ಪ್ರಧಾನ ಮಂತ್ರಿಯವರ ಕಛೇರಿ

​​​​​​​ಲಕ್ಷದ್ವೀಪದ ಕವರಟ್ಟಿಯಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವೇಳೆ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 03 JAN 2024 1:54PM by PIB Bengaluru

ಲಕ್ಷದ್ವೀಪದ ಆಡಳಿತಾಧಿಕಾರಿಯವರಿಗೆ, ಸ್ಥಳೀಯ ಸಂಸತ್ ಸದಸ್ಯ ಶ್ರೀ ಪ್ರಭು ಪಟೇಲ್ ಅವರಿಗೆ ಮತ್ತು ಲಕ್ಷದ್ವೀಪದಲ್ಲಿರುವ ನನ್ನ ಎಲ್ಲ ಕುಟುಂಬ ಸದಸ್ಯರಿಗೆ ಶುಭಾಶಯಗಳು!

ನಮಸ್ಕಾರ!

ಎಲ್ಲವರುಕುಮ್‌ ಸುಖಂ ಆನು ಎನ್ನು ವಿಶ್ವಾಸಿಕುನ್ನು!

ಲಕ್ಷದ್ವೀಪದಲ್ಲಿ ಮುಂಜಾನೆಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಲಕ್ಷದ್ವೀಪದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲಾಗದು. ಈ ಬಾರಿ ʻಅಗತ್ತಿʼ, ʻಬಂಗಾರಂʼ ಮತ್ತು ʻಕವರಟ್ಟಿʼಯಲ್ಲಿ ನನ್ನ ಕುಟುಂಬದ ಎಲ್ಲ ಸದಸ್ಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಲಕ್ಷದ್ವೀಪದ ಭೌಗೋಳಿಕ ಪ್ರದೇಶವು ಚಿಕ್ಕದಾಗಿದ್ದರೂ, ಲಕ್ಷದ್ವೀಪದ ಜನರ ಹೃದಯವು ಸಮುದ್ರದಷ್ಟು ವಿಶಾಲವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ.

ನನ್ನ ಕುಟುಂಬದ ಬಾಂಧವರೇ,

ಸ್ವಾತಂತ್ರ್ಯದ ನಂತರದ ಹಲವು ದಶಕಗಳವರೆಗೆ, ಕೇಂದ್ರದಲ್ಲಿನ ಸರ್ಕಾರಗಳು ತಮ್ಮ ರಾಜಕೀಯ ಪಕ್ಷಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದ್ದವು. ದೂರದಲ್ಲಿರುವ, ಗಡಿಯಲ್ಲಿ ಅಥವಾ ಸಮುದ್ರಗಳ ನಡುವೆ ಇರುವ ರಾಜ್ಯಗಳತ್ತ ಯಾವುದೇ ಗಮನ ಹರಿಸಲಿಲ್ಲ. ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಗಡಿಯಲ್ಲಿರುವ ಪ್ರದೇಶಗಳನ್ನು, ಸಮುದ್ರದ ಅಂಚಿನಲ್ಲಿರುವ ಪ್ರದೇಶಗಳನ್ನು ಆದ್ಯತೆಯನ್ನಾಗಿ ಪರಿಗಣಿಸಿದೆ. ಭಾರತದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಬ್ಬ ನಾಗರಿಕರ ಜೀವನವನ್ನು ಸುಲಭಗೊಳಿಸುವುದು, ಅವರಿಗೆ ಸೌಲಭ್ಯಗಳನ್ನು ಖಾತರಿಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇಂದು, ಸುಮಾರು 1200 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಇಲ್ಲಿ ನೆರವೇರಿದೆ. ಈ ಯೋಜನೆಗಳು ಇಂಟರ್ನೆಟ್, ವಿದ್ಯುತ್, ನೀರು, ಆರೋಗ್ಯ ಮತ್ತು ಮಕ್ಕಳ ಆರೈಕೆಗೆ ಸಂಬಂಧಿಸಿದವಾಗಿವೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು.

ನನ್ನ ಕುಟುಂಬದ ಬಾಂಧವರೇ,

ಕಳೆದ 10 ವರ್ಷಗಳಲ್ಲಿ, ಲಕ್ಷದ್ವೀಪದ ಜನರ ಜೀವನವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ʻಪಿಎಂ ಗ್ರಾಮೀಣ ಆವಾಸ್ ಯೋಜನೆʼ ವ್ಯಾಪ್ತಿಗೆ ಶೇ. 100ರಷ್ಟು ಫಲಾನುಭವಿಗಳನ್ನು ತರಲಾಗಿದೆ. ಉಚಿತ ಪಡಿತರವು ಪ್ರತಿ ಫಲಾನುಭವಿಯನ್ನು ತಲುಪುತ್ತಿದೆ ಮತ್ತು ರೈತರ ಕ್ರೆಡಿಟ್ ಕಾರ್ಡ್‌ಗಳು ಮತ್ತು ಆಯುಷ್ಮಾನ್ ಕಾರ್ಡ್‌ಗಳನ್ನು ಸಹ ಒದಗಿಸಲಾಗಿದೆ. ʻಆಯುಷ್ಮಾನ್ ಆರೋಗ್ಯ ಕೇಂದ್ರʼ ಮತ್ತು ʻಆರೋಗ್ಯ ಮತ್ತು ಕ್ಷೇಮ ಕೇಂದ್ರʼಗಳನ್ನು ಸಹ ಇಲ್ಲಿ ತೆರೆಯಲಾಗಿದೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸಿದೆ. ಕೇಂದ್ರ ಸರ್ಕಾರವು ʻನೇರ ಲಾಭ ವರ್ಗಾವಣೆʼ(ಡಿಬಿಟಿ) ಮೂಲಕ ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸುತ್ತಿದೆ. ಇದು ಪಾರದರ್ಶಕತೆಯನ್ನು ತಂದಿದೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಿದೆ. ಲಕ್ಷದ್ವೀಪದ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಯಾರನ್ನೂ ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ನನ್ನ ಕುಟುಂಬದ ಬಾಂಧವರೇ,

1000 ದಿನಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ನಿಮ್ಮನ್ನು ತಲುಪುತ್ತದೆ ಎಂದು 2020ರಲ್ಲಿ ನಾನು ಭರವಸೆ ನೀಡಿದ್ದೆ. ಇಂದು ʻಕೊಚ್ಚಿ-ಲಕ್ಷದ್ವೀಪ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಯೋಜನೆʼ ಉದ್ಘಾಟನೆಗೊಂಡಿದೆ. ಈಗ, ಲಕ್ಷದ್ವೀಪವು 100 ಪಟ್ಟು ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುತ್ತದೆ. ಇದು ಸರ್ಕಾರಿ ಸೇವೆಗಳು, ಆರೋಗ್ಯ, ಶಿಕ್ಷಣ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಇತರ ಅನೇಕ ಸೌಲಭ್ಯಗಳನ್ನು ಸುಧಾರಿಸುತ್ತದೆ. ಲಕ್ಷದ್ವೀಪದಲ್ಲಿ ಸರಕು-ಸಾಗಣೆ ಸೇವೆಗಳ ಕೇಂದ್ರದ ಸಾಧ್ಯತೆಗಳು ಸಹ ಉತ್ತೇಜನವನ್ನು ಪಡೆಯುತ್ತವೆ. ಲಕ್ಷದ್ವೀಪದ ಪ್ರತಿಯೊಂದು ಮನೆಗೂ ನಲ್ಲಿ ನೀರನ್ನು ಒದಗಿಸುವ ಕೆಲಸವೂ ವೇಗವಾಗಿ ಪ್ರಗತಿಯಲ್ಲಿದೆ. ಉಪ್ಪುನೀರನ್ನು ಶುದ್ಧ ನೀರಾಗಿ ಪರಿವರ್ತಿಸುವ ಹೊಸ ಸ್ಥಾವರವು ಈ ಅಭಿಯಾನವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ. ಈ ಘಟಕವು ಪ್ರತಿದಿನ 1.5 ಲಕ್ಷ ಲೀಟರ್ ಕುಡಿಯುವ ನೀರನ್ನು ಒದಗಿಸುತ್ತದೆ. ಇದಕ್ಕಾಗಿ ಈಗಾಗಲೇ ಕವರಟ್ಟಿ, ಅಗತ್ತಿ ಮತ್ತು ಮಿನಿಕೋಯ್ ದ್ವೀಪಗಳಲ್ಲಿ ಪ್ರಾಯೋಗಿಕ ಘಟಕಗಳನ್ನು ಸ್ಥಾಪಿಸಲಾಗಿದೆ.

ನನ್ನ ಕುಟುಂಬದ ಬಾಂಧವರೇ,

ಸ್ನೇಹಿತರೇ, ಲಕ್ಷದ್ವೀಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲಿ ಮಾಣಿಕ್‌ಫಾನ್ ಅವರನ್ನು ಭೇಟಿ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಅವರ ಸಂಶೋಧನೆ ಮತ್ತು ಆವಿಷ್ಕಾರಗಳು ಇಡೀ ಪ್ರದೇಶದ ಸಮೃದ್ಧಿಯನ್ನು ಹೆಚ್ಚಿಸಿವೆ. ಅಲಿ ಮಾಣಿಕ್‌ಫಾನ್ ಅವರಿಗೆ 2021ರಲ್ಲಿ ʻಪದ್ಮಶ್ರೀʼ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮ ಸರ್ಕಾರಕ್ಕೆ ಬಹಳ ಸಂತೋಷದ ವಿಷಯವಾಗಿದೆ. ಭಾರತ ಸರ್ಕಾರವು ಯುವಕರಿಗೆ ನಾವೀನ್ಯತೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಇಂದಿಗೂ, ಇಲ್ಲಿನ ಯುವಕರಿಗೆ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗಿದೆ ಮತ್ತು ಹುಡುಗಿಯರಿಗೆ ಬೈಸಿಕಲ್‌ ನೀಡಲಾಗಿದೆ. ಹಲವು ವರ್ಷಗಳಿಂದ, ಲಕ್ಷದ್ವೀಪದಲ್ಲಿ ಯಾವುದೇ ಉನ್ನತ ಶಿಕ್ಷಣ ಸಂಸ್ಥೆ ಇರಲಿಲ್ಲ, ಇದರಿಂದಾಗಿ ಯುವಕರು ಶಿಕ್ಷಣಕ್ಕಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ನಮ್ಮ ಸರ್ಕಾರ ಈಗ ಲಕ್ಷದ್ವೀಪದಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೊಸ ಸಂಸ್ಥೆಗಳನ್ನು ತೆರೆದಿದೆ. ʻಆಂಡ್ರೊಟ್ʼ ಮತ್ತು ʻಕದ್ಮತ್ʼ ದ್ವೀಪಗಳಲ್ಲಿ ಕಲೆ ಮತ್ತು ವಿಜ್ಞಾನಕ್ಕಾಗಿ ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಮತ್ತು ಮಿನಿಕೋಯ್‌ನಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ತೆರೆಯಲಾಗಿದೆ, ಇದು ಇಲ್ಲಿನ ವಿದ್ಯಾರ್ಥಿಗಳಿಗೆ ಅಪಾರ ಪ್ರಯೋಜನವನ್ನು ನೀಡಿದೆ.

ನನ್ನ ಕುಟುಂಬದ ಬಾಂಧವರೇ,

ಸ್ನೇಹಿತರೇ, ಹಜ್ ಯಾತ್ರಿಕರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಕೈಗೊಂಡ ಪ್ರಯತ್ನಗಳು ಲಕ್ಷದ್ವೀಪದ ಜನರಿಗೂ ಪ್ರಯೋಜನಕಾರಿಯಾಗಿದೆ. ಹಜ್ ಯಾತ್ರಿಕರಿಗೆ ವೀಸಾ ನಿಯಮಗಳನ್ನು ಸರಳೀಕರಿಸಲಾಗಿದೆ ಮತ್ತು ಹಜ್‌ಗೆ ಸಂಬಂಧಿಸಿದ ಹೆಚ್ಚಿನ ವಹಿವಾಟುಗಳು ಈಗ ಡಿಜಿಟಲ್ ಆಗಿವೆ. ಮಹಿಳೆಯರಿಗೆ ಈಗ ʻಮೆಹ್ರಾಮ್ʼ ಇಲ್ಲದೆ ಹಜ್‌ಗೆ ಹೋಗಲು ಅವಕಾಶವಿದೆ. ಈ ಪ್ರಯತ್ನಗಳಿಂದಾಗಿ, ಉಮ್ರಾಗೆ ಹೋಗುವ ಭಾರತೀಯ ಯಾತ್ರಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.

ನನ್ನ ಕುಟುಂಬದ ಬಾಂಧವರೇ,

ಇಂದು, ಸಮುದ್ರಾಹಾರಕ್ಕೆ ಸಂಬಂಧಿಸಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ಪಾಲನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರಿಂದ ಲಕ್ಷದ್ವೀಪಕ್ಕೂ ಲಾಭವಾಗುತ್ತಿದೆ. ಇಲ್ಲಿಂದ ʻಟ್ಯೂನಾʼ ಮೀನುಗಳನ್ನು ಈಗ ಜಪಾನ್‌ಗೆ ಸಾಗಿಸಲಾಗುತ್ತಿದೆ. ಇಲ್ಲಿಂದ ಉತ್ತಮ ಗುಣಮಟ್ಟದ ಮೀನುಗಳನ್ನು ರಫ್ತು ಮಾಡಲು ನಾನಾ ಸಾಧ್ಯತೆಗಳಿವೆ, ಇದು ನಮ್ಮ ಮೀನುಗಾರ ಸಮುದಾಯಗಳ ಜೀವನವನ್ನು ಪರಿವರ್ತಿಸುತ್ತದೆ. ಸಮುದ್ರದ ಜೊಂಡಿನ ಕೃಷಿಯ ಸಾಮರ್ಥ್ಯವನ್ನು ಸಹ ಇಲ್ಲಿ ಅನ್ವೇಷಿಸಲಾಗುತ್ತಿದೆ. ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸುವಾಗ, ಅದರ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಸಂಪೂರ್ಣ ಗಮನ ಹರಿಸುತ್ತಿದೆ. ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯೊಂದಿಗೆ ನಿರ್ಮಿಸಲಾದ ಸೌರ ವಿದ್ಯುತ್ ಸ್ಥಾವರವು ಈ ಪ್ರಯತ್ನದ ಭಾಗವಾಗಿದೆ. ಇದು ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾಗಿದೆ. ಇದು ವಿದ್ಯುತ್ ಉತ್ಪಾದನೆಗಾಗಿ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಮಾಲಿನ್ಯ ಕಡಿಮೆಯಾಗುವುದಲ್ಲದೆ, ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮವೂ ಕನಿಷ್ಠ ಮಟ್ಟದಲ್ಲಿರುತ್ತದೆ.

ನನ್ನ ಕುಟುಂಬದ ಬಾಂಧವರೇ,

ʻಸ್ವಾತಂತ್ರ್ಯದ ಅಮೃತ ಕಾಲ'ದ ಈ ಸಮಯದಲ್ಲಿ 'ವಿಕಸಿತ ಭಾರತ' ನಿರ್ಮಾಣದಲ್ಲಿ ಲಕ್ಷದ್ವೀಪವು ಮಹತ್ವದ ಪಾತ್ರ ವಹಿಸಿದೆ. ಲಕ್ಷದ್ವೀಪವನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಹೆಗ್ಗುರುತಾಗಿ ಇರಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಇಲ್ಲಿ ನಡೆದ ʻಜಿ-20ʼ ಸಭೆಯು ಲಕ್ಷದ್ವೀಪಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ತಂದಜುಕೊಟ್ಟಿದೆ. ʻಸ್ವದೇಶ ದರ್ಶನʼ ಯೋಜನೆಯಡಿ, ಲಕ್ಷದ್ವೀಪಕ್ಕೆ ʻಪ್ರವಾಸಿತಾಣ-ನಿರ್ದಿಷ್ಟ ಮಾಸ್ಟರ್ ಪ್ಲಾನ್ʼ ರೂಪಿಸಲಾಗುತ್ತಿದೆ. ಈಗ, ಲಕ್ಷದ್ವೀಪವು ಎರಡು ʻಬ್ಲ್ಯೂ ಫ್ಲಾಗ್‌ʼ ಕಡಲತೀರಗಳನ್ನು ಹೊಂದಿದೆ. ದೇಶದ ಮೊದಲ ʻವಾಟರ್ ವಿಲ್ಲಾʼ ಯೋಜನೆಯನ್ನು ಕದ್ಮತ್‌ ಮತ್ತು ಸುಹೇಲಿ ದ್ವೀಪಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನನಗೆ ಮಾಹಿತಿ ದೊರೆತಿದೆ.

ಲಕ್ಷದ್ವೀಪವು ʻಕ್ರೂಸ್ʼ ಪ್ರವಾಸೋದ್ಯಮದ ಪ್ರಮುಖ ತಾಣವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ವಿದೇಶ ಪ್ರವಾಸಗಳನ್ನು ಯೋಜಿಸುವ ಮೊದಲು ಭಾರತದಲ್ಲಿ ಕನಿಷ್ಠ 15 ಸ್ಥಳಗಳಿಗೆ ಭೇಟಿ ನೀಡುವಂತೆ ನಾನು ದೇಶದ ಜನರಿಗೆ ಮನವಿ ಮಾಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ವಿವಿಧ ದೇಶಗಳಲ್ಲಿ ದ್ವೀಪಗಳನ್ನು ಅನ್ವೇಷಿಸಲು ಬಯಸುವವರು ಮತ್ತು ವಿವಿಧ ರಾಷ್ಟ್ರಗಳ ಸಮುದ್ರಗಳಿಂದ ಆಕರ್ಷಿತರಾಗಿರುವವರಿಗೆ, ಮೊದಲು ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ. ಇಲ್ಲಿನ ಸುಂದರವಾದ ಕಡಲತೀರಗಳನ್ನು ನೋಡಿದವರಾರದರೂ ಸರಿ ಇತರ ದೇಶಗಳಿಗೆ ಭೇಟಿ ನೀಡುವುದನ್ನು ಮರೆತುಬಿಡುತ್ತಾರೆ ಎಂದು ನಾನು ನಂಬುತ್ತೇನೆ.

ನನ್ನ ಕುಟುಂಬದ ಬಾಂಧವರೇ,

ಜೀವನವನ್ನು ಸುಲಭಗೊಳಿಸಲು, ಪ್ರಯಾಣವನ್ನು ಸುಲಭಗೊಳಿಸಲು ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ನಾನು ನಿಮ್ಮೆಲ್ಲರಿಗೂ ಭರವಸೆ ನೀಡುತ್ತೇನೆ. 'ವಿಕಸಿತ ಭಾರತ' ಅಭಿವೃದ್ಧಿಯಲ್ಲಿ ಲಕ್ಷದ್ವೀಪವು ಮಹತ್ವದ ಪಾತ್ರ ವಹಿಸಲಿದೆ. ಈ ನಂಬಿಕೆಯೊಂದಿಗೆ, ಇಲ್ಲಿನ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು!

ಎಲ್ಲರಿಗೂ ತುಂಬಾ ಧನ್ಯವಾದಗಳು!

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*****

 

 

 



(Release ID: 1992973) Visitor Counter : 86