ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಯವರ ಉತ್ತರದ ಕನ್ನಡ ಪಠ್ಯಾಂತರ

Posted On: 07 FEB 2024 9:25PM by PIB Bengaluru

ಗೌರವಾನ್ವಿತ ಸಭಾಧ್ಯಕ್ಷರೇ,

ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಲು ನಾನು ಇಲ್ಲಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಈ 75ನೇ ಗಣರಾಜ್ಯೋತ್ಸವವು ಸ್ವತಃ ಒಂದು ಮಹತ್ವದ ಮೈಲುಗಲ್ಲಾಗಿದೆ. ಸಂವಿಧಾನದ ಪ್ರಯಾಣದ ಈ ನಿರ್ಣಾಯಕ ಹಂತದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ, ಭಾರತದ ಉಜ್ವಲ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಲಕ್ಷಾಂತರ ಭಾರತೀಯರ ಸಾಮರ್ಥ್ಯವನ್ನು ಸಂಸತ್ತಿನ ಮುಖಾಂತರ ಬಹಳ ಸಂಕ್ಷಿಪ್ತವಾಗಿ, ಆದರೆ ಭವ್ಯವಾದ ರೀತಿಯಲ್ಲಿ ರಾಷ್ಟ್ರದ ಮುಂದೆ ಪ್ರಸ್ತುತಪಡಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳಿಗೆ ಈ ಸ್ಪೂರ್ತಿದಾಯಕ ಭಾಷಣಕ್ಕಾಗಿ, ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಹಾಗೂ ʻವಿಕಸಿತ ಭಾರತ'ದ ಕಡೆಗೆ ಭಾರತದ ಸಂಕಲ್ಪವನ್ನು ಸಶಕ್ತಗೊಳಿಸಿದ್ದಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಚರ್ಚೆಯ ಸಮಯದಲ್ಲಿ, ಅನೇಕ ಗೌರವಾನ್ವಿತ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು ಚರ್ಚೆಯನ್ನು ಶ್ರೀಮಂತಗೊಳಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರು. ಈ ಚರ್ಚೆಯನ್ನು ಶ್ರೀಮಂತಗೊಳಿಸಲು ಪ್ರಯತ್ನಗಳನ್ನು ಮಾಡಿದ ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೆಲವು ಸಹೋದ್ಯೋಗಿಗಳು ತಮಗೆ ಕಡ್ಡಾಯವೆಂಬಂತೆ ಟೀಕೆಗಳನ್ನು ಮಾಡುವುದು, ಕಟು ಪದಗಳನ್ನು ಬಳಸುವುದು ಮಾಡಿದ್ದಾರೆ, ಮತ್ತು ಅವರ ಬಗ್ಗೆಯೂ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ.

ಆ ದಿನ ನಾನು ಅದನ್ನು ಹೇಳಲು ಸಾಧ್ಯವಾಗಲಿಲ್ಲ, ಆದರೆ ನಾನು (ಮಲ್ಲಿಕಾರ್ಜುನ್) ಖರ್ಗೆ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಖರ್ಗೆ ಅವರ ಮಾತುಗಳನ್ನು ಬಹಳ ಗಮನವಿಟ್ಟು ಕೇಳುತ್ತಿದ್ದೆ, ಅವರ ಮಾತುಗಳನ್ನು ಕೇಳಿ ನಾನು ರೋಮಾಂಚನಗೊಂಡೆ... ಇದು ಬಹಳ ಅಪರೂಪ. ಕೆಲವೊಮ್ಮೆ ನೀವು ಲೋಕಸಭೆಯಲ್ಲಿ ರೋಮಾಂಚಿತರಾಗುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಬೇರೆಡೆ ಕಾರ್ಯನಿರತರಾಗಿದ್ದಾರೆ, ಆದ್ದರಿಂದ ಹೆಚ್ಚಿನ ಮನರಂಜನೆ ಇಲ್ಲ. ಆದರೆ ಲೋಕಸಭೆಯಲ್ಲಿ ನಾವು ಅನುಭವಿಸುತ್ತಿದ್ದ ಮನರಂಜನೆಯ ಕೊರತೆಯನ್ನು ನೀವು ಆ ದಿನ ಸರಿದೂಗಿಸಿದಿರಿ. ಗೌರವಾನ್ವಿತ ಖರ್ಗೆ ಅವರು ಬಹಳ ಹೊತ್ತು ಮತ್ತು ಶಾಂತವಾಗಿ ಮಾತನಾಡಿದ್ದು ನನಗೆ ಸಂತೋಷ ತಂದಿತು. ಅವರು ಬಹಳ ಸಮಯ ಮಾತನಾಡಿದರು. ಅವರಿಗೆ ಇಷ್ಟೊಂದು ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದ್ದಾದರೂ ಹೇಗೆ ಎಂದು ನಾನು ಅಚ್ಚರಿಪಟ್ಟೆ. ಇದರ ಬಗ್ಗೆ ನಾನು ಯೋಚಿಸುತ್ತಿರುವಾಗ, ಇಬ್ಬರು ವಿಶೇಷ 'ಕಮಾಂಡರ್‌ಗಳು' ಆ ದಿನ ಅಲ್ಲಿ ಹಾಜರಿರಲಿಲ್ಲ ಎಂಬುದನ್ನು ನಾನು ಗಮನಿಸಿದೆ. ಅವರು ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿಲ್ಲ. ಆದ್ದರಿಂದ, ಗೌರವಾನ್ವಿತ ಖರ್ಗೆ ಅವರು ಹೆಚ್ಚಿನ ಸ್ವಾತಂತ್ರ್ಯದ ಪ್ರಯೋಜನವನ್ನು ಪಡೆದುಕೊಂಡರು. ಖರ್ಗೆ ಅವರು ಆ ದಿನ 'ಐಸಾ ಮೌಕಾ ಫಿರ್ ಕಹಾ ಮಿಲೇಗಾ' (ನಿಮಗೆ ಅಂತಹ ಅವಕಾಶ ಬೇರೆಲ್ಲಿ ಸಿಗುತ್ತದೆ) ಎಂಬ ಚಿತ್ರಗೀತೆಯನ್ನು ಕೇಳಿರಬೇಕು ಎಂದು ನಾನು ಭಾವಿಸುತ್ತೇನೆ. ಈಗ ಖರ್ಗೆ ಅವರು ʻಅಂಪೈರ್ʼ ಮತ್ತು ʻಕಮಾಂಡೋʼ ಅಲ್ಲ, ಆದ್ದರಿಂದ ಅವರು ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುದನ್ನು ಆನಂದಿಸುತ್ತಿದ್ದರು. ಆದರೆ ಒಂದು ವಿಷಯ ತುಂಬಾ ಸಂತೋಷಕರವಾಗಿತ್ತು. ಅವರು ನೀಡಿದ ʻಎನ್‌ಡಿಎʼಗೆ 400 ಸ್ಥಾನಗಳ ಗೆಲುವಿನ ಆಶೀರ್ವಾದವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ಈಗ ನೀವು ಆಶೀರ್ವಾದವನ್ನು ಮರಳಿ ಹಿಂಪಡೆಯಲು ಬಯಸಿದರೆ, ನೀವು ಹಾಗೆಯೇ ಮಾಡಬಹುದು, ಏಕೆಂದರೆ ನಾವು (ಅಧಿಕಾರಕ್ಕೆ) ಮರಳಿದ್ದೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಕಳೆದ ವರ್ಷದ ಒಂದು ಘಟನೆ ನನಗೆ ಸ್ಪಷ್ಟವಾಗಿ ನೆನಪಿದೆ. ನಾವು ಆ ಸದನದಲ್ಲಿ (ಲೋಕಸಭೆ) ಕುಳಿತಿದ್ದೆವು ಮತ್ತು ದೇಶದ ಪ್ರಧಾನಿಯ ಧ್ವನಿಯನ್ನು ಅಡಗಿಸಲು ಸಂಘಟಿತ ಪ್ರಯತ್ನ ನಡೆಯಿತು. ಬಹಳ ತಾಳ್ಮೆ ಮತ್ತು ನಮ್ರತೆಯಿಂದ, ನಾವು ನಿಮ್ಮ ಪ್ರತಿಯೊಂದು ಮಾತುಗಳನ್ನು ಆಲಿಸಿದ್ದೇವೆ. ಮತ್ತು ಇಂದಿಗೂ, ನೀವು ಕೇಳದಿರಲು ಸಿದ್ಧರಾಗಿ ಬಂದಿದ್ದೀರಿ, ಆದರೆ ನೀವು ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ದೇಶದ ಜನರು ಈ ಧ್ವನಿಯನ್ನು ಸಶಕ್ತಗೊಳಿಸಿದ್ದಾರೆ. ದೇಶದ ಜನರ ಆಶೀರ್ವಾದದಿಂದ ಧ್ವನಿ ಹೊರಹೊಮ್ಮುತ್ತಿದೆ, ಅದಕ್ಕಾಗಿಯೇ ಈ ಬಾರಿಯೂ ನಾನು ಕಳೆದ ಬಾರಿಯಂತೆ ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ಸದನಕ್ಕೆ ಬಂದ ನಿಮ್ಮಂತಹ ಯಾರೇ ಆದರೂ ನಿಯಮಗಳಿಗೆ ಬದ್ಧರಾಗಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನೀವು ಒಂದೂವರೆ ಗಂಟೆಗಳ ಕಾಲ ನನಗೆ ದೊಡ್ಡ ಅನ್ಯಾಯ ಮಾಡಿದ್ದೀರಿ. ಆದರೂ ನನ್ನ ಉತ್ತರದ ಸಮಯದಲ್ಲಿ ನಾನು ಯಾವುದೇ ಗಡಿಗಳನ್ನು ದಾಟಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಪ್ರಾರ್ಥನೆಯನ್ನೂ ಮಾಡಿದ್ದೇನೆ. ಯಾರು ಬೇಕಾದರೂ ಪ್ರಾರ್ಥಿಸಬಹುದು, ಮತ್ತು ನಾನು ಪ್ರಾರ್ಥಿಸುತ್ತಲೇ ಇರುತ್ತೇನೆ. ಈ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ದಾಟಲು ಸಾಧ್ಯವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದಿಂದ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ) ನಿಮಗೆ ಸವಾಲು ಬಂದಿದೆ. ನೀವು 40 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು (ಖರ್ಗೆ ಜೀ) ನಮ್ಮ ಬಗ್ಗೆ ಸಾಕಷ್ಟು ಹೇಳಿದ್ದೀರಿ ಮತ್ತು ನಾವು ಕೇಳಿದ್ದೇವೆ. ಪ್ರಜಾಪ್ರಭುತ್ವದಲ್ಲಿ ನಿಮಗೆ ಮಾತನಾಡುವ ಹಕ್ಕಿದೆ, ಮತ್ತು ನಿಮ್ಮ ಮಾತನ್ನು ಕೇಳುವುದು ನಮ್ಮ ಜವಾಬ್ದಾರಿ. ಇಂದು ಯಾವುದೇ ಚರ್ಚೆಗಳು ನಡೆದರೂ, ನಾನು ಅವುಗಳನ್ನು ದೇಶದ ಮುಂದೆ ಪ್ರಸ್ತುತಪಡಿಸುತ್ತೇನೆ, ಆದ್ದರಿಂದ, ನಾನು ನೈಜ ಪ್ರಯತ್ನ ಮಾಡುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಇದನ್ನು ಕೇಳಿದಾಗ, ಅಲ್ಲಿ(ಲೋಕಸಭೆ) ಮತ್ತು ಇಲ್ಲಿ(ರಾಜ್ಯಸಭೆ) ಎರಡೂ ಕಡೆ ಕೇಳಿದಾಗ, ಪಕ್ಷವು(ಕಾಂಗ್ರೆಸ್) ತನ್ನ ಚಿಂತನೆಯಲ್ಲಿ ಮಾತ್ರವಲ್ಲದೆ ಅದರ ಕಾರ್ಯನಿರ್ವಹಣೆಯಲ್ಲಿಯೂ ಹಳತಾಗಿದೆ ಎಂಬ ನನ್ನ ನಂಬಿಕೆ ದೃಢವಾಗಿದೆ. ಆಲೋಚನಾ ಪ್ರಕ್ರಿಯೆಯು ಹಳತಾದಾಗ, ಅವರು (ಕಾಂಗ್ರೆಸ್ ಸದಸ್ಯರು) ತಮ್ಮ ಕೆಲಸವನ್ನು ಹೊರಗುತ್ತಿಗೆಯೂ ನೀಡಿದ್ದಾರೆ. ಇಷ್ಟು ದೊಡ್ಡ ಪಕ್ಷ, ದಶಕಗಳ ಕಾಲ ದೇಶವನ್ನು ಆಳಿದ ಪಕ್ಷವು ಎಂತಹ ಅವನತಿಯನ್ನು, ಎಂತಹ ಅಧೋಗತಿಯನ್ನು ಎದುರಿಸುತ್ತಿದೆ! ನಾವು ಸಂತೋಷವಾಗಿಲ್ಲ, ನಿಮ್ಮ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ, (ತಾನು ಯಾವುದರಿಂದ ಬಳಲುತ್ತಿದ್ದೇನೆಂದು) ಸ್ವತಃ ರೋಗಿಗೇ ತಿಳಿದಿಲ್ಲದಿದ್ದಾಗ ವೈದ್ಯರು ತಾನೆ ಏನು ಮಾಡಬಲ್ಲರು? ಇದಕ್ಕಿಂತ ಹೆಚ್ಚಿಗೆ ನಾನೇನು ಹೇಳಲಿ?

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು ಅವರು (ಕಾಂಗ್ರೆಸ್ ಸದಸ್ಯರು) ಬಹಳಷ್ಟು ಮಾತನಾಡುತ್ತಾರೆ ಎಂಬುದು ನಿಜ, ಆದರೆ ಅವರು ಕೇಳುವ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಆದಾಗ್ಯೂ, ನಾನು ಖಂಡಿತವಾಗಿಯೂ ನನ್ನ ಅಭಿಪ್ರಾಯಗಳನ್ನು ದೇಶದ ಮುಂದೆ ಪ್ರಸ್ತುತಪಡಿಸುತ್ತೇನೆ. ಅಧಿಕಾರದ ದುರಾಸೆಯಿಂದ ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕಾಂಗ್ರೆಸ್ ಪಕ್ಷ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ರಾತ್ರೋರಾತ್ರಿ ಹತ್ತಾರು ಬಾರಿ ವಜಾಗೊಳಿಸಿದ ಕಾಂಗ್ರೆಸ್, ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿದ್ದ(ಹಲವಾರು ನಾಯಕರನ್ನು ಜೈಲಿಗೆ ಹಾಕಿದ್ದ) ಕಾಂಗ್ರೆಸ್, ಪತ್ರಿಕೆಗಳಿಗೆ ಬೀಗ ಹಾಕಲು ಪ್ರಯತ್ನಿಸಿದ ಕಾಂಗ್ರೆಸ್, ಈಗ ದೇಶವನ್ನು ಒಡೆಯಲು ಹೊಸ ನಿರೂಪಣೆಗಳನ್ನು ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿದೆ. ಅಷ್ಟಕ್ಕೇ ತೃಪ್ತರಾಗದೆ, ಈಗ ಉತ್ತರ-ದಕ್ಷಿಣವನ್ನು ವಿಭಜಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇಂತಹ ಕಾಂಗ್ರೆಸ್, ನಮಗೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಿದೆಯೇ?

ಗೌರವಾನ್ವಿತ ಸಭಾಧ್ಯಕ್ಷರೇ,

ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಯಾವೊಂದು ಪ್ರಯತ್ನವನ್ನೂ  ಬಿಡದ ಕಾಂಗ್ರೆಸ್ ಪಕ್ಷ, ತನ್ನ ಸ್ವಂತ ಲಾಭಕ್ಕಾಗಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಬೆಳೆಯಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್, ಈಶಾನ್ಯವನ್ನು ಹಿಂಸಾಚಾರ, ಪ್ರತ್ಯೇಕತಾವಾದ ಮತ್ತು ಅನಭಿವೃದ್ಧಿಯ ಕೂಪಕ್ಕೆ ತಳ್ಳಿದ ಕಾಂಗ್ರೆಸ್, ತನ್ನ ಆಳ್ವಿಕೆಯುದ್ದಕ್ಕೂ ದೇಶವು ನಕ್ಸಲಿಸಂನ ದೊಡ್ಡ ಸವಾಲನ್ನು ಜೀವಂತವಾಗಿಟ್ಟಿದ್ದ ಕಾಂಗ್ರೆಸ್ ಪಕ್ಷ,  ದೇಶದ ದೊಡ್ಡ ಪ್ರಮಾಣದ ಭೂಮಿಯನ್ನು ಶತ್ರುಗಳಿಗೆ ಹಸ್ತಾಂತರಿಸಿದ ಕಾಂಗ್ರೆಸ್, ದೇಶದ ಸಶಸ್ತ್ರ ಪಡೆಗಳ ಆಧುನೀಕರಣವನ್ನು ತಡೆದ ಕಾಂಗ್ರೆಸ್, ಇಂದು ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಭದ್ರತೆಯ ಬಗ್ಗೆ ನಮಗೆ ಉಪನ್ಯಾಸ ನೀಡುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಗೊಂದಲದಲ್ಲಿದ್ದ ಕಾಂಗ್ರೆಸ್ ಪಕ್ಷವು ಕೈಗಾರಿಕೀಕರಣ ಬೇಕೇ ಅಥವಾ ಕೃಷಿ ಬೇಕೇ ಎಂಬ ಗೊಂದಲದಲ್ಲಿ ಕಾಲ ಕಳೆದಿತ್ತು. ರಾಷ್ಟ್ರೀಕರಣಗೊಳಿಸಬೇಕೋ ಅಥವಾ ಖಾಸಗೀಕರಣಗೊಳಿಸಬೇಕೋ ಎಂದು ನಿರ್ಧರಿಸಲು ಸಾಧ್ಯವಾಗದೆ ಗೊಂದಲಕ್ಕೊಳಗಾಗಿತ್ತು. ತನ್ನ 10 ವರ್ಷಗಳ ಆಡಳಿತದಲ್ಲಿ ಆರ್ಥಿಕತೆಯನ್ನು 12ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ತಂದ ಕಾಂಗ್ರೆಸ್, 10 ವರ್ಷಗಳಲ್ಲಿ 12ನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ತಂದಿತು! ನೀವು ಪ್ರಗತಿಯ ಹಾದಿಯಲ್ಲಿ ಮುಂದುವರಿದಂತೆ, 12ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಹೋಗುವುದು ದೊಡ್ಡ ವಿಷಯವಲ್ಲ, ಅದಕ್ಕೆ ಹೆಚ್ಚು ಶ್ರಮ ಬೇಕಾಗುವುದಿಲ್ಲ. ಆದರೆ, ನಮ್ಮ ಪ್ರಯತ್ನಗಳ ಮೂಲಕ, ನಾವು ಆರ್ಥಿಕತೆಯನ್ನು 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ತಂದಿದ್ದೇವೆ. ಇಂತಹ ಕಾಂಗ್ರೆಸ್ ಇಲ್ಲಿ ಆರ್ಥಿಕ ನೀತಿಗಳ ಬಗ್ಗೆ ನಮಗೆ ಸುದೀರ್ಘ ಉಪನ್ಯಾಸಗಳನ್ನು ನೀಡುತ್ತಿದೆಯೇ?

 ಗೌರವಾನ್ವಿತ ಸಭಾಧ್ಯಕ್ಷರೇ,

ʻಒಬಿಸಿʼಗಳಿಗೆ ಸಂಪೂರ್ಣ ಮೀಸಲಾತಿ ನೀಡದ, ಸಾಮಾನ್ಯ ವರ್ಗದಲ್ಲಿ ಬಡವರಿಗೆ ಎಂದಿಗೂ ಮೀಸಲಾತಿ ಒದಗಿಸದ ಕಾಂಗ್ರೆಸ್ ಪಕ್ಷ, ಬಾಬಾ ಸಾಹೇಬ್ (ಅಂಬೇಡ್ಕರ್) ಅವರನ್ನು ʻಭಾರತ ರತ್ನʼಕ್ಕೆ ಅರ್ಹರೆಂದು ಪರಿಗಣಿಸದ  ಮತ್ತು ತನ್ನ ಕುಟುಂಬ ಸದಸ್ಯರಿಗೆ ಭಾರತ ರತ್ನವನ್ನು ನೀಡುತ್ತಲೇ ಇದ್ದ ಕಾಂಗ್ರೆಸ್‌, ದೇಶದ ಬೀದಿಗಳಲ್ಲಿ ಮತ್ತು ಚೌಕಗಳಲ್ಲಿ ತನ್ನದೇ ಕುಟುಂಬದ ಸದಸ್ಯರ ಹೆಸರಿನಲ್ಲಿ ಉದ್ಯಾನವನಗಳನ್ನು ನಿರ್ಮಿಸಿದ ಕಾಂಗ್ರೆಸ್ ಪಕ್ಷವು ನಮಗೆ ಸಲಹೆ ನೀಡುತ್ತಿದೆಯೇ? ಅವರು ನಮಗೆ ಸಾಮಾಜಿಕ ನ್ಯಾಯದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆಯೇ?

ಗೌರವಾನ್ವಿತ ಸಭಾಧ್ಯಕ್ಷರೇ,

ತನ್ನದೇ ನಾಯಕನ ಬಗ್ಗೆ ಯಾವುದೇ ಖಾತರಿ ಹೊಂದಿರದ, ತನ್ನ ನೀತಿಗಳ ಬಗ್ಗೆ ಯಾವುದೇ ಖಾತರಿಯಿಲ್ಲದ ಕಾಂಗ್ರೆಸ್ ಪಕ್ಷವು ಮೋದಿಯವರ ಖಾತರಿಯನ್ನು ಪ್ರಶ್ನಿಸುತ್ತಿದೆಯೇ?

ಗೌರವಾನ್ವಿತ ಸಭಾಧ್ಯಕ್ಷರೇ,

ಅವರದ್ದು ಇಲ್ಲೊಂದು ದೂರು ಇತ್ತು. ಮತ್ತು ನಾವು ಅಂತಹ ವಿಷಯಗಳ ಬಗ್ಗೆ ಏಕೆ ಹೇಳುತ್ತೇವೆ? ನಾವು ಅಂತಹ ವಿಷಯಗಳನ್ನು ಏಕೆ ನೋಡುತ್ತೇವೆ? ದೇಶ ಮತ್ತು ಜಗತ್ತು ಅವರ 10 ವರ್ಷಗಳ ಅಧಿಕಾರಾವಧಿಯನ್ನು ಏಕೆ ಈ ರೀತಿ ಗ್ರಹಿಸಿತು? ದೇಶವು ಏಕೆ ಕ್ರೋಧಗೊಂಡಿತು, ದೇಶದಲ್ಲಿ ಏಕೆ ಇಷ್ಟೊಂದು ಆಕ್ರೋಶ ಬೆಳೆಯಿತು ಎಂದು ಅವರಿಗೆ ಆಶ್ಚರ್ಯವಾಗಿರಬಹುದು.  ಗೌರವಾನ್ವಿತ ಮಾನ್ಯ ಸಭಾಧ್ಯಕ್ಷರೇ, ಇಲ್ಲಿ ಆಗಿರುವ ಎಲ್ಲವೂ ನಮ್ಮ ಮಾತುಗಳಿಂದ ಸಂಭವಿಸಿದಂಥದ್ದಲ್ಲ, ನಮ್ಮ ಕೆಲಸದ ಪರಿಣಾಮಗಳು ಈಗ ಸುಸ್ಪಷ್ಟವಾಗಿವೆ. ಅವು ಮುಂದಿನ ಜೀವಮಾನದಲ್ಲಿ ಆಗುವಂಥವಲ್ಲ, ಬದಲಿಗೆ  ಅವು ಈ ಜೀವಮಾನದಲ್ಲಿ ನೆರವೇರುತ್ತವೆ.

ಗೌರವಾನ್ವಿತ ಸಭಾಧ್ಯಕ್ಷರೇ,
ನಾವು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ, ನಾವು ಏಕಾದರೂ ಹಾಗೆ ಮಾತನಾಡಬೇಕು? ಜನರೇ ಅವರಿಗೆ ತುಂಬಾ ಹೇಳಿದ್ದಾರೆ, ಹಾಗಾಗಿ ನಾನು ಅವರಿಗೆ ಏನನ್ನಾದರೂ ಹೇಳುವ ಅಗತ್ಯವೇನಿದೆ? ನಾನು ಸದನದ ಮುಂದೆ ಒಂದು ಹೇಳಿಕೆಯನ್ನು ನೀಡಲು ಬಯಸುತ್ತೇನೆ. ಇಲ್ಲಿ ನಾನು ಮೊದಲ ಉಲ್ಲೇಖವನ್ನು ಓದುತ್ತಿದ್ದೇನೆ - ಸದಸ್ಯರಿಗೆ ತಿಳಿದಿರಲಿ, ಇದೊಂದು ಉಲ್ಲೇಖ, ಅದು ಸದಸ್ಯರಿಗೆ ಗೊತ್ತು. "ನಮ್ಮ ಬೆಳವಣಿಗೆ ನಿಧಾನಗೊಂಡಿದೆ ಮತ್ತು ವಿತ್ತೀಯ ಕೊರತೆ ಹೆಚ್ಚಾಗಿದೆ. ಹಣದುಬ್ಬರವು ಕಳೆದ 2 ವರ್ಷಗಳಿಂದ ನಿರಂತರವಾಗಿ ಏರುತ್ತಿದೆ. ಚಾಲ್ತಿ ಖಾತೆ ಕೊರತೆ ನಮ್ಮ ನಿರೀಕ್ಷೆಗಳನ್ನು ಮೀರಿದೆ”. ನಾನು ಈ ಓದಿದ್ದು ಒಂದು ಉಲ್ಲೇಖ. ಇದು ಯಾವುದೇ ಬಿಜೆಪಿ ನಾಯಕರ ಉಲ್ಲೇಖವಲ್ಲ, ಈ ಉಲ್ಲೇಖ ನನ್ನದೂ ಅಲ್ಲ, 

ಗೌರವಾನ್ವಿತ ಸಭಾಧ್ಯಕ್ಷರೇ,

ಆಗಿನ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರು ʻಯುಪಿಎʼ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯಲ್ಲಿ ಇದನ್ನು ಹೇಳಿದ್ದರು. ಈ ಪರಿಸ್ಥಿತಿಯನ್ನು ಅವರೇ ವಿವರಿಸಿದ್ದರು. 

ಗೌರವಾನ್ವಿತ ಸಭಾಧ್ಯಕ್ಷರೇ,

ಈಗ ನಾನು ಎರಡನೇ ಉಲ್ಲೇಖವನ್ನು ಓದುತ್ತಿದ್ದೇನೆ. "ಸಾರ್ವಜನಿಕ ಕಚೇರಿಯ ದುರುಪಯೋಗದ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶವಿದೆ".  ಈ ಮಾತನ್ನು ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹೇಳಿದ್ದರು. ಆಗ ಸಂಸ್ಥೆಗಳನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳಲಾಯಿತು. ಆ ಸಮಯದಲ್ಲಿ ನಾನು ಯಾವುದೇ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಆ ಸಮಯದಲ್ಲಿ, ಭ್ರಷ್ಟಾಚಾರದಿಂದಾಗಿ ಇಡೀ ದೇಶವು ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿತ್ತು, ಪ್ರತಿ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದವು. ಈಗ ನಾನು ಮೂರನೇ ಉಲ್ಲೇಖವನ್ನು ಓದುತ್ತೇನೆ - ಕೆಲವು ಪರಿಷ್ಕರಣೆಯ ಸಾಲುಗಳಿವೆ, ಅವುಗಳನ್ನೂ ಸಹ ಕೇಳಿಸಿಕೊಳ್ಳಿ. "ತೆರಿಗೆ ಸಂಗ್ರಹದಲ್ಲಿ ಭ್ರಷ್ಟಾಚಾರವಿದೆ, ಆದ್ದರಿಂದ ʻಜಿಎಸ್‌ಟಿʼಯನ್ನು ಪರಿಚಯಿಸಬೇಕು. ಪಡಿತರ ಯೋಜನೆಯಲ್ಲಿ ಸೋರಿಕೆ ಇದೆ, ಇದು ದೇಶದ ಕಡು ಬಡವರ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸರ್ಕಾರದ ಗುತ್ತಿಗೆಗಳನ್ನು ನೀಡುತ್ತಿರುವ ಬಗ್ಗೆ ಅನುಮಾನ ಮನೆಮಾಡಿದೆ. ಇದನ್ನು ಸಹ ಆಗಿನ ಪ್ರಧಾನಿ ಗೌರವಾನ್ವಿತ ಮನಮೋಹನ್ ಸಿಂಗ್ ಅವರೇ ಹೇಳಿದ್ದರು. ಅವರಿಗಿಂತ ಮೊದಲು, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಧಾನಿಯೊಬ್ಬರು ದೆಹಲಿಯಿಂದ ಒಂದು ರೂಪಾಯಿ ಹೋಗುತ್ತದೆ, ಕೇವಲ 15 ಪೈಸೆ ಮಾತ್ರ ಫಲಾನುಭವಿಗಳನ್ನು ತಲುಪುತ್ತದೆ ಎಂದು ಹೇಳಿದ್ದರು.  ಸಮಸ್ಯೆ ಅವರಿಗೆ ತಿಳಿದಿತ್ತು, ಆದರೆ ಅದನ್ನು ಸರಿಪಡಿಸಲು ಯಾವುದೇ ಸಿದ್ಧತೆ ಇರಲಿಲ್ಲ. ಆದರೆ, ಇಂದು ಅವರು ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‌ನ 10 ವರ್ಷಗಳ ಇತಿಹಾಸವನ್ನು ನೋಡಿ. ಆಗ ದೇಶವನ್ನು ವಿಶ್ವದ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದೆಂದು ಕರೆಯಲಾಗುತ್ತಿತ್ತು. ಆಗ ನಾನಲ್ಲ, ಜಗತ್ತೇ ಅದನ್ನು ಐದನೇ ದುರ್ಬಲ ದೇಶ ಎಂದು ಕರೆಯುತ್ತಿತ್ತು. ನೀತಿ ನಿಷ್ಕ್ರಿಯತೆಯು ಅವರ ಹೆಗ್ಗುರುತಾಗಿತ್ತು. ಆದರೆ, ನಮ್ಮ 10 ವರ್ಷ ಆಡಳಿತಾವಧಿಯು ಭಾರತವು ಅಗ್ರ ಐದು ಆರ್ಥಿಕತೆಗಳಲ್ಲಿದ್ದಕ್ಕಾಗಿ ನೆನಪಿನಲ್ಲಿ ಉಳಿಯುತ್ತವೆ. ನಮ್ಮ 10 ವರ್ಷಗಳು ದೊಡ್ಡ ಮತ್ತು ನಿರ್ಣಾಯಕ ನಿರ್ಧಾರಗಳಿಗಾಗಿ ನೆನಪಿನಲ್ಲಿ ಉಳಿಯುತ್ತವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ದೇಶವನ್ನು ಬಿಕ್ಕಟ್ಟಿನಿಂದ ಹೊರತರಲು ನಾವು ತುಂಬಾ ಶ್ರಮಿಸಿದ್ದೇವೆ. ಈ ದೇಶವು ನಮ್ಮನ್ನು ಸುಮ್ಮನೇ ಏನೂ ಆಶೀರ್ವದಿಸುತ್ತಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸದನದಲ್ಲಿ ಬ್ರಿಟಿಷರನ್ನು ಶ್ಲಾಘಿಸಲಾಯಿತು. ಆ ಸಮಯದಲ್ಲಿ ರಾಜರು ಮತ್ತು ಮಹಾರಾಜರು ಬ್ರಿಟಿಷರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಆದ್ದರಿಂದ ಈಗ, ನಾನು ಕೇಳಲು ಬಯಸುತ್ತೇನೆ, ಬ್ರಿಟಿಷರಿಂದ ಸ್ಫೂರ್ತಿ ಪಡೆದವರು ಯಾರು? ಕಾಂಗ್ರೆಸ್ ಪಕ್ಷಕ್ಕೆ ಜನ್ಮ ನೀಡಿದವರು ಯಾರು ಎಂದು ನಾನು ಕೇಳುವುದಿಲ್ಲ. ನಾನು ಅದರ ಬಗ್ಗೆ ಪ್ರಶ್ನಿಸುವುದಿಲ್ಲ. ಸ್ವಾತಂತ್ರ್ಯದ ನಂತರವೂ ದೇಶದಲ್ಲಿ ಗುಲಾಮಗಿರಿಯ ಮನಸ್ಥಿತಿಯನ್ನು ಉತ್ತೇಜಿಸಿದವರು ಯಾರು? ನೀವು ಬ್ರಿಟಿಷರಿಂದ ಪ್ರಭಾವಿತರಾಗಿಲ್ಲ ಎನ್ನುವುದಾದರೆ, ಬ್ರಿಟಿಷರು ರೂಪಿಸಿದ ದಂಡ ಸಂಹಿತೆಯನ್ನು ನೀವು ಏಕೆ ಬದಲಾಯಿಸಲಿಲ್ಲ?

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು ಬ್ರಿಟಿಷರಿಂದ ಪ್ರಭಾವಿತರಾಗದಿದ್ದರೆ, ನೀವು ಬ್ರಿಟಿಷ್ ಯುಗದ ನೂರಾರು ಕಾನೂನುಗಳನ್ನು ಏಕೆ ಮುಂದುವರಿಸಿದಿರಿ? ನೀವು ಬ್ರಿಟಿಷರಿಂದ ಪ್ರಭಾವಿತರಾಗದಿದ್ದರೆ, ವಾಹನಗಳ ಮೇಲೆ ಕೆಂಪು ದೀಪಗಳ ಸಂಸ್ಕೃತಿ ದಶಕಗಳ ಕಾಲ ಏಕೆ ಮುಂದುವರಿಯಿತು? ನೀವು ಬ್ರಿಟಿಷರಿಂದ ಪ್ರಭಾವಿತರಾಗಿಲ್ಲ ಎನ್ನವುದಾದರೆ, ಭಾರತದ ಬಜೆಟ್ ಸಂಜೆ 5 ಗಂಟೆಗೆ ಏಕೆ ಬಂದಿತು, ಬ್ರಿಟಿಷ್ ಸಂಸತ್ತು ಬೆಳಗ್ಗೆ ಪ್ರಾರಂಭವಾದ ಕಾರಣದಿಂದಲೇ? ಬ್ರಿಟಿಷ್ ಸಂಸತ್ತಿಗೆ ಅನುಕೂಲಕರವಾಗಿದ್ದ ಸಂಜೆ 5 ಗಂಟೆ ಸಮಯಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ನೀವು ಏಕೆ ಉಳಿಸಿಕೊಂಡಿದ್ದೀರಿ? ಬ್ರಿಟಿಷರಿಂದ ಸ್ಫೂರ್ತಿ ಪಡೆದವರು ಯಾರು? ನೀವು ಬ್ರಿಟಿಷರಿಂದ ಪ್ರೇರಿತರಾಗದಿದ್ದರೆ, ನಮ್ಮ ಮಿಲಿಟರಿ ಚಿಹ್ನೆಯಲ್ಲಿ ಗುಲಾಮಗಿರಿಯ ಚಿಹ್ನೆಗಳು ಇನ್ನೂ ಏಕೆ ಇದ್ದವು? ನಾವು ಅವುಗಳನ್ನು ಒಂದೊಂದಾಗಿ ತೆಗೆದುಹಾಕುತ್ತಿದ್ದೇವೆ. ನೀವು ಬ್ರಿಟಿಷರಿಂದ ಸ್ಫೂರ್ತಿ ಪಡೆಯದಿದ್ದರೆ, ರಾಜಪಥ್ ಅನ್ನು ʻಕರ್ತವ್ಯ ಪಥʼವಾಗಿ ಪರಿವರ್ತಿಸಲು ಮೋದಿ ಅವರಿಗಾಗಿ ದೇಶ ಏಕೆ ಕಾಯಬೇಕಾಯಿತು?

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು ಬ್ರಿಟಿಷರಿಂದ ಪ್ರಭಾವಿತರಾಗದಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬ್ರಿಟಿಷ್ ಆಳ್ವಿಕೆಯ ಚಿಹ್ನೆಗಳು ಇನ್ನೂ ಏಕೆ ಇದ್ದವು?

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು ಬ್ರಿಟಿಷರಿಂದ ಪ್ರಭಾವಿತರಾಗದಿದ್ದರೆ, ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಸೈನಿಕರಿಗಾಗಿ ಯುದ್ಧ ಸ್ಮಾರಕವನ್ನು ನಿರ್ಮಿಸಲು ಸಹ ಏಕೆ ನಿಮ್ಮಿಂದ ಸಾಧ್ಯವಾಗಲಿಲ್ಲ? ಅದನ್ನು ಏಕೆ ನಿರ್ಮಿಸಲಿಲ್ಲ? ನೀವು ಬ್ರಿಟಿಷರಿಂದ ಪ್ರೇರಿತರಾಗದಿದ್ದರೆ, ನೀವು ಭಾರತೀಯ ಭಾಷೆಗಳನ್ನು ಏಕೆ ಕೀಳಾಗಿ ನೋಡಿದ್ದೀರಿ? ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣದ ಬಗ್ಗೆ ನೀವು ಏಕೆ ಅಸಡ್ಡೆ ತೋರಿದ್ದೀರಿ?

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು ಬ್ರಿಟಿಷರಿಂದ ಸ್ಫೂರ್ತಿ ಪಡೆಯದಿದ್ದರೆ, ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯುವುದನ್ನು ತಡೆದವರು ಯಾರು? ನಿಮಗೆ ಏಕೆ ಅರ್ಥವಾಗಲಿಲ್ಲ? ಗೌರವಾನ್ವಿತ ಸಭಾಧ್ಯಕ್ಷರೇ, ನೀವು(ಕಾಂಗ್ರೆಸ್) ಯಾರ ಪ್ರಭಾವದಿಂದ ಕೆಲಸ ಮಾಡಿದ್ದೀರಿ ಎಂಬುದನ್ನು ತೋರಿಸಲು ನಾನು ನೂರಾರು ಉದಾಹರಣೆಗಳನ್ನು ನೀಡಬಲ್ಲೆ. ಮತ್ತು ಇಂದು ದೇಶವು ಇದನ್ನೆಲ್ಲಾ ಕೇಳಿಸಿಕೊಂಡ ನಂತರ, ಈ ಎಲ್ಲ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಇನ್ನೊಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ಕಾಂಗ್ರೆಸ್ ಹಲವು ನಿರೂಪಣೆಗಳು ಹರಡಿತು, ಮತ್ತು ಆ ನಿರೂಪಣೆಗಳ ಫಲವಾಗಿ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗೌರವಿಸುವ ಜನರನ್ನು ಬಹಳ ತಿರಸ್ಕಾರದಿಂದ ನೋಡಲಾರಂಭಿಸಲಾಯಿತು, ಹಿಂದುಳಿದವರೆಂದು ಪರಿಗಣಿಸಲಾಯಿತು. ಈ ರೀತಿಯಾಗಿ, ನಮ್ಮ ಗತಕಾಲಕ್ಕೆ ಅನ್ಯಾಯವಾಗಿದೆ. ನೀವು ನಿಮ್ಮ ನಂಬಿಕೆಗಳನ್ನು ಅವಮಾನಿಸಿದರೆ, ನಿಮ್ಮ ಉತ್ತಮ ಸಂಪ್ರದಾಯಗಳನ್ನು ಅವಮಾನಿಸಿದರೆ, ನಿಮ್ಮನ್ನು ಪ್ರಗತಿಪರರು ಎಂದು ಪರಿಗಣಿಸಲಾಗುತ್ತದೆ. ಇಂತಹ ನಿರೂಪಣೆಗಳು ದೇಶದಲ್ಲಿ ಪ್ರಾರಂಭಿಸಿದವು. ಮತ್ತು ಅಂತಹ ನಿರೂಪಣೆಗಳು ಯಾರ ನಾಯಕತ್ವದಲ್ಲಿ ಹರಡಲ್ಪಟ್ಟವು ಎಂದು ಜಗತ್ತಿಗೆ ಚೆನ್ನಾಗಿ ಗೊತ್ತಿದೆ. ಇತರ ದೇಶಗಳಿಂದ ಆಮದನ್ನು ವೈಭವೀಕರಿಸುವುದು ಮತ್ತು ಭಾರತೀಯವಾದ ಎಲ್ಲವನ್ನೂ ಎರಡನೇ ದರ್ಜೆಯಾಗಿ ಪರಿಗಣಿಸುವುದು...ಇಂತಹ ಸ್ಥಾನಮಾನ ಸಂಕೇತವನ್ನು ಸೃಷ್ಟಿಸಲಾಯಿತು. ವಿದೇಶಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನು ಸಾಮಾಜಿಕ ದರ್ಜೆಯ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ನನ್ನ ದೇಶದ ಬಡವರ ಕಲ್ಯಾಣಕ್ಕಾಗಿ ಕೆಲಸ ನಡೆಯುವಂತಹ ʻವೋಕಲ್ ಫಾರ್ ಲೋಕಲ್ʼ ಪರವಾಗಿ ಮಾತನಾಡಲು ಈ ಜನರು ಈಗಲೂ ಹಿಂಜರಿಯುತ್ತಾರೆ. ಇಂದು ಅವರು 'ಆತ್ಮನಿರ್ಭರ ಭಾರತ್' (ಸ್ವಾವಲಂಬಿ ಭಾರತ) ಬಗ್ಗೆ ಮಾತನಾಡುವುದಿಲ್ಲ. ಇಂದು ಯಾರಾದರೂ ʻಮೇಕ್ ಇನ್ ಇಂಡಿಯಾʼ ಬಗ್ಗೆ ಪ್ರತಿಪಾದಿಸಿದರೆ, ಇವರಿಗೆ ಮುಜುಗರವಾಗುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ

ದೇಶವು ಇದೆಲ್ಲವನ್ನೂ ನೋಡಿದೆ ಮತ್ತು ಈಗ ಅರ್ಥಮಾಡಿಕೊಂಡಿದೆ, ಮತ್ತು ನೀವು ಸಹ ಅದರ ಪರಿಣಾಮಗಳನ್ನು ಅನುಭವಿಸುತ್ತಿದ್ದೀರಿ.

ಗೌರವಾನ್ವಿತ ಸಭಾಧ್ಯಕ್ಷರೇ,

ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನಾಲ್ಕು ಪ್ರಮುಖ ವರ್ಗಗಳ ಬಗ್ಗೆ ವಿವರವಾಗಿ ಮಾತನಾಡಿದರು: ಯುವಕರು, ಮಹಿಳೆಯರು, ಬಡವರು ಮತ್ತು ನಮ್ಮ ರೈತರು. ಅವರ ಸಮಸ್ಯೆಗಳು ಹೆಚ್ಚಾಗಿ ಒಂದೇ ಆಗಿರುತ್ತವೆ, ಅವರ ಕನಸುಗಳು ಸಹ ಒಂದೇ ಆಗಿರುತ್ತವೆ ಎಂದು ನಮಗೆ ತಿಳಿದಿದೆ. ನಾವು ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಬಯಸಿದರೆ, ಪರಿಹಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು, ಆದರೆ ಈ ನಾಲ್ಕು ವರ್ಗಗಳಿಗೆ ಪರಿಹಾರಗಳ ಮಾರ್ಗವು ಒಂದೇ ಆಗಿರುತ್ತದೆ. ಆದ್ದರಿಂದ, ಈ ನಾಲ್ಕು ಸ್ತಂಭಗಳನ್ನು ಬಲಪಡಿಸಲು ಅವರು ರಾಷ್ಟ್ರಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ, ಇದರಿಂದ ದೇಶವು 'ವಿಕಸಿತ ಭಾರತ'ವಾಗಲು ತ್ವರಿತ ಗತಿಯಲ್ಲಿ ಮುಂದುವರಿಯುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು 21ನೇ ಶತಮಾನದಲ್ಲಿರುವಾಗ ಮತ್ತು ಈ ಶತಮಾನದಲ್ಲಿ 2047ರ ವೇಳೆಗೆ 'ವಿಕಸಿತ ಭಾರತʼದ ಕನಸುಗಳನ್ನು ಈಡೇರಿಸಲು ಬಯಸಿರುವಾಗ, 20ನೇ ಶತಮಾನದ ಮನಸ್ಥಿತಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. 20ನೇ ಶತಮಾನದ ಸ್ವಾರ್ಥ ಕಾರ್ಯಸೂಚಿಯಾಗಲೀ, "ನಾನು ಮತ್ತು ನನ್ನದು" ಎಂಬ ಮನಸ್ಥಿತಿಯಾಗಲೀ 21ನೇ ಶತಮಾನದಲ್ಲಿ ಭಾರತವನ್ನು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ. ಈ ದಿನಗಳಲ್ಲಿ, ಕಾಂಗ್ರೆಸ್ ಮತ್ತೊಮ್ಮೆ ಜಾತಿಯ ಬಗ್ಗೆ ಸಾಕಷ್ಟು ಚರ್ಚಿಸುತ್ತಿದೆ. ಅವರು ಈಗ ಅದು ಅಗತ್ಯವೆಂದು ಏಕೆ ಭಾವಿಸಿದರು ಎಂದು ನನಗೆ ಗೊತ್ತಿಲ್ಲ. ಆದಾಗ್ಯೂ, ಅವರು ಅಗತ್ಯ ಎಂದು ಭಾವಿಸುವುದಾದರೆ, ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಇದರಿಂದ ಅವರು ಏನು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತದೆ. ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಅತಿದೊಡ್ಡ ವಿರೋಧಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ದೊರೆಯುತ್ತಿತ್ತೇ ಎಂದು ಕೆಲವೊಮ್ಮೆ ನಾನು ಚಕಿತನಾಗುತ್ತೇನೆ. ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ  ಬರುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಹೇಳುತ್ತಿರುವುದರ ಬಗ್ಗೆ ನನ್ನ ಬಳಿ ಪುರಾವೆಗಳಿವೆ. ಅಂದಿನಿಂದ ಅವರ ಮನಸ್ಥಿತಿ ಬದಲಾಗಿಲ್ಲ; ಅದಕ್ಕೆ ನನ್ನ ಬಳಿ ಪುರಾವೆಗಳಿವೆ. ಮಾನ್ಯ ಸಭಾಧ್ಯಕ್ಷರೇ, ನಾನು ಪುರಾವೆಗಳಿಲ್ಲದೆ ಬರೀ ಮಾತನಾಡಲು ಇಲ್ಲಿಗೆ ಬಂದಿಲ್ಲ. ಮತ್ತು ಅಂತಹ ವಿಷಯಗಳನ್ನು ಅವರು (ಕಾಂಗ್ರೆಸ್) ಎತ್ತಿದಾಗ, ಅವರು ಸಿದ್ಧರಾಗಿರಬೇಕು. ಮತ್ತು ಅವರು ಕಳೆದ 10 ವರ್ಷಗಳಿಂದ ನನ್ನ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ, ನಾನು ನೆಹರೂ (ಜವಾಹರಲಾಲ್ ನೆಹರೂ) ಅವರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ನಮ್ಮ ಸ್ನೇಹಿತರು (ಕಾಂಗ್ರೆಸ್‌ನಲ್ಲಿರುವವರು), ನಾನು ಅವರ (ನೆಹರೂ ಜೀ) ಬಗ್ಗೆ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಈಗ, ನಾನು ನೆಹರೂ ಅವರು ಬರೆದ ಪತ್ರವನ್ನು ಓದುತ್ತೇನೆ. ಈ ಪತ್ರವನ್ನು ದೇಶದ ಪ್ರಧಾನಿ ಪಂಡಿತ್ ನೆಹರೂ ಅವರು ಆ ಸಮಯದಲ್ಲಿ ದೇಶದ ಮುಖ್ಯಮಂತ್ರಿಗಳಿಗೆ ಬರೆದಿದ್ದರು. ಇದು ದಾಖಲೆಯಲ್ಲಿದೆ. ನಾನು ಅದರ ಅನುವಾದವನ್ನು ಓದುತ್ತಿದ್ದೇನೆ: "ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ವಿಶೇಷವಾಗಿ ಉದ್ಯೋಗಗಳಲ್ಲಿ ಮೀಸಲಾತಿ. ಅದಕ್ಷತೆಯನ್ನು ಉತ್ತೇಜಿಸುವ ಮತ್ತು ಎರಡನೇ ದರ್ಜೆಯ ಕಡೆಗೆ ಕರೆದೊಯ್ಯುವ ಯಾವುದೇ ಕ್ರಮವನ್ನು ನಾನು ವಿರೋಧಿಸುತ್ತೇನೆ.” ಇದು ಪಂಡಿತ್ ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರ. ಆದ್ದರಿಂದ, ಅವರು ಸದಾ ಮೀಸಲಾತಿಯನ್ನು ವಿರೋಧಿಸುತ್ತಾರೆ ಎಂದು ನಾನು ಹೇಳುತ್ತೇನೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ, ಸರ್ಕಾರಿ ಕೆಲಸದ ಗುಣಮಟ್ಟ ಕುಸಿಯುತ್ತದೆ ಎಂದು ನೆಹರು ಹೇಳುತ್ತಿದ್ದರು. ಮತ್ತು ಇಂದು, ಅಂಕಿ-ಅಂಶಗಳನ್ನು ಕೆದಕುವವರಿಗೆ ಹೇಳುತ್ತೇನೆ, ಅವುಗಳ ಮೂಲ ಇಲ್ಲಿದೆ. ಏಕೆಂದರೆ ಆ ಸಮಯದಲ್ಲಿ, ಅವರು ಅದನ್ನು (ಮೀಸಲಾತಿ) ನಿಲ್ಲಿಸಿದರು, ಅವರನ್ನು ನೇಮಕಾತಿ ಮಾಡಬೇಡಿ ಎಂದು ಹೇಳಿದರು. ಆ ಸಮಯದಲ್ಲಿ ಸರ್ಕಾರದಲ್ಲಿ ಅವರ(ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳು) ನೇಮಕಾತಿ ನಡೆದಿದ್ದರೆ ಮತ್ತು ಅವರಿಗೆ ಬಡ್ತಿ ನೀಡಿದ್ದರೆ, ಅವರು ಇಂದು ಇಲ್ಲಿಗೆ ತಲುಪಿರುತ್ತಿದ್ದರು. 

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಈ ಉಲ್ಲೇಖವನ್ನು ಓದುತ್ತಿದ್ದೇನೆ, ನೀವು ಪರಿಶೀಲಿಸಬಹುದು. ನಾನು ಪಂಡಿತ್ ನೆಹರೂ ಅವರ ಉಲ್ಲೇಖವನ್ನು ಓದುತ್ತಿದ್ದೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಿಮಗೆ ತಿಳಿದಿದೆ, ನೆಹರೂ ಅವರು ಹೇಳಿದ್ದು ಯಾವಾಗಲೂ ಕಾಂಗ್ರೆಸ್ ಪಾಲಿಗೆ ಒಂದು ಮೈಲುಗಲ್ಲು. ನೆಹರೂ ಅವರ ಮಾತು ಅವರಿಗೆ ಒಂದು ಮೈಲುಗಲ್ಲು. ನೀವು ಏನನ್ನಾದರೂ ಹೇಳುವಂತೆ ನಟಿಸಬಹುದು, ಆದರೆ ಅನೇಕ ಉದಾಹರಣೆಗಳಿಂದ ನಿಮ್ಮ ಆಲೋಚನೆಗಳು ಸ್ಪಷ್ಟವಾಗಿವೆ. ನಾನು ನಿಮಗೆ ಅಸಂಖ್ಯಾತ ಉದಾಹರಣೆಗಳನ್ನು ನೀಡಬಲ್ಲೆ, ಆದರೆ ನಾನು ಖಚಿತವಾಗಿ ಒಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ, ಜಮ್ಮು ಮತ್ತು ಕಾಶ್ಮೀರದ ಉದಾಹರಣೆಯನ್ನು ನಾನು ನೀಡಲು ಬಯಸುತ್ತೇನೆ. ಕಾಂಗ್ರೆಸ್ ಏಳು ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳನ್ನು ಅವರ ಹಕ್ಕುಗಳಿಂದ ವಂಚಿತರನ್ನಾಗಿಸಿತು. 370ನೇ ವಿಧಿ… ನಾವು ಈಗ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬುದರ ಬಗ್ಗೆ ನಾನು ಮಾತನಾಡುತ್ತಿಲ್ಲ. 370ನೇ ವಿಧಿಯನ್ನು ರದ್ದುಪಡಿಸಲಾಯಿತು. ಅದರ ನಂತರವಷ್ಟೇ ಅನೇಕ ದಶಕಗಳ ಬಳಿಕ ಜಮ್ಮು-ಕಾಶ್ಮೀರದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು ದೇಶದ ಇತರ ಭಾಗಗಳ ಜನರು ವರ್ಷಗಳಿಂದ ಪಡೆಯುತ್ತಿದ್ದ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಅವರಿಗೆ ಲಭ್ಯವಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ದೌರ್ಜನ್ಯ ತಡೆ ಕಾಯ್ದೆ ಇರಲಿಲ್ಲ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ನಾವು ಅವರಿಗೆ ಈ ಹಕ್ಕುಗಳನ್ನು ನೀಡಿದ್ದೇವೆ. ನಮ್ಮ ಎಸ್ಸಿ ಸಮುದಾಯದಲ್ಲಿಯೂ ಯಾರಾದರೂ ಹಿಂದುಳಿದಿದ್ದರೆ ಅದು ನಮ್ಮ ವಾಲ್ಮೀಕಿ ಸಮಾಜ. ಏಳು ದಶಕಗಳ ನಂತರವೂ, ಜಮ್ಮು ಮತ್ತು ಕಾಶ್ಮೀರದ ಜನರ ಸೇವೆ ಮಾಡುತ್ತಿದ್ದ ನಮ್ಮ ವಾಲ್ಮೀಕಿ ಕುಟುಂಬಗಳಿಗೆ ವಾಸಿಸುವ ಹಕ್ಕನ್ನು ನೀಡಲಾಗಿಲ್ಲ. ಮತ್ತು ಇಂದು ನಾನು ದೇಶಕ್ಕೆ ಅರಿವು ಮೂಡಿಸಲು ಬಯಸುತ್ತೇನೆ, ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಳೀಯ ಸ್ವಯಮಾಡಳಿತಗಳಲ್ಲಿ ಒಬಿಸಿ ಮೀಸಲಾತಿಯ ಮಸೂದೆಯನ್ನು ನಿನ್ನೆ, ಫೆಬ್ರವರಿ 6 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಗೌರವಾನ್ವಿತ ಸಭಾಧ್ಯಕ್ಷರೇ,

ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಸದಾ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ದೊಡ್ಡ ಕಳವಳವಾಗಿದೆ. ಬಾಬಾ ಸಾಹೇಬರ ರಾಜಕೀಯ ಮತ್ತು ಚಿಂತನೆಗಳನ್ನು ತೊಡೆದುಹಾಕಲು ಅವರು ಮಾಡದ ಪ್ರಯತ್ನಗಳಿಲ್ಲ. ಈ ಬಗ್ಗೆ ಅವರ ಹೇಳಿಕೆಗಳು ಲಭ್ಯವಿವೆ; ಚುನಾವಣೆಯ ಸಮಯದಲ್ಲಿ ಏನು ಹೇಳಲಾಯಿತು ಎಂಬುದು ಸಹ ಲಭ್ಯವಿದೆ. ಬಾಬಾ ಸಾಹೇಬರಿಗೆ ಭಾರತ ರತ್ನ ನೀಡಲು ಸಹ ಅವರು ಸಿದ್ಧರಿರಲಿಲ್ಲ. ಬಿಜೆಪಿಯ ಬೆಂಬಲದಿಂದ ಮತ್ತು ವಿ.ಪಿ.ಸಿಂಗ್ ಸರ್ಕಾರ ರಚನೆಯಾದಾಗಷ್ಟೇ ಅವರಿಗೆ ಭಾರತ ರತ್ನ ನೀಡಲಾಯಿತು. ಅಷ್ಟೇ ಅಲ್ಲ, ಅತ್ಯಂತ ಹಿಂದುಳಿದ ಜಾತಿಗೆ ಸೇರಿದ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರನ್ನು ಫುಟ್‌ಪಾತ್‌ನಲ್ಲಿ ಎಸೆಯಲಾಯಿತು. ಏಕೆಂದರೆ ಅವರು ಒಬಿಸಿ! ಇದರ ವೀಡಿಯೊ ಲಭ್ಯವಿದೆ; ಸೀತಾರಾಮ್ ಕೇಸರಿ ಅವರ ಗತಿ ಏನಾಯಿತು ಎಂಬುದನ್ನು ದೇಶ ನೋಡಿದೆ.

ಮತ್ತು ಗೌರವಾನ್ವಿತ ಮಾನ್ಯ ಸಭಾಧ್ಯಕ್ಷರೇ,

ಅವರ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಅಮೆರಿಕದಲ್ಲಿ ಕುಳಿತಿದ್ದಾರೆ, ಅವರು ಕಳೆದ ಚುನಾವಣೆಯ ಸಮಯದಲ್ಲಿ 'ಹುವಾ ತೋ ಹುವಾ' ಕಾಮೆಂಟ್‌ಗಾಗಿ ಪ್ರಸಿದ್ಧರಾದರು. ಮತ್ತು ಕಾಂಗ್ರೆಸ್ ಈ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಕಡಿಮೆ ಮಾಡಲು ಅವರು ಇತ್ತೀಚೆಗೆ ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದಾರೆ.

ಗೌರವಾನ್ವಿತ ಮಾನ್ಯ ಸಭಾಧ್ಯಕ್ಷರೇ,

ದೇಶದಲ್ಲಿ ಮೊದಲ ಬಾರಿಗೆ ʻಎನ್‌ಡಿಎʼ, ಆದಿವಾಸಿ ಹೆಣ್ಣುಮಗಳನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಪ್ರಸ್ತಾಪಿಸಿತು. ನೀವು ನಮ್ಮೊಂದಿಗೆ ಸೈದ್ಧಾಂತಿಕ ವಿರೋಧವನ್ನು ಹೊಂದಿದ್ದರೆ ಅದು ಅದನ್ನು ಯಾರೇ ಆದರೂ ಅರ್ಥಮಾಡಿಕೊಳ್ಳಬಲ್ಲರು. ನೀವು ನಮ್ಮೊಂದಿಗೆ ಸೈದ್ಧಾಂತಿಕ ವಿರೋಧವನ್ನು ಹೊಂದಿದ್ದರೆ, ನಿಮ್ಮ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ನನಗೆ ಅರ್ಥವಾಗುತ್ತಿತ್ತು. ಆದರೆ ಸೈದ್ಧಾಂತಿಕ ವಿರೋಧವಿರಲಿಲ್ಲ. ಏಕೆ? ಏಕೆಂದರೆ ನೀವು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ವ್ಯಕ್ತಿ(ಯಶವಂತ್ ಸಿನ್ಹಾ) ನಮ್ಮ ಶ್ರೇಣಿಯಿಂದ ಬಂದವರು. ಆದ್ದರಿಂದ, ಯಾವುದೇ ಸೈದ್ಧಾಂತಿಕ ವಿರೋಧವಿರಲಿಲ್ಲ; ನಿಮ್ಮ ವಿರೋಧ ಆದಿವಾಸಿ ಹೆಣ್ಣುಮಗಳ ವಿಚಾರವಾಗಿ ಆಗಿತ್ತು. ಹಾಗಾಗಿಯೇ, ಸಂಗ್ಮಾ (ಪಿ.ಎ.ಸಂಗ್ಮಾ)ಅವರು ರಾಷ್ಟ್ರಪತಿ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಅವರು ಈಶಾನ್ಯದ ಆದಿವಾಸಿಯೂ ಆಗಿದ್ದರು. ಅವರನ್ನೂ ಅದೇ ರೀತಿ ನೋಡಲಾಯಿತು. ಮಾನ್ಯ ಸಭಾಧ್ಯಕ್ಷರೇ, ಇಂದಿಗೂ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅಗೌರವ ತೋರುವ ಘಟನೆಗಳು ಅಪರೂಪವೇನಲ್ಲ. ಇಂಥದ್ದು ಈ ದೇಶದಲ್ಲಿ ಮೊದಲ ಬಾರಿಗೆ ನಡೆದಿದೆ. ಜವಾಬ್ದಾರಿಯುತ ಜನರೇ (ಕಾಂಗ್ರೆಸ್‌ನ) ಇಂತಹ ಮಾತುಗಳನ್ನು ಆಡಿದ್ದಾರೆ, ಅದು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತದೆ. ಅಧ್ಯಕ್ಷರ ಕುರಿತಾಗಿ ಬಳಸಿದ ಭಾಷೆ…ಹೃದಯದಲ್ಲಿ ಅನುಭವಿಸುವ ತಳಮಳವು ಅಭಿವ್ಯಕ್ತಿಗಾಗಿ ಸದಾ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ʻಎನ್‌ಡಿಎʼದಲ್ಲಿ 10 ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿದೆ. ನಾವು ಮೊದಲು ದಲಿತರನ್ನು (ರಾಮ್ ನಾಥ್ ಕೋವಿಂದ್) ಮತ್ತು ಈಗ ಆದಿವಾಸಿ  ಮಹಿಳೆಯನ್ನು (ದ್ರೌಪದಿ ಮುರ್ಮು) ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ನಾವು ಸದಾ ದಲಿತರು ಮತ್ತು ಆದಿವಾಸಿಗಳಿಗೆ ಆದ್ಯತೆ ನೀಡಿದ್ದೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ನಮ್ಮ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವಾಗ, ಬಡವರ ಕಲ್ಯಾಣವನ್ನು ಕೇಂದ್ರೀಕರಿಸುವ ʻಎನ್‌ಡಿಎʼ ನೀತಿಗಳ ಬಗ್ಗೆ ಮಾತನಾಡುತ್ತೇನೆ. ಆ ಸಮಾಜವನ್ನು ನೀವು ಹತ್ತಿರದಿಂದ ಅರ್ಥಮಾಡಿಕೊಂಡರೆ, ಅಂತಿಮವಾಗಿ ಫಲಾನುಭವಿಗಳು ಯಾರು, ಈ ಜನರು ಯಾರು? ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ, ಜೀವನಕ್ಕಾಗಿ ಹೋರಾಡುತ್ತಿರುವ ಈ ಜನರು ಯಾರು? ಅವರು ಯಾವ ಸಮಾಜಕ್ಕೆ ಸೇರಿದವರು? ಅವರು ಕಷ್ಟಗಳನ್ನು ಸಹಿಸಿಕೊಂಡರೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಇದು ಯಾವ ಸಮಾಜ? ನಾವು ಏನೇ ಕೆಲಸ ಮಾಡಿದರೂ ಅದು ಈ ಸಮಾಜಕ್ಕಾಗಿ - ಎಸ್ಸಿ, ಎಸ್ಟಿ, ಒಬಿಸಿ, ಆದಿವಾಸಿ. ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಸರಿಯಾದ ಮನೆಗಳನ್ನು ಒದಗಿಸಿದ್ದರಿಂದ ಈ ಸಮಾಜದ ನನ್ನ ಸ್ನೇಹಿತರಿಗೆ ಪ್ರಯೋಜನವಾಗಿದೆ. ಈ ಹಿಂದೆ, ಅವರು ಸ್ವಚ್ಛತೆಯ ಕೊರತೆಯಿಂದಾಗಿ ರೋಗಗಳೊಂದಿಗೆ ಹೋರಾಡುತ್ತಿದ್ದರು, ಈಗ ಅವರು ನಮ್ಮ ಉಪಕ್ರಮಗಳ ಭಾಗವಾದ ʻಸ್ವಚ್ಛ ಭಾರತʼ ಅಭಿಯಾನದಿಂದ ಪ್ರಯೋಜನ ಪಡೆದಿದ್ದಾರೆ, ಇದರಿಂದ ಅವರು ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಕುಟುಂಬಗಳಲ್ಲಿನ ನಮ್ಮ ತಾಯಂದಿರು ಮತ್ತು ಸಹೋದರಿಯರು ಹೊಗೆಯ ನಡುವೆ ಆಹಾರವನ್ನು ಬೇಯಿಸುವ ಮೂಲಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ನಾವು ಅವರಿಗೆ ʻಉಜ್ವಲʼ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದೇವೆ ಮತ್ತು ಅವರು ಸಹ ಇದೇ ಕುಟುಂಬಗಳಿಂದ ಬಂದವರು. ಅದು ಉಚಿತ ಪಡಿತರವಾಗಿರಲೀ ಅಥವಾ ಉಚಿತ ಆರೋಗ್ಯ ಸೇವೆಯಾಗಿರಲೀ, ಫಲಾನುಭವಿಗಳು ಈ ಕುಟುಂಬಗಳೇ. ನಮ್ಮ ಎಲ್ಲಾ ಯೋಜನೆಗಳು ಸಮಾಜದ ಈ ವರ್ಗದ ಈ ಕುಟುಂಬ ಸದಸ್ಯರಿಗೆ ಮೀಸಲಾಗಿವೆ.

ಗೌರವಾನ್ವಿತ ಸಭಾಧ್ಯಕ್ಷರೇ

ಇಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ನಿರೂಪಣೆ, ಈ ರೀತಿ ಸತ್ಯಗಳನ್ನು ನಿರಾಕರಿಸುವುದು, ಇವುಗಳಿಂದ ಯಾರಿಗೆ ಲಾಭ? ಹಾಗೆ ಮಾಡುವುದರಿಂದ, ನೀವು ನಿಮ್ಮ ವಿಶ್ವಾಸಾರ್ಹತೆಯನ್ನು ಮಾತ್ರವಲ್ಲದೆ ನಿಮ್ಮ ಪ್ರಾಮಾಣಿಕತೆಯನ್ನೂ ಸಹ ಕಳೆದುಕೊಳ್ಳುತ್ತಿದ್ದೀರಿ.

ಗೌರವಾನ್ವಿತ ಸಭಾಧ್ಯಕ್ಷರೇ,

ಇಲ್ಲಿ, ಶಿಕ್ಷಣಕ್ಕೆ ಸಂಬಂಧಿಸಿದ ದಾರಿತಪ್ಪಿಸುವ ಅಂಕಿ-ಅಂಶಗಳನ್ನು ಸಹ ಪ್ರಸ್ತುತಪಡಿಸಲಾಗಿದೆ. ದಾರಿತಪ್ಪಿಸಲು ಯಾವ ರೀತಿಯ ಪ್ರಯತ್ನ ಮಾಡಲಾಗುತ್ತಿದೆ? ಕಳೆದ 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ಹೆಚ್ಚಾಗಿದೆ. ಈ 10 ವರ್ಷಗಳಲ್ಲಿ, ಶಾಲೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ದಾಖಲಾತಿ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ, ಮತ್ತು ಶಾಲೆ ಬಿಡುವ ಪ್ರಮಾಣವು ಅತ್ಯಲ್ಪ ಅವಧಿಯಲ್ಲೇ ಕಡಿಮೆಯಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಹತ್ತು ವರ್ಷಗಳ ಹಿಂದೆ 120 ʻಏಕಲವ್ಯ ಮಾದರಿ ಶಾಲೆʼಗಳು ಇದ್ದವು.  ಗೌರವಾನ್ವಿತ ಸಭಾಧ್ಯಕ್ಷರೇ, ಇಂದು 400 ʻಏಕಲವ್ಯ ಮಾದರಿ ಶಾಲೆʼಗಳಿವೆ. ಈ ಸಂಗತಿಗಳನ್ನು ನೀವು ಏಕೆ ನಿರಾಕರಿಸುತ್ತೀರಿ? ನೀವು ಹೀಗೆ ಏಕೆ ಮಾಡುತ್ತೀರಿ? ನನಗೆ ಇದು ಅರ್ಥವಾಗುತ್ತಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ಈ ಹಿಂದೆ, ಒಂದೇ ಒಂದು ʻಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯʼ ಇತ್ತು. ಇಂದು ಎರಡು ʻಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯʼಗಳಿವೆ. ಗೌರವಾನ್ವಿತ ಸಭಾಧ್ಯಕ್ಷರೇ, ದೀರ್ಘಕಾಲದವರೆಗೆ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮಾಜದ ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಕಾಲೇಜುಗಳ ಬಾಗಿಲುಗಳನ್ನು ಸಹ ನೋಡಲು ಸಾಧ್ಯವಾಗಲಿಲ್ಲ ಎಂಬುದು ಸತ್ಯವಷ್ಟೇ. ನಾನು ಗುಜರಾತ್ ಮುಖ್ಯಮಂತ್ರಿಯಾದಾಗ, ನನಗೆ ಆಶ್ಚರ್ಯಕರ ವಿಶ್ಲೇಷಣೆಯೊಂದನ್ನು ನೀಡಲಾಯಿತು. ಗುಜರಾತ್‌ನ ಉಮರ್‌ಗಾಮ್‌ನಿಂದ ಅಂಬಾಜಿಯವರೆಗಿನ ಸಂಪೂರ್ಣ ಪ್ರದೇಶವು ಬುಡಕಟ್ಟು ಬಹುಸಂಖ್ಯಾತ ವಲಯವಾಗಿದೆ. ನಮ್ಮ ದಿಗ್ವಿಜಯ್ ಸಿಂಗ್ ಅವರ ಅಳಿಯ ಕೂಡ ಅದೇ ಪ್ರದೇಶದವರು. ಆ ಇಡೀ ಪ್ರದೇಶದಲ್ಲಿ, ವಿಜ್ಞಾನ ವಿಷಯವನ್ನು ಹೇಳಿಕೊಡುವ ಒಂದೇ ಒಂದು ಶಾಲೆ ಇರಲಿಲ್ಲ. ನಾನು ಅಲ್ಲಿಗೆ ಹೋದಾಗ, ಆ ಪ್ರದೇಶದಲ್ಲಿ ನನ್ನ ಬುಡಕಟ್ಟು ಮಕ್ಕಳಿಗೆ ವಿಜ್ಞಾನ ವಿಭಾಗವನ್ನು ಬೋಧಿಸುವ ಶಾಲೆ ಇಲ್ಲದಿದ್ದರೆ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಅಧ್ಯಯನದ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ನಾನು ಯೋಚಿಸಿದ್ದೆ. ಅಂತಹ ಮೂಲಭೂತ ಅವಶ್ಯಕತೆಗಳೇ ಇರದ ಸ್ಥಿತಿ... ಆದರೆ ಇಲ್ಲಿ ಯಾವ ರೀತಿಯ ಉಪದೇಶಗಳನ್ನು ನೀಡಲಾಗುತ್ತಿದೆ?

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಒಂದು ವಿಷಯವನ್ನು ಸದನಕ್ಕೆ ತಿಳಿಸಲು ಬಯಸುತ್ತೇನೆ ಮತ್ತು ಸದಸ್ಯರು ಅದರ ಬಗ್ಗೆ ಹೆಮ್ಮೆ ಪಡಬೇಕು. ನೀವು ಸದನದಲ್ಲಿ ಕುಳಿತಿದ್ದೀರಿ, ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾದ ಅಂತಹ ಬದಲಾವಣೆಗಳ ಬಗ್ಗೆ ಸರ್ಕಾರ ನಿಮ್ಮೊಂದಿಗೆ ಮಾತನಾಡುತ್ತಿದೆ. ಆ ಸಮಾಜದ ವಿಶ್ವಾಸವನ್ನು ಹೆಚ್ಚಿಸಿ, ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ. ಅವರು ದೇಶದ ವೇಗವಾಗಿ ಮುಖ್ಯವಾಹಿನಿಗೆ ಬರಲಿ, ಅದಕ್ಕಾಗಿ ಶ್ರಮಿಸೋಣ, ಸಾಮೂಹಿಕ ಪ್ರಯತ್ನಗಳನ್ನು ಮಾಡೋಣ. ನಮ್ಮ ಬುಡಕಟ್ಟು, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ದಾಖಲಾತಿಯನ್ನು ನೋಡಿ; ನಾನು ಕೆಲವು ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ದಾಖಲಾತಿ 44% ಹೆಚ್ಚಾಗಿದೆ. ಉನ್ನತ ಶಿಕ್ಷಣದಲ್ಲಿ ಎಸ್ಟಿ ವಿದ್ಯಾರ್ಥಿಗಳ ದಾಖಲಾತಿ 65% ಹೆಚ್ಚಾಗಿದೆ. ಉನ್ನತ ಶಿಕ್ಷಣದಲ್ಲಿ ಒಬಿಸಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ 45% ಹೆಚ್ಚಳ ಕಂಡುಬಂದಿದೆ. ನನ್ನ ಬಡ, ದಲಿತ, ಹಿಂದುಳಿದ, ಬುಡಕಟ್ಟು, ಅಂಚಿನಲ್ಲಿರುವ ಕುಟುಂಬಗಳ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋದಾಗ, ವೈದ್ಯರು ಮತ್ತು ಎಂಜಿನಿಯರ್‌ಗಳಾದಾಗ, ಅದು ಆ ಸಮಾಜದಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸುತ್ತದೆ. ನಮ್ಮ ಪ್ರಯತ್ನ ಆ ದಿಕ್ಕಿನಲ್ಲಿದೆ... ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಪ್ರಯತ್ನವಾಗಿದೆ, ಅದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದಾದರೂ, ಅದನ್ನು ಅಸಾಧಾರಣ ರೀತಿಯಲ್ಲಿ ಮಾಡಬೇಕು. ಆದ್ದರಿಂದ, ನಾವು ಈ ರೀತಿಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ.  ಮಾಹಿತಿಯ ಕೊರತೆಯಿದ್ದರೆ, ದಯವಿಟ್ಟು ನಮಗೆ ತಿಳಿಸಿ, ನಾವು ನಿಮಗೆ ಮಾಹಿತಿಯನ್ನು ಒದಗಿಸುತ್ತೇವೆ. ಆದರೆ ನಿಮ್ಮ ಘನತೆಯನ್ನು ಕುಗ್ಗಿಸುವ, ನಿಮ್ಮ ಮಾತಿನ ಶಕ್ತಿಯನ್ನು ದುರ್ಬಲಗೊಳಿಸುವ ಅಂತಹ ನಿರೂಪಣೆಗಳನ್ನು ನೀಡಬೇಡಿ. ಕೆಲವೊಮ್ಮೆ, ನನಗೆ ನಿಮ್ಮ ಬಗ್ಗೆ ವಿಷಾದ ಕಾಡುತ್ತದೆ. 

ಗೌರವಾನ್ವಿತ ಸಭಾಧ್ಯಕ್ಷರೇ,

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್'! ಇದು ಕೇವಲ ಘೋಷಣೆಯಲ್ಲ; ಇದು ಮೋದಿ ಅವರ ಗ್ಯಾರಂಟಿ. ಮತ್ತು ತುಂಬಾ ಕೆಲಸ ನಡೆಯುತ್ತಿರುವ ಸಮಯದಲ್ಲಿ... ಯಾರೋ ನನಗೆ ಕವಿತೆಯೊಂದನ್ನು ಕಳುಹಿಸಿದ್ದಾರೆ. ಕವಿತೆಯು ಸಾಕಷ್ಟು ಉದ್ದವಾಗಿದೆ, ಆದರೆ ಅದರಲ್ಲಿ ಒಂದು ಸಾಲು ಹೀಗಿದೆ:

मोदी की गारंटी का दौर है,
नए भारत की भोर
औट आफ वारंटि चल रही दुकानें,
औट आफ वारंटि चल रही दुकानें
खोजें अपनी ठोर
(ಇದು ಮೋದಿ ಅವರ ಭರವಸೆಯ ಯುಗ,
ನವ ಭಾರತದ ಉದಯ,
ಅಂಗಡಿಗಳಲ್ಲಿ ವಾರಂಟಿ ಮುಗಿದಿದೆ,
ಅಂಗಡಿಗಳಲ್ಲಿ ವಾರಂಟಿ ಮುಗಿದಿದೆ,
ನಿಮ್ಮ ಶಕ್ತಿಯನ್ನು ಹುಡುಕಿ.)

ಗೌರವಾನ್ವಿತ ಸಭಾಧ್ಯಕ್ಷರೇ,

ದೇಶದಲ್ಲಿ ಹತಾಶೆಯನ್ನು ಹರಡುವ ಪ್ರಯತ್ನಗಳು ಈಗಾಗಲೇ ಹತಾಶೆಯ ಪ್ರಪಾತದಲ್ಲಿ ಮುಳುಗಿರುವವರಿಗೆ ಅರ್ಥವಾಗುತ್ತವೆ. ಆದಾಗ್ಯೂ, ಹತಾಶೆಯನ್ನು ಹರಡುವ ಅವರ ಸಾಮರ್ಥ್ಯವೂ ಕ್ಷೀಣಿಸುತ್ತಿದೆ. ಅವರು ಭರವಸೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹತಾಶೆಯಲ್ಲಿ ಮುಳುಗಿರುವವರು ಸ್ವತಃ ಭರವಸೆಯನ್ನು ನೀಡಲು ಸಾಧ್ಯವಿಲ್ಲ. ದೇಶಾದ್ಯಂತ ಹತಾಶೆಯನ್ನು ಹರಡುತ್ತಿರುವವರು, ಸತ್ಯವನ್ನು ನಿರಾಕರಿಸುತ್ತಾ ಹತಾಶೆಯನ್ನು ಹರಡುವ ಈ ಆಟವನ್ನು ಆಡುತ್ತಿರುವವರು ಎಂದಿಗೂ ತಮಗಾಗಲೀ ಅಥವಾ ದೇಶಕ್ಕಾಗಲೀ ಏನನ್ನೂ ಒಳ್ಳೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ಪ್ರತಿ ಬಾರಿಯೂ ಅದೇ ಹಾಡನ್ನು ಹಾಡಲಾಗುತ್ತದೆ. ಸಮಾಜದ ಕೆಲವು ವರ್ಗಗಳನ್ನು ಪ್ರಚೋದಿಸುವ ಏಕೈಕ ಉದ್ದೇಶದಿಂಧ ಸತ್ಯಗಳನ್ನು ಪರಿಗಣಿಸದೆ ಹೇಳಿಕೆಗಳನ್ನು ನೀಡಲಾಗುತ್ತದೆ. ನಾನು ದೇಶದ ಮುಂದೆ ಕೆಲವು ವಾಸ್ತವಗಳನ್ನು ಪ್ರಸ್ತುತಪಡಿಸಲು ಬಯಸುತ್ತೇನೆ ಮತ್ತು ಮಾಧ್ಯಮಗಳು ಅಂತಹ ವಿಷಯಗಳ ಬಗ್ಗೆ ಚರ್ಚಿಸುತ್ತವೆ ಎಂದು ನಾನು ನಂಬುತ್ತೇನೆ, ಇದರಿಂದ ಸತ್ಯವನ್ನು ಬಹಿರಂಗಪಡಿಸಬಹುದು.

ಗೌರವಾನ್ವಿತ ಸಭಾಧ್ಯಕ್ಷರೇ,

ಇಲ್ಲಿ, ಸರ್ಕಾರಿ ಕಂಪನಿಗಳಿಗೆ ಸಂಬಂಧಿಸಿದಂತೆ ನಮ್ಮ ವಿರುದ್ಧ ವಿವಿಧ ಆರೋಪಗಳನ್ನು ಮಾಡಲಾಯಿತು. ಯಾವ ರೀತಿಯ ಆರೋಪಗಳನ್ನು ಮಾಡಲಾಯಿತು? ಆ ಆರೋಪಗಳಿಗೆ ಯಾವುದೇ ಆಧಾರವಿಲ್ಲ.  ಈಗ, ಮಾರುತಿ ಷೇರುಗಳ ವಿಚಾರವಾಗಿ ಆಡಿದ ಆಟವನ್ನು ನೆನಪಿಸಿಕೊಳ್ಳೋಣ. ಆ ಸಮಯದಲ್ಲಿ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಶೀರ್ಷಿಕೆಗಳಿಗಾಗಿ ಇದನ್ನು ಬಳಸಲಾಯಿತು. ಮಾರುತಿ ಷೇರುಗಳ ವಿಚಾರದಲ್ಲಿ ಆಗಿದ್ದೇನು? ನಾನು ಅದರ ಆಳಕ್ಕೆ ಹೋಗಲು ಬಯಸುವುದಿಲ್ಲ, ಒಂದು ವೇಳೆ ಆಳಕ್ಕೆ ಹೋದಲ್ಲಿ ಅವರು ಅದರಲ್ಲಿ ಮುಳುಗಬಹುದು ಮತ್ತು ಇಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು. ಆದ್ದರಿಂದ, ನಾನು ಅದರ ಆಳಕ್ಕೆ ಹೋಗಲು ಬಯಸುವುದಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ದೇಶವು ಸತ್ಯವನ್ನು ತಿಳಿದುಕೊಳ್ಳುವುದು ಅವಶ್ಯಕ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಸ್ವತಂತ್ರ ಭಾರತದಲ್ಲಿ ಜನಿಸಿದೆ. ನನ್ನ ಆಲೋಚನೆಗಳು ಸಹ ಸ್ವತಂತ್ರವಾಗಿವೆ, ಮತ್ತು ನನ್ನ ಕನಸುಗಳು ಸಹ ಮುಕ್ತವಾಗಿವೆ. ಗುಲಾಮ ಮನಸ್ಥಿತಿಯೊಂದಿಗೆ ಬದುಕುವವರಿಗೆ, ಅಂಟಿಕೊಳ್ಳಲು ಹಳೆಯ ಕಾಗದಗಳನ್ನು ಬಿಟ್ಟರೆ ಬೇರೇನೂ ಇಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ʻಪಿಎಸ್‌ಯುʼಗಳನ್ನು ಮಾರಾಟ ಮಾಡಿದ್ದೇವೆ, ನಾವು ʻಪಿಎಸ್‌ಯುʼಗಳನ್ನು ಹಾಳು ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ. ಇಂತಹ ಚರ್ಚೆಗಳು ಇಲ್ಲಿ ನಡೆಯುತ್ತವೆ ಮತ್ತು ನಾನು ಹಿರಿಯ ಸದಸ್ಯರಿಂದಲೇ ಅದನ್ನು ಕೇಳಿದ್ದೇನೆ. ಬಿಎಸ್ಎನ್ಎಲ್, ಎಂಟಿಎನ್ಎಲ್ ಅನ್ನು ನಾಶಪಡಿಸಿದವರು ಯಾರು ಎಂದು ನೆನಪಿದೆಯೇ? ಬಿಎಸ್ಎನ್ಎಲ್, ಎಂಟಿಎನ್ಎಲ್ ನಾಶವಾದಾಗ ಅದು ಯಾವ ಯುಗ? ʻಎಚ್ಎಎಲ್‌ʼನ ದುಃಸ್ಥಿತಿಯನ್ನು ನೆನಪಿಸಿಕೊಳ್ಳಿ, ಅದು ಹೇಗೆ ನಾಶವಾಯಿತು? ತದನಂತರ ಅವರು ʻಎಚ್ಎಎಲ್‌ನʼ ಗೇಟ್‌ಲ್ಲಿ ಭಾಷಣ ಮಾಡುವ ಮೂಲಕ 2019ರ ಚುನಾವಣೆಗೆ ಕಾರ್ಯಸೂಚಿಯನ್ನು ನಿಗದಿಪಡಿಸಿದರು. ʻಎಚ್ಎಎಲ್ʼ ಅನ್ನು ನಾಶಪಡಿಸಿದವರು ʻಎಚ್ಎಎಲ್ʼ ಗೇಟ್‌ನಲ್ಲಿ ಭಾಷಣ ಮಾಡುತ್ತಿದ್ದರು.

ಗೌರವಾನ್ವಿತ ಸಭಾಧ್ಯಕ್ಷರೇ,

ʻಏರ್ ಇಂಡಿಯಾʼವನ್ನು ನಾಶಪಡಿಸಿದವರು ಯಾರು? ʻಏರ್ ಇಂಡಿಯಾʼವನ್ನು ಇಂತಹ ಅವ್ಯವಸ್ಥೆಗೆ ತಂದವರು ಯಾರು? ಇವುಗಳ ವಿನಾಶಕ್ಕೆ ಕಾರಣಕರ್ತರಾಗುವುದರಿಂದ ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶಕ್ಕೆ ಇದು ಚೆನ್ನಾಗಿ ತಿಳಿದಿದೆ. ಈಗ, ನಮ್ಮ ಅಧಿಕಾರಾವಧಿಯ ಕೆಲವು ಸಾಧನೆಗಳನ್ನು ಹಂಚಿಕೊಳ್ಳುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಿಮ್ಮಿಂದಾಗಿ ಈ ಹಿಂದೆ ಹೆಣಗಾಡುತ್ತಿದ್ದ ʻಬಿಎಸ್ಎನ್ಎಲ್ʼ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇಂದು ʻಬಿಎಸ್ಎನ್ಎಲ್ʼ ಸಹ ʻಮೇಡ್ ಇನ್ ಇಂಡಿಯಾʼ 4ಜಿ ಮತ್ತು 5ಜಿ ಕಡೆಗೆ ಸಾಗುತ್ತಿದೆ ಮತ್ತು ವಿಶ್ವದ ಗಮನವನ್ನು ಸೆಳೆಯುತ್ತಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ʻಎಚ್ಎಎಲ್ʼ ಬಗ್ಗೆ ಅನೇಕ ಮಿಥ್ಯೆಗಳು ಹರಡಿದ್ದವು. ಇಂದು ʻಎಚ್ಎಎಲ್ʼನಿಂದ ದಾಖಲೆಯ ಉತ್ಪಾದನೆ ನಡೆಯುತ್ತಿದೆ. ʻಎಚ್ಎಎಲ್ʼ ದಾಖಲೆಯ ಆದಾಯವನ್ನು ಗಳಿಸುತ್ತಿದೆ. ʻಎಚ್ಎಎಲ್ʼ ವಿರುದ್ಧ ಅನೇಕ ಆರೋಪಗಳು ಕೇಳಿಬಂದವು ಮತ್ತು ಇಂದು ʻಎಚ್ಎಎಲ್ʼ ಕರ್ನಾಟಕದಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕಂಪನಿಯಾಗಿದೆ. ನೀವು ಅದನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಿರಿ? ಮತ್ತು ನಾವು ಅದನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದೇವೆ?

ಗೌರವಾನ್ವಿತ ಸಭಾಧ್ಯಕ್ಷರೇ,

ಇಲ್ಲಿ ಉಪಸ್ಥಿತರಿಲ್ಲದ ʻಕಮಾಂಡೋʼ ಒಬ್ಬರು ʻಎಲ್ಐಸಿʼ ಬಗ್ಗೆ ಕೂಡ ಹೆಚ್ಚು ತಿಳಿವಳಿಕೆಯುಳ್ಳ ಹೇಳಿಕೆಗಳನ್ನು ನೀಡಿದ್ದಾರೆ. ʻಎಲ್ಐಸಿʼ ಮುಂತಾದ ಕಂಪನಿಗಳಿಗೆ ಹೀಗಾಗಿದೆ ಎಂದು ಹೇಳಿದ್ದಾರೆ. ʻಎಲ್ಐಸಿʼ ಬಗ್ಗೆ ಎಷ್ಟು ತಪ್ಪು ವಿಷಯಗಳನ್ನು ಹೇಳಬಹುದೋ ಅಷ್ಟೆಲ್ಲವನ್ನೂ ಅವರು ಹೇಳಿದ್ದಾರೆ. ಮತ್ತು ಇವರ ಕಾರ್ಯವಿಧಾನ ಒಂದೇ - ಏನನ್ನಾದರೂ ನಾಶಪಡಿಸುವುದು - ವದಂತಿಗಳನ್ನು ಹರಡುವುದು, ಸುಳ್ಳುಗಳನ್ನು ಹರಡುವುದು, ಗೊಂದಲವನ್ನು ಹರಡುವುದು. ಯಾರಾದರೂ ಹಳ್ಳಿಯಲ್ಲಿ ದೊಡ್ಡ ಬಂಗಲೆಯನ್ನು ಬಯಸಿದರೆ, ಆದರೆ ಅದನ್ನು ಪಡೆಯಲು ಸಾಧ್ಯವಾಗದಿದ್ದಾಗ ಇದೇ ತಂತ್ರವನ್ನು ಅನುಸರಿಸಲಾಗುತ್ತದೆ; ಇದು ದೆವ್ವದ ಮನೆ ಎಂದು ವದಂತಿಗಳನ್ನು ಅವರು ಹರಡುತ್ತಾರೆ. ಯಾರೂ ಅದನ್ನು ಖರೀದಿಸಲು ಸಿದ್ಧರಿಲ್ಲದ ವಾತಾವರಣವನ್ನು ಸೃಷ್ಟಿಸುತ್ತಾರೆ. ಯಾರೂ ಆಸಕ್ತಿ ತೋರಿಸದಿದ್ದಾಗ, ಅವರು ಅಂತಿಮವಾಗಿ ಅದನ್ನು ತಾವೇ ಖರೀದಿಸುತ್ತಾರೆ. ʻಎಲ್ಐಸಿʼಗೆ ಮಾಡಿದ್ದಾದರೂ ಏನು? 

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು, ಎಲ್ಐಸಿ ಷೇರುಗಳು ದಾಖಲೆಯ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಇದನ್ನು ನಾನು ಹೆಮ್ಮೆಯಿಂದ, ನನ್ನ ತಲೆಯನ್ನು ಮೇಲೆತ್ತಿ ಹೇಳಲು ಬಯಸುತ್ತೇನೆ. ಇದು ಹೇಗೆ ಸಾಧ್ಯವಾಯಿತು?

ಗೌರವಾನ್ವಿತ ಸಭಾಧ್ಯಕ್ಷರೇ,

ಈಗ ʻಪಿಎಸ್‌ಯುʼಗಳನ್ನು ಮುಚ್ಚಲಾಗಿದೆ, ʻಪಿಎಸ್‌ಯುʼಗಳನ್ನು ಮುಚ್ಚಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಅವರಿಗೆ ಬಹುಶಃ ಸತ್ಯ ಏನು ಎಂದು ತಿಳಿದಿಲ್ಲ. ಯಾರೋ ಅವರನ್ನು ಹಾಗೆ ಮಾತನಾಡಲು ಪ್ರಚೋದಿಸಿದ್ದಾರೆ. ʻಯುಪಿಎʼ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 2014ರಲ್ಲಿ ದೇಶದಲ್ಲಿ 234 ಸಾರ್ವಜನಿಕ ವಲಯದ ಉದ್ದಿಮೆಗಳಿದ್ದವು. 2014ರಲ್ಲಿ ಅವರು ಅಧಿಕಾರ ಕಳೆದುಕೊಂಡಾಗ ಈ ಸಂಖ್ಯೆ 234 ಆಗಿತ್ತು. ಇಂದು 254 ʻಪಿಎಸ್‌ಯುʼಗಳಿವೆ. ಈಗ, ಹೇಳಿ ಅವರಿಗೆ ತಿಳಿದಿರುವ ಗಣಿತ ಎಂಥದ್ದು? ನಾವು ʻಪಿಎಸ್‌ಯುʼಗಳನ್ನು ಮಾರಾಟ ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ. ನಾವು ʻಪಿಎಸ್‌ಯುʼಗಳನ್ನು ಮಾರಾಟ ಮಾಡಿದ್ದರೆ, ಈಗ 254 ʻಪಿಎಸ್‌ಯುʼಗಳು ಇರಲು ಹೇಗೆ ಸಾಧ್ಯ? ನೀವೆಲ್ಲರೂ ಸೇರಿ ಏನು ಮಾಡುತ್ತಿದ್ದೀರಿ?

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು, ಹೆಚ್ಚಿನ ʻಪಿಎಸ್‌ಯುʼಗಳು ದಾಖಲೆಯ ಆದಾಯವನ್ನು ನೀಡುತ್ತಿವೆ, ಮತ್ತು ʻಪಿಎಸ್‌ಯುʼಗಳಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿದೆ. ಷೇರು ಮಾರುಕಟ್ಟೆಯ ಬಗ್ಗೆ ಸ್ವಲ್ಪ ತಿಳಿವಳಿಕೆ ಇರುವವರು ಸಹ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ನಿಮಗೆ ಅರ್ಥವಾಗದಿದ್ದರೆ, ಯಾರನ್ನಾದರೂ ಕೇಳಿ. ಗೌರವಾನ್ವಿತ ಸಭಾಧ್ಯಕ್ಷರೇ, ಕಳೆದ ವರ್ಷದಲ್ಲಿ, ʻಬಿಎಸ್ಇ ಪಿಎಸ್‌ಯುʼ ಸೂಚ್ಯಂಕದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಹತ್ತು ವರ್ಷಗಳ ಹಿಂದೆ, ಅಂದರೆ ಅದು 2014. ನಾನು 2004 ಮತ್ತು 2014ರ ನಡುವಿನ ಅವಧಿಯ ಬಗ್ಗೆ ಮಾತನಾಡುತ್ತಿದ್ದೇನೆ. ʻಪಿಎಸ್‌ಯುʼಗಳ ನಿವ್ವಳ ಲಾಭ ಸರಿಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳು. ಮತ್ತು ಈ ಹತ್ತು ವರ್ಷಗಳಲ್ಲಿ, ʻಪಿಎಸ್‌ಯುʼಗಳ ನಿವ್ವಳ ಲಾಭವು ಎರಡೂವರೆ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಕಳೆದ ದಶಕದಲ್ಲಿ, ʻಪಿಎಸ್‌ಯುʼಗಳ ನಿವ್ವಳ ಮೌಲ್ಯವು 9.5 ಲಕ್ಷ ಕೋಟಿ ರೂ.ಗಳಿಂದ 17 ಲಕ್ಷ ಕೋಟಿ ರೂ.ಗೆ ಏರಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಅವರು ಎಲ್ಲಿ ಮಧ್ಯಪ್ರವೇಶಿಸಿದರೂ, ಅದು ಮುಳುಗುತ್ತದೆ. ಅವರು ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಮತ್ತು ʻಪಿಎಸ್‌ಯುʼಗಳನ್ನು ಆ ದುಸ್ಥಿತಿಯಿಂದ ಹೊರತಂದಿದ್ದೇವೆ. ನೀವು ಸಂತೋಷ ಪಡಿ, ಭ್ರಮೆಗಳನ್ನು ಹರಡಬೇಡಿ ಮತ್ತು ದೇಶದ ಸಾಮಾನ್ಯ ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡುವ ಇಂತಹ ವದಂತಿಗಳನ್ನು ಮಾರುಕಟ್ಟೆಯಲ್ಲಿ ಹರಡಬೇಡಿ. ನೀವು ಅಂತಹ ಕೆಲಸವನ್ನು ಮಾಡಬಾರದು.

ಗೌರವಾನ್ವಿತ ಸಭಾಧ್ಯಕ್ಷರೇ,

ಅವರ ಮಿತಿ ಹೇಗಿದೆಯೆಂದರೆ ಈಗ ಅವರು ತಮ್ಮ ರಾಜಕುಮಾರನನ್ನು ʻಸ್ಟಾರ್ಟಪ್ʼಆಗಿ ಪರಿವರ್ತಿಸಿದ್ದಾರೆ. ಇದೀಗ, ಅವರು ʻನಾನ್-ಸ್ಟಾರ್ಟರ್ʼ ಆಗಿದ್ದಾರೆ. ಅವರು ʻಟೇಕ್ ಆಫ್ʼ ಆಗುತ್ತಿಲ್ಲ ಅಥವಾ ಉಡಾವಣೆ ಆಗುತ್ತಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನೀವು (ಕಾಂಗ್ರೆಸ್ ಸದಸ್ಯರು) ಕಳೆದ ಬಾರಿಯೂ ಈ ರೀತಿ ಶಾಂತವಾಗಿದ್ದರೆ, ತುಂಬಾ ಖುಷಿಯಾಗಿರುತ್ತಿತ್ತು.

ಗೌರವಾನ್ವಿತ ಸಭಾಧ್ಯಕ್ಷರೇ,

ಅಭಿನಂದನೆಗಳು! ಅಭಿನಂದನೆಗಳು! ಅಭಿನಂದನೆಗಳು! ಎಲ್ಲರಿಗೂ ಅಭಿನಂದನೆಗಳು!

ಗೌರವಾನ್ವಿತ ಸಭಾಧ್ಯಕ್ಷರೇ,

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಕಾಲ ದೇಶ ಮತ್ತು ಜನರ ಸೇವೆ ಮಾಡಿದ್ದು ನನ್ನ ಸೌಭಾಗ್ಯ. ಆದ್ದರಿಂದ, ನಾನು ಪ್ರಾದೇಶಿಕ ಆಕಾಂಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಆ ಪ್ರಕ್ರಿಯೆಯಿಂದ ಹೊರಹೊಮ್ಮಿದ್ದೇನೆ. ಇಲ್ಲಿ ಕುಳಿತಿರುವ ದಿಗ್ವಿಜಯ್ ಜೀ ಅವರಂತಹ ನಾಯಕರು ಸ್ವಾಭಾವಿಕವಾಗಿ ಒಂದು ರಾಜ್ಯದ ಏನು ಬೇಕೆಂದು ಅರ್ಥಮಾಡಿಕೊಳ್ಳುತ್ತಾರೆ. ಏಕೆಂದರೆ ನಾವು ಒಂದೇ ಪ್ರಪಂಚದಿಂದ ಬಂದವರು. ನಮಗೆ ಅನುಭವವಿದೆ, ನಮಗೆ ತಿಳಿದಿದೆ. ಶರದ್ ಪವಾರ್ ಜೀ ಅವರಿಗೂ ತಿಳಿದಿದೆ, ಮತ್ತು ದೇವೇಗೌಡ ಸಾಹೇಬ್ ಅವರಂತಹ ಜನರು ಈ ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ, ನಾವು ಅದರ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇವೆ. ನಾವು ಅದರ ಬಗ್ಗೆ ಪುಸ್ತಕಗಳಲ್ಲಿ ಓದಬೇಕಾಗಿಲ್ಲ; ನಾವು ಅದನ್ನು ನೇರವಾಗಿ ಅನುಭವಿಸಿದ್ದೇವೆ. ಮತ್ತು ಇದು ಎಲ್ಲರ ಪಾಲಿಗೆ ಸತ್ಯವೂ ಆಗಿದೆ. ಸುಮಾರು ಹತ್ತು ವರ್ಷಗಳ ಕಾಲ, ಯುಪಿಎ ಸರ್ಕಾರದ ಸಂಪೂರ್ಣ ಆಡಳಿತ ಯಂತ್ರವು ಗುಜರಾತ್ ಹೊರತುಪಡಿಸಿ ಏನನ್ನಾದರೂ ಮಾಡುವತ್ತ ಗಮನ ಹರಿಸಿತು. ನೀವು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ಕಣ್ಣೀರು ಹಾಕುವುದಿಲ್ಲ; ಅಳುವುದು ನನ್ನ ಅಭ್ಯಾಸವೂ ಅಲ್ಲ.  ಆದರೆ ಆಗಲೂ, ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಎಲ್ಲಾ ರೀತಿಯ ದೌರ್ಜನ್ಯಗಳನ್ನು ಸಹಿಸಿಕೊಂಡರೂ, ನನ್ನ ಸಮಸ್ಯೆ ಹೇಗಿತ್ತೆಂದರೆ, ನನಗೆ ಇಲ್ಲಿ ಮಂತ್ರಿಯನ್ನು ಭೇಟಿಯಾಗಲು ಸಹ ಸಾಧ್ಯವಾಗಲಿಲ್ಲ. ಅವರು ಹೇಳುತ್ತಿದ್ದರು, "ಗೆಳೆಯಾ, ನಿನಗೆ ತಿಳಿದಿದೆ, ನಾನು ನಿನ್ನ ಸ್ನೇಹಿತ. ನಾನು ನಿನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತೇನೆ, ಆದರೆ ನಮ್ಮ ಫೋಟೋ ಇದ್ದರೆ (ಯಾವುದೇ ಪತ್ರಿಕೆಯಲ್ಲಿ) ಮಾತ್ರ..." ಅವರು ತುಂಬಾ ಭಯಭೀತರಾಗಿದ್ದರು. ಮಂತ್ರಿಗಳು ಇಲ್ಲಿ ಭಯಭೀತರಾಗಿದ್ದರು. ಆದರೆ, ಈಗ ನಾನು ಅವರ ತೊಂದರೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ಒಮ್ಮೆ, ನನ್ನ ರಾಜ್ಯದಲ್ಲಿ ಒಂದು ದೊಡ್ಡ ನೈಸರ್ಗಿಕ ವಿಪತ್ತು ಸಂಭವಿಸಿತು. ಸ್ವತಃ ಬಂದು ನೋಡುವಂತೆ ನಾನು ಪ್ರಧಾನ ಮಂತ್ರಿಗಳಿಗೆ ಅನೇಕ ಬಾರಿ ವಿನಂತಿಸಿದೆ. ಅವರ ಭೇಟಿಗೆ ವೇಳಾಪಟ್ಟಿಯನ್ನು ನಿಗದಿ ಮಾಡಲಾಯಿತು. ಆಗ ಸಲಹಾ ಸಮಿತಿಯೂ ಇತ್ತು, ಬಹುಶಃ ಹೆಲಿಕಾಪ್ಟರ್ ಮೂಲಕ ವೈಮಾನಿಕ ತಪಾಸಣೆ ನಡೆಸಬೇಕು ಎಂದು ಅಲ್ಲಿಂದ ಆದೇಶ ಬಂದಿದ್ದಿರಬಹುದು. ನಾನು ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ಇದ್ದಕ್ಕಿದ್ದಂತೆ, ಅವರು ಕಾರ್ಯಕ್ರಮವನ್ನು ಬದಲಾಯಿಸಿದರು ಮತ್ತು ದಕ್ಷಿಣದ ಬೇರೊಂದು ರಾಜ್ಯಕ್ಕೆ ಹೋದರು. ಇಂದು ಆ ರಾಜ್ಯ ಯಾವುದೆಂದು ನನಗೆ ನೆನಪಿಲ್ಲ. "ನಾವು ವಿಮಾನದಿಂದ ನೋಡುತ್ತೇವೆ, ನಾವು ಗುಜರಾತ್‌ಗೆ ಬರುವುದಿಲ್ಲ" ಎಂದು ನನಗೆ ತಿಳಿಸಲಾಯಿತು. ನಾನು ಸೂರತ್ ನಲ್ಲಿದ್ದೆ, ಅವರು ಬರುವವರಿದ್ದರು. ಕೊನೆಯಲ್ಲಿ ಏನಾಗಿರಬಹುದು ಎಂದು ನನಗೆ ತಿಳಿದಿದೆ. ಆದ್ದರಿಂದ, ನೀವು ಊಹಿಸಬಹುದು, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿಯೂ ನಾನು ಅಂತಹ ತೊಂದರೆಗಳನ್ನು ಎದುರಿಸಿದ್ದೇನೆ. ಆದರೆ ಅದರ ಹೊರತಾಗಿಯೂ, ದೇಶದ ಅಭಿವೃದ್ಧಿಗೆ ರಾಜ್ಯದ ಅಭಿವೃದ್ಧಿ ನಿರ್ಣಾಯಕ ಎಂಬುದು ನನ್ನ ಮಂತ್ರವಾಗಿದೆ. ಭಾರತದ ಅಭಿವೃದ್ಧಿಗೆ ಗುಜರಾತ್‌ನ ಅಭಿವೃದ್ಧಿ ಅತ್ಯಗತ್ಯ. ಮತ್ತು ನಾವೆಲ್ಲರೂ ಈ ಮಾರ್ಗವನ್ನು ಅನುಸರಿಸಬೇಕು. ರಾಜ್ಯಗಳ ಅಭಿವೃದ್ಧಿಯ ಮೂಲಕ ಮಾತ್ರ ನಾವು ರಾಷ್ಟ್ರದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದು ನಿರ್ವಿವಾದಿತ. ಮಾನ್ಯ ಸಭಾಧ್ಯಕ್ಷರೇ, ಒಂದು ರಾಜ್ಯವು ಒಂದು ಹೆಜ್ಜೆ ಇಟ್ಟರೆ, ನಾನು ಎರಡು ಹೆಜ್ಜೆ ಮುಂದಿಡಲು ಸಿದ್ಧನಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಸಹಕಾರಿ ಒಕ್ಕೂಟ ವ್ಯವಸ್ಥೆ ಎಂದರೇನು? ಮತ್ತು ನಾನು ಯಾವಾಗಲೂ ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಪ್ರತಿಪಾದಿಸಿದ್ದೇನೆ. ಇಂದು ದೇಶಕ್ಕೆ ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ಅಗತ್ಯವಿದೆ. ನಮ್ಮ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು. ಇದರಿಂದ ನಮ್ಮ ದೇಶವು ವೇಗವಾಗಿ ಪ್ರಗತಿ ಸಾಧಿಸಬಹುದು. ನಾವು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುಂದುವರಿಯಬೇಕು. ಮತ್ತು ನಾನು ರಾಜ್ಯದಲ್ಲಿದ್ದಾಗಲೂ, ನಾನು ಇದೇ ತತ್ವಗಳ ಆಧಾರದ ಮೇಲೆ ಕೆಲಸ ಮಾಡಿದ್ದೇನೆ. ಅದಕ್ಕಾಗಿಯೇ ನಾನು ಮೌನವಾಗಿ ಸಹಿಸಿಕೊಂಡೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಕೋವಿಡ್ ಒಂದು ಉದಾಹರಣೆ. ಇದು ವಿಶ್ವದ ಅತಿದೊಡ್ಡ ಬಿಕ್ಕಟ್ಟಾಗಿತ್ತು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ನಾವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 20 ಸಭೆಗಳನ್ನು ನಡೆಸಿದ್ದೇವೆ. ನಾವು ಪ್ರತಿಯೊಂದು ಅಂಶವನ್ನು ಚರ್ಚಿಸಿದ್ದೇವೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ದಿದ್ದೇವೆ, ತಂಡವನ್ನು ರಚಿಸಿದ್ದೇವೆ ಮತ್ತು ಕೇಂದ್ರ-ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅದು ಜಗತ್ತಿಗೇ ನಿಭಾಯಿಸಲು ಸಾಧ್ಯವಾಗದಂತಹ ಬಿಕ್ಕಟ್ಟು... ಆದರೆ, ನಾವು ಒಟ್ಟಾಗಿ ಈ ದೇಶವನ್ನು ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇವೆ. ನಾನು ಎಂದಿಗೂ ಕೇವಲ ಒಬ್ಬ ವ್ಯಕ್ತಿಗೆ ಶ್ರೇಯಸ್ಸನ್ನು ನೀಡುವುದಿಲ್ಲ...ಒಟ್ಟಾಗಿ, ನಾವು ಈ ದೇಶವನ್ನು ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇವೆ. ಇದರ ಶ್ರೇಯಸ್ಸನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ಸಂಪೂರ್ಣ ಹಕ್ಕಿದೆ. ಮತ್ತು ನಾವು ಇದೇ ಉತ್ಸಾಹದಲ್ಲಿ ಕೆಲಸ ಮಾಡಿದ್ದೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ದೆಹಲಿಯಲ್ಲಿ ʻಜಿ-20ʼ ಶೃಂಗಸಭೆಯನ್ನು ಆಯೋಜಿಸಬಹುದಿತ್ತು. ದೆಹಲಿಯಲ್ಲಿ ಈ ಪ್ರಮುಖ ನಾಯಕರ ನಡುವೆ ಇರುವ ಮೂಲಕ, ನಾವು ಎಲ್ಲವನ್ನೂ ಸಾಧಿಸಬಹುದಿತ್ತು. ಈ ಹಿಂದೆಯೇ ಇದನ್ನು ಮಾಡಬಹುದಾಗಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ. ʻಜಿ-20ʼ ಯಶಸ್ಸಿನ ಶ್ರೇಯಸ್ಸನ್ನು ಎಲ್ಲಾ ರಾಜ್ಯಗಳು ತೆಗೆದುಕೊಳ್ಳಬೇಕೆಂದು ನಾವು ಬಯಸಿದ್ದೇವೆ. ನಾವು ದೆಹಲಿಯಲ್ಲಿ ಒಂದು ಸಭೆ ನಡೆಸಿದ್ದೇವೆ... ಮತ್ತು ರಾಜ್ಯಗಳಲ್ಲಿ 200 ಸಭೆಗಳು... ವಿಶ್ವ ವೇದಿಕೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಮಾನ್ಯತೆ ನೀಡಿದ್ದೇವೆ. ಇದನ್ನು ತಪ್ಪಾಗಿ ಮಾಡಲಿಲ್ಲ; ಇದನ್ನು ಯೋಜಿಸಿ ಮಾಡಲಾಯಿತು. ನನಗೆ ಇದು ಯಾರ ಸರ್ಕಾರ ಎಂಬುದು ಮುಖ್ಯವಲ್ಲ, ಅದರ ಆಧಾರದ ಮೇಲೆ ನಾನು ದೇಶವನ್ನು ನಡೆಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ದೇಶವನ್ನು ಮುನ್ನಡೆಸಲು ಬಯಸುತ್ತೇವೆ, ಮತ್ತು ಅದೇ ನಾವು ನಿರ್ವಹಿಸಿದ ಪಾತ್ರ.

ಗೌರವಾನ್ವಿತ ಸಭಾಧ್ಯಕ್ಷರೇ,

ವಿದೇಶಿ ನಾಯಕರು ನಮ್ಮ ದೇಶಕ್ಕೆ ಭೇಟಿ ನೀಡಿದಾಗ...ನಾನು ಪ್ರಧಾನಿಯಾದ ನಂತರ ಅವರು ಇಲ್ಲಿಗೆ ಬರುತ್ತಿದ್ದಾರೆ ಎಂದಲ್ಲ. ಅವರು ಮೊದಲಿನಿಂದಲೂ ಬರುತ್ತಿದ್ದರು. ಮತ್ತು ವಿದೇಶಿ ನಾಯಕರು ಇಂದು ಭಾರತಕ್ಕೆ ಬಂದರೆ, ಕನಿಷ್ಠ ಒಂದು ದಿನವಾದರೂ ಯಾವುದಾದರೂ ಒಂದು ರಾಜ್ಯಕ್ಕೆ ಭೇಟಿ ನೀಡುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ. ನಾನು ಅವರನ್ನು ರಾಜ್ಯಗಳಿಗೆ ಕರೆದೊಯ್ಯುತ್ತೇನೆ. ಇದರಿಂದ ನನ್ನ ದೇಶ ಕೇವಲ ದೆಹಲಿ ಅಲ್ಲ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ನನ್ನ ದೇಶ ಚೆನ್ನೈನಲ್ಲೂ ಇದೆ. ನನ್ನ ದೇಶ ಬೆಂಗಳೂರಿನಲ್ಲೂ ಇದೆ. ನನ್ನ ದೇಶ ಹೈದರಾಬಾದ್‌ನಲ್ಲೂ ಇದೆ. ನನ್ನ ದೇಶ ಭುವನೇಶ್ವರದ ಪುರಿಯಲ್ಲಿಯೂ ಇದೆ. ನನ್ನ ದೇಶ ಕೋಲ್ಕತ್ತಾದಲ್ಲೂ ಇದೆ. ನನ್ನ ದೇಶ ಗುವಾಹಟಿಯಲ್ಲೂ ಇದೆ. ಇಡೀ ಜಗತ್ತಿನ ಮುಂದೆ ನನ್ನ ದೇಶದ ಪ್ರತಿಯೊಂದು ಮೂಲೆಯ ಅನಾವರಣವನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ಬೆಂಬಲ ಅಥವಾ ವಿರೋಧವನ್ನು ನಾವು ಈ ಪ್ರಮಾಣದಲ್ಲಿ ನಿರ್ಣಯಿಸುವುದಿಲ್ಲ. ಪ್ರಾಮಾಣಿಕತೆಯಿಂದ ಮತ್ತು ಈ ದೇಶದ ಭವಿಷ್ಯಕ್ಕಾಗಿ, ನಾವು ಇಡೀ ಜಗತ್ತಿಗೆ ಭಾರತದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ. ಜನವರಿ 26ರಂದು ನಡೆದ ಅಷ್ಟು ದೊಡ್ಡ ಕಾರ್ಯಕ್ರಮದ(ಗಣರಾಜ್ಯೋತ್ಸವ) ವಿಚಾರದಲ್ಲೂ ಅಷ್ಟೇ. ಎಲ್ಲರಿಗೂ ಗೊತ್ತಿರುವಂತೆ ಜನವರಿ 25 ರಂದು ನಾನು ಫ್ರಾನ್ಸ್ ಅಧ್ಯಕ್ಷರೊಂದಿಗೆ ರಾಜಸ್ಥಾನದ ಬೀದಿಗಳಲ್ಲಿ ತಿರುಗಾಡುತ್ತಿದ್ದೆ, ರಾಜಸ್ಥಾನದ ಬಗ್ಗೆ ಜಗತ್ತಿಗೆ ತಿಳಿಸುತ್ತಿದ್ದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಪ್ರಮುಖ ಕಾರ್ಯಕ್ರಮವೊಂದನ್ನು ಕೈಗೆತ್ತಿಕೊಂಡಿದ್ದೇವೆ, ಅದನ್ನು ಜಾಗತಿಕ ಮಟ್ಟದಲ್ಲಿ ಒಂದು ಮಾದರಿ ಎಂಬಂತೆ ಚರ್ಚಿಸಲಾಗುತ್ತಿದೆ, ಅದೆಂದರೆ - ʻಮಹತ್ವಾಕಾಂಕ್ಷೆಯ ಜಿಲ್ಲೆಗಳುʼ. ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಯಶಸ್ಸಿಗೆ ನನ್ನ ರಾಜ್ಯಗಳ ಬೆಂಬಲವೇ ಕಾರಣ, ಇದು ಶೇಕಡಾ 80 ರಷ್ಟಿದೆ. ರಾಜ್ಯಗಳು ನೀಡಿದ ಬೆಂಬಲವು, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕುರಿತಾಗಿ ನನ್ನ ದೃಷ್ಟಿಕೋನದ ಬಗ್ಗೆ ರಾಜ್ಯಗಳ ತಿಳಿವಳಿಕೆಯನ್ನು ಸೂಚಿಸುತ್ತದೆ. ಇಂದು, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ಮತ್ತಷ್ಟು ಮುನ್ನಡೆಸಲು ನಾನು ರಾಜ್ಯಗಳಿಂದ ಶೇಕಡಾ 80 ರಷ್ಟು ಬೆಂಬಲವನ್ನು ಪಡೆಯುತ್ತಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗುತ್ತಿದೆ. ಮತ್ತು ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿದ್ದ ರಾಜ್ಯಗಳು ಈಗ ಅದರೊಂದಿಗೆ ಸ್ಪರ್ಧಿಸುತ್ತಿವೆ, ಒಂದು ಕಾಲದಲ್ಲಿ ಹಿಂದುಳಿದವೆಂದು ಪರಿಗಣಿಸಲ್ಪಟ್ಟ ಜಿಲ್ಲೆಗಳು ಈಗ ರಾಷ್ಟ್ರೀಯ ಸರಾಸರಿಯೊಂದಿಗೆ ಸ್ಪರ್ಧಿಸುತ್ತಿವೆ. ಇದೆಲ್ಲವೂ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ಆದ್ದರಿಂದ, ಒಟ್ಟಾಗಿ ಮುಂದುವರಿಯುವುದು ಮತ್ತು ದೇಶದ ಭವಿಷ್ಯವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಇಂದು, ದೇಶದ ಪ್ರತಿಯೊಂದು ಮೂಲೆ, ಪ್ರತಿ ಕುಟುಂಬವು ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯಬೇಕು; ಇದು ನಮ್ಮ ಸಾಮೂಹಿಕ ಜವಾಬ್ದಾರಿ, ಮತ್ತು ನಾವು ಆ ನಿಟ್ಟಿನಲ್ಲಿ ಸಾಗಲು ಬಯಸುತ್ತೇವೆ. ಪ್ರತಿಯೊಂದು ರಾಜ್ಯವು ತನ್ನ ಪಾಲು ಪಡೆಯುವುದನ್ನು ಖಾತರಿಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಆದಾಗ್ಯೂ, ಇಂದು ನಾನು ಪ್ರಮುಖ ವಿಷಯವೊಂದರ ಬಗ್ಗೆ ನನ್ನ ದುಃಖವನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ರಾಷ್ಟ್ರವೆಂದರೆ, ನಮ್ಮ ಪಾಲಿಗೆ ಕೇವಲ ಒಂದು ತುಂಡು ಭೂಮಿಯಲ್ಲ. ಅದೊಂದು ಸ್ಫೂರ್ತಿದಾಯಕ ಘಟಕ. ದೇಹವು ವಿವಿಧ ಕೈಕಾಲುಗಳು ಮತ್ತು ಅಂಗಗಳನ್ನು ಹೊಂದಿರುವಂತೆ ರಾಷ್ಟ್ರವೂ ಸಹ. ಮುಳ್ಳು ಪಾದವನ್ನು ಚುಚ್ಚಿದರೆ, ಪಾದವು "ನನಗೇ ಏಕೆ?" ಎಂದು ಹೇಳುವುದಿಲ್ಲ. "ನಾನು ಏಕೆ ತಲೆಕೆಡಿಸಿಕೊಳ್ಳಬೇಕು, ಮುಳ್ಳು ಚುಚ್ಚಿರುವುದು ಪಾದಕ್ಕೆ. ಪಾದವು ತನ್ನ ಕೆಲಸವನ್ನು ಮಾಡಿಕೊಳ್ಳಲಿ" ಎಂದು ಕೈ ಯೋಚಿಸುವುದಿಲ್ಲ. ಕ್ಷಣಾರ್ಧದದಲ್ಲಿ, ಕೈ ಪಾದವನ್ನು ತಲುಪುತ್ತದೆ ಮತ್ತು ಮುಳ್ಳನ್ನು ತೆಗೆದುಹಾಕುತ್ತದೆ. ಮುಳ್ಳು ಪಾದವನ್ನು ಚುಚ್ಚಿದಾಗ, ಕಣ್ಣು "ನಾನೇಕೆ ಅಳಬೇಕು?" ಎಂದು ಹೇಳುವುದಿಲ್ಲ. ಕಣ್ಣಿನಿಂದ ಕಣ್ಣೀರು ಹರಿಯುತ್ತದೆ. ಭಾರತದ ಯಾವುದೇ ಮೂಲೆಯಲ್ಲಿ ನೋವು ಇದ್ದರೆ, ಪ್ರತಿಯೊಬ್ಬರೂ ನೋವನ್ನು ಅನುಭವಿಸಬೇಕು. ದೇಹದ ಒಂದು ಭಾಗವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಇಡೀ ದೇಹವನ್ನು ಅಂಗವಿಕಲವೆಂದು ಪರಿಗಣಿಸಲಾಗುತ್ತದೆ. ಒಂದು ಸಂಸ್ಥೆ, ದೇಶದ ಯಾವುದೇ ಭಾಗ, ಯಾವುದೇ ಪ್ರದೇಶವು ಅಭಿವೃದ್ಧಿಯಿಂದ ವಂಚಿತವಾಗಿದ್ದರೆ, ರಾಷ್ಟ್ರವು ಪ್ರಗತಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ, ನಾವು ಭಾರತವನ್ನು ಸಮಗ್ರ ಘಟಕವಾಗಿ ನೋಡಬೇಕು. ನಾವು ಅದನ್ನು ತುಣುಕುಗಳಾಗಿ ನೋಡಬಾರದು. ಇತ್ತೀಚಿನ ದಿನಗಳಲ್ಲಿ ಮಾತನಾಡುವ ಭಾಷೆಯ ಬಗೆ ಹೇಗಿದೆಯೆಂದರೆ, ರಾಜಕೀಯ ಸ್ವಾರ್ಥಕ್ಕಾಗಿ ದೇಶವನ್ನು ವಿಭಜಿಸಲು ಹೊಸ ನಿರೂಪಣೆಗಳನ್ನು ಸೃಷ್ಟಿಸಲಾಗುತ್ತಿದೆ. ಇಡೀ ಸರ್ಕಾರ ಬೀದಿಗಿಳಿದು ʻವಿಭಜಕʼ ಭಾಷೆಯಲ್ಲಿ ಮಾತನಾಡತೊಡಗಿದೆ. ದೇಶಕ್ಕೆ ಇದಕ್ಕಿಂತ ದೊಡ್ಡ ದುರದೃಷ್ಟ ಮತ್ತೇನಿದೆ, ನೀವೇ ಹೇಳಿ?

ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಮಗು ಒಲಿಂಪಿಕ್ಸ್‌ಗೆ ಹೋಗಿ ಪದಕ ಗೆದ್ದರೆ, "ಇದು ಜಾರ್ಖಂಡ್‌ನ ಮಗು" ಎಂದು ನಾವು ಭಾವಿಸುತ್ತೇವೆಯೇ ಅಥವಾ ಇಡೀ ದೇಶವು "ಇದು ನಮ್ಮ ರಾಷ್ಟ್ರದ ಮಗು" ಎಂದು ಹೇಳುತ್ತದೆಯೇ? ಜಾರ್ಖಂಡ್‌ನ ಮಗುವಿನಲ್ಲಿ ಪ್ರತಿಭೆಯನ್ನು ನೋಡಿ, ಉತ್ತಮ ತರಬೇತಿಗಾಗಿ ಅವರನ್ನು ಮತ್ತೊಂದು ದೇಶಕ್ಕೆ ಕಳುಹಿಸಲು ದೇಶವು ಸಾವಿರಾರು ಅಥವಾ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದಾಗ, ಈ ವೆಚ್ಚವು ಜಾರ್ಖಂಡ್‌ಗಾಗಿ ಎಂದು ನಾವು ಯೋಚಿಸಬೇಕೇ ಅಥವಾ ಇಡೀ ದೇಶಕ್ಕೆ ಮಾಡುವ ವೆಚ್ಚವೆಂದು ಯೋಚಿಸಬೇಕೆ? ನಾವು ಏನು ಮಾಡುತ್ತಿದ್ದೇವೆ, ನಾವು ಎಂತಹ ಭಾಷೆಯನ್ನು ಮಾತನಾಡಲು ಪ್ರಾರಂಭಿಸಿದ್ದೇವೆ? ಇದು ರಾಷ್ಟ್ರದ ಹೆಮ್ಮೆಯ ಮೇಲೆ ಪರಿಣಾಮ ಬೀರುತ್ತದೆ. ಲಸಿಕೆಗಳ ವಿಷಯಕ್ಕೆ ಬಂದರೆ, ಕೋಟ್ಯಂತರ ಜನರಿಗೆ ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆಯನ್ನು ಆ ನಿರ್ದಿಷ್ಟ ಸ್ಥಳದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ನಾವು ಹೇಳುತ್ತೇವೆಯೇ, ಆದ್ದರಿಂದ ಅದು ಅವರ ಹಕ್ಕು, ದೇಶದದ್ದಲ್ಲ ಎನ್ನುತ್ತೇವೆಯೇ? ನಾವು ಆ ರೀತಿ ಯೋಚಿಸಬಹುದೇ? ಆ ನಗರದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರೆ, ದೇಶದ ಇತರ ಭಾಗಗಳು ಅದರಿಂದ ಪ್ರಯೋಜನ ಪಡೆಯುವುದಿಲ್ಲವೇ? ನಾವು ಆ ರೀತಿ ಯೋಚಿಸುತ್ತೇವೆಯೇ? ಇಂತಹ ಆಲೋಚನಾ ರೀತಿಯನ್ನು ನಾವು ಅಳವಡಿಸಿಕೊಳ್ಳುತ್ತಿದ್ದೇವೆಯೇ? ರಾಷ್ಟ್ರೀಯ ಪಕ್ಷವೊಂದರಲ್ಲಿ ಇಂತಹ ಆಲೋಚನೆಗಳು ಬೆಳೆದರೆ ಅದು ತುಂಬಾ ದುರದೃಷ್ಟಕರ.

ಗೌರವಾನ್ವಿತ ಸಭಾಧ್ಯಕ್ಷರೆ, ನಾನು ಕೇಳಬಯಸುವುದೇನೆಂದರೆ,

ಹಿಮಾಲಯವು "ಈ ನದಿಗಳು ಇಲ್ಲಿಂದ ಹರಿಯುತ್ತವೆ. ನಾನು ನಿಮಗೆ ನೀರು ಕೊಡುವುದಿಲ್ಲ. ನೀರಿನ ಹಕ್ಕು ನನ್ನದು," ಎಂದು ಹೇಳಲು ಪ್ರಾರಂಭಿಸಿದರೆ, ದೇಶದ ಗತಿ ಏನಾಗುತ್ತದೆ? ದೇಶ ಎಲ್ಲಿಗೆ ತಲುಪುತ್ತದೆ? ಕಲ್ಲಿದ್ದಲು ಹೊಂದಿರುವ ರಾಜ್ಯಗಳು "ನಿಮಗೆ ಕಲ್ಲಿದ್ದಲು ಕೊಡುವುದಿಲ್ಲ, ಇದು ನಮ್ಮ ಆಸ್ತಿ, ನಿಮ್ಮ ಜೀವನವನ್ನು ಕತ್ತಲೆಯಲ್ಲಿ ಕಳೆಯಿರಿ," ಎಂದು ಹೇಳಿದರೆ, ದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ?

ಗೌರವಾನ್ವಿತ ಸಭಾಧ್ಯಕ್ಷರೇ,

ಕೋವಿಡ್ ಸಮಯದಲ್ಲಿ, ಇಡೀ ದೇಶಕ್ಕೆ ಆಮ್ಲಜನಕದ ಅಗತ್ಯವಿದ್ದಾಗ, ಆಮ್ಲಜನಕ ದೊರೆಯುವ ಸಾಧ್ಯತೆಗಳು ಪೂರ್ವ ಪ್ರದೇಶದ ಕೈಗಾರಿಕೆಗಳಲ್ಲಿದ್ದವು. ಆ ಸಮಯದಲ್ಲಿ, ಪೂರ್ವದ ಜನರು "ನಾವು ಆಮ್ಲಜನಕವನ್ನು ಒದಗಿಸಲು ಸಾಧ್ಯವಿಲ್ಲ, ಅದು ನಮ್ಮ ಜನರಿಗೆ ಬೇಕು, ದೇಶಕ್ಕೆ ಕೊಡಲಾಗದು," ಎಂದು ಸರಳವಾಗಿ ಹೇಳಿದ್ದರೆ, ದೇಶದ ಗತಿ ಏನಾಗುತ್ತಿತ್ತು? ಬಿಕ್ಕಟ್ಟನ್ನು ಸಹಿಸಿಕೊಂಡರೂ, ದೇಶಕ್ಕೆ ಆಮ್ಲಜನಕ ತಲುಪುವುದನ್ನು ಅವರು ಖಚಿತಪಡಿಸಿದರು. ದೇಶದೊಳಗೆ ಭಾವನೆಗಳನ್ನು ಒಡೆಯಲು ಯಾವ ರೀತಿಯ ಪ್ರಯತ್ನ ನಡೆಯುತ್ತಿದೆ? "ನಮ್ಮ ತೆರಿಗೆ, ನಮ್ಮ ಹಣ" - ಈ ರೀತಿಯ ಮಾತುಗಳು ದೇಶದ ಭವಿಷ್ಯಕ್ಕೆ ಹೊಸ ಅಪಾಯ ಒಡ್ಡಬಹುದು. ದೇಶವನ್ನು ವಿಭಜಿಸಲು ಹೊಸ ನಿರೂಪಣೆಗಳನ್ನು ಹುಡುಕುವುದನ್ನು ನಿಲ್ಲಿಸೋಣ. ದೇಶ ಮುಂದೆ ಸಾಗಬೇಕು. ಒಟ್ಟಾಗಿ ದೇಶವನ್ನು ಮುನ್ನಡೆಸಲು ಶ್ರಮಿಸೋಣ.

ಗೌರವಾನ್ವಿತ ಸಭಾಧ್ಯಕ್ಷರೇ,

ಕಳೆದ 10 ವರ್ಷಗಳಲ್ಲಿ, ʻನವ ಭಾರತʼದ ಹೊಸ ದಿಕ್ಕನ್ನು ಪ್ರದರ್ಶಿಸುವ ಗುರಿಯೊಂದಿಗೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಾವು ಅಳವಡಿಸಿಕೊಂಡ ದಿಕ್ಕು, ನಾವು ಕೈಗೊಂಡ ನಿರ್ಮಾಣ ಕಾರ್ಯಗಳು ಹೀಗೆ ಕಳೆದ ದಶಕದಲ್ಲಿ ನಮ್ಮ ಸಂಪೂರ್ಣ ಗಮನವು  ಮೂಲಭೂತ ಸೌಕರ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಮೀಸಲಾಗಿತ್ತು.

ಗೌರವಾನ್ವಿತ ಸಭಾಧ್ಯಕ್ಷರೇ,

ಪ್ರತಿ ಕುಟುಂಬದ ಜೀವನ ಮಟ್ಟ ಸುಧಾರಿಸಬೇಕು ಮತ್ತು ಅವರ ಜೀವನ ಗುಣಮಟ್ಟ ಹೆಚ್ಚಾಗಬೇಕು. ಈಗಿನ ತಕ್ಷಣದ ಬೇಡಿಕೆಯೆಂದರೆ - ನಾವು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ? ಮುಂಬರುವ ದಿನಗಳಲ್ಲಿ, ನಾವು ನಮ್ಮ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯಗಳೊಂದಿಗೆ ʻಸುಗಮ ಜೀವನʼದ ಹಂತದಿಂದ ʻಜೀವನದ ಗುಣಮಟ್ಟʼದ ಹಂತಕ್ಕೆ ಮುಂದುವರಿಯಲು ಬಯಸುತ್ತೇವೆ. ನಾವು ಆ ನಿಟ್ಟಿನಲ್ಲಿ ಮುನ್ನಡೆಯಲು ಬದ್ಧರಾಗಿದ್ದೇವೆ ಮತ್ತು ನಾವು ಅದನ್ನು ಖಾತರಿಪಡಿಸುತ್ತೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ 5 ವರ್ಷಗಳಲ್ಲಿ, ಬಡತನದಿಂದ ಹೊರಬಂದ ʻನವ ಮಧ್ಯಮ ವರ್ಗʼವನ್ನು ತಲುಪಲು ಮತ್ತು ಅವರನ್ನು ಸಬಲೀಕರಣಗೊಳಿಸಿ ಹೊಸ ಎತ್ತರಕ್ಕೆ ತಲುಪಿಸಲು ನಾವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ದರಿಂದ, ನಾವು ಸಾಮಾಜಿಕ ನ್ಯಾಯದ 'ಮೋದಿ ಗುರಾಣಿ'ಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ ಮತ್ತು ಅದಕ್ಕೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನಾವು ಹೇಳಿದಾಗ, 25 ಕೋಟಿ ಜನರು ಬಡತನದಿಂದ ಹೊರಬಂದ ಮೇಲೆ ನಾವು 80 ಕೋಟಿ ಜನರಿಗೆ ಆಹಾರ ಮತ್ತು ಧಾನ್ಯಗಳನ್ನು ಏಕೆ ಒದಗಿಸುತ್ತಿದ್ದೇವೆ ಎಂಬ ತಪ್ಪು ವಾದವನ್ನು ಮಂಡಿಸಲಾಗುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರೂ, ವೈದ್ಯರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು, ಅವರ ಆಹಾರದಲ್ಲಿ ಜಾಗರೂಕರಾಗಿರಲು, ವಿಶ್ರಾಂತಿ ಪಡೆಯಲು ಮತ್ತು ಕೆಲವು ಚಟುವಟಿಕೆಗಳನ್ನು ತಪ್ಪಿಸಲು ಸಲಹೆ ನೀಡುತ್ತಾರೆ ಎಂದು ನಮಗೆ ಗೊತ್ತಿದೆ. ಇದರಿಂದ ಅವರು ಮತ್ತೆ ತೊಂದರೆಗೆ ಸಿಲುಕದಂತೆ ತಡೆಯಬಹುದು. ಅಂತೆಯೇ, ಬಡತನದಿಂದ ಹೊರಬಂದವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ, ಇದರಿಂದ ಅವರಿಗೆ ಯಾವುದೇ ಬಿಕ್ಕಟ್ಟು ಸಂಭವಿಸಿದರೆ ಅವರು ಮತ್ತೆ ಬಡತನಕ್ಕೆ ಜಾರದಂತೆ ತಡೆಯಬಹುದು. ಅದಕ್ಕಾಗಿಯೇ ಅವರನ್ನು ಬಲಪಡಿಸಬೇಕಾಗಿದೆ. ಈ ಸಮಯದಲ್ಲಿ, ʻನವ ಮಧ್ಯಮ ವರ್ಗʼವು ಮತ್ತೆ ಆ ನರಕಕ್ಕೆ ಬೀಳದಂತೆ ನಾವು ಬಡವರನ್ನು ಬಲಪಡಿಸಿದ್ದೇವೆ. ನಾವು ʻಆಯುಷ್ಮಾನ್ ಭಾರತ್ʼಗೆ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಒದಗಿಸುತ್ತೇವೆ ಮತ್ತು ಇದರ ಹಿಂದೆ ಒಂದು ಉದ್ದೇಶವಿದೆ. ಮಧ್ಯಮ ವರ್ಗದ ವ್ಯಕ್ತಿಯ ಕುಟುಂಬವನ್ನು ಅನಾರೋಗ್ಯವು ಬಾಧಿಸಿದರೆ, ಅವರು ಬಡವರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹಾಗಾಗಿ, ಬಡತನದಿಂದ ಹೊರಬರುವುದು ಎಷ್ಟು ಮುಖ್ಯವೋ, ಯಾರೂ ಆಕಸ್ಮಿಕವಾಗಿ ಮತ್ತೆ ಬಡತನಕ್ಕೆ ಜಾರದಂತೆ ನೋಡಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಅದಕ್ಕಾಗಿಯೇ ನಾವು ಧಾನ್ಯಗಳನ್ನು ಒದಗಿಸುತ್ತೇವೆ ಮತ್ತು ನಾವು ಅವುಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ. ಯಾರಾದರೂ ಇಷ್ಟಪಡಲಿ, ಬಿಡಲಿ, 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಅವರು ʻನವ ಮಧ್ಯಮ ವರ್ಗʼದ ಭಾಗವಾಗಿದ್ದಾರೆ. ಆದರೆ, ನಾನು ಅರ್ಥಮಾಡಿಕೊಂಡಿದ್ದೇನೆ, ನಾನು ಆ ಜಗತ್ತಿನಲ್ಲಿ ಇದ್ದು ಬಂದಿದ್ದೇನೆ. ಅವರಿಗೆ ಇದು ಹೆಚ್ಚು ಅಗತ್ಯವಾಗಿದೆ. ಹಾಗಾಗಿ, ನಮ್ಮ ಯೋಜನೆ ಮುಂದುವರಿಯುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ದೇಶಕ್ಕೆ ತಿಳಿದಿದೆ, ಮತ್ತು ಅದಕ್ಕಾಗಿಯೇ ಬಡವರಿಗೆ 5 ಲಕ್ಷ ರೂಪಾಯಿಗಳವರೆಗಿನ ಚಿಕಿತ್ಸೆಯ ಸೌಲಭ್ಯವು ಭವಿಷ್ಯದಲ್ಲೂ ಲಭ್ಯವಿರುತ್ತದೆ ಎಂದು ನಾನು ಭರವಸೆ ನೀಡಿದ್ದೇನೆ. ಇದು ನನ್ನ ಗ್ಯಾರಂಟಿ, ಮೋದಿಯ ಗ್ಯಾರಂಟಿ. ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲವಾಗುವಂತೆ 80% ರಿಯಾಯಿತಿಯಲ್ಲಿ ಔಷಧಗಳು ಲಭ್ಯವಿರುತ್ತವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ರೈತರಿಗೆ ನೀಡಲಾಗುತ್ತಿರುವ ʻಸಮ್ಮಾನ್ ನಿಧಿʼ ಮುಂದುವರಿಯುತ್ತದೆ ಎಂಬ ಗ್ಯಾರಂಟಿಯನ್ನು ಮೋದಿ ನೀಡುತ್ತಿದ್ದಾರೆ. ಇದರಿಂದ ರೈತರು ತಮ್ಮೆಲ್ಲಾ ಸಾಮರ್ಥ್ಯದೊಂದಿಗೆ ಅಭಿವೃದ್ಧಿಯ ಪ್ರಯಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು.

ಗೌರವಾನ್ವಿತ ಸಭಾಧ್ಯಕ್ಷರೇ,

ಬಡವರಿಗೆ ಶಾಶ್ವತ ಮನೆಗಳನ್ನು ಒದಗಿಸುವುದು ನನ್ನ ಅಭಿಯಾನವಾಗಿದೆ. ಕುಟುಂಬವೊಂದು ಬೆಳೆದರೆ, ಹೊಸ ಕುಟುಂಬವೊಂದು ರಚನೆಯಾದರೆ, ಶಾಶ್ವತ ಮನೆಗಳನ್ನು ಒದಗಿಸುವ ನನ್ನ ಕಾರ್ಯಕ್ರಮ ಮುಂದುವರಿಯುತ್ತದೆ. ಕೊಳಾಯಿ ನೀರು ಪೂರೈಕೆ ಯೋಜನೆ, ಇದು ನನ್ನ ದೃಢ ಬದ್ಧತೆ, ಮತ್ತು ನಾವು ಪೈಪ್‌ಲೈನ್‌ಗಳ ಮೂಲಕ ನೀರು ಪೂರೈಕೆಯನ್ನು ಮುಂದುವರಿಸುತ್ತೇವೆ ಎಂಬುದು ನನ್ನ ಗ್ಯಾರಂಟಿ. ಹೊಸ ಶೌಚಾಲಯಗಳನ್ನು ನಿರ್ಮಿಸುವ ಅಗತ್ಯವಿದ್ದರೆ, ನಾವು ಅದನ್ನು ಮುಂದುವರಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಈ ಕಾರ್ಯಗಳು ವೇಗವಾಗಿ ಪ್ರಗತಿ ಸಾಧಿಸುತ್ತವೆ, ಏಕೆಂದರೆ ನಾವು ತೆಗೆದುಕೊಂಡ ಅಭಿವೃದ್ಧಿಯ ಹಾದಿಯನ್ನು, ಅಭಿವೃದ್ಧಿಯ ದಿಕ್ಕನ್ನು ಯಾವುದೇ ಸಂದರ್ಭದಲ್ಲೂ ನಿಧಾನಗೊಳಿಸಲು ನಾವು ಬಯಸುವುದಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೆ,

ನಮ್ಮ ಸರ್ಕಾರದ ಮೂರನೇ ಅವಧಿ ದೂರವಿಲ್ಲ. ಕೆಲವರು ಇದನ್ನು ʻಮೋದಿ 3.0ʼ ಎಂದು ಕರೆಯುತ್ತಾರೆ. 'ವಿಕಸಿತ ಭಾರತ'ದ ಅಡಿಪಾಯವನ್ನು ಬಲಪಡಿಸಲು ʻಮೋದಿ 3.0ʼ ಪೂರ್ಣ ಶಕ್ತಿಯನ್ನು ಪ್ರಯೋಗಿಸಲಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಭಾರತದಲ್ಲಿ ವೈದ್ಯರ ಸಂಖ್ಯೆ ಮೊದಲಿಗಿಂತ ಅನೇಕ ಪಟ್ಟು ಹೆಚ್ಚಾಗುತ್ತದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ದೇಶದಲ್ಲಿ ಚಿಕಿತ್ಸೆಯು ಹೆಚ್ಚು ಅಗ್ಗವಾಗುತ್ತದೆ ಮತ್ತು ಹೆಚ್ಚು ಜನರಿಗೆ ಲಭ್ಯವಾಗುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಪ್ರತಿ ಬಡ ಕುಟುಂಬವು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿರುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಪ್ರತಿಯೊಬ್ಬ ಅರ್ಹ ಫಲಾನುಭವಿಯು ʻಪಿಎಂ ಆವಾಸ್(ವಸತಿ)ʼ ಮನೆಯನ್ನು ಪಡೆಯಲಿದ್ದು, ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳಲಾಗುವುದು. ಹೆಚ್ಚುವರಿಯಾಗಿ, ಮುಂದಿನ ಐದು ವರ್ಷಗಳಲ್ಲಿ, ಲಕ್ಷಾಂತರ ನಾಗರಿಕರಿಗೆ ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ಇಳಿಸಲು ಸೌರ ಶಕ್ತಿಯನ್ನು ಬಳಸಲಾಗುವುದು. ಸರಿಯಾದ ಯೋಜನೆಯ ಮೂಲಕ, ಜನರು ಮನೆಯಲ್ಲಿ ವಿದ್ಯುತ್ ಉತ್ಪಾದಿಸುವ ಮೂಲಕ ಮತ್ತು ಅದನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶವನ್ನೂ ಪಡೆಯಲಿದ್ದಾರೆ. ಇದು ಮುಂದಿನ ಐದು ವರ್ಷಗಳ ನಮ್ಮ ಕಾರ್ಯಕ್ರಮದ ಭಾಗವಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ದೇಶಾದ್ಯಂತ ಕೊಳವೆ ಅನಿಲ ಸಂಪರ್ಕಕ್ಕಾಗಿ ಸಮಗ್ರ ಜಾಲವನ್ನು ಸ್ಥಾಪಿಸಲು ಸಂಘಟಿತ ಪ್ರಯತ್ನ ನಡೆಯಲಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ನಮ್ಮ ಯುವಕರ ಶಕ್ತಿಗೆ ಜಗತ್ತು ಸಾಕ್ಷಿಯಾಗಲಿದೆ. ಗೌರವಾನ್ವಿತ ಸಭಾಧ್ಯಕ್ಷರೇ, ನಮ್ಮ ನವೋದ್ಯಮಗಳು ಗಳು ಮತ್ತು ಯುವಜನರ ʻಯುನಿಕಾರ್ನ್ʼಗಳ ಸಂಖ್ಯೆ ಲಕ್ಷಾಂತರ ಆಗಿರುತ್ತದೆ. ಅಷ್ಟೇ ಅಲ್ಲ, ಶ್ರೇಣಿ-2, ಶ್ರೇಣಿ-3 ನಗರಗಳು ಈ ಹೊಸ ನವೋದ್ಯಮಗಳ ಮೂಲಕ ಹೊಸ ಗುರುತಿನೊಂದಿಗೆ ಹೊರಹೊಮ್ಮಲಿವೆ. ಇದು ನಾನು ನೋಡುತ್ತಿರುವ ಮುಂದಿನ ಐದು ವರ್ಷಗಳ ದೂರದೃಷ್ಟಿಯಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಬೆಳವಣಿಗೆಯ ಮೇಲೆ ಮೀಸಲು ನಿಧಿಯ ಪರಿಣಾಮವನ್ನು ನೀವು ನೋಡುತ್ತೀರಿ. ಮುಂದಿನ ಐದು ವರ್ಷಗಳಲ್ಲಿ, ಪೇಟೆಂಟ್‌ಗಳ ಸಂಖ್ಯೆ ಹಿಂದಿನ ದಾಖಲೆಗಳನ್ನು ಮೀರಿಸುತ್ತದೆ, ಕಳೆದ ಏಳು ದಶಕಗಳಲ್ಲಿ ಸಲ್ಲಿಸಿದ ಪೇಟೆಂಟ್‌ಗಳನ್ನು ಮೀರಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು, ನನ್ನ ದೇಶದ ಲಕ್ಷಾಂತರ ಮಧ್ಯಮ ವರ್ಗದ ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ನನ್ನ ದೇಶದ ಮಕ್ಕಳು ಲಕ್ಷಾಂತರ ರೂಪಾಯಿಗಳನ್ನು ಉಳಿಸುವ ವಾತಾವರಣವನ್ನು ಸೃಷ್ಟಿಸಲು ನಾನು ಬಯಸುತ್ತೇನೆ. ನನ್ನ ದೇಶದ ಮಧ್ಯಮ ವರ್ಗದ ಕನಸುಗಳು ನನಸಾಗಬೇಕು. ಅತ್ಯುತ್ತಮ ವಿಶ್ವವಿದ್ಯಾಲಯಗಳು ನನ್ನ ದೇಶದಲ್ಲೇ ಇರಬೇಕು. ನನ್ನ ದೇಶದಲ್ಲಿ ಅತ್ಯುನ್ನತ ಶಿಕ್ಷಣವು ಅವರಿಗೆ ಲಭ್ಯವಿರಬೇಕು, ಮತ್ತು ಅದಕ್ಕಾಗಿಯೇ ನಾನು ಇದನ್ನು ಹೇಳುತ್ತಿದ್ದೇನೆ ಇದರಿಂದ ನನ್ನ ದೇಶದ ಮಕ್ಕಳು ಮತ್ತು ಅವರ ಕುಟುಂಬಗಳು ಹಣವನ್ನು ಉಳಿಸಬಹುದು.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಭಾರತದ ತ್ರಿವರ್ಣ ಧ್ವಜವು ರಾರಾಜಿಸದ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ನೀವು ನೋಡುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ಭಾರತದ ಯುವಕರ ಶಕ್ತಿಯನ್ನು ಗುರುತಿಸುವ ನಿರೀಕ್ಷೆಯನ್ನು ನಾನು ಹೊಂದಿದ್ದೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಭಾರತದ ಸಾರ್ವಜನಿಕ ಸಾರಿಗೆ ಸಂಪೂರ್ಣ ಪರಿವರ್ತನೆಗೆ ಸಾಕ್ಷಿಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ, ಕೈಗೆಟುಕುವ ಮತ್ತು ಐಷಾರಾಮಿ ಪ್ರಯಾಣದ ಸೌಲಭ್ಯಗಳು ಬಡವರು ಮತ್ತು ಮಧ್ಯಮ ವರ್ಗದವರಿಗೆ ಸುಲಭವಾಗಿ ಲಭ್ಯವಿರುತ್ತವೆ. ಈ ಸೌಲಭ್ಯಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಬಹುದು. ಮುಂದಿನ ಐದು ವರ್ಷಗಳಲ್ಲಿ, ದೇಶವು ಬುಲೆಟ್ ರೈಲುಗಳ ಪರಿಚಯ ಮತ್ತು ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲುಗಳ ವಿಸ್ತರಣೆಗೆ ಸಾಕ್ಷಿಯಾಗಲಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ʻಆತ್ಮನಿರ್ಭರ ಭಾರತʼ(ಸ್ವಾವಲಂಬಿ ಭಾರತ) ಅಭಿಯಾನವು ಹೊಸ ಎತ್ತರವನ್ನು ತಲುಪಲಿದೆ. ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯನ್ನು ಕಾಣುತ್ತದೆ. 

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ 5 ವರ್ಷಗಳಲ್ಲಿ, "ಮೇಡ್ ಇನ್ ಇಂಡಿಯಾ" ಅರೆವಾಹಕ(ಸೆಮಿಕಂಡಕ್ಟರ್‌) ತಂತ್ರಜ್ಞಾನವು ವಿಶ್ವಾದ್ಯಂತ ಪ್ರತಿಧ್ವನಿಸುತ್ತದೆ. ಪ್ರತಿ ಎಲೆಕ್ಟ್ರಾನಿಕ್ ಸಾಧನವು ಈ ಚಿಪ್ ಅನ್ನು ಹೊಂದಿರುತ್ತದೆ, ಕೆಲವು ಭಾರತೀಯರ ಬೆವರು ಅದರಲ್ಲಿರುತ್ತದೆ. 

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ದೇಶವು ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಹೊಸ ವೇಗಕ್ಕೆ ಸಾಕ್ಷಿಯಾಗಲಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು, ನಮ್ಮ ದೇಶವು ಶತಕೋಟಿ ರೂಪಾಯಿ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ನಮ್ಮ ಇಂಧನ ಅಗತ್ಯಗಳಿಗಾಗಿ ಹೆಚ್ಚು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ನಾವು ದಣಿವರಿಯದೆ ಕೆಲಸ ಮಾಡುತ್ತೇವೆ ಮತ್ತು ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ನಾನು ನಂಬುತ್ತೇನೆ. ಅಷ್ಟೇ ಅಲ್ಲ, ಗೌರವಾನ್ವಿತ ಸಭಾಧ್ಯಕ್ಷರೇ, ನಾವು ಹಸಿರು ಹೈಡ್ರೋಜನ್ ಅಭಿಯಾನದೊಂದಿಗೆ ವಿಶ್ವ ಮಾರುಕಟ್ಟೆಯ ಆಕರ್ಷಣೆಯನ್ನು ಮುಂದುವರಿಯುತ್ತಿದ್ದೇವೆ. ನಮ್ಮ ಹಸಿರು ಹೈಡ್ರೋಜನ್, ದೇಶದ ಇಂಧನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಾವು ಎಥೆನಾಲ್ ಕ್ಷೇತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. 20 ಎಥನಾಲ್‌ ಮಿಶ್ರಣ ಗುರಿಯನ್ನು ಸಾಧಿಸುವ ಮೂಲಕ, ನಾವು ನಮ್ಮ ಜನರಿಗೆ ಅಗ್ಗದ ಸಾರಿಗೆಯನ್ನು ಖಚಿತಪಡಿಸುತ್ತೇವೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದ ಬಗ್ಗೆ ಮಾತನಾಡುವಾಗ, ಅದರ ನೇರ ಲಾಭವು ನನ್ನ ದೇಶದ ರೈತರಿಗೆ ಆಗುತ್ತದೆ,  ಅವರು ಹೊಸ ಪ್ರಗತಿಗೆ ಸಾಕ್ಷಿಯಾಗಲಿದ್ದಾರೆ. ನಾವು ನಮ್ಮನ್ನು ಕೃಷಿ ಆಧಾರಿತ ರಾಷ್ಟ್ರ ಎಂದು ಕರೆದುಕೊಳ್ಳುತ್ತೇವೆ, ಆದರೆ ಇಂದಿಗೂ ನಾವು ಶತಕೋಟಿ ರೂಪಾಯಿ ಮೌಲ್ಯದ ಅಡುಗೆ ಎಣ್ಣೆಯನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿದೆ. ನಮ್ಮ ರೈತರ ಮೇಲೆ ನನಗೆ ನಂಬಿಕೆ ಇದೆ, ಮತ್ತು ಖಾದ್ಯ ತೈಲ ಕ್ಷೇತ್ರದಲ್ಲಿ ನಾವು ಜಾರಿಗೆ ತರುತ್ತಿರುವ ನೀತಿಗಳೊಂದಿಗೆ, ನನ್ನ ದೇಶವು ಶೀಘ್ರದಲ್ಲೇ, 5 ವರ್ಷಗಳಲ್ಲಿ ಸ್ವಾವಲಂಬಿಯಾಗಲಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಮತ್ತು ಇದರಿಂದ ಉಳಿಸಿದ ಹಣವು ನನ್ನ ದೇಶದ ರೈತರ ಜೇಬಿಗೆ ಹೋಗುತ್ತದೆ, ಆ ಹಣವು ಪ್ರಸ್ತುತ ವಿದೇಶಿ ಮಾರುಕಟ್ಟೆಗಳಿಗೆ ಹೋಗುತ್ತಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ರಾಸಾಯನಿಕ ಕೃಷಿಯಿಂದಾಗಿ, ನಮ್ಮ ಭೂಮಿ ತಾಯಿ ಸಾಕಷ್ಟು ಹಾನಿಯನ್ನು ಅನುಭವಿಸುತ್ತಿದ್ದಾಳೆ. ಮುಂಬರುವ ಐದು ವರ್ಷಗಳಲ್ಲಿ, ನಾವು ನಮ್ಮ ದೇಶದ ರೈತರನ್ನು ನೈಸರ್ಗಿಕ ಕೃಷಿಯತ್ತ ಯಶಸ್ವಿಯಾಗಿ ಮುನ್ನಡೆಸುತ್ತೇವೆ. ಇದು ನಮ್ಮ ಭೂಮಾತೆಯ ರಕ್ಷಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿರುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನೈಸರ್ಗಿಕ ಕೃಷಿಯ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ವಿಶ್ವಸಂಸ್ಥೆಯ ಮೂಲಕ, ನಾನು ಸಿರಿಧಾನ್ಯಗಳಿಗಾಗಿ ಅಭಿಯಾನವನ್ನು ಪ್ರಾರಂಭಿಸಿದೆ. ನಾವು ಅದಕ್ಕೆ 'ಶ್ರೀ ಅನ್ನ' ರೂಪದಲ್ಲಿ ಮಾನ್ಯತೆ ನೀಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ, ನನ್ನ ಹಳ್ಳಿಯ ಸಣ್ಣ ಮನೆಗಳಲ್ಲಿ ಬೆಳೆದ ಸಿರಿಧಾನ್ಯಗಳು ʻಸೂಪರ್‌ ಫುಡ್ʼ ಆಗಿ ವಿಶ್ವ ಮಾರುಕಟ್ಟೆಯಲ್ಲಿ ಮಾನ್ಯತೆ ಪಡೆಯುವ ದಿನವನ್ನು ನಾನು ನೋಡಬಲ್ಲೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಹೊಲಗಳಲ್ಲಿನ ರೈತರಿಗೆ ಡ್ರೋನ್‌ಗಳು ಶಕ್ತಿಯ ಹೊಸ ಸಾಧನವಾಗಿ ಹೊರಹೊಮ್ಮಲಿವೆ. ನಾವು ಈಗಾಗಲೇ "15 ಸಾವಿರ ಡ್ರೋನ್ ದೀದಿ ಉಪಕ್ರಮ" ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇದು ಕೇವಲ ಆರಂಭ ಮಾತ್ರ; ಹೆಚ್ಚಿನ ಯಶಸ್ಸು ಮುಂದೆ ಇದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಇಲ್ಲಿಯವರೆಗೆ ಕೃಷಿಯಲ್ಲಿ ನ್ಯಾನೊ ತಂತ್ರಜ್ಞಾನವನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ʻನ್ಯಾನೋ ಯೂರಿಯಾʼದೊಂದಿಗೆ ನಾವು ಉತ್ತಮ ಯಶಸ್ಸನ್ನು ಸಾಧಿಸಿದ್ದೇವೆ. ʻನ್ಯಾನೋ ಡಿಎಪಿʼ ವಿಚಾರದಲ್ಲೂ ನಾವು ಯಶಸ್ವಿಯಾಗಿದ್ದೇವೆ. ಇಂದು ರಸಗೊಬ್ಬರದ ಚೀಲವನ್ನು ಹೊರುವ ರೈತನು, ಮುಂದೆ ಕೇವಲ ಒಂದು ಬಾಟಲಿ ರಸಗೊಬ್ಬರದೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ. ಆ ದಿನಗಳು ದೂರವಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಸಹಕಾರಿ ಕ್ಷೇತ್ರಕ್ಕಾಗಿ ಹೊಸ ಸಚಿವಾಲಯವನ್ನು ಸ್ಥಾಪಿಸಿದ್ದೇವೆ. ಇಡೀ ಸಹಕಾರಿ ಚಳವಳಿಯನ್ನು ಹೊಸ ಹುರುಪಿನಿಂದ ಪುನರುಜ್ಜೀವನಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. 21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಇದು ಹೊರಹೊಮ್ಮುತ್ತದೆ. ನಾವು ಎರಡು ಲಕ್ಷ ಫಸಲು ಸಂಗ್ರಹಣಾ ಸೌಲಭ್ಯಗಳನ್ನು ಸ್ಥಾಪಿಸುವ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳುತ್ತಿದ್ದೇವೆ, ಇದು ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಸ್ಥಳವನ್ನು ಒದಗಿಸುತ್ತದೆ. ರೈತನು ತನ್ನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಮಾರಾಟ ಮಾಡಬೇಕು ಅಥವಾ ಮಾರಾಟ ಮಾಡಬಾರದು ಎಂಬುದನ್ನು ನಿರ್ಧರಿಸುತ್ತಾನೆ. ತನ್ನ ಉತ್ಪನ್ನಗಳು ವ್ಯರ್ಥವಾಗಬಹುದೆಂಬ ರೈತನ ಭಯವನ್ನು ತೊಡೆದುಹಾಕಲಾಗುವುದು ಮತ್ತು ರೈತನ ಆರ್ಥಿಕ ಶಕ್ತಿ ಹೆಚ್ಚಾಗಲಿದೆ. ಪಶುಸಂಗೋಪನೆ ಮತ್ತು ಮೀನು ಸಾಕಾಣಿಕೆ ಕ್ಷೇತ್ರಗಳು ಹೊಸ ದಾಖಲೆಗಳನ್ನು ನಿರ್ಮಿಸಲಿವೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ. ಪ್ರಸ್ತುತ, ನಮ್ಮಲ್ಲಿ ಉತ್ತಮ ಸಂಖ್ಯೆಯಲ್ಲಿ ಜಾನುವಾರುಗಳು ಇದ್ದರೂ, ಹಾಲಿನ ಉತ್ಪಾದನೆ ಕಡಿಮೆ. ನಾವು ಈ ಪ್ರವೃತ್ತಿಯನ್ನು ಬದಲಾಯಿಸುತ್ತೇವೆ. ಮೀನುಗಾರಿಕೆ ರಫ್ತು ಕ್ಷೇತ್ರದಲ್ಲಿ ನಾವು ವೇಗವಾಗಿ ಅಭಿವೃದ್ಧಿ ಹೊಂದುತ್ತೇವೆ ಎಂದು ನಾನು ನಂಬುತ್ತೇನೆ. ನಾವು ʻರೈತ ಉತ್ಪಾದಕ ಸಂಸ್ಥೆʼಗಳನ್ನು(ಎಫ್‌ಪಿಒ) ಸ್ಥಾಪಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಮತ್ತು ಈ ಅನುಭವವು ತುಂಬಾ ಉತ್ತಮವಾಗಿದೆ. ಐದು ವರ್ಷಗಳಲ್ಲಿ, ರೈತರ ಹೊಸ ಸಂಘಟನೆಯ ಶಕ್ತಿ ಹಾಗೂ ಕೃಷಿ ಉತ್ಪಾದನೆಯ ಮೌಲ್ಯವು ಖಂಡಿತವಾಗಿಯೂ ನನ್ನ ದೇಶದ ರೈತರಿಗೆ ಲಭ್ಯವಾಗುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ʻಜಿ-20ʼ ಶೃಂಗಸಭೆಯ ಯಶಸ್ಸು ಇದನ್ನು ಸ್ಪಷ್ಟಪಡಿಸಿದೆ. ಕೋವಿಡ್ ನಂತರ, ನಾವು ಜಗತ್ತಿನಲ್ಲಿ ಮುಕ್ತತೆಯನ್ನು ನೋಡಿದ್ದೇವೆ, ಮತ್ತು ಈ ಮುಕ್ತತೆಯ ಅತಿದೊಡ್ಡ ಪ್ರಯೋಜನವೆಂದರೆ ವಿಶ್ವದ ಗಮನವು ಭಾರತದತ್ತ ತಿರುಗಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮದ ಒಂದು ದೊಡ್ಡ ವಲಯವು ಪ್ರವರ್ಧಮಾನಕ್ಕೆ ಬರಲಿದೆ, ಇದು ಹೆಚ್ಚಿನ ಉದ್ಯೋಗವನ್ನು ಒದಗಿಸುತ್ತದೆ. ಇಂದು, ವಿಶ್ವದ ಅನೇಕ ದೇಶಗಳಿವೆ, ಅವುಗಳ ಸಂಪೂರ್ಣ ಆರ್ಥಿಕತೆಯು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಭಾರತದಲ್ಲೂ, ಹೀಗಾಗಬಹುದು. ಅನೇಕ ರಾಜ್ಯಗಳ ಆರ್ಥಿಕತೆಯ ಅತಿದೊಡ್ಡ ಭಾಗವು ಪ್ರವಾಸೋದ್ಯಮವಾಗಿ ಬದಲಾಗಬಹುದು. ನಾವು ಅನುಸರಿಸುತ್ತಿರುವ ನೀತಿಗಳಿಂದಾಗಿ, ಭಾರತವು ಬಹಳ ದೊಡ್ಡ ಪ್ರವಾಸಿ ತಾಣವಾಗುವ ದಿನ ದೂರವಿಲ್ಲ.

ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಡಿಜಿಟಲ್ ಇಂಡಿಯಾ ಅಥವಾ ʻಫಿನ್‌ಟೆಕ್‌ʼ ಬಗ್ಗೆ ಮಾತನಾಡಿದಾಗ ಜನರು ನಮ್ಮನ್ನು ಗೇಲಿ ಮಾಡುತ್ತಿದ್ದರು. ಅದನ್ನು ಯಾರೂ ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಜನರಿಗೆ ಅಸಂಬದ್ಧವಾಗಿ ತೋರಿತು ಮತ್ತು ನಾನು 'ಕೆಲಸವಿಲ್ಲದೆ' ಮಾತನಾಡುತ್ತಿದ್ದೇನೆ ಎಂದು ಅವರು ಭಾವಿಸಿದರು. ಆದಾಗ್ಯೂ, ಗೌರವಾನ್ವಿತ ಸಭಾಧ್ಯಕ್ಷರೇ, ಮುಂಬರುವ ಐದು ವರ್ಷಗಳಲ್ಲಿ, ಭಾರತವು ಡಿಜಿಟಲ್ ಆರ್ಥಿಕತೆಯ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಭಾರತವು ಹೊಸ ಶಕ್ತಿಯಾಗಲಿದೆ. ಇಂದು, ಡಿಜಿಟಲ್ ವ್ಯವಸ್ಥೆಗಳು ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿವೆ. ಯಾವುದೇ ದೇಶವೊಂದು ಕೃತಕ ಬುದ್ಧಿಮತ್ತೆಯನ್ನು (ಎಐ) ಅತಿಹೆಚ್ಚು ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೆಂದರೆ, ಅದು ಭಾರತ ಎಂದು ಜಗತ್ತು ನಂಬುತ್ತದೆ. ನನ್ನ ದೇಶವು ಇತ್ತೀಚಿನ ತಂತ್ರಜ್ಞಾನವನ್ನು ಅದರ ಪೂರ್ಣ ಸಾಮರ್ಥ್ಯದೊಂದಿಗೆ ಬಳಸಿಕೊಳ್ಳುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಬಾಹ್ಯಾಕಾಶ ಜಗತ್ತಿನಲ್ಲಿ ನಮ್ಮ ದೇಶದ ಹೆಸರು ಪ್ರಕಾಶಿಸುತ್ತಿದೆ. ನಮ್ಮ ವಿಜ್ಞಾನಿಗಳ ಸಾಧನೆಗಳು ಸ್ಪಷ್ಟವಾಗುತ್ತಿವೆ. ಮುಂಬರುವ ಐದು ವರ್ಷಗಳ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ, ನಾನು ಅದನ್ನು ಇಂದು ಪದಗಳಲ್ಲಿ ವ್ಯಕ್ತಪಡಿಸಲು ಬಯಸುವುದಿಲ್ಲ. ಬಾಹ್ಯಾಕಾಶ ಅನ್ವೇಷಣೆಯ ವಿಚಾರದಲ್ಲಿ ಭಾರತವನ್ನು ಮುನ್ನಡೆಸುವ ನಮ್ಮ ನಮ್ಮ ವಿಜ್ಞಾನಿಗಳು ಜಗತ್ತನ್ನೇ ಬೆರಗುಗೊಳಿಸುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಗೌರವಾನ್ವಿತ ಸಭಾಧ್ಯಕ್ಷರೇ,

ತಳಮಟ್ಟದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ನಮ್ಮ 10 ಕೋಟಿ ತಾಯಂದಿರು ಮತ್ತು ಸಹೋದರಿಯರು ಸ್ವಸಹಾಯ ಗುಂಪುಗಳನ್ನು ಹಾಗೂ ನಮ್ಮ ಮೂರು ಕೋಟಿ 'ಲಕ್ಷಾಧಿಪತಿ ದೀದಿ'ಗಳ ಪಡೆಯನ್ನು ಸೇರುತ್ತಿದ್ದಾರೆ! ಅವರು ನಮ್ಮ ಹೆಣ್ಣುಮಕ್ಕಳ ಶ್ರೇಷ್ಠತೆಯ ಕಥೆಯನ್ನು ತಮ್ಮದೇ ಆದ ರೀತಿಯಲ್ಲಿ ಬರೆಯುತ್ತಿದ್ದಾರೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಮುಂದಿನ ಐದು ವರ್ಷಗಳಲ್ಲಿ, ಸ್ಪಷ್ಟವಾದ ಪ್ರಗತಿಯನ್ನು ಸಾಧಿಸಬಲ್ಲ ಅನೇಕ ವೈವಿಧ್ಯಮಯ ಕ್ಷೇತ್ರಗಳನ್ನು ನಾನು ಕಾಣಬಲ್ಲದೆ, ಆ ಕ್ಷೇತ್ರಗಳು ಪ್ರಸ್ತುತ ಭಾರತದಲ್ಲಿ ಕೇಳರಿಯದ ಕ್ಷೇತ್ರಗಳು. ಹಿಂದೆ ಸುವರ್ಣ ಯುಗವಿತ್ತು, ಮತ್ತು ಮುಂದಿನ ಐದು ವರ್ಷಗಳಲ್ಲಿ ನಾವು ಬಲವಾದ ಅಡಿಪಾಯವನ್ನು ಸ್ಥಾಪಿಸುವ ದಿನವನ್ನು ನಾನು ಕಲ್ಪಿಸಿಕೊಳ್ಳುತ್ತೇನೆ ಮತ್ತು ನಾವು 2047 ಅನ್ನು ತಲುಪುವ ಹೊತ್ತಿಗೆ, ಈ ದೇಶವು ಆ ಸುವರ್ಣ ಯುಗವನ್ನು ಪುನರುಜ್ಜೀವನಗೊಳಿಸುತ್ತದೆ. ಈ ನಂಬಿಕೆಯೊಂದಿಗೆ ಹೇಳಬಯಸುತ್ತೇನೆ, ಗೌರವಾನ್ವಿತ ಮಾನ್ಯ ಸಭಾಧ್ಯಕ್ಷರೇ, 'ವಿಕಸಿತ ಭಾರತ' ಕೇವಲ ಪದಗಳ ಬಡಬಡಿಕೆಯಲ್ಲ. ಇದು ನಮ್ಮ ಬದ್ಧತೆ, ಮತ್ತು ಇದಕ್ಕಾಗಿ ನಾವು ಸಮರ್ಪಿತರಾಗಿದ್ದೇವೆ. ನಮ್ಮ ಪ್ರತಿ ಉಸಿರು ಆ ಕೆಲಸಕ್ಕೆ ಬದ್ಧವಾಗಿದೆ, ನಮ್ಮ ಪ್ರತಿ ಕ್ಷಣವೂ ಆ ಕೆಲಸಕ್ಕೆ ಬದ್ಧವಾಗಿದೆ ಮತ್ತು ನಮ್ಮ ಪ್ರತಿಯೊಂದು ಆಲೋಚನೆಯೂ ಆ ಕೆಲಸಕ್ಕೆ ಸಮರ್ಪಿತವಾಗಿದೆ. ಅದೇ ಭಾವನೆಯೊಂದಿಗೆ, ನಾವು ಮುಂದೆ ಸಾಗುತ್ತಿದ್ದೇವೆ, ಮುಂದುವರಿಯುತ್ತೇವೆ ಮತ್ತು ದೇಶವು ಮುಂದುವರಿಯುತ್ತಲೇ ಇರುತ್ತದೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಮುಂಬರುವ ಶತಮಾನಗಳು ಇತಿಹಾಸದಲ್ಲಿ ಈ ಸುವರ್ಣ ಯುಗವನ್ನು ಗುರುತಿಸುತ್ತವೆ. ಈ ನಂಬಿಕೆ ನನ್ನೊಳಗೆ ಪ್ರತಿಧ್ವನಿಸುತ್ತದೆ. ಏಕೆಂದರೆ ನಾನು ದೇಶದ ಜನರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಕಳೆದ 10 ವರ್ಷಗಳಲ್ಲಿ ದೇಶವು ಬದಲಾವಣೆಯ ಅನುಭವಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಂಡುಬರುವ ಬದಲಾವಣೆಯ ವೇಗವು ಜೀವನದ ಪ್ರತಿಯೊಂದು ಅಂಶದಲ್ಲೂ ಹೊಸ ಎತ್ತರವನ್ನು, ಹೊಸ ಸಾಮರ್ಥ್ಯಗಳನ್ನು ತರುತ್ತದೆ. ಪ್ರತಿಯೊಂದು ಸಂಕಲ್ಪವನ್ನೂ ಸಾಧಿಸುವುದು ನಮ್ಮ ಕಾರ್ಯನೀತಿಯ ಭಾಗವಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನೀವೆಲ್ಲರೂ ಈ ಸದನದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೀರಿ, ಮತ್ತು ಈ ಸದನದ ಪಾವಿತ್ರತೆಯ ನಡುವೆ ರಾಷ್ಟ್ರದ ಮುಂದೆ ಸತ್ಯವನ್ನು ಮಾತನಾಡುವ ಅವಕಾಶ ನನಗೆ ಸಿಕ್ಕಿದೆ. ʻವಾರಂಟಿʼ ಮುಗಿದವರ ಮಾತನ್ನು ರಾಷ್ಟ್ರವು ಕೇಳಲು ಸಾಧ್ಯವಿಲ್ಲ ಎಂದು ನಾನು ನಂಬುತ್ತೇನೆ. ಯಾರ ಭರವಸೆಯ ಶಕ್ತಿಯನ್ನು ಈಗಾಗಲೇ ನೋಡಲಾಗಿದೆಯೋ ಅವರ ಆಲೋಚನೆಗಳನ್ನು ನಂಬಿ, ರಾಷ್ಟ್ರವು ಮುಂದೆ ಸಾಗುತ್ತದೆ.

ನಾನು ಮತ್ತೊಮ್ಮೆ ಗೌರವಾನ್ವಿತ ಅಧ್ಯಕ್ಷರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅವರ ಭಾಷಣಕ್ಕಾಗಿ ನನ್ನ ಗೌರವಪೂರ್ವಕ ಶುಭಾಶಯಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರೊಂದಿಗೆ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ. 

ಅನಂತ ಧನ್ಯವಾದಗಳು.
 

****** 
ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.
***



(Release ID: 2005013) Visitor Counter : 40