ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುವೈತ್ ರಾಜಕುಮಾರನನ್ನು ಭೇಟಿ ಮಾಡಿದ ಭಾರತದ ಪ್ರಧಾನಮಂತ್ರಿಯವರು

ಪ್ರಕಟಣಾ ದಿನಾಂಕ: 22 SEP 2024 11:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ 79ನೇ ಮಹಾಧಿವೇಶನದ ನೇಪಥ್ಯದಲ್ಲಿ ಕುವೈತ್ ರಾಜ್ಯದ ಯುವರಾಜರಾದ ಗೌರವಾನ್ವಿತ ಶೇಖ್ ಸಬಾಹ್ ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರನ್ನು ಭೇಟಿ ಮಾಡಿದರು. ಇದು ಭಾರತದ ಪ್ರಧಾನಮಂತ್ರಿ ಮತ್ತು ಕುವೈತ್ ನ ಯುವರಾಜರ ನಡುವಿನ ಮೊದಲ ಭೇಟಿಯಾಗಿತ್ತು.

ಕುವೈತ್ ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತವು ಅತ್ಯಂತ ಮಹತ್ವ ನೀಡುವುದಾಗಿ ಪ್ರಧಾನಮಂತ್ರಿಯವರು ತಿಳಿಸಿದರು. ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಬಲವಾದ ಐತಿಹಾಸಿಕ ಸಂಬಂಧಗಳು ಮತ್ತು ಜನರ ನಡುವಿನ ಸಂಪರ್ಕವನ್ನು ನೆನಪಿಸಿಕೊಂಡರು. ಇಂಧನ ಹಾಗೂ ಆಹಾರ ಭದ್ರತೆಯ ಅವಶ್ಯಕತೆಗಳನ್ನು ಉಭಯ ದೇಶಗಳು ಪರಸ್ಪರ ಬೆಂಬಲಿಸುತ್ತಿರುವುದನ್ನು ಇಬ್ಬರೂ ನಾಯಕರು ತೃಪ್ತಿಯಿಂದ ಚರ್ಚಿಸಿದರು. ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮ ಹಗೂ ವೈವಿಧ್ಯಗೊಳಿಸಲು ಉಭಯ ನಾಯಕರು ತಮ್ಮ ದೃಢ ಬದ್ಧತೆಯನ್ನು ವ್ಯಕ್ತಪಡಿಸಿದರು. ದೇಶದ ಅತಿ ದೊಡ್ಡ ವಲಸೇ ಗುಂಪಾಗಿರುವ ಕುವೈತ್ ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮ ರಕ್ಷಣೆಯನ್ನು ಖಚಿತಪಡಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಕುವೈತ್ ನ ಯುವರಾಜರಿಗೆ ಧನ್ಯವಾದ ಅರ್ಪಿಸಿದರು.

ಉಭಯ ದೇಶಗಳ ನಾಯಕರ ನಡುವಿನ ಭೇಟಿಯು ಭಾರತ ಮತ್ತು ಕುವೈತ್ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆವೇಗವನ್ನು ನೀಡುವ ನಿರೀಕ್ಷೆಯಿದೆ.

 

*****
 


(ಪ್ರಕಟಣೆ ಐ.ಡಿ.: 2057886) ವಿಸಿಟರ್ ಕೌಂಟರ್ : 60