ಪ್ರಧಾನ ಮಂತ್ರಿಯವರ ಕಛೇರಿ

ಪೋಲೆಂಡ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಿದರು

Posted On: 22 AUG 2024 12:49AM by PIB Bengaluru

ಪೋಲೆಂಡ್ ನ ವಾರ್ಸಾದಲ್ಲಿ ಭಾರತೀಯ ಸಮುದಾಯವು ಪ್ರಧಾನ ಮಂತ್ರಿಯವರ ಗೌರವಾರ್ಥ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

ಪ್ರಧಾನ ಮಂತ್ರಿ ಅವರನ್ನು ಭಾರತೀಯ ಸಮುದಾಯದವರು ವಿಶೇಷ ಪ್ರೀತಿ ಮತ್ತು ಗೌರವಗಳೊಂದಿಗೆ ವಿಜೃಂಭಣೆಯಿಂದ ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, “45 ವರ್ಷಗಳ ನಂತರ ಭಾರತದ ಪ್ರಧಾನ ಮಂತ್ರಿ ಪೋಲೆಂಡ್ ಗೆ ಭೇಟಿ ನೀಡುತ್ತಿದ್ದಾರೆ ಮತ್ತು ಭಾರತ-ಪೋಲೆಂಡ್ ಬಾಂಧವ್ಯವನ್ನು ಬಲಪಡಿಸಲು ಅಧ್ಯಕ್ಷ ಶ್ರೀ ಆಂಡ್ರೆಜ್ ಡುಡಾ ಮತ್ತು ಪ್ರಧಾನಮಂತ್ರಿ ಶ್ರೀ ಡೊನಾಲ್ಡ್ ಟಸ್ಕ್ ಅವರನ್ನು ಭೇಟಿ ಮಾಡಲು  ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು. “ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ಪೋಲೆಂಡ್ ನೊಂದಿಗೆ ಹಂಚಿಕೊಂಡ ಮೌಲ್ಯಗಳು ಎರಡು ದೇಶಗಳನ್ನು ಹತ್ತಿರಕ್ಕೆ ತರುತ್ತವೆ” ಎಂದು ಅವರು ಹೇಳಿದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ವಲಸಿಗರು ನೀಡಿದ ಮಹತ್ವದ ಕೊಡುಗೆಯ ಕುರಿತು ಪ್ರಧಾನಮಂತ್ರಿಯವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಆಪರೇಷನ್ ಗಂಗಾ ಯಶಸ್ಸಿನಲ್ಲಿ ಅನಿವಾಸಿ ಭಾರತೀಯರ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಭಾರತಕ್ಕೆ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಲು ಮತ್ತು ಅದರ ಬೆಳವಣಿಗೆಯ ಕಥೆಯ ಭಾಗವಾಗಲು ಪ್ರಧಾನಮಂತ್ರಿಯವರು ಅನಿವಾಸಿ ಭಾರತೀಯ ಸಮುದಾಯಕ್ಕೆ ಕರೆ ನೀಡಿದರು. ಡೋಬ್ರಿ ಮಹಾರಾಜ, ಕೊಲ್ಲಾಪುರ ಮತ್ತು ಮಾಂಟೆ ಕ್ಯಾಸಿನೊ ಕದನದ ಸ್ಮಾರಕಗಳು ಉಭಯ ದೇಶಗಳ ನಡುವಿನ ರೋಮಾಂಚಕ ಜನರ-ಜನರ ಬಾಂಧವ್ಯದ ಉಜ್ವಲ ಉದಾಹರಣೆಗಳಾಗಿವೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಈ ವಿಶೇಷ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು, ಜಂಸಾಹೇಬ್ ಮೆಮೋರಿಯಲ್ ಯೂತ್ ಎಕ್ಸ್ಚೇಂಜ್ ಪ್ರೋಗ್ರಾಂ ಎಂಬ ಹೊಸ ಉಪಕ್ರಮವನ್ನು ಪ್ರಧಾನಮಂತ್ರಿಯವರು ಘೋಷಿಸಿದರು, ಇದರ ಅಡಿಯಲ್ಲಿ ಪ್ರತಿ ವರ್ಷ 20 ಪೋಲಿಷ್ ಯುವಕರನ್ನು ಭಾರತಕ್ಕೆ ಆಹ್ವಾನಿಸಲಾಗುತ್ತದೆ. ಗುಜರಾತಿನಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಪೋಲೆಂಡ್ ನೀಡಿದ ಸಹಾಯವನ್ನೂ ಪ್ರಧಾನಮಂತ್ರಿಯವರು ಸ್ಮರಿಸಿದರು.

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪರಿವರ್ತನಾಶೀಲ ಪ್ರಗತಿಯ ಕುರಿತು ಪ್ರಧಾನಮಂತ್ರಿಯವರು ಮಾತನಾಡಿದರು. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು - ವಿಕಸಿತ ಭಾರತ, ಕುರಿತಾದ ದೃಷ್ಟಿಕೋನಗಳ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. ಪೋಲೆಂಡ್ ಮತ್ತು ಭಾರತವು ಹೊಸ ತಂತ್ರಜ್ಞಾನ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸುತ್ತಿವೆ ಮತ್ತು ಹಸಿರು ಬೆಳವಣಿಗೆಗೆ ಚಾಲನೆ ನೀಡುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಜಾಗತಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಮತ್ತು ಮಾನವೀಯ ಬಿಕ್ಕಟ್ಟುಗಳಲ್ಲಿ ಮೊದಲ ಪ್ರತಿಸ್ಪಂದಕರಾಗಲು ಪ್ರೇರೇಪಿಸುವ "ವಸುಧೈವ ಕುಟುಂಬಕಂ - ಜಗತ್ತು ಒಂದು ಕುಟುಂಬ" - ಎಂಬ ಭಾರತದ ನಂಬಿಕೆಯ ಕುರಿತಾಗಿ  ಪ್ರಧಾನ ಮಂತ್ರಿಗಳು ವಿವರವಾಗಿ ಪ್ರಸ್ತಾಪಿಸಿದರು.

 

*****



(Release ID: 2047608) Visitor Counter : 10