿಕ್ಕಿಂ ರಾಜ್ಯದ 50 ಅದ್ಭುತ ವರ್ಷಗಳ ಆಚರಣೆಯ ಅಂಗವಾಗಿ, ಪ್ರಧಾನಮಂತ್ರಿಯವರು "ಸಿಕ್ಕಿಂ@50: ಪ್ರಗತಿ ಉದ್ದೇಶವನ್ನು ಪೂರೈಸುವ ಮತ್ತು ಪ್ರಕೃತಿ ಬೆಳವಣಿಗೆಯನ್ನು ಪೋಷಿಸುವ ತಾಣ" ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಿಕ್ಕಿಂ ಸರ್ಕಾರವು "ಸುನೌಲೋ, ಸಮೃದ್ಧ ಮತ್ತು ಸಮರ್ಥ ಸಿಕ್ಕಿಂ" ಎಂಬ ಧ್ಯೇಯವಾಕ್ಯದಡಿಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದು ಸಿಕ್ಕಿಂನ ಸಾಂಸ್ಕೃತಿಕ ಶ್ರೀಮಂತಿಕೆ, ಸಂಪ್ರದಾಯ, ನೈಸರ್ಗಿಕ ವೈಭವ ಮತ್ತು ಇತಿಹಾಸದ ಸಾರವನ್ನು ಆಚರಿಸುತ್ತದೆ.
ಪ್ರಧಾನಮಂತ್ರಿಯವರು ಸಿಕ್ಕಿಂನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ, ನಾಮ್ಚಿ ಜಿಲ್ಲೆಯಲ್ಲಿ 750 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ 500 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆ; ಗ್ಯಾಲ್ ಶಿಂಗ್ ಜಿಲ್ಲೆಯ ಪೆಲ್ಲಿಂಗ್ ನ ಸಂಗಾಚೊಲಿಂಗ್ ನಲ್ಲಿ ಪ್ರಯಾಣಿಕರ ರೋಪ್ ವೇ ಹಾಗೂ ಗ್ಯಾಂಗ್ಟಕ್ ಜಿಲ್ಲೆಯ ಸಂಗಖೋಲಾದಲ್ಲಿನ ಅಟಲ್ ಅಮೃತ್ ಉದ್ಯಾನದಲ್ಲಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಸ್ಥಾಪನೆ ಯೋಜನೆ ಸೇರಿದಂತೆ ಇತರ ಹಲವು ಕಾಮಗಾರಿಗಳು ಒಳಗೊಂಡಿವೆ.
ರಾಜ್ಯವು 50 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿಗಾಗಿ ಪ್ರಧಾನಮಂತ್ರಿಯವರು ಸ್ಮರಣಾರ್ಥ ನಾಣ್ಯ, ಸ್ಮರಣಿಕೆ ನಾಣ್ಯ ಹಾಗೂ ವಿಶೇಷ ಅಂಚೆಚೀಟಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ
ಭಾರತದ ನಗರ ಅನಿಲ ವಿತರಣಾ (CGD) ಜಾಲವನ್ನು ವಿಸ್ತರಿಸುವ ಒಂದು ಮಹತ್ವದ ಕ್ರಮವಾಗಿ, ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಸಿಜಿಡಿ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ. ಸುಮಾರು 1010 ಕೋಟಿ ರೂಪಾಯಿಗಳಿಗೂ ಹೆಚ್ಚಿನ ವೆಚ್ಚದ ಈ ಯೋಜನೆಯು 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ (PNG), 100ಕ್ಕೂ ಹೆಚ್ಚು ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ಅನಿಲವನ್ನು ಪೂರೈಸುವ ಗುರಿ ಹೊಂದಿದೆ. ಇದರೊಂದಿಗೆ, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕಾರ್ಯಕ್ರಮದ (MWP) ಗುರಿಗಳಿಗೆ ಅನುಗುಣವಾಗಿ ಸುಮಾರು 19 ಸಿ ಎನ್ ಜಿ ಕೇಂದ್ರಗಳನ್ನು ಸ್ಥಾಪಿಸಿ ವಾಹನಗಳಿಗೆ ಸಂಕುಚಿತ ನೈಸರ್ಗಿಕ ಅನಿಲ (CNG) ಅನ್ನು ಒದಗಿಸಲಾಗುವುದು. ಇದು ಅನುಕೂಲಕರ, ವಿಶ್ವಾಸಾರ್ಹ, ಪರಿಸರಸ್ನೇಹಿ ಮತ್ತು ಕಡಿಮೆ ಖರ್ಚಿನ ಇಂಧನ ಪೂರೈಕೆಯನ್ನು ನೀಡುತ್ತದೆ ಮತ್ತು ಈ ಭಾಗದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಬಿಹಾರದಲ್ಲಿ ಪ್ರಧಾನಮಂತ್ರಿ
ಮೇ 29 ರಂದು, ಪ್ರಧಾನಮಂತ್ರಿಯವರು ಪಾಟ್ನಾ ವಿಮಾನ ನಿಲ್ದಾಣದ ನೂತನ ಪ್ರಯಾಣಿಕರ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಟರ್ಮಿನಲ್ ವಾರ್ಷಿಕವಾಗಿ 1 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಅವರು ಸುಮಾರು 1410 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬಿಹ್ತಾ ವಿಮಾನ ನಿಲ್ದಾಣದ ನೂತನ ನಾಗರಿಕ ವಲಯಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಬಿಹ್ತಾ ವಿಮಾನ ನಿಲ್ದಾಣವು ಪಾಟ್ನಾ ಬಳಿಯ ಶೀಘ್ರವಾಗಿ ಬೆಳೆಯುತ್ತಿರುವ ಶೈಕ್ಷಣಿಕ ಕೇಂದ್ರಕ್ಕೆ ಸೇವೆ ಒದಗಿಸಲಿದೆ, ಇಲ್ಲಿ IIT ಪಾಟ್ನಾ ಮತ್ತು ಪ್ರಸ್ತಾವಿತ NIT ಪಾಟ್ನಾ ಕ್ಯಾಂಪಸ್ ಗಳಿವೆ.
ಮೇ 30 ರಂದು ಪ್ರಧಾನಮಂತ್ರಿ ಅವರು ಕರಕಟ್ ನಲ್ಲಿ 48,520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಪ್ರದೇಶದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಔರಂಗಾಬಾದ್ ಜಿಲ್ಲೆಯಲ್ಲಿ 29,930 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದ ನಬಿ ನಗರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್, ಹಂತ-II (3x800 MW) ಗೆ ಶಿಲಾನ್ಯಾಸ ಮಾಡಲಿದ್ದಾರೆ. ಇದು ಬಿಹಾರ ಮತ್ತು ಪೂರ್ವ ಭಾರತಕ್ಕೆ ಇಂಧನ ಭದ್ರತೆಯನ್ನು ಖಚಿತಪಡಿಸುವ ಗುರಿ ಹೊಂದಿದೆ. ಈ ಯೋಜನೆಯು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಕೈಗೆಟುಕುವ ದರದಲ್ಲಿ ವಿದ್ಯುತ್ ಅನ್ನು ಒದಗಿಸುತ್ತದೆ.
ಈ ಪ್ರದೇಶದ ರಸ್ತೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ವಿವಿಧ ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ 119A ಯ ಪಾಟ್ನಾ-ಅರ್ರಾ-ಸಾಸಾರಾಂ ವಿಭಾಗದ ನಾಲ್ಕು ಪಥದ ರಸ್ತೆ, ರಾಷ್ಟ್ರೀಯ ಹೆದ್ದಾರಿ 319B ಯ ವಾರಣಾಸಿ-ರಾಂಚಿ-ಕೋಲ್ಕತ್ತಾ ಹೆದ್ದಾರಿಯ ಆರು ಪಥದ ರಸ್ತೆ ಮತ್ತು ರಾಮನಗರ-ಕಚ್ಚಿ ದರ್ಗಾ ವಿಸ್ತರಣೆ (ರಾಷ್ಟ್ರೀಯ ಹೆದ್ದಾರಿ 119D) ಹಾಗೂ ಬುಕ್ಸಾರ್ ಮತ್ತು ಭರೌಲಿ ನಡುವೆ ಹೊಸ ಗಂಗಾ ಸೇತುವೆ ನಿರ್ಮಾಣ ಸೇರಿವೆ. ಈ ಯೋಜನೆಗಳು ರಾಜ್ಯದಲ್ಲಿ ಸುಗಮವಾದ ಅತಿ ವೇಗದ ರಸ್ತೆ ಮಾರ್ಗಗಳನ್ನು ಸೃಷ್ಟಿಸುವುದರ ಜೊತೆಗೆ ವ್ಯಾಪಾರ ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತವೆ. ಅವರು ಸುಮಾರು 5,520 ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಹೆದ್ದಾರಿ 22 ರ ಪಾಟ್ನಾ-ಗಯಾ-ಡೋಭಿ ವಿಭಾಗದ ನಾಲ್ಕು ಪಥದ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 27 ರ ಗೋಪಾಲ್ ಗಂಜ್ ಪಟ್ಟಣದಲ್ಲಿ ಎತ್ತರಿಸಿದ ಹೆದ್ದಾರಿ ಮತ್ತು ನೆಲಮಟ್ಟದ ಸುಧಾರಣೆಗಳ ನಾಲ್ಕು ಪಥದ ರಸ್ತೆ ಸೇರಿದಂತೆ ಇತರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ದೇಶಾದ್ಯಂತ ರೈಲು ಮೂಲಸೌಕರ್ಯವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು, ಇತರ ಹಲವು ಮಹತ್ವದ ಯೋಜನೆಗಳೊಂದಿಗೆ, 1330 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸೋನ್ ನಗರ್ - ಮೊಹಮ್ಮದ್ ಗಂಜ್ ನಡುವಿನ ಮೂರನೇ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ
ಈ ಭಾಗದ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯೊಂದಿಗೆ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಅವರು ಸುಮಾರು 2,120 ಕೋಟಿ ರೂಪಾಯಿ ವೆಚ್ಚದ ಕಾನ್ಪುರ ಮೆಟ್ರೋ ರೈಲು ಯೋಜನೆಯ ಚುನ್ನಿಗಂಜ್ ಮೆಟ್ರೋ ನಿಲ್ದಾಣದಿಂದ ಕಾನ್ಪುರ ಸೆಂಟ್ರಲ್ ಮೆಟ್ರೋ ನಿಲ್ದಾಣದವರೆಗಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಮಾರ್ಗವು ನಗರದ ಪ್ರಮುಖ ಸ್ಥಳಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಮೆಟ್ರೋ ಜಾಲದೊಂದಿಗೆ ಜೋಡಿಸುವ ಐದು ಹೊಸ ಅಂಡರ್ ಗ್ರೌಂಡ್ ನಿಲ್ದಾಣಗಳು ಸೇರಿದಂತೆ ಒಟ್ಟು 14 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ, ಅವರು ಜಿ.ಟಿ. ರಸ್ತೆಯ ಅಗಲೀಕರಣ ಮತ್ತು ಬಲಪಡಿಸುವ ಕಾಮಗಾರಿಗಳನ್ನೂ ಉದ್ಘಾಟಿಸಲಿದ್ದಾರೆ.
ಈ ಭಾಗದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಪ್ರಧಾನಮಂತ್ರಿಯವರು ಗೌತಮ್ ಬುದ್ಧ ನಗರದ ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (YEIDA) ವಲಯ 28 ರಲ್ಲಿ ಈ ಪ್ರದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು 220 ಕೆವಿ ಉಪಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದರೊಂದಿಗೆ, ಗ್ರೇಟರ್ ನೋಯ್ಡಾದ ಎಕೋಟೆಕ್-8 ಮತ್ತು ಎಕೋಟೆಕ್-10 ರಲ್ಲಿ ಸುಮಾರು 320 ಕೋಟಿ ರೂಪಾಯಿ ಮೌಲ್ಯದ 132 ಕೆವಿ ಉಪಕೇಂದ್ರಗಳನ್ನು ಸಹ ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿಯವರು ಕಾನ್ಪುರದಲ್ಲಿ ಸುಮಾರು 8,300 ಕೋಟಿ ರೂಪಾಯಿ ವೆಚ್ಚದ 660 ಮೆಗಾವ್ಯಾಟ್ ಸಾಮರ್ಥ್ಯದ ಪಂಕಿ ಉಷ್ಣ ವಿದ್ಯುತ್ ವಿಸ್ತರಣಾ ಯೋಜನೆಯನ್ನು ಉದ್ಘಾಟಿಸಲಿದ್ದಾರೆ, ಇದು ಉತ್ತರ ಪ್ರದೇಶದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಅಲ್ಲದೆ, ಅವರು ಸುಮಾರು 9,330 ಕೋಟಿ ರೂಪಾಯಿ ಮೌಲ್ಯದ ಘಾಟ್ಂಪುರ ಉಷ್ಣ ವಿದ್ಯುತ್ ಯೋಜನೆಯ 660 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳನ್ನು ಉದ್ಘಾಟಿಸಲಿದ್ದಾರೆ, ಇದು ವಿದ್ಯುತ್ ಪೂರೈಕೆಯನ್ನು ಗಮನಾರ್ಹವಾಗಿ ಬಲಪಡಿಸಲಿದೆ.
ಅಲ್ಲದೆ, ಪ್ರಧಾನಮಂತ್ರಿಯವರು ಕಾನ್ಪುರದ ಕಲ್ಯಾಣಪುರ ಪಂಕಿ ಮಂದಿರ ಬಳಿಯ ಪಂಕಿ ಪವರ್ ಹೌಸ್ ರೈಲ್ವೆ ಕ್ರಾಸಿಂಗ್ ಮತ್ತು ಪಂಕಿ ರಸ್ತೆಯಲ್ಲಿರುವ ಪಂಕಿ ಧಾಮ್ ಕ್ರಾಸಿಂಗ್ಗಳ ಮೇಲೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಕಲ್ಲಿದ್ದಲು ಮತ್ತು ತೈಲ ಸಾಗಣೆಯನ್ನು ಸುಗಮಗೊಳಿಸುವ ಮೂಲಕ ಪಂಕಿ ಉಷ್ಣ ವಿದ್ಯುತ್ ವಿಸ್ತರಣಾ ಯೋಜನೆಯ ಸಾಗಾಟ ವ್ಯವಸ್ಥೆಗೆ ಸಹಕಾರಿಯಾಗುವುದಲ್ಲದೆ, ಸ್ಥಳೀಯ ಜನರಿಗೆ ಸಂಚಾರ ದಟ್ಟಣೆಯನ್ನೂ ಕಡಿಮೆ ಮಾಡಲಿದೆ.
ಪ್ರಧಾನಮಂತ್ರಿಯವರು ಕಾನ್ಪುರದ ಬಿಂಗಾವನ್ ನಲ್ಲಿ 290 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ, ದಿನಕ್ಕೆ 40 ದಶಲಕ್ಷ ಲೀಟರ್ (MLD) ಸಾಮರ್ಥ್ಯದ ತೃತೀಯ ಹಂತದ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ಸಂಸ್ಕರಿಸಿದ ಕೊಳಚೆ ನೀರಿನ ಮರುಬಳಕೆಗೆ ಅನುವು ಮಾಡಿಕೊಡುವುದರ ಜೊತೆಗೆ, ಈ ಪ್ರದೇಶದಲ್ಲಿ ಜಲ ಸಂರಕ್ಷಣೆ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸಲಿದೆ.
ಈ ಭಾಗದ ರಸ್ತೆ ಮೂಲಸೌಕರ್ಯಕ್ಕೆ ಒಂದು ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಕಾನ್ಪುರ ನಗರ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಗೌರಿಯಾ ಪಾಲಿ ಮಾರ್ಗವನ್ನು ಅಗಲಗೊಳಿಸುವ ಮತ್ತು ಬಲಪಡಿಸುವ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಕಾನ್ಪುರ ನಗರ ಜಿಲ್ಲೆಯ ರಕ್ಷಣಾ ಕಾರಿಡಾರ್ ಅಡಿಯಲ್ಲಿ ಪ್ರಯಾಗ್ ರಾಜ್ ಹೆದ್ದಾರಿಯ ನರ್ವಾಲ್ ಮೋಡ್ (AH-1) ಅನ್ನು ರಕ್ಷಣಾ ನೊಡ್ (4 ಪಥ) ಗೆ ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸುವ ಮತ್ತು ಬಲಪಡಿಸುವ ಕಾಮಗಾರಿಗಳಿಗೂ ಶಿಲಾನ್ಯಾಸ ಮಾಡಲಿದ್ದಾರೆ. ಈ ಕ್ರಮವು ರಕ್ಷಣಾ ಕಾರಿಡಾರ್ ನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಿ, ಸರಕು ಸಾಗಣೆ ಮತ್ತು ಸುಲಭ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ.
ಇದಲ್ಲದೆ, ಪ್ರಧಾನಮಂತ್ರಿಯವರು ಪಿಎಂ ಆಯುಷ್ಮಾನ್ ವಯ ವಂದನಾ ಯೋಜನೆ, ರಾಷ್ಟ್ರೀಯ ಜೀವನೋಪಾಯ ಮಿಷನ್ ಮತ್ತು ಪಿಎಂ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಚೆಕ್ ಗಳನ್ನು ವಿತರಿಸಲಿದ್ದಾರೆ.
*****
(Release ID: 2131991)
Read this release in:
Malayalam
,
Assamese
,
Bengali
,
English
,
Urdu
,
Marathi
,
Hindi
,
Nepali
,
Bengali-TR
,
Punjabi
,
Gujarati
,
Odia
,
Tamil
,
Telugu