ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಗಳ ಉತ್ತರದ ಕನ್ನಡ ಪಠ್ಯಾಂತರ

Posted On: 02 JUL 2024 9:39PM by PIB Bengaluru

ಸನ್ಮಾನ್ಯ ಸಭಾಧ್ಯಕ್ಷರೇ,

ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನಾನು ಇಲ್ಲಿದ್ದೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ʻವಿಕಸಿತ ಭಾರತʼ(ಅಭಿವೃದ್ಧಿ ಹೊಂದಿದ ಭಾರತ) ಸಂಕಲ್ಪದ ಬಗ್ಗೆ ವಿವರಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳು ಹಲವು ಪ್ರಮುಖ ವಿಚಾರಗಳನ್ನು ಎತ್ತಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳು ನಮ್ಮೆಲ್ಲರಿಗೂ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಾರೆ, ಇದಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅನೇಕ ಗೌರವಾನ್ವಿತ ಸದಸ್ಯರು ನಿನ್ನೆ ಮತ್ತು ಇಂದು ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಂಸದರಾಗಿ ಮೊದಲ ಬಾರಿಗೆ ನಮ್ಮ ನಡುವೆ ಬಂದವರನ್ನು ಮತ್ತು ಸಂಸತ್ತಿನ ಎಲ್ಲಾ ನಿಯಮಗಳಿಗೆ ಬದ್ಧರಾಗಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ ನಮ್ಮ ಕೆಲವು ಗೌರವಾನ್ವಿತ ಸಹೋದ್ಯೋಗಿಗಳನ್ನು ನಾನು ವಿಶೇಷವಾಗಿ ಉಲ್ಲೇಖಿಸಲು ಬಯಸುತ್ತೇನೆ. ಅವರ ನಡವಳಿಕೆಯು ಅವರು ಅನುಭವಿ ಸಂಸದರೇನೋ ಎನ್ನುವಂತಿತ್ತು. ಆದ್ದರಿಂದ, ಅವರು ಸಂಸತ್ತಿಗೆ ಹೊಸಬರಾಗಿದ್ದರೂ, ಅವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ ಮತ್ತು ತಮ್ಮ ಆಲೋಚನೆಗಳೊಂದಿಗೆ ಈ ಚರ್ಚೆಗೆ ಹೆಚ್ಚು ಮೌಲ್ಯ ತಂದಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶವು ವಿಶ್ವದ ಅತಿದೊಡ್ಡ ಚುನಾವಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿ ಜಗತ್ತಿಗೆ ತೋರಿಸಿದೆ. ವಿಶ್ವದ ಅತಿದೊಡ್ಡ ಚುನಾವಣಾ ಅಭಿಯಾನದಲ್ಲಿ ದೇಶದ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಿರಂತರವಾಗಿ ಸುಳ್ಳುಗಳನ್ನು ಪ್ರಚಾರ ಮಾಡಿದರೂ, ಭಾರಿ ಸೋಲನ್ನು ಎದುರಿಸಿದ ಕೆಲವರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಇದು ವಿಶ್ವದ ಅತಿದೊಡ್ಡ ಚುನಾವಣಾ ಅಭಿಯಾನ, ಮತ್ತು ಭಾರತದ ಜನರು ನಮಗೆ ಮೂರನೇ ಬಾರಿಗೆ ದೇಶದ ಸೇವೆ ಮಾಡುವ ಅವಕಾಶವನ್ನು ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ಜಗತ್ತಿಗೆ ಬಹಳ ಮಹತ್ವದ ಮತ್ತು ಹೆಮ್ಮೆಯ ಬೆಳವಣಿಗೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಪ್ರತಿಯೊಂದು ಮಾನದಂಡದಲ್ಲೂ ನಮ್ಮನ್ನು ಪರೀಕ್ಷಿಸಿದ ನಂತರ ದೇಶದ ಜನರು ನಮಗೆ ಈ ಜನಾದೇಶವನ್ನು ನೀಡಿದ್ದಾರೆ. ನಮ್ಮ 10 ವರ್ಷಗಳ ಸಾಧನೆಯ ಪಥವನ್ನು ಜನರು ನೋಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ 'ಜನ ಸೇವಾ ಹಿ ಪ್ರಥಮ್ ಸೇವಾ' (ಜನರ ಸೇವೆಯೇ ಮೊದಲ ಸೇವೆ) ಎಂಬ ಮಂತ್ರದೊಂದಿಗೆ ನಾವು ಅತ್ಯಂತ ಸಮರ್ಪಣೆಯಿಂದ ಕೆಲಸ ಮಾಡುವುದನ್ನು ಅವರು ನೋಡಿದ್ದಾರೆ. ಇದರಿಂದ 10 ವರ್ಷಗಳಲ್ಲಿ 25 ಕೋಟಿ ಬಡವರನ್ನು ಬಡತನದಿಂದ ಹೊರತರಲು ಸಾಧ್ಯವಾಗಿದೆ. ಸ್ವತಂತ್ರ ಭಾರತದ ಅವಧಿಯಲ್ಲಿ, ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜನರನ್ನು ಬಡತನದಿಂದ ಹೊರತರುವ ಈ ಯಶಸ್ವಿ ಪ್ರಯತ್ನವೇ ಈ ಚುನಾವಣೆಯಲ್ಲಿ ನಮಗೆ ಆಶೀರ್ವಾದವಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

2014ರಲ್ಲಿ ನಾವು ಮೊದಲ ಬಾರಿಗೆ ಗೆದ್ದಾಗ, ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದಾಗಿ ಚುನಾವಣಾ ಪ್ರಚಾರದ ಸಮಯದಲ್ಲೇ ಹೇಳಿದ್ದೆವು. ಮತ್ತು ಇಂದು ನಮ್ಮ ಸರ್ಕಾರ ಭ್ರಷ್ಟಾಚಾರದಿಂದ ಬಳಲುತ್ತಿದ್ದ ದೇಶದ ಸಾಮಾನ್ಯ ಜನರನ್ನು ಅದರಿಂದ ಮುಕ್ತಗೊಳಿಸಿದೆ ಎಂಬ ಹೆಮ್ಮೆ ನನಗಿದೆ. ಭ್ರಷ್ಟಾಚಾರವು ದೇಶವನ್ನು ಗೆದ್ದಲುಗಳಂತೆ ಟೊಳ್ಳಾಗಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಭ್ರಷ್ಟಾಚಾರದ ಬಗ್ಗೆ ನಮ್ಮ ಶೂನ್ಯ ಸಹಿಷ್ಣುತೆಯ ನೀತಿಯನ್ನು ದೇಶವು ಆಶೀರ್ವದಿಸಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು ವಿಶ್ವಾದ್ಯಂತ ಭಾರತದ ಖ್ಯಾತಿ ಹೆಚ್ಚಾಗಿದೆ. ಇಂದು, ಭಾರತವನ್ನು ಜಾಗತಿಕವಾಗಿ ಗೌರವಿಸಲಾಗುತ್ತಿದೆ ಮತ್ತು ಜಗತ್ತು ಭಾರತವನ್ನು ನೋಡುವ ವಿಧಾನದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶ ಮೊದಲು, ಭಾರತ ಮೊದಲು ಎಂಬುದೇ ನಮ್ಮ ಏಕೈಕ ಗುರಿ ಎನ್ನುವುದನ್ನು ದೇಶದ ಜನರು ನೋಡಿದ್ದಾರೆ. ನಮ್ಮ ಪ್ರತಿಯೊಂದು ನೀತಿ, ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಕ್ರಿಯೆಯನ್ನು ಒಂದೇ ಮಾನದಂಡದಿಂದ ಅಳೆಯಲಾಗಿದೆ, ಅದೆಂದರೆ: ಭಾರತ ಮೊದಲು. ಭಾರತಕ್ಕೆ ಮೊದಲ ಸ್ಥಾನ ನೀಡುವ ಮನೋಭಾವದಿಂದ, ನಾವು ದೇಶದಲ್ಲಿ ಅಗತ್ಯ ಸುಧಾರಣೆಗಳನ್ನು ಮುಂದುವರಿಸಿದ್ದೇವೆ. ಕಳೆದ 10 ವರ್ಷಗಳಿಂದ, ನಮ್ಮ ಸರ್ಕಾರವು ʻಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್ʼ ಮಂತ್ರದೊಂದಿಗೆ ದೇಶದ ಎಲ್ಲಾ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು ಭಾರತದ ಸಂವಿಧಾನದ ತತ್ವಗಳಿಗೆ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ. ದೇಶಕ್ಕೆ ಸೇವೆ ಸಲ್ಲಿಸುವಾಗ ಎಲ್ಲಕ್ಕಿಂತ ಹೆಚ್ಚಾಗಿ ʻಸರ್ವಪಂಥ ಸಮಭಾವ್ʼ (ಎಲ್ಲಾ ಧರ್ಮಗಳಿಗೆ ಸಮಾನ ಗೌರವ) ಮನೋಭಾವವನ್ನು ಇಟ್ಟುಕೊಂಡಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ದೇಶವು ದೀರ್ಘಕಾಲದಿಂದ ತುಷ್ಟೀಕರಣದ ರಾಜಕೀಯವನ್ನು ನೋಡಿದೆ; ಈ ದೇಶವು ದೀರ್ಘಕಾಲದಿಂದ ತುಷ್ಟೀಕರಣದ ಆಡಳಿತ ಮಾದರಿಯನ್ನು ಕಂಡಿದೆ. ಮೊದಲ ಬಾರಿಗೆ, ನಾವು ಸಂಪೂರ್ಣ ಜಾತ್ಯತೀತತೆಯನ್ನು ಪ್ರಯತ್ನಿಸಿದ್ದೇವೆ, ತುಷ್ಟೀಕರಣದ ಜಾಗದಲ್ಲಿ ತೃಪ್ತಿಯನ್ನು ತಂದಿದ್ದೇವೆ. ನಾವು ತೃಪ್ತಿಯ ಬಗ್ಗೆ ಮಾತನಾಡುವಾಗ, ಪ್ರತಿ ಯೋಜನೆಯ ಅನುಷ್ಠಾನದ ಪರಿಪೂರ್ಣತೆಯನ್ನು ಅದು ಸೂಚಿಸುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ನಮ್ಮ ಆಡಳಿತದ ಪರಿಕಲ್ಪನೆಯು ಇದರಿಂದ ಈಡೇರುತ್ತದೆ. ಮತ್ತು ನಾವು ಯೋಜನೆಗಳ ಅನುಷ್ಠಾನದಲ್ಲಿ ಪರಿಪೂರ್ಣತೆಯ ತತ್ವವನ್ನು ಅನುಸರಿಸಿದಾಗ, ನೈಜ ಸಾಮಾಜಿಕ ನ್ಯಾಯದ ಸಾಧನೆ ಸಾಧ್ಯವಾಗುತ್ತದೆ. ನೈಜ ಜಾತ್ಯತೀತತೆಯನ್ನು ಪರಿಪೂರ್ಣತೆಯಿಂದ ಸಾಧಿಸಬಹುದಾಗಿದೆ, ಮತ್ತು ಅದಕ್ಕಾಗಿಯೇ ದೇಶದ ಜನರು ನಮಗೆ ಮೂರನೇ ಬಾರಿಗೆ ಈ ಜನಾದೇಶವನ್ನು ನೀಡಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ತುಷ್ಟೀಕರಣವು ಈ ದೇಶವನ್ನು ನಾಶಪಡಿಸಿದೆ. ಅದಕ್ಕಾಗಿಯೇ ನಾವು ಸರ್ವರಿಗೂ ನ್ಯಾಯದ ಮತ್ತು ಯಾರನ್ನೂ ತುಷ್ಟೀಕರಣ ಮಾಡದ ತತ್ವವನ್ನು ಅನುಸರಿಸಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ 10 ವರ್ಷಗಳ ಕೆಲಸವನ್ನು ಗಮನಿಸಿದ ಮತ್ತು ಮೌಲ್ಯಮಾಪನ ಮಾಡಿದ ನಂತರ ಭಾರತದ ಜನರು ನಮ್ಮನ್ನು ಬೆಂಬಲಿಸಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ದೇಶದ 140 ಕೋಟಿ ಜನರ ಸೇವೆ ಮಾಡಲು ನಮಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತದ ಜನರು ಎಷ್ಟು ಪ್ರಬುದ್ಧರು, ಅವರು ಎಷ್ಟು ನ್ಯಾಯಯುತವಾಗಿ ಮತ್ತು ಉನ್ನತ ಆದರ್ಶಗಳೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಾರೆ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ. ಇದರ ಪರಿಣಾಮವಾಗಿ, ನಾವು ಈಗ ನಿಮ್ಮ ಮುಂದೆ ಇದ್ದೇವೆ, ಮೂರನೇ ಬಾರಿಗೆ ದೇಶದ ಜನರ ಸೇವೆ ಮಾಡಲು ವಿನಮ್ರತೆಯಿಂದ ಸಿದ್ಧರಾಗಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶದ ಜನರು ನಮ್ಮ ನೀತಿಗಳನ್ನು ನೋಡಿದ್ದಾರೆ. ಜನರು ನಮ್ಮ ಉದ್ದೇಶಗಳನ್ನು ಮತ್ತು ನಮ್ಮ ಸಮರ್ಪಣೆಯನ್ನು ನಂಬಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಚುನಾವಣೆ ವೇಳೆ, ನಾವು ದೊಡ್ಡ ಸಂಕಲ್ಪದೊಂದಿಗೆ ಜನರ ಮುಂದೆ ಹೋದೆವು, ಅವರ ಆಶೀರ್ವಾದವನ್ನು ಕೋರಿದೆವು. ನಮ್ಮ ʻವಿಕಸಿತ ಭಾರತʼ ಸಂಕಲ್ಪಕ್ಕಾಗಿ ನಾವು ಜನರ ಆಶೀರ್ವಾದ ಕೋರಿದೆವು. ನಾವು ಸದುದ್ದೇಶ ಮತ್ತು ಸಾರ್ವಜನಿಕ ಕಲ್ಯಾಣದ ಗುರಿಯೊಂದಿಗೆ ʻವಿಕಸಿತ ಭಾರತʼವನ್ನು ನಿರ್ಮಿಸುವ ಬದ್ಧತೆಯೊಂದಿಗೆ ಜನರನ್ನು ಸಂಪರ್ಕಿಸಿದೆವು. ʻವಿಕಸಿತ ಭಾರತʼಕ್ಕಾಗಿ ನಮ್ಮ ಸಂಕಲ್ಪವನ್ನು ಸಾರ್ವಜನಿಕರು ಅನುಮೋದಿಸಿದ್ದಾರೆ ಮತ್ತು ಮತ್ತೊಮ್ಮೆ ರಾಷ್ಟ್ರದ ಸೇವೆ ಮಾಡಲು ನಮಗೆ ಅವಕಾಶ ನೀಡಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶವು ಅಭಿವೃದ್ಧಿ ಹೊಂದಿದಾಗ, ಲಕ್ಷಾಂತರ ಜನರ ಕನಸುಗಳು ಈಡೇರುತ್ತವೆ. ದೇಶವು ಅಭಿವೃದ್ಧಿ ಹೊಂದಿದಾಗ, ಲಕ್ಷಾಂತರ ಜನರ ಸಂಕಲ್ಪಗಳು ಸಾಕಾರಗೊಳ್ಳುತ್ತವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶವು ಅಭಿವೃದ್ಧಿ ಹೊಂದಿದರೆ, ಭವಿಷ್ಯದ ಪೀಳಿಗೆಗೆ ಅವರ ಕನಸುಗಳನ್ನು ನನಸಾಗಿಸಲು ಬಲವಾದ ಬುನಾದಿಯನ್ನು ಹಾಕಬಹುದಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ʻವಿಕಸಿತ ಭಾರತʼದ ನೇರ ಪ್ರಯೋಜನವೆಂದರೆ ನಮ್ಮ ನಾಗರಿಕರ ಘನತೆ ಮತ್ತು ಅವರ ಜೀವನದ ಗುಣಮಟ್ಟದಲ್ಲಿ ಆಗಿರುವ ಸುಧಾರಣೆ. ಇದು ಸ್ವಾಭಾವಿಕವಾಗಿ ʻವಿಕಸಿತ ಭಾರತʼದೊಂದಿಗೆ ಲಕ್ಷಾಂತರ ನಾಗರಿಕರ ಹಣೆಬರಹವನ್ನು ನಿರ್ಧರಿಸುತ್ತದೆ. ನನ್ನ ದೇಶದ ಸಾಮಾನ್ಯ ನಾಗರಿಕರು ಸ್ವಾತಂತ್ರ್ಯದ ನಂತರ ಇದಕ್ಕಾಗಿ ಬಹಳ ದಿನದಿಂದ ಹಂಬಲಿಸುತ್ತಿದ್ದರು.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತವು ಅಭಿವೃದ್ಧಿ ಹೊಂದಿದಾಗ, ನಮ್ಮ ಹಳ್ಳಿಗಳು ಮತ್ತು ನಗರಗಳ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ. ಹಳ್ಳಿಗಳಲ್ಲಿನ ಜೀವನದ ಘನತೆ ಮತ್ತು ಜೀವನಮಟ್ಟವೂ ಹೆಚ್ಚುತ್ತದೆ, ಅಭಿವೃದ್ಧಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತವೆ. ನಮ್ಮ ನಗರಗಳ ಅಭಿವೃದ್ಧಿಯು ʻವಿಕಸಿತ ಭಾರತʼದಲ್ಲಿ ಒಂದು ಭಾಗವಾಗುತ್ತದೆ ಮತ್ತು ಜಾಗತಿಕ ಅಭಿವೃದ್ಧಿಯ ಪ್ರಯಾಣದಲ್ಲಿ ಭಾರತದ ನಗರಗಳು ಸಮಾನವಾಗಿ ನಿಲ್ಲಬೇಕು ಎಂಬುದು ನಮ್ಮ ಕನಸಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ʻವಿಕಸಿತ ಭಾರತʼ ಎಂದರೆ ಲಕ್ಷಾಂತರ ನಾಗರಿಕರಿಗೆ ಲಕ್ಷಾಂತರ ಅವಕಾಶಗಳು ಲಭ್ಯವಿರುವುದು ಎಂದರ್ಥ. ಅನೇಕ ಅವಕಾಶಗಳು ಲಭ್ಯವಾಗುತ್ತವೆ, ಮತ್ತು ಅವರು ತಮ್ಮ ಕೌಶಲ್ಯಗಳು, ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಬಹುದು.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು, ನಾನು ನಿಮ್ಮ ಮೂಲಕ ದೇಶವಾಸಿಗಳಿಗೆ ಭರವಸೆ ನೀಡುವುದೇನೆಂದರೆ, ʻವಿಕಸಿತ ಭಾರತʼದ ಸಂಕಲ್ಪವನ್ನು ಸಂಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಈಡೇರಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಸಮಯದ ಪ್ರತಿ ಕ್ಷಣ ಮತ್ತು ನಮ್ಮ ದೇಹದ ಪ್ರತಿಯೊಂದು ಕಣವು ನಮ್ಮ ದೇಶವಾಸಿಗಳಿಗೆ ʻವಿಕಸಿತ ಭಾರತʼದ ಕನಸನ್ನು ಈಡೇರಿಸಲು ಸಮರ್ಪಿತವಾಗಿರುತ್ತದೆ. ನಾವು ದೇಶದ ಜನರಿಗೆ 2047ಕ್ಕೆ 24×7 ಭರವಸೆ ನೀಡಿದ್ದೆವು. ಇಂದು, ನಾವು ಖಂಡಿತವಾಗಿಯೂ ಈ ಕಾರ್ಯವನ್ನು ಸಾಧಿಸುತ್ತೇವೆ ಎಂದು ನಾನು ಈ ಸದನದಲ್ಲಿ ಪುನರುಚ್ಚರಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

2014ರ ದಿನಗಳನ್ನು ನೆನಪಿಸಿಕೊಳ್ಳಿ. 2014ರ ಆ ದಿನಗಳ ಬಗ್ಗೆ ನಾವು ಮೆಲುಕು ಹಾಕುವುದಾದರೆ, ನಮ್ಮ ದೇಶದ ಜನರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದರು. ರಾಷ್ಟ್ರವು ಹತಾಶೆಯ ಆಳಕ್ಕೆ ಮುಳುಗುತ್ತಿದ್ದುದನ್ನು ನಾವು ಅರಿಯಬಹುದು. 2014 ಕ್ಕಿಂತ ಮೊದಲು ದೇಶವು ಅನುಭವಿಸಿದ ಅತಿದೊಡ್ಡ ನಷ್ಟವೆಂದರೆ ಜನರ ವಿಶ್ವಾಸವನ್ನು ಕಳೆದುಕೊಂಡದ್ದು. ವಿಶ್ವಾಸ ಮತ್ತು ಆತ್ಮವಿಶ್ವಾಸ ಕಳೆದುಹೋದಾಗ, ಒಬ್ಬ ವ್ಯಕ್ತಿ, ಸಮಾಜ ಅಥವಾ ದೇಶವು ಎದ್ದು ನಿಲ್ಲುವುದು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಜನಸಾಮಾನ್ಯರ ಒಕ್ಕೊರಲ ಮಾತೆಂದರೆ – इस देश का कुछ हो नहीं सकता (ಈ  ದೇಶದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ). 2014ಕ್ಕಿಂತ ಮೊದಲು ಎಲ್ಲೆಡೆ ನಾವು: "ಈ ದೇಶದಲ್ಲಿ ಏನೂ ಮಾಡಲು ಸಾಧ್ಯವಿಲ್ಲ" ಎಂಬ ಐದು ಪದಗಳನ್ನು ಕೇಳಿದ್ದೇವೆ. ಆ ಮಾತುಗಳು 2014ಕ್ಕಿಂತ ಮುಂಚಿನ ಭಾರತದ ಹೆಗ್ಗುರುತಾಗಿದ್ದವು. ಪತ್ರಿಕೆಗಳ ತುಂಬಾ ನಿತ್ಯ  ನೂರಾರು ಕೋಟಿ ರೂಪಾಯಿಗಳ ಹಗರಣಗಳ ಸುದ್ದಿಗಳೇ ತುಂಬಿರುತ್ತಿದ್ದವು; ಹಳೆಯ ಹಗರಣಗಳೊಂದಿಗೆ ಸ್ಪರ್ಧಿಸುವ ಮತ್ತೊಂದು ಹಗರಣಗಳ ಸುದ್ದಿಗಳು ಇರುತ್ತಿದ್ದವು. ಇದು ಹಗರಣಕೋರರು ನಡೆಸುತ್ತಿರುವ ಹಗರಣಗಳ ಅವಧಿಯಾಗಿತ್ತು. ದೆಹಲಿಯಿಂದ ಕಳುಹಿಸಲಾದ ಪ್ರತಿ ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ನೈಜ ಫಲಾನುಭವಿಗಳನ್ನು ತಲುಪುತ್ತಿತ್ತು ಎಂಬ ಅಂಶವನ್ನು ನಿರ್ಲಜ್ಜೆಯಿಂದ ಒಪ್ಪಿಕೊಳ್ಳಲಾಗಿತ್ತು. ಪ್ರತಿ ರೂಪಾಯಿಯಲ್ಲಿ 85 ಪೈಸೆಯ ಹಗರಣವಿತ್ತು. ಭ್ರಷ್ಟಾಚಾರದ ಈ ಯುಗವು ದೇಶವನ್ನು ಹತಾಶೆಗೆ ದೂಡಿತ್ತು. ನೀತಿಗಳ ವಿಚಾರದಲ್ಲಿ ನಿಷ್ಕ್ರಿಯತೆ ಇತ್ತು. ಸ್ವಜನಪಕ್ಷಪಾತವು ಎಷ್ಟು ವ್ಯಾಪಕವಾಗಿ ಹರಡಿತ್ತೆಂದರೆ, ಜನಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದರು. ತಮಗೆ ಯಾರದ್ದಾದರೂ ಶಿಫಾರಸು ಇಲ್ಲದಿದ್ದರೆ, ತಮ್ಮ ಜೀವನವು ನಿಂತ ನೀರಾಗುತ್ತದೆ ಎಂದು ನಂಬಿದ್ದರು. ಅಂತಹ ಪರಿಸ್ಥಿತಿ ಇತ್ತು. ಬಡವರು ಮನೆ ಪಡೆಯಲು ಸಾವಿರಾರು ರೂಪಾಯಿ ಲಂಚ ಕೊಡಬೇಕಾಗಿತ್ತು.

ಸನ್ಮಾನ್ಯ ಸಭಾಧ್ಯಕ್ಷರೇ,

ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯಲು ಜನರು ಸಂಸದರ ಕಚೇರಿಗಳ ಸುತ್ತಲೂ ಓಡಬೇಕಾಗಿತ್ತು, ಮತ್ತು ಆಗಲೂ ಲಂಚ ನೀಡದೆ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಉಚಿತ ಪಡಿತರವೂ ಅನಿಶ್ಚಿತವಾಗಿತ್ತು; ಜನರು ತಮಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಪಡೆಯಲು ಲಂಚ ನೀಡಬೇಕಾಗಿತ್ತು. ನಮ್ಮ ಅನೇಕ ಸಹೋದರ ಸಹೋದರಿಯರು ಎಷ್ಟು ಹತಾಶರಾಗಿದ್ದರೆಂದರೆ ಅವರು ತಮ್ಮ ಅದೃಷ್ಟವನ್ನು ದೂಷಿಸುತ್ತಿದ್ದರು, ತಮ್ಮ ಹಣೆಬರಹಕ್ಕೆ ಇಷ್ಟೇ ಎಂದುಕೊಂಡಿದ್ದರು.

ಸನ್ಮಾನ್ಯ ಸಭಾಧ್ಯಕ್ಷರೇ,

2014ರ ಹಿಂದಿನ ದಿನಗಳಲ್ಲಿ ಆ ಐದು ಪದಗಳು ಭಾರತೀಯರ ಮನಸ್ಸಿನಲ್ಲಿ ಬೇರೂರಿದ್ದವು. ಸಮಾಜ ಹತಾಶೆಯಲ್ಲಿ ಮುಳುಗಿತ್ತು. ಅಂತಹ ಸಮಯದಲ್ಲಿ, ದೇಶದ ಜನರು ತಮ್ಮ ಸೇವೆ ಮಾಡಲು ನಮ್ಮನ್ನು ಆಯ್ಕೆ ಮಾಡಿದರು, ಮತ್ತು ಆ ಕ್ಷಣವು ಪರಿವರ್ತನೆಯ ಹೊಸ ಯುಗಾರಂಭದ ಸೂಚಿಯಾಗಿತ್ತು. ಕಳೆದ 10 ವರ್ಷಗಳಲ್ಲಿ, ನನ್ನ ಸರ್ಕಾರವು ಅನೇಕ ಯಶಸ್ಸು ಮತ್ತು ಸಾಧನೆಗಳನ್ನು ಮಾಡಿದೆ ಎಂದು ನಾನು ಹೇಳಲಿಚ್ಛಿಸುತ್ತೇನೆ. ಆದರೆ ಎಲ್ಲರನ್ನೂ ಸಬಲೀಕರಣಗೊಳಿಸಿದ ಒಂದು ಸಾಧನೆಯೆಂದರೆ, ದೇಶವು ಭರವಸೆ ಮತ್ತು ವಿಶ್ವಾಸ ಗಳಿಸಿದೆ. ಹತಾಶೆಯ ಗುಂಡಿಯಿಂದ ಹೊರಬಂದಿದೆ. ರಾಷ್ಟ್ರದ ಆತ್ಮವಿಶ್ವಾಸವು ಹೊಸ ಎತ್ತರವನ್ನು ತಲುಪಿದೆ. ಮತ್ತು ಇದರ ಪರಿಣಾಮವಾಗಿ, ಒಂದು ಕಾಲದಲ್ಲಿ ದೇಶದ ಯುವಕರ ನಿಘಂಟಿನ ಭಾಗವಾಗಿದ್ದ ಪದಗಳು ಕಣ್ಮರೆಯಾಗಲು ಪ್ರಾರಂಭಿಸಿವೆ. ಕ್ರಮೇಣ, 2014ಕ್ಕಿಂತ ಮೊದಲು ಮಾಡಲು ಸಾಧ್ಯವಾಗದ್ದನ್ನು ಈಗ ಮಾಡಬಹುದು; ಈ ದೇಶದಲ್ಲಿ ಎಲ್ಲವೂ ಸಾಧ್ಯ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿದೆ. ನಾವು ಈ ವಿಶ್ವಾಸವನ್ನು ತುಂಬಿದ್ದೇವೆ. ನಾವು ಶರವೇಗದ 5ಜಿ ಸಂಪರ್ಕ ಸೇವೆಯನ್ನು ಆರಂಭಿಸಿದ್ದೇವೆ, ಮತ್ತು ಇಂದು ತ್ವರಿತ 5ಜಿ ರೋಲ್ಔಟ್‌ನಿಂದಾಗಿ ಭಾರತವು ಏನು ಬೇಕಾದರೂ ಸಾಧಿಸಬಹುದು ಎಂದು ದೇಶವು ಹೆಮ್ಮೆಯಿಂದ ಹೇಳುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಲ್ಲಿದ್ದಲು ಹಗರಣಗಳಿಂದ ದೊಡ್ಡ ದೊಡ್ಡ ಹೆಸರುಗಳು ಕಳಂಕಿತವಾಗಿದ್ದ ಸಮಯವಿತ್ತು. ಇಂದು, ಕಲ್ಲಿದ್ದಲು ಉತ್ಪಾದನೆ ದಾಖಲೆಯ ಮಟ್ಟವನ್ನು ತಲುಪಿದೆ. ಭಾರತವು ಏನು ಬೇಕಾದರೂ ಸಾಧಿಸಬಹುದು ಎಂದು ದೇಶವು ಈಗ ಹೆಮ್ಮೆಯಿಂದ ಹೇಳಲು ಕಾರಣ ಇದೇ ಆಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

2014ರ ಮೊದಲು ಫೋನ್ ಬ್ಯಾಂಕಿಂಗ್ ಮೂಲಕ ಭಾರಿ ಬ್ಯಾಂಕ್ ವಂಚನೆಗಳು ನಡೆದಿದ್ದವು. ಬ್ಯಾಂಕ್ ಖಜಾನೆಯನ್ನು ವೈಯಕ್ತಿಕ ಆಸ್ತಿಯಂತೆ ಲೂಟಿ ಮಾಡಲಾಯಿತು.

ಸನ್ಮಾನ್ಯ ಸಭಾಧ್ಯಕ್ಷರೇ,

2014ರ ನಂತರ, ನೀತಿಗಳಲ್ಲಿನ ಬದಲಾವಣೆಗಳು, ನಿರ್ಧಾರ ಕೈಗೊಳ್ಳುವ ವೇಗ ಮತ್ತು ಸತ್ಯಾಸತ್ಯತೆಗೆ ಸಮರ್ಪಣೆಯ ಪರಿಣಾಮವಾಗಿ ಭಾರತೀಯ ಬ್ಯಾಂಕುಗಳು ವಿಶ್ವದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇಂದು, ಭಾರತೀಯ ಬ್ಯಾಂಕುಗಳು ಅತ್ಯಂತ ಲಾಭದಾಯಕವಾಗಿವೆ ಮತ್ತು ಜನರಿಗೆ ಸೇವೆ ಸಲ್ಲಿಸುತ್ತಿವೆ.

ಸನ್ಮಾನ್ಯ ಸಭಾಧ್ಯಕ್ಷರೇ,

2014ಕ್ಕೂ ಮೊದಲು ಭಯೋತ್ಪಾದಕರು ಸಿಕ್ಕ ಸಿಕ್ಕಲ್ಲಿ ದಾಳಿ ನಡೆಸುತ್ತಿದ್ದರು. 2014ರ ಬಳಿಕ ಪರಿಸ್ಥಿತಿ ಬದಲಾಯಿತು. 2014ಕ್ಕೂ ಮೊದಲು ಮುಗ್ಧ ಜನರು ಬಲಿಯಾದರು, ಭಾರತದ ಮೂಲೆ ಮೂಲೆಯನ್ನು ಗುರಿಯಾಗಿಸಲಾಗಿತ್ತು ಮತ್ತು ಸರ್ಕಾರಗಳು ಮೌನವಾಗಿದ್ದವು. ಅವರು ಮಾತನಾಡಲು ಸಹ ಸಿದ್ಧರಿರಲಿಲ್ಲ. ಇಂದು, 2014ರ ನಂತರ, ಭಾರತವು ಪ್ರತಿದಾಳಿ ನಡೆಸುತ್ತದೆ, ಸರ್ಜಿಕಲ್ ಸ್ಟ್ರೈಕ್ ನಡೆಸುತ್ತದೆ, ವಾಯು ದಾಳಿಗಳನ್ನು ನಡೆಸುತ್ತದೆ ಮತ್ತು ಭಯೋತ್ಪಾದಕರ ಮಾಸ್ಟರ್ ಮೈಂಡ್‌ಗಳಿಗೆ ಭಾರತವು ತನ್ನ ಸಾಮರ್ಥ್ಯವನ್ನು ತೋರುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು, ಭಾರತವು ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು ಎಂದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಗೊತ್ತಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕೆಲವರು ವೋಟ್‌ಬ್ಯಾಂಕ್ ರಾಜಕೀಯದ ಸಾಧನವಾಗಿ ಬಳಸಿದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ಕಸಿದುಕೊಂಡಿತ್ತು. ಭಾರತದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರದ ಗಡಿಗಳನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಸಂವಿಧಾನವನ್ನು ಹಿಡಿದುಕೊಂಡು ನರ್ತಿಸಿದವರಿಗೆ, ಅದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತರಲು ಧೈರ್ಯವನ್ನು ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ. ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದರು. 370ನೇ ವಿಧಿಯ ಯುಗದಲ್ಲಿ, ನಮ್ಮ ಪಡೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು, ಮತ್ತು ಜನರು ಹತಾಶೆಯಲ್ಲಿ ಮುಳುಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುವಂತಾಗಿತ್ತು. ಇಂದು, 370ನೇ ವಿಧಿಯ ಗೋಡೆಯನ್ನು ನೆಲಸಮಗೊಳಿಸಲಾಗಿದೆ, ಕಲ್ಲು ತೂರಾಟ ನಿಂತಿದೆ, ಪ್ರಜಾಪ್ರಭುತ್ವವು ಬಲವಾಗಿದೆ ಮತ್ತು ಜನರು ಭಾರತೀಯ ಸಂವಿಧಾನ, ಭಾರತೀಯ ತ್ರಿವರ್ಣ ಧ್ವಜ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಹೆಚ್ಚು ನಂಬುತ್ತಿದ್ದಾರೆ. ಅವರು ಉತ್ಸಾಹದಿಂದ ಮತ ಚಲಾಯಿಸಲು ಮುಂದೆ ಬರುತ್ತಿದ್ದಾರೆ, ಮತ್ತು ಇದು ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ವಿಶ್ವಾಸ ಮತ್ತು ನಂಬಿಕೆಯನ್ನು 140 ಕೋಟಿ ನಾಗರಿಕರಲ್ಲಿ ತುಂಬಿದಾಗ, ಅದು ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗುತ್ತದೆ. ಈ ವಿಶ್ವಾಸವು ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಮಾರ್ಪಟ್ಟಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ʻವಿಕಸಿತ ಭಾರತʼದ ಈ ವಿಶ್ವಾಸವೇ ನಮ್ಮ ಸಂಕಲ್ಪ ಸಾಧನೆಗೆ ನಂಬಿಕೆಯಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶದಲ್ಲಿ ಜನರ ಭಾವನೆಗಳು ಉತ್ತುಂಗಕ್ಕೇರಿದ್ದವು. ಅಗಾಧ ಹುರುಪು – ಉತ್ಸಾಹ ಮನೆಮಾಡಿತ್ತು, ನಾವು ಸ್ವಾತಂತ್ರ್ಯವನ್ನು ಸಾಧಿಸುತ್ತೇವೆ ಎಂಬ ವಿಶ್ವಾಸ ಮೂಡಿತ್ತು - ಇಂದು, ಅದೇ ವಿಶ್ವಾಸ ಕೋಟ್ಯಂತರ ಜನರಲ್ಲಿ ಮರಳಿ ಮೂಡಿದೆ. ಈ ವಿಶ್ವಾಸದಿಂದಾಗಿ, ಈ ಚುನಾವಣೆಯಲ್ಲಿ ʻವಿಕಸಿತ ಭಾರತʼಕ್ಕೆ ಅಡಿಪಾಯ ಹಾಕಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಂಡ ಅದೇ ಉತ್ಸಾಹವನ್ನು ಈಗ ʻವಿಕಸಿತ ಭಾರತʼದ ಕನಸನ್ನು ನನಸಾಗಿಸುವಲ್ಲಿ ಕಾಣಬಹುದಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು, ಭಾರತದ ಗುರಿಗಳು ಅಗಾಧವಾಗಿವೆ, ಮತ್ತು ಈ ಹತ್ತು ವರ್ಷಗಳಲ್ಲಿ, ಭಾರತವು ತನ್ನೊಂದಿಗೆ ತಾನು ಸ್ಪರ್ಧಿಸುವ, ನಮ್ಮ ಹಳೆಯ ದಾಖಲೆಗಳನ್ನು ಮುರಿಯುವ ಮತ್ತು ನಮ್ಮ ಅಭಿವೃದ್ಧಿಯ ಪ್ರಯಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸ್ಥಾನಕ್ಕೆ ತಲುಪಿದೆ. ಈ 10 ವರ್ಷಗಳಲ್ಲಿ ಭಾರತವು ತಲುಪಿದ ಅಭಿವೃದ್ಧಿಯ ಉತ್ತುಂಗವು ನಮ್ಮ ಸ್ಪರ್ಧೆಗೆ ಮಾನದಂಡವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಸಾಧಿಸಿದ ವೇಗ ಕಡಿಮೆಯಾಗಬಾರದು ಮತ್ತು ನಾವು ದೇಶದ ಆಕಾಂಕ್ಷೆಗಳನ್ನು ತ್ವರಿತವಾಗಿ ಪೂರೈಸುತ್ತೇವೆ ಎಂಬ ವಿಶ್ವಾಸವಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು ಪ್ರತಿಯೊಂದು ಯಶಸ್ಸನ್ನು, ಪ್ರತಿಯೊಂದು ವಲಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ ಹತ್ತು ವರ್ಷಗಳಲ್ಲಿ ನಾವು ಭಾರತದ ಆರ್ಥಿಕತೆಯನ್ನು 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕೊಂಡೊಯ್ದಿದ್ದೇವೆ. ಈಗ ನಾವು ಮುಂದಿನ ಹಂತದತ್ತ ವೇಗವಾಗಿ ಧಾವಿಸುತ್ತಿದ್ದೇವೆ, ಭಾರತೀಯ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲು ನಾವು ನಿರ್ಧರಿಸಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ ಹತ್ತು ವರ್ಷಗಳಲ್ಲಿ, ನಾವು ಭಾರತವನ್ನು ಮೊಬೈಲ್ ಫೋನ್‌ಗಳ ಪ್ರಮುಖ ತಯಾರಕ, ಮೊಬೈಲ್ ಫೋನ್‌ಗಳ ಪ್ರಮುಖ ರಫ್ತುದಾರರನ್ನಾಗಿ ಮಾಡಿದ್ದೇವೆ. ಈಗ, ನಾವು ಅರೆವಾಹಕಗಳು (ಸೆಮಿಕಂಡಕ್ಟರ್‌) ಮತ್ತು ಇತರ ಕ್ಷೇತ್ರಗಳಲ್ಲಿ ಅದೇ ಯಶಸ್ಸನ್ನು ಸಾಧಿಸಲಿದ್ದೇವೆ. ಪ್ರಪಂಚದಾದ್ಯಂತದ ಮಹತ್ವದ ಕಾರ್ಯಗಳಲ್ಲಿ ಬಳಸಲಾಗುವ ʻಚಿಪ್ಸ್ʼಗಳನ್ನು ನನ್ನ ಭಾರತದ ಮಣ್ಣಿನಿಂದ ತಯಾರಿಸಲಾಗುತ್ತದೆ, ಇದು ಭಾರತೀಯ ಯುವಕರ ಬುದ್ಧಿವಂತಿಕೆಯ ಫಲ, ಭಾರತೀಯ ಯುವಕರ ಕಠಿಣ ಪರಿಶ್ರಮದ ಫಲ - ನಮ್ಮ ಹೃದಯದಲ್ಲಿ ಈ ವಿಶ್ವಾಸವಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು ಆಧುನಿಕ ಭಾರತದತ್ತ ಮುನ್ನಡೆಯುತ್ತೇವೆ, ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತೇವೆ, ಆದರೂ ನಮ್ಮ ಬೇರುಗಳು ತಳಹದಿಯಲ್ಲೇ ಉಳಿಯಲಿವೆ, ನಮ್ಮ ಪಾದಗಳು ಸಾಮಾನ್ಯ ನಾಗರಿಕರ ಜೀವನದೊಂದಿಗೆ ಸಂಪರ್ಕ ಹೊಂದಿರುತ್ತವೆ. ನಾವು ನಾಲ್ಕು ಕೋಟಿ ಬಡವರಿಗೆ ಮನೆಗಳನ್ನು ನಿರ್ಮಿಸಿದ್ದೇವೆ. ಈ ಅಧಿಕಾರಾವಧಿಯಲ್ಲಿ, ನಾವು ಇನ್ನೂ ಮೂರು ಕೋಟಿ ಮನೆಗಳನ್ನು ತ್ವರಿತವಾಗಿ ನಿರ್ಮಿಸುತ್ತೇವೆ, ಈ ದೇಶದಲ್ಲಿ ಯಾರೂ ಮನೆ ಇಲ್ಲದೆ ವಾಸಿಸದಂತೆ ಖಚಿತಪಡಿಸಿಕೊಳ್ಳುತ್ತೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ ಹತ್ತು ವರ್ಷಗಳಲ್ಲಿ, ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ನಮ್ಮ ದೇಶದ ಸಹೋದರಿಯರನ್ನು ಉದ್ಯಮಿಗಳನ್ನಾಗಿ ಮಾಡುವಲ್ಲಿ ನಾವು ಗಮನಾರ್ಹ ಯಶಸ್ಸನ್ನು ಕಂಡಿದ್ದೇವೆ. ಈಗ, ನಾವು ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇವೆ. ನಮ್ಮ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೋದರಿಯರ ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಆದ್ದರಿಂದ ಅಲ್ಪಾವಧಿಯಲ್ಲಿ, ನಾವು ಮೂರು ಕೋಟಿ ಸಹೋದರಿಯರನ್ನು 'ಲಕ್ಷಾಧಿಪತಿ ದೀದಿ'ಯರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾನು ಇದನ್ನು ಈ ಹಿಂದೆಯೂ ಹೇಳಿದ್ದೇನೆ, ಮತ್ತು ಇಂದು ಪುನರುಚ್ಚರಿಸುತ್ತೇನೆ - ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಪ್ರಯತ್ನ ಮಾಡುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಫಲಿತಾಂಶಗಳನ್ನು ಜನರಿಗೆ ತಲುಪಿಸುತ್ತೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಘಟನೆಯಾಗಿದೆ. ಸ್ವಾತಂತ್ರ್ಯದ ನಂತರ, ಈ ಅದೃಷ್ಟವು ನಮ್ಮ ದೇಶಕ್ಕೆ ಎರಡನೇ ಬಾರಿಗೆ ಬಂದಿದೆ, ಮತ್ತು ಇದು 60 ವರ್ಷಗಳ ನಂತರ ಬಂದಿದೆ. ಇದರರ್ಥ ಈ ಸಾಧನೆಯನ್ನು ಸಾಧಿಸಲು ಅಪಾರ ಕಠಿಣ ಪರಿಶ್ರಮ ಮತ್ತು ಅಸಾಧಾರಣ ನಂಬಿಕೆಯ ಅಗತ್ಯವಿದೆ. ರಾಜಕೀಯ ಆಟಗಳ ಮೂಲಕ ಇದು ಸಾಧ್ಯವಾಗುವುದಿಲ್ಲ; ಜನರ ಸೇವೆಯಿಂದ ಪಡೆದ ಆಶೀರ್ವಾದದಿಂದ ಇದು ಮಾತ್ರ ಇದು ಸಾಧ್ಯ.

ಸನ್ಮಾನ್ಯ ಸಭಾಧ್ಯಕ್ಷರೇ,

ಸ್ಥಿರತೆ ಮತ್ತು ನಿರಂತರತೆಗಾಗಿ ಜನರು ನಮಗೆ ಜನಾದೇಶ ನೀಡಿದ್ದಾರೆ. ಸನ್ಮಾನ್ಯ ಸಭಾಧ್ಯಕ್ಷರೇ, ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳೂ ನಡೆದವು. ಇದು ಅನೇಕರ ಗಮನಕ್ಕೆ ಬಾರದಿರಬಹುದು. ಗೌರವಾನ್ವಿತ ಸಭಾಧ್ಯಕ್ಷರೇ, ಎನ್‌ಡಿಎ ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ನಾವು ಗಮನಾರ್ಹ ವಿಜಯಗಳನ್ನು ಸಾಧಿಸಿದ್ದೇವೆ. ಒಡಿಶಾದ ಮಹಾಪ್ರಭು ಜಗನ್ನಾಥನ ನೆಲ ನಮಗೆ ಅಪಾರ ಆಶೀರ್ವಾದ ನೀಡಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕ್ಲೀನ್‌ಸ್ವೀಪ್ ಸಾಧಿಸಿದೆ. ಅತ್ಯಂತ ಶಕ್ತಿಶಾಲಿ ಸೂಕ್ಷ್ಮದರ್ಶಕಗಳಲ್ಲಿ ನೋಡಿದರೂ ಅಲ್ಲಿ ಪ್ರತಿಪಕ್ಷವನ್ನು ಗುರುತಿಸಲು ಸಾಧ್ಯವಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಅರುಣಾಚಲ ಪ್ರದೇಶದಲ್ಲಿ ನಾವು ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ. ಸಿಕ್ಕಿಂನಲ್ಲಿ ಎನ್‌ಡಿಎ ಮತ್ತೆ ಸರ್ಕಾರ ರಚಿಸಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ಕೇವಲ ಆರು ತಿಂಗಳ ಹಿಂದೆ, ನಿಮ್ಮ ತವರು ರಾಜ್ಯ ರಾಜಸ್ಥಾನದಲ್ಲಿ, ಹಾಗೆಯೇ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಾವು ಅದ್ಭುತ ವಿಜಯ ಸಾಧಿಸಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು ಹೊಸ ಪ್ರದೇಶಗಳಲ್ಲಿನ ಜನರಿಂದ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆಯುತ್ತಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಬಾರಿ ಕೇರಳದಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ, ಮತ್ತು ಕೇರಳದ ನಮ್ಮ ಸಂಸದರು ಬಹಳ ಹೆಮ್ಮೆಯಿಂದ ನಮ್ಮೊಂದಿಗೆ ಕುಳಿತಿದ್ದಾರೆ. ತಮಿಳುನಾಡಿನ ಹಲವಾರು ಸ್ಥಾನಗಳಲ್ಲಿ ಬಿಜೆಪಿ ಬಲವಾದ ಅಸ್ತಿತ್ವವನ್ನು ದಾಖಲಿಸಿದೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಬಿಜೆಪಿ ಪಡೆದ ಶೇಕಡಾವಾರು ಮತ ಪ್ರಮಾಣ ಹೆಚ್ಚಾಗಿದೆ. ಶೀಘ್ರದಲ್ಲೇ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ -  ನಾನು ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಬಗ್ಗೆ ಮಾತನಾಡುತ್ತಿದ್ದೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಮೂರು ರಾಜ್ಯಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಪಡೆದ ಮತಗಳ ಸಂಖ್ಯೆ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಪಂಜಾಬ್‌ನ ನಮ್ಮ ಕಾರ್ಯಕ್ಷಮತೆಯೂ ಗಮನಾರ್ಹವಾಗಿದೆ ಮತ್ತು ನಾವು ಲಾಭ ಗಳಿಸಿದ್ದೇವೆ. ಜನರ ಆಶೀರ್ವಾದ ನಮ್ಮೊಂದಿಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

2024ರ ಚುನಾವಣೆಯಲ್ಲಿ, ಈ ದೇಶದ ಜನರು ಕಾಂಗ್ರೆಸ್‌ಗೆ ಕೂಡಾ ಜನಾದೇಶವನ್ನು ನೀಡಿದ್ದಾರೆ, ಮತ್ತು ಆ ಜನಾದೇಶ ಬಹಳ ಸ್ಪಷ್ಟವಾಗಿದೆ: ನೀವು ಇರುವಲ್ಲಿಯೇ ಇರಿ, ವಿರೋಧ ಪಕ್ಷದಲ್ಲೇ ಇರಿ, ಮತ್ತು ವಾದ ಮಾಡಲು ಏನೂ ಇಲ್ಲವಾದಾಗ, ಕೂಗುತ್ತಲೇ ಇರಿ, ಕಿರುಚುತ್ತಲೇ ಇರಿ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಬಾರಿ 100 ಸ್ಥಾನಗಳನ್ನು ದಾಟಲು ವಿಫಲವಾಗಿದೆ. ಇದು ಕಾಂಗ್ರೆಸ್ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ಸೋಲು ಮತ್ತು ಮೂರನೇ ಕಳಪೆ ಪ್ರದರ್ಶನವಾಗಿದೆ. ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡು, ಜನಾದೇಶವನ್ನು ಗೌರವಿಸಿ, ಅದರ ಬಗ್ಗೆ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅದರ ಬದಲಾಗಿ ಅವರು ನಮ್ಮನ್ನು ಸೋಲಿಸಿದ್ದೇವೆ ಎಂದು ಭಾರತದ ನಾಗರಿಕರಿಗೆ ಮನವರಿಕೆ ಮಾಡಲು ಹಗಲು ರಾತ್ರಿ ಪ್ರಯತ್ನಿಸುತ್ತಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಏಕೆ ಹೀಗಾಗುತ್ತಿದೆ? ದೈನಂದಿನ ಜೀವನದ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಒಂದು ಚಿಕ್ಕ ಮಗು ಬೈಸಿಕಲ್‌ನಲ್ಲಿ ಹೊರಗೆ ಹೋಗಿ, ಬಿದ್ದು ಅಳಲು ಪ್ರಾರಂಭಿಸಿದರೆ, ದೊಡ್ಡವರು ಬಂದು ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ, 'ನೋಡಿ, ಇರುವೆ ಸತ್ತುಹೋಯಿತು', ಅಥವಾ 'ನೋಡಿ, ಹಕ್ಕಿ ಹಾರಿಹೋಯಿತು, ಅಥವಾ 'ನೀವು ಬೈಸಿಕಲ್ ಅನ್ನು ತುಂಬಾ ಚೆನ್ನಾಗಿ ಓಡಿಸುತ್ತೀರಿʼ ಇತ್ಯಾದಿಯಾಗಿ ಹೇಳುತ್ತಾರೆ. ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಅವನನ್ನು ಶಾಂತಗೊಳಿಸಲು ʻನೀನಿ ಬಿದ್ದಿಲ್ಲʼ ಎನ್ನುತ್ತಾರೆ. ಅಂತೆಯೇ, ಇಂದು, ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಶಾಂತಗೊಳಿಸುವ ಪ್ರಯತ್ನ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆಯು ಅದೇ ರೀತಿ ಮಾಡಲು ಪ್ರಯತ್ನಿಸುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

1984ರ ಚುನಾವಣೆಯನ್ನು ನೆನಪಿಸಿಕೊಳ್ಳಿ. ಅಂದಿನಿಂದ ದೇಶದಲ್ಲಿ 10 ಲೋಕಸಭಾ ಚುನಾವಣೆಗಳು ನಡೆದಿವೆ. 1984ರ ನಂತರ 10 ಲೋಕಸಭಾ ಚುನಾವಣೆಗಳು ನಡೆದರೂ ಕಾಂಗ್ರೆಸ್ 250 ಸ್ಥಾನಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಈ ಬಾರಿ ಅವರು ʻ99 ರನ್ʼ ಗಳಿಸಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಒಂದು ಕಥೆ ನನಗೆ ನೆನಪಿಗೆ ಬರುತ್ತಿದೆ: ತನ್ನ 99 ಅಂಕಗಳ ಬಗ್ಗೆ ಹೆಮ್ಮೆಪಡುವ ಹುಡುಗ, ತಾನು ಉತ್ತಮ ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ತೋರಿಸಿದನು. 99 ಸಂಖ್ಯೆಯನ್ನು ಕೇಳಿದ ಜನರು ಅವನನ್ನು ಹೊಗಳಿದರು ಮತ್ತು ಅವನ ನೈತಿಕ ಸ್ಥೈರ್ಯ ಹೆಚ್ಚಿಸಿದರು. ಆಗ ಅವನ ಶಿಕ್ಷಕರು ಬಂದು, ʻʻನೀನು ಏಕೆ ಸಿಹಿ ಹಂಚುತ್ತಿದ್ದೀಯಾ? ನೀನು 100ಕ್ಕೆ 99 ಅಂಕಗಳನ್ನು ಗಳಿಸಿಲ್ಲ; ಬದಲಿಗೆ ನೀನು ಗಳಿಸಿರುವುದು 543ಕ್ಕೆ 99 ಅಂಕ,ʼʼ ಎಂದು ಹೇಳಿದರು. ಈಗ, ನೀನು ವೈಫಲ್ಯದಲ್ಲೂ ವಿಶ್ವ ದಾಖಲೆಯನ್ನು ಮಾಡಿದ್ದೀಯ ಎಂದು ಆ 'ಬಾಲಕ ಬುದ್ಧಿ'ಗೆ(ಮಗುವಿನಂತಹ ಬುದ್ಧಿಯುಳ್ಳವರಿಗೆ) ಯಾರು ವಿವರಿಸುತ್ತಾರೆ?

ಸನ್ಮಾಣ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ನಾಯಕರ ಹೇಳಿಕೆಗಳು 'ಶೋಲೆ' ಚಿತ್ರದ ಸಂಭಾಷಣೆಗಳನ್ನು ಮೀರಿಸಿದೆ. 'ಶೋಲೆ' ಚಿತ್ರದ ಮೌಸಿ ಜೀ ನಿಮ್ಮೆಲ್ಲರಿಗೂ ನೆನಪಿರಬಹುದು… 'ನಾವು ಮೂರನೇ ಬಾರಿಗೆ ಚುನಾವಣೆಯಲ್ಲಿ ಸೋತಿದ್ದೇವೆ, ಆದರೆ ಮೌಸಿ, ನಿಜವಾಗಿಯೂ ನಾವು ಮೂರನೇ ಬಾರಿಗೆ ಮಾತ್ರ ಸೋತಿದ್ದೇವೆ, ಆದರೆ ಮೌಸಿ, ಇದರಲ್ಲಿ ನೈತಿಕ ಗೆಲುವು ಇಲ್ಲವೇ?'

ಸನ್ಮಾನ್ಯ ಸಭಾಧ್ಯಕ್ಷರೇ,

ಅವರು 13 ರಾಜ್ಯಗಳಲ್ಲಿ ಶೂನ್ಯ ಸ್ಥಾನಗಳನ್ನು ಪಡೆದಿದ್ದಾರೆ. 'ಆದರೆ ಮೌಸಿ, ನಾವು 13 ರಾಜ್ಯಗಳಲ್ಲಿ 0 ಸ್ಥಾನಗಳನ್ನು ಪಡೆದಿದ್ದೇವೆ, ಆದರೂ ನಮಗೆ ನಾಯಕನಿದ್ದಾನೆ, ಅಲ್ಲವೇ?'

ಸನ್ಮಾನ್ಯ ಸಭಾಧ್ಯಕ್ಷರೇ,

ಅವರು ಪಕ್ಷವನ್ನು ಮುಳುಗಿಸಿದ್ದಾರೆ, ಆದರೆ 'ಮೌಸಿ, ಪಕ್ಷ ಇನ್ನೂ ಉಸಿರಾಡುತ್ತಿದೆ.' ಸುಳ್ಳು ವಿಜಯೋತ್ಸವದಲ್ಲಿ ಜನಾದೇಶವನ್ನು ಮುಳುಗಿಸಬೇಡಿ ಎಂದು ನಾನು ಕಾಂಗ್ರೆಸ್ ಸದಸ್ಯರಿಗೆ ಹೇಳುತ್ತೇನೆ. ನಕಲಿ ವಿಜಯದ ಅಮಲಿನಲ್ಲಿ ಜನಾದೇಶವನ್ನು ಮುಳುಗಿಸಬೇಡಿ, ಜನರ ಆದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಾಮಾಣಿಕವಾಗಿ ಸ್ವೀಕರಿಸಲು ಪ್ರಯತ್ನಿಸಿ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್‌ನ ಮಿತ್ರಪಕ್ಷಗಳು ಈ ಚುನಾವಣೆಯನ್ನು ವಿಶ್ಲೇಷಿಸಿವೆಯೇ ಎಂದು ನನಗೆ ಗೊತ್ತಿಲ್ಲ. ಈ ಚುನಾವಣೆಯಲ್ಲಿ ಅವರ ಮಿತ್ರಪಕ್ಷಗಳಿಗೂ ಒಂದು ಸಂದೇಶವಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

2024ರಿಂದ ಕಾಂಗ್ರೆಸ್ ಪಕ್ಷವನ್ನು ʻಪರಾವಲಂಬಿ ಕಾಂಗ್ರೆಸ್ ಪಕ್ಷʼ ಎಂದು ಕರೆಯಲಾಗುತ್ತದೆ. 2024ರಿಂದ, ಕಾಂಗ್ರೆಸ್ ʻಪರಾವಲಂಬಿ ಕಾಂಗ್ರೆಸ್ʼ ಆಗಿ ಮಾರ್ಪಟ್ಟಿದೆ ಮತ್ತು ʻಪರಾವಲಂಬಿʼ ಎಂದರೆ ಅದೇ ದೇಹದಲ್ಲಿ ವಾಸಿಸುತ್ತಾ ಅದೇ ದೇಹವನ್ನು ತಿನ್ನುವ ಜೀವಿ. ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ಮತಗಳನ್ನು ಕಾಂಗ್ರೆಸ್ ತಿನ್ನುತ್ತದೆ ಮತ್ತು ತನ್ನ ಮಿತ್ರಪಕ್ಷದ ನಷ್ಟದಲ್ಲಿ ಕಾಂಗ್ರೆಸ್‌ ತಾನು ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ, ಕಾಂಗ್ರೆಸ್ ಪರಾವಲಂಬಿ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ. ನಾನು ಪರಾವಲಂಬಿ ಎಂದು ಹೇಳಿದಾಗ, ನಾನು ಅದನ್ನು ವಾಸ್ತವಾಂಶಗಳ ಮೇಲೆ ಆಧರದ ಮೇಲೆ ಹೇಳಿದ್ದೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾನು ನಿಮ್ಮ ಮೂಲಕ ಸದನಕ್ಕೆ ಮತ್ತು ಈ ಸದನದ ಮೂಲಕ ದೇಶಕ್ಕೆ ಕೆಲವು ಅಂಕಿಅಂಶಗಳನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಬಿಜೆಪಿ ಮತ್ತು ಕಾಂಗ್ರೆಸ್ ನೇರ ಸ್ಪರ್ಧೆಯಲ್ಲಿದ್ದ ಅಥವಾ ಕಾಂಗ್ರೆಸ್ ಪ್ರಮುಖ ಪಕ್ಷವಾಗಿದ್ದ ಮತ್ತು ಅದರ ಮಿತ್ರಪಕ್ಷಗಳು 1-2-3 ಸ್ಥಾನಗಳನ್ನು ಹೊಂದಿದ್ದಲ್ಲಿ, ಕಾಂಗ್ರೆಸ್ನ ʻಸ್ಟ್ರೈಕ್ ರೇಟ್ʼ ಕೇವಲ 26 ಪ್ರತಿಶತದಷ್ಟಿತ್ತು. ಆದರೆ ಕಾಂಗ್ರೆಸ್ ಕಿರಿಯ ಪಾಲುದಾರನಾಗಿದ್ದರೆ ಮತ್ತು ಕೆಲವು ರಾಜ್ಯಗಳಲ್ಲಿ ಕೆಲವು ಸ್ಥಾನಗಳನ್ನು ನೀಡುವ ಯಾವುದೇ ಪಕ್ಷದ ಮಿತ್ರನಾಗಿದ್ದರೆ, ಅದರ ʻಸ್ಟ್ರೈಕ್ ರೇಟ್ʼ ಶೇಕಡಾ 50 ರಷ್ಟಿತ್ತು. ಕಾಂಗ್ರೆಸ್ ಗಳಿಸಿರುವ 99 ಸ್ಥಾನಗಳಲ್ಲಿ ಹೆಚ್ಚಿನವು ತಮ್ಮ ಮಿತ್ರಪಕ್ಷಗಳ ಸಹಾಯದಿಂದ ಗೆದ್ದು ಬಂದಂಥವು. ಅದಕ್ಕಾಗಿಯೇ ನಾನು ಇದನ್ನು ಪರಾವಲಂಬಿ ಕಾಂಗ್ರೆಸ್ ಎಂದು ಹೇಳುತ್ತೇನೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಿದ 16 ರಾಜ್ಯಗಳಲ್ಲಿ, ಅದರ ಮತಗಳಿಕೆ ಪಾಲು ಕುಸಿದಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಗುಜರಾತ್, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದು, 64 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದೆ. 64 ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳು! ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಪರಾವಲಂಬಿಯಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ, ತನ್ನ ಮಿತ್ರಪಕ್ಷಗಳ ಹೆಗಲ ಮೇಲೆ ಸವಾರಿ ಮಾಡುವ ಮೂಲಕ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ತನ್ನ ಮಿತ್ರಪಕ್ಷಗಳ ಮತಗಳನ್ನು ತಿನ್ನದಿದ್ದರೆ, ಲೋಕಸಭೆಯಲ್ಲಿ ಇಷ್ಟು ಸ್ಥಾನಗಳನ್ನು ಗೆಲ್ಲುವುದು ತುಂಬಾ ಕಷ್ಟವಾಗುತ್ತಿತ್ತು.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂತಹ ಸಮಯದಲ್ಲಿ, ದೇಶವು ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿರುವಾಗ ಮತ್ತು 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಲು ನಿರ್ಧರಿಸಿರುವಾಗ, ಭಾರತವು ಒಗ್ಗೂಡಿ ಸಮೃದ್ಧಿಯ ಹೊಸ ಪ್ರಯಾಣವನ್ನು ಪ್ರಾರಂಭಿಸಬೇಕಾಗಿದೆ. ಆದರೆ, ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆಯನ್ನು ಹರಡುತ್ತಿರುವುದು ದುರದೃಷ್ಟಕರ. ಅವರು ದಕ್ಷಿಣದಲ್ಲಿ ಉತ್ತರದ ಜನರ ವಿರುದ್ಧ ಮಾತನಾಡುತ್ತಾರೆ, ಉತ್ತರದಲ್ಲಿ ದಕ್ಷಿಣದ ವಿರುದ್ಧ ವಿಷವನ್ನು ಉಗುಳುತ್ತಾರೆ; ಅವರು ಪಶ್ಚಿಮದ ಜನರ ವಿರುದ್ಧ ಮಾತನಾಡುತ್ತಾರೆ ಮತ್ತು ಉದಾತ್ತ ಪುರುಷರ ವಿರುದ್ಧ ಮಾತನಾಡುತ್ತಾರೆ. ಅವರು ಭಾಷೆಯ ಆಧಾರದ ಮೇಲೆ ಜನರನ್ನು ವಿಭಜಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ದೇಶದ ಕೆಲವು ಭಾಗಗಳನ್ನು ಭಾರತದಿಂದ ಬೇರ್ಪಡಿಸಬೇಕೆಂದು ಪ್ರತಿಪಾದಿಸಿದ ಜನರನ್ನು ಸಂಸತ್ ಚುನಾವಣೆಗೆ ಕಾಂಗ್ರೆಸ್ ನಾಮನಿರ್ದೇಶನ ಮಾಡುವ ದೌರ್ಭಾಗ್ಯವನ್ನು ನಾವು ನೋಡಿದ್ದೇವೆ. ಇದು ಕಾಂಗ್ರೆಸ್ ಪಕ್ಷ ಮಾಡಿದ ಪಾಪ. ಕಾಂಗ್ರೆಸ್ ಬಹಿರಂಗವಾಗಿ ಹೊಸ ನಿರೂಪಣೆಗಳೊಂದಿಗೆ ಜಾತಿಯ ವಿರುದ್ಧ ಜಾತಿಯನ್ನು ಎತ್ತಿ ಕಟ್ಟುತ್ತಿದೆ ಮತ್ತು ಹೊಸ ವದಂತಿಗಳನ್ನು ಹರಡುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶದ ಒಂದು ಭಾಗದ ಜನರನ್ನು ಅವಮಾನಿಸುವ ಪ್ರವೃತ್ತಿಯನ್ನು ಕಾಂಗ್ರೆಸ್ ಉತ್ತೇಜಿಸುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ಕೂಡ ಉದ್ದೇಶಪೂರ್ವಕವಾಗಿ ದೇಶವನ್ನು ಆರ್ಥಿಕ ಅವ್ಯವಸ್ಥೆಯತ್ತ ಕೊಂಡೊಯ್ಯುತ್ತಿದೆ. ಜನರಿಗೆ ನೀಡಿದ ಭರವಸೆಗಳು ಮತ್ತು ಚುನಾವಣಾ ಅವಧಿಯಲ್ಲಿ ಅವರು ಆಡಳಿತ ನಡೆಸಿದ ರಾಜ್ಯಗಳಲ್ಲಿ ಕೈಗೊಂಡ ಆರ್ಥಿಕ ಕ್ರಮಗಳು ದೇಶವನ್ನು ಆರ್ಥಿಕ ಅಸ್ಥಿರತೆಯತ್ತ ತಳ್ಳುತ್ತಿವೆ. ಅವರು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ, ಇದರಿಂದ ಅವರ ರಾಜ್ಯಗಳು ರಾಷ್ಟ್ರಕ್ಕೆ ಹೊರೆಯಾಗುತ್ತವೆ. ಚುನಾವಣೆಯ ಸಮಯದಲ್ಲಿ, ಅವರು ನಿರೀಕ್ಷಿಸಿದಂತೆ ಫಲಿತಾಂಶ ಬರದಿದ್ದರೆ, ಜೂನ್ 4ರಂದು ದೇಶಕ್ಕೆ ಬೆಂಕಿ ಹಚ್ಚುವುದಾಗಿ ಬಹಿರಂಗವಾಗಿ ಘೋಷಿಸಿದರು. ಜನರನ್ನು ಒಟ್ಟುಗೂಡಿಸಲು ಮತ್ತು ಅರಾಜಕತೆಯನ್ನು ಹರಡಲು ಅಧಿಕೃತವಾಗಿ ಬಹಿರಂಗ ಕರೆಗಳನ್ನು ನೀಡಲಾಯಿತು. ಅರಾಜಕತೆಯನ್ನು ಹರಡುವುದು ಅವರ ಗುರಿಯಾಗಿದೆ. ಅವರು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುವ ಮೂಲಕ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ʻಸಿಎಎʼ ಕುರಿತು ಹರಡಿದ ಅರಾಜಕತೆಯು ರಾಜಕೀಯ ಉದ್ದೇಶಗಳಿಗಾಗಿ ಜನರನ್ನು ದಾರಿತಪ್ಪಿಸುವ ಸ್ಪಷ್ಟ ಉದಾಹರಣೆಯಾಗಿದೆ. ಅವರು ಜನರನ್ನು ದಾರಿ ತಪ್ಪಿಸುವ ಆಟವನ್ನು ಆಡಿದರು. ಅವರ ಇಡೀ ಪರಿಸರ ವ್ಯವಸ್ಥೆಯು ಇದರ ಹಿಂದಿತ್ತು.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶವು ಗಲಭೆಗಳನ್ನು ಪ್ರಚೋದಿಸುವ ಪ್ರಯತ್ನಗಳನ್ನು ನೋಡಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇತ್ತೀಚೆಗೆ, ಸಹಾನುಭೂತಿಯನ್ನು ಗಿಟ್ಟಿಸಲು ಹೊಸ ನಾಟಕ ಶುರುವಾಗಿದೆ, ಹೊಸ ಆಟ ಆಡಲಾಗುತ್ತಿದೆ. ನಾನು ಕಥೆಯೊಂದನ್ನು ಹೇಳಲು ಬಯಸುತ್ತೇನೆ. ಶಾಲೆಯಿಂದ ಮನೆಗೆ ಬಂದ ಮಗುವೊಂದು ಜೋರಾಗಿ ಅಳುತ್ತಿತ್ತು, ಮಗುವನ್ನು ಕಂಡು ತಾಯಿ ಆತಂಕಗೊಂಡರು. ಶಾಲೆಯಲ್ಲಿ ಹೊಡೆದರು ಎಂದು ಹೇಳಿದ ಮಗು ಒಂದೇ ಸಮನೆ ಅಳುತ್ತಲೇ ಇತ್ತು. ತನ್ನನ್ನು ಅನೇಕ ಸಹಪಾಠಿಗಳು ಹೊಡೆದರು ಎಂದು ಹೇಳೀದ ಮಗು ಇನ್ನೂ ಜೋರಾಗಿ ಅಳಲು ಆರಂಭಿಸಿತು. ಏನಾಯಿತು ಎಂದು ತಾಯಿ ಪದೇ ಪದೇ ಕೇಳಿದಳು, ಆದರೆ ಮಗು ವಿವರಿಸಲಿಲ್ಲ, ಅಳುತ್ತಲೇ ಇತ್ತು ಮತ್ತು ತನನ್ನು ಹೊಡೆದರು ಎಂದು ಹೇಳುತ್ತಲೇ ಇತ್ತು. ಮತ್ತೊಂದು ಮಗುವಿನ ತಾಯಿಯನ್ನು ತಾನು ಅವಮಾನಿಸಿದ್ದೇನೆ ಎಂದು ಮಗು ತನ್ನ ತಾಯಿಗೆ ಹೇಳಲಿಲ್ಲ. ತಾನು ಯಾರದೋ ಪುಸ್ತಕಗಳನ್ನು ಹರಿದುಹಾಕಿದ್ದೇನೆ ಎಂದು ಆ ಮಗು ತನ್ನ ತಾಯಿಯ ಬಳಿ ಹೇಳಲಿಲ್ಲ. ಶಿಕ್ಷಕನನ್ನು ಕಳ್ಳ ಎಂದು ಕರೆದಿದ್ದೇನೆ ಎಂದು ಆ ಮಗು ತನ್ನ ತಾಯಿಗೆ ಹೇಳಲಿಲ್ಲ. ತಾನು ಯಾರದೋ ಊಟದ ಬುತ್ತಿ ಕದ್ದಿದ್ದೇನೆ ಎಂದು ಅವನು ತಾಯಿಗೆ ಹೇಳಲಿಲ್ಲ. ನಿನ್ನೆ, ನಾವು ಸದನದಲ್ಲಿ ಇದೇ ರೀತಿಯ ಬಾಲಿಶ ನಡವಳಿಕೆಯನ್ನು ನೋಡಿದ್ದೇವೆ. 'ನನ್ನನ್ನು ಹೊಡೆದರು' ಎಂಬ ಬಾಲಿಶ ಕೂಗು ಇತ್ತು. ʻನನ್ನನ್ನು ಅವರು ಹೊಡೆದರು, ನನ್ನನ್ನು ಇವರು ಹೊಡೆದರು, ನನ್ನನ್ನು ಇಲ್ಲಿ ಥಳಿಸಲಾಯಿತು, ನನ್ನನ್ನು ಅಲ್ಲಿ ಹೊಡೆಯಲಾಯಿತುʼ ಹೀಗೆ ಇದು ಮುಂದುವರಿಯಿತು.

ಸನ್ಮಾನ್ಯ ಸಭಾಧ್ಯಕ್ಷರೇ,

ಸಹಾನುಭೂತಿ ಗಿಟ್ಟಿಸಲು ಹೊಸ ನಾಟಕ ಆಡಲಾಗಿದೆ. ಆದರೆ ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ವ್ಯಕ್ತಿ ಜಾಮೀನಿನ ಮೇಲೆ ಹೊರಗಿದ್ದಾನೆ ಎಂಬ ಸತ್ಯ ಇಡೀ ದೇಶಕ್ಕೆ ಗೊತ್ತಿದೆ. ಒಬಿಸಿ ಜನರನ್ನು ಕಳ್ಳರು ಎಂದು ಕರೆದ ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯದ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ ನಂತರ ಅವರು ಕ್ಷಮೆಯಾಚಿಸಬೇಕಾಯಿತು. ವೀರ್ ಸಾವರ್ಕರ್ ಅವರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ದೇಶದ ಅತಿದೊಡ್ಡ ಪಕ್ಷದ ಅಧ್ಯಕ್ಷರನ್ನು ಕೊಲೆಗಾರ ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣಗಳು ವಿಚಾರಣೆಯಲ್ಲಿವೆ. ಅವರು ಅನೇಕ ನಾಯಕರು, ಅಧಿಕಾರಿಗಳು ಮತ್ತು ಸಂಸ್ಥೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ, ಸುಳ್ಳು ಹೇಳಿದ ಗಂಭೀರ ಆರೋಪಗಳು ಅವರ ಮೇಲಿವೆ ಮತ್ತು ಆ ಪ್ರಕರಣಗಳ ವಿಚಾರಣೆಗಳು ನಡೆಯುತ್ತಿವೆ.

ಸನ್ಮಾನ್ಯ ಸಭಾಧ್ಯಕ್ಷರೇ,

'ಬಾಲಕ ಬುದ್ಧಿ'ಗೆ ಮಾತನಾಡಲು ನಿಗದಿತ ಸ್ಥಳವೂ ಇಲ್ಲ ಅಥವಾ ಸ್ಥಿರ ನಡವಳಿಕೆಯೂ ಇಲ್ಲ. ಈ 'ಬಾಲಕ ಬುದ್ಧಿ' ಸಂಪೂರ್ಣವಾಗಿ ಅಧಿಕಾರ ವಹಿಸಿಕೊಂಡಾಗ, ಅವರು ಸದನದಲ್ಲಿ ಯಾರೊಂದಿಗಾದರೂ ವಾಗ್ವಾದಕ್ಕೆ ಇಳಿಯುತ್ತಾರೆ. ಈ 'ಬಾಲಕ ಬುದ್ಧಿ' ತನ್ನ ಸ್ಥಿಮಿತವನ್ನು ಕಳೆದುಕೊಂಡಾಗ, ಅವರು ಸದನದ ಒಳಗೆ ಕುಳಿತು ಕಣ್ಣು ಮಿಟುಕಿಸುತ್ತಾರೆ. ಗೌರವಾನ್ವಿತ ಸಭಾಧ್ಯಕ್ಷರೇ, ಅವರ ಸತ್ಯ ಏನೆಂದು ಈಗ ಇಡೀ ದೇಶಕ್ಕೆ ಅರ್ಥವಾಗಿದೆ. ಅದಕ್ಕಾಗಿಯೇ ಇಂದು ದೇಶವು ಅವರಿಗೆ ಹೇಳುತ್ತಿದೆ, 'ಅದನ್ನು ಮಾಡಲು ನಿಮ್ಮಿಂದ ಸಾಧ್ಯವಿಲ್ಲ; ಅದನ್ನು ಮಾಡಲು ನಿಮ್ಮಿಂದ ಸಾಧ್ಯವಿಲ್ಲ.'

ಸನ್ಮಾನ್ಯ ಸಭಾಧ್ಯಕ್ಷರೇ,

ಅಖಿಲೇಶ್ ಜೀ(ಅಖಿಲೇಶ್ ಯಾದವ್ ಅವರನ್ನು ಉಲ್ಲೇಖಿಸಿ), ತುಳಸೀದಾಸ್ ಅವರು ಹೇಳಿದ್ದಾರೆ: झूठइ लेना झूठइ देना। झूठइ भोजन झूठ चबेना। ಕಾಂಗ್ರೆಸ್ ಸುಳ್ಳುಗಳನ್ನು ತನ್ನ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಸುಳ್ಳುಗಳಿಗೆ ವ್ಯಸನಿಯಾಗಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ನರಭಕ್ಷಕ ಪ್ರಾಣಿಯು ರಕ್ತದ ವ್ಯಸನಿಯಾಗುವಂತೆ, ಕಾಂಗ್ರೆಸ್ ಸುಳ್ಳಿನ ರಕ್ತಕ್ಕೆ ವ್ಯಸನಿಯಾಗಿದೆ. ದೇಶವು ಜುಲೈ 1 ರಂದು 'ಖಟಾಖಟ್‌ ದಿವಸ್' (ಮೋಸದ ದಿನ) ಆಚರಿಸಿತು. ಜುಲೈ 1ರಂದು, ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದರು, ಅವರು 8,500 ರೂಪಾಯಿ ಜಮೆ ಆಗಿದೆಯೇ ಎಂದು ನೋಡುತ್ತಿದ್ದರು. ಇದು ಕಾಂಗ್ರೆಸ್‌ನ ದಾರಿತಪ್ಪಿಸುವ ಹೇಳಿಕೆಗಳ ಫಲ. ತಾಯಂದಿರು ಮತ್ತು ಸಹೋದರಿಯರಿಗೆ ಮಾಸಿಕ 8,500 ರೂ. ಗಳನ್ನು ನೀಡುವುದಾಗಿ ಭರವಸೆ ನೀಡಿ ಅವರು ದೇಶದ ಜನರನ್ನು ವಂಚಿಸಿದರು. ಇದರಿಂದ ಅವರ ಹೃದಯಕ್ಕೆ ಘಾಸಿಯಾಗಿದೆ, ಮತ್ತು ಅವರ ಶಾಪದಿಂದ ಕಾಂಗ್ರೆಸ್ ನಾಶವಾಗಲಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇವಿಎಂ, ಸಂವಿಧಾನ, ಮೀಸಲಾತಿ ಬಗ್ಗೆ ಸುಳ್ಳು ಹೇಳಲಾಯಿತು. ಈ ಹಿಂದೆ ರಫೇಲ್, ಎಚ್ಎಎಲ್, ಎಲ್ಐಸಿ, ಹಾಗೂ ಬ್ಯಾಂಕುಗಳ ಬಗ್ಗೆ ಸುಳ್ಳು ಹೇಳಲಾಯಿತು. ಉದ್ಯೋಗಿಗಳನ್ನು ಪ್ರಚೋದಿಸುವ ಪ್ರಯತ್ನಗಳೂ ನಡೆದಿದ್ದವು. ಅವರ ಧೈರ್ಯ ಎಷ್ಟು ಹೆಚ್ಚಾಗಿದೆಯೆಂದರೆ, ಅವರು ನಿನ್ನೆ ಸದನವನ್ನು ಸಹ ದಾರಿತಪ್ಪಿಸಲು ಪ್ರಯತ್ನಿಸಿದರು. ನಿನ್ನೆ ಸದನದಲ್ಲಿ ʻಅಗ್ನಿವೀರ್ʼ ಬಗ್ಗೆ ಸುಳ್ಳು ಹೇಳಲಾಯಿತು. ʻಎಂಎಸ್‌ಪಿʼ(ಕನಿಷ್ಠ ಬೆಂಬಲ ಬೆಲೆ) ಕೊಡುತ್ತಿಲ್ಲ ಎಂದು ನಿನ್ನೆ ಇಲ್ಲಿ ಸುಳ್ಳು ಹೇಳಲಾಯಿತು.

ಮಾನ್ಯ ಸಭಾಧ್ಯಕ್ಷರೇ,

ಸಂವಿಧಾನದ ಘನತೆಗೆ ಧಕ್ಕೆ ತರುವುದು ಈ ಸದನದ ಪಾಲಿಗೆ ದುರದೃಷ್ಟಕರ. ಜೊತೆಗೆ, ಪದೇ ಪದೇ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಬಂದವರು ಹೀಗೆ ಸದನದ ಘನತೆಯೊಂದಿಗೆ ಆಟವಾಡುವುದು ಸರಿಯಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಅರವತ್ತು ವರ್ಷಗಳಿಂದ ಇಲ್ಲಿ ಕುಳಿತಿರುವ, ಸರ್ಕಾರದ ಕಾರ್ಯಚಟುವಟಿಕೆಗಳನ್ನು ತಿಳಿದಿರುವ, ಅನುಭವಿ ನಾಯಕರ ದಂಡನ್ನೇ ಹೊಂದಿರುವ ಪಕ್ಷದವರು ಹೀಗೆ ಅರಾಜಕತೆ ಮತ್ತು ಸುಳ್ಳುಗಳ ಮಾರ್ಗವನ್ನು ಆರಿಸಿಕೊಂಡಾಗ, ಅದು ದೇಶವು ಗಂಭೀರ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇದಕ್ಕೆ ಇದೇ ಪುರಾವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಸದನದ ಘನತೆಯೊಂದಿಗೆ ಆಟವಾಡುವುದು ನಮ್ಮ ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ, ಈ ದೇಶದ ಮಹಾಪುರುಷರಿಗೆ ಮಾಡಿದ ಅವಮಾನ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ವೀರ ಪುತ್ರರಿಗೆ ಮಾಡಿದ ಅವಮಾನ.

ಆದ್ದರಿಂದ, ಸನ್ಮಾನ್ಯ ಸಭಾಧ್ಯಕ್ಷರೇ,

ನೀವು ತುಂಬಾ ಉದಾರರು, ನೀವು ಉದಾರ ಹೃದಯಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲೂ ನೀವು ಸಂದರ್ಭಗಳನ್ನು ಹಗುರ ಮತ್ತು ಮುಗುಳ್ನಗೆಯೊಂದಿಗೆ ನಿರ್ವಹಿಸುತ್ತೀರಿ ಎಂದು ನನಗೆ ತಿಳಿದಿದೆ.

ಆದರೆ ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದರೆ ಈಗ ಏನು ನಡೆಯುತ್ತಿದೆ ಮತ್ತು ನಿನ್ನೆ ಏನಾಯಿತು ಎಂಬುದನ್ನು ಲಘುವಾಗಿ ತೆಗೆದುಕೊಳ್ಳಲಾಗದು.

ಸನ್ಮಾನ್ಯ ಸಭಾಧ್ಯಕ್ಷರೇ,

ಮಗುವಿನ ನಡವಳಿಕೆ ಎಂದು ಭಾವಿಸುವ ಮೂಲಕವೋ ಅಥವಾ ಅವರನ್ನು ಮಗುವೆಂದು ಪರಿಗಣಿಸುವ ಮೂಲಕವೋ ಈ ಕೆಲಸಗಳನ್ನು ನಿರ್ಲಕ್ಷಿಸಬಾರದು. ಅವರನ್ನು ಖಂಡಿತವಾಗಿಯೂ ನಿರ್ಲಕ್ಷಿಸಬಾರದು. ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಅವುಗಳ ಹಿಂದಿನ ಉದ್ದೇಶಗಳು ಉದಾತ್ತವಾದುವಲ್ಲ; ಅವರು ಗಂಭೀರ ಅಪಾಯಗಳನ್ನು ಒಡ್ಡುತ್ತಾರೆ, ಮತ್ತು ಈ ಬಗ್ಗೆ ನಾನು ದೇಶವಾಸಿಗಳನ್ನು ಎಚ್ಚರಿಸಲು ಬಯಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅವರ ಸುಳ್ಳುಗಳು ನಮ್ಮ ದೇಶದ ನಾಗರಿಕರ ವಿವೇಚನಾಶೀಲ ಬುದ್ಧಿವಂತಿಕೆಯ ಮೇಲೆ ಅನುಮಾನವನ್ನುಂಟುಮಾಡುತ್ತವೆ. ಅವರು ಆಡುವ ಸುಳ್ಳುಗಳು ದೇಶದ ಸಾಮಾನ್ಯ ಜ್ಞಾನಕ್ಕೆ ಕಪಾಳಮೋಕ್ಷ ಮಾಡುವ ನಾಚಿಕೆಗೇಡು ಕೃತ್ಯಗಳಾಗಿವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಕೃತ್ಯಗಳು ದೇಶದ ಶ್ರೇಷ್ಠ ಸಂಪ್ರದಾಯಗಳಿಗೆ ಕಪಾಳಮೋಕ್ಷ ಮಾಡಿದಂತೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸದನದ ಘನತೆಯನ್ನು ಎತ್ತಿಹಿಡಿಯುವುದು ನಿಮ್ಮ ದೊಡ್ಡ ಜವಾಬ್ದಾರಿಯಾಗಿದೆ. ಸದನದಲ್ಲಿ ಪ್ರಾರಂಭವಾಗಿರುವ ಸುಳ್ಳುಗಳ ಸಂಪ್ರದಾಯದ ವಿರುದ್ಧ ನೀವು ಕಠಿಣ ಕ್ರಮ ಕೈಗೊಳ್ಳುತ್ತೀರಿ ಎಂಬುದು ದೇಶವಾಸಿಗಳು ಮತ್ತು ಈ ಸದನದ ನಿರೀಕ್ಷೆಯಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ಸದಾ ಸಂವಿಧಾನ ಮತ್ತು ಮೀಸಲಾತಿಯ ಬಗ್ಗೆ ಸುಳ್ಳು ಹೇಳಿದೆ. ಇಂದು, ನಾನು 140 ಕೋಟಿ ದೇಶವಾಸಿಗಳ ಮುಂದೆ ಬಹಳ ನಮ್ರತೆಯಿಂದ ಸತ್ಯವನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ದೇಶವಾಸಿಗಳು ಈ ಸತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸನ್ಮಾನ್ಯ ಸಭಾಧ್ಯಕ್ಷರೇ,

ಇದು ತುರ್ತು ಪರಿಸ್ಥಿತಿಯ 50ನೇ ವರ್ಷ. ಅಧಿಕಾರದ ದುರಾಸೆ ಮತ್ತು ಸರ್ವಾಧಿಕಾರಿ ಮನಸ್ಥಿತಿಯಿಂದ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಕಾಂಗ್ರೆಸ್ ಕ್ರೌರ್ಯದ ಎಲ್ಲ ಮಿತಿಗಳನ್ನು ಮೀರಿತು. ಅದು ತನ್ನ ದೇಶವಾಸಿಗಳ ಮೇಲೆ ಕ್ರೌರ್ಯದ ಉಗುರುಗಳನ್ನು ಬಿಚ್ಚಿತು ಹಾಗೂ ರಾಷ್ಟ್ರದ ರಚನೆಯನ್ನೇ ಛಿದ್ರಗೊಳಿಸುವ ಪಾಪ ಕೃತ್ಯ ಎಸಗಿತು.

ಸನ್ಮಾನ್ಯ ಸಭಾಧ್ಯಕ್ಷರೇ,

ಸರ್ಕಾರಗಳನ್ನು ಉರುಳಿಸುವುದು, ಮಾಧ್ಯಮಗಳನ್ನು ಹತ್ತಿಕ್ಕುವುದು ಹೀಗೆ ಆಗ ಎಸಗಿದ ಪ್ರತಿಯೊಂದು ಕೃತ್ಯವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದವು, ಸಂವಿಧಾನದ ಅನುಚ್ಛೇದಗಳಿಗೆ ವಿರುದ್ಧವಾಗಿದ್ದವು, ಸಂವಿಧಾನದ ಪ್ರತಿಯೊಂದು ಪದಕ್ಕೂ ವಿರುದ್ಧವಾಗಿದ್ದವು. ಈ ಜನರು ಮೊದಲಿನಿಂದಲೂ ದೇಶದ ದಲಿತರು ಮತ್ತು ಹಿಂದುಳಿದ ವರ್ಗಗಳ ವಿರುದ್ಧ ತೀವ್ರ ಅನ್ಯಾಯಗಳನ್ನು ಎಸಗುತ್ತಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಕಾರಣಕ್ಕಾಗಿಯೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾಂಗ್ರೆಸ್‌ನ ದಲಿತ ವಿರೋಧಿ ಮತ್ತು ಹಿಂದುಳಿದ ವಿರೋಧಿ ಮನಸ್ಥಿತಿಯಿಂದಾಗಿ ನೆಹರೂ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು. ನೆಹರು ಅವರು ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಹೇಗೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದಾಗ ನೀಡಿದ ಕಾರಣಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. “ಪರಿಶಿಷ್ಟ ಜಾತಿಗಳನ್ನು ಸರ್ಕಾರ ನಿರ್ಲಕ್ಷಿಸಿದ ಬಗ್ಗೆ ನನ್ನೊಳಗೆ ಉಂಟಾದ ಆಕ್ರೋಶವನ್ನು ನಾನು ತಡೆಯಲಾಗಲಿಲ್ಲ,ʼʼ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಇವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಷ್ಠುರ ಮಾತುಗಳು. ಪರಿಶಿಷ್ಟ ಜಾತಿಗಳ ನಿರ್ಲಕ್ಷ್ಯವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೆರಳಿಸಿತು. ಬಾಬಾ ಸಾಹೇಬ್ ಅವರ ನೇರ ದಾಳಿಯ ನಂತರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಾಜಕೀಯ ಜೀವನವನ್ನು ಮುಗಿಸಲು ನೆಹರು ಅವರು ತಮ್ಮೆಲ್ಲಾ ಶಕ್ತಿಯನ್ನು ಬಳಸಿದರು.

ಸನ್ಮಾನ್ಯ ಸಭಾಧ್ಯಕ್ಷರೇ,

ಮೊದಲನೆಯದಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಪಿತೂರಿ ನಡೆಸಿ ಚುನಾವಣೆಯಲ್ಲಿ ಅವರು ಸೋಲುವಂತೆ ಮಾಡಲಾಯಿತು.

ಸನ್ಮಾನ್ಯ ಸಭಾಧ್ಯಕ್ಷರೇ,

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದು ಮಾತ್ರವಲ್ಲ, ಅವರ ಸೋಲನ್ನು ಸಂಭ್ರಮಿಸಲಾಯಿತು, ಅದರ ಬಗ್ಗೆ ಸಂತಸ ವ್ಯಕ್ತಪಡಿಸಲಾಯಿತು.

ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸಂತೋಷವನ್ನು ಒಂದು ಪತ್ರದಲ್ಲಿ ದಾಖಲಿಸಲಾಗಿದೆ. ಮಾನ್ಯ ಸಭಾಧ್ಯಕ್ಷರೇ, ಬಾಬಾ ಸಾಹೇಬ್ ಅವರಂತೆಯೇ ಮತ್ತೊಬ್ಬ ದಲಿತ ನಾಯಕ ಬಾಬು ಜಗಜೀವನ್ ರಾಮ್ ಅವರಿಂದಲೂ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ತುರ್ತು ಪರಿಸ್ಥಿತಿಯ ನಂತರ ಜಗಜೀವನ್ ರಾಮ್ ಅವರು ಪ್ರಧಾನಿಯಾಗುವ ಸಾಧ್ಯತೆ ಇತ್ತು. ಇಂದಿರಾ ಗಾಂಧಿಯವರು ಜಗಜೀವನ್ ರಾಮ್ ಅವರು ಯಾವುದೇ ಸಂದರ್ಭದಲ್ಲೂ ಪ್ರಧಾನಿಯಾಗದಂತೆ ನೋಡಿಕೊಂಡರು. ಜಗಜೀವನ್ ರಾಮ್ ಅವರು ಯಾವುದೇ ಕಾರಣಕ್ಕೂ ಪ್ರಧಾನಿಯಾಗಬಾರದು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಜಗಜೀವನ್‌ ರಾಮ್‌ ಅವರು ಅಧಿಕಾರಕ್ಕೆ ಬಂದರೆ, ಜೀವನಪರ್ಯಂತ ಕೆಳಗಿಳಿಯುವುದಿಲ್ಲ. ಇದು ಆ ಪುಸ್ತಕದಲ್ಲಿ ಇಂದಿರಾ ಗಾಂಧಿಯವರ ಉಲ್ಲೇಖ. ಚೌಧರಿ ಚರಣ್ ಸಿಂಗ್ ಅವರನ್ನು ಕಾಂಗ್ರೆಸ್ ಇದೇ ರೀತಿ ನಡೆಸಿಕೊಂಡಿದೆ. ಅವರನ್ನೂ ಕಾಂಗ್ರೆಸ್‌ನವರು ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಿಹಾರದ ಪುತ್ರ ಸೀತಾರಾಮ್ ಕೇಸರಿ ಅವರನ್ನು ಅವಮಾನಿಸುವ ಪಾಪವನ್ನು ಕಾಂಗ್ರೆಸ್ ಪಕ್ಷ ಮಾಡಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಮೀಸಲಾತಿಯನ್ನು ಸ್ಪಷ್ಟವಾಗಿ ವಿರೋಧಿಸಿ ನೆಹರೂ ಅವರು ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದಿದ್ದರು. ಕಾಂಗ್ರೆಸ್ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಶ್ರೀಮತಿ ಇಂದಿರಾ ಗಾಂಧಿ ಅವರು ಮಂಡಲ್ ಆಯೋಗದ ವರದಿಯನ್ನು ವರ್ಷಗಳ ಕಾಲ ಶೀತಲ ಪೆಟ್ಟಿಗೆಯಲ್ಲಿಟ್ಟಿದ್ದರು.

ಸನ್ಮಾನ್ಯ ಸಭಾಧ್ಯಕ್ಷರೇ,

ಕಾಂಗ್ರೆಸ್ ಪಕ್ಷದ ಮೂರನೇ ಪ್ರಧಾನ ಮಂತ್ರಿಗಳಾದ ಶ್ರೀ ರಾಜೀವ್ ಗಾಂಧಿ ಅವರು ವಿರೋಧ ಪಕ್ಷದಲ್ಲಿದ್ದಾಗಲೂ ಮೀಸಲಾತಿಯ ವಿರುದ್ಧ ತಮ್ಮ ಸುದೀರ್ಘ ಭಾಷಣವನ್ನು ಮಾಡಿದ್ದರು. ಇದು ಇನ್ನೂ ಸಂಸತ್ತಿನ ದಾಖಲೆಗಳಲ್ಲಿ ಲಭ್ಯವಿದೆ. ಆದ್ದರಿಂದ ಗೌರವಾನ್ವಿತ ಸಭಾಧ್ಯಕ್ಷರೇ, ನಾನು ಒಂದು ಗಂಭೀರ ವಿಷಯದ ಬಗ್ಗೆ ನಿಮ್ಮ ಮತ್ತು ದೇಶವಾಸಿಗಳ ಗಮನ ಸೆಳೆಯಲು ಬಯಸುತ್ತೇನೆ. ನಿನ್ನೆ ಏನು ನಡೆಯಿತು ಎಂಬುದನ್ನು ಮುಂಬರುವ ಹಲವು ಶತಮಾನಗಳವರೆಗೆ ನಮ್ಮ ಕೋಟ್ಯಂತರ ದೇಶವಾಸಿಗಳು ಕ್ಷಮಿಸುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

131 ವರ್ಷಗಳ ಹಿಂದೆ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಹೇಳಿದರು 'ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವನು ನಾನು ಎಂದು ಹೆಮ್ಮೆಪಡುತ್ತೇನೆ'. ಅವರು 131 ವರ್ಷಗಳ ಹಿಂದೆ ಅಮೆರಿಕದ ಚಿಕಾಗೋದಲ್ಲಿ ವಿಶ್ವದ ದಿಗ್ಗಜರ ಮುಂದೆ ಹಿಂದೂ ಧರ್ಮದ ಬಗ್ಗೆ ಈ ಹೇಳಿಕೆ ನೀಡಿದ್ದರು.

ಸನ್ಮಾನ್ಯ ಸಭಾಧ್ಯಕ್ಷರೇ,

ಹಿಂದೂಗಳು ಸಹಿಷ್ಣುಗಳು. ʻಹಿಂದೂʼ ಎಂದರೆ ತನ್ನದು ಎಂಬ ಭಾವನೆಯೊಂದಿಗೆ ಬದುಕುವ ಗುಂಪು. ಅದಕ್ಕಾಗಿಯೇ ಭಾರತದ ಪ್ರಜಾಪ್ರಭುತ್ವ, ಅದರ ವಿಶಾಲ ವೈವಿಧ್ಯತೆ ಮತ್ತು ಅದರ ಶ್ರೇಷ್ಠತೆಯು ಪ್ರವರ್ಧಮಾನಕ್ಕೆ ಬಂದಿದೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಗಂಭೀರ ವಿಷಯವೆಂದರೆ ಇಂದು ಹಿಂದೂಗಳ ಮೇಲೆ ಸುಳ್ಳು ಆರೋಪ ಹೊರಿಸುವ ಪಿತೂರಿ ನಡೆಯುತ್ತಿದೆ; ಗಂಭೀರ ಪಿತೂರಿ ನಡೆಯುತ್ತಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ಹಿಂದೂಗಳು ಹಿಂಸೆಕೋರರು ಎಂದು ಹೇಳಲಾಗಿದೆ. ಇದು ನಿಮ್ಮ ಸಂಸ್ಕೃತಿ, ಇದು ನಿಮ್ಮ ಪಾತ್ರ, ಇದು ನಿಮ್ಮ ಆಲೋಚನೆ, ಇದು ನಿಮ್ಮ ದ್ವೇಷ - ಇವು ಈ ದೇಶದ ಹಿಂದೂಗಳ ವಿರುದ್ಧದ ಶೋಷಣೆಗಳು.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ದೇಶವು ಇದನ್ನು ಶತಮಾನಗಳವರೆಗೆ ಮರೆಯುವುದಿಲ್ಲ. ಕೆಲವು ದಿನಗಳ ಹಿಂದೆ, ಹಿಂದೂಗಳಲ್ಲಿರುವ ಶಕ್ತಿಯನ್ನು ನಾಶ ಮಾಡುವ ಬಗ್ಗೆ ಘೋಷಣೆ ಮಾಡಲಾಯಿತು. ನೀವು ಯಾವ ಶಕ್ತಿಯನ್ನು ನಾಶಮಾಡುವ ಬಗ್ಗೆ ಮಾತನಾಡುತ್ತಿದ್ದೀರಿ? ಈ ದೇಶವು ಶತಮಾನಗಳಿಂದ 'ಶಕ್ತಿ'ಯನ್ನು ಆರಾಧಿಸುತ್ತಿದೆ. ನನ್ನ ಬಂಗಾಳವು ದುರ್ಗಾ ಮಾತೆಯನ್ನು ಪೂಜಿಸುತ್ತದೆ, 'ಶಕ್ತಿ'ಯನ್ನು ಪೂಜಿಸುತ್ತದೆ. ಬಂಗಾಳವು ಕಾಳಿ ಮಾತೆಯನ್ನು ಶ್ರದ್ಧಾಭಕ್ತಿಯಿಂದ, ಸಮರ್ಪಣೆಯಿಂದ ಪೂಜಿಸುತ್ತದೆ. ನೀವು ಆ ಶಕ್ತಿಯನ್ನು ನಾಶಪಡಿಸುವ ಬಗ್ಗೆ ಮಾತನಾಡುತ್ತೀರಾ? 'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಸೃಷ್ಟಿಸಲು ಪ್ರಯತ್ನಿಸಿದವರು ಇವರೇ. ಅವರ ಸಹವರ್ತಿಗಳು ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಅಂತಹ ಪದಗಳಿಗೆ ಹೋಲಿಸುತ್ತಾರೆ ಮತ್ತು ಈ ಜನರು ಅದಕ್ಕೆ ಚಪ್ಪಾಳೆ ತಟ್ಟುತ್ತಾರೆ. ಈ ದೇಶ ಇದನ್ನು ಎಂದಿಗೂ ಕ್ಷಮಿಸುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಅವರ ಇಡೀ ಪರಿಸರ ವ್ಯವಸ್ಥೆಯು, ಚೆನ್ನಾಗಿ ಯೋಚಿಸಿದ ಕಾರ್ಯತಂತ್ರದ ಅಡಿಯಲ್ಲಿ, ಹಿಂದೂ ಸಂಪ್ರದಾಯಗಳು, ಹಿಂದೂ ಸಮಾಜ, ಈ ದೇಶದ ಸಂಸ್ಕೃತಿ ಮತ್ತು ಅದರ ಪರಂಪರೆಯನ್ನು ಅವಮಾನಿಸಲು ಕೆಲಸ ಮಾಡುತ್ತದೆ. ಅವರು ಹಿಂದೂಗಳನ್ನು ಅಪಹಾಸ್ಯ ಮಾಡುವುದನ್ನು ಫ್ಯಾಶನ್ ಆಗಿ ಮಾಡಿಕೊಂಡಿದ್ದಾರೆ ಮತ್ತು ಅಂತಹ ಶಕ್ತಿಗಳನ್ನು ಅವರ ರಾಜಕೀಯ ಸ್ವಾರ್ಥಕ್ಕಾಗಿ ರಕ್ಷಿಸಲಾಗುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು ಹಳ್ಳಿಗಳಲ್ಲಿರಲಿ ಅಥವಾ ನಗರಗಳಲ್ಲಿ, ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಬಾಲ್ಯದಿಂದಲೂ ನಾವು ಕಲಿಯುತ್ತಿದ್ದೇವೆ. ಈ ದೇಶದ ಪ್ರತಿಯೊಂದು ಮಗುವಿಗೂ ಗೊತ್ತಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ದೇವರ ಪ್ರತಿಯೊಂದು ರೂಪವೂ ಪೂಜೆಗಾಗಿಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಅಥವಾ ಪ್ರದರ್ಶನಕ್ಕಾಗಿ ಅಲ್ಲ. ಯಾವುದನ್ನು ಆರಾಧಿಸಲಾಗುತ್ತದೆಯೋ ಅದನ್ನು ಪ್ರದರ್ಶಿಸಲಾಗದು.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ದೇವತೆಗಳಿಗೆ ಮಾಡಿದ ಅವಮಾನವು 140 ಕೋಟಿ ದೇಶವಾಸಿಗಳ ಹೃದಯವನ್ನು ತೀವ್ರವಾಗಿ ನೋಯಿಸುತ್ತಿದೆ. ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ದೇವರ ರೂಪಗಳೊಂದಿಗೆ ಆಟವಾಡುವುದು! ಗೌರವಾನ್ವಿತ ಸಭಾಧ್ಯಕ್ಷರೇ, ಈ ದೇಶವು ಇದನ್ನು ಹೇಗೆ ತಾನೆ ಕ್ಷಮಿಸಬಲ್ಲದು?

ಸನ್ಮಾನ್ಯ ಸಭಾಧ್ಯಕ್ಷರೇ,

ನಿನ್ನೆ ಸದನದಲ್ಲಿ ನಡೆದ ದೃಶ್ಯಗಳನ್ನು ನೋಡಿದರೆ, ಈ ಅವಮಾನಕರ ಹೇಳಿಕೆಗಳು ಕಾಕತಾಳೀಯವೇ ಅಥವಾ ಯಾವುದಾದರೂ ಪ್ರಯೋಗದ ಭಾಗವೇ ಎಂದು ಹಿಂದೂ ಸಮಾಜವು ಯೋಚಿಸಬೇಕು. ಹಿಂದೂ ಸಮಾಜ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಸಶಸ್ತ್ರ ಪಡೆಗಳು ದೇಶದ ಹೆಮ್ಮೆ. ಅವರ ಧೈರ್ಯ ಮತ್ತು ಶೌರ್ಯದ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ. ಇಂದು, ನಮ್ಮ ಸಶಸ್ತ್ರ ಪಡೆಗಳು ಮತ್ತು ರಕ್ಷಣಾ ವಲಯವು ಸ್ವಾತಂತ್ರ್ಯದ ನಂತರದ ಎಲ್ಲಾ ವರ್ಷಗಳಿಗಿಂತ ಹೆಚ್ಚಿನ ಸುಧಾರಣೆಗಳಿಗೆ ಒಳಗಾಗುತ್ತಿರುವುದನ್ನು ಇಡೀ ದೇಶ ನೋಡುತ್ತಿದೆ. ನಾವು ನಮ್ಮ ಮಿಲಿಟರಿಯನ್ನು ಆಧುನೀಕರಿಸುತ್ತಿದ್ದೇವೆ, ಪ್ರತಿ ಸವಾಲಿಗೆ ದಿಟ್ಟ ಪ್ರತಿಕ್ರಿಯೆ ನೀಡಲು ಯುದ್ಧ-ಸನ್ನದ್ಧ ಸೈನ್ಯವನ್ನು ನಿರ್ಮಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ, ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದೇವೆ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ವಿಷಯಗಳು ಬದಲಾಗಿವೆ. ʻಸಿಡಿಎಸ್ʼ ಹುದ್ದೆಯ ಸೃಷ್ಟಿಯ ನಂತರ, ಮೂರೂ ಪಡೆಗಳ ನಡುವೆ ಐಕ್ಯತೆಯನ್ನು ಮತ್ತಷ್ಟು ಸಶಕ್ತಗೊಳಿಸಲಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತದಲ್ಲಿ ʻಸಿಡಿಎಸ್ʼ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ ʻಥಿಯೇಟರ್ ಕಮಾಂಡ್ʼನ ಅಗತ್ಯದ ಬಗ್ಗೆ ನಮ್ಮ ಸಶಸ್ತ್ರ ಪಡೆಗಳಲ್ಲಿ ಸುದೀರ್ಘ ಕಾಲದಿಂದ ಇದ್ದ ದೃಷ್ಟಿಕೋನವು ತೃಪ್ತಿಕರವಾಗಿ ಬದಲಾಗುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಸೈನ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವುದನ್ನು 'ಆತ್ಮನಿರ್ಭರ ಭಾರತ'ದ ಭಾಗವಾಗಿದೆ. ಇದು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಶದ ಸೈನ್ಯದಲ್ಲಿ ಯುವ ಚೈತನ್ಯವಿರಬೇಕು ಮತ್ತು ನಮ್ಮ ಶತ್ರುಗಳನ್ನು ಬಡಿದಟ್ಟುವ ಸಾಮರ್ಥ್ಯವನ್ನು ಹೊಂದಿರಬೇಕು. ನಾವು ನಮ್ಮ ಯುವಕರನ್ನು ನಂಬಬೇಕು ಮತ್ತು ಸೈನ್ಯದಲ್ಲಿ ಅವರ ಉಪಸ್ಥಿತಿಯನ್ನು ಬಲಪಡಿಸಬೇಕು. ಯುದ್ಧ ಸನ್ನದ್ಧವಾದ ಸೈನ್ಯವನ್ನು ನಿರ್ಮಿಸಲು ನಾವು ನಿರಂತರವಾಗಿ ಸುಧಾರಣೆ ಮಾಡುತ್ತಿದ್ದೇವೆ. ಸಮಯೋಚಿತ ಸುಧಾರಣೆಗಳನ್ನು ಕೈಗೊಳ್ಳದಿರುವುದರಿಂದ ನಮ್ಮ ಮಿಲಿಟರಿಗೆ ಹೆಚ್ಚಿನ ಹಾನಿಯಾಗಿದೆ. ಆದರೆ ಈ ವಿಷಯಗಳು ಸಾರ್ವಜನಿಕ ಚರ್ಚೆಗೆ ಸೂಕ್ತವಲ್ಲ, ಆದ್ದರಿಂದ ನಾನು ಅವುಗಳ ಬಗ್ಗೆ ಮೌನವಾಗಿದ್ದೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ರಾಷ್ಟ್ರೀಯ ಭದ್ರತೆಯು ಗಂಭೀರ ವಿಷಯವಾಗಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ಇಂತಹ ಸುಧಾರಣೆಗಳ ಉದ್ದೇಶವು ಬದಲಾಗುತ್ತಿರುವ ಯುದ್ಧದ ರೂಪಗಳಿಗೆ ನಮ್ಮ ಸೈನ್ಯವನ್ನು ಸನ್ನದ್ಧಗೊಳಿಸುವುದು, ಸಂಪನ್ಮೂಲಗಳನ್ನು ಹೆಚ್ಚಿಸುವುದು, ಶಸ್ತ್ರಾಸ್ತ್ರಗಳನ್ನು ಸುಧಾರಿಸುವುದು ಮತ್ತು ತಂತ್ರಗಳನ್ನು ಬದಲಾಯಿಸುವುದೇ ಆಗಿದೆ. ಈ ಸವಾಲುಗಳಿಗೆ ನಮ್ಮ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವುದು ಮಹತ್ವದ ಜವಾಬ್ದಾರಿಯಾಗಿದೆ, ಮತ್ತು ಟೀಕೆಗಳು ಮತ್ತು ಸುಳ್ಳು ಆರೋಪಗಳನ್ನು ಎದುರಿಸುತ್ತಿದ್ದರೂ ಮತ್ತು ಮೌನವಾಗಿದ್ದರೂ ನಾವು ಅದಕ್ಕೆ ಬದ್ಧರಾಗಿದ್ದೇವೆ. ಇಂತಹ ಸಮಯದಲ್ಲಿ, ನಾವು ನಮ್ಮ ಮಿಲಿಟರಿಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಕೆಲಸ ಮಾಡುತ್ತಿರುವಾಗ, ಕಾಂಗ್ರೆಸ್ ಮಾಡುತ್ತಿರುವುದಾದರೂ ಏನು? ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ ಮತ್ತು ರಕ್ಷಣಾ ಸುಧಾರಣಾ ಪ್ರಯತ್ನಗಳನ್ನು ದುರ್ಬಲಗೊಳಿಸಲು ಪಿತೂರಿ ನಡೆಸುತ್ತಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸತ್ಯಾಂಶವೇನೆಂದರೆ, ಭಾರತೀಯ ಸಶಸ್ತ್ರ ಪಡೆಗಳು ಬಲಗೊಳ್ಳುವುದನ್ನು ಕಾಂಗ್ರೆಸ್ ಎಂದಿಗೂ ನೋಡಿ ಸಹಿಸಲಾರದು. ಮಾನ್ಯ ಸಭಾಧ್ಯಕ್ಷರೇ, ನೆಹರೂ ಅವರ ಕಾಲದಲ್ಲಿ ನಮ್ಮ ಪಡೆಗಳು ಎಷ್ಟು ದುರ್ಬಲವಾಗಿದ್ದವು ಎಂಬುದು ಯಾರಿಗೆ ತಾನೆ ಗೊತ್ತಿಲ್ಲ? ಕಾಂಗ್ರೆಸ್‌ನ ಹಲವಾರು ಹಗರಣಗಳು ನಮ್ಮ ಸೈನ್ಯವನ್ನು ದುರ್ಬಲಗೊಳಿಸಿದವು. ಭೂಸೇನೆ, ನೌಕಾ ಪಡೆ ಅಥವಾ ವಾಯುಪಡೆ ಸೇರಿದಂತೆ ಸೈನ್ಯದ ಪ್ರತಿಯೊಂದು ಅಂಗದಲ್ಲೂ ಭ್ರಷ್ಟಾಚಾರವು ದೇಶದ ಸ್ವಾತಂತ್ರ್ಯದ ಹಿಂದಿನಿಂದಲೂ ಒಂದು ಸಂಪ್ರದಾಯವಾಗಿದೆ. ಜೀಪ್ ಹಗರಣ, ಜಲಾಂತರ್ಗಾಮಿ ಹಗರಣ, ಬೋಫೋರ್ಸ್ ಹಗರಣ ಇವೆಲ್ಲವೂ ನಮ್ಮ ಸೇನೆಯನ್ನು ಬಲಪಡಿಸುವುದನ್ನು ತಡೆದಿವೆ. ಮಾನ್ಯ ಸಭಾಧ್ಯಕ್ಷರೇ, ಕಾಂಗ್ರೆಸ್ ಯುಗದಲ್ಲಿ ನಮ್ಮ ಪಡೆಗಳು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಸಹ ಹೊಂದಿರದ ಸಮಯವಿತ್ತು. ಅವರು ಅಧಿಕಾರದಲ್ಲಿದ್ದಾಗ ನಮ್ಮ ಸೈನ್ಯವನ್ನು ದುರ್ಬಲಗೊಳಿಸಿದರು ಮತ್ತು ನಾಶಪಡಿಸಿದರು, ಮತ್ತು ಅವರು ಪ್ರತಿಪಕ್ಷದಲ್ಲಿದ್ದಾಗಲೂ ಈ ಕ್ರಮಗಳು ಮುಂದುವರೆದವು. ವಿರೋಧ ಪಕ್ಷದಲ್ಲಿಯೂ ಸೇನೆಯನ್ನು ದುರ್ಬಲಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದವು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅದು ಯುದ್ಧ ವಿಮಾನಗಳನ್ನು ಖರೀದಿಸಲಿಲ್ಲ, ಮತ್ತು ನಾವು ಪ್ರಯತ್ನಿಸಿದಾಗ, ಯುದ್ಧ ವಿಮಾನಗಳು ವಾಯುಪಡೆಯನ್ನು ತಲುಪದಂತೆ ತಡೆಯಲು ಕಾಂಗ್ರೆಸ್ ಎಲ್ಲಾ ರೀತಿಯಲ್ಲೂ ಪಿತೂರಿ ನಡೆಸಿತು. ಸನ್ಮಾನ್ಯ ಸಭಾಧ್ಯಕ್ಷರೇ, ಅವರ ಬಾಲಿಶತನವನ್ನು ನೋಡಿ, ಅವರು ಸಣ್ಣ ಆಟಿಕೆ ರಫೇಲ್ ಜೆಟ್‌ಗಳನ್ನು ಹಾರಿಸುವುದನ್ನು ಆನಂದಿಸಿದರು, ನಮ್ಮ ಸೈನ್ಯವನ್ನು ಅಣಕಿಸಿದರು.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತೀಯ ಸೇನೆಯನ್ನು ಬಲಪಡಿಸುವ ಮತ್ತು ಸಶಕ್ತಗೊಳಿಸುವ ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಸುಧಾರಣೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನನಗೆ ಸಮಯ ನೀಡಿದ್ದಕ್ಕಾಗಿ ಮತ್ತು ಸಮಯಾವಕಾಶವನ್ನು ವಿಸ್ತರಿಸಿದ್ದಕ್ಕಾಗಿ ನಾನು ನಿಮಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಯುವಕರ ಶಕ್ತಿ ಮತ್ತು ನಮ್ಮ ಸೈನಿಕರ ನೈತಿಕ ಸ್ಥೈರ್ಯವು ನಮ್ಮ ಸಶಸ್ತ್ರ ಪಡೆಗಳ ದೊಡ್ಡ ಶಕ್ತಿ ಎಂದು ಕಾಂಗ್ರೆಸ್ ಈಗ ಅರಿತುಕೊಂಡಿದೆ. ನಮ್ಮ ದೇಶವನ್ನು ರಕ್ಷಿಸಲು ನಮ್ಮ ಯುವಕರು ಸೈನ್ಯಕ್ಕೆ ಸೇರುವುದನ್ನು ತಡೆಯಲು ಅವರು ಸೇನಾ ನೇಮಕಾತಿಯ ಬಗ್ಗೆ ಕಪಟ ಸುಳ್ಳುಗಳನ್ನು ಹರಡುತ್ತಿದ್ದಾರೆ, ಅವರನ್ನು ತಡೆಯಲು ಪಿತೂರಿ ಮಾಡುತ್ತಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಯಾರ ಲಾಭಕ್ಕಾಗಿ ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸಲು ಬಯಸುತ್ತಿದೆ ಎಂದು ಈ ಸದನದ ಮೂಲಕ ನಾನು ತಿಳಿಯಲು ಬಯಸುತ್ತೇನೆ. ಯಾರ ಅನುಕೂಲಕ್ಕಾಗಿ ಕಾಂಗ್ರೆಸ್ ಸದಸ್ಯರು ನಮ್ಮ ಸೇನೆಯ ಬಗ್ಗೆ ಇಷ್ಟೊಂದು ಸುಳ್ಳುಗಳನ್ನು ಹರಡುತ್ತಿದ್ದಾರೆ?

ಸನ್ಮಾನ್ಯ ಸಭಾಧ್ಯಕ್ಷರೇ,

ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ವಿಚಾರದಲ್ಲಿ ದೇಶದ ಕೆಚ್ಚೆದೆಯ ಯೋಧರನ್ನು ಮೋಸಗೊಳಿಸುವ ಪ್ರಯತ್ನ ನಡೆಯಿತು.

ಸನ್ಮಾನ್ಯ ಸಭಾಧ್ಯಕ್ಷರೇ,

ಶ್ರೀಮತಿ ಇಂದಿರಾ ಗಾಂಧಿ ಅವರು ನಮ್ಮ ದೇಶದಲ್ಲಿ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ವ್ಯವಸ್ಥೆಯನ್ನು ರದ್ದುಗೊಳಿಸಿದರು. ದಶಕಗಳಿಂದ, ಕಾಂಗ್ರೆಸ್ ಈ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ವ್ಯವಸ್ಥೆಯನ್ನು ಜಾರಿಗೆ ತರಲು ಬಿಡಲಿಲ್ಲ, ಮತ್ತು ಚುನಾವಣೆಗಳು ಬಂದಾಗ, ಅವರು 500 ಕೋಟಿ ರೂಪಾಯಿಗಳನ್ನು ಮೀಸಲಿಡುವ ಮೂಲಕ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರು. ಆದರೆ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ಜಾರಿಯನ್ನು ಸಾಧ್ಯವಾದಷ್ಟು ವಿಳಂಬಗೊಳಿಸುವುದು ಅವರ ಉದ್ದೇಶವಾಗಿತ್ತು. ಎನ್‌ಡಿಎ ಸರ್ಕಾರವು ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ಅನ್ನು ಜಾರಿಗೆ ತಂದಿತು, ಮತ್ತು ಗೌರವಾನ್ವಿತ ಸಭಾಧ್ಯಕ್ಷರೇ, ಭಾರತದ ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಮತ್ತು ಕೋವಿಡ್-19 ವಿರುದ್ಧದ ಕಠಿಣ ಹೋರಾಟದ ಸಮಯದಲ್ಲಿಯೂ, ನಮ್ಮ ಮಾಜಿ ಸೈನಿಕರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ʻಸಮಾನ ಶ್ರೇಣಿ, ಸಮಾನ ಪಿಂಚಣಿʼ ಆಗಿ ನೀಡಲಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಸರ್ಕಾರವು ಅತ್ಯಂತ ಗಂಭೀರವಾಗಿದೆ ಮತ್ತು ನಮ್ಮ ಜವಾಬ್ದಾರಿಗಳನ್ನು ಸಮರೋಪಾದಯಲ್ಲಿ ಪೂರೈಸಲು ನಾವು ಒಂದರ ನಂತರ ಒಂದರಂತೆ ಹೆಜ್ಜೆ ಇಡುತ್ತಿದ್ದೇವೆ ಎಂದು ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪ್ರತಿಯೊಬ್ಬ ಯುವಕರಿಗೆ ನಾನು ಹೇಳಲು ಬಯಸುತ್ತೇನೆ. ಯುವಕರ ಭವಿಷ್ಯದೊಂದಿಗೆ ಆಟವಾಡುವವರನ್ನು ಬಿಡುವುದಿಲ್ಲ. ʻನೀಟ್ʼ ಪ್ರಕರಣದಲ್ಲಿ ದೇಶಾದ್ಯಂತ ನಿರಂತರ ಬಂಧನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಈಗಾಗಲೇ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ 10 ವರ್ಷಗಳಲ್ಲಿ, ʻಎನ್‌ಡಿಎʼ ಸರ್ಕಾರವು ಅಭಿವೃದ್ಧಿಯನ್ನು ತನ್ನ ಅತಿದೊಡ್ಡ ಸಂಕಲ್ಪವನ್ನಾಗಿ ಮಾಡಿಕೊಂಡಿದೆ. ಇಂದು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಸಂಕಲ್ಪವನ್ನು ನಾವು ತೊಟ್ಟಿದ್ದೇವೆ. ಸ್ವಾತಂತ್ರ್ಯದ ಇಷ್ಟು ವರ್ಷಗಳ ನಂತರ, ಶುದ್ಧ ಕುಡಿಯುವ ನೀರನ್ನು ಒದಗಿಸಲು, ಪ್ರತಿ ಮನೆಗೂ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಕಲ್ಪ ಮಾಡಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಪ್ರತಿಯೊಬ್ಬ ಬಡ ವ್ಯಕ್ತಿಗೆ ವಸತಿ ಒದಗಿಸುವುದು ನಮ್ಮ ಸಂಕಲ್ಪವಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತದ ಶಕ್ತಿಯು ಜಾಗತಿಕವಾಗಿ ಹೊರಹೊಮ್ಮುತ್ತಿರುವುದರಿಂದ, ನಮ್ಮ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಾವು ದೃಢ ಸಂಕಲ್ಪ ತೊಟ್ಟಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಯುಗವು ಹಸಿರು ಯುಗವಾಗಿದೆ. ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಜಗತ್ತು ಹೋರಾಡುತ್ತಿದೆ. ಮತ್ತು ಈ ಹೋರಾಟಕ್ಕೆ ಗಮನಾರ್ಹ ಬೆಂಬಲ ನೀಡುವ ಜವಾಬ್ದಾರಿಯನ್ನು ಭಾರತ ವಹಿಸಿಕೊಂಡಿದೆ. ಭಾರತವನ್ನು ನವೀಕರಿಸಬಹುದಾದ ಇಂಧನದ ಶಕ್ತಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಒಂದರ ನಂತರ ಒಂದರಂತೆ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಅದನ್ನು ಸಾಧಿಸಲು ನಾವು ನಿರ್ಧರಿಸಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭವಿಷ್ಯವು ಹಸಿರು ಜಲಜನಕ ಮತ್ತು ಇ-ವಾಹನಗಳೊಂದಿಗೆ ನಂಟು ಹೊಂದಿದೆ. ಭಾರತವನ್ನು ಹಸಿರು ಜಲಜನಕದ ಕೇಂದ್ರವನ್ನಾಗಿ ಮಾಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲು ಸರ್ಕಾರ ಕ್ರಮಗಳನ್ನು ಕೈಗೊಕೊಳ್ಳುತ್ತಿದೆ. ಮೂಲಸೌಕರ್ಯವು ಇದರಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ನಾವು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗಿದೆ. ನಾವು ವಿಶ್ವದ ಎಲ್ಲಾ ಮಾನದಂಡಗಳಿಗೆ ಸಮಾನರಾಗಿರಬೇಕಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತದಲ್ಲಿ ಮೂಲಸೌಕರ್ಯದಲ್ಲಿನ ಹೂಡಿಕೆ ಹಿಂದೆಂದೂ ಇಷ್ಟು ಹೆಚ್ಚಾಗಿರಲಿಲ್ಲ, ಮತ್ತು ಅದರ ಪ್ರಯೋಜನಗಳು ಇಂದು ನಾಗರಿಕರಿಗೆ ಗೋಚರಿಸುತ್ತಿವೆ. ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದನ್ನು ಈಗ ವಿಸ್ತರಿಸಬೇಕು, ಹೊಸ ರೂಪವನ್ನು ನೀಡಬೇಕು, ಆಧುನಿಕ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಯನ್ನು ಮಾಡಬೇಕು ಮತ್ತು ಇದರ ಆಧಾರದ ಮೇಲೆ, ಭಾರತವು ʻಇಂಡಸ್ಟ್ರಿ 4.0ʼನಲ್ಲಿ ನಾಯಕನಾಗಿ ಹೊರಹೊಮ್ಮಬೇಕು, ನಮ್ಮ ಯುವಕರ ಭವಿಷ್ಯವನ್ನು ಭದ್ರಪಡಿಸಬೇಕು. ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ 18 ವರ್ಷಗಳ ಅಧ್ಯಯನವೊಂದಿದೆ, ಮತ್ತು ಇದು ಬಹಳ ಮಹತ್ವದ್ದಾಗಿದೆ. ಕಳೆದ 18 ವರ್ಷಗಳಲ್ಲಿ ಖಾಸಗಿ ವಲಯದ  ಉದ್ಯೋಗ ಸೃಷ್ಟಿಯಲ್ಲಿ ಅತ್ಯಧಿಕ ದಾಖಲೆ ನಿರ್ಮಾಣವಾಗಿದೆ ಎಂದು ಈ ಅಧ್ಯಯನವು ಹೇಳುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯು ಇಡೀ ಜಗತ್ತಿಗೆ ಉದಾಹರಣೆಯಾಗಿದೆ. ನಾನು ʻಜಿ-20ʼ ಗುಂಪಿನ ಸಭೆಗಳಲ್ಲಿ ಭಾಗವಹಿಸಿದಾಗಲೆಲ್ಲಾ, ವಿಶ್ವದ ಶ್ರೀಮಂತ ದೇಶಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದವು ಮತ್ತು ನಮ್ಮ ʻಡಿಜಿಟಲ್ ಇಂಡಿಯಾʼ ಆಂದೋಲನ ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಬಹಳ ಕುತೂಹಲದಿಂದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದವು. ಇದು ಭಾರತದ ದೊಡ್ಡ ಯಶೋಗಾಥೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತವು ಮುಂದುವರೆದಂತೆ, ಸ್ವಾಭಾವಿಕವಾಗಿಯೇ, ಸ್ಪರ್ಧೆ ಮತ್ತು ಸವಾಲುಗಳು ಸಹ ಹೆಚ್ಚುತ್ತಿವೆ. ಭಾರತದ ಪ್ರಗತಿಯ ಬಗ್ಗೆ ಸಮಸ್ಯೆಗಳನ್ನು ಹೊಂದಿರುವವರು, ಭಾರತದ ಪ್ರಗತಿಯನ್ನು ಸವಾಲಾಗಿ ನೋಡುವವರು ಸಹ ತಪ್ಪು ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಈ ಶಕ್ತಿಗಳು ಭಾರತದ ಪ್ರಜಾಪ್ರಭುತ್ವ, ಜನಸಂಖ್ಯಾಶಕ್ತಿ ಮತ್ತು ವೈವಿಧ್ಯತೆಯ ಮೇಲೆ ದಾಳಿ ಮಾಡುತ್ತಿವೆ. ಈ ಕಳವಳವು ನನ್ನದು ಮಾತ್ರವಲ್ಲ. ಈ ಕಳವಳವು ಕೇವಲ ಸರ್ಕಾರ ಅಥವಾ ಮಂತ್ರಿವರ್ಗಕ್ಕೆ ಸಂಬಂಧಿಸಿದ್ದಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ದೇಶದ ಜನರು ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಿಂದಲೂ ಈ ವಿಷಯಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ನಾನು ಇಂದು ಸದನದ ಮುಂದೆ ಸರ್ವೋಚ್ಚ ನ್ಯಾಯಾಲಯದ ಉಲ್ಲೇಖವನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯವು ದೇಶದ ಲಕ್ಷಾಂತರ ಜನರ ಪಾಲಿಗೆ ಉದ್ಭವಿಸಬಹುದಾದ ಸಂಭಾವ್ಯ ಬಿಕ್ಕಟ್ಟನ್ನು ಸೂಚಿಸುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಬಹಳ ಗಂಭೀರವಾಗಿ ಹೇಳಿದೆ, ಮತ್ತು ನಾನು ಅದನ್ನು ಇಲ್ಲಿ ಉಲ್ಲೇಖಿಸುತ್ತೇನೆ: 'ಸಾಧ್ಯವಿರುವ ಎಲ್ಲ ರಂಗಗಳಲ್ಲಿಯೂ ಈ ಮಹಾನ್ ದೇಶದ ಪ್ರಗತಿಯನ್ನು ಅನುಮಾನಿಸಲು, ದುರ್ಬಲಗೊಳಿಸಲು ಮತ್ತು ವಿಫಲಗೊಳಿಸಲು ಸಂಘಟಿತ ಪ್ರಯತ್ನ ನಡೆಯುತ್ತಿರುವಂತೆ ತೋರುತ್ತದೆ.' ಇದನ್ನು ಹೇಳಿದ್ದು ಸರ್ವೋಚ್ಚ ನ್ಯಾಯಾಲಯ. ಜೊತೆಗೆ, 'ಅಂತಹ ಯಾವುದೇ ಪ್ರಯತ್ನವನ್ನು ಆರಂಭದಲ್ಲಿಯೇ ತಡೆಯಬೇಕು' ಎಂದೂ ಸಹ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಇದು ಸರ್ವೋಚ್ಚ ನ್ಯಾಯಾಲಯದ ಹೇಳಿಕೆಯ ಉಲ್ಲೇಖ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾವು, ಸರ್ಕಾರದ ಒಳಗಿರುವವರು ಅಥವಾ ವಿರೋಧ ಪಕ್ಷದಲ್ಲಿ ಇರುವವರು, ಸದನದ ಒಳಗೆ ಅಥವಾ ಹೊರಗೆ ಇರುವವರು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಈ ಭಾವನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅಂತಹ ಶಕ್ತಿಗಳಿಗೆ ಸಹಾಯ ಮಾಡುವ ಕೆಲವು ಜನರು ಭಾರತದಲ್ಲಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ದೇಶದ ನಾಗರಿಕರು ಎಚ್ಚರದಿಂದ ಇರಬೇಕು.

ಸನ್ಮಾನ್ಯ ಸಭಾಧ್ಯಕ್ಷರೇ,

2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ, ದೇಶದ ಮುಂದಿದ್ದ ಪ್ರಮುಖ ಸವಾಲು ಕೇವಲ ಕಾಂಗ್ರೆಸ್ ಮಾತ್ರ ಆಗಿರಲಿಲ್ಲ, ಕಾಂಗ್ರೆಸ್ ಪೋಷಿಸಿದ ಪರಿಸರ ವ್ಯವಸ್ಥೆಯೂ ಸವಾಲಾಗಿತ್ತು. ಈ ಪರಿಸರ ವ್ಯವಸ್ಥೆಯು ಕಾಂಗ್ರೆಸ್ ಬೆಂಬಲದೊಂದಿಗೆ 70 ವರ್ಷಗಳಿಂದ ಪ್ರವರ್ಧಮಾನಕ್ಕೆ ಬಂದಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ಇಂದು ನಾನು ಈ ಪರಿಸರ ವ್ಯವಸ್ಥೆಯನ್ನು ಎಚ್ಚರಿಸಲು ಬಯಸುತ್ತೇನೆ. ದೇಶದ ಅಭಿವೃದ್ಧಿಯ ಪ್ರಯಾಣವನ್ನು ನಿಲ್ಲಿಸಲು, ದೇಶದ ಪ್ರಗತಿಯನ್ನು ಹಳಿ ತಪ್ಪಿಸಲು ನಿರ್ಧರಿಸಿದ ರೀತಿಯ ಬಗ್ಗೆ ನಾನು ಈ ಪರಿಸರ ವ್ಯವಸ್ಥೆಯನ್ನು ಎಚ್ಚರಿಸಲು ಬಯಸುತ್ತೇನೆ, ಪ್ರತಿಯೊಂದು ಪಿತೂರಿಯನ್ನು ಅದರದ್ದೇ ಆದ ಭಾಷೆಯಲ್ಲಿ ದಿಟ್ಟವಾಗಿ ಎದುರಿಸಲಾಗುವುದು ಎಂದು ನಾನು ಇಂದು ಈ ಪರಿಸರ ವ್ಯವಸ್ಥೆಗೆ ಹೇಳಲು ಬಯಸುತ್ತೇನೆ. ಈ ದೇಶ ಎಂದಿಗೂ ರಾಷ್ಟ್ರ ವಿರೋಧಿ ಪಿತೂರಿಗಳನ್ನು ಸಹಿಸುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಪ್ರತಿಯೊಂದು ವಿವರವನ್ನೂ ಗಮನಿಸಿ, ಜಗತ್ತು ಭಾರತದ ಪ್ರಗತಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿರುವ ಸಮಯ ಇದು.

ಸನ್ಮಾನ್ಯ ಸಭಾಧ್ಯಕ್ಷರೇ,

ಈಗ ಚುನಾವಣೆಗಳು ಮುಗಿದಿವೆ, ಮುಂದಿನ ಐದು ವರ್ಷಗಳಿಗೆ 140 ಕೋಟಿ ನಾಗರಿಕರು ತಮ್ಮ ಜನಾದೇಶ ನೀಡಿದ್ದಾರೆ. ಈ ಸಂಕಲ್ಪವನ್ನು ನನಸಾಗಿಸಲು, 'ವಿಕಸಿತ ಭಾರತ'ದ ನಿರ್ಮಾಣಕ್ಕೆ ಈ ಸದನದ ಎಲ್ಲ ಗೌರವಾನ್ವಿತ ಸದಸ್ಯರ ಕೊಡುಗೆ ಅಗತ್ಯವಾಗಿದೆ. 'ವಿಕಸಿತ ಭಾರತ'ದ ಸಂಕಲ್ಪವನ್ನು ಈಡೇರಿಸಲು ಜವಾಬ್ದಾರಿಯುತವಾಗಿ ಮುಂದೆ ಬರುವಂತೆ ನಾನು ಎಲ್ಲರಿಗೂ ಆಹ್ವಾನ ನೀಡುತ್ತೇನೆ. ರಾಷ್ಟ್ರದ ಹಿತಾಸಕ್ತಿಗಾಗಿ ಒಟ್ಟಾಗಿ ಕೆಲಸ ಮಾಡೋಣ, ಒಟ್ಟಾಗಿ ನಡೆಯೋಣ ಮತ್ತು ನಾಗರಿಕರ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ನಮಗೆ ದೊರೆತ ಯಾವೊಂದು ಅವಕಾಶವೂ ಕೈತಪ್ಪದಂತೆ ನೋಡಿಕೊಳ್ಳೋಣ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಾರತದ ಈ ಯುಗದಲ್ಲಿ ಸಕಾರಾತ್ಮಕ ರಾಜಕೀಯ ಬಹಳ ಅವಶ್ಯಕ. ಉತ್ತಮ ಆಡಳಿತಕ್ಕಾಗಿ ಸ್ಪರ್ಧಿಸುವಂತೆ ʻಇಂಡಿʼ ಮೈತ್ರಿಕೂಟ ಸೇರಿದಂತೆ ನಮ್ಮ ಸಹವರ್ತಿ ಪಕ್ಷಗಳಿಗೆ ನಾನು ಹೇಳಲು ಬಯಸುತ್ತೇನೆ. ನಿಮ್ಮ ಸರ್ಕಾರಗಳು ಎಲ್ಲೇ ಇದ್ದರೂ ಉತ್ತಮ ಆಡಳಿತ, ವಿತರಣೆ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ವಿಷಯದಲ್ಲಿ ಎನ್‌ಡಿಎ ಸರ್ಕಾರಗಳೊಂದಿಗೆ ಸ್ಪರ್ಧಿಸಿ. ದೇಶಕ್ಕೆ ಲಾಭವಾಗುತ್ತದೆ, ಮತ್ತು ನಿಮಗೂ ಲಾಭವಾಗುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಉತ್ತಮ ಕಾರ್ಯಗಳಿಗಾಗಿ ʻಎನ್‌ಡಿಎʼ ಜೊತೆ ಸ್ಪರ್ಧಿಸಿ ಮತ್ತು ಸುಧಾರಣೆಗಳ ವಿಷಯಗಳಲ್ಲಿ ದಿಟ್ಟತನ ತೋರಿ. ಸುಧಾರಣಾ ಕ್ರಮಗಳನ್ನು ಕೈಗೊಳ್ಳಿ ಮತ್ತು ನಿಮ್ಮ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಿ. ನಿಮ್ಮ ಆಯಾ ರಾಜ್ಯಗಳಿಗೆ ಹೆಚ್ಚಿನ ವಿದೇಶಿ ಹೂಡಿಕೆಯನ್ನು ತರಲು ಪ್ರಯತ್ನಿಸಿ. ಕೆಲವು ರಾಜ್ಯಗಳಲ್ಲಿ ಅವರ ಸರ್ಕಾರಗಳು ಇರುವುದರಿಂದ ಅವರಿಗೆ ಅವಕಾಶವಿದೆ. ಇದಕ್ಕಾಗಿ, ಅವರು ಬಿಜೆಪಿ ಸರ್ಕಾರಗಳೊಂದಿಗೆ ಸ್ಪರ್ಧಿಸಬೇಕು, ಎನ್‌ಡಿಎ ಸರ್ಕಾರಗಳೊಂದಿಗೆ ಸ್ಪರ್ಧಿಸಬೇಕು ಮತ್ತು ಸಕಾರಾತ್ಮಕ ಸ್ಪರ್ಧೆಯಲ್ಲಿ ತೊಡಗಬೇಕು. ಸೇವೆ ಸಲ್ಲಿಸಲು ಅವಕಾಶ ಪಡೆದವರು ಉದ್ಯೋಗ ಸೃಷ್ಟಿಯಲ್ಲಿ ಸ್ಪರ್ಧಿಸಬೇಕು. ಸರ್ಕಾರವು ಹೆಚ್ಚಿನ ಉದ್ಯೋಗವನ್ನು ಒದಗಿಸುವ ವಿಚಾರದಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮಲ್ಲಿ ಒಂದು ಮಾತಿದೆ, गहना कर्मणोगति:(ಗಹನಾ ಕರ್ಮಣೋ ಗತಿಃ).  ಅಂದರೆ, ನಾವು ಮಾಡುವ ಕ್ರಿಯೆಯ ಮಾರ್ಗವು ಶ್ರೇಷ್ಠವಾಗಿರಬೇಕು. ಆದ್ದರಿಂದ, ಆರೋಪಗಳು, ಸುಳ್ಳುಗಳು ಮತ್ತು ಮೋಸದ ಮೂಲಕ ಚರ್ಚೆಗಳನ್ನು ಗೆಲ್ಲುವ ಬದಲು, ಕ್ರಿಯೆ, ಕೌಶಲ್ಯ, ಸಮರ್ಪಣೆ ಮತ್ತು ಸೇವಾ ಮನೋಭಾವದ ಮೂಲಕ ಜನರ ಹೃದಯವನ್ನು ಗೆಲ್ಲುವ ಪ್ರಯತ್ನಗಳನ್ನು ಮಾಡಬೇಕು.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಚರ್ಚೆಯ ಮಧ್ಯೆ, ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ನನಗೆ ದುಃಖದ ಸುದ್ದಿಯೊಂದು ಬಂದಿದೆ, ದುರಂತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಸ್ಥಳೀಯ ಆಡಳಿತವು ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ನಾನು ಈ ಸದನದ ಮೂಲಕ ಎಲ್ಲರಿಗೂ ಭರವಸೆ ನೀಡುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು, ನಾವು ಸುದೀರ್ಘ ಚರ್ಚೆ ನಡೆಸಿದ್ದೇವೆ, ಮತ್ತು ಲೋಕಸಭೆಯಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಲು ನನಗೆ ಮೊದಲ ಬಾರಿಗೆ ಅವಕಾಶ ಸಿಕ್ಕಾಗ, ನಾನು ಇದೇ ರೀತಿಯ ಸವಾಲುಗಳನ್ನು ಎದುರಿಸಿದ್ದನ್ನು ನೀವು ನೋಡಿದ್ದೀರಿ. 2019ರಲ್ಲಿ ನಾನು ಇದೇ ರೀತಿಯ ಸವಾಲುಗಳನ್ನು ಎದುರಿಸಿದ್ದೆ. ನಾನು ರಾಜ್ಯಸಭೆಯಲ್ಲಿ ಅದೇ ಸವಾಲುಗಳನ್ನು ಎದುರಿಸಿದೆ, ಮತ್ತು ಈಗ ನಾನು ಅದರಿಂದಾಗಿ ಬಲಶಾಲಿಯಾಗಿದ್ದೇನೆ. ನನ್ನ ಧೈರ್ಯ ಬಲವಾಗಿದೆ, ನನ್ನ ಧ್ವನಿ ಬಲವಾಗಿದೆ ಮತ್ತು ನನ್ನ ಸಂಕಲ್ಪಗಳು ಬಲವಾಗಿವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅವರು ಎಷ್ಟೇ ಸಂಖ್ಯೆಗಳನ್ನು ಹೇಳಿಕೊಳ್ಳಲಿ. ನಾವು 2014ರಲ್ಲಿ ಬಂದಾಗ, ರಾಜ್ಯಸಭೆಯಲ್ಲಿ ನಮ್ಮ ಬಲವು ತುಂಬಾ ಕಡಿಮೆ ಇತ್ತು, ಮತ್ತು ಸಭಾಧ್ಯಕ್ಷರ ಒಲವು ಸಹ ಸ್ವಲ್ಪಮಟ್ಟಿಗೆ ಇನ್ನೊಂದು ಬದಿಯತ್ತ ಇತ್ತು. ಆದರೆ ಹೆಮ್ಮೆಯಿಂದ ದೇಶಕ್ಕೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದಿಂದ ನಾವು ವಿಮುಖರಾಗಲಿಲ್ಲ. ನಾನು ದೇಶದ ಜನರಿಗೆ ಹೇಳಲು ಬಯಸುವುದೇನೆಂದರೆ, ಇದು ನಿಮ್ಮ ತೀರ್ಪು, ಸೇವೆ ಸಲ್ಲಿಸಲು ನಮಗೆ ನೀವು ನೀಡಿದ ಜನಾದೇಶವಿದು, ಮೋದಿ ಅಥವಾ ಈ ಸರ್ಕಾರವು ಯಾವ ಅಡೆತಡೆಗಳಿಗೂ ಹೆದರುವುದಿಲ್ಲ. ನಾವು ಸಾಧಿಸಲು ಹೊರಟಿರುವ ಸಂಕಲ್ಪಗಳನ್ನು ನಾವು ಪೂರೈಸುತ್ತೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಬಾರಿ ಆಯ್ಕೆಯಾದ ನೂತನ ಸಂಸತ್ ಸದಸ್ಯರಿಗೆ ನನ್ನ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅವರು ಈಗಲಾದರೂ ಬಹಳಷ್ಟು ಕಲಿಯುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಈ ದೇಶದ ಜನರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದು ನಾನು ನಂಬುತ್ತೇನೆ. ಆದ್ದರಿಂದ, ಭಗವಂತ ಅವರಿಗೆ ಸ್ವಲ್ಪ ಬುದ್ಧಿವಂತಿಕೆಯನ್ನು ನೀಡುತ್ತಾನೆ ಎಂದು ನಾನು ಭಾವಿಸುತ್ತೇನೆ, ಆ 'ಬಾಲಕ ಬುದ್ಧಿ'ಗೆ ಸಹ. ಈ ನಿರೀಕ್ಷೆಯೊಂದಿಗೆ, ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣಕ್ಕಾಗಿ ನಾನು ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಮತ್ತು ಗೌರವಾನ್ವಿತ ಸಭಾಧ್ಯಕ್ಷರೇ, ನನಗೆ ಸಮಯ ನೀಡಿದ್ದಕ್ಕಾಗಿ, ವಿವರವಾಗಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಮತ್ತು ಗದ್ದಲದ ಹೊರತಾಗಿಯೂ ಸತ್ಯವನ್ನು ಕೇಳಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಂತಹ ಪ್ರಯತ್ನಗಳಿಂದ ಸತ್ಯವನ್ನು ತಡೆಯಲಾಗುವುದಿಲ್ಲ, ಮತ್ತು ಸುಳ್ಳಿಗೆ ಯಾವುದೇ ಆಧಾರಗಳಿರುವುದಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ಯಾರಿಗೆ ಅವಕಾಶ ನೀಡಲಾಗಿಲ್ಲವೋ, ಅದು ಅವರ ಪಕ್ಷದ ಜವಾಬ್ದಾರಿಯಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಅವರು ತಮ್ಮ ಸಂಸದರನ್ನು ನೋಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಸದನಕ್ಕೆ ಧನ್ಯವಾದ ಹೇಳುವ ಸಮಯದಲ್ಲಿ, ನಾನು ಇಂದು ಇಲ್ಲಿನ ಸಮಯವನ್ನು ತುಂಬಾ ಆನಂದಿಸಿದ್ದೇನೆ ಎಂದು ಹೇಳಲೇಬೇಕು. ನಾನು ಇಂದು ಸತ್ಯದ ಶಕ್ತಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದೇನೆ ಮತ್ತು ಸತ್ಯದ ಶಕ್ತಿಯನ್ನು ನೋಡಿದ್ದೇನೆ. ಆದ್ದರಿಂದ ಮಾನ್ಯ ಸಭಾಧ್ಯಕ್ಷರೆ, ನಾನು ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಅನಂತ ಧನ್ಯವಾದಗಳು!

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

 

*****



(Release ID: 2033167) Visitor Counter : 12