ಪ್ರಧಾನ ಮಂತ್ರಿಯವರ ಕಛೇರಿ

ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


 "ಇದು ಭಾರತದ ಸಮಯ"

 "ಕಳೆದ 10 ವರ್ಷಗಳಲ್ಲಿ ಭಾರತವು ಹೇಗೆ ರೂಪಾಂತರಗೊಂಡಿದೆ ಎಂಬುದನ್ನು ವಿಶ್ವದ  ಪ್ರತಿಯೊಂದು ಅಭಿವೃದ್ಧಿ ತಜ್ಞರ ಗುಂಪು ಚರ್ಚಿಸುತ್ತಿದೆ"

 "ಜಗತ್ತು ಇಂದು ಭಾರತವನ್ನು ನಂಬುತ್ತಿದೆ"
 
"ಸ್ಥಿರತೆ, ಸುಸಂಗತತೆ ಮತ್ತು ನಿರಂತರತೆಯು ನಮ್ಮ ಒಟ್ಟಾರೆ ನೀತಿಯ 'ಮೊದಲ ತತ್ವಗಳಾಗಿವೆ"
 
“ಭಾರತವು ಕಲ್ಯಾಣ ರಾಜ್ಯವಾಗಿದೆ. ಸರ್ಕಾರವೇ ಪ್ರತಿಯೊಬ್ಬ ಅರ್ಹ ಫಲಾನುಭವಿಯನ್ನು ತಲುಪುವುದನ್ನು ನಾವು ಖಚಿತಪಡಿಸಿದ್ದೇವೆ"
 
"ಬಂಡವಾಳ ವೆಚ್ಚದ ರೂಪದಲ್ಲಿ ಉತ್ಪಾದನಾ ವೆಚ್ಚ, ಕಲ್ಯಾಣ ಯೋಜನೆಗಳಲ್ಲಿ ಅಭೂತಪೂರ್ವ ಹೂಡಿಕೆ, ಅನಗತ್ಯ ವೆಚ್ಚದ ಮೇಲಿನ ನಿಯಂತ್ರಣ ಮತ್ತು ಆರ್ಥಿಕ ಶಿಸ್ತು - ನಮ್ಮ ಪ್ರತಿ ಬಜೆಟ್‌ನ 4 ಮುಖ್ಯಾಂಶಗಳಾಗಿವೆ"
 
  "ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಗುರುತಾಗಿದೆ"
 
"ನಾವು 20ನೇ ಶತಮಾನದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಜತೆಗೆ, 21ನೇ ಶತಮಾನದ ಆಕಾಂಕ್ಷೆಗಳನ್ನು ಪೂರೈಸುತ್ತಿದ್ದೇವೆ"
 
"2014ರ ಹಿಂದಿನ 10 ವರ್ಷಗಳಲ್ಲಿ ದೇಶವು ಅನುಸರಿಸಿದ ನೀತಿಗಳ ಬಗ್ಗೆ ಸಂಸತ್ತಿನ ಈ ಅಧಿವೇಶನದಲ್ಲಿ ಶ್ವೇತಪತ್ರ ಮಂಡಿಸಲಾಗಿದೆ"

Posted On: 09 FEB 2024 10:53PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿಂದು ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ-2024 ಉದ್ದೇಶಿಸಿ ಭಾಷಣ ಮಾಡಿದರು.

ಜಾಗತಿಕ ವ್ಯಾಪಾರ ಶೃಂಗಸಭೆ-2024 ಆಯ್ಕೆ ಮಾಡಿದ 'ಅಡೆತಡೆ, ಅಭಿವೃದ್ಧಿ ಮತ್ತು ವೈವಿಧ್ಯೀಕರಣದ ವಿಷಯದ ಮಹತ್ವ ಕುರಿತು ಪ್ರಧಾನಿ ತಮ್ಮ ಭಾಷಣ ಆರಂಭಿಸಿದರು. "ಅಡಚಣೆ, ಅಭಿವೃದ್ಧಿ ಮತ್ತು ವೈವಿಧ್ಯೀಕರಣದ ವಿಷಯಕ್ಕೆ ಬಂದಾಗ, ಇದು ಭಾರತದ ಸಮಯ ಎಂದು ಎಲ್ಲರೂ ಒಪ್ಪಿಕೊಳ್ಳಬಹುದು". ವಿಶ್ವದಲ್ಲಿ ಭಾರತದ ಬಗ್ಗೆ ನಂಬಿಕೆ ಹೆಚ್ಚುತ್ತಿದೆ. ದಾವೋಸ್‌ನಲ್ಲಿ ಭಾರತದ ಬಗ್ಗೆ ತೋರಿದ ಅಭೂತಪೂರ್ವ ಉತ್ಸಾಹ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಭಾರತವನ್ನು ಅಭೂತಪೂರ್ವ ಆರ್ಥಿಕ ಯಶೋಗಾಥೆ ಎಂದು ಕರೆದಿರುವ ಬಗ್ಗೆ ನಡೆದ ಚರ್ಚೆಗಳನ್ನು ನೆನಪಿಸಿಕೊಂಡರು. ಭಾರತದ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳು ಹೊಸ ಎತ್ತರಕ್ಕೆ ಏರುತ್ತಿವೆ. ಭಾರತವು ವಿಶ್ವದ ಪ್ರತಿಯೊಂದು ವಲಯದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಹಿರಿಯ ಅಧಿಕಾರಿಯೊಬ್ಬರು ಭಾರತದ ಸಾಮರ್ಥ್ಯವನ್ನು 'ರೇಜಿಂಗ್ ಬುಲ್'ಗೆ ಹೋಲಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದ ಪರಿವರ್ತನೆಯ ಕುರಿತು ಚರ್ಚಿಸುತ್ತಿರುವ ವಿಶ್ವದ ಅಭಿವೃದ್ಧಿ ಪರಿಣಿತರ ಗುಂಪುಗಳು, ಇಂದು ಭಾರತದ ಕಡೆಗೆ ವಿಶ್ವದ ಬೆಳೆಯುತ್ತಿರುವ ನಂಬಿಕೆಯನ್ನು ತೋರಿಸುತ್ತಿದೆ. "ವಿಶ್ವದಲ್ಲಿ ಭಾರತದ ಸಾಮರ್ಥ್ಯ ಮತ್ತು ಯಶಸ್ಸಿನ ಬಗ್ಗೆ ಇಂತಹ ಸಕಾರಾತ್ಮಕ ಭಾವನೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ". ಭಾರತದ ಪಾಲಿಗೆ 'ಇದು ಸಮಯ, ಇದು ಸರಿಯಾದ ಸಮಯ'ವಾಗಿದೆ ಎಂದರು.

ಯಾವುದೇ ದೇಶದ ಅಭಿವೃದ್ಧಿ ಪಯಣದಲ್ಲಿ ಎಲ್ಲಾ ಸಂದರ್ಭಗಳು ಅದರ ಪರವಾಗಿ ಇರುವಾಗ ಒಂದು ಸುಸಮಯ ಬರುತ್ತದೆ. ಈ ಸಮಯದಲ್ಲಿ ದೇಶವು ಶತಮಾನಗಳ ತನಕ ಬಲಿಷ್ಠವಾಗುತ್ತಾ ಸಾಗುತ್ತದೆ. “ನಾನು ಇಂದು ಭಾರತದಲ್ಲಿ ಅದೇ ಸಮಯವನ್ನು ನೋಡುತ್ತಿದ್ದೇನೆ. ಈ ಅವಧಿಯು ಅಭೂತಪೂರ್ವವಾಗಿದೆ. ಒಂದು ರೀತಿಯಲ್ಲಿ, ರಾಷ್ಟ್ರದ ಪುಣ್ಯ ಚಕ್ರವು ಪ್ರಾರಂಭವಾಗಿದೆ”. ನಿರಂತರವಾಗಿ ಹೆಚ್ಚುತ್ತಿರುವ ಆರ್ಥಿಕ ಬೆಳವಣಿಗೆಯ ದರ ಮತ್ತು ಇಳಿಮುಖವಾಗುತ್ತಿರುವ ವಿತ್ತೀಯ ಕೊರತೆ, ರಫ್ತು ಏರಿಕೆ ಮತ್ತು ಚಾಲ್ತಿ ಖಾತೆ ಕೊರತೆಯು ಕಡಿಮೆಯಾಗಿದೆ. ಉತ್ಪಾದನಾ ವಲಯದ ಹೂಡಿಕೆ ದಾಖಲೆಯ ಏರಿಕೆಗೆ ಸಾಕ್ಷಿಯಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ. ಏರುತ್ತಿರುವ ಅವಕಾಶಗಳು ಮತ್ತು ಆದಾಯ, ಇಳಿಮುಖವಾಗುತ್ತಿರುವ ಬಡತನ, ಬೆಳೆಯುತ್ತಿರುವ ಬಳಕೆ ಮತ್ತು ಕಾರ್ಪೊರೇಟ್ ಲಾಭದಾಯಕತೆ ಮತ್ತು ಬ್ಯಾಂಕ್ ಎನ್‌ಪಿಎಯಲ್ಲಿ ದಾಖಲೆಯ ಇಳಿಕೆ. ಉತ್ಪಾದನೆ ಮತ್ತು ಉತ್ಪಾದಕತೆ ಎರಡೂ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು.

ಆರ್ಥಿಕ ತಜ್ಞರು ಮತ್ತು ಪತ್ರಕರ್ತರು ಈ ವರ್ಷದ ಮಧ್ಯಂತರ ಬಜೆಟ್ ಅನ್ನು 'ಜನಪ್ರಿಯ ಬಜೆಟ್ ಅಲ್ಲ' ಎಂದು ಕರೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಅವರ ವಿಮರ್ಶೆಗಳಿಗೆ ಧನ್ಯವಾದ ಅರ್ಪಿಸಿದರು, ಆದರೆ ಬಜೆಟ್‌ನ 'ಮೊದಲ ತತ್ವ'ಗಳತ್ತ ಗಮನ ಸೆಳೆದರು. ಸ್ಥಿರತೆ, ಸುಸಂಗತತೆ ಮತ್ತು ನಿರಂತರತೆ"ಯು ಒಟ್ಟಾರೆ ನೀತಿಯ " ಮೊದಲ ತತ್ವಗಳಾಗಿವೆ - ಈ ಬಜೆಟ್ ಈ ತತ್ವಗಳ ವಿಸ್ತರಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಹಿಂತಿರುಗಿ ನೋಡಿದಾಗ, ಆರೋಗ್ಯ ಮತ್ತು ಆರ್ಥಿಕತೆಯ ಅವಳಿ ಸವಾಲುಗಳನ್ನು ನಿಭಾಯಿಸುವ ಬಗ್ಗೆ ಯಾರಿಗೂ ಸುಳಿವು ಇಲ್ಲದ ವಿಶ್ವದಾದ್ಯಂತದ ಸರ್ಕಾರಗಳಿಗೆ ಇಡೀ ಅವಧಿಯು ಹೇಗೆ ದೊಡ್ಡ ಪರೀಕ್ಷೆಯಾಗಿ ಹೊರಹೊಮ್ಮಿತು ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಈ ಅವಧಿಯಲ್ಲಿ ಭಾರತವು ಜನರ ಜೀವ ಉಳಿಸಲು ಆದ್ಯತೆ ನೀಡಿತು. "ಜೀವನವಿದ್ದರೆ ಎಲ್ಲವೂ ಇದೆ", ಜೀವ ಉಳಿಸುವ ಸಂಪನ್ಮೂಲಗಳನ್ನು ಸಂಗ್ರಹಿಸುವ ಮತ್ತು ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸರ್ಕಾರದ ಪ್ರಯತ್ನಗಳು ಯಸ್ವಿಯಾಗಿ ನಡೆದವು. ಬಡವರಿಗೆ ಉಚಿತ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ, ಭಾರತದಲ್ಲಿ ತಯಾರಿಸಿದ ಲಸಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ, ತ್ವರಿತ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿದೆ.  "ಸರ್ಕಾರವು ಆರೋಗ್ಯ ಮತ್ತು ಜೀವನೋಪಾಯದ ಬೇಡಿಕೆಗಳನ್ನು ಪರಿಹರಿಸಿದೆ", ಮಹಿಳೆಯರ ಖಾತೆಗಳಿಗೆ ನೇರ ನಗದು ವರ್ಗಾವಣೆ, ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಹಣಕಾಸಿನ ನೆರವು ಮತ್ತು ಕೃಷಿ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸುವ ಕ್ರಮಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ದುರಂತವನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಸರ್ಕಾರ ತೆಗೆದುಕೊಂಡಿದೆ.  ಬೇಡಿಕೆಯನ್ನು ಹೆಚ್ಚಿಸಲು ಮತ್ತು ದೊಡ್ಡ ಉದ್ಯಮಗಳಿಗೆ ಸಹಾಯ ಮಾಡಲು ಹೆಚ್ಚಿನ ಹಣವನ್ನು ಮುದ್ರಿಸಲು ಆ ಸಮಯದಲ್ಲಿ ತಜ್ಞರ ಅಭಿಪ್ರಾಯವನ್ನು ಪಡೆಯಲಾಯಿತು.  ಆದರೆ ವಿಶ್ವದ ಅನೇಕ ಸರ್ಕಾರಗಳು ಅಳವಡಿಸಿಕೊಂಡ ಕಾರ್ಯವಿಧಾನವು ಹಣದುಬ್ಬರ ಮಟ್ಟ ಏರಿಕೆಗೆ ಕಾರಣವಾಯಿತು. "ನಮ್ಮ ಮೇಲೂ ಒತ್ತಡ ಹೇರಲು ಹಲವು ಪ್ರಯತ್ನಗಳು ನಡೆದವು. "ಆದರೆ ನಾವು ನೆಲದ ವಾಸ್ತವತೆಯನ್ನು ತಿಳಿದಿದ್ದೇವೆ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಅನುಭವ ಮತ್ತು ನಮ್ಮ ಆತ್ಮಸಾಕ್ಷಿಯ ಆಧಾರದ ಮೇಲೆ ನಾವು ಮುಂದೆ ಸಾಗಿದೆವು. ಒಂದು ಕಾಲದಲ್ಲಿ ಪ್ರಶ್ನಿಸಲಾಗುತ್ತಿದ್ದ ಆದರೆ ಸರಿ ಎಂದು ಸಾಬೀತುಪಡಿಸಿದ ಭಾರತದ ನೀತಿಗಳು ಇಂದು ಆರ್ಥಿಕತೆಯ ಬಲವಾದ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
 
“ಭಾರತವು ಕಲ್ಯಾಣ ರಾಷ್ಟ್ರವಾಗಿದೆ. ಸಾಮಾನ್ಯ ನಾಗರಿಕರ ಜೀವನ ಸುಲಭಗೊಳಿಸುವುದು ಮತ್ತು ಜೀವನದ ಗುಣಮಟ್ಟ ಸುಧಾರಿಸುವುದು ಸರ್ಕಾರದ ಆದ್ಯತೆಯಾಗಿದೆ. ಒಂದೆಡೆ ಹೊಸ ಯೋಜನೆಗಳನ್ನು ರೂಪಿಸಿದರೆ, ಮತ್ತೊಂದೆಡೆ ಸರ್ಕಾರ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಕೊಂಡೊಯ್ಯುತ್ತಿದೆ. "ನಾವು ಪ್ರಸ್ತುತ ಮಾತ್ರವಲ್ಲದೆ ದೇಶದ ಭವಿಷ್ಯಕ್ಕೂ ಹೂಡಿಕೆ ಮಾಡಿದ್ದೇವೆ". ಪ್ರತಿ ಬಜೆಟ್‌ನಲ್ಲಿ 4 ಪ್ರಮುಖ ಅಂಶಗಳನ್ನು ಎತ್ತಿ ತೋರಿಸಲಾಗಿದೆ. ಬಂಡವಾಳ ವೆಚ್ಚದ ರೂಪದಲ್ಲಿ ದಾಖಲೆಯ ಉತ್ಪಾದನಾ ವೆಚ್ಚ, ಕಲ್ಯಾಣ ಯೋಜನೆಗಳಲ್ಲಿ ಅಭೂತಪೂರ್ವ ಹೂಡಿಕೆ, ಅನಗತ್ಯ ವೆಚ್ಚಗಳ ಮೇಲಿನ ನಿಯಂತ್ರಣ ಮತ್ತು ಆರ್ಥಿಕ ಶಿಸ್ತು ಕಾಪಾಡಲಾಗಿದೆ. ಸಮತೋಲನ ಕಾಯ್ದುಕೊಳ್ಳಲಾಗಿದೆ. ಈ ಎಲ್ಲಾ 4 ವಿಷಯಗಳಲ್ಲಿ ನಿಗದಿತ ಗುರಿಗಳನ್ನು ಸಾಧಿಸಲಾಗಿದೆ. ಅಪೇಕ್ಷಿತ ಗುರಿಗಳನ್ನು ಸಾಧಿಸುವಲ್ಲಿ ‘ಉಳಿಸಿದ ಹಣ ಗಳಿಸಿದ ಹಣ’ ಎಂಬ ಮಂತ್ರಕ್ಕೆ ಮನ್ನಣೆ ನೀಡಲಾಗಿದೆ. ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ವಿಳಂಬದಿಂದಾಗಿ ಹೆಚ್ಚುತ್ತಿರುವ ಯೋಜನಾ ವೆಚ್ಚ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅದಕ್ಕಾಗಿ 2008ರಲ್ಲಿ ಪ್ರಾರಂಭವಾದ ಸಮರ್ಪಿತ ಪೂರ್ವ ಸರಕು ಸಾಗಣೆ ಕಾರಿಡಾರ್ ಯೋಜನೆಯ ಉದಾಹರಣೆ ನೀಡಿದರು. ಕಳೆದ ವರ್ಷ ಪೂರ್ಣಗೊಂಡ ನಂತರ ಯೋಜನೆಯ ವೆಚ್ಚವು 16,500 ಕೋಟಿಗಳಿಂದ 50,000 ಕೋಟಿ ರೂ.ಗಳಿಗೆ ಏರಿದೆ. 1998ರಲ್ಲಿ ಪ್ರಾರಂಭಿಸಲಾದ ಅಸ್ಸಾಂನ ಬೋಗಿಬೀಲ್ ಸೇತುವೆ ನಿರ್ಮಾಣ ಯೋಜನೆಯ ವೆಚ್ಚ 2018ರಲ್ಲಿ ಪೂರ್ಣಗೊಂಡ ನಂತರ 1,100 ಕೋಟಿಗಳಿಂದ 5,000 ಕೋಟಿಗಳಿಗೆ ಏರಿತು.

ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಮೂಲಕ ಮತ್ತು ತಂತ್ರಜ್ಞಾನ ಬಳಸಿಕೊಂಡು ದೇಶದ ಹಣವನ್ನು ಉಳಿಸಲಾಗುತ್ತಿದೆ. ಕೇವಲ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ. ನೇರ ನಗದು ವರ್ಗಾವಣೆಯೊಂದಿಗೆ ಹಣದ ಸೋರಿಕೆ ತಡೆಗಟ್ಟಲಾಗಿದೆ. ತಪ್ಪು ಕೈಗಳಿಗೆ ಹಣ ಹೋಗುವುದನ್ನು ತಪ್ಪಿಸಿದ್ದರಿಂದ 3.25 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಸರ್ಕಾರಿ ಸರಕುಗಳನ್ನು ಖರೀದಿಸಲು ಜಿಇಎಂ ಪೋರ್ಟಲ್ ಮೂಲಕ 65,000 ಕೋಟಿ ರೂಪಾಯಿ ಉಳಿತಾಯ ಮತ್ತು ತೈಲ ಸಂಗ್ರಹಣೆಯ ವೈವಿಧ್ಯೀಕರಣದಿಂದ 25,000 ಕೋಟಿ ರೂಪಾಯಿ ಉಳಿಸಲಾಗಿದೆ. "ಕಳೆದ ವರ್ಷದಲ್ಲಿ, ನಾವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಮೂಲಕ 24,000 ಕೋಟಿ ರೂಪಾಯಿಗಳನ್ನು ಉಳಿಸಿದ್ದೇವೆ".  ಸರ್ಕಾರಿ ಕಟ್ಟಡಗಳಲ್ಲಿ ಬಿದ್ದಿರುವ ಕಚೇರಿಯ ಕಸ ಮತ್ತು ಅನುಪಯುಕ್ತ ವಸ್ತುಗಳ ಮಾರಾಟ ಮೂಲಕ ಸರ್ಕಾರ 1,100 ಕೋಟಿ ರೂಪಾಯಿ ಗಳಿಸಿದ ಸ್ವಚ್ಛತಾ ಅಭಿಯಾನವನ್ನು ಅವರು ಪ್ರಸ್ತಾಪಿಸಿದರು.

ನಾಗರಿಕರು ಹಣ ಉಳಿಸುವ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ರೂಪಿಸಲಾಗಿದೆ. ಬಡವರಿಗೆ ಶುದ್ಧ ಕುಡಿಯುವ ನೀರು ಖಾತ್ರಿಪಡಿಸುವ ಜಲ ಜೀವನ್ ಮಿಷನ್ ಆರಂಭಿಸಲಾಗಿದೆ. ಇದರಿಂದಾಗಿ ನೀರಿನಿಂದ ಹರಡುವ ರೋಗಗಳ ಮೂಲಕ ಉಂಟಾಗುವ ಕಾಯಿಲೆಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ 80% ಅಗ್ಗದ ಔಷಧಿಗಳ ಮೂಲಕ 30,000 ಕೋಟಿ ರೂಪಾಯಿ ಉಳಿಸಲಾಗಿದೆ. ಆಯುಷ್ಮಾನ್ ಭಾರತ್ ದೇಶದ ಬಡವರನ್ನು 1 ಲಕ್ಷ ಕೋಟಿ ರೂಪಾಯಿಗಳಿಂದ ಉಳಿಸಿದೆ ಎಂದರು.

ಈಗಿನ ಪೀಳಿಗೆಗೆ ಮಾತ್ರವಲ್ಲದೆ ಮುಂದಿನ ಹಲವು ಪೀಳಿಗೆಗಳಿಗೂ ನಮ್ಮ ಸರ್ಕಾರ ಜವಾಬ್ದಾರಿಯಾಗಿದೆ. ಹೀಗಾಗಿ, ನೀತಿಗಳು ಮತ್ತು ನಿರ್ಧಾರಗಳಲ್ಲಿ ಹಣಕಾಸು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯುತ್ತಿನ ಉದಾಹರಣೆ ನೀಡಿದ ಪ್ರಧಾನಿ, 1 ಕೋಟಿ ಮನೆಗಳಿಗೆ ರೂಫ್‌ಟಾಪ್ ಸೋಲಾರ್ ಯೋಜನೆ ರೂಪಿಸಲಾಗಿದೆ.  ಜನರು ವಿದ್ಯುತ್ ಉತ್ಪಾದಿಸುವ ಮೂಲಕ ತಮ್ಮ ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ಇಳಿಸಬಹುದು. ಜತೆಗೆ, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಬಹುದು. ಉಜಾಲಾ ಯೋಜನೆಯಡಿ ಒದಗಿಸಲಾದ ಎಲ್‌ಇಡಿ ಬಲ್ಬ್‌ಗಳು 20,000 ಕೋಟಿಗಳಷ್ಟು ವಿದ್ಯುತ್ ಬಿಲ್‌ಗಳನ್ನು ಉಳಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.

ಕಳೆದ 7 ದಶಕಗಳಿಂದ ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ಘೋಷಣೆಗಳು ಮೊಳಗುತ್ತಿದ್ದರೂ, ಅವು ಪರಿಣಾಮ ಬೀರಲು ವಿಫಲವಾಗಿವೆ. ಹವಾನಿಯಂತ್ರಿತ ಕೊಠಡಿಗಳಿಂದ ಸಲಹೆಗಳನ್ನು ನೀಡುವವರು ಮಿಲಿಯನೇರ್ ಆಗಿದ್ದಾರೆ. ಆದರೆ ಬಡವರು ಬಡವರಾಗಿ ಉಳಿದಿದ್ದಾರೆ. 2014ರ ನಂತರ, ಸರ್ವತೋಮುಖ ಕೆಲಸಗಳು ಪ್ರಾರಂಭವಾದ ಪರಿಣಾಮವಾಗಿ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬರಲು ಪ್ರಾರಂಭಿಸಿದ್ದಾರೆ. ಇದಕ್ಕೆ ನಮ್ಮ ಸರ್ಕಾರದ ನೀತಿಗಳೇ ಕಾರಣ. “ನಾನು ಬಡತನದಿಂದ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಬಡತನದ ವಿರುದ್ಧ ಹೇಗೆ ಹೋರಾಡಬೇಕೆಂದು ನನಗೆ ತಿಳಿದಿದೆ. ಈ ದಿಕ್ಕಿನಲ್ಲಿ ಮುನ್ನಡೆಯುವ ಮೂಲಕ ನಾವು ದೇಶದ ಬಡತನವನ್ನು ಕಡಿಮೆ ಮಾಡುತ್ತೇವೆ, ನಮ್ಮ ದೇಶವನ್ನು ಅಭಿವೃದ್ಧಿಗೊಳಿಸುತ್ತೇವೆ.” ಎಂದು ಶ್ರೀ ಮೋದಿ ಅವರು ತಿಳಿಸಿದರು.
 
"ಭಾರತದ ಆಡಳಿತ ಮಾದರಿಯು ಏಕಕಾಲದಲ್ಲಿ 2 ದಿಕ್ಕುಗಳಲ್ಲಿ ಮುನ್ನಡೆಯುತ್ತಿದೆ". ಒಂದೆಡೆ 20ನೇ ಶತಮಾನದ ಸವಾಲುಗಳನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ 21ನೇ ಶತಮಾನದ ಆಶಯಗಳನ್ನು ಈಡೇರಿಸಲು ಸರಕಾರ ಶ್ರಮಿಸುತ್ತಿದೆ. ಅಭಿವೃದ್ಧಿ ನಿಯತಾಂಕಗಳ ಹೋಲಿಕೆಗಳನ್ನು ಚಿತ್ರಿಸಿದ ಪ್ರಧಾನಿ, 11 ಕೋಟಿ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುವುದು, ಬಡವರಿಗೆ 4 ಕೋಟಿ ಮನೆಗಳನ್ನು ಒದಗಿಸುವುದು, 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸುವುದು, 300ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು. ಸರಕು ಸಾಗಣೆ ಕಾರಿಡಾರ್ ಮತ್ತು ರಕ್ಷಣಾ ಕಾರಿಡಾರ್, ವಂದೇ ಭಾರತ್ ರೈಲುಗಳನ್ನು ಓಡಿಸುವ ಜೊತೆಗೆ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಸುಮಾರು 10,000 ಎಲೆಕ್ಟ್ರಿಕ್ ಬಸ್ ಗಳು. ಕೋಟ್ಯಂತರ ಭಾರತೀಯರನ್ನು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಸಂಪರ್ಕಿಸುವ ಮತ್ತು ಡಿಜಿಟಲ್ ಇಂಡಿಯಾ ಮತ್ತು ಹಣಕಾಸು ತಂತ್ರಜ್ಞಾನಗಳ ಮೂಲಕ ಬಹುಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದರು.

ನಮ್ಮ ಸರ್ಕಾರವು ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚಿನ ವೇಗದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ. ಕಳೆದ 10 ವರ್ಷಗಳಿಂದ 2014ರ ವರೆಗಿನ ಕೆಲಸಗಳ ಹೋಲಿಕೆಗಳ ಮೇಲೆ ಬೆಳಕು ಚೆಲ್ಲಿದ ಅವರು, ರೈಲ್ವೆ ಮಾರ್ಗಗಳ ವಿದ್ಯುದೀಕರಣವನ್ನು ಸುಮಾರು 20,000 ಕಿ.ಮೀ.ಗಳಿಂದ 40,000 ಕಿ.ಮೀ.ಗಿಂತ ಹೆಚ್ಚಿನ ಮಟ್ಟಕ್ಕೆ ಏರಿಸಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವು 18,000 ಕಿ.ಮೀ.ನಿಂದ ಸುಮಾರು 30,000 ಕಿ.ಮೀ.ಗೆ ಏರಿಕೆ ಆಗಿದೆ.  ಮೆಟ್ರೋ ರೈಲು ಜಾಲವನ್ನು 250 ಕಿಲೋಮೀಟರ್‌ ನಿಂದ 650 ಕಿಮೀಗಿಂತ ಹೆಚ್ಚಿನ ಮಟ್ಟಕ್ಕೆ  ವಿಸ್ತರಿಸಲಾಗಿದೆ. 2019ರಿಂದ ಜಲ ಜೀವನ್ ಮಿಷನ್ ಅಡಿ, 2014ರ ವರೆಗೆ ಏಳು ದಶಕಗಳ ಅವಧಿಯಲ್ಲಿ ಭಾರತದಲ್ಲಿ 3.5 ಕೋಟಿ ನಲ್ಲಿ ನೀರು ಸಂಪರ್ಕ ನೀಡಲಾಗಿತ್ತು. ಆದರೀಗ ಕಳೆದ 5 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 10 ಕೋಟಿ ಮನೆಗಳು ನಳ ನೀರು ಸಂಪರ್ಕ ಪಡೆದಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು.

2014ರ ಹಿಂದಿನ 10 ವರ್ಷಗಳಲ್ಲಿ ಅನುಸರಿಸಿದ ನೀತಿಗಳು ದೇಶವನ್ನು ಬಡತನದ ಹಾದಿಗೆ ಕೊಂಡೊಯ್ಯುತ್ತಿತ್ತು. ಈ ಬಗ್ಗೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಶ್ವೇತಪತ್ರ ಮಂಡಿಸಲಾಗಿದೆ. ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳುವ ದೊಡ್ಡ ಅಪಾಯಕ್ಕೆ ಕಾರಣವಾಗುವ ಹಗರಣಗಳು ಮತ್ತು ನಿಷ್ಕ್ಟಿಯ ನೀತಿಗಳಿಂದಾಗಿ ವಿಶ್ವಾದ್ಯಂತ ಹೂಡಿಕೆದಾರರಲ್ಲಿ ದೊಡ್ಡ ನಿರಾಶೆ ಉಂಟಾಗಿತ್ತು. ಈಗ ಭಾರತದ ಆರ್ಥಿಕತೆಯು ಸದೃಢ ಸ್ಥಿತಿಯಲ್ಲಿದ್ದು, ಸರ್ಕಾರವು ಸಂಪೂರ್ಣ ಸತ್ಯವನ್ನು ಶ್ವೇತಪತ್ರದ ರೂಪದಲ್ಲಿ ದೇಶದ ಮುಂದೆ ಮಂಡಿಸಿದೆ ಎಂದರು.

"ಭಾರತವು ಪ್ರಗತಿಯ ಹೊಸ ಎತ್ತರಕ್ಕೆ ಏರುತ್ತಿದೆ". ದೇಶವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದೆ. ಪ್ರಸ್ತುತ ಸರ್ಕಾರದ 3ನೇ ಅವಧಿಯು ಬೃಹತ್ ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಅಭಿವೃದ್ಧಿಗೆ ಹೊಸ ಪ್ರಚೋದನೆ ಮತ್ತು ಉತ್ತೇಜನ ನೀಡುವ ಮೂಲಕ ಬಡತನ ತೊಡೆದುಹಾಕಲು ಹೊಸ ಯೋಜನೆಗಳಿಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. 15 ಲಕ್ಷಕ್ಕೂ ಹೆಚ್ಚು ಜನರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. “ನವ ಭಾರತವು ಅತಿ ವೇಗದಲ್ಲಿ ಕೆಲಸ ಮಾಡುತ್ತದೆ. ಇದು ಮೋದಿಯವರ ಗ್ಯಾರಂಟಿ ಎಂದು ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

*****

 

 



(Release ID: 2005300) Visitor Counter : 64