ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 24 ರಂದು ಸಹಕಾರ ಕ್ಷೇತ್ರದ ಬಹುಮುಖ್ಯ ಉಪಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ


'ಸಹಕಾರ ವಲಯದ ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯ ಪ್ರಾಯೋಗಿಕ ಯೋಜನೆಯನ್ನು 11 ರಾಜ್ಯಗಳ 11 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ (ಪಿಎಸಿಎಸ್‌)  ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಉಗ್ರಾಣ(ಗೋಡೌನ್‌)ಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ದೇಶದಾದ್ಯಂತ ಹೆಚ್ಚುವರಿ 500 ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌) ಗಳಿಗೆ  ಅಡಿಪಾಯ ಹಾಕಲಿರುವ ಪ್ರಧಾನಮಂತ್ರಿ

ದೇಶದಾದ್ಯಂತ 18,000 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ (ಪಿಎಸಿಎಸ್‌) ಗಣಕೀಕರಣದ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

Posted On: 22 FEB 2024 4:42PM by PIB Bengaluru

ದೇಶದ ಸಹಕಾರ ಕ್ಷೇತ್ರವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಫೆಬ್ರವರಿ 2024 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಬೆಳಗ್ಗೆ 10:30ಕ್ಕೆ ಸಹಕಾರ ಕ್ಷೇತ್ರಕ್ಕಾಗಿ ಸಂಬಂಧಿಸಿದ ಅನೇಕ ಪ್ರಮುಖ ಉಪಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ ಮತ್ತು ಅಡಿಪಾಯವನ್ನು ಹಾಕಲಿದ್ದಾರೆ.

ದೇಶದಾದ್ಯಂತ 11 ರಾಜ್ಯಗಳ 11 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ (ಪಿಎಸಿಎಸ್‌) ಮಾಡಲಾಗುತ್ತಿರುವ 'ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯ ಪ್ರಾಯೋಗಿಕ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ಈ ಉಪಕ್ರಮದ ಅಡಿಯಲ್ಲಿ ಉಗ್ರಾಣ/ಗೋಡೌನ್‌ಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ದೇಶಾದ್ಯಂತ ಹೆಚ್ಚುವರಿ 500 ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳಿಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಲಿದ್ದಾರೆ.  ಈ ಉಪಕ್ರಮವು ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳು ಉಗ್ರಾಣ/ ಗೋಡೌನ್‌ ಗಳನ್ನು ಆಹಾರ ಧಾನ್ಯ ಪೂರೈಕೆ ಸರಪಳಿಯೊಂದಿಗೆ  ಸಂಯೋಜಿಸುವ ಗುರಿಯನ್ನು ಹೊಂದಿದೆ. ಆಹಾರ ಭದ್ರತೆಯನ್ನು ಬಲಪಡಿಸುವುದು ಮತ್ತು ನಬಾರ್ಡ್‌ನಿಂದ ಬೆಂಬಲಿತವಾದ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೇತೃತ್ವದ ಸಹಯೋಗ ಹಾಗೂ ಸಹ ಪ್ರಯತ್ನದೊಂದಿಗೆ ದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶವಾಗಿದೆ.  ಈ ಉಪಕ್ರಮವನ್ನು ಕೃಷಿ ಮೂಲಸೌಕರ್ಯ ನಿಧಿ (ಎ.ಐ.ಎಫ್), ಅಗ್ರಿಕಲ್ಚರ್ ಮಾರ್ಕೆಟಿಂಗ್ ಮೂಲಸೌಕರ್ಯ (ಎ.ಎಂ.), ಇತ್ಯಾದಿಗಳಂತಹ ವಿವಿಧ ಅಸ್ತಿತ್ವದಲ್ಲಿರುವ ಯೋಜನೆಗಳ ಏಕೀಕೃತ ಹಾಗೂ ಒಮ್ಮುಖದ ಮೂಲಕ ಫಲಪ್ರದವಾಗಿ ಕಾರ್ಯಗತಗೊಳಿಸಲಾಗುತ್ತಿದೆ.

ಪ್ರಧಾನಮಂತ್ರಿಯವರು ದೇಶದಾದ್ಯಂತ 18,000 ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)  ಗಳಲ್ಲಿ ಗಣಕೀಕರಣದ ಯೋಜನೆಯನ್ನು ಈ ಸಂದರ್ಭದಲ್ಲಿ  ಉದ್ಘಾಟಿಸಲಿದ್ದಾರೆ, ಇದು ಸಹಕಾರ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ "ಸಹಕಾರದಿಂದ ಸಮೃದ್ಧಿ(ಸಹಕಾರ್ ಸೇ ಸಮೃದ್ಧಿ)" ಎಂಬ ಸರ್ಕಾರದ ದೃಷ್ಟಿಕೋನಕ್ಕೆ  ಹೊಂದಿಕೆಯಾಗುತ್ತದೆ.

ರೂಪಾಯಿ 2,500 ಕೋಟಿಗೂ ಹೆಚ್ಚು ಆರ್ಥಿಕ ವೆಚ್ಚದಲ್ಲಿ ಈ ಅನನ್ಯ ಯೋಜನೆಗೆ ಅನುಮೋದನೆ ನೀಡಲಾಗಿದೆ.  ಈ ಉಪಕ್ರಮವು ಎಲ್ಲಾ ಕ್ರಿಯಾತ್ಮಕ ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳನ್ನು ಏಕೀಕೃತ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇ.ಆರ್. ಪಿ)  ಆಧಾರಿತ ರಾಷ್ಟ್ರೀಯ ಸಾಫ್ಟ್‌ವೇರ್‌ ಗೆ ಪೂರಕವಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಈ ಮೂಲಕ ಸಹಕಾರ ರಂಗದಲ್ಲಿ ಪರಸ್ಪರ ತಡೆರಹಿತ ಏಕೀಕರಣ ಮತ್ತು ಸಂಪರ್ಕವನ್ನು ಖಚಿತಪಡಿಸುತ್ತದೆ.  ರಾಜ್ಯ ಸಹಕಾರಿ ಬ್ಯಾಂಕ್‌ಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಮೂಲಕ ಈ ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳನ್ನು ನಬಾರ್ಡ್‌ನೊಂದಿಗೆ ಸಂಪರ್ಕಕೊಂಡಿ ಮಾಡುವ ಮೂಲಕ, ಯೋಜನೆಯು ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆಡಳಿತವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಹೀಗಾಗಿ ಈ ಯೋಜನೆಯು ಕೋಟಿಗಟ್ಟಲೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.  ಈ ಯೋಜನೆಗಾಗಿ ನಬಾರ್ಡ್ ಸಂಸ್ಥೆಯು ನೂತನ ರಾಷ್ಟ್ರೀಯ ಮಟ್ಟದ ಸಾಮಾನ್ಯ ಸಾಫ್ಟ್‌ವೇರ್ ಅನ್ನು ಕೂಡಾ ಅಭಿವೃದ್ಧಿಪಡಿಸಿದೆ. ದೇಶಾದ್ಯಂತ ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌) ಗಳ  ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ.  ಇ.ಆರ್.ಪಿ ಸಾಫ್ಟ್‌ವೇರ್‌ ನಲ್ಲಿ 18,000 ಪ್ರಾಥಮಿಕ ಕೃಷಿ ಸಾಲ ಸಂಘ(ಪಿಎಸಿಎಸ್‌)ಗಳ ಮಾಹಿತಿಯನ್ನು  ಆನ್‌ ಬೋರ್ಡಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಇದು ಸಹಕಾರ ಕ್ಷೇತ್ರದ ಬೃಹತ್ ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಗುರುತಿಸಲಾಗಿದೆ.

** **



(Release ID: 2008295) Visitor Counter : 66