ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್‌ ಅವತರಿಣಿಕೆ

Posted On: 23 SEP 2024 3:58AM by PIB Bengaluru

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ನಮಸ್ತೆ ಯು.ಎಸ್.! ಈಗ ನಮ್ಮ "ನಮಸ್ತೆ” ಕೂಡ ಬಹುರಾಷ್ಟ್ರೀಯವಾಗಿ ಮಾರ್ಪಟ್ಟಿದ್ದು, ಸ್ಥಳೀಯತೆಯಿಂದ ಜಾಗತಿಕವಾಗಿ ಪರಿವರ್ತನೆಯಾಗಿದೆ ಹಾಗೂ ಇದಕ್ಕೆಲ್ಲ ನೀವೇ ಕಾರಣೀಭೂತರು. ಭಾರತವನ್ನು ತಮ್ಮ ಹೃದಯಕ್ಕೆ ಸಮೀಪವಾಗಿಟ್ಟುಕೊಂಡಿರುವ ಪ್ರತಿಯೊಬ್ಬ ಭಾರತೀಯರೂ ಇದನ್ನು ಸಾಧ್ಯವಾಗಿಸಿದ್ದಾರೆ.

ಸ್ನೇಹಿತರೇ,

ನೀವು ಬಹಳ ದೂರದಿಂದ ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೀರಿ. ಕೆಲವು ಮುಖಗಳು ಪರಿಚಿತವಾಗಿದ್ದರೆ ಇನ್ನು ಕೆಲವು ಹೊಸ ಮುಖಗಳೆನಿಸಿವೆ. ನೀವು ತೋರುವ ಪ್ರೀತಿ ಆದರಗಳೇ ನನಗೆ ದೊಡ್ಡ ಗೌರವ. ನಾನು ಪ್ರಧಾನಿಯಾಗಿರದ, ಸಿಎಂ ಆಗಿರದ, ಕೇವಲ ನಾಯಕನೂ ಆಗಿರದ ದಿನಗಳನ್ನು ನೆನಪಿಸಿಕೊಳ್ಳಬಯಸುತ್ತೇನೆ. ಆಗೆಲ್ಲಾ ನಾನು ಒಬ್ಬ ಶೋಧಕ ಮನೋಭಾವದ ಪ್ರವಾಸಿಗನಾಗಿ ಇಲ್ಲಿಗೆ ಬರುತ್ತಿದ್ದೆ. ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳೊಂದಿಗೆ ಈ ನೆಲವನ್ನು ನೋಡಲು, ಅರ್ಥಮಾಡಿಕೊಳ್ಳುವ ಉತ್ಸಾಹದೊಂದಿಗೆ ಭೇಟಿ ಕೊಡುತ್ತಿದ್ದೆ. ನಾನು ಯಾವುದೇ ಅಧಿಕೃತ ಸ್ಥಾನಮಾನ ವಹಿಸಿಕೊಳ್ಳುವ ಮೊದಲೇ ಅಮೆರಿಕದ 29 ರಾಷ್ಟ್ರಗಳಿಗೆ ಭೇಟಿ ನೀಡಿದ್ದೆ. ನಾನು ಮುಖ್ಯಮಂತ್ರಿಯಾದ ನಂತರವೂ ತಂತ್ರಜ್ಞಾನದ ಮೂಲಕ ನಾನು ನಿಮ್ಮೊಂದಿಗೆ ನಿರಂತರವಾಗಿ ಸಂಪರ್ಕ ಮುಂದುವರಿಸಿದ್ದೆ. ಪ್ರಧಾನ ಮಂತ್ರಿಯಾದ ಬಳಿಕವೂ ನಾನು ನಿಮ್ಮಿಂದ ಅಪಾರ ಪ್ರೀತಿ- ಗೌರವ ಆದರಗಳನ್ನು ಪಡೆದಿದ್ದೇನೆ. 2014ರಲ್ಲಿ, ಅದು ಮ್ಯಾಡಿಸನ್ ಸ್ಕ್ವೇರ್ ಆಗಿತ್ತು; 2015ರಲ್ಲಿ ಅದು ಸ್ಯಾಮ್ ಜೋಸ್; 2019ರಲ್ಲಿ ಹೂಸ್ಟನ್; 2023ರಲ್ಲಿ ವಾಷಿಂಗ್ಟನ್; ಮತ್ತು ಪ್ರಸ್ತುತ 2024ರಲ್ಲಿ ನ್ಯೂಯಾರ್ಕ್ ಹಾಗೂ ಪ್ರತಿ ಬಾರಿಯೂ ನೀವು ಹಳೆಯ ದಾಖಲೆಯನ್ನು ಮೀರುತ್ತಿರುವುದು ಕಾಣುತ್ತಿದೆ.

ಸ್ನೇಹಿತರೇ,

ನಾನು ಯಾವಾಗಲೂ ಅಮೆರಿಕದಲ್ಲಿರುವ ಭಾರತೀಯ ಸಂಜಾತರ ಶಕ್ತಿಯನ್ನು ಗುರುತಿಸುತ್ತಲೇ ಬಂದಿದ್ದೇನೆ. ನಾನು ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರದಿದ್ದಾಗಲೂ ನಾನು ಅದನ್ನು ಅರ್ಥಮಾಡಿಕೊಂಡಿದ್ದೆ ಹಾಗೂ ನಾನು ಅದನ್ನು ಇಂದು ಸಹ ಅರ್ಥಮಾಡಿಕೊಂಡಿದ್ದೇನೆ. ನೀವು ಯಾವಾಗಲೂ ಭಾರತದ ಪ್ರಬಲ ಪ್ರಚಾರ ರಾಯಭಾರಿಗಳೇ (ಬ್ರಾಂಡ್ ಅಂಬಾಸಿಡರ್) ಆಗಿದ್ದೀರಿ. ಅದಕ್ಕಾಗಿಯೇ ನಾನು ನಿಮ್ಮನ್ನು ‘ರಾಷ್ಟ್ರದೂತ’ (ರಾಷ್ಟ್ರದ ದೂತರು) ಎಂದು ಕರೆಯುತ್ತೇನೆ. ನೀವು ಅಮೆರಿಕವನ್ನು ಭಾರತಕ್ಕೆ ಮತ್ತು ಭಾರತವನ್ನು ಅಮೆರಿಕಕ್ಕೆ ಜೋಡಿಸಿದ್ದೀರಿ. ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ಬದ್ಧತೆಗೆ ಸಾಟಿಯೇ ಇಲ್ಲ. ನೀವು ಸಪ್ತ ಸಮುದ್ರಗಳನ್ನು ದಾಟಿದ್ದರೂ, ಯಾವ ಸಮುದ್ರವು ನಿಮ್ಮ ಹೃದಯಾಂತರಾಳದಲ್ಲಿ ನೆಲೆಸಿರುವ ಭಾರತದೊಂದಿಗಿನ ಬಾಂದವ್ಯದಿಂದ ನಿಮ್ಮನ್ನು ಬೇರ್ಪಡಿಸುವಷ್ಟು ಆಳವಾಗಿಲ್ಲ. ತಾಯಿ ಭಾರತಿಯು ನಮಗೆ ಕಲಿಸಿದ್ದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಎಲ್ಲಿಗೇ ಹೋದರೂ ಎಲ್ಲರನ್ನು ಕುಟುಂಬದವರಂತೆಯೇ ಕಾಣುತ್ತೇವೆ. ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು, ಅದನ್ನು ಜೀವಿಸುವುದು ಹಾಗೂ ಅದನ್ನು ನಮ್ಮ ಜೀವನದಲ್ಲಿ ಸಂಯೋಜಿಸುವುದು- ಇವು ನಮ್ಮ ಮೌಲ್ಯಗಳಾಗಿದ್ದು, ನಮ್ಮ ಅಸ್ತಿತ್ವದಲ್ಲಿ ಹುದುಗಿಕೊಂಡಿದೆ. ನಾವು ನೂರಾರು ಭಾಷೆ ಮತ್ತು ಉಪಭಾಷೆಗಳನ್ನು ಹೊಂದಿರುವ, ಪ್ರತಿಯೊಂದು ಧರ್ಮ ಹಾಗೂ ಪಂಗಡವೂ ನೆಲೆಯೂರಿರುವ ದೇಶದಿಂದ ಬಂದಿದ್ದೇವೆ. ಆದರೂ, ನಾವು ಒಂದಾಗಿ ಮತ್ತು ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ. ಈ ಸಭಾಂಗಣದಲ್ಲಿ ಕೆಲವರು ತಮಿಳು, ಇತರರು ತೆಲುಗು, ಮಲಯಾಳಂ, ಕನ್ನಡ, ಪಂಜಾಬಿ, ಮರಾಠಿ ಅಥವಾ ಗುಜರಾತಿ ಮಾತನಾಡುತ್ತಾರೆ. ನಮ್ಮ ಭಾಷೆಗಳು ಭಿನ್ನವಾಗಿರಬಹುದು, ಆದರೆ ನಮ್ಮ ಆಶಯ ಸ್ಫೂರ್ತಿ ಒಂದೇ: "ಭಾರತ್ ಮಾತಾ ಕಿ ಜೈ" (ಭಾರತ ತಾಯಿಗೆ ಜೈ), ಎಂಬುದೇ ಭಾರತೀಯತೆಯ ಸ್ಫೂರ್ತಿ. ಪ್ರಪಂಚದೊಂದಿಗೆ ಭಾರತ ಯಶಸ್ವಿಯಾಗಿ ಸಂಪರ್ಕ ಸಾಧಿಸುವಲ್ಲಿ ಇದು ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಮೌಲ್ಯಗಳು ಸಹಜವಾಗಿಯೇ ನಮ್ಮನ್ನು ‘ವಿಶ್ವ ಬಂಧು’ (ಜಾಗತಿಕ ಸ್ನೇಹಿತ) ವನ್ನಾಗಿಸಿವೆ. ನಮ್ಮ ಧರ್ಮಗ್ರಂಥಗಳು ಹೇಳುವಂತೆ, ʼತೇನ ತ್ಯಕ್ತೇನ ಭುಂಜೀಥಾʼ, ಅಂದರೆ ತ್ಯಾಗ ಮಾಡುವವರು ಎಂದಿಗೂ ನಿಜವಾದ ಆನಂದವನ್ನು ಅನುಭವಿಸುವವರು ಎಂದರ್ಥ. ನಾವು ಇತರರಿಗೆ ಒಳಿತನ್ನು ಮತ್ತು ತ್ಯಾಗ ಮನೋಭಾವ ತೋರುವ ಮೂಲಕ ಸಂತೋಷವನ್ನು ಕಂಡುಕೊಳ್ಳುತ್ತೇವೆ. ನಾವು ಜಗತ್ತಿನ ಯಾವ ಮೂಲೆಯಲ್ಲಿ ವಾಸವಿದ್ದರೂ ಈ ಆಶಯವು ಬದಲಾಗದೆ ಉಳಿದಿರುತ್ತದೆ. ನಾವು ನೆಲೆಸಿರುವ ಸಮಾಜಕ್ಕೆ ನಾವು ಗರಿಷ್ಠ ಕೊಡುಗೆ ನೀಡುತ್ತಿದ್ದೇವೆ. ಅಮೆರಿಕದಲ್ಲಿ ವೈದ್ಯರು, ಸಂಶೋಧಕರು, ತಾಂತ್ರಿಕ ವೃತ್ತಿಪರರು, ವಿಜ್ಞಾನಿಗಳು ಅಥವಾ ಇತರ ವೃತ್ತಿಗಳಲ್ಲಿ, ನೀವು ಎತ್ತರಕ್ಕೆ ಬೆಳೆದಿದ್ದೀರಿ ಮತ್ತು ಜಗತ್ತು ಅದಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಇಲ್ಲಿ ಟಿ-20 ಕ್ರಿಕೆಟ್ ವಿಶ್ವಕಪ್ ನಡೆದಿತ್ತು ಮತ್ತು ಯುಎಸ್‌ಎ ತಂಡ ಅದ್ಭುತ ಪ್ರದರ್ಶನ ನೀಡಿತ್ತು ಹಾಗೂ ಆ ತಂಡಕ್ಕೆ ಇಲ್ಲಿ ನೆಲೆಯೂರಿರುವ ಭಾರತೀಯರ ಕೊಡುಗೆಯನ್ನು ಜಗತ್ತು ಕಂಡಿತ್ತು.

ಸ್ನೇಹಿತರೇ,

ಜಗತ್ತಿಗೆ, ಎಐ ಎಂದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಆದರೆ ನನ್ನ ನಂಬಿಕೆ ಪ್ರಕಾರ ಎಐ ಎಂದರೆ ಅಮೆರಿಕ- ಇಂಡಿಯಾ. ಈ ಅಮೆರಿಕ- ಇಂಡಿಯಾ ಸ್ಫೂರ್ತಿಯು ಹೊಸ ಜಗತ್ತಿನ ಎಐ ಶಕ್ತಿಯಾಗಿದ್ದು, ಭಾರತ- ಅಮೆರಿಕದ ಸಂಬಂಧಗಳನ್ನು ಇನ್ನಷ್ಟು ವೃದ್ಧಿಸಲಿದೆ. ಭಾರತೀಯ ಸಂಜಾತರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸ ಬಯಸುತ್ತೇನೆ.

ಸ್ನೇಹಿತರೇ,
ನಾನು ಜಗತ್ತಿನಲ್ಲಿ ಎಲ್ಲಿಗೇ ಹೋದರೂ, ಪ್ರತಿಯೊಬ್ಬ ನಾಯಕರಿಂದಲೂ ಭಾರತೀಯ ಸಂಜಾತರ ಬಗ್ಗೆ ಹೊಗಳಿಕೆಯ ಮಾತುಗಳ ಹೊರತಾಗಿ ಬೇರೆ ಏನನ್ನೂ ಕೇಳುವುದಿಲ್ಲ. ನಿನ್ನೆಯಷ್ಟೇ, ಅಧ್ಯಕ್ಷ ಬಿಡೆನ್ ಅವರು ನನ್ನನ್ನು ಡೆಲವೇರ್‌ನಲ್ಲಿರುವ ಅವರ ನಿವಾಸಕ್ಕೆ ಆಹ್ವಾನಿಸಿದ್ದರು. ಅವರ ಆತ್ಮೀಯತೆ, ಆತಿಥ್ಯ ನಿಜವಾಗಿಯೂ ಹೃದಯ ಸ್ಪರ್ಶಿಯಾಗಿತ್ತು. ಈ ಗೌರವವು 140 ಕೋಟಿ ಭಾರತೀಯರಿಗೆ, ನಿಮ್ಮ ಶ್ರಮಕ್ಕೆ, ಇಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಿಗೆ ಸಲ್ಲುತ್ತದೆ. ನಾನು ಅಧ್ಯಕ್ಷರಾದ ಬಿಡೆನ್ ಮತ್ತು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, 

2024ರ ಪ್ರಸಕ್ತ ವರ್ಷವು ಜಗತ್ತಿಗೆ ಒಂದು ನಿರ್ಣಾಯಕ ವರ್ಷವೆನಿಸಿದೆ. ಒಂದೆಡೆ, ನಾವು ರಾಷ್ಟ್ರಗಳ ನಡುವೆ ಸಂಘರ್ಷಗಳು ಮತ್ತು ಉದ್ವಿಗ್ನ ಸ್ಥಿತಿಯನ್ನು ಕಂಡರೆ, ಮತ್ತೊಂದೆಡೆ, ಕೆಲವು ದೇಶಗಳು ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿವೆ. ಭಾರತ ಹಾಗೂ ಅಮೆರಿಕ ಕೂಡ ಪ್ರಜಾಪ್ರಭುತ್ವದ ಈ ಸಂಭ್ರಮದಲ್ಲಿ ಒಂದುಗೂಡಿವೆ. ಇಲ್ಲಿ ಎಂದರೆ ಅಮೆರಿಕದಲ್ಲಿ ಚುನಾವಣೆಗಳು ಸದ್ಯದಲ್ಲೇ ಎದುರಾಗಲಿದ್ದರೆ, ಭಾರತ ಈಗಾಗಲೇ ತನ್ನ ಚುನಾವಣೆಗಳನ್ನು ಪೂರ್ಣಗೊಳಿಸಿದೆ. ಭಾರತದ ಈ ಚುನಾವಣೆಗಳು ಮನುಷ್ಯನ ಇತಿಹಾಸದಲ್ಲಿಯೇ ಅತ್ಯಂತ ಬೃಹತ್ತಾದ ಪ್ರಕ್ರಿಯೆಯಾಗಿದೆ. ಅಮೆರಿಕದ ಒಟ್ಟು ಜನಸಂಖ್ಯೆಯ ಸರಿಸುಮಾರು ಎರಡು ಪಟ್ಟು ಹೆಚ್ಚು ಮತದಾರರನ್ನು ಭಾರತ ಹೊಂದಿದೆ ಹಾಗೂ ಯುರೋಪ್‌ನ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚು ಮತದಾರರು ಭಾರತದಲ್ಲಿದ್ದಾರೆ ಎಂದರೆ ಅದರ ಅಗಾಧತೆಯನ್ನು ನೀವು ಅಂದಾಜಿಸಬಹುದು; ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಭಾರತದಲ್ಲಿ ಮತ ಹಾಕಿದ್ದಾರೆ. ಭಾರತದ ಪ್ರಜಾಪ್ರಭುತ್ವದ ವ್ಯಾಪಕತೆ, ಅಗಾಧತೆಯು ನಮ್ಮಲ್ಲಿ ಹೆಮ್ಮೆಯ ಭಾವ ಮೂಡಿಸುತ್ತದೆ. ಮೂರು ತಿಂಗಳ ಕಾಲ ನಡೆದ ಮತದಾನ ಪ್ರಕ್ರಿಯೆಯಲ್ಲಿ 15 ದಶಲಕ್ಷ (ಮಿಲಿಯನ್) ಮತಗಟ್ಟೆ ಸಿಬ್ಬಂದಿ, ಒಂದು ಮಿಲಿಯನ್ ಮತಗಟ್ಟೆಗಳು, 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 8,000ಕ್ಕೂ ಹೆಚ್ಚು ಅಭ್ಯರ್ಥಿಗಳು, ವಿವಿಧ ಭಾಷೆಯ ಸಾವಿರಾರು ಪತ್ರಿಕೆಗಳು, ನೂರಾರು ರೇಡಿಯೋ ಕೇಂದ್ರಗಳು, ಟಿವಿ ಸುದ್ದಿ ವಾಹಿನಿಗಳು, ಲಕ್ಷಾಂತರ ಸಾಮಾಜಿಕ ಜಾಲತಾಣ ಖಾತೆಗಳು, ಲಕ್ಷಾಂತರ ಸಾಮಾಜಿಕ ಮಾಧ್ಯಮ ವಾಹಿನಿಗಳು- ಇವೆಲ್ಲವೂ ಭಾರತದ ಪ್ರಜಾಪ್ರಭುತ್ವವನ್ನು ರೋಚಕಗೊಳಿಸುತ್ತವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸುವ ಯುಗವಾಗಿರುವ ಜತೆಗೆ ನಮ್ಮ ಚುನಾವಣಾ ಪ್ರಕ್ರಿಯೆಯು ಈ ಮಟ್ಟದಲ್ಲಿ ಪರಿಶೀಲನೆಗೆ ಒಳಗಾಗುತ್ತದೆ ಎಂಬುದು ಗಮನಾರ್ಹ.

ಹಾಗೆಯೇ ಸ್ನೇಹಿತರೇ,

ಈ ಸುದೀರ್ಘ ಚುನಾವಣಾ ಪ್ರಕ್ರಿಯೆಯು ಈ ಬಾರಿ ಭಾರತದಲ್ಲಿ ಅಭೂತಪೂರ್ವ ಸಂಗತಿಗಳಿಗೆ ಕಾರಣವಾಗಿದೆ. ಏನಾಯಿತು? ಏನಾಯಿತು? ಏನಾಯಿತು? ʼಅಬ್‌ಕಿ ಬಾರ್... -' (ಈ ಬಾರಿ ಮತ್ತೊಮ್ಮೆ-), ʼಅಬ್ ಕಿ ಬಾರ್... -' (ಈ ಬಾರಿ ಮತ್ತೊಮ್ಮೆ-), ʼಅಬ್‌ಕಿ ಬಾರ್... -' (ಈ ಬಾರಿ ಮತ್ತೊಮ್ಮೆ-)!

ಸ್ನೇಹಿತರೇ, 

ನಮ್ಮ ಸರ್ಕಾರ ಮೂರನೇ ಬಾರಿಗೆ ಪುನರಾಯ್ಕೆಯಾಗಿದೆ. ಕಳೆದ 60 ವರ್ಷಗಳ ಇತಿಹಾಸದಲ್ಲಿ ಭಾರತದಲ್ಲಿ ಈ ರೀತಿ ಆಗಿರಲಿಲ್ಲ. ಭಾರತದ ಜನರು ನಮಗೆ ಬಹಳ ದೊಡ್ಡ ಹಾಗೂ ಮಹತ್ವದ ಜನಾದೇಶ ನೀಡಿದ್ದಾರೆ. ಈ ಮೂರನೇ ಅವಧಿಯಲ್ಲಿ, ನಾವು ಇನ್ನೂ ಎತ್ತರದ ಸಾಧನೆಗಳನ್ನು ತಲುಪುವ ಗುರಿಗಳನ್ನು ಹೊಂದಿದ್ದೇವೆ. ನಮ್ಮ ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚು ಶಕ್ತಿ ಮತ್ತು ಮೂರು ಪಟ್ಟು ಹೆಚ್ಚು ವೇಗದಲ್ಲಿ ಮುನ್ನಡೆಯಬೇಕಿದೆ. ನೀವು ಒಂದು ಪದವನ್ನು ನೆನಪಿಸಿಕೊಳ್ಳುತ್ತೀರಿ: ಪುಷ್ಪ್‌ (PUSHP- ಹೂವು). ಹೌದು, ಇದನ್ನು ನೀವು ಅದನ್ನು ʼಕಮಲʼ ಎಂದು ಪರಿಭಾವಿಸುವುದಾದರೆ ನನ್ನ ಅಭ್ಯಂತರವಿಲ್ಲ. PUSHP, ಮತ್ತು ನಾನು ಈ PUSHP ಅನ್ನು ಈ ರೀತಿ ವ್ಯಾಖ್ಯಾನಿಸುತ್ತೇನೆ. ʼಪಿʼ ಎಂದರೆ ಪ್ರಗತಿಪರ ಭಾರತ, ʼಯುʼ ಎಂದರೆ ತಡೆಹಿಡಿಯಲಾಗದ ಭಾರತ, ʼಎಸ್‌ʼ ಎಂದರೆ ಆಧ್ಯಾತ್ಮಿಕ ಭಾರತ, ʼಎಚ್‌ʼ ಎಂದರೆ ಮಾನವೀಯತೆಯೇ ಪ್ರಥಮ ಭಾರತ ಹಾಗೂ ʼಪಿʼ ಎಂದರೆ ಪ್ರಗತಿಪರ ಭಾರತ. ಈ ಐದು ದಳಗಳು ಒಟ್ಟುಗೂಡಿದ ʼಪುಷ್ಪʼವು ʼವಿಕಸಿತ ಭಾರತʼವನ್ನು (ಅಭಿವೃದ್ಧಿ ಹೊಂದಿದ ಭಾರತ) ಅನ್ನು ರೂಪಿಸುತ್ತದೆ.

ಸ್ನೇಹಿತರೇ,

ನಾನು ಸ್ವಾತಂತ್ರ್ಯದ ನಂತರ ಹುಟ್ಟಿದ ಭಾರತದ ಮೊದಲ ಪ್ರಧಾನಿ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಲಕ್ಷಾಂತರ ಭಾರತೀಯರು ಸ್ವರಾಜ್ಯಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಅವರು ತಮ್ಮ ವೈಯಕ್ತಿಕ ಆಸಕ್ತಿಗಳು ಅಥವಾ ಆರಾಮದಾಯಕ ಸ್ತರಗಳ ಬಗ್ಗೆ ಎಂದೂ ಯೋಚಿಸಲಿಲ್ಲ; ಅವರು ಅದನ್ನೆಲ್ಲಾ ಮರೆತು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಕೆಲವರನ್ನು ಗಲ್ಲಿಗೇರಿಸಿದರೆ, ಕೆಲವರು ಗುಂಡಿಗೆ ಬಲಿಯಾದರು, ಕೆಲವರು ಚಿತ್ರಹಿಂಸೆಯ ಸೆರೆವಾಸವನ್ನು ಅನುಭವಿಸಿದರು ಮತ್ತು ಅನೇಕರು ತಮ್ಮ ಇಡೀ ಯೌವನವನ್ನು ಜೈಲಿನಲ್ಲೇ ಕಳೆದರು.

ಸ್ನೇಹಿತರೇ, 

ನಾವು ನಮ್ಮ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸಾಧ್ಯವಿಲ್ಲ, ಆದರೆ ನಾವು ಖಂಡಿತವಾಗಿಯೂ ದೇಶಕ್ಕಾಗಿಯೇ ಬದುಕಬಹುದು. ಸಾಯುವುದು ನಮ್ಮ ಹಣೆಬರಹದಲ್ಲಿ ಇರಲಿಲ್ಲ, ಆದರೆ ಬದುಕುವುದು ನಮ್ಮ ಹಣೆಬರಹ. ಮೊದಲ ದಿನದಿಂದಲೂ ನನ್ನ ಮನಸ್ಸು ಮತ್ತು ಧ್ಯೇಯ ಸ್ಪಷ್ಟವಾಗಿದೆ. ನಾನು 'ಸ್ವರಾಜ್ಯ'ಕ್ಕಾಗಿ (ಸ್ವಾತಂತ್ರ್ಯ) ನನ್ನ ಜೀವನ ನೀಡಲು ಸಾಧ್ಯವಾಗಲಿಲ್ಲ, ಆದರೆ ನಾನು ನನ್ನ ಜೀವನವನ್ನು 'ಸೂರಜ್' (ಉತ್ತಮ ಆಡಳಿತ) ಮತ್ತು 'ಸಮೃದ್ಧ' (ಪ್ರಗತಿ) ಭಾರತಕ್ಕೆ ಸಮರ್ಪಿಸಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಜೀವನದ ಬಹುಪಾಲು ವರ್ಷಗಳನ್ನು ದೇಶಾದ್ಯಂತ ಅಲೆದಾಟದಲ್ಲೇ ಕಳೆದಿದ್ದೇನೆ. ಎಲ್ಲೆಲ್ಲಿ ಆಹಾರ ಸಿಕ್ಕಿತೋ ಅಲ್ಲಲ್ಲೇ ಸೇವಿಸಿದ್ದೇನೆ. ಎಲ್ಲೆಲ್ಲಿ ಮಲಗಲು ಸ್ಥಳಾವಕಾಶ ದೊರೆಯಿತೋ ಅಲ್ಲೇ ರಾತ್ರಿಗಳನ್ನು ಕಳೆದಿದ್ದೇನೆ. ಸಾಗರ ತೀರದಿಂದ ಪರ್ವತಗಳವರೆಗೆ, ಮರುಭೂಮಿಯಿಂದ ಹಿಮದಿಂದ ಆವೃತವಾದ ಶಿಖರಗಳವರೆಗೆ... ಹೀಗೆ ನಾನು ಪ್ರತಿ ಪ್ರದೇಶದ ಜನರನ್ನು ಭೇಟಿಯಾಗಿದ್ದೇನೆ, ಅವರ ಬಗ್ಗೆ ತಿಳಿದುಕೊಂಡಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ. ನನ್ನ ದೇಶದ ಜನ ಜೀವನ, ಅದರ ಸಂಸ್ಕೃತಿ ಮತ್ತು ಅದರ ಸವಾಲುಗಳ ಬಗ್ಗೆ ಪ್ರಾಥಮಿಕ ಮಾಹಿತಿ, ಅನುಭವವನ್ನು ನಾನು ಪಡೆದುಕೊಂಡಿದ್ದೇನೆ. ನನ್ನ ಹಾದಿ ಬೇರೆಯಿದ್ದರೂ ವಿಧಿ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿತು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬುದಾಗಿ ಎಂದೂ ಊಹಿಸಿರಲಿಲ್ಲ, ಆದರೆ ನಾನು ಗುಜರಾತ್‌ನಲ್ಲಿ 13 ವರ್ಷಗಳ ಕಾಲ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದೆ.  13 ವರ್ಷಗಳ ಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನನಗೆ ಜನ ಪ್ರಧಾನ ಮಂತ್ರಿಯಾಗಿ ಬಡ್ತಿ ನೀಡಿದರು. ಆದರೆ ದೇಶಾದ್ಯಂತ ಸುತ್ತಾಟ ನಡೆಸಿ ಕಲಿತ ಪಾಠಗಳು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನನ್ನ ಆಡಳಿತ ಮಾದರಿಯನ್ನು ರೂಪಿಸಿವೆ. ಕಳೆದ 10 ವರ್ಷಗಳಲ್ಲಿ, ಈ ಆಡಳಿತ ಮಾದರಿಯ ಯಶಸ್ಸಿಗೆ ನೀವು ಹಾಗೂ ಜಗತ್ತು ಸಾಕ್ಷಿಯಾಗಿದೆ. ಹಾಗೆಯೇ, ಈಗ ಅತಿ ಹೆಚ್ಚು ವಿಶ್ವಾಸದಿಂದ, ಭಾರತದ ಜನರ ನನಗೆ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ನಾನು ಈ ಮೂರನೇ ಅವಧಿಯನ್ನು ಮೂರು ಪಟ್ಟು ಹೆಚ್ಚು ಜವಾಬ್ದಾರಿಯೊಂದಿಗೆ ನಿಭಾಯಿಸಿ ತಲುಪಿಸಲು ಪ್ರಯತ್ನಿಸುತ್ತೇನೆ.

ಸ್ನೇಹಿತರೇ, 

ಭಾರತವು ಇಂದು ವಿಶ್ವದ ಅತ್ಯಂತ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತವು ಅಗಾಧ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ದಿನದಿಂದ ದಿನಕ್ಕೆ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಪ್ರತಿದಿನ, ಹೊಸ ಸುದ್ದಿ. ಇಂದು ಕೂಡ ನಮಗೆ ಶುಭ ಸುದ್ದಿ ಬಂದಿದೆ: ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಿನ್ನ ಗೆದ್ದಿದೆ. ನಾನು ನಿಮಗೆ ಇನ್ನೊಂದು ಸಂಗತಿಯನ್ನು ಹೇಳಬಯಸಲಿದ್ದು, ಅದಕ್ಕೆ ಇನ್ನೂ ಹೆಚ್ಚಿನ ಹರತಾಡನ ಬೇಕಾಗುತ್ತದೆ. ಸುಮಾರು 100 ವರ್ಷಗಳಲ್ಲಿ ಮೊದಲ ಬಾರಿಗೆ, ಇದು ಸಾಧ್ಯವಾಗಿದೆ! ಇಡೀ ದೇಶ ಮತ್ತು ಪ್ರತಿಯೊಬ್ಬ ಭಾರತೀಯರು ನಮ್ಮ ಚೆಸ್ ಆಟಗಾರರ ಬಗ್ಗೆ ಹೆಮ್ಮೆಪಡುತ್ತಾರೆ. ಭಾರತಕ್ಕೆ ಚಾಲಕ ಶಕ್ತಿಯಿರುವ ಮತ್ತೊಂದು ಎಐ ಇದೆ. ಅದು ಏನು ಗೊತ್ತೇ? ಅದು ʼಎʼ ಎಂದರೆ ಆಕಾಂಕ್ಷೆ ಮತ್ತು ʼಐʼ ಎಂದರೆ ಭಾರತ್‌: ಅಂದರೆ ಮಹತ್ವಾಕಾಂಕ್ಷೆಯ ಭಾರತ. ಇದು ನಮ್ಮ ಹೊಸ ಶಕ್ತಿ. ಲಕ್ಷಾಂತರ ಭಾರತೀಯರ ಆಕಾಂಕ್ಷೆಗಳು ಭಾರತದ ಬೆಳವಣಿಗೆಗೆ ಚಾಲಕ ಶಕ್ತಿಯನ್ನು ನೀಡುತ್ತಿವೆ. ಪ್ರತಿಯೊಂದು ಆಕಾಂಕ್ಷೆಯು ಹೊಸ ಸಾಧನೆಗಳನ್ನು ಹುಟ್ಟುಹಾಕುತ್ತಿದೆ ಮತ್ತು ಪ್ರತಿ ಸಾಧನೆಯು ಹೊಸ ಆಕಾಂಕ್ಷೆಗಳನ್ನು ಉತ್ತೇಜಿಸುತ್ತದೆ. ಕೇವಲ ಒಂದು ದಶಕದಲ್ಲಿ, ಭಾರತವು 10ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಈಗ ಪ್ರತಿಯೊಬ್ಬ ಭಾರತೀಯನು ಭಾರತವು ತ್ವರಿತವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗುವುದನ್ನು ಎದುರು ನೋಡುತ್ತಿದ್ದಾನೆ. ಇಂದು, ಭಾರತದ ಜನಸಂಖ್ಯೆಯಲ್ಲಿ ದೊಡ್ಡ ಸಮೂಹವು ತಮ್ಮ ಮೂಲಭೂತ ಅಗತ್ಯಗಳನ್ನು ಪಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ, ಕೋಟ್ಯಂತರ ಜನರು ಶುದ್ಧ ಅಡುಗೆ ಅನಿಲ, ಕೊಳವೆಸಹಿತ ನಲ್ಲಿ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ ಮತ್ತು ಶೌಚಾಲಯ ಸೌಲಭ್ಯಗಳನ್ನು ಪಡೆದಿದ್ದಾರೆ. ಹೀಗೆ ಸೌಲಭ್ಯ ಪಡೆದ ಕೋಟ್ಯಂತರ ಜನರು ಈಗ ಉತ್ತಮ ಗುಣಮಟ್ಟದ ಜೀವನಕ್ಕಾಗಿ ಹಾತೊರೆಯುತ್ತಿದ್ದಾರೆ.

ಸ್ನೇಹಿತರೇ,

ಈಗ, ಭಾರತದ ಜನರಿಗೆ ಕೇವಲ ರಸ್ತೆಗಳು ಬೇಕಾಗಿಲ್ಲ; ಅವರು ಭವ್ಯವಾದ ಎಕ್ಸ್‌ಪ್ರೆಸ್‌ ವೇಗಳನ್ನು ಬಯಸುತ್ತಾರೆ. ಈಗ, ಭಾರತದ ಜನರು ಕೇವಲ ರೈಲು ಸಂಪರ್ಕವನ್ನಷ್ಟೇ ಬಯಸುವುದಿಲ್ಲ; ಅವರಿಗೆ ಅತಿ ವೇಗದ ರೈಲುಗಳು ಬೇಕಾಗಿವೆ. ಭಾರತದ ಪ್ರತಿಯೊಂದು ನಗರವು ಮೆಟ್ರೋ ರೈಲು ಸೇವೆ ಹೊಂದಲು ಬಯಸುತ್ತದೆ ಮತ್ತು ಪ್ರತಿ ನಗರವು ತನ್ನದೇ ಆದ ವಿಮಾನ ನಿಲ್ದಾಣವನ್ನು ಬಯಸುತ್ತದೆ. ಯಾವುದೇ ಹಳ್ಳಿ ಅಥವಾ ನಗರದ ಪ್ರತಿಯೊಬ್ಬ ನಾಗರಿಕರು ಇಂದು ವಿಶ್ವದರ್ಜೆಯ ಸೌಲಭ್ಯಗಳನ್ನು ಬಯಸುತ್ತಾರೆ ಮತ್ತು ಅವರ ಆಕಾಂಕ್ಷೆಗಳ ಫಲಿತಾಂಶಗಳನ್ನು ನಾವು ಈಗ ಕಾಣುತ್ತಿದ್ದೇವೆ. 2014ರಲ್ಲಿ, ಭಾರತದ ಕೇವಲ 5 ನಗರಗಳು ಮೆಟ್ರೋ ರೈಲು ಸೇವೆಗಳನ್ನು ಹೊಂದಿದ್ದವು; ಇಂದು, 23 ನಗರಗಳು ಮಹಾನಗರಗಳನ್ನು ಹೊಂದಿವೆ. ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಹೊಂದಿರುವ ರಾಷ್ಟ್ರವಾಗಿದ್ದು, ಇದು ನಿತ್ಯವೂ ವಿಸ್ತರಿಸುತ್ತಾ ಸಾಗಿದೆ.

ಸ್ನೇಹಿತರೇ,

2014ರಲ್ಲಿ, ಭಾರತದ ಕೇವಲ 70 ನಗರಗಳಷ್ಟೇ ವಿಮಾನ ನಿಲ್ದಾಣಗಳನ್ನು ಹೊಂದಿದ್ದವು; ಇಂದು, 140ಕ್ಕೂ ಹೆಚ್ಚು ನಗರಗಳು ವಿಮಾನ ನಿಲ್ದಾಣಗಳನ್ನು ಹೊಂದಿವೆ. 2014ರಲ್ಲಿ, 100ಕ್ಕಿಂತ ಕಡಿಮೆ ಗ್ರಾಮ ಪಂಚಾಯಿತಿಗಳು ಬ್ರಾಡ್‌ ಬ್ಯಾಂಡ್‌ ಸಂಪರ್ಕ ಜಾಲವನ್ನು ಹೊಂದಿದ್ದವು; ಇಂದು, 2,00,000ಕ್ಕೂ ಹೆಚ್ಚು ಪಂಚಾಯಿತಿಗಳು ಈ ಸೌಲಭ್ಯವನ್ನು ಹೊಂದಿವೆ. 2014ರಲ್ಲಿ, ಭಾರತವು ಸುಮಾರು 140 ದಶಲಕ್ಷ ಎಲ್‌ಪಿಜಿ ಗ್ರಾಹಕರನ್ನಷ್ಟೇ ಹೊಂದಿತ್ತು; ಇಂದು, ಆ ಪ್ರಮಾಣ 310 ದಶಲಕ್ಷಕ್ಕೆ ಏರಿದೆ. ಹಿಂದೆ ವರ್ಷಾನುಗಟ್ಟಲೆ ಅವಧಿಯಲ್ಲಿ ಸಾಧಿಸುತ್ತಿದ್ದುದನ್ನು ಈಗ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಭಾರತದ ಜನರಲ್ಲಿ ಈಗ ಹೊಸ ವಿಶ್ವಾಸ ಮೂಡಿದ್ದು, ಅವರ ಗುರಿಗಳನ್ನು ತಲುಪುವ ಸಂಕಲ್ಪ ಕಾಣುತ್ತಿದೆ. ಭಾರತದಲ್ಲಿ ಅಭಿವೃದ್ಧಿ ಎಂಬುದು ಜನಾಂದೋಲನವಾಗುತ್ತಿದೆ ಮತ್ತು ಪ್ರತಿಯೊಬ್ಬ ಭಾರತೀಯರೂ ಈ ಅಭಿವೃದ್ಧಿಯ ಅಭಿಯಾನದಲ್ಲಿ ಸಮಾನ ಪಾಲುದಾರನಾಗುತ್ತಿದ್ದಾರೆ. ಅವರು ಭಾರತದ ಯಶಸ್ಸು ಮತ್ತು ಅದರ ಸಾಧನೆಗಳಲ್ಲಿ ವಿಶ್ವಾಸವಿರಿಸಿದ್ದಾರೆ.

ಸ್ನೇಹಿತರೇ,

ಇಂದು ಭಾರತವು ಅವಕಾಶಗಳ ನಾಡಾಗಿದೆ. ಭಾರತ ಇನ್ನು ಮುಂದೆ ಅವಕಾಶಗಳಿಗಾಗಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ, ಬದಲಿಗೆ ಭಾರತವೇ ಅವಕಾಶಗಳನ್ನು ಸೃಷ್ಟಿಸುತ್ತದೆ. ಕಳೆದ 10 ವರ್ಷಗಳಲ್ಲಿ, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳಿಗಾಗಿ ಹೊಸ ಚಿಮ್ಮು ಹಲಗೆಯನ್ನು (ಲಾಂಚಿಂಗ್‌ಪ್ಯಾಡ್‌) ಸಿದ್ಧಪಡಿಸಿದೆ. ಈ ಬಗ್ಗೆ ಹೇಳಬೇಕಾದರೆ- ಕೇವಲ ಕಳೆದ ಒಂದು ದಶಕದಲ್ಲಿ ಮತ್ತು ಇದು ನಿಮಗೆ ಹೆಮ್ಮೆ ಎನಿಸುವ ವಿಚಾರವೇನೆಂದರೆ ಸುಮಾರು 25 ಕೋಟಿ ಜನರು ಬಡತನದ ಸ್ಥಿತಿಯಿಂದ ಹೊರಗೆ ಬಂದಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ನಾವು ಹಳೆಯ ಮನಸ್ಥಿತಿ ಮತ್ತು ವಿಧಾನವನ್ನು ಬದಲಾಯಿಸಿದ್ದರಿಂದ ಇದು ಸಾಧ್ಯವಾಗಿದೆ. ನಾವು ಬಡವರ ಸಬಲೀಕರಣಕ್ಕೆ ಒತ್ತು ನೀಡಿದ್ದೇವೆ. ನಾವು 500 ದಶಲಕ್ಷಕ್ಕೂ ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದ್ದೇವೆ. 550 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ 5,00,000 ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿದ್ದೇವೆ, 40 ದಶಲಕ್ಷ ಕುಟುಂಬಗಳಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಿದ್ದೇವೆ ಹಾಗೂ ಯಾವುದೇ ಆಧಾರ- ಖಾತರಿ ಮುಕ್ತವಾದ ಸಾಲ ಸೌಲಭ್ಯವನ್ನು ನಾವು ಲಕ್ಷಾಂತರ ಜನರಿಗೆ ಸುಲಭವಾಗಿ ಒದಗಿಸಿದ್ದೇವೆ. ಇಂತಹ ಅನೇಕ ಉಪಕ್ರಮಗಳ ಪರಿಣಾಮವಾಗಿ ದೊಡ್ಡ ಜನಸಮೂಹವು ಬಡತನದಿಂದ ಹೊರಬರಲು ನೆರವಾಗಿದೆ ಹಾಗೂ ಬಡತನದಿಂದ ಹೊರಬಂದವರು ಇಂದು ನವ-ಮಧ್ಯಮ ವರ್ಗವನ್ನು ರೂಪಿಸುತ್ತಿದ್ದು, ಇದು ಭಾರತದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುತ್ತದೆ.

ಸ್ನೇಹಿತರೇ,

ನಾವು ಮಹಿಳಾ ಕಲ್ಯಾಣದ ಜೊತೆಗೆ ಮಹಿಳಾ ನೇತೃತ್ವದ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಸರ್ಕಾರದ ವತಿಯಿಂದ ನಿರ್ಮಿಸಲಾದ ಕೋಟ್ಯಂತರ ಮನೆಗಳನ್ನು ಮಹಿಳೆಯರ ಹೆಸರಿಗೆ ನೋಂದಣಿ ಮಾಡಲಾಗಿದೆ. ಕೋಟ್ಯಂತರ ಬ್ಯಾಂಕ್ ಖಾತೆಗಳು ತೆರೆದಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಕಳೆದ ದಶಕದಲ್ಲಿ 10 ಕೋಟಿ ಭಾರತೀಯ ಮಹಿಳೆಯರು ಸೂಕ್ಷ್ಮ ಉದ್ಯಮಶೀಲತಾ ಯೋಜನೆಯಡಿ ಉದ್ಯಮ ಆರಂಭಿಸಿದ್ದಾರೆ. ಹಾಗೆಯೇ, ಮತ್ತೊಂದು ಉದಾಹರಣೆ ನೀಡಬಯಸುತ್ತೇನೆ. ಭಾರತದಲ್ಲಿ ತಂತ್ರಜ್ಞಾನದೊಂದಿಗೆ ಕೃಷಿಯನ್ನು ಸಂಯೋಜಿಸಲು ನಾವು ಮಹತ್ವದ ಪ್ರಯತ್ನಗಳನ್ನು ಕೈಗೊಂಡಿದ್ದು, ಇಂದು ಕೃಷಿ ಚಟುವಟಿಕೆಯಲ್ಲಿ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ನಿಮಗೆ ಡ್ರೋನ್‌ಗಳ ಬಳಕೆ ಹೊಸದಲ್ಲದಿರಬಹುದು. ಆದರೆ ಅಚ್ಚರಿ ಹಾಗೂ ಗಮನಾರ್ಹ ಅಂಶವೇನೆಂದರೆ, ಅವುಗಳ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆಂದು ನಿಮಗೆ ಗೊತ್ತೇ? ಅದು ಗ್ರಾಮೀಣ ಮಹಿಳೆಯರು. ನಾವು ಡ್ರೋನ್ ಪೈಲಟ್‌ಗಳನ್ನು ರೂಪಿಸಲು ಸಾವಿರಾರು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ ಮತ್ತು ಕೃಷಿಯಲ್ಲಿ ಈ ಗಮನಾರ್ಹ ತಂತ್ರಜ್ಞಾನ ಕ್ರಾಂತಿಯನ್ನು ಗ್ರಾಮೀಣ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ.

ಸ್ನೇಹಿತರೇ,

ಒಂದು ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕ್ಷೇತ್ರಗಳು ಈಗ ರಾಷ್ಟ್ರೀಯ ಆದ್ಯತೆಗಳಾಗಿವೆ. ಭಾರತವು ಹಿಂದೆಂದಿಗಿಂತಲೂ ಇಂದು ಹೆಚ್ಚು ಸಂಪರ್ಕ ಹೊಂದಿದೆ. ಭಾರತದ 5ಜಿ ಮಾರುಕಟ್ಟೆಯ ಸದ್ಯದ ಗಾತ್ರದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆ ಬಗ್ಗೆ ನಾನು ನಿಮಗೆ ಹೇಳಿದರೆ ಅಭ್ಯಂತರವಿಲ್ಲವೇ? ಇಂದು, ಭಾರತದ 5ಜಿ ಮಾರುಕಟ್ಟೆಯು ಅಮೆರಿಕದ ಗಾತ್ರಕ್ಕಿಂತ ದೊಡ್ಡದಾಗಿದ್ದು, ಈ ಸಾಧನೆಯನ್ನು ಕೇವಲ ಎರಡು ವರ್ಷಗಳಲ್ಲಿ ಸಾಧಿಸಲಾಗಿದೆ. ಸದ್ಯಕ್ಕೆ ಭಾರತವು "ಮೇಡ್-ಇನ್-ಇಂಡಿಯಾ 6ಜಿ" ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಈ ವಲಯವನ್ನು ಮುನ್ನಡೆಸಲು ನಾವು ಪೂರಕ ನೀತಿಗಳನ್ನು ರೂಪಿಸಿದ್ದರಿಂದ ಇದು ಕಾರ್ಯಸಾಧ್ಯವಾಗಿದೆ. ನಾವು ಮೇಡ್-ಇನ್-ಇಂಡಿಯಾ ತಂತ್ರಜ್ಞಾನ, ಕೈಗೆಟುಕುವ ಡೇಟಾ ಮತ್ತು ಮೊಬೈಲ್ ಫೋನ್ ತಯಾರಿಕೆಯಲ್ಲಿ ಹೂಡಿಕೆ ಮಾಡಿದ್ದೇವೆ. ಇಂದು, ಜಗತ್ತಿನ ಪ್ರತಿಯೊಂದು ಪ್ರಮುಖ ಮೊಬೈಲ್ ಬ್ರ್ಯಾಂಡ್ ʼಮೇಡ್ ಇನ್ ಇಂಡಿಯಾʼ ಆಗಿದೆ. ಭಾರತ ಈಗ ಜಾಗತಿಕವಾಗಿ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ನನ್ನ ಅಧಿಕಾರಾವಧಿಯ ಆರಂಭಕ್ಕೂ ಮೊದಲು, ನಾವು ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾಲವಿತ್ತು; ಆದರೆ ಇಂದು ನಾವು ಅವುಗಳನ್ನು ರಫ್ತು ಮಾಡುತ್ತಿದ್ದೇವೆ.


ಸ್ನೇಹಿತರೇ, ಭಾರತ ಯಾವ ಕ್ಷೇತ್ರದಲ್ಲೂ ಇನ್ನು ಹಿಂದೆ ಬಿದ್ದಿಲ್ಲ. ಈಗ ಭಾರತವು ಹೊಸ ವ್ಯವಸ್ಥೆಗಳನ್ನು ಸೃಷ್ಟಿಸಿ ಮುನ್ನಡೆಸುತ್ತಿದೆ. ಭಾರತವು ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್‌ (ಡಿಪಿಐ) ಎಂಬ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದೆ. ಡಿಪಿಐ ಪರಿಕಲ್ಪನೆಯು ಸಮಾನತೆಯನ್ನು ಉತ್ತೇಜಿಸುವ ಜತೆಗೆ ಭ್ರಷ್ಟಾಚಾರವನ್ನು ತಗ್ಗಿಸುವಲ್ಲಿ ಪ್ರಬಲ ಸಾಧನವೆನಿಸಿದೆ. ಭಾರತದ ಯುಪಿಐ ಈಗ ವಿಶ್ವದ ಗಮನ ಸೆಳೆಯುತ್ತಿದೆ. ನಿಮ್ಮ ಜೇಬಿನಲ್ಲಿ ನೀವು ವಾಲೆಟ್ ಹೊಂದಿರಬಹುದು. ಭಾರತದಲ್ಲಿ ಜನ ಇಂದು ತಮ್ಮ ಫೋನ್‌ಗಳಲ್ಲಿ ಭೌತಿಕ ವ್ಯಾಲೆಟ್‌ಗಳ ಜತೆಗೆ ಇ-ವ್ಯಾಲೆಟ್‌ಗಳನ್ನೂ ಹೊಂದಿದ್ದಾರೆ. ಬಹಳಷ್ಟು ಭಾರತೀಯರು ಭೌತಿಕವಾಗಿ ದಾಖಲೆಗಳನ್ನು ತೆಗೆದುಕೊಂಡು ಹೋಗುವುದನ್ನು ಮುಂದುವರಿಸಿಲ್ಲ.  ಏಕೆಂದರೆ, ಅವರು ಈಗ ಡಿಜಿಲಾಕರ್ ಸೇವೆ ಬಳಸುತ್ತಿದ್ದಾರೆ. ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವಾಗ, ಅವರು ಇಚ್ಛಿಸಿದಷ್ಟು ಡಿಜಿಯಾತ್ರವನ್ನು ಬಳಸುತ್ತಾರೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ಬಳಕೆಗೆ ಚಿಮ್ಮು ಹಲಗೆಯಾಗಿದೆ.

ಸ್ನೇಹಿತರೇ,

ಭಾರತ ಇನ್ನು ನಿಲ್ಲುವ ಪ್ರಶ್ನೆ ಇಲ್ಲ, ಹಾಗೆಯೇ ನಿಧಾನಗತಿಯಲ್ಲಿ ಸಾಗುವ ಮಾತೂ ಇಲ್ಲ. ಸಾಧ್ಯವಾದಷ್ಟು ಜಾಗತಿಕ ಸಾಧನಗಳು ಮೇಡ್-ಇನ್-ಇಂಡಿಯಾ ಚಿಪ್‌ಗಳಲ್ಲಿ ಕಾರ್ಯನಿರ್ವಹಿಸುವ ಭವಿಷ್ಯವನ್ನು ಭಾರತ ಕಾಣುತ್ತಿದೆ. ನಾವು ಸೆಮಿಕಂಡಕ್ಟರ್‌ (ಅರೆವಾಹಕ) ವಲಯವನ್ನು ಭಾರತದ ವೇಗವರ್ಧಿತ ಬೆಳವಣಿಗೆಯ ಅಡಿಪಾಯವನ್ನಾಗಿ ಮಾಡಿದ್ದೇವೆ. ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಭಾರತವು ಸೆಮಿಕಂಡಕ್ಟರ್‌ ಉದ್ಯಮಕ್ಕೆ ಉತ್ತೇಜಕಗಳನ್ನು ಘೋಷಿಸಲಾಗಿತ್ತು. ಕೆಲವೇ ತಿಂಗಳ ನಂತರ, ಮೈಕ್ರಾನ್‌ನ ಪ್ರಥಮ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. ಈವರೆಗೆ, ಭಾರತದಲ್ಲಿ ಅಂತಹ ಐದು ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಮೇಡ್-ಇನ್-ಇಂಡಿಯಾ ಚಿಪ್‌ಗಳನ್ನು ನೀವು ಅಮೆರಿಕದಲ್ಲೂ ಕಾಣುವ ದಿನಗಳು ದೂರವಿಲ್ಲ. ಈ ಸಣ್ಣ ಚಿಪ್ ಅಭಿವೃದ್ಧಿ ಪಥದಲ್ಲಿ ಭಾರತದ ಪಯಣವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲಿದೆ. ಇದು ಅದು ಮೋದಿಯ ಭರವಸೆ.

ಸ್ನೇಹಿತರೇ,

ಇಂದು ಭಾರತದಲ್ಲಿ ಸುಧಾರಣೆಗಳ ಬಗೆಗಿನ ಸಂಕಲ್ಪ ಮತ್ತು ಬದ್ಧತೆಯು ಅಭೂತಪೂರ್ವವೆನಿಸಿದೆ. ನಮ್ಮ ಹಸಿರು ಇಂಧನ ಪರಿವರ್ತಕ ಯೋಜನೆ (ಗ್ರೀನ್ ಎನರ್ಜಿ ಟ್ರಾನ್ಸಿಶನ್ ಪ್ರೋಗ್ರಾಂ) ಇದಕ್ಕೆ ಒಂದು ಪ್ರಮುಖ ಉದಾಹರಣೆ ಎನಿಸಿದೆ. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಭಾರತ ಶೇಕಡಾ 17ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಜಾಗತಿಕ ಇಂಗಾಲದ ಹೊರಸೂಸುವಿಕೆ ಪ್ರಮಾಣಕ್ಕೆ ಹೋಲಿಸಿದರೆ ಭಾರತದ ಕೊಡುಗೆ ಅತಿ ಕಡಿಮೆ ಎಂದರೆ ಕೇವಲ ಶೇಕಡಾ 4ರಷ್ಟಿದೆ. ಭೂಮಂಡಲಕ್ಕೆ ಹಾನಿ ಮಾಡುವಲ್ಲಿನ ಪ್ರಕ್ರಿಯೆಗಳಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ವಾಸ್ತವವಾಗಿ, ಪ್ರಪಂಚದ ಉಳಿದ ಭಾಗಗಳಿಗೆ ಹೋಲಿಸಿದರೆ, ಭಾರತದ ಕೊಡುಗೆ, ಪಾತ್ರ ಬಹುತೇಕ ಅತ್ಯಲ್ಪವಾಗಿದೆ. ನಾವು ಕೂಡ ಇಂಗಾಲದ ಹೊರಸೂಸುವಿಕೆಯನ್ನು ಅವಲಂಬಿಸಿಯೇ ನಮ್ಮ ಬೆಳವಣಿಗೆಗೆ ಉತ್ತೇಜನ ನೀಡಬಹುದಿತ್ತು, ಆದರೆ ನಾವು ಹಸಿರು ಪರಿವರ್ತನೆಯ ಮಾರ್ಗವನ್ನು ಆರಿಸಿಕೊಂಡಿದ್ದೇವೆ, ಏಕೆಂದರೆ ಇದು ಪ್ರಕೃತಿಯ ಬಗ್ಗೆ ನಮ್ಮ ಆಳವಾದ ಗೌರವ ಪಾಲನೆಯಿಂದ ಸಾಧ್ಯವಾಗಿದೆ. ಪರಿಣಾಮವಾಗಿ, ನಾವು ಸೌರ, ಪವನ, ಜಲ, ಹಸಿರು ಜಲಜನಕ ಮತ್ತು ಪರಮಾಣು ಶಕ್ತಿ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ಪ್ಯಾರಿಸ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನಿಗದಿಪಡಿಸಿದ ಹವಾಮಾನ ಗುರಿಗಳನ್ನು ಸಾಧಿಸಿದ ಮೊದಲ ದೇಶವೆಂದರೆ ಅದು ಭಾರತ. 2014ರಿಂದ, ನಮ್ಮ ಸೌರಶಕ್ತಿ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವು 30 ಪಟ್ಟು ಹೆಚ್ಚಾಗಿದೆ. ದೇಶದ ಪ್ರತಿಯೊಂದು ಮನೆಯನ್ನು ಸೌರಶಕ್ತಿ ಚಾಲಿತ ಮನೆಯನ್ನಾಗಿ ರೂಪಿಸುವ ಕಾರ್ಯಕ್ಕೆ ನಾವು ಒತ್ತು ನೀಡಿದ್ದೇವೆ. ಈ ಗುರಿ ಸಾಧನೆಗಾಗಿ ನಾವು ವ್ಯಾಪಕವಾದ ಸೌರ ಮೇಲ್ಛಾವಣಿ ಮಿಷನ್ ಪ್ರಾರಂಭಿಸಿದ್ದೇವೆ. ಇಂದು ನಮ್ಮ ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು ಸೌರಶಕ್ತಿ ಅವಲಂಬಿತವಾಗಿ ಪರಿವರ್ತನೆಯಾಗುತ್ತಿವೆ. ಮನೆಗಳಿಂದ ಬೀದಿಗಳಿಗೆ, ಭಾರತದ ಇಂಧನ ದಕ್ಷತೆಯ ಬೆಳಕಿನ ಕಡೆಗೆ ಪ್ರಯಾಣವನ್ನು ಆರಂಭಿಸಿದೆ. ಈ ಪ್ರಯತ್ನಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೇ,

21ನೇ ಶತಮಾನದ ಭಾರತವು ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಮುನ್ನಡೆಯುತ್ತಿದೆ. ನಳಂದ ವಿಶ್ವವಿದ್ಯಾಲಯದ ಹೆಸರು ನಿಮಗೆಲ್ಲ ಚಿರಪರಿಚಿತ. ಬಹಳ ಹಿಂದೆಯೇ, ಭಾರತದ ಪ್ರಾಚೀನ ನಳಂದ ವಿಶ್ವವಿದ್ಯಾಲಯವು ಆಧುನಿಕ ರೂಪದಲ್ಲಿ ಪುನರುಜ್ಜೀವನಗೊಂಡಿತ್ತು. ಇಂದು ವಿಶ್ವವಿದ್ಯಾಲಯ ಮಾತ್ರವಲ್ಲದೆ, ನಳಂದದ ಆತ್ಮವೂ ಮರುಹುಟ್ಟು ಪಡೆಯುತ್ತಿದೆ. ನಾವು ಆಧುನಿಕ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತಿದ್ದು, ಅದು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಭಾರತಕ್ಕೆ ಬರಲು ಮತ್ತು ಅಧ್ಯಯನ ಮಾಡಲು ಸೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ಗಮನಾರ್ಹ ಸಂಗತಿಯೊಂದು ನಡೆದಿದೆ. ಈ ಅವಧಿಯಲ್ಲಿ, ಭಾರತದಲ್ಲಿ ಪ್ರತಿ ವಾರ ಒಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಪ್ರತಿದಿನ ಎರಡು ಹೊಸ ಕಾಲೇಜುಗಳನ್ನು ತೆರೆಯಲಾಗಿದೆ ಮತ್ತು ನಿತ್ಯ ಒಂದು ಹೊಸ ಐಟಿಐ ತೆರೆಯಲಾಗಿದೆ. ಒಂದು ದಶಕದಲ್ಲಿ, ಐಐಐಟಿಗಳ ಸಂಖ್ಯೆಯು 9ರಿಂದ 25ಕ್ಕೆ, ಐಐಎಂಗಳು 13ರಿಂದ 21ಕ್ಕೆ ಮತ್ತು ಎಐಐಎಂಎಸ್‌ ಸಂಖ್ಯೆ 22ಕ್ಕೆ ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯು ಸರಿಸುಮಾರು ದ್ವಿಗುಣಗೊಂಡಿದೆ. ಇಂದು ವಿಶ್ವದ ಅಗ್ರಮಾನ್ಯ ವಿಶ್ವವಿದ್ಯಾಲಯಗಳೂ ಭಾರತಕ್ಕೆ ಬರುತ್ತಿವೆ. ಭಾರತ ಈಗ ಪ್ರಖ್ಯಾತಿಯನ್ನೂ ಗಳಿಸುತ್ತಿದೆ. ಭಾರತೀಯ ವಿನ್ಯಾಸಕರ ಶಕ್ತಿಯನ್ನು ಜಗತ್ತು ಬಹಳ ಹಿಂದೆಯೇ ನೋಡಿದೆ; ಈಗ ಅದು 'ಡಿಸೈನ್ ಇನ್ ಇಂಡಿಯಾ'ದ ತೇಜಸ್ಸಿಗೆ ಸಾಕ್ಷಿಯಾಗಲಿದೆ.

ಸ್ನೇಹಿತರೇ,

ಇಂದು, ಭಾರತ್ನ ಪಾಲುದಾರಿಕೆಗಳು ಜಾಗತಿಕವಾಗಿ ವಿಸ್ತರಣೆಯಾಗುತ್ತಿವೆ. ಹಿಂದೆ, ಭಾರತವು ಸಮಾನ ಅಂತರದ ನೀತಿಯನ್ನು ಅನುಸರಿಸಿತ್ತು. ಆದರೆ ಈಗ ಅದು ಸಮಾನ ಸಾಮೀಪ್ಯದ ನೀತಿಯನ್ನು ಅಳವಡಿಸಿಕೊಂಡಿದೆ. ನಾವು ಜಾಗತಿಕ ದಕ್ಷಿಣಕ್ಕೆ ಬಲವಾದ ಧ್ವನಿಯಾಗುತ್ತಿದ್ದೇವೆ. ಭಾರತದ ಉಪಕ್ರಮದಿಂದಾಗಿ, ಜಿ20 ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವವನ್ನು ನೀಡಲಾಯಿತು ಎಂಬುದನ್ನು ನೀವು ಗಮನಿಸಿರಬಹುದು. ಇಂದು ಜಾಗತಿಕ ವೇದಿಕೆಯಲ್ಲಿ ಭಾರತ ಮಾತನಾಡುವಾಗ ಜಗತ್ತು ಕೇಳುತ್ತದೆ. ಸ್ವಲ್ಪ ಸಮಯದ ಹಿಂದಷ್ಟೇ, "ಇದು ಯುದ್ಧದ ಯುಗವಲ್ಲ" ಎಂಬುದಾಗಿ ನಾನು ನೀಡಿದ ಹೇಳಿಕೆಯ ಮಹತ್ವ ಜಗತ್ತಿನಾದ್ಯಂತ ರಾಷ್ಟ್ರಗಳಿಗೆ ಅರಿವಾಯಿತು.

ಸ್ನೇಹಿತರೇ,

ಜಗತ್ತಿನಲ್ಲಿ ಎಲ್ಲಾದರೂ ಬಿಕ್ಕಟ್ಟು ತಲೆದೋರಿದರೆ ಅದಕ್ಕೆ ಭಾರತ ಮೊದಲು ಪ್ರತಿಕ್ರಿಯಿಸುತ್ತದೆ. ಕೋವಿಡ್‌- 19 ಸಾಂಕ್ರಾಮಿಕ ಸೋಂಕು ಹಾವಳಿ ಸಂದರ್ಭದಲ್ಲಿ ನಾವು 150ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ರವಾನಿಸಿದ್ದೇವೆ. ಅದು ಭೂಕಂಪವಾಗಲಿ, ಚಂಡಮಾರುತ ಸಂಭವಿಸಿರಲಿ ಅಥವಾ ಅಂತರ್ಯುದ್ಧವಾಗಿರಲಿ ನೆರವಿನ ಹಸ್ತ ಚಾಚುವಲ್ಲಿ ನಾವು ಮೊದಲಿಗರಾಗಿದ್ದೇವೆ. ಇದು ನಮ್ಮ ಪೂರ್ವಜರು ನೀಡಿದ ಮೌಲ್ಯಗಳು ಮತ್ತು ಬೋಧನೆಗಳ ಪ್ರತಿಬಿಂಬವಾಗಿದೆ.

ಸ್ನೇಹಿತರೇ,

ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ವೇಗವರ್ಧಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ, ಹಾಗೂ ಅದರ ಪ್ರಭಾವವು ಎಲ್ಲಾ ಕ್ಷೇತ್ರಗಳಲ್ಲಿಯೂ ಬೀರುತ್ತಿರುತ್ತದೆ. ಜಾಗತಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದು, ಜಾಗತಿಕ ಶಾಂತಿ ಪಾಲನೆಯನ್ನು ಉತ್ತೇಜಿಸುವುದು, ಹವಾಮಾನ ಸಂರಕ್ಷಣೆಯ ಉಪಕ್ರಮವನ್ನು ಮುನ್ನಡೆಸುವುದು, ಜಾಗತಿಕ ಕೌಶಲ್ಯಗಳ ಅಂತರವನ್ನು ನಿವಾರಿಸುವುದು, ನಾವೀನ್ಯತೆ ಚಾಲನೆ ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು ಸುಸ್ಥಿರಗೊಳಿಸುವಲ್ಲಿ ಭಾರತದ ಪಾತ್ರವು ನಿರ್ಣಾಯಕವಾಗಿರುತ್ತದೆ.

ಸ್ನೇಹಿತರೇ,

ಭಾರತಕ್ಕೆ ಶಕ್ತಿ ಮತ್ತು ಸಾಮರ್ಥ್ಯವು "ಜ್ಞಾನಾಯದಾನಾಯಚರ ಕ್ಷಣಾಯ" ದಿಂದ ಸಂಕೇತಿಸುತ್ತದೆ. ಅಂದರೆ ಜ್ಞಾನವು ಹಂಚಿಕೆಗಾಗಿ, ಸಂಪತ್ತು ಕಾಳಜಿಗಾಗಿ ಮತ್ತು ಶಕ್ತಿಯು ರಕ್ಷಣೆಗಾಗಿ ಎಂದರ್ಥ. ಹಾಗಾಗಿ, ಭಾರತದ ಆದ್ಯತೆ ತನ್ನ ಪ್ರಾಬಲ್ಯವನ್ನು ಹೇರುವುದಲ್ಲ, ಬದಲಿಗೆ ಅದರ ಪ್ರಭಾವವನ್ನು ವೃದ್ಧಿಸಿಕೊಳ್ಳುವುದಷ್ಟೇ ಆಗಿದೆ. ನಾವು ಉರಿಯುವ ಬೆಂಕಿಯಂತೆ ಅಲ್ಲ; ಬದಲಿಗೆ ನಾವು ಬೆಳಕನ್ನು ಮೂಡಿಸುವ ಸೂರ್ಯನ ಕಿರಣಗಳಂತೆ. ನಾವು ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದಿಲ್ಲ. ಆದರೆ ಅದರ ಸಮೃದ್ಧಿಗೆ ಕೊಡುಗೆ ನೀಡಬಯಸುತ್ತೇವೆ. ಅದು ಯೋಗವನ್ನು ಪ್ರಚಾರಪಡಿಸುವುದಾಗಿರಲಿ, ಸೂಪರ್‌ ಫುಡ್‌ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸುವುದಾಗಿರಲಿ ಅಥವಾ ಮಿಷನ್ ಲೈಫ್ ವಿಷನ್ (ಪರಿಸರಕ್ಕೆ ಪೂರಕ ಜೀವನಶೈಲಿ) ಆಗಿರರಲಿ, ಭಾರತವು ಜಿಡಿಪಿ-ಕೇಂದ್ರಿತ ಬೆಳವಣಿಗೆಯೊಂದಿಗೆ ಮಾನವ-ಕೇಂದ್ರಿತ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ. ಮಿಷನ್ ಲೈಫ್ ಅನ್ನು ಇಲ್ಲಿ ಸಾಧ್ಯವಾದಷ್ಟು ಪ್ರಚಾರಪಡಿಸುವಂತೆ ನಾನು ನಿಮ್ಮೆಲ್ಲರಲ್ಲೂ ಕೋರುತ್ತೇನೆ. ನಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳು ಪರಿಸರದ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮ ಬೀರುತ್ತವೆ.

ನೀವು ಕೇಳಿರಬಹುದು ಮತ್ತು ಬಹುಶಃ ನಿಮ್ಮಲ್ಲಿ ಕೆಲವರು ಈಗಾಗಲೇ ಭಾರತದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸಿರಲೂಬಹುದು. ದೇಶಾದ್ಯಂತ, ಜನರು ತಮ್ಮ ತಾಯಂದಿರ ಗೌರವಾರ್ಥವಾಗಿ ಸಸಿಗಳನ್ನು ನೆಡುತ್ತಿದ್ದಾರೆ (ಏಕ್ ಪೇಡ್‌ ಮಾ ಕೆ ನಾಮ್). ನಿಮ್ಮ ತಾಯಿ ಬದುಕಿದ್ದರೆ ಅವರ ಜೊತೆಗೆ ಒಂದು ಸಸಿಯನ್ನು  ನೆಡಿ. ಅಮ್ಮ ನಿಮ್ಮೊಂದಿಗೆ ಇಲ್ಲಿದ್ದರೆ ಅವಳ ನೆನಪಿಗಾಗಿ ಸಸಿ ನೆಡಿ - ಅವಳ ಚಿತ್ರವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ ಸಸಿ ನೆಡಿ. ಈ ಆಂದೋಲನವು ಭಾರತದ ಪ್ರತಿ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ ಮತ್ತು ಇಲ್ಲಿಯೂ ಅದೇ ರೀತಿಯ ಅಭಿಯಾನವನ್ನು ನಡೆಸುವಂತೆ ಪ್ರೇರೇಪಿಸುತ್ತೇನೆ. ಇದು ನಮಗೆ ಜೀವ ನೀಡಿದ ತಾಯಂದಿರನ್ನು ಮಾತ್ರವಲ್ಲದೆ, ನಮ್ಮ ಭೂಮಿ ತಾಯಿಯನ್ನೂ ಗೌರವಿಸುತ್ತದೆ.

ಸ್ನೇಹಿತರೇ,

ಭಾರತ ಇಂದು ದೊಡ್ಡ ಕನಸುಗಳನ್ನು ಕಾಣುತ್ತಿದೆ ಮತ್ತು ಆ ಕನಸುಗಳನ್ನು ಸಂಕಲ್ಪದೊಂದಿಗೆ ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ ಕೆಲವೇ ದಿನಗಳ ಹಿಂದಷ್ಟೇ ಮುಕ್ತಾಯಗೊಂಡಿತು ಮತ್ತು ಮುಂದಿನ ಆತಿಥೇಯ ರಾಷ್ಟ್ರ ಅಮೆರಿಕ ಆಗಿರುತ್ತದೆ. ಶೀಘ್ರದಲ್ಲೇ, ಭಾರತದಲ್ಲಿ ನಡೆಯುವ ಒಲಿಂಪಿಕ್ಸ್‌ ಗೆ ನೀವು ಸಹ ಸಾಕ್ಷಿಯಾಗಲಿದ್ದೀರಿ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕ್ರೀಡೆ, ವ್ಯಾಪಾರ ಅಥವಾ ಮನರಂಜನೆಯಲ್ಲಿ ಭಾರತವು ಜಾಗತಿಕ ಆಕರ್ಷಣೆಯ ಕೇಂದ್ರವಾಗಿದೆ. ಇಂದು, ಐಪಿಎಲ್‌ನಂತಹ ಭಾರತೀಯ ಲೀಗ್‌ಗಳು ವಿಶ್ವದ ಅಗ್ರ ಲೀಗ್‌ಗಳಲ್ಲಿ ಸ್ಥಾನ ಪಡೆದಿವೆ ಮತ್ತು ಭಾರತೀಯ ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಬೆಳವಣಿಗೆಯಾಗುತ್ತಿದೆ. ವಿವಿಧ ದೇಶಗಳಲ್ಲಿ ಭಾರತೀಯ ಹಬ್ಬಗಳನ್ನು ಆಚರಿಸುವ ಆಸಕ್ತಿ ಹೆಚ್ಚಾಗುತ್ತಿದೆ. ಎಲ್ಲೆಡೆ ನಗರಗಳಲ್ಲಿರುವ ಜನರು ಈಗ ನವರಾತ್ರಿಗಾಗಿ ಗಾರ್ಬಾವನ್ನು ಕಲಿಯುತ್ತಿದ್ದಾರೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ- ಇದು ಅವರ ಭಾರತದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

ಸ್ನೇಹಿತರೇ,

ಇಂದು, ಪ್ರತಿಯೊಂದು ದೇಶವೂ ಭಾರತದ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ನಿಮಗೆ ಸಂತೋಷವನ್ನು ತರುವ ಮತ್ತೊಂದು ಮಹತ್ವದ ಸಂಗತಿ ನನ್ನ ಬಳಿ ಇದೆ. ನಿನ್ನೆಯಷ್ಟೇ, ಭಾರತದಿಂದ ಹಿಂದೆ ಕಳವು ಮಾಡಲಾಗಿದ್ದು ಸುಮಾರು 1,500ರಿಂದ 2,000 ವರ್ಷಗಳಷ್ಟು ಹಳೆಯದಾದ 300 ಪುರಾತನ ಶಾಸನಗಳು ಮತ್ತು ಪ್ರತಿಮೆಗಳನ್ನು ಅಮೆರಿಕವು ಭಾರತಕ್ಕೆ ಹಿಂದಿರುಗಿಸಿದೆ. ಆ ಮೂಲಕ ಈವರೆಗೆ ಅಮೆರಿಕವು ಅಂತಹ ಸುಮಾರು 500 ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿದಂತಾಗಿದೆ. ಇದು ಕೇವಲ ಕೆಲ ವಸ್ತುಗಳನ್ನು ಹಿಂದಿರುಗಿಸುವ ಸಣ್ಣ ವಿಚಾರವಲ್ಲ, ಬದಲಿಗೆ ಸಾವಿರಾರು ವರ್ಷಗಳ ನಮ್ಮ ಶ್ರೀಮಂತ ಪರಂಪರೆಗೆ ಸಲ್ಲಿಸುವ ಗೌರವವಾಗಿದೆ. ಇದು ಭಾರತಕ್ಕೆ ಮತ್ತು ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಔದಾರ್ಯಕ್ಕಾಗಿ ನಾನು ಅಮೆರಿಕ ಸರ್ಕಾರಕ್ಕೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯು ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ. ನಮ್ಮ ಈ ಸಹಯೋಗವು ಪ್ರಪಂಚದ ಒಳಿತಿಗಾಗಿ. ನಾವು ಎಲ್ಲಾ ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ ಹಾಗೂ ನಿಮ್ಮ ಅನುಕೂಲಗಳನ್ನು ಹೆಚ್ಚಿಸುವುದನ್ನು ಗಣನೆಯಲ್ಲಿ ಇಟ್ಟುಕೊಂಡಿದ್ದೇವೆ. ಕಳೆದ ವರ್ಷ, ನಮ್ಮ ಸರ್ಕಾರವು ಸಿಯಾಟಲ್‌ನಲ್ಲಿ ಹೊಸ ರಾಯಭಾರ ಕಚೇರಿ ತೆರೆಯುವುದಾಗಿ ನಾನು ಘೋಷಿಸಿದ್ದೆ. ಅದು ಈಗ ಕಾರ್ಯಾರಂಭವಾಗಿದೆ. ಇನ್ನೂ ಎರಡು ಕಾನ್ಸುಲೇಟ್‌ಗಳನ್ನು ತೆರೆಯುವ ಬಗ್ಗೆ ನಾನು ನಿಮ್ಮ ಸಲಹೆಗಳನ್ನು ಕೋರಿದ್ದೆ. ನಿಮ್ಮ ಪ್ರತಿಕ್ರಿಯೆ ಆಧಾರದ ಮೇಲೆ ಭಾರತವು ಬೋಸ್ಟನ್‌ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತಸವಾಗಿದೆ.

ಹಾಗೆಯೇ, ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಅಧ್ಯಯನಕ್ಕಾಗಿ ತಿರುವಳ್ಳುವರ್ ಪೀಠದ ಸ್ಥಾಪನೆಯಾಗಲಿದೆ ಎಂದು ಘೋಷಿಸಲು ನಾನು ಹರ್ಷಿತನಾಗಿದ್ದೇನೆ. ತಮಿಳಿನ ಮಹಾನ್ ಸಂತ ತಿರುವಳ್ಳುವರ್ ಅವರ ತತ್ವಶಾಸ್ತ್ರವನ್ನು ಜಗತ್ತಿಗೆ ಪ್ರಚಾರ ಮಾಡಲು ಇನ್ನಷ್ಟು ನೆರವಾಗಲಿದೆ.

ಸ್ನೇಹಿತರೇ,

ನಿಮ್ಮೊಂದಿಗೆ ಕಳೆದ ಈ ಕಾರ್ಯಕ್ರಮವು ನಿಜವಾಗಿಯೂ ಗಮನಾರ್ಹವಾಗಿದೆ. ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಬೂತವಾಗಿತ್ತು. ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಬಯಸಿದ್ದರೂ ಆದರೆ ಸ್ಥಳಾವಕಾಶದ ಅಭಾವದಿಂದಾಗಿ ಸೀಮಿತ ಸಂಖ್ಯೆಯಲ್ಲಷ್ಟೇ ಸೇರಲು ಸಾಧ್ಯವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇಂದು ನಾನು ಯಾರನ್ನೆಲ್ಲಾ ಭೇಟಿಯಾಗಲು ಸಾಧ್ಯವಾಗಲಿಲ್ಲವೋ ಅವರಲ್ಲಿ ಕ್ಷಮೆ ಯಾಚಿಸಬಯಸುತ್ತೇನೆ. ನಿಮ್ಮೆಲ್ಲರನ್ನೂ ಮುಂದಿನ ಬಾರಿ ಮತ್ತೊಂದು ದಿನ, ಮತ್ತೊಂದು ಸ್ಥಳದಲ್ಲಿ ಭೇಟಿಯಾಗಲು ನಾನು ಕಾತುರನಾಗಿದ್ದೇನೆ. ಆದಾಗ್ಯೂ, ಈ ಉತ್ಸಾಹವು ಒಂದೇ ರೀತಿಯಲ್ಲಿರುತ್ತದೆ ಹಾಗೂ ಆ ಉತ್ಸಾಹವು ತಗ್ಗದೆ ಉಳಿದಿರುತ್ತದೆ ಎಂಬುದೂ ಸಹ ನನಗೆ ಗೊತ್ತಿದೆ. ನೀವೆಲ್ಲರೂ ಆರೋಗ್ಯವಾಗಿರಬೇಕು, ಸಮೃದ್ಧಿ ಕಾಣಬೇಕು ಹಾಗೂ ಭಾರತ-ಯುಎಸ್ ಸ್ನೇಹವನ್ನು ಬಲಪಡಿಸುವುದನ್ನು ಮುಂದುವರಿಸಬೇಕು. ಈ ಶುಭಕಾಮನೆಗಳೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು!

ಎಲ್ಲರೂ ನನ್ನೊಟ್ಟಿಗೆ ಸೇರಿ ಹೇಳಿ: 

ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!

ಅನಂತ ಧನ್ಯವಾದಗಳು,

 

ಹಕ್ಕು ನಿರಾಕರಣೆ: ಇದು ಪ್ರಧಾನಿ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****
 



(Release ID: 2058159) Visitor Counter : 12