ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಗುಜರಾತ್ ನ ಅಹ್ಮದಾಬಾದ್ ನಲ್ಲಿ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನ ಮಂತ್ರಿ


ಅಹಮದಾಬಾದ್ ಮತ್ತು ಭುಜ್ ನಡುವೆ ನಮೋ ಭಾರತ್ ರಾಪಿಡ್ ರೈಲು ಉದ್ಘಾಟನೆ

ಹಲವು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ ಅಡಿಯಲ್ಲಿ 30,000 ಕ್ಕೂ ಹೆಚ್ಚು ಮನೆಗಳ  ಮಂಜೂರು

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕಗವಾಕ್ಷಿ ಐಟಿ ಸಿಸ್ಟಮ್ (ಸ್ವಿಟ್ಸ್) ಗೆ ಚಾಲನೆ

"ನಮ್ಮ ಮೂರನೇ ಅವಧಿಯ ಮೊದಲ 100 ದಿನಗಳು ಎಲ್ಲರಿಗೂ ಪರಿಣಾಮಕಾರಿ ಅಭಿವೃದ್ಧಿಯನ್ನು ತಂದಿವೆ"

"70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವೃದ್ಧರಿಗೆ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ನೀಡುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ"

"ನಮೋ ಭಾರತ್ ರಾಪಿಡ್ ರೈಲು ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವನ್ನು ಒದಗಿಸಲಿದೆ"

"ಈ 100 ದಿನಗಳಲ್ಲಿ ವಂದೇ ಭಾರತ್ ಜಾಲದ ವಿಸ್ತರಣೆ ಅಭೂತಪೂರ್ವವಾಗಿದೆ"

"ಇದು ಭಾರತಕ್ಕೆ ತಕ್ಕ ಸಮಯ, ಇದು ಭಾರತದ ಸುವರ್ಣ ಯುಗ, ಇದು ಭಾರತದ ಅಮೃತ ಕಾಲ"

"ಭಾರತಕ್ಕೆ ಈಗ ವ್ಯರ್ಥ ಮಾಡಲು ಸಮಯವಿಲ್ಲ, ನಾವು ಭಾರತದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಘನತೆಯ ಜೀವನವನ್ನು ಒದಗಿಸಬೇಕು"

Posted On: 16 SEP 2024 6:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ಅಹ್ಮದಾಬಾದ್ ನಲ್ಲಿ ರೈಲ್ವೆ, ರಸ್ತೆ, ವಿದ್ಯುತ್, ವಸತಿ ಮತ್ತು ಹಣಕಾಸು ಕ್ಷೇತ್ರಗಳ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಶ್ರೀ ಮೋದಿ ಅವರು ಅಹಮದಾಬಾದ್ ಮತ್ತು ಭುಜ್ ನಡುವಿನ ಭಾರತದ ಮೊದಲ ನಮೋ ಭಾರತ್ ಕ್ಷಿಪ್ರ ರೈಲನ್ನು ಉದ್ಘಾಟಿಸಿದರು. ನಾಗ್ಪುರದಿಂದ ಸಿಕಂದರಾಬಾದ್, ಕೊಲ್ಹಾಪುರದಿಂದ ಪುಣೆ, ಆಗ್ರಾ ಕಂಟೋನ್ಮೆಂಟ್ನಿಂದ ಬನಾರಸ್, ದುರ್ಗ ದಿಂದ ವಿಶಾಖಪಟ್ಟಣಂ, ಪುಣೆಯಿಂದ ಹುಬ್ಬಳ್ಳಿ ಮತ್ತು ವಾರಣಾಸಿಯಿಂದ ದಿಲ್ಲಿಗೆ ಮೊದಲ 20 ಬೋಗಿಗಳ ವಂದೇ ಭಾರತ್ ರೈಲಿಗೆ ಅವರು ಹಸಿರು ನಿಶಾನೆ ತೋರಿದರು.  ಇದಲ್ಲದೆ, ಅವರು ಅಂತರರಾಷ್ಟ್ರೀಯ ಹಣಕಾಸು ಸೇವಾ  ಕೇಂದ್ರಗಳ ಪ್ರಾಧಿಕಾರದ ಏಕ ಗವಾಕ್ಷಿ ಐಟಿ ಸಿಸ್ಟಮ್ (ಸ್ವಿಟ್ಸ್) ಗೆ ಚಾಲನೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗಣಪತಿ ಮಹೋತ್ಸವ ಮತ್ತು ಮಿಲಾದ್-ಉನ್-ನಬಿಯ ಶುಭ ಸಂದರ್ಭಗಳು ಮತ್ತು ದೇಶಾದ್ಯಂತ ಆಚರಿಸಲಾಗುತ್ತಿರುವ ವಿವಿಧ ಹಬ್ಬಗಳನ್ನು ಉಲ್ಲೇಖಿಸಿದರು. ಉತ್ಸವಗಳ ಸಮಯದಲ್ಲಿ, ಸುಮಾರು 8,500 ಕೋಟಿ ರೂ.ಗಳ ರೈಲು, ರಸ್ತೆ ಮತ್ತು ಮೆಟ್ರೋ ಕ್ಷೇತ್ರಗಳಲ್ಲಿನ ಯೋಜನೆಗಳನ್ನು ಉದ್ಘಾಟಿಸುವ ಮತ್ತು ಶಂಕುಸ್ಥಾಪನೆ ಮಾಡುವ ಮೂಲಕ ಭಾರತದ ಅಭಿವೃದ್ಧಿಯ ಹಬ್ಬವೂ ನಡೆಯುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ನಮೋ ಭಾರತ್ ಕ್ಷಿಪ್ರ ರೈಲು ಉದ್ಘಾಟನೆಯನ್ನು ಗುಜರಾತ್ ಗೌರವಾರ್ಥದ ಹೊಸ ನಕ್ಷತ್ರ ಎಂದು ಬಣ್ಣಿಸಿದ ಪ್ರಧಾನಿ, ಇದು ಭಾರತದ ನಗರ ಸಂಪರ್ಕದಲ್ಲಿ ಹೊಸ ಮೈಲಿಗಲ್ಲು ಎಂಬುದನ್ನು  ಸಾಬೀತುಪಡಿಸುತ್ತದೆ ಎಂದರು. ಇಂದು ಸಾವಿರಾರು ಕುಟುಂಬಗಳು ತಮ್ಮ ಹೊಸ ಮನೆಗಳನ್ನು ಪ್ರವೇಶಿಸುತ್ತಿವೆ ಮತ್ತು ಸಾವಿರಾರು ಇತರ ಕುಟುಂಬಗಳಿಗೆ ಮೊದಲ ಕಂತನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಶ್ರೀ ಮೋದಿ ನುಡಿದರು. ಈ ಕುಟುಂಬಗಳು ಮುಂಬರುವ ನವರಾತ್ರಿ, ದಸರಾ, ದುರ್ಗಾ ಪೂಜೆ, ಧಂತೇರಸ್, ದೀಪಾವಳಿ ಹಬ್ಬದ ಅವಧಿಯನ್ನು ತಮ್ಮ ಹೊಸ ಮನೆಗಳಲ್ಲಿ ಅದೇ ಉತ್ಸಾಹದಿಂದ ಕಳೆಯುತ್ತವೆ ಎಂಬ ನಂಬಿಕೆ ಇದೆ ಎಂದೂ  ಅವರು ಹೇಳಿದರು. "ನಾನು ನಿಮಗೆ ಶುಭ ಗೃಹ ಪ್ರವೇಶವನ್ನು ಬಯಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು. ಇಂದಿನ ಅಭಿವೃದ್ಧಿಯ ಯೋಜನೆಗಳಿಗಾಗಿ ಅವರು ಗುಜರಾತ್ ಮತ್ತು ಭಾರತದ ಜನರನ್ನು ಅದರಲ್ಲೂ ವಿಶೇಷವಾಗಿ ಈಗ ಮನೆ ಒಡತಿಯರಾದ ಮಹಿಳೆಯರನ್ನು ಅಭಿನಂದಿಸಿದರು.

ಹಬ್ಬದ ಸಂಭ್ರಮ/ಉತ್ಸಾಹದ ನಡುವೆಯೇ ಗುಜರಾತ್ ವಿವಿಧ ಭಾಗಗಳಲ್ಲಿ ನಿರಂತರ ಪ್ರವಾಹ ಉಂಟಾಗಿರುವ ಬಗ್ಗೆ ಪ್ರಧಾನ ಮಂತ್ರಿ ಶ್ರೀ ಮೋದಿ ನೋವು ವ್ಯಕ್ತಪಡಿಸಿದರು.  ಗುಜರಾತ್ ಮೂಲೆ ಮೂಲೆಗಳಲ್ಲಿ ಅಲ್ಪಾವಧಿಯಲ್ಲಿ ಇಷ್ಟು ನಿರಂತರ ಮಳೆಯಾಗಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡ ನಾಗರಿಕರ ನಿಧನಕ್ಕೆ ಅವರು ಸಂತಾಪ ಸೂಚಿಸಿದರು. ಸಂತ್ರಸ್ತರಿಗೆ ಬೆಂಬಲ ಮತ್ತು ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ವ ಪ್ರಯತ್ನಗಳನ್ನು ಮಾಡುತ್ತವೆ  ಎಂದು ಅವರು ಭರವಸೆ ನೀಡಿದರು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

"ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ನನ್ನ ಮೊದಲ ಗುಜರಾತ್ ಭೇಟಿ" ಎಂದು ಪ್ರಧಾನಿ ಮೋದಿ ಹೇಳಿದರು.  ಗುಜರಾತ್ ತಮ್ಮ ಜನ್ಮಸ್ಥಳವಾಗಿದೆ, ಅಲ್ಲಿ ತಾನು  ಜೀವನದ ಎಲ್ಲಾ ಪಾಠಗಳನ್ನು ಕಲಿತೆ  ಎಂದು ಅವರು ಒತ್ತಿ ಹೇಳಿದರು. ಗುಜರಾತ್ ಜನರು ತಮ್ಮ ಮೇಲೆ ಪ್ರೀತಿಯನ್ನು ಸುರಿಸಿದ್ದಾರೆ ಮತ್ತು ಅದು ಮನೆಯ ಮಗ ಹೊಸ ಶಕ್ತಿ ಹಾಗು  ಉತ್ಸಾಹದಿಂದ ಪುನಶ್ಚೇತನಗೊಂಡು ಮನೆಗೆ ಮರಳುತ್ತಿರುವಾಗಿನ  ಭಾವನೆಯಂತೆ ಇದೆ ಎಂದೂ  ಅವರು ಹೇಳಿದರು. ತಮ್ಮನ್ನು ಆಶೀರ್ವದಿಸಲು ಜನರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ತಮ್ಮ ಸೌಭಾಗ್ಯ ಎಂದೂ  ಅವರು ನುಡಿದರು.

ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಆದಷ್ಟು ಬೇಗ ರಾಜ್ಯಕ್ಕೆ ಭೇಟಿ ನೀಡಲಿ ಎಂದು ಹಾರೈಸಿದ ಗುಜರಾತ್ ಜನತೆಯ ಆಶಯವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು “ಇದು ಬಹಳ ಸಹಜ “ಎಂದರು. "ಅರವತ್ತು ವರ್ಷಗಳ ನಂತರ ದಾಖಲೆಯ ಮೂರನೇ ಬಾರಿಗೆ ಸೇವೆ ಸಲ್ಲಿಸಲು ಒಂದೇ ಸರ್ಕಾರಕ್ಕೆ ಅವಕಾಶ ನೀಡುವ ಮೂಲಕ ಭಾರತದ ಜನರು ಇತಿಹಾಸವನ್ನು ರಚಿಸಿರುವುದರಿಂದ ಇದು ಸ್ವಾಭಾವಿಕವಾಗಿದೆ" ಎಂದು ನುಡಿದರು, ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಒಂದು ಮಹತ್ವದ ಘಟನೆಯಾಗಿದೆ ಎಂದೂ ಹೇಳಿದರು. " ರಾಷ್ಟ್ರ ಮೊದಲು ಎಂದು  ಪ್ರತಿಜ್ಞೆ ಮಾಡುವ ಮೂಲಕ ನನ್ನನ್ನು ದಿಲ್ಲಿಗೆ ಕಳುಹಿಸಿದ್ದು ಗುಜರಾತಿನ  ಅದೇ ಜನರು" ಎಂದು ಅವರು ಹೇಳಿದರು. ಸರ್ಕಾರದ ಮೊದಲ ನೂರು ದಿನಗಳಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತದ ಜನರಿಗೆ ನೀಡಿದ ಭರವಸೆಯನ್ನು ಸ್ಮರಿಸಿದ ಪ್ರಧಾನಿ, ಅದು ಭಾರತವಾಗಲಿ ಅಥವಾ ವಿದೇಶವಾಗಲಿ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಎಂದರು. ಮೊದಲ 100 ದಿನಗಳನ್ನು ನೀತಿಗಳನ್ನು ರೂಪಿಸಲು ಹಾಗು ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೀಸಲಿಟ್ಟಿದ್ದಾಗಿ ಅವರು ಹೇಳಿದರು.

ಕಳೆದ 100 ದಿನಗಳಲ್ಲಿ 15 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂಬುದರತ್ತ ಪ್ರಧಾನಿ ಬೆಟ್ಟು ಮಾಡಿದರು. 3 ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ಭರವಸೆಯನ್ನು ಚುನಾವಣೆ ಸಂದರ್ಭದಲ್ಲಿ ದೇಶಕ್ಕೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಿದ ಶ್ರೀ ಮೋದಿ, ಈ ನಿಟ್ಟಿನಲ್ಲಿ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುಜರಾತ್ ಸಾವಿರಾರು ಕುಟುಂಬಗಳು ತಮ್ಮ ಪಕ್ಕಾ ಮನೆಗಳನ್ನು ಪಡೆದಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಜಾರ್ಖಂಡ್ ಸಾವಿರಾರು ಕುಟುಂಬಗಳು ಹೊಸ ಪಕ್ಕಾ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಅವರು ಹೇಳಿದರು. ಹಳ್ಳಿಗಳಿರಲಿ ಅಥವಾ ನಗರಗಳಿರಲಿ ಎಲ್ಲರಿಗೂ ಉತ್ತಮ ಪರಿಸರವನ್ನು ಒದಗಿಸುವಲ್ಲಿ ತಮ್ಮ ಸರ್ಕಾರ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ನಗರ ಮಧ್ಯಮ ವರ್ಗದ ಮನೆಗಳಿಗೆ ಆರ್ಥಿಕ ಸಹಾಯಕ್ಕಾಗಿ, ಕಾರ್ಮಿಕರಿಗೆ ಸಮಂಜಸವಾದ ಕೈಗೆಟಕುವ ದರದಲ್ಲಿ ಬಾಡಿಗೆಗೆ ಉತ್ತಮ ಮನೆಗಳನ್ನು ಒದಗಿಸುವ ಅಭಿಯಾನವಾಗಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ವಸತಿಗಳನ್ನು ನಿರ್ಮಿಸುವುದಾಗಲಿ ಅಥವಾ ಉದ್ಯೋಗಸ್ಥ ಮಹಿಳೆಯರಿಗಾಗಿ  ದೇಶದಲ್ಲಿ ಹೊಸ ಹಾಸ್ಟೆಲ್ ಗಳನ್ನು ನಿರ್ಮಿಸುವುದಾಗಲಿ ಇವೆಲ್ಲಕ್ಕೂ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಅವರು ಹೇಳಿದರು

ಕೆಲವು ದಿನಗಳ ಹಿಂದೆ ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೈಗೊಂಡ ದೊಡ್ಡ ನಿರ್ಧಾರವನ್ನು ನೆನಪಿಸಿಕೊಂಡ ಪ್ರಧಾನಿ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವೃದ್ಧರಿಗೆ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ನೀಡುವ ತಮ್ಮ ಭರವಸೆಯನ್ನು ಸ್ಮರಿಸಿದರು. ಮಧ್ಯಮ ವರ್ಗದ ಪುತ್ರರು ಮತ್ತು ಹೆಣ್ಣುಮಕ್ಕಳು ತಮ್ಮ ಹೆತ್ತವರ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದರು.

ಕಳೆದ 100 ದಿನಗಳಲ್ಲಿ ಯುವಜನರ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಹಾಗು ಅವರ ಕೌಶಲ್ಯ ಅಭಿವೃದ್ಧಿಗಾಗಿ ಕೈಗೊಂಡ ಮಹತ್ವದ ನಿರ್ಧಾರಗಳ ಬಗ್ಗೆ ಗಮನ ಸೆಳೆದ ಪ್ರಧಾನಿ, 2 ಲಕ್ಷ ಕೋಟಿ ರೂ.ಗಳ ವಿಶೇಷ ಪಿಎಂ ಪ್ಯಾಕೇಜ್ ಘೋಷಣೆಯನ್ನು ಉಲ್ಲೇಖಿಸಿದರು, ಇದು 4 ಕೋಟಿಗೂ ಹೆಚ್ಚು ಯುವಜನರಿಗೆ ಪ್ರಯೋಜನವನ್ನು ನೀಡುತ್ತದೆ. ಯುವಜನರನ್ನು ನೇಮಿಸಿಕೊಂಡರೆ ಕಂಪನಿಗಳಲ್ಲಿ ಅವರ ಮೊದಲ  ಕೆಲಸದ ಮೊದಲ ಸಂಬಳವನ್ನು ಸರಕಾರ  ಪಾವತಿಸುತ್ತದೆ ಎಂದು ಅವರು ವಿವರಿಸಿದರು. ಮುದ್ರಾ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದನ್ನು ಅವರು ಉಲ್ಲೇಖಿಸಿದರು.

ಮಹಿಳಾ ಸಬಲೀಕರಣ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 3 ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಖಾತರಿಯನ್ನು ಸ್ಮರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಅವರ ಸಂಖ್ಯೆ 1 ಕೋಟಿಯನ್ನು ತಲುಪಿದೆ ಮತ್ತು ಸರ್ಕಾರದ ಮೊದಲ ನೂರು ದಿನಗಳಲ್ಲಿ ದೇಶದಲ್ಲಿ 11 ಲಕ್ಷ ಹೊಸ ಲಖ್ಪತಿ ದೀದಿಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ತೃಪ್ತಿಯಿಂದ ನುಡಿದರು. ಎಣ್ಣೆಕಾಳು ರೈತರ ಹಿತದೃಷ್ಟಿಯಿಂದ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಇದರಿಂದ ಅವರಿಗೆ ಹೆಚ್ಚಿಸಿದ ಎಂಎಸ್ಪಿಗಿಂತ ಹೆಚ್ಚಿನ ಬೆಲೆ ದೊರೆಯುತ್ತದೆ. ಸೋಯಾಬೀನ್ ಮತ್ತು ಸೂರ್ಯಕಾಂತಿಯಂತಹ ಬೆಳೆಗಳನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಮತ್ತು ಖಾದ್ಯ ತೈಲ ಉತ್ಪಾದನೆಯಲ್ಲಿ 'ಆತ್ಮನಿರ್ಭರ' ಆಗಲು ವೇಗವನ್ನು ನೀಡಲು ವಿದೇಶಿ ತೈಲ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು. ಬಾಸ್ಮತಿ ಅಕ್ಕಿ ಮತ್ತು ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ, ಇದು ವಿದೇಶದಲ್ಲಿ ಭಾರತೀಯ ಅಕ್ಕಿ ಮತ್ತು ಈರುಳ್ಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಕಳೆದ 100 ದಿನಗಳಲ್ಲಿ ರೈಲು, ರಸ್ತೆ, ಬಂದರು, ವಿಮಾನ ನಿಲ್ದಾಣ ಮತ್ತು ಮೆಟ್ರೋಗೆ ಸಂಬಂಧಿಸಿದ ಡಜನ್ ಗಟ್ಟಲೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮದಲ್ಲೂ ಅದರ ಒಂದು ಇಣುಕುನೋಟ ಗೋಚರಿಸುತ್ತಿದೆ ಎಂದು ಅವರು ನುಡಿದರು. ಗುಜರಾತ್ ನಲ್ಲಿ ಇಂದು ಸಂಪರ್ಕ ಸಂಬಂಧಿತ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಕಾರ್ಯಕ್ರಮಕ್ಕೆ ಮೊದಲು ತಾವು ಗಿಫ್ಟ್ ಸಿಟಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಗಿ ಅವರು ತಿಳಿಸಿದರು. ಮೆಟ್ರೋ ಪ್ರಯಾಣದ ಸಮಯದಲ್ಲಿ ಅನೇಕ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಅಹಮದಾಬಾದ್ ಮೆಟ್ರೋ ವಿಸ್ತರಣೆಯಿಂದ ಎಲ್ಲರೂ ಸಂತೋಷಪಟ್ಟಿದ್ದಾರೆ ಎಂದು ಅವರು ಹೇಳಿದರು. ಕಳೆದ 100 ದಿನಗಳಲ್ಲಿ, ದೇಶಾದ್ಯಂತ ಅನೇಕ ನಗರಗಳಲ್ಲಿ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.

ಇಂದು ಗುಜರಾತ್ ಗೆ ವಿಶೇಷ ದಿನವೆಂದು ಉಲ್ಲೇಖಿಸಿದ ಶ್ರೀ ಮೋದಿ, ನಮೋ ಭಾರತ್ ರಾಪಿಡ್ ರೈಲು ಅಹ್ಮದಾಬಾದ್ ಮತ್ತು ಭುಜ್ ನಡುವೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಒತ್ತಿ ಹೇಳಿದರು. ನಮೋ ಭಾರತ್ ರಾಪಿಡ್ ರೈಲು ಪ್ರತಿದಿನ ದೇಶದ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುವ ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳ ಅನುಕೂಲಕರವಾಗಿದೆ ಮತ್ತು ಉದ್ಯೋಗ, ವ್ಯವಹಾರ ಹಾಗು ಶಿಕ್ಷಣದಲ್ಲಿ ತೊಡಗಿರುವವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ನಮೋ ಭಾರತ್ ರಾಪಿಡ್ ರೈಲು ದೇಶದ ಅನೇಕ ನಗರಗಳನ್ನು ಸಂಪರ್ಕಿಸುವ ಮೂಲಕ ಅನೇಕ ಜನರಿಗೆ ಪ್ರಯೋಜನ ತರಲಿದೆ  ಎಂದೂ  ಶ್ರೀ ಮೋದಿ ಭರವಸೆ ವ್ಯಕ್ತಪಡಿಸಿದರು.

"ಈ 100 ದಿನಗಳಲ್ಲಿ ವಂದೇ ಭಾರತ್ ಜಾಲದ ವಿಸ್ತರಣೆ ಅಭೂತಪೂರ್ವವಾಗಿದೆ" ಎಂದು 15 ಕ್ಕೂ ಹೆಚ್ಚು ಹೊಸ ವಂದೇ ಭಾರತ್ ರೈಲು ಮಾರ್ಗಗಳನ್ನು ಪ್ರಸ್ತಾಪಿಸುತ್ತ ಪ್ರಧಾನಿ ಹೇಳಿದರು. ಜಾರ್ಖಂಡದಿಂದ  ಮತ್ತು ನಾಗ್ಪುರ-ಸಿಕಂದರಾಬಾದ್, ಕೊಲ್ಹಾಪುರ-ಪುಣೆ, ಆಗ್ರಾ ಕಂಟೋನ್ಮೆಂಟ್-ಬನಾರಸ್, ದುರ್ಗ್-ವಿಶಾಖಪಟ್ಟಣಂ, ಪುಣೆ-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ  ಹಲವು ವಂದೇ ಭಾರತ್ ರೈಲುಗಳಿಗೆ ಇಂದು ಹಸಿರು ನಿಶಾನೆ ತೋರಲಾಗಿದೆ. ಈಗ 20 ಬೋಗಿಗಳನ್ನು ಹೊಂದಿರುವ ದಿಲ್ಲಿ - ವಾರಣಾಸಿ ವಂದೇ ಭಾರತ್ ರೈಲಿನ ಬಗ್ಗೆಯೂ ಅವರು ಮಾತನಾಡಿದರು. ದೇಶದಲ್ಲಿ 125 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಪ್ರತಿದಿನ ಸಾವಿರಾರು ಜನರಿಗೆ ಉತ್ತಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಗುಜರಾತ್ ಜನರು ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಸ್ತುತ ಕಾಲವು ಸುವರ್ಣ ಯುಗ ಅಥವಾ ಭಾರತದ ಅಮೃತಕಾಲ ಎಂದು ಉದ್ಗರಿಸಿದರು. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿಪಡಿಸುವಂತೆ ಅವರು ಜನರನ್ನು ಪ್ರೇರೇಪಿಸಿದರು ಮತ್ತು ಇದರಲ್ಲಿ ಗುಜರಾತ್ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಗುಜರಾತ್ ಇಂದು ಉತ್ಪಾದನೆಯ ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿದೆ ಮತ್ತು ಭಾರತದ ಅತ್ಯಂತ ಉತ್ತಮ ಸಂಪರ್ಕ ಹೊಂದಿದ ರಾಜ್ಯಗಳಲ್ಲಿ ಒಂದಾಗಿದೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಗುಜರಾತ್ ಭಾರತಕ್ಕೆ ತನ್ನ ಮೊದಲ ಮೇಡ್ ಇನ್ ಇಂಡಿಯಾ ಸಾರಿಗೆ ವಿಮಾನ ಸಿ-295 ನೀಡುವ ದಿನ ದೂರವಿಲ್ಲ ಎಂದು ಘೋಷಿಸಿದ ಪ್ರಧಾನ ಮಂತ್ರಿ ಅವರು ಈ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದರು. . ಸೆಮಿಕಂಡಕ್ಟರ್ ಮಿಷನ್ ನಲ್ಲಿ ಗುಜರಾತ್ ಮುನ್ನಡೆ ಅಭೂತಪೂರ್ವ ಎಂದು ಅವರು ಶ್ಲಾಘಿಸಿದರು. ಇಂದು ಗುಜರಾತ್ ನಲ್ಲಿ ಪೆಟ್ರೋಲಿಯಂ, ವಿಧಿವಿಜ್ಞಾನದಿಂದ ಸ್ವಾಸ್ಥ್ಯದವರೆಗೆ ಅನೇಕ ವಿಶ್ವವಿದ್ಯಾಲಯಗಳಿವೆ ಮತ್ತು ಪ್ರತಿಯೊಂದು ಆಧುನಿಕ ವಿಷಯವನ್ನು ಅಧ್ಯಯನ ಮಾಡಲು ಗುಜರಾತ್ ನಲ್ಲಿ ಅತ್ಯುತ್ತಮ ಅವಕಾಶಗಳಿವೆ ಎಂದು ಪ್ರಧಾನಿ ಹೇಳಿದರು. ವಿದೇಶಿ ವಿಶ್ವವಿದ್ಯಾಲಯಗಳು ಗುಜರಾತ್ ನಲ್ಲಿ ತಮ್ಮ ಕ್ಯಾಂಪಸ್ ಗಳನ್ನು ತೆರೆಯುತ್ತಿವೆ ಎಂದು ಅವರು ಹೇಳಿದರು. ಸಂಸ್ಕೃತಿಯಿದ ಹಿಡಿದು ಕೃಷಿಯವರೆಗೆ ಜಗತ್ತಿನಲ್ಲಿ ಗುಜರಾತ್ ಸದ್ದು ಮಾಡುತ್ತಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಗುಜರಾತ್ ಈಗ ಬೆಳೆಗಳು ಮತ್ತು ಕಾಳುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ, ಒಂದು ಕಾಲದಲ್ಲಿ ಇದನ್ನು ಊಹಿಸುವುದಕ್ಕೂ ಸಾಧ್ಯವಿರಲಿಲ್ಲ ಮತ್ತು ಅದೆಲ್ಲ ಈಗ ಗುಜರಾತಿನ ಜನತೆಯ ಕಠಿಣ ದುಡಿಮೆಯ ಸ್ವಭಾವದಿಂದಾಗಿ ಸಾಧ್ಯವಾಗಿದೆ ಎಂದವರು ವಿವರಿಸಿದರು. 

ರಾಜ್ಯದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಒಂದು ಪೀಳಿಗೆ ಕಳೆದುಹೋಗಿದೆ ಎಂದು ಹೇಳಿದ ಪ್ರಧಾನಿ, ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಭಾರತದಲ್ಲಿ ತಯಾರಾದ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಕೆಂಪು ಕೋಟೆಯಿಂದ ಮಾಡಿದ ಭಾಷಣವನ್ನು ನೆನಪಿಸಿಕೊಂಡ  ಪ್ರಧಾನಮಂತ್ರಿಯವರು, ರಫ್ತು ಮಾಡಲಾಗದ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಮನಸ್ಥಿತಿಯಿಂದ ಹೊರಬರುವಂತೆ ಜನರನ್ನು ಆಗ್ರಹಿಸಿದರು. ಉತ್ತಮ ಗುಣಮಟ್ಟದಲ್ಲಿ ತಯಾರಾದ ಉತ್ಪನ್ನಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಗುಜರಾತ್ ದಾರಿದೀಪವಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಭಾರತವು ಹೊಸ ಸಂಕಲ್ಪಗಳೊಂದಿಗೆ ಕೆಲಸ ಮಾಡುತ್ತಿರುವ ರೀತಿಯಿಂದಾಗಿ , ಅದು ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಅನೇಕ ದೇಶಗಳಲ್ಲಿನ ಅನೇಕ ದೊಡ್ಡ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದರಿಂದ ಭಾರತವು ತುಂಬಾ ಗೌರವವನ್ನು ಪಡೆಯುತ್ತಿರುವುದನ್ನು ನೋಡಬಹುದು ಎಂದು ಶ್ರೀ ಮೋದಿ ಹೇಳಿದರು: "ವಿಶ್ವದ ಪ್ರತಿಯೊಬ್ಬರೂ ಭಾರತ ಮತ್ತು ಭಾರತೀಯರನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತಾರೆ. ಪ್ರತಿಯೊಬ್ಬರೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ ವಿಶ್ವದ ಜನರು ಪರಿಹಾರಗಳಿಗಾಗಿ ಭಾರತದತ್ತ ನೋಡುತ್ತಾರೆ", ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಜನರು ಸತತ ಮೂರನೇ ಬಾರಿಗೆ ಸ್ಥಿರ ಸರ್ಕಾರವನ್ನು ರಚಿಸಿರುವುದರಿಂದ ವಿಶ್ವದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಒತ್ತಿ ಹೇಳಿದರು. ನುರಿತ ಯುವಜನರಿಗೆ ಬೇಡಿಕೆ ಹೆಚ್ಚಾದಂತೆ ರೈತರು ಮತ್ತು ಯುವಜನರು ವಿಶ್ವಾಸದ/ನಂಬಿಕೆಯ  ಹೆಚ್ಚಳದ ನೇರ ಫಲಾನುಭವಿಗಳಾಗಿದ್ದಾರೆ ಎಂದು ಅವರು ಹೇಳಿದರು. ವಿಶ್ವಾಸದ ಹೆಚ್ಚಳವು ರಫ್ತುಗಳನ್ನು ಹೆಚ್ಚಿಸುತ್ತದೆ ಮತ್ತು ವಿದೇಶಿ ಹೂಡಿಕೆದಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಒಂದು ಕಡೆ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ದೇಶದ ಶಕ್ತಿಯನ್ನು ಉತ್ತೇಜಿಸುವಲ್ಲಿ ತೊಡಗುವ ಮೂಲಕ ಇಡೀ ಜಗತ್ತಿನಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್ ಆಗಲು ಬಯಸಿದರೆ, ದೇಶದಲ್ಲಿ ಕೆಲವು ಜನರು ನಕಾರಾತ್ಮಕತೆಯಿಂದ ಮತ್ತು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಅಂತಹ ಜನರು ದೇಶದ ಏಕತೆಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರು 500 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸುವ ಮೂಲಕ ಭಾರತವನ್ನು ಹೇಗೆ ಏಕೀಕರಿಸಿದರು ಎಂಬುದನ್ನು ಶ್ರೀ ಮೋದಿ ಸ್ಮರಿಸಿದರು. ಅಧಿಕಾರದಾಹಿ ಜನರ ಒಂದು ನಿರ್ದಿಷ್ಟ ವಿಭಾಗವು ಭಾರತವನ್ನು ತುಂಡು ತುಂಡುಗಳಾಗಿ ಒಡೆಯಲು ಬಯಸಿದೆ ಎಂದು ಅವರು ಹೇಳಿದರು. ಇಂತಹ ವಿಭಜಕ ಶಕ್ತಿಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಅಂತಹ ಜನರ ಬಗ್ಗೆ ಜಾಗರೂಕರಾಗಿರುವಂತೆ  ಎಂದು ಶ್ರೀ ಮೋದಿ ಗುಜರಾತ್ ಜನತೆಯನ್ನು ಎಚ್ಚರಿಸಿದರು.  

ಭಾರತವು ಅಭಿವೃದ್ಧಿಯ ಪಥದಲ್ಲಿದೆ ಮತ್ತು ಅಂತಹ ನಕಾರಾತ್ಮಕ ಶಕ್ತಿಗಳನ್ನು ಧೈರ್ಯದಿಂದ ಎದುರಿಸಲು ಸಮರ್ಥವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಭಾರತಕ್ಕೆ ಇದು  ಕಳೆದುಕೊಳ್ಳುವ  ಸಮಯವಲ್ಲ. ನಾವು ಭಾರತದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಘನತೆಯ ಜೀವನವನ್ನು ಒದಗಿಸಬೇಕು", ಎಂದು ಪ್ರಧಾನಿ ಹೇಳಿದರು, ಈ ವಿಷಯದಲ್ಲೂ ಗುಜರಾತ್ ನಾಯಕನಾಗಿ ಹೊರಹೊಮ್ಮಲಿದೆ ಎಂದು ಒತ್ತಿ ಹೇಳಿದರು. ನಮ್ಮೆಲ್ಲರ ಪ್ರಯತ್ನದಿಂದ ನಮ್ಮ ಪ್ರತಿಯೊಂದು ಸಂಕಲ್ಪವೂ ಈಡೇರುತ್ತದೆ. "ಸಬ್ ಕಾ ಪ್ರಯಾಸ್ ನೊಂದಿಗೆ ನಮ್ಮ ಎಲ್ಲ ಸಂಕಲ್ಪಗಳು ಈಡೇರಲಿವೆ" ಎಂದು ಶ್ರೀ ಮೋದಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸಮಖಿಯಾಲಿ-ಗಾಂಧಿಧಾಮ್ ಮತ್ತು ಗಾಂಧಿಧಾಮ್-ಆದಿಪುರ ರೈಲ್ವೆ ಮಾರ್ಗಗಳ ಚತುಷ್ಪಥ, ಅಹ್ಮದಾಬಾದ್ ಎಎಂಸಿಯಲ್ಲಿ ಅಪ್ರತಿಮ ರಸ್ತೆಗಳ ಅಭಿವೃದ್ಧಿ ಮತ್ತು ಬಕ್ರೋಲ್, ಹತಿಜಾನ್, ರಾಮೋಲ್ ಮತ್ತು ಪಂಜರ್ ಪೋಲ್ ಜಂಕ್ಷನ್ ಮೇಲೆ ಮೇಲ್ಸೇತುವೆ ಸೇತುವೆಗಳ ನಿರ್ಮಾಣ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿಯವರು 30 ಮೆಗಾವ್ಯಾಟ್ ಸೌರ ವ್ಯವಸ್ಥೆ, ಕಛ್ ಕಚ್ ಲಿಗ್ನೈಟ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ 35 ಮೆಗಾವ್ಯಾಟ್ ಸಾಮರ್ಥ್ಯದ ಬಿಇಎಸ್ ಎಸ್ ಸೌರ ಪಿವಿ ಯೋಜನೆ ಮತ್ತು ಮೊರ್ಬಿ ಹಾಗು ರಾಜ್ ಕೋಟ್ ನಲ್ಲಿ 220 ಕಿಲೋವೋಲ್ಟ್ ಸಬ್ ಸ್ಟೇಷನ್ ಗಳನ್ನು ಉದ್ಘಾಟಿಸಿದರು.

ಹಣಕಾಸು ಸೇವೆಗಳನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕಗವಾಕ್ಷಿ ಐಟಿ ವ್ಯವಸ್ಥೆಗೆ (ಸ್ವಿಟ್ಸ್) ಪ್ರಧಾನಮಂತ್ರಿಯವರು ಚಾಲನೆ ನೀಡಿದರು.

ಪ್ರಧಾನಮಂತ್ರಿಯವರು ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ ಅಡಿಯಲ್ಲಿ 30,000 ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿದರು ಮತ್ತು ಮನೆಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಿದರು. ಪಿಎಂಎವೈ ಯೋಜನೆಯಡಿ ಮನೆಗಳ ನಿರ್ಮಾಣಕ್ಕೂ ಅವರು ಚಾಲನೆ ನೀಡಿದರು ಮತ್ತು ಪಿಎಂಎವೈನ ನಗರ ಹಾಗು ಗ್ರಾಮೀಣ ವಿಭಾಗಗಳ ಅಡಿಯಲ್ಲಿ ಪೂರ್ಣಗೊಂಡ ಮನೆಗಳನ್ನು ರಾಜ್ಯದ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಇದಲ್ಲದೆ, ಅಹಮದಾಬಾದ್ ಮತ್ತು ಭುಜ್ ನಡುವಿನ ಭಾರತದ ಮೊದಲ ನಮೋ ಭಾರತ್ ಕ್ಷಿಪ್ರ ರೈಲು ಮತ್ತು ನಾಗ್ಪುರದಿಂದ ಸಿಕಂದರಾಬಾದ್, ಕೊಲ್ಹಾಪುರದಿಂದ ಪುಣೆ, ಆಗ್ರಾ ಕಂಟೋನ್ಮೆಂಟ್ನಿಂದ ಬನಾರಸ್, ದುರ್ಗದಿಂದ ವಿಶಾಖಪಟ್ಟಣಂ, ಪುಣೆಯಿಂದ ಹುಬ್ಬಳ್ಳಿ ಮತ್ತು ವಾರಣಾಸಿಯಿಂದ ದಿಲ್ಲಿಗೆ ಮೊದಲ 20 ಬೋಗಿಗಳ ವಂದೇ ಭಾರತ್ ರೈಲಿಗೆ ಅವರು ಹಸಿರು ನಿಶಾನೆ ತೋರಿದರು.

 

 

 

*****



(Release ID: 2055624) Visitor Counter : 13