ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav g20-india-2023

2047ರ ವೇಳೆಗೆ ಪ್ರಧಾನಮಂತ್ರಿಯವರ 'ವಿಕಸಿತ ಭಾರತ'ದ ಕನಸನ್ನು ನನಸು ಮಾಡಲು 'ಯುವ ಶಕ್ತಿ'ಯ ಸದ್ಬಳಕೆಗೆ ಡಾ. ಮನ್ಸುಖ್ ಮಾಂಡವಿಯಾ ಕರೆ


ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯತಂತ್ರದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಯುವ ಅಧಿಕಾರಿಗಳಿಗೆ ಆಗ್ರಹ

ಜಿಲ್ಲಾ ಯುವಜನ ಅಧಿಕಾರಿಗಳ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವರು

Posted On: 04 SEP 2024 4:32PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು, ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ.ಮನ್ಸುಖ್ ಮಾಂಡವೀಯ ಅವರು ಇಂದು ಹೊಸದಿಲ್ಲಿಯಲ್ಲಿ ಜಿಲ್ಲಾ ಯುವ ಅಧಿಕಾರಿಗಳ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ  ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವಾದ 'ವಿಕಸಿತ ಭಾರತ' ಅನ್ನು ಸಾಕಾರಗೊಳಿಸುವಲ್ಲಿ ಯುವಜನರ ಪ್ರಮುಖ ಪಾತ್ರದ ಬಗ್ಗೆ ಚರ್ಚೆಗಳನ್ನು ಉತ್ತೇಜಿಸುವ  ಗುರಿಯನ್ನು ಕಾರ್ಯಕ್ರಮ ಹೊಂದಿದೆ.

ತಮ್ಮ ಉದ್ಘಾಟನಾ ಭಾಷಣದಲ್ಲಿ, ಕೇಂದ್ರ ಸಚಿವರು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ದೇಶಾದ್ಯಂತದ ಯುವಜನರನ್ನು ಪ್ರೇರೇಪಿಸುವ, ಸಬಲೀಕರಣಗೊಳಿಸುವ ಮತ್ತು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಿಸುವಂತೆ  ಅವರು ಜಿಲ್ಲಾ ಯುವ ಅಧಿಕಾರಿಗಳಿಗೆ ಕರೆ ನೀಡಿದರು.

"ಭಾರತದ ಯುವಜನರು ನಮ್ಮ ದೊಡ್ಡ ಶಕ್ತಿ, ಮತ್ತು ಅವರ ಶಕ್ತಿಯನ್ನು ಸಮೃದ್ಧ ಹಾಗು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುವತ್ತ ಕೊಂಡೊಯ್ಯಬೇಕು " ಎಂದು ಡಾ.ಮಾಂಡವೀಯ ಹೇಳಿದರು. 2047 ರಲ್ಲಿ ನಾವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರ 'ವಿಕಸಿತ ಭಾರತ' ಕನಸನ್ನು ನನಸಾಗಿಸಲು ನಾವು ನಮ್ಮ ಯುವಜನರ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ” ಎಂದೂ ಅವರು ನುಡಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಡಾ. ಮಾಂಡವೀಯ, ಇತ್ತೀಚೆಗೆ ಪ್ರಾರಂಭಿಸಲಾದ ಮೈ ಭಾರತ್ ವೇದಿಕೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಈ ವೇದಿಕೆಯು ಪ್ರಸ್ತುತ ಸಿವಿ ನಿರ್ಮಾಣ  ಮತ್ತು ಪ್ರಾಯೋಗಿಕ ಕಲಿಕೆಯಂತಹ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ನೀಡುತ್ತದೆ ಮತ್ತು ಭವಿಷ್ಯದಲ್ಲಿ, ಯುವಜನರಿಗೆ ಕೌಶಲ್ಯ ಮತ್ತು ಉದ್ಯೋಗಾವಕಾಶಗಳಿಗೆ ಹೆಚ್ಚುವರಿ ಹಾದಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಮೈ ಭಾರತ್ ವೇದಿಕೆಯು ನಮ್ಮ ಯುವಜನರಿಗೆ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದೂ ಅವರು ಹೇಳಿದರು. 1.5 ಕೋಟಿಗೂ ಹೆಚ್ಚು ಯುವ ಸ್ವಯಂಸೇವಕರು ಈಗಾಗಲೇ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು 2024 ರ ಡಿಸೆಂಬರ್ ಅಂತ್ಯದ ವೇಳೆಗೆ ಸಂಖ್ಯೆಯನ್ನು 3 ಕೋಟಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಲಾಗಿದೆ ಎಂದೂ  ಅವರು ಹೆಮ್ಮೆಯಿಂದ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ  ಅಮೃತ್ ಕಾಲದ "ಪಂಚ ಪ್ರಾಣ" ವನ್ನು ಕೇಂದ್ರ ಸಚಿವರು ಉಲ್ಲೇಖಿಸಿದರು. ಯುವಜನರು ತತ್ವಗಳಿಂದ ಸ್ಫೂರ್ತಿ ಪಡೆಯಬೇಕು ಮತ್ತು ದೇಶದ ಸುಧಾರಣೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಭವಿಷ್ಯದಲ್ಲಿ ತಮ್ಮ ಪ್ರಯತ್ನಗಳಿಂದ ಅಂತಿಮವಾಗಿ ತಮಗೆ ಪ್ರಯೋಜನ ಲಭಿಸುತ್ತದೆ ಎಂಬ ತಿಳುವಳಿಕೆಯೊಂದಿಗೆ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರವನ್ನು ಮುನ್ನಡೆಸಲು ಮತ್ತು ಶ್ರೀಮಂತಗೊಳಿಸಲು ಬದ್ಧರಾಗುವಂತೆ ಅವರು ಯುವ ಪೀಳಿಗೆಗೆ ಕರೆ ನೀಡಿದರು.

ವಿಕಸಿತ ಭಾರತ 2047, ಸೇವಾ ಸೆ ಸೀಖೇನ್, ಸಾರ್ವಜನಿಕ ಜೀವನದಲ್ಲಿ ಯುವಜನತೆ, ಫಿಟ್ ಇಂಡಿಯಾ ಕ್ಲಬ್ ಗಳು ಮತ್ತು ಸ್ವಚ್ಛ ಭಾರತ್ ಮಿಷನ್ - ನಯಾ ಸಂಕಲ್ಪ್ ನಂತಹ ಮಹತ್ವದ ವಿವಿಧ ವಿಷಯಗಳ ಕುರಿತು ಯುವಜನ ವ್ಯವಹಾರಗಳ ಇಲಾಖೆ ಮತ್ತು ದೇಶಾದ್ಯಂತದಿಂದ ಬಂದ ಮೈ ಭಾರತ್ ಅಧಿಕಾರಿಗಳೊಂದಿಗೆ ಸಂವಾದ ಅಧಿವೇಶನಗಳ ಅಧ್ಯಕ್ಷತೆಯನ್ನು ಕೇಂದ್ರ ಸಚಿವರು  ವಹಿಸಿದ್ದರು.

ರಾಷ್ಟ್ರೀಯ ಸಮಾವೇಶವನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆ 2024 ರ ಸೆಪ್ಟೆಂಬರ್ 4 ಮತ್ತು 5 ರಂದು ಹೊಸದಿಲ್ಲಿಯ  ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಆರೋಗ್ಯ, ನಗರ ಆಡಳಿತ, ಸೈಬರ್ ಭದ್ರತೆ, ಉದ್ಯಮಶೀಲತೆ, ಯುವ ವಿನಿಮಯ ಮತ್ತು ವಿಜ್ಞಾನ ಮೇಳ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಳ್ಳಲು ದೇಶಾದ್ಯಂತದ ಯುವ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ಯುವಜನರ ಸಂಪರ್ಕ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮೈ ಭಾರತ್ ತಂತ್ರಜ್ಞಾನ ವೇದಿಕೆಯನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆಗಳು ಗಮನ ಹರಿಸಲಿವೆ. ಚಿಂತನ-ಮಂಥನ ಅಧಿವೇಶನಗಳಲ್ಲಿ ರಾಷ್ಟ್ರೀಯ ಯುವ ಉತ್ಸವ ಮತ್ತು ವಿಜ್ಞಾನ ಮೇಳದಂತಹ ಮಹತ್ವದ ವಿಷಯಗಳ ಬಗ್ಗೆಯೂ  ಚರ್ಚಿಸಲಾಗುತ್ತಿದೆ. ಇದಲ್ಲದೆ, ಡಾಕ್ ಚೌಪಾಲ್, ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ಜಾಗೃತಿ ಮತ್ತು ಯುವ ಉದ್ಯಮಶೀಲತೆ ಕುರಿತು ಪ್ರಸ್ತುತಿಗಳು ಇರಲಿವೆ.

ಯುವಜನರಿಗೆ ತಮ್ಮ ಅತ್ಯುನ್ನತ ಸಾಮರ್ಥ್ಯಕ್ಕೆ ತಕ್ಕುದಾದುದನ್ನು  ಸಾಧಿಸಲು ಅವಕಾಶಗಳನ್ನು ಸೃಷ್ಟಿಸುವ ಮೂಲಕ ಅವರನ್ನು ಮುನ್ನಡೆಸಲು ಮತ್ತು ಪ್ರೇರೇಪಿಸಲು ಕ್ಷೇತ್ರ ಸಂಸ್ಥೆಗಳಲ್ಲಿನ ಅಧಿಕಾರಿಗಳನ್ನು ಸಬಲೀಕರಣಗೊಳಿಸುವಲ್ಲಿ ರಾಷ್ಟ್ರೀಯ ಸಮಾವೇಶವು ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

 

*****



(Release ID: 2052134) Visitor Counter : 20