ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರಿಂದ ಇಂದು ಪಶ್ಚಿಮ ಬಂಗಾಳದ ಹೂಗ್ಲಿಯ ಅರಂಬಾಗ್ ನಲ್ಲಿ 7,200 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮತ್ತು ಶಂಕುಸ್ಥಾಪನೆ


ಭಾರತೀಯ ತೈಲ ಕಂಪನಿಯ 518 ಕಿ.ಮೀ ಹಲ್ದಿಯಾ-ಬರೌನಿ ಕಚ್ಚಾ ತೈಲ ಕೊಳವೆಮಾರ್ಗ ಉದ್ಘಾಟನೆ

ಖರಗ್ ಪುರದ ವಿದ್ಯಾಸಾಗರ ಕೈಗಾರಿಕಾ ಪಾರ್ಕ್ ನಲ್ಲಿ 120 ಟಿಎಂಟಿಪಿಎ ಸಾಮರ್ಥ್ಯದ ಭಾರತೀಯ ತೈಲ ಕಂಪನಿಯ ಬಾಟ್ಲಿಂಗ್ ಘಟಕ ಉದ್ಘಾಟನೆ

ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಮೂಲಸೌಕರ್ಯ ಬಲವರ್ಧನೆಯ ಹಲವು ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ

ಸುಮಾರು 2680 ಕೋಟಿ ಮೌಲ್ಯದ ಪ್ರಮುಖ ರೈಲ್ವೆ ಯೋಜನೆಗಳು ರಾಷ್ಟ್ರಕ್ಕೆ ಲೋಕಾರ್ಪಣೆ

ಪಶ್ಚಿಮ ಬಂಗಾಳದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಒಳಚರಂಡಿ ಸಂಬಂಧಿಸಿದ ಮೂರು ಯೋಜನೆಗಳ ಉದ್ಘಾಟನೆ

“21ನೇ ಶತಮಾನದಲ್ಲಿ ಭಾರತ ಕ್ಷಿಪ್ರವಾಗಿ ಪ್ರಗತಿ ಹೊಂದುತ್ತಿದೆ. ನಾವೆಲ್ಲರೂ ಒಗ್ಗೂಡಿ 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿ ಹಾಕಿಕೊಂಡಿದ್ದೇವೆ’’

“ದೇಶದ ಇತರೆಡೆಗಳಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲೂ ಅತ್ಯಂತ ವೇಗವಾಗಿ ರೈಲ್ವೆ ಆಧುನೀಕರಣಗೊಳಿಸಲು ಶ್ರಮಿಸುತ್ತಿದೆ’’

“ಪರಿಸರದೊಂದಿಗೆ ಸಾಮರಸ್ಯದಿಂದ ಹೇಗೆ ಅಭಿವೃದ್ಧಿ ಹೊಂದಬಹುದು ಎಂದು ಭಾರತ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ’’

“ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳ ಆರಂಭದಿಂದ ಹಲವು ಬಗೆಯ ಉದ್ಯೋಗವಕಾಶಗಳು ತೆರೆದುಕೊಳ್ಳುತ್ತವೆ’’

Posted On: 01 MAR 2024 3:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಹೂಗ್ಲಿಯ ಅರಂಬಾಗ್  ನಲ್ಲಿ ಸುಮಾರು 7200 ಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದು ಉದ್ಘಾಟಿಸಲಾದ ಅಭಿವೃದ್ಧಿ ಯೋಜನೆಗಳು ರೈಲು, ಬಂದರು, ಅನಿಲ ಕೊಳವೆ ಮಾರ್ಗ, ಎಲ್ ಪಿಜಿ ಪೂರೈಕೆ ಮತ್ತು ತ್ಯಾಜ್ಯ ನೀರು ಸಂಸ್ಕರಣೆಗೆ ಸಂಬಂಧಿಸಿದವು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, 21ನೇ ಶತಮಾನದ ಭಾರತದ ಕ್ಷಿಪ್ರ ಬೆಳವಣಿಗೆ ಹೊಂದುತ್ತಿದೆ ಮತ್ತು 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ ಎಂದರು. ಯುವಕರು, ಮಹಿಳೆಯರು, ರೈತರು ಮತ್ತು ಬಡವರ ಸಬಲೀಕರಣದ ಆದ್ಯತೆಗಳನ್ನು ಅವರು ಪುನರುಚ್ಚರಿಸಿದರು. "ನಾವು ಸದಾ ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇವೆ ಮತ್ತು ಅದರ ಫಲಿತಾಂಶಗಳು ಈಗ ವಿಶ್ವಕ್ಕೆ ಗೋಚರಿಸುತ್ತವೆ" ಎಂದು ಅವರು ಹೇಳಿದರು. 25 ಕೋಟಿ ಜನರು ಬಡತನದಿಂದ ಹೊರಬರುತ್ತಿರುವುದು ಸರ್ಕಾರದ ನಿರ್ದೇಶನ, ನೀತಿಗಳು ಮತ್ತು ಸೂಕ್ತ ನಿರ್ಧಾರಗಳನ್ನು ಸೂಚಿಸುತ್ತದೆ ಎಂಬ ಅಂಶವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಇದಕ್ಕೆಲ್ಲ ಮುಖ್ಯ ಕಾರಣ ಸರಿಯಾದ ಉದ್ದೇಶಗಳು ಎಂದು ಅವರು ಹೇಳಿದರು.

ರೈಲ್ವೆ, ಬಂದರುಗಳು, ಪೆಟ್ರೋಲಿಯಂ ಮತ್ತು ಜಲಶಕ್ತಿ ವಲಯಗಳನ್ನು ಒಳಗೊಂಡಿರುವ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸುಮಾರು 7,000 ಕೋಟಿ ರೂಪಾಯಿಗಳಿಗಿಂತ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ದೇಶದ ಇತರ ಭಾಗಗಳಂತೆ ಅದೇ ವೇಗದಲ್ಲಿ ರೈಲ್ವೆಯನ್ನು ಆಧುನೀಕರಣಗೊಳಿಸಲು ಶ್ರಮಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಉದ್ಯಮವನ್ನು ಉತ್ತೇಜಿಸುವ ಜೊತೆಗೆ ರೈಲು ಸಂಪರ್ಕವನ್ನು ಸುಧಾರಿಸಲು ಜಾರ್ಗ್ರಾಮ್ - ಸಲ್ಗಜಾರಿಗಳನ್ನು ಸಂಪರ್ಕಿಸುವ ಮೂರನೇ ರೈಲು ಮಾರ್ಗವನ್ನು  ಪ್ರಧಾನಿ ಉಲ್ಲೇಖಿಸಿದರು. ಸೋಂಡಾಲಿಯಾ - ಚಂಪಾಪುಕೂರ್ ಮತ್ತು ದಂಕುಣಿ - ಭಟ್ಟನಗರ - ಬಾಲ್ತಿಕುರಿ ರೈಲು ಮಾರ್ಗಗಳ ಜೋಡಿ ಮಾರ್ಗಗಳನ್ನು ಪರಿವರ್ತಿಸುವ ಬಗ್ಗೆ ಅವರು ಮಾತನಾಡಿದರು. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಮೂಲಸೌಕರ್ಯವನ್ನು ಬಲಪಡಿಸುವ ಅಭಿವೃದ್ಧಿ ಯೋಜನೆಗಳು ಮತ್ತು 1,000 ಕೋಟಿ ರೂ.ಗಿಂತ ಅಧಿಕ ಮೊತ್ತದ ಇತರ ಮೂರು ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು.

ಹಲ್ದಿಯಾ ಬರೌನಿ ಕಚ್ಚಾ ಅನಿಲ ಕೊಳವೆ ಮಾರ್ಗದ  ಉದಾಹರಣೆಯನ್ನು ನೀಡಿದ ಅವರು "ಪರಿಸರದೊಂದಿಗೆ ಸಾಮರಸ್ಯದಿಂದ ಅಭಿವೃದ್ಧಿಯನ್ನು ಹೇಗೆ ಮಾಡಬಹುದು ಎಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿದೆ" ಎಂದು  ಹೇಳಿದರು. ಕಚ್ಚಾ ತೈಲವನ್ನು ನಾಲ್ಕು ರಾಜ್ಯಗಳು- ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮೂಲಕ ಪೈಪ್‌ಲೈನ್ ಮೂಲಕ ಮೂರು ಸಂಸ್ಕರಣಾಗಾರಗಳಿಗೆ ಸಾಗಿಸಲಾಗುತ್ತದೆ, ಇದು ಉಳಿತಾಯ ಮತ್ತು ಪರಿಸರ ಸಂರಕ್ಷಣೆಗೆ ಕಾರಣವಾಗುತ್ತದೆ. ಎಲ್‌ಪಿಜಿ ಬಾಟ್ಲಿಂಗ್ ಘಟಕವು 7 ರಾಜ್ಯಗಳಿಗೆ ಅನುಕೂಲವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಎಲ್‌ಪಿಜಿ ಬೇಡಿಕೆಯನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದರು. ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ ಹಲವು ಜಿಲ್ಲೆಗಳ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

“ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳ ಆರಂಭವು ಉದ್ಯೋಗಕ್ಕಾಗಿ ಹಲವು ಮಾರ್ಗಗಳನ್ನು ತೆರೆಯುತ್ತದೆ” ಎಂದು ಒತ್ತಿ ಹೇಳಿದ ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಅಭಿವೃದ್ಧಿಗೆ ಈ ವರ್ಷದ ಬಜೆಟ್‌ನಲ್ಲಿ 13,000 ಕೋಟಿ ರೂ.ಗಿಂತ ಅಧಿಕ ಹಣವನ್ನು ನಿಗದಿಪಡಿಸಲಾಗಿದ್ದು, ಇದು 2014ಕ್ಕಿಂತ ಹಿಂದೆ ಇದ್ದ ಅನುದಾನಕ್ಕಿಂತ ಮೂರು ಪಟ್ಟು ಹೆಚ್ಚು ಎಂದರು. ರೈಲು ಮಾರ್ಗಗಳ ವಿದ್ಯುದ್ದೀಕರಣ, ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣ ಮತ್ತು ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಪೂರ್ಣಗೊಂಡಿರುವ ಬಾಕಿ ಉಳಿದಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಪಶ್ಚಿಮ ಬಂಗಾಳದಲ್ಲಿ 3,000 ಕಿ.ಮೀ.ಗೂ ಅಧಿಕ ರೈಲು ಮಾರ್ಗಗಳನ್ನು ವಿದ್ಯುದೀಕರಣಗೊಳಿಸಲಾಗಿದೆ, ಅಮೃತ್ ನಿಲ್ದಾಣ ಯೋಜನೆಯಡಿ ತಾರಕೇಶ್ವರ ರೈಲು ನಿಲ್ದಾಣದ ಮರುಅಭಿವೃದ್ಧಿ ಸೇರಿದಂತೆ ಸುಮಾರು 100 ರೈಲು ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. 150 ಕ್ಕೂ ಅಧಿಕ ಹೊಸ ರೈಲು ಸೇವೆ ಆರಂಭ ಮತ್ತು 5 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಜನರ ಕೊಡುಗೆಯೊಂದಿಗೆ ವಿಕಸಿತ ಭಾರತದ ಸಂಕಲ್ಪಗಳನ್ನು ಸಾಧಿಸಲಾಗುವುದು ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ನಾಗರಿಕರಿಗೆ ಶುಭ ಕೋರಿದರು.

ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:

ಪ್ರಧಾನಮಂತ್ರಿ ಅವರು, ಸುಮಾರು 2,790 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಭಾರತೀಯ ತೈಲ ಕಂಪನಿಯ 518-ಕಿಮೀ ಉದ್ದದ ಹಲ್ದಿಯಾ-ಬರೌನಿ ಕಚ್ಚಾ ತೈಲ ಕೊಳವೆ ಮಾರ್ಗವನ್ನು ಉದ್ಘಾಟಿಸಿದರು. ಈ ಪೈಪ್‌ಲೈನ್ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಮೂಲಕ ಹಾದು ಹೋಗುತ್ತದೆ. ಪೈಪ್‌ಲೈನ್ ಕಚ್ಚಾ ತೈಲವನ್ನು ಬರೌನಿ ರಿಫೈನರಿ, ಬೊಂಗೈಗಾಂವ್ ರಿಫೈನರಿ ಮತ್ತು ಗುವಾಹಟಿ ರಿಫೈನರಿಗಳಿಗೆ ಸುರಕ್ಷಿತ, ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಪೂರೈಸುತ್ತದೆ.

ಖರಗ್‌ಪುರದ ವಿದ್ಯಾಸಾಗರ್ ಕೈಗಾರಿಕಾ ಪಾರ್ಕ್‌ನಲ್ಲಿ 120 ಟಿಎಂಟಿಪಿಎ ಸಾಮರ್ಥ್ಯದ ಇಂಡಿಯನ್ ಆಯಿಲ್‌ನ ಎಲ್‌ಪಿಜಿ ಬಾಟ್ಲಿಂಗ್ ಘಟಕವನ್ನು ಪ್ರಧಾನಿ ಉದ್ಘಾಟಿಸಿದರು. 200 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕ ಈ ಪ್ರದೇಶದ ಮೊದಲ ಎಲ್‌ಪಿಜಿ ಬಾಟ್ಲಿಂಗ್ ಘಟಕವಾಗಲಿದೆ. ಇದು ಪಶ್ಚಿಮ ಬಂಗಾಳದ ಸುಮಾರು 14.5 ಲಕ್ಷ ಗ್ರಾಹಕರಿಗೆ ಎಲ್‌ಪಿಜಿ ಪೂರೈಸಲಿದೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸುಮಾರು 1000 ಕೋಟಿ ಮೌಲ್ಯದ ಮೂಲಸೌಕರ್ಯ ಬಲವರ್ಧನೆಗೊಳಿಸುವ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಶಂಕುಸ್ಥಾಪನೆ ಮಾಡಲಾದ ಯೋಜನೆಗಳಲ್ಲಿ ಬರ್ತ್ ನಂ. 8 ಎನ್ ಎಸ್ ಡಿ ಮರುನಿರ್ಮಾಣ ಮತ್ತು  ಕೋಲ್ಕತ್ತಾ ಡಾಕ್ ಸಿಸ್ಟಮ್ನ ಬರ್ತ್ ನಂಬರ್ 7 ಮತ್ತು 8 ಎನ್ ಎಸ್ ಡಿ ಆಧುನೀಕರಣ ಸೇರಿವೆ. ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನ ಹಲ್ದಿಯಾ ಡಾಕ್ ಕಾಂಪ್ಲೆಕ್ಸ್ ನಲ್ಲಿ ತೈಲ ಜೆಟ್ಟಿಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು ವರ್ಧಿಸುವ ಯೋಜನೆಯನ್ನು ಸಹ ಪ್ರಧಾನಿ ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸಿದರು. ಹೊಸದಾಗಿ ಸ್ಥಾಪಿಸಲಾದ ಅಗ್ನಿಶಾಮಕ ಸೌಲಭ್ಯವು ಅತ್ಯಾಧುನಿಕ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ಅತ್ಯಾಧುನಿಕ ಅನಿಲ ಮತ್ತು ಜ್ವಾಲೆಯ ಸಂವೇದಕಗಳನ್ನು ಹೊಂದಿದ್ದು, ತಕ್ಷಣದ ಅಪಾಯದ ಪತ್ತೆಯನ್ನು ಖಾತ್ರಿಪಡಿಸುತ್ತದೆ. 40 ಟನ್‌ಗಳಷ್ಟು ಎತ್ತುವ ಸಾಮರ್ಥ್ಯವಿರುವ ಹಲ್ದಿಯಾ ಡಾಕ್ ಕಾಂಪ್ಲೆಕ್ಸ್‌ನ ಮೂರನೇ ರೈಲ್ ಮೌಂಟೆಡ್ ಕ್ವೇ ಕ್ರೇನ್ (ಆರ್ ಎಂಕ್ಯೂಸಿ) ಅನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿರುವ ಈ ಹೊಸ ಯೋಜನೆಗಳು ವೇಗವಾಗಿ ಮತ್ತು ಸುರಕ್ಷಿತವಾದ ಸರಕು ನಿರ್ವಹಣೆ ಮತ್ತು ಸಾಗಾಣೆಗೆ ಸಹಾಯ ಮಾಡುವ ಮೂಲಕ ಬಂದರಿನ ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ.

ಸುಮಾರು 2680 ಕೋಟಿ ಮೌಲ್ಯದ ಪ್ರಮುಖ ರೈಲು ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಆ ಯೋಜನೆಗಳಲ್ಲಿ ಇವು ಒಳಗೊಂಡಿವೆ ಜಾರ್ಗ್ರಾಮ್ - ಸಲ್ಗಝರಿ (90 ಕಿಮೀ) ಅನ್ನು ಸಂಪರ್ಕಿಸುವ ಮೂರನೇ ರೈಲು ಮಾರ್ಗ; ಸೋಂಡಾಲಿಯಾ - ಚಂಪಾಪುಕೂರ್ ರೈಲು(24 ಕಿಮೀ) ಮಾರ್ಗದ ಜೋಡಿ ಮಾರ್ಗ; ಮತ್ತು ಡಂಕುಣಿ - ಭಟ್ಟನಗರ - ಬಾಲ್ಟಿಕುರಿ ರೈಲು ಮಾರ್ಗ (9 ಕಿಮೀ) ಜೋಡಿ ಮಾರ್ಗದ ಯೋಜನೆಗಳಿವೆ. ಈ ಯೋಜನೆಗಳು ಈ ಪ್ರದೇಶದಲ್ಲಿ ರೈಲು ಸಾರಿಗೆ ಸೌಲಭ್ಯಗಳನ್ನು ವಿಸ್ತರಿಸುತ್ತದೆ, ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಕಾರಣವಾಗುವ ಸರಕು ಸಾಗಣೆಯ ತಡೆರಹಿತ ಸೇವೆಯನ್ನು ಸುಗಮಗೊಳಿಸುತ್ತದೆ.

ಪಶ್ಚಿಮ ಬಂಗಾಳದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಒಳಚರಂಡಿಗೆ ಸಂಬಂಧಿಸಿದ ಮೂರು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಗಳಿಗೆ ವಿಶ್ವಬ್ಯಾಂಕ್‌ನಿಂದ ಆರ್ಥಿಕ ನೆರವು ದೊರೆತಿದೆ. ಆ ಯೋಜನೆಗಳಲ್ಲಿ ಹೌರಾದಲ್ಲಿ 65 ಎಂಎಲ್ ಡಿ ಸಾಮರ್ಥ್ಯ ಮತ್ತು 3.3 ಕಿಮೀ ಕೊಳಚೆನೀರಿನ ಜಾಲವನ್ನು ಹೊಂದಿರುವ ಇಂಟರ್ಸೆಪ್ಶನ್ ಮತ್ತು ಡೈವರ್ಶನ್ (ಐ&ಡಿ) ಕಾರ್ಯಗಳು ಮತ್ತು ಕೊಳಚೆ ನೀರಿನ ಸಂಸ್ಕರಣಾ ಘಟಕಗಳ (ಎಸ್ ಟಿಪಿ) ನಿರ್ಮಾಣ ಸೇರಿವೆ; 62 ಎಂಎಲ್ ಡಿ ಸಾಮರ್ಥ್ಯ ಮತ್ತು 11.3 ಕಿಮೀ ಒಳಚರಂಡಿ ಜಾಲವನ್ನು ಹೊಂದಿರುವ ಬಲ್ಲಿ ಯಲ್ಲಿ ಐ&ಡಿ ಕೆಲಸಗಳು ಮತ್ತು ಎಸ್ ಟಿಪಿ ಗಳು ಮತ್ತು 60 ಎಂಎಲ್ ಡಿ ಸಾಮರ್ಥ್ಯದ ಕಮರ್ಹಟಿ ಮತ್ತು ಬಾರಾನಗರದಲ್ಲಿ ಐ&ಡಿ ಕೆಲಸಗಳು ಮತ್ತು ಎಸ್ ಟಿಪಿ  ಗಳು ಮತ್ತು 8.15 ಕಿಮೀ ಒಳಚರಂಡಿ ಜಾಲವು ಸೇರಿವೆ.

***


 



(Release ID: 2010682) Visitor Counter : 34