ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ 'ಪಿಎಂ ವಿಶ್ವಕರ್ಮ' ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 20 SEP 2024 3:17PM by PIB Bengaluru

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

ಅಮರಾವತಿ ಮತ್ತು ವಾರ್ಧಾ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತೇನೆ!

2 ದಿನಗಳ ಹಿಂದೆಯಷ್ಟೇ ವಿಶ್ವಕರ್ಮ ಜಯಂತಿ ಆಚರಿಸಿದ್ದೆವು. ಇಂದು ನಾವು ವಾರ್ಧಾದ ಪವಿತ್ರ ಭೂಮಿಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಆಚರಿಸುತ್ತಿದ್ದೇವೆ. 1932ರ ಇದೇ ದಿನದಂದು ಮಹಾತ್ಮ ಗಾಂಧೀಜಿ ಅವರು ಅಸ್ಪೃಶ್ಯತೆಯ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದ್ದರು ಎಂಬುದು ಇಂದಿನ ವಿಶೇಷ. ಈ ಹಿನ್ನೆಲೆಯಲ್ಲಿ ವಿನೋಬಾ ಭಾವೆ ಅವರ ಪುಣ್ಯಭೂಮಿ, ಮಹಾತ್ಮ ಗಾಂಧಿ ಅವರ ‘ಕರ್ಮಭೂಮಿ’ ಮತ್ತು ವಾರ್ಧಾ ಭೂಮಿಯಲ್ಲಿ ವಿಶ್ವಕರ್ಮ ಯೋಜನೆಯ 1 ವರ್ಷದ ಸಂಭ್ರಮಾಚರಣೆಯು ನಮ್ಮ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡುವ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ.  ವಿಶ್ವಕರ್ಮ ಯೋಜನೆ ಮೂಲಕ ನಾವು ಶ್ರಮದ ಮೂಲಕ ಸಮೃದ್ಧಿ ಮತ್ತು ಕೌಶಲ್ಯದ ಮೂಲಕ ಉತ್ತಮ ಭವಿಷ್ಯದ ಬದ್ಧತೆ ಹೊಂದಿದ್ದೇವೆ. ವಾರ್ಧಾದಲ್ಲಿ ಬಾಪು ಅವರ ಸ್ಫೂರ್ತಿಗಳು ಈ ಬದ್ಧತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೂ ಮತ್ತು ದೇಶಾದ್ಯಂತದ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು ಅಮರಾವತಿಯಲ್ಲಿ ಪಿಎಂ ಮಿತ್ರ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದಿನ ಭಾರತವು ತನ್ನ ಜವಳಿ ಉದ್ಯಮವನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯಲು ಕೆಲಸ ಮಾಡುತ್ತಿದೆ. ಭಾರತದ ಜವಳಿ ಕ್ಷೇತ್ರದಲ್ಲಿ ಸಾವಿರಾರು ವರ್ಷಗಳ ಹೆಮ್ಮೆಯನ್ನು ಪುನಃಸ್ಥಾಪಿಸುವುದು ದೇಶದ ಗುರಿಯಾಗಿದೆ. ಅಮರಾವತಿಯಲ್ಲಿರುವ ಪಿಎಂ ಮಿತ್ರ ಪಾರ್ಕ್ ಈ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಸಾಧನೆಗಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,

ವಿಶ್ವಕರ್ಮ ಯೋಜನೆಯ ಮೊದಲ ವಾರ್ಷಿಕೋತ್ಸವಕ್ಕೆ ನಾವು ಮಹಾರಾಷ್ಟ್ರ ಆಯ್ಕೆ ಮಾಡಿದ್ದೇವೆ. ವಿಶ್ವಕರ್ಮ ಯೋಜನೆಯು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ ಎಂಬ ಕಾರಣದಿಂದ ನಾವು ವಾರ್ಧಾದ ಪುಣ್ಯಭೂಮಿ ಆರಿಸಿದ್ದೇವೆ. ಈ ಉಪಕ್ರಮವು ಭಾರತದ ಪುರಾತನ ಕೌಶಲ್ಯಗಳನ್ನು 'ವಿಕಸಿತ ಭಾರತ' ಕಟ್ಟಲು ಬಳಸಿಕೊಳ್ಳುವ ಮಾರ್ಗಸೂಚಿಯಾಗಿದೆ. ನೆನಪಿರಲಿ, ಇತಿಹಾಸದಲ್ಲಿ ಭಾರತದ ಅಭ್ಯುದಯವನ್ನು ಎತ್ತಿ ತೋರಿಸುವ ಅನೇಕ ಅದ್ಭುತ ಅಧ್ಯಾಯಗಳಿವೆ. ಈ ಸಮೃದ್ಧಿಗೆ ಭದ್ರ ಅಡಿಪಾಯ ಯಾವುದಾಗಿತ್ತು? ಇದು ನಮ್ಮ ಸಾಂಪ್ರದಾಯಿಕ ಕೌಶಲ್ಯವಾಗಿತ್ತು! ಆ ಕಾಲದ ನಮ್ಮ ಕರಕುಶಲತೆ, ಎಂಜಿನಿಯರಿಂಗ್ ಮತ್ತು ವಿಜ್ಞಾನ! ನಾವು ಜಗತ್ತಿನ ಅತಿ ದೊಡ್ಡ ಜವಳಿ ಉತ್ಪಾದಕರು. ನಮ್ಮ ಲೋಹಶಾಸ್ತ್ರವು ಜಾಗತಿಕವಾಗಿ ಅಪ್ರತಿಮವಾಗಿತ್ತು. ಕುಂಬಾರಿಕೆಯಿಂದ ಹಿಡಿದು ಕಟ್ಟಡದ ವಿನ್ಯಾಸದವರೆಗೆ ಯಾವುದೇ ಸರಿಸಾಟಿ ಇರಲಿಲ್ಲ. ಈ ಜ್ಞಾನ ಮತ್ತು ವಿಜ್ಞಾನವನ್ನು ಪ್ರತಿ ಮನೆಗೂ ತಲುಪಿಸಿದವರು ಯಾರು? ಬಡಗಿಗಳು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು, ಮೇಸ್ತ್ರಿಗಳು ಮತ್ತು ಅಂತಹ ಅನೇಕ ವೃತ್ತಿಗಳು ಭಾರತದ ಸಮೃದ್ಧಿಗೆ ಅಡಿಪಾಯವನ್ನು ಹಾಕಿದ್ದವು. ಇದಕ್ಕಾಗಿಯೇ ಬ್ರಿಟಿಷರು ವಸಾಹತುಶಾಹಿ ಕಾಲದಲ್ಲಿ ಈ ಸ್ಥಳೀಯ ಕೌಶಲ್ಯವನ್ನು ತೊಡೆದುಹಾಕಲು ಸಂಚು ರೂಪಿಸಿದರು. ಈ ಕಾರಣಕ್ಕಾಗಿಯೇ ಗಾಂಧೀಜಿ ಅವರು ಈ ವಾರ್ಧಾ ಭೂಮಿಯಿಂದ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಿದರು.

ಆದರೆ ಸ್ನೇಹಿತರೆ,

ಸ್ವಾತಂತ್ರ್ಯಾ ನಂತರ ಈ ಕೌಶಲ್ಯಕ್ಕೆ ಸಿಗಬೇಕಾದ ಗೌರವವನ್ನು ಅಧಿಕಾರ ಪಡೆದ ಸರಕಾರಗಳು ನೀಡದಿರುವುದು ವಿಷಾದನೀಯ. ಈ ಸರ್ಕಾರಗಳು ವಿಶ್ವಕರ್ಮ ಸಮುದಾಯವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿವೆ. ನಮ್ಮ ಕಸುಬುಗಾರಿಕೆ, ಕರಕುಶಲತೆ ಮತ್ತು ಕೌಶಲ್ಯಗಳನ್ನು ಗೌರವಿಸಲು ನಾವು ಮರೆತಿದ್ದರಿಂದ, ಭಾರತವೂ ಪ್ರಗತಿ ಮತ್ತು ಆಧುನಿಕತೆಯ ಓಟದಲ್ಲಿ ಹಿಂದುಳಿದಿದೆ.

ಸ್ನೇಹಿತರೆ,

ಈಗ, ಸ್ವಾತಂತ್ರ್ಯ ಪಡೆದ 70 ವರ್ಷಗಳ ನಂತರ, ನಮ್ಮ ಸರ್ಕಾರವು ಈ ಸಾಂಪ್ರದಾಯಿಕ ಕೌಶಲ್ಯಗಳಿಗೆ ಹೊಸ ಶಕ್ತಿ ತುಂಬಲು ನಿರ್ಧರಿಸಿದೆ. ಈ ನಿರ್ಣಯವನ್ನು ಪೂರೈಸಲು ನಾವು ‘ಪಿಎಂ ವಿಶ್ವಕರ್ಮ’ ಉಪಕ್ರಮ ಪ್ರಾರಂಭಿಸಿದ್ದೇವೆ. ಈ ಯೋಜನೆಯ ಮುಖ್ಯ ತತ್ವವೆಂದರೆ 'ಸಮ್ಮಾನ್'(ಗೌರವ) 'ಸಾಮರ್ಥ್ಯ'(ತಾಕತ್ತು) ಮತ್ತು 'ಸಮೃದ್ಧಿ'(ಸಮೃದ್ಧಿ)! ಅಂದರೆ, ಸಾಂಪ್ರದಾಯಿಕ ಕೌಶಲ್ಯಗಳಿಗೆ ಗೌರವ, ಕುಶಲಕರ್ಮಿಗಳ ಸಬಲೀಕರಣ ಮತ್ತು ನಮ್ಮ ವಿಶ್ವಕರ್ಮ ಸಹೋದರರ ಜೀವನದಲ್ಲಿ ಸಮೃದ್ಧಿ ತರುವುದೇ ನಮ್ಮ ಗುರಿಯಾಗಿದೆ.

ಸ್ನೇಹಿತರೆ,

ವಿಶ್ವಕರ್ಮ ಯೋಜನೆಯ ಮತ್ತೊಂದು ಅನನ್ಯ ವೈಶಿಷ್ಟ್ಯವೆಂದರೆ, ಅದನ್ನು ಕಾರ್ಯಗತಗೊಳಿಸಲು ವಿವಿಧ ಇಲಾಖೆಗಳು ಒಟ್ಟುಗೂಡಿದ ಪ್ರಮಾಣವಾಗಿದೆ, ಇದು ನಿಜಕ್ಕೂ ಅಭೂತಪೂರ್ವವಾಗಿದೆ. ದೇಶಾದ್ಯಂತ 700ಕ್ಕೂ ಹೆಚ್ಚು ಜಿಲ್ಲೆಗಳು, 2,50,000ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಮತ್ತು 5,000 ನಗರ ಸ್ಥಳೀಯ ಸಂಸ್ಥೆಗಳು ಈ ಅಭಿಯಾನಕ್ಕೆ ಚಾಲನೆ ನೀಡುತ್ತಿವೆ. ಕೇವಲ 1 ವರ್ಷದೊಳಗೆ, 18 ವಿವಿಧ ವೃತ್ತಿಗಳ 20 ಲಕ್ಷಕ್ಕೂ ಹೆಚ್ಚು ಜನರು ಈ ಉಪಕ್ರಮಕ್ಕೆ ಸಂಪರ್ಕ ಹೊಂದಿದ್ದಾರೆ. ಕೇವಲ 1 ವರ್ಷದಲ್ಲಿ, 8,00,000ಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಕರಕುಶಲ ಕಸುಬುಗಾರರು ಕೌಶಲ್ಯ ತರಬೇತಿ ಮತ್ತು ಕೌಶಲ್ಯ ನವೀಕರಣಗಳನ್ನು ಪಡೆದಿದ್ದಾರೆ. ಮಹಾರಾಷ್ಟ್ರ ಒಂದರಲ್ಲೇ 60,000 ಮಂದಿಗೆ ತರಬೇತಿ ನೀಡಲಾಗಿದೆ. ಈ ತರಬೇತಿಯು ಆಧುನಿಕ ಯಂತ್ರೋಪಕರಣಗಳು ಮತ್ತು ಡಿಜಿಟಲ್ ಉಪಕರಣಗಳಂತಹ ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ, 650,000ಕ್ಕೂ ಹೆಚ್ಚು ವಿಶ್ವಕರ್ಮ ಸಹೋದರರು ಆಧುನಿಕ ಉಪಕರಣಗಳನ್ನು ಪಡೆದಿದ್ದಾರೆ. ಇದು ಅವರ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಿದೆ, ಅವರ ಉತ್ಪಾದಕತೆ ಹೆಚ್ಚಿಸಿದೆ. ಇದಲ್ಲದೆ, ಪ್ರತಿ ಫಲಾನುಭವಿಗೆ 15,000 ರೂಪಾಯಿ ಮೌಲ್ಯದ ಇ-ವೋಚರ್ ನೀಡಲಾಗುತ್ತಿದೆ. ಅವರು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಮೇಲಾಧಾರವಿಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ವಿಶ್ವಕರ್ಮ ಸಹೋದರ ಸಹೋದರಿಯರಿಗೆ 1 ವರ್ಷದೊಳಗೆ 1,400 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಬೇರೆ ರೀತಿ ಹೇಳುವುದಾದರೆ, ವಿಶ್ವಕರ್ಮ ಯೋಜನೆಯು ಪ್ರತಿಯೊಂದು ವಿಚಾರವನ್ನು ನೋಡಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ವಿಶ್ವಕರ್ಮ ಯೋಜನೆ ಯಶಸ್ವಿ ಮತ್ತು ಜನಪ್ರಿಯವಾಗಿದೆ.

ಈಗ ತಾನೆ, ನಮ್ಮ ಜಿತನ್ ರಾಮ್ ಮಾಂಝಿ ಜೀ ಅವರು ವಸ್ತುಪ್ರದರ್ಶನವನ್ನು ವಿವರಿಸುತ್ತಿದ್ದರು. ನಾನು ಪ್ರದರ್ಶನಕ್ಕೆ ಭೇಟಿ ನೀಡಿದ್ದೇನೆ, ನಮ್ಮ ಜನರು ಸಾಂಪ್ರದಾಯಿಕವಾಗಿ ಮಾಡುವ ನಂಬಲಾಗದ ಕೆಲಸವನ್ನು ನೋಡಿದೆ. ಅವರಿಗೆ ಹೊಸ ಆಧುನಿಕ ತಾಂತ್ರಿಕ ಉಪಕರಣಗಳು, ತರಬೇತಿ ಮತ್ತು ತಮ್ಮ ವ್ಯವಹಾರಗಳನ್ನು ಬೆಳೆಸಲು ಮೂಲಧನ(ದುಡಿಮೆ ಬಂಡವಾಳ) ಒದಗಿಸಿದಾಗ, ಅವರು ಅಸಾಧಾರಣ ಫಲಿತಾಂಶಗಳನ್ನು ಸಾಧಿಸುತ್ತಾರೆ. ನಾನೀಗ ಇದಕ್ಕೆ ಸಾಕ್ಷಿಯಾಗಿದ್ದೇನೆ. ಇಲ್ಲಿರುವ ನಿಮ್ಮೆಲ್ಲರಿಗೂ, ಈ ಪ್ರದರ್ಶನಕ್ಕೆ ಖಂಡಿತವಾಗಿಯೂ ಭೇಟಿ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಆಗಿರುವ ಅಗಾಧವಾದ ಪರಿವರ್ತನೆಯನ್ನು ನೋಡಿ ನೀವು ತುಂಬಾ ಹೆಮ್ಮೆ ಪಡುತ್ತೀರಿ.

ಸ್ನೇಹಿತರೆ,

ನಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಪ್ರಧಾನವಾಗಿ ಅಭ್ಯಾಸ ಮಾಡುತ್ತಿವೆ. ಹಿಂದಿನ ಸರಕಾರಗಳು ವಿಶ್ವಕರ್ಮ ಬಂಧುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಈ ಸಮುದಾಯಗಳಿಗೆ ಮಾಡಿದ ದೊಡ್ಡ ಸೇವೆಯಾಗುತ್ತಿತ್ತು. ಆದಾಗ್ಯೂ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಉದ್ದೇಶಪೂರ್ವಕವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳನ್ನು ಪ್ರಗತಿಯಾಗದಂತೆ ತಡೆದವು. ಕಾಂಗ್ರೆಸ್‌ನ ಈ ದಲಿತ ವಿರೋಧಿ, ಹಿಂದುಳಿದ ವಿರೋಧಿ ಮನಸ್ಥಿತಿಯನ್ನು ನಾವು ಸರ್ಕಾರಿ ವ್ಯವಸ್ಥೆಯಿಂದ ನಿರ್ಮೂಲನೆ ಮಾಡಿದ್ದೇವೆ. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ, ಇಂದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ವಿಶ್ವಕರ್ಮ ಯೋಜನೆಯ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ ಎಂಬುದನ್ನು ತೋರಿಸುತ್ತಿದೆ. ವಿಶ್ವಕರ್ಮ ಸಮುದಾಯ ಮತ್ತು ಈ ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿಸಿಕೊಂಡವರು ಕೇವಲ ಕುಶಲಕರ್ಮಿಗಳಾಗಿ ಉಳಿಯಬಾರದು ಎಂದು ನಾನು ಬಯಸುತ್ತೇನೆ. ಅವರು ಉದ್ಯಮಶೀಲರು ಮತ್ತು ಉದ್ಯಮಿಗಳಾಗಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾವು ವಿಶ್ವಕರ್ಮ ಸಹೋದರ ಸಹೋದರಿಯರ ಕೆಲಸಕ್ಕೆ ಎಂಎಸ್ಎಂಇಗಳ ಸ್ಥಾನಮಾನ ನೀಡಿದ್ದೇವೆ. ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಏಕತಾ ಮಾಲ್‌ನಂತಹ ಉಪಕ್ರಮಗಳ ಮೂಲಕ ಸಾಂಪ್ರದಾಯಿಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಜನರು ತಮ್ಮ ವ್ಯವಹಾರಗಳನ್ನು ವಿಸ್ತರಿಸುವುದು ಮತ್ತು ದೊಡ್ಡ ಕಂಪನಿಗಳ ಪೂರೈಕೆ ಸರಪಳಿಯ ಭಾಗವಾಗುವುದು ನಮ್ಮ ಗುರಿಯಾಗಿದೆ.

ಈ ಕಾರಣಕ್ಕಾಗಿ, ಒಎನ್|ಡಿಸಿ ಮತ್ತು ಜಿಇಎಂನಂತಹ ವೇದಿಕೆಗಳು ಕುಶಲಕರ್ಮಿಗಳು, ಕರಕುಶಲಗಾರರು ಮತ್ತು ಸಣ್ಣ ವ್ಯಾಪಾರ ಮಾಲೀಕರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುತ್ತಿವೆ. ಈ ಆರಂಭವು ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ವರ್ಗವು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸುತ್ತಿದೆ. ಸರ್ಕಾರದ ಸ್ಕಿಲ್ ಇಂಡಿಯಾ ಮಿಷನ್ ಕೂಡ ಈ ಪ್ರಯತ್ನಕ್ಕೆ ಶಕ್ತಿ ತುಂಬುತ್ತಿದೆ. ‘ಕೌಶಲ್ ವಿಕಾಸ್ ಅಭಿಯಾನ’(ಕೌಶಲ್ಯ ಅಭಿವೃದ್ಧಿ ಅಭಿಯಾನ) ಅಡಿ, ದೇಶಾದ್ಯಂತ ಲಕ್ಷಾಂತರ ಯುವಕರು ಇಂದಿನ ಅಗತ್ಯಗಳನ್ನು ಪೂರೈಸುವ ಕೌಶಲ್ಯ ತರಬೇತಿ ಪಡೆದಿದ್ದಾರೆ. ಸ್ಕಿಲ್ ಇಂಡಿಯಾದಂತಹ ಉಪಕ್ರಮಗಳಿಂದ ಭಾರತದ ಕೌಶಲ್ಯಗಳು ಜಾಗತಿಕ ಮನ್ನಣೆ ಗಳಿಸಲು ಪ್ರಾರಂಭಿಸಿವೆ. ನಮ್ಮ ಸರ್ಕಾರ ರಚನೆಯಾದ ನಂತರ, ನಾವು ನಮ್ಮ ಜಿತೇಂದ್ರ ಚೌಧರಿ ನೇತೃತ್ವದಲ್ಲಿ ಪ್ರತ್ಯೇಕ ಕೌಶಲ್ಯ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ್ದೇವೆ. ಅವರ ನಾಯಕತ್ವದಲ್ಲಿ, ವಿಶ್ವ ಕೌಶಲ್ಯಕ್ಕಾಗಿ ಈ ವರ್ಷ ಫ್ರಾನ್ಸ್‌ನಲ್ಲಿ ಪ್ರಮುಖ ಕಾರ್ಯಕ್ರಮ ನಡೆಸಲಾಯಿತು. ನಾವು ಆಗಾಗ್ಗೆ ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತೇವೆ, ಆದರೆ ಫ್ರಾನ್ಸ್ ನಲ್ಲಿ ಕೌಶಲಗಳನ್ನು ಪ್ರದರ್ಶಿಸುವ ಭವ್ಯವಾದ ಕಾರ್ಯಕ್ರಮವಿತ್ತು. ನಮ್ಮ ಅನೇಕ ಸಣ್ಣ ಕುಶಲಕರ್ಮಿಗಳು ಮತ್ತು ಕಾರ್ಮಿಕರು ಆ ಸಮಾರಂಭದಲ್ಲಿ ಭಾಗವಹಿಸಿದರು, ಅಲ್ಲಿ ಭಾರತವು ಹಲವಾರು ಪ್ರಶಸ್ತಿಗಳನ್ನು ಗೆದ್ದಿತು. ಇದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ.

ಸ್ನೇಹಿತರೆ,

ಮಹಾರಾಷ್ಟ್ರವು ಅಪಾರ ಕೈಗಾರಿಕಾ ಸಾಮರ್ಥ್ಯ ಹೊಂದಿದೆ, ಜವಳಿ ಉದ್ಯಮವು ಅವುಗಳಲ್ಲಿ ಒಂದಾಗಿದೆ. ವಿದರ್ಭದ ಈ ಪ್ರದೇಶವು ಉತ್ತಮ ಗುಣಮಟ್ಟದ ಹತ್ತಿ ಉತ್ಪಾದನೆಗೆ ಮಹತ್ವದ ಕೇಂದ್ರವಾಗಿದೆ. ಆದರೆ ದಶಕಗಳ ಕಾಲ, ಕಾಂಗ್ರೆಸ್ ಮತ್ತು ನಂತರದ ಮಹಾ-ಮೈತ್ರಿಕೂಟ ಸರ್ಕಾರ ಏನು ಮಾಡಿತು? ಹತ್ತಿಯನ್ನು ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ಮಹಾರಾಷ್ಟ್ರದ ರೈತರನ್ನು ಸಬಲರನ್ನಾಗಿಸುವ ಬದಲು ಅವರನ್ನು ಸಂಕಷ್ಟಕ್ಕೆ ದೂಡಿತು. ಈ ಪಕ್ಷಗಳು ಕೇವಲ ರೈತರ ಹೆಸರಿನಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿವೆ. 2014ರಲ್ಲಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರ ರಚನೆಯಾದಾಗ ಮಾತ್ರ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸಿತು. ಆಗ, ಅಮರಾವತಿಯ ನಂದಗಾಂವ್ ಖಂಡೇಶ್ವರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಯಿತು. ಆ ಸ್ಥಳದ ಸ್ಥಿತಿ ಹೇಗಿತ್ತು ಎಂಬುದು ನಿಮಗೆ ನೆನಪಿದೆಯೇ? ಯಾವ ಉದ್ಯಮವೂ ಅಲ್ಲಿಗೆ ಬರಲು ಸಿದ್ಧರಿರಲಿಲ್ಲ. ಆದರೆ ಈಗ ಆ ಪ್ರದೇಶವೇ ಮಹಾರಾಷ್ಟ್ರಕ್ಕೆ ಮಹತ್ವದ ಕೈಗಾರಿಕಾ ಕೇಂದ್ರವಾಗುತ್ತಿದೆ.

ಸ್ನೇಹಿತರೆ,

ಪಿಎಂ-ಮಿತ್ರ ಪಾರ್ಕ್‌ನಲ್ಲಿ ನಡೆಯುತ್ತಿರುವ ಕ್ಷಿಪ್ರ ಪ್ರಗತಿಯು ಡಬಲ್ ಇಂಜಿನ್ ಸರ್ಕಾರದ ನಿರ್ಣಯವನ್ನು ತೋರಿಸುತ್ತಿದೆ. ನಾವು ದೇಶದಾದ್ಯಂತ 7 ಪಿಎಂ-ಮಿತ್ರ ಪಾರ್ಕ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ನಮ್ಮ ದೃಷ್ಟಿ "ಫಾರ್ಮ್‌ನಿಂದ ಫೈಬರ್, ಫೈಬರ್‌ನಿಂದ ಫ್ಯಾಬ್ರಿಕ್, ಫ್ಯಾಬ್ರಿಕ್‌ನಿಂದ ಫ್ಯಾಶನ್‌ ಮತ್ತು ಫ್ಯಾಶನ್‌ನಿಂದ ಫಾರಿನ್." ಅಂದರೆ ವಿದರ್ಭದ ಹತ್ತಿಯಿಂದ ಇಲ್ಲಿಯೇ ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದಿಸಲಾಗುವುದು. ಫ್ಯಾಶನ್ ಟ್ರೆಂಡ್‌ಗಳಿಗೆ ಅನುಗುಣವಾಗಿ ಇಲ್ಲಿ ಬಟ್ಟೆಗಳನ್ನು ತಯಾರಿಸಲಾಗುವುದು, ಈ ಫ್ಯಾಶನ್ ಬಟ್ಟೆಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುವುದು. ಇದರಿಂದ ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ನಷ್ಟಕ್ಕೆ ಕಡಿವಾಣ ಬೀಳಲಿದೆ. ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ, ಅವುಗಳಿಗೆ ಮೌಲ್ಯವನ್ನು ಸೇರಿಸಲಾಗುತ್ತದೆ. ಪಿಎಂ-ಮಿತ್ರ ಪಾರ್ಕ್ ಒಂದೇ 8,000ದಿಂದ 10,000 ಕೋಟಿ ರೂಪಾಯಿ ಹೂಡಿಕೆ ಸಾಮರ್ಥ್ಯ ಹೊಂದಿದೆ. ಇದು ವಿದರ್ಭ ಮತ್ತು ಮಹಾರಾಷ್ಟ್ರದ ಯುವಕರಿಗೆ 1 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇತರ ಕೈಗಾರಿಕೆಗಳನ್ನು ಸಹ ಇಲ್ಲಿ ಉತ್ತೇಜಿಸಲಾಗುವುದು, ಹೊಸ ಪೂರೈಕೆ ಸರಪಳಿ ರಚಿಸಲಾಗುವುದು. ದೇಶದ ರಫ್ತು ಹೆಚ್ಚಾಗುವ ಜತೆಗೆ, ಆದಾಯವೂ ಹೆಚ್ಚಾಗುತ್ತದೆ.

ನನ್ನ ಸಹೋದರ ಸಹೋದರಿಯರೆ,

ಈ ಕೈಗಾರಿಕಾ ಪ್ರಗತಿಗೆ ಅಗತ್ಯವಾದ ಆಧುನಿಕ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಮಹಾರಾಷ್ಟ್ರವೂ ಸಿದ್ಧಪಡಿಸುತ್ತಿದೆ. ಹೊಸ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಸಮೃದ್ಧಿ ಮಹಾಮಾರ್ಗ್, ಜಲ ಮತ್ತು ವಾಯು ಸಂಪರ್ಕದ ವಿಸ್ತರಣೆಯ ಮೂಲಕ ಮಹಾರಾಷ್ಟ್ರವು ಹೊಸ ಕೈಗಾರಿಕಾ ಕ್ರಾಂತಿಗೆ ಸಜ್ಜಾಗಿದೆ.

ಸ್ನೇಹಿತರೆ,

ಮಹಾರಾಷ್ಟ್ರದ ಬಹುಆಯಾಮದ ಪ್ರಗತಿಯ ನಿಜವಾದ ನಾಯಕನೆಂದರೆ ಅದು ರೈತರು ಎಂದು ನಾನು ನಂಬುತ್ತೇನೆ! ಮಹಾರಾಷ್ಟ್ರ, ವಿಶೇಷವಾಗಿ ವಿದರ್ಭದ ರೈತರು ಸಮೃದ್ಧವಾಗಿದ್ದಾಗ, ರಾಷ್ಟ್ರವೂ ಅಭಿವೃದ್ಧಿ ಹೊಂದುತ್ತದೆ. ಇದಕ್ಕಾಗಿಯೇ ನಮ್ಮ ಡಬಲ್ ಇಂಜಿನ್ ಸರ್ಕಾರವು ರೈತರ ಏಳಿಗೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿ, ಕೇಂದ್ರ ಸರ್ಕಾರವು ರೈತರಿಗೆ 6,000 ರೂಪಾಯಿ ಕಳುಹಿಸುತ್ತಿರುವುದನ್ನು ನೀವು ನೋಡುತ್ತಿದ್ದೀರ. ಮಹಾರಾಷ್ಟ್ರ ಸರ್ಕಾರವು ಹೆಚ್ಚುವರಿಯಾಗಿ 6,000 ರೂಪಾಯಿ ಕೊಡುತ್ತಿದೆ. ಈಗ ಮಹಾರಾಷ್ಟ್ರ ರೈತರು ವಾರ್ಷಿಕವಾಗಿ 12,000 ರೂಪಾಯಿ ಪಡೆಯುತ್ತಿದ್ದಾರೆ. ಬೆಳೆ ನಷ್ಟದ ವೆಚ್ಚವನ್ನು ರೈತರು ಭರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಾವು ಕೇವಲ 1 ರೂಪಾಯಿಗೆ ಬೆಳೆ ವಿಮೆ ಪರಿಚಯಿಸಿದ್ದೇವೆ. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ರೈತರ ವಿದ್ಯುತ್ ಬಿಲ್‌ ಮನ್ನಾ ಮಾಡಿದೆ. ಈ ಭಾಗದ ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಹಲವಾರು ಪ್ರಯತ್ನಗಳನ್ನು ಪ್ರಾರಂಭಿಸಿದೆ. ಆದಾಗ್ಯೂ, ಮಧ್ಯಂತರ ಸರ್ಕಾರವು ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿತು. ಆದರೆ, ಈ ಸರ್ಕಾರ ಮತ್ತೊಮ್ಮೆ ನೀರಾವರಿ ಯೋಜನೆಗಳಿಗೆ ವೇಗ ನೀಡಿದೆ. ಇತ್ತೀಚೆಗೆ ವೈಗಂಗಾ ಮತ್ತು ನಲ್ಗಂಗಾ ನದಿಗಳನ್ನು ಜೋಡಿಸಲು 85,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು 6 ಜಿಲ್ಲೆಗಳ 10 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ. ಅವೆಂದರೆ ನಾಗಪುರ, ವಾರ್ಧಾ, ಅಮರಾವತಿ, ಯವತ್ಮಾಲ್, ಅಕೋಲಾ ಮತ್ತು ಬುಲ್ಧಾನ.

ಸ್ನೇಹಿತರೆ,

ಮಹಾರಾಷ್ಟ್ರ ರೈತರ ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ. ಈರುಳ್ಳಿ ಮೇಲಿನ ರಫ್ತು ತೆರಿಗೆಯನ್ನು ಶೇ.40ರಿಂದ ಶೇ.20ಕ್ಕೆ ಇಳಿಸಲಾಗಿದೆ. ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಮೇಲೆ ಶೇ.20ರಷ್ಟು ತೆರಿಗೆ ವಿಧಿಸಿದ್ದೇವೆ. ಸಂಸ್ಕರಿಸಿದ ಸೋಯಾಬೀನ್, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ ಮೇಲಿನ ಸೀಮಾಸುಂಕವನ್ನು 12.5%​​ರಿಂದ 32.5%ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನಮ್ಮ ಸೋಯಾಬೀನ್ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಪ್ರಯತ್ನಗಳ ಫಲಿತಾಂಶವನ್ನು ನಾವು ಶೀಘ್ರದಲ್ಲೇ ನೋಡುತ್ತೇವೆ. ಆದರೆ ನಾವು ಜಾಗರೂಕರಾಗಿರಬೇಕು. ರೈತರನ್ನು ಈ ಹೀನಾಯ ಸ್ಥಿತಿಗೆ ತಂದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ನಾವು ಇನ್ನೊಂದು ಅವಕಾಶ ಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್ ಎಂದರೆ ಬರೀ ಸುಳ್ಳು, ವಂಚನೆ ಮತ್ತು ಅಪ್ರಾಮಾಣಿಕತೆ! ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮುಂತಾದ ದೊಡ್ಡ ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾಕ್ಕಾಗಿ ಹೋರಾಟ ಮಾಡುತ್ತಿದ್ದು, ಅವರ ಗೋಳು ಕೇಳುವವರಿಲ್ಲ. ಮಹಾರಾಷ್ಟ್ರದಲ್ಲಿ ಅವರು ಮಾಡುವ ವಂಚನೆಯ ವಿರುದ್ಧ ಜಾಗರೂಕರಾಗಿರಬೇಕು.

ಸ್ನೇಹಿತರೆ,

ಇಂದು ನಾವು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮ ಗಾಂಧಿ ಮತ್ತು ಇತರ ಮಹಾನ್ ನಾಯಕರು ಒಂದು ಕಾಲದಲ್ಲಿ ಒಡನಾಡಿ ಇಟ್ಟುಕೊಂಡಿದ್ದ ಅದೇ ಕಾಂಗ್ರೆಸ್ ಅಲ್ಲ. ಇಂದಿನ ಕಾಂಗ್ರೆಸ್ ತನ್ನ ದೇಶಭಕ್ತಿಯ ಆತ್ಮ ಕಳೆದುಕೊಂಡಿದೆ. ಬದಲಾಗಿ, ಅದನ್ನು ದ್ವೇಷದ ಭೂತದಿಂದ ಜೀವಿಸುತ್ತಿದೆ. ಕಾಂಗ್ರೆಸ್ ನಾಯಕರು ಹೇಗೆ ಮಾತನಾಡುತ್ತಾರೆ, ಅವರ ಹೇಳಿಕೆಗಳು ಮತ್ತು ವಿದೇಶಕ್ಕೆ ಹೋಗಿ ತಮ್ಮ ದೇಶದ ವಿರುದ್ಧ ಹೇಗೆ ಮಾತನಾಡುತ್ತಾರೆ ಎಂಬುದನ್ನು ನೋಡಿ. ಅವರು ಸಮಾಜವನ್ನು ವಿಭಜಿಸುವ, ರಾಷ್ಟ್ರವನ್ನು ವಿಭಜಿಸುವ ಮತ್ತು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಯನ್ನು ಅಗೌರವಿಸುವ ಬಗ್ಗೆ ಮಾತನಾಡುತ್ತಾರೆ. ಈ ಕಾಂಗ್ರೆಸ್ ಅನ್ನು ಈಗ ‘ತುಕ್ಡೆ ತುಕ್ಡೆ ಗ್ಯಾಂಗ್’ (ಪ್ರತ್ಯೇಕತಾವಾದಿ ಗುಂಪುಗಳು) ಮತ್ತು ನಗರ ನಕ್ಸಲರು ನಡೆಸುತ್ತಿದ್ದಾರೆ. ಇಂದು ದೇಶದಲ್ಲೇ ಅತ್ಯಂತ ಭ್ರಷ್ಟ ಮತ್ತು ಅಪ್ರಾಮಾಣಿಕ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ. ಅತ್ಯಂತ ಭ್ರಷ್ಟ ಕುಟುಂಬವೊಂದಿದ್ದರೆ ಅದು ಕಾಂಗ್ರೆಸ್‌ನ ಏಕೈಕ ರಾಯಲ್ ಕುಟುಂಬ.

ಸ್ನೇಹಿತರೆ,

ನಮ್ಮ ನಂಬಿಕೆ ಮತ್ತು ಸಂಸ್ಕೃತಿ ಗೌರವಿಸುವ ಯಾವುದೇ ಪಕ್ಷ ಗಣಪತಿ ಪೂಜೆಯನ್ನು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಇಂದಿನ ಕಾಂಗ್ರೆಸ್‌ಗೆ ಗಣಪತಿ ಪೂಜೆಯ ಬಗ್ಗೆ ದ್ವೇಷವಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಲೋಕಮಾನ್ಯ ತಿಲಕರ ನೇತೃತ್ವದಲ್ಲಿ ಗಣಪತಿ ಹಬ್ಬವು ಭಾರತದ ಏಕತೆಯ ಆಚರಣೆಯಾಯಿತು ಎಂಬುದಕ್ಕೆ ಮಹಾರಾಷ್ಟ್ರದ ನಾಡು ಸಾಕ್ಷಿಯಾಗಿದೆ. ಗಣೇಶ ಉತ್ಸವದಲ್ಲಿ ಎಲ್ಲಾ ಸಮುದಾಯಗಳು ಮತ್ತು ವರ್ಗಗಳ ಜನರು ಒಟ್ಟಾಗಿ ಸೇರಿದ್ದರು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವು ಗಣಪತಿ ಪೂಜೆಯನ್ನು ಧಿಕ್ಕರಿಸುತ್ತದೆ. ನಾನು ಗಣೇಶ ಪೂಜೆಯಲ್ಲಿ ಭಾಗವಹಿಸಿದಾಗ, ಕಾಂಗ್ರೆಸ್ ತುಷ್ಟೀಕರಣದ ರಾಜಕೀಯವನ್ನು ಪ್ರಚೋದಿಸಿತು, ಅವರು ಗಣಪತಿ ಆಚರಣೆ ವಿರೋಧಿಸಲು ಪ್ರಾರಂಭಿಸಿದರು. ಕಾಂಗ್ರೆಸ್ ತನ್ನ ತುಷ್ಟೀಕರಣ ರಾಜಕಾರಣಕ್ಕಾಗಿ ಯಾವುದೇ ಹಂತಕ್ಕೂ ಹೋಗಲು ಸಿದ್ಧವಿದೆ. ಕರ್ನಾಟಕದಲ್ಲಿ ಏನಾಯಿತು ಎಂಬುದನ್ನು ನೀವೆಲ್ಲರೂ ನೋಡುತ್ತಿದ್ದೀರಿ - ಗಣಪತಿ ಬಪ್ಪನನ್ನೂ ಜೈಲಿಗಟ್ಟುವಷ್ಟರ ಮಟ್ಟಿಗೆ ಅಲ್ಲಿನ ಕಾಂಗ್ರೆಸ್ ಸರ್ಕಾರ ಹೋಯಿತು! ಜನರು ಪೂಜಿಸುತ್ತಿದ್ದ ವಿಗ್ರಹವನ್ನು ಪೊಲೀಸ್ ವ್ಯಾನ್‌ಗೆ ಹಾಕಲಾಯಿತು. ಮಹಾರಾಷ್ಟ್ರದ ಗಣಪತಿ ಪೂಜೆ ವೇಳೆ ಕರ್ನಾಟಕದ ಗಣಪತಿಯ ಮೂರ್ತಿ ಪೊಲೀಸ್ ವ್ಯಾನ್‌ನಲ್ಲಿ ಕಂಬಿ ಹಿಂದೆ ಬಿದ್ದಿತ್ತು.

ಸ್ನೇಹಿತರೆ,

ಗಣಪತಿಯ ಮೇಲಿನ ಈ ಅಗೌರವಕ್ಕೆ ಇಡೀ ರಾಷ್ಟ್ರವೇ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷಗಳೂ ಮೌನ ವಹಿಸಿರುವುದು ನನಗೆ ಆಘಾತ ತಂದಿದೆ. ಅವರೂ ಕಾಂಗ್ರೆಸ್‌ನಿಂದ ಪ್ರಭಾವಿತರಾಗಿದ್ದಾರೆ ಎಂದರೆ ಗಣಪತಿಯ ಅವಮಾನವನ್ನು ವಿರೋಧಿಸುವ ಧೈರ್ಯವಿಲ್ಲ.

ಸಹೋದರ ಸಹೋದರಿಯರೆ,

ಕಾಂಗ್ರೆಸ್ ಪಕ್ಷದ ಈ ಪಾಪಗಳಿಗೆ ನಾವು ಒಗ್ಗೂಡಿ ಉತ್ತರ ನೀಡಬೇಕು. ನಾವು ಸಂಪ್ರದಾಯ ಮತ್ತು ಪ್ರಗತಿಯೊಂದಿಗೆ ಒಟ್ಟಾಗಿ ನಿಲ್ಲಬೇಕು. ಗೌರವ ಮತ್ತು ಅಭಿವೃದ್ಧಿಗಾಗಿ ನಾವು ಒಟ್ಟಾಗಿ ನಿಲ್ಲಬೇಕು. ಒಟ್ಟಾಗಿ, ನಾವು ಮಹಾರಾಷ್ಟ್ರದ ಹೆಮ್ಮೆಯನ್ನು ರಕ್ಷಿಸುತ್ತೇವೆ, ಒಟ್ಟಾಗಿ ನಾವು ಮಹಾರಾಷ್ಟ್ರದ ವೈಭವ ಹೆಚ್ಚಿಸುತ್ತೇವೆ. ಮಹಾರಾಷ್ಟ್ರದ ಕನಸುಗಳನ್ನು ಈಡೇರಿಸುತ್ತೇವೆ. ಈ ಉತ್ಸಾಹದಿಂದ, ಈ ಪ್ರಮುಖ ಯೋಜನೆಗಳಿಗೆ ನೀವು ತೋರಿಸಿದ ಅಗಾಧ ಬೆಂಬಲ ನೋಡಿದಾಗ, ಈ ಯೋಜನೆಗಳು ವಿದರ್ಭ ಮತ್ತು ಭಾರತದಾದ್ಯಂತ ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಭಾವನೆ ನನ್ನದಾಗಿದೆ. ನಾನು ಮತ್ತೊಮ್ಮೆ ಎಲ್ಲಾ ವಿಶ್ವಕರ್ಮ ಸಹೋದರ ಸಹೋದರಿಯರಿಗೆ, ವಿದರ್ಭ ಮತ್ತು ಮಹಾರಾಷ್ಟ್ರದ ನನ್ನ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ.

ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ -- ಜೈ!

ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಪೂರ್ಣ ಶಕ್ತಿಯಿಂದ ಹೇಳಿ -

ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ!

 

ತುಂಬು ಧನ್ಯವಾದಗಳು.

 

 

*****

 



(Release ID: 2057625) Visitor Counter : 18