ಸಂಪುಟ

​​​​​​​ಪಿಡಿಎಸ್ ಅಡಿಯಲ್ಲಿ ಎಎವೈ ಕುಟುಂಬಗಳಿಗೆ ಸಕ್ಕರೆ ಸಬ್ಸಿಡಿ (ಸಹಾಯಧನ)  ಯೋಜನೆಗೆ ಸಂಪುಟದ ಅನುಮೋದನೆ

Posted On: 01 FEB 2024 11:34AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಮೂಲಕ ವಿತರಿಸಲಾಗುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕುಟುಂಬಗಳಿಗೆ ಸಕ್ಕರೆ ಸಬ್ಸಿಡಿ (ಸಹಾಯಧನ)  ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ಅಂದರೆ 2026ರ ಮಾರ್ಚ್ 31ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.

ದೇಶದ ನಾಗರಿಕರ ಯೋಗಕ್ಷೇಮಕ್ಕೆ ಕೇಂದ್ರ ಸರ್ಕಾರದ ಅಚಲ ಬದ್ಧತೆಯನ್ನು ಸಾರುವ  ಮತ್ತು ದೇಶದ ಕಡು ಬಡವರ ಅನ್ನದ ತಟ್ಟೆಯ ಸಿಹಿಯನ್ನು ಖಚಿತಪಡಿಸುವ ಈ ಯೋಜನೆಯು ಕಡು ಬಡವರಿಗೆ ಸಕ್ಕರೆಯ ಲಭ್ಯತೆಯನ್ನು ಸುಗಮಗೊಳಿಸುತ್ತದೆ ಮತ್ತು ಅವರ ಆರೋಗ್ಯ ಸುಧಾರಿಸಲು ಅವರ ಆಹಾರದಲ್ಲಿ ಶಕ್ತಿಯನ್ನು ತುಂಬುತ್ತದೆ. ಈ ಯೋಜನೆಯಡಿ, ಭಾಗವಹಿಸುವ ರಾಜ್ಯಗಳ ಎಎವೈ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಪ್ರತಿ ಕೆ.ಜಿ. ಸಕ್ಕರೆಗೆ ರೂ.18.50 ಸಹಾಯಧನವನ್ನು ನೀಡುತ್ತದೆ. ಈ ಅನುಮೋದನೆಯಿಂದಾಗಿ 15ನೇ ಹಣಕಾಸು ಆಯೋಗದ (2020-21 ರಿಂದ 2025-26) ಅವಧಿಯಲ್ಲಿ 1850 ಕೋಟಿ ರೂ.ಗಳಿಗೂ ಹೆಚ್ಚಿನ ಪ್ರಯೋಜನಗಳು  ವಿಸ್ತರಿಸಲ್ಪಡುವ  ನಿರೀಕ್ಷೆಯಿದೆ. ಈ ಯೋಜನೆಯು ದೇಶದ ಸುಮಾರು 1.89 ಕೋಟಿ ಎಎವೈ ಕುಟುಂಬಗಳಿಗೆ ಲಾಭವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತ ಸರ್ಕಾರ ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ಪಿಎಂ-ಜಿಕೆಎವೈ ಯನ್ನು ಮೀರಿ  'ಭಾರತ್ ಅಟ್ಟಾ', 'ಭಾರತ್ ದಾಲ್' ಮತ್ತು ಟೊಮೆಟೊ ಹಾಗು ಈರುಳ್ಳಿಯನ್ನು ಕೈಗೆಟುಕುವ ಮತ್ತು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುವುದು ನಾಗರಿಕರ ತಟ್ಟೆಯಲ್ಲಿ ಸಾಕಷ್ಟು ಆಹಾರವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳಾಗಿವೆ. ಇಲ್ಲಿಯವರೆಗೆ, ಸುಮಾರು 3 ಲಕ್ಷ ಟನ್ ಭಾರತ್ ದಾಲ್  (ಕಡಲೆ ಬೇಳೆ) ಮತ್ತು ಸುಮಾರು 2.4 ಲಕ್ಷ ಟನ್ ಭಾರತ್ ಅಟ್ಟಾ ಮಾರಾಟವಾಗಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ಪ್ರಯೋಜನವಾಗಿದೆ. ಹೀಗಾಗಿ, ಸಬ್ಸಿಡಿ ದರದಲ್ಲಿ  ಬೇಳೆ, ಅಟ್ಟಾ ಮತ್ತು ಸಕ್ಕರೆಯ ಲಭ್ಯತೆಯು 'ಎಲ್ಲರಿಗೂ ಆಹಾರ, ಎಲ್ಲರಿಗೂ ಪೌಷ್ಟಿಕತೆ' ಎಂಬ ಮೋದಿ ಅವರ ಗ್ಯಾರಂಟಿಯ ಘೋಷಣೆಯನ್ನು ಅನುಷ್ಠಾನಿಸಿ ಭಾರತದ ಸಾಮಾನ್ಯ ನಾಗರಿಕರಿಗೆ ಆಹಾರ ಲಭ್ಯತೆಯನ್ನು  ಖಾತ್ರಿಪಡಿಸಿದೆ

ಈ ಅನುಮೋದನೆಯೊಂದಿಗೆ, ಸರಕಾರವು ಪಿಡಿಎಸ್ ಮೂಲಕ ಎಎವೈ ಕುಟುಂಬಗಳಿಗೆ ತಿಂಗಳಿಗೆ ಒಂದು ಕೆಜಿಯಂತೆ ಸಕ್ಕರೆ ವಿತರಿಸಲು ಭಾಗವಹಿಸುವ ರಾಜ್ಯಗಳಿಗೆ  ಸಬ್ಸಿಡಿ ನೀಡುವುದನ್ನು ಮುಂದುವರಿಸುತ್ತದೆ. ಸಕ್ಕರೆಯನ್ನು ಸಂಗ್ರಹಿಸುವ ಮತ್ತು ವಿತರಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ.

*****



(Release ID: 2001363) Visitor Counter : 92