ಪ್ರಧಾನ ಮಂತ್ರಿಯವರ ಕಛೇರಿ

ಡೆಹ್ರಾಡೂನ್‌ನಲ್ಲಿ ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆ-2023  ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 08 DEC 2023 3:34PM by PIB Bengaluru

ಉತ್ತರಾಖಂಡದ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಜಿ, ಜನಪ್ರಿಯ ಮತ್ತು ಯುವ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ಸರ್ಕಾರದ ಸಚಿವರು, ವಿವಿಧ ದೇಶಗಳ ಪ್ರತಿನಿಧಿಗಳು, ಉದ್ಯಮ ರಂಗದ ದಿಗ್ಗಜರು, ಜಾಗತಿಕ ಗಣ್ಯರು, ಮಹಿಳೆಯರು ಮತ್ತು ಮಹನೀಯರೆ!

ಉತ್ತರಾಖಂಡದ ದೈವ ಭೂಮಿಗೆ ಬರುವುದು ನನ್ನ ಹೃದಯಕ್ಕೆ ಸದಾ ಅಪಾರ ಸಂತೋಷ ತರುತ್ತದೆ. ಕೆಲವು ವರ್ಷಗಳ ಹಿಂದೆ, ನಾನು ಬಾಬಾ ಕೇದಾರನಾಥನ ದರ್ಶನಕ್ಕೆ ಹೊರಟಾಗ, 21ನೇ ಶತಮಾನದ 3ನೇ ದಶಕವು ಉತ್ತರಾಖಂಡದ ದಶಕ ಎಂದು ನಾನು ಸ್ವಯಂಪ್ರೇರಿತನಾಗಿ ಹೇಳಿದ್ದೆ. ನನ್ನ ಹೇಳಿಕೆಯು ನಿರಂತರ ಸತ್ಯವೆಂದು ಸಾಬೀತು ಆಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಿಮ್ಮೆಲ್ಲರಿಗೂ, ಉತ್ತರಾಖಂಡದ ಹೆಮ್ಮೆಯೊಂದಿಗೆ ಸಂಪರ್ಕ ಸಾಧಿಸಲು, ಅದರ ಅಭಿವೃದ್ಧಿಯ ಪಯಣದ ಭಾಗವಾಗಲು ಮಹತ್ವದ ಅವಕಾಶವಿದೆ. ಉತ್ತರ ಕಾಶಿಯ ಸುರಂಗದಿಂದ ನಮ್ಮ ವಲಸಿಗ ಸಹೋದರರನ್ನು ಸುರಕ್ಷಿತವಾಗಿ ರಕ್ಷಿಸಲು ಯಶಸ್ವಿ ಅಭಿಯಾನ ಮುನ್ನಡೆಸುತ್ತಿರುವ ರಾಜ್ಯ ಸರ್ಕಾರ ಸೇರಿದಂತೆ ಪ್ರತಿಯೊಬ್ಬರನ್ನು ನಾನು ಇಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೆ,

ಉತ್ತರಾಖಂಡದಲ್ಲಿ ನೀವು ದೈವತ್ವ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೆ ಅನುಭವಿಸುವ ರಾಜ್ಯವಾಗಿದೆ. ನಾನು ಅದನ್ನು ಹತ್ತಿರದಿಂದ ನೋಡಿದ್ದೇನೆ, ಬದುಕಿದ್ದೇನೆ ಮತ್ತು ಉತ್ತರಾಖಂಡದ ಭಾವನೆಗಳು ಮತ್ತು ಸಾಧ್ಯತೆಗಳನ್ನು ಅನುಭವಿಸಿದ್ದೇನೆ. ಉತ್ತರಾಖಂಡ ಕುರಿತು ನಾನು ಒಮ್ಮೆ ಬರೆದ ಕವಿತೆಯನ್ನು ಇದು ನೆನಪಿಸುತ್ತದೆ:

ಎಲ್ಲರ ಕೈಯಲ್ಲೂ ಗಂಗಾಜಲ ಇರುವಲ್ಲಿ,

ಪ್ರತಿ ಮನಸ್ಸು ಶುದ್ಧವಾಗಿರುವಲ್ಲಿ,

ಪ್ರತಿ ಹಳ್ಳಿಯಲ್ಲೂ ದೇಶಭಕ್ತಿ ಮೊಳಗುವಲ್ಲಿ,

ಪ್ರತಿ ಮಹಿಳೆಯರಲ್ಲಿ ನಿಜವಾದ ಶಕ್ತಿ ಇರುವಲ್ಲಿ,

ಆ ದೈವ ಭೂಮಿಯ ಆಶೀರ್ವಾದದಿಂದ ನಾನು ಮುಂದೆ ಸಾಗುತ್ತಿದ್ದೇನೆ!

ಈ ದೇವ ಭೂಮಿಯನ್ನು ಧ್ಯಾನಿಸುವಾಗ ನಾನು ಯಾವಾಗಲೂ ಧನ್ಯನಾಗುತ್ತೇನೆ.

ಇದು ನನ್ನ ಅದೃಷ್ಟ, ನನ್ನ ಅದೃಷ್ಟ, ನಾನು ನಿಮಗೆ ತಲೆಬಾಗುತ್ತೇನೆ.

ಸ್ನೇಹಿತರೆ,

ಅಪಾರ ಸಾಧ್ಯತೆಗಳಿರುವ ಈ ಪುಣ್ಯಭೂಮಿ ನಿಸ್ಸಂಶಯವಾಗಿ ನಿಮಗೆ ಹೂಡಿಕೆಯ ಹಲವು ಬಾಗಿಲುಗಳನ್ನು ತೆರೆಯಲಿದೆ. ಇಂದು ಭಾರತವು ಅಭಿವೃದ್ಧಿ ಮತ್ತು ಪರಂಪರೆ ಎರಡರ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದು, ಉತ್ತರಾಖಂಡ ಅದಕ್ಕೆ ಉಜ್ವಲ ಉದಾಹರಣೆಯಾಗಿ ನಿಂತಿದೆ.

ಸ್ನೇಹಿತರೆ,

ನೀವೆಲ್ಲರೂ ಉದ್ಯಮ ವ್ಯವಹಾರ ಜಗತ್ತಿನಲ್ಲಿ ಅನುಭವಿಗಳು. ಉದ್ಯಮ ವ್ಯಾಪಾರ ರಂಗದಲ್ಲಿ ಇರುವವರು ಸಾಮಾನ್ಯವಾಗಿ ತಮ್ಮ ಕೆಲಸದ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಬೆದರಿಕೆಗಳು(SWOT) ವಿಶ್ಲೇಷಣೆ ನಡೆಸುತ್ತಾರೆ. ಅವರು ತಮ್ಮ ಕಂಪನಿಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಸವಾಲುಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಆ ಮೌಲ್ಯಮಾಪನದ ಆಧಾರದ ಮೇಲೆ ತಮ್ಮ ಕಾರ್ಯತಂತ್ರ ರೂಪಿಸುತ್ತಾರೆ. ನಾವು ಇಂದು ಒಂದು ರಾಷ್ಟ್ರವಾಗಿ ಭಾರತಕ್ಕಾಗಿ ಇದೇ ರೀತಿಯ SWOT ವಿಶ್ಲೇಷಣೆ ನಡೆಸಿದರೆ, ನಾವು ಏನನ್ನು ಕಂಡುಕೊಳ್ಳಬಹುದು? ನಾವು ಆಕಾಂಕ್ಷೆಗಳು, ಭರವಸೆ, ಆತ್ಮವಿಶ್ವಾಸ, ನಾವೀನ್ಯತೆ ಮತ್ತು ಅವಕಾಶಗಳನ್ನು ಸುತ್ತಲೂ ನೋಡುತ್ತೇವೆ.

ಇಂದು, ನೀವು ದೇಶದಲ್ಲಿ ನೀತಿ-ಚಾಲಿತ ಆಡಳಿತವನ್ನು ವೀಕ್ಷಿಸುತ್ತಿದ್ದೀರಿ. ನಾಗರಿಕರಿಂದ ರಾಜಕೀಯ ಸ್ಥಿರತೆಗೆ ಬಲವಾದ ಮನವಿಯನ್ನು ನೀವು ನೋಡುತ್ತೀರಿ. ಮಹತ್ವಾಕಾಂಕ್ಷೆಯ ಭಾರತವು ಅಸ್ಥಿರತೆಯನ್ನು ಬಯಸುವುದಿಲ್ಲ, ಇದು ಸ್ಥಿರ ಸರ್ಕಾರವನ್ನು ಬಯಸುತ್ತದೆ. ಇದನ್ನು ನಾವು ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನೋಡಿದ್ದೇವೆ. ಉತ್ತರಾಖಂಡದ ಜನರು ಇದನ್ನು ಮೊದಲೇ ಪ್ರದರ್ಶಿಸಿದ್ದಾರೆ. ಸ್ಥಿರ ಮತ್ತು ಬಲಿಷ್ಠ ಸರ್ಕಾರಗಳಿಗೆ ಜನತೆ ಜನಾದೇಶ ನೀಡಿದ್ದಾರೆ. ಸರಕಾರದ ಸಾಧನೆ ಗುರುತಿಸಿ ಜನರು ಉತ್ತಮ ಆಡಳಿತಕ್ಕಾಗಿ ಮತ ಹಾಕಿದ್ದಾರೆ. ಇಂದು ಭಾರತ ಮತ್ತು ಭಾರತೀಯರನ್ನು ವಿಶ್ವವು ಭರವಸೆ ಮತ್ತು ಗೌರವದಿಂದ ನೋಡುತ್ತಿದೆ. ಇದನ್ನು ಉದ್ಯಮ ರಂಗದ ಜನರು ಸಹ ಒಪ್ಪಿಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಅದನ್ನು ಜವಾಬ್ದಾರಿಯಾಗಿ ಸ್ವೀಕರಿಸಿದ್ದಾನೆ. ಪ್ರತಿಯೊಬ್ಬ ಪ್ರಜೆಯೂ ‘ವಿಕ್ಷಿತ್ ಭಾರತ್’ ನಿರ್ಮಾಣವನ್ನು ತಮ್ಮ ಕರ್ತವ್ಯವೆಂದು ಭಾವಿಸುತ್ತಿದ್ದಾರೆ. ಈ ಆತ್ಮ ವಿಶ್ವಾಸವೇ ಕೋವಿಡ್ ಸಾಂಕ್ರಾಮಿಕ ಮತ್ತು ಯುದ್ಧಗಳ ಬಿಕ್ಕಟ್ಟುಗಳ ನಡುವೆಯೂ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೊರೊನಾ ಲಸಿಕೆಯಾಗಲಿ ಅಥವಾ ಆರ್ಥಿಕ ನೀತಿಯಾಗಲಿ ಭಾರತವು ತನ್ನ ನೀತಿಗಳು ಮತ್ತು ಸಾಮರ್ಥ್ಯಗಳನ್ನು ದೃಢವಾಗಿ ನಂಬಿರುವುದನ್ನು ನೀವು ನೋಡಿದ್ದೀರಿ. ಇದರ ಪರಿಣಾಮವಾಗಿ, ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು ತನ್ನದೇ ಆದ ಸ್ಥಾನದಲ್ಲಿ ಇಂದು ನಿಂತಿದೆ. ರಾಷ್ಟ್ರ ಮಟ್ಟದಲ್ಲಿ ಭಾರತದ ಶಕ್ತಿಯ ಲಾಭವನ್ನು ಉತ್ತರಾಖಂಡ ಸೇರಿದಂತೆ ಪ್ರತಿಯೊಂದು ರಾಜ್ಯವೂ ಪಡೆಯುತ್ತಿದೆ.

ಸ್ನೇಹಿತರೆ,

ಈ ಸನ್ನಿವೇಶಗಳ ದೃಷ್ಟಿಯಿಂದ, ಉತ್ತರಾಖಂಡವು ವಿಶೇಷವಾಗಿದೆ ಮತ್ತು ನೈಸರ್ಗಿಕವಾಗಿದೆ. ಏಕೆಂದರೆ ಅದು ಡಬಲ್ ಇಂಜಿನ್ ಸರ್ಕಾರವನ್ನು ಹೊಂದಿದೆ. ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳು ಉತ್ತರಾಖಂಡದ ಎಲ್ಲಾ ರಂಗಗಳಲ್ಲಿ ಗೋಚರಿಸುತ್ತಿವೆ. ರಾಜ್ಯ ಸರ್ಕಾರ ನೆಲಗಟ್ಟಿನ ವಾಸ್ತವಗಳನ್ನು ಅರ್ಥ ಮಾಡಿಕೊಂಡು ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ. ಜತೆಗೆ, ಇಲ್ಲಿನ ರಾಜ್ಯ ಸರ್ಕಾರವು ಭಾರತ ಸರ್ಕಾರದ ಯೋಜನೆಗಳೊಂದಿಗೆ ತನ್ನ ದೃಷ್ಟಿಯನ್ನು ಸಹ ಜೋಡಿಸುತ್ತಿದೆ. ಅವುಗಳನ್ನು ಸಮಾನ ವೇಗದಲ್ಲಿ ತಳ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂದು ಭಾರತ ಸರ್ಕಾರವು ಉತ್ತರಾಖಂಡದಲ್ಲಿ 2ನೇ ಶತಮಾನದ ಆಧುನಿಕ ಸಂಪರ್ಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ಪ್ರಯತ್ನದ ನಡುವೆ ರಾಜ್ಯ ಸರ್ಕಾರವೂ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಉತ್ತರಾಖಂಡದ ರಸ್ತೆಗಳಾಗಲಿ ಅಥವಾ ಚಾರ್ ಧಾಮ್ ಮಹಾಮಾರ್ಗ್ ಆಗಿರಲಿ, ಕೆಲಸವು ಅಭೂತಪೂರ್ವ ವೇಗದಲ್ಲಿ ಪ್ರಗತಿಯಲ್ಲಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಮೂಲಕ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಅಂತರವನ್ನು ಎರಡೂವರೆ ಗಂಟೆಗೆ ಕಡಿಮೆ ಮಾಡುವ ದಿನ ದೂರವಿಲ್ಲ. ಡೆಹ್ರಾಡೂನ್ ಮತ್ತು ಪಂತ್‌ನಗರದಲ್ಲಿ ವಿಮಾನ ನಿಲ್ದಾಣಗಳ ವಿಸ್ತರಣೆಯು ವಾಯು ಸಂಪರ್ಕವನ್ನು ಬಲಪಡಿಸುತ್ತದೆ. ರಾಜ್ಯ ಸರ್ಕಾರವು ರಾಜ್ಯದೊಳಗೆ ಹೆಲಿ-ಟ್ಯಾಕ್ಸಿ ಸೇವೆಗಳನ್ನು ವಿಸ್ತರಿಸುತ್ತಿದೆ. ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗದೊಂದಿಗೆ ಉತ್ತರಾಖಂಡದ ರೈಲು ಸಂಪರ್ಕ ಬಲಪಡಿಸಲಾಗುವುದು. ಆಧುನಿಕ ಸಂಪರ್ಕವು ಜೀವನವನ್ನು ಸುಲಭಗೊಳಿಸುವ ಜತೆಗೆ, ವ್ಯವಹಾರವನ್ನು ಸಹ ಸುಲಭಗೊಳಿಸುತ್ತದೆ. ಅದು ಕೃಷಿಯಾಗಿರಲಿ ಅಥವಾ ಪ್ರವಾಸೋದ್ಯಮವೇ ಆಗಿರಲಿ, ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ಸರಕು ಸಾಗಣೆ, ಸಂಗ್ರಹಣೆ, ಪ್ರವಾಸ-ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರವು ಹೊಸ ರಸ್ತೆಗಳಿಗಾಗಿ ಎದುರು ನೋಡುತ್ತಿದೆ. ಪ್ರತಿ ಹೊಸ ರಸ್ತೆ, ಪ್ರತಿ ಹೊಸ ಹೂಡಿಕೆದಾರರು ಸುವರ್ಣ ಅವಕಾಶವನ್ನು ತರುತ್ತಾರೆ.

ಸ್ನೇಹಿತರೆ,

ಹಿಂದೆ ಜನರಿಗೆ ಅವಕಾಶ ಮತ್ತು ಲಭ್ಯತೆ ಕಡಿಮೆ ಮಾಡಲು ಗಡಿಗಳ ಸಮೀಪವಿರುವ ಪ್ರದೇಶಗಳನ್ನು ಅಭಿವೃದ್ಧಿಯಾಗದಂತೆ ಇರಿಸುವುದು ಸರ್ಕಾರಗಳ ಕಾರ್ಯವಿಧಾನವಾಗಿತ್ತು. ಆದರೆ, ಡಬಲ್ ಇಂಜಿನ್ ಸರ್ಕಾರವು ಈ ಕಾರ್ಯವಿಧಾನವನ್ನು ಬದಲಾಯಿಸಿದೆ. ಗಡಿ ಗ್ರಾಮಗಳು ಕೊನೆಯ ಗ್ರಾಮಗಳಲ್ಲ,  ದೇಶದ ಮೊದಲ ಗ್ರಾಮಗಳಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ, ಈಗ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮ ನಡೆಸುತ್ತಿದ್ದೇವೆ. ಅಭಿವೃದ್ಧಿಯ ಪ್ರತಿಯೊಂದು ಅಂಶಗಳಲ್ಲಿ ಹಿಂದುಳಿದಿರುವ ಗ್ರಾಮಗಳು ಮತ್ತು ಪ್ರದೇಶಗಳ ಮೇಲೆ ನಾವು ಗಮನ ಹರಿಸುತ್ತಿದ್ದೇವೆ, ಅವುಗಳನ್ನು ಮುಂದೆ ತರುತ್ತಿದ್ದೇವೆ. ಇದರರ್ಥ ಪ್ರತಿ ಹೂಡಿಕೆದಾರರಿಗೆ ಲಾಭ ಪಡೆಯಲು ಉತ್ತರಾಖಂಡದಲ್ಲಿ ಸಾಕಷ್ಟು ಬಳಕೆಯಾಗದ ಸಾಮರ್ಥ್ಯವಿದೆ.

ಸ್ನೇಹಿತರೆ,

ಡಬಲ್ ಇಂಜಿನ್ ಸರ್ಕಾರದ ಆದ್ಯತೆಗಳು ಉತ್ತರಾಖಂಡಕ್ಕೆ ಡಬಲ್ ಪ್ರಯೋಜನಗಳನ್ನು ತರುತ್ತಿವೆ. ಪ್ರವಾಸೋದ್ಯಮ ಕ್ಷೇತ್ರವು ಇದಕ್ಕೆ ಉಜ್ವಲ ಉದಾಹರಣೆಯಾಗಿದೆ. ಇಂದು ಭಾರತವನ್ನು ಅನ್ವೇಷಿಸಲು ಭಾರತೀಯರು ಮತ್ತು ವಿದೇಶಿಯರಲ್ಲಿ ಅಭೂತಪೂರ್ವ ಉತ್ಸಾಹವಿದೆ. ನಾವು ದೇಶದಾದ್ಯಂತ ಥೀಮ್ ಆಧಾರಿತ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ರಚಿಸುತ್ತಿದ್ದೇವೆ. ಭಾರತದ ಸ್ವಭಾವ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಗುರಿಯಾಗಿದೆ. ಈ ಅಭಿಯಾನದಲ್ಲಿ ಉತ್ತರಾಖಂಡವು ಪ್ರವಾಸೋದ್ಯಮದಲ್ಲಿ ಪ್ರಬಲ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ. ರಾಜ್ಯವು ಎಲ್ಲವನ್ನೂ ನೀಡುತ್ತದೆ-ಪ್ರಕೃತಿ, ಸಂಸ್ಕೃತಿ, ಪರಂಪರೆ. ಇಲ್ಲಿ ಯೋಗ, ಆಯುರ್ವೇದ, ತೀರ್ಥಯಾತ್ರೆ, ಸಾಹಸ ಕ್ರೀಡೆಗಳು ಇತ್ಯಾದಿಗಳಿಗೆ ಅವಕಾಶಗಳಿವೆ. ಈ ಸಾಧ್ಯತೆಗಳನ್ನು ಅನ್ವೇಷಿಸುವುದು ಮತ್ತು ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸುವುದು ನಿಮ್ಮಂತಹ ಸಹೋದ್ಯೋಗಿಗಳಿಗೆ ಆದ್ಯತೆಯಾಗಿರಬೇಕು.

ನಾನು ಇನ್ನೂ ಒಂದು ವಿಷಯ ಹೇಳಲು ಬಯಸುತ್ತೇನೆ, ಬಹುಶಃ ಇಲ್ಲಿಗೆ ಬಂದಿರುವ ಜನರು ಇಷ್ಟಪಡಬಹುದು ಅಥವಾ ಇಷ್ಟಪಡದಿರಬಹುದು, ಆದರೆ ಇಲ್ಲಿ ಕೆಲವು ಜನರಿದ್ದಾರೆ, ನಾನು ಈ ಸಂದೇಶವನ್ನು ಇಲ್ಲಿಲ್ಲದವರಿಗೆ ಅವರ ಮೂಲಕ ತಿಳಿಸಬೇಕಾಗಿದೆ. ನಾನು ಶ್ರೀಮಂತ ವ್ಯಕ್ತಿಗಳು, ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂಬ ನಂಬಿಕೆ ಇದೆ. ದೇವರು ಈ ಒಕ್ಕೂಟಗಳನ್ನು ಸೃಷ್ಟಿಸುತ್ತಾನೆ. ಭಗವಂತನಿಂದ ಸಮ್ಮಿಲನಗೊಂಡ ದಂಪತಿ ಇಲ್ಲಿ ಆ ದೇವರ ಹೆಜ್ಜೆಗಳನ್ನು ಬಿಟ್ಟು ವಿದೇಶಗಳಲ್ಲಿ ತಮ್ಮ ಜೀವನ ಪಯಣ ಏಕೆ ಆರಿಸಿಕೊಳ್ಳುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ದೇಶದ ಯುವಕರು ‘ಮೇಕ್ ಇನ್ ಇಂಡಿಯಾ’ ಆಂದೋಲನದಂತೆಯೇ ‘ವೆಡ್ಡಿಂಗ್ ಇನ್ ಇಂಡಿಯಾ’ ಎಂಬ ಆಂದೋಲನ ಪ್ರಾರಂಭಿಸುವುದನ್ನು ನಾನು ನೋಡಲು ಬಯಸುತ್ತೇನೆ. ನಿಮ್ಮ ಮದುವೆಯನ್ನು ಭಾರತದಲ್ಲಿ ನಡೆಸಬೇಕು. ವಿದೇಶಗಳಲ್ಲಿ ಮದುವೆಗಳನ್ನು ಮಾಡುವ ಪ್ರವೃತ್ತಿ ನಮ್ಮ ಶ್ರೀಮಂತ ವ್ಯಕ್ತಿಗಳಲ್ಲಿ ಫ್ಯಾಶನ್ ಆಗಿ ಮಾರ್ಪಟ್ಟಿದೆ. ಇಲ್ಲಿ ಕುಳಿತಿರುವ ನಿಮ್ಮಲ್ಲಿ ಅನೇಕರಿಗೆ ಇದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ನೀವು ಹೂಡಿಕೆ ಮಾಡಲು ಶಕ್ತರಾಗಿದ್ದರೂ ಅಥವಾ ಮಾಡದಿದ್ದರೂ, ಅನೇಕರು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಕನಿಷ್ಠ ಮುಂದಿನ 5 ವರ್ಷಗಳಲ್ಲಿ ಉತ್ತರಾಖಂಡದಲ್ಲಿ ನಿಮ್ಮ ಕುಟುಂಬದ ಡೆಸ್ಟಿನೇಶನ್ ವೆಡ್ಡಿಂಗ್ ಆಯೋಜಿಸಿ. ಒಂದು ವರ್ಷದೊಳಗೆ ಇಲ್ಲಿ 5 ಸಾವಿರ ಮದುವೆಗಳು ನಡೆದರೆ, ಅದು ಹೊಸ ಮೂಲಸೌಕರ್ಯಕ್ಕೆ ದಾರಿ ಮಾಡಿಕೊಡುತ್ತದೆ. ಉತ್ತರಾಖಂಡವು ಇಡೀ ವಿಶ್ವದಲ್ಲೇ  ಮಹತ್ವದ ವಿವಾಹ ತಾಣವಾಗಲಿದೆ. ಸಾಮೂಹಿಕವಾಗಿ ನಿರ್ಧರಿಸುವ ಮತ್ತು ಅದನ್ನು ನನಸಾಗಿಸುವ ಶಕ್ತಿ ಭಾರತಕ್ಕಿದೆ. ಅದು ನಮ್ಮಲ್ಲಿರುವ ಶಕ್ತಿಯಾಗಿದೆ.

ಸ್ನೇಹಿತರೆ,

ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಬದಲಾವಣೆಯ ಕ್ಷಿಪ್ರ ಅಲೆಯು ಇಂದು ಭಾರತದ ಮೂಲಕ ವ್ಯಾಪಿಸುತ್ತಿದೆ. ಕಳೆದ 10 ವರ್ಷಗಳಲ್ಲಿ, ಮಹತ್ವಾಕಾಂಕ್ಷೆಯ ಭಾರತವನ್ನು ನಿರ್ಮಿಸಲಾಗಿದೆ. ದೇಶವು ಹೆಚ್ಚಿನ ಜನಸಂಖ್ಯೆ ಹೊಂದಿದೆ. ಅದು ಅಗತ್ಯವಿರುವ ಜನರ, ನಿರ್ಲಕ್ಷಿತ ಮತ್ತು ಸೌಲಭ್ಯವಂಚಿತ ಜನರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗ, ಅವರು ಎಲ್ಲಾ ತೊಂದರೆಗಳಿಂದ ಹೊರಬರುತ್ತಿದ್ದಾರೆ.  ಅನೇಕ ಸೌಲಭ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹೊಸ ಅವಕಾಶಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ಕಳೆದ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಈ ಕೋಟಿಗಟ್ಟಲೆ ಜನರು ಆರ್ಥಿಕತೆಗೆ ಹೊಸ ಚೈತನ್ಯ ನೀಡಿದ್ದಾರೆ. ಇಂದು ಭಾರತದೊಳಗೆ ಬಳಕೆ ಆಧಾರಿತ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಒಂದೆಡೆ ಬಡತನದಿಂದ ಮೇಲೆದ್ದು ತನ್ನ ಅಗತ್ಯಗಳಿಗೆ ಹೆಚ್ಚು ಖರ್ಚು ಮಾಡುತ್ತಿರುವ ನವ ಮಧ್ಯಮ ವರ್ಗ. ಮತ್ತೊಂದೆಡೆ, ಮಧ್ಯಮ ವರ್ಗವಿದೆ, ಅದು ಈಗ ತನ್ನ ಆಕಾಂಕ್ಷೆಗಳು ಮತ್ತು ಆದ್ಯತೆಯ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದೆ. ಆದ್ದರಿಂದ, ದೇಶದ ಮಧ್ಯಮ ವರ್ಗದ ಸಾಮರ್ಥ್ಯವನ್ನು ನಾವು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಉತ್ತರಾಖಂಡದ ಸಾಮಾಜಿಕ ಶಕ್ತಿಯು ನಿಮಗಾಗಿ ಗಮನಾರ್ಹ ಮಾರುಕಟ್ಟೆಯನ್ನು ಸಿದ್ಧಪಡಿಸುತ್ತಿದೆ.

ಸ್ನೇಹಿತರೆ,

ಹೌಸ್ ಆಫ್ ಹಿಮಾಲಯ ಬ್ರಾಂಡ್ ಪ್ರಾರಂಭಿಸಿದ್ದಕ್ಕಾಗಿ ನಾನು ಉತ್ತರಾಖಂಡ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದು ಉತ್ತರಾಖಂಡದ ಸ್ಥಳೀಯ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಸ್ಥಾಪಿಸುವ ಪ್ರವರ್ತಕ ಪ್ರಯತ್ನವಾಗಿದೆ. ಇದು ನಮ್ಮ ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಫಾರ್ ಗ್ಲೋಬಲ್ ಎಂಬ ಪರಿಕಲ್ಪನೆಯನ್ನು ಬಲಪಡಿಸುತ್ತದೆ. ಇದು ಉತ್ತರಾಖಂಡದ ಸ್ಥಳೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮನ್ನಣೆ ನೀಡುತ್ತದೆ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತದ ಪ್ರತಿಯೊಂದು ಜಿಲ್ಲೆ ಮತ್ತು ಬ್ಲಾಕ್‌ಗಳಲ್ಲಿ ಸ್ಥಳೀಯವಾಗಿರುವ, ಆದರೆ ಜಾಗತಿಕವಾಗುವ ಸಾಮರ್ಥ್ಯವನ್ನು ಹೊಂದಿರುವ ಉತ್ಪನ್ನಗಳಿವೆ. ಆಗಾಗ, ಮಣ್ಣಿನ ಪಾತ್ರೆಗಳನ್ನು ಸಹ ವಿದೇಶಗಳಲ್ಲಿ ವಿಶೇಷವೆಂದು ಪ್ರಸ್ತುತಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ನಾನು ನೋಡುತ್ತೇನೆ. ನಮ್ಮ ಕುಶಲಕರ್ಮಿಗಳು, ವಿಶೇಷವಾಗಿ ಭಾರತದಲ್ಲಿರುವ ವಿಶ್ವಕರ್ಮ ಸಮುದಾಯವು ಸಾಂಪ್ರದಾಯಿಕವಾಗಿ ಅನೇಕ ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅಂತಹ ಸ್ಥಳೀಯ ಉತ್ಪನ್ನಗಳ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವುಗಳಿಗೆ ಜಾಗತಿಕ ಮಾರುಕಟ್ಟೆ ಅನ್ವೇಷಿಸಬೇಕು. ಆದ್ದರಿಂದ, ನೀವು ತಂದಿರುವ ಹೌಸ್ ಆಫ್ ಹಿಮಾಲಯ ಬ್ರಾಂಡ್ ವೈಯಕ್ತಿಕವಾಗಿ ನನಗೆ ಸಂತೋಷಕರ ವಿಷಯವಾಗಿದೆ. ನನ್ನ ನಿರ್ಣಯದ ಬಗ್ಗೆ ತಿಳಿದಿರುವ ಕೆಲವೇ ಜನರು ಇಲ್ಲಿರುತ್ತಾರೆ ಏಕೆಂದರೆ ಅಂತಹ ನಿರ್ಣಯಗಳು ನೇರವಾಗಿ ಪ್ರಯೋಜನಗಳನ್ನು ತೋರಿಸದಿರಬಹುದು, ಆದರೆ ಅವರು ಅಪಾರ ಶಕ್ತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ 2 ಕೋಟಿ ಗ್ರಾಮೀಣ ಮಹಿಳೆಯರನ್ನು ಶ್ರೀಮಂತರನ್ನಾಗಿಸುವುದು ನನ್ನ ಒಂದು ಸಂಕಲ್ಪವಾಗಿದೆ. ಇದಕ್ಕಾಗಿ ‘ಲಖಪತಿ ದೀದಿ’ ಅಭಿಯಾನ ಆರಂಭಿಸಿದ್ದೇನೆ. 2 ಕೋಟಿ ‘ಲಖಪತಿ ದೀದಿ’ಗಳನ್ನು ಮಾಡುವುದು ಸವಾಲಿನ ಕೆಲಸವೇ ಆಗಿರಬಹುದು, ಆದರೆ ನಾನು ಮನಸ್ಸು ಮಾಡಿದ್ದೇನೆ. ಹೌಸ್ ಆಫ್ ಹಿಮಾಲಯ ಬ್ರಾಂಡ್ 2 ಕೋಟಿ ‘ಲಖಪತಿ ದೀದಿ’ಗಳನ್ನು ತಯಾರಿಸುವ ಕೆಲಸವನ್ನು ತ್ವರಿತಗೊಳಿಸುತ್ತದೆ, ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.

ಸ್ನೇಹಿತರೆ,

ನೀವೂ ವ್ಯಾಪಾರಸ್ಥರಾಗಿ, ವಿವಿಧ ಜಿಲ್ಲೆಗಳಲ್ಲಿನ ಉತ್ಪನ್ನಗಳನ್ನು ಇಲ್ಲಿ ಗುರುತಿಸಬಹುದು. ನಮ್ಮ ಸಹೋದರಿಯರು, ಎಫ್‌ಪಿಒಗಳ ಸ್ವ-ಸಹಾಯ ಗುಂಪುಗಳೊಂದಿಗೆ ಸಹಕರಿಸಿ ಮತ್ತು ಹೊಸ ಸಾಧ್ಯತೆಗಳನ್ನು ಅನ್ವೇಷಿಸಿ. ಸ್ಥಳೀಯದ್ದನ್ನು ಜಾಗತಿಕವಾಗಿ ಮಾಡಲು ಇದು ಅದ್ಭುತ ಪಾಲುದಾರಿಕೆಯಾಗಿದೆ.

ಸ್ನೇಹಿತರೆ,

ಈ ಬಾರಿ, ನಾನು ಕೆಂಪುಕೋಟೆಯಿಂದ ಹೇಳಿದ್ದೇನೆ, ‘ವಿಕ್ಷಿತ(ವಿಕಸಿತ) ಭಾರತ’ ನಿರ್ಮಿಸಲು ನಾವು ರಾಷ್ಟ್ರೀಯ ಪಾತ್ರವನ್ನು ಸಶಕ್ತಗೊಳಿಸಬೇಕಾಗಿದೆ. ನಾವು ಏನೇ ಮಾಡಿದರೂ ಅದು ಜಗತ್ತಿನಲ್ಲಿ ಅತ್ಯುತ್ತಮವಾಗಿರಬೇಕು. ಜಗತ್ತು ನಮ್ಮ ಮಾನದಂಡಗಳನ್ನು ಅನುಸರಿಸಬೇಕು. ನಮ್ಮ ಉತ್ಪಾದನೆಯು ಶೂನ್ಯ-ಪರಿಣಾಮ ಮತ್ತು ಶೂನ್ಯ-ದೋಷದ ತತ್ವಗಳನ್ನು ಆಧರಿಸಿರಬೇಕು. ರಫ್ತು-ಆಧಾರಿತ ಉತ್ಪಾದನೆಯು ಹೇಗೆ ಬೆಳೆಯಬಹುದು ಎಂಬುದರ ಕುರಿತು ನಾವು ಗಮನ ಹರಿಸಬೇಕು. ಕೇಂದ್ರ ಸರ್ಕಾರವು ಉತ್ಪಾದಕತೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್‌ಐ)ಯಂತಹ ಮಹತ್ವಾಕಾಂಕ್ಷೆಯ ಅಭಿಯಾನಗಳನ್ನು ಪ್ರಾರಂಭಿಸಿದೆ. ಇದು ನಿರ್ಣಾಯಕ ವಲಯಗಳಿಗೆ ಪರಿಸರ ವ್ಯವಸ್ಥೆ ರಚಿಸುವ ಬದ್ಧತೆ ತೋರಿಸುತ್ತದೆ. ಅದರಲ್ಲಿ ನಿಮ್ಮಂತಹ ಗೆಳೆಯರೂ ಮಹತ್ವದ ಪಾತ್ರ ವಹಿಸಬಹುದು. ನಮ್ಮ ಸ್ಥಳೀಯ ಪೂರೈಕೆ ಸರಪಳಿ ಬಲಪಡಿಸಲು ಮತ್ತು ನಮ್ಮ ಎಂಎಸ್ಎಂಇಗಳಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ನಾವು ಇತರ ದೇಶಗಳ ಮೇಲೆ ಕನಿಷ್ಠ ಅವಲಂಬಿತರಾಗುವ ರೀತಿಯಲ್ಲಿ ನಾವು ಭಾರತದಲ್ಲಿ ಪೂರೈಕೆ ಸರಪಳಿ ಅಭಿವೃದ್ಧಿಪಡಿಸಬೇಕಾಗಿದೆ. ಬೇರೆಡೆ ಕಡಿಮೆ ಬೆಲೆಗೆ ಏನಾದರೂ ಸಿಕ್ಕರೆ ಅಲ್ಲಿಂದಲೇ ಆಮದು ಮಾಡಿಕೊಳ್ಳಬೇಕು ಎಂಬ ಮನಸ್ಥಿತಿ ಮೀರಿ ಸಾಗಬೇಕಾಗಿದೆ. ಈ ಮನಸ್ಥಿತಿಯಿಂದ ನಾವು ಅಪಾರ ನಷ್ಟ ಅನುಭವಿಸಿದ್ದೇವೆ. ಎಲ್ಲ ಉದ್ಯಮಿಗಳು ಭಾರತದಲ್ಲಿ ಸಾಮರ್ಥ್ಯ ವೃದ್ಧಿಗೆ ಸಮಾನವಾಗಿ ಗಮನ ಹರಿಸಬೇಕು. ನಾವು ರಫ್ತು ಹೆಚ್ಚಿಸುವತ್ತ ಗಮನ ಹರಿಸುವಂತೆ, ಆಮದು ಕಡಿಮೆ ಮಾಡಲು ಹೆಚ್ಚು ಒತ್ತು ನೀಡಬೇಕಾಗಿದೆ. ನಾವು ಪ್ರತಿ ವರ್ಷ 15 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಕಲ್ಲಿದ್ದಲು ಸಮೃದ್ಧ ದೇಶವಾಗಿದ್ದರೂ ಪ್ರತಿ ವರ್ಷ 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತೇವೆ. ಕಳೆದ 10 ವರ್ಷಗಳಲ್ಲಿ, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಆಮದು ಕಡಿಮೆ ಮಾಡಲು ದೇಶದಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಇಂದಿಗೂ ದೇಶಕ್ಕೆ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳಬೇಕಿದೆ. ಭಾರತವು ಬೇಳೆಕಾಳುಗಳಲ್ಲಿ ಸ್ವಾವಲಂಬಿಯಾದರೆ, ಈ ಹಣ ನಮ್ಮ ರೈತರಿಗೆ ಹೋಗುತ್ತದೆ.

ಸ್ನೇಹಿತರೆ,

ಇಂದು, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳ ಡೈನಿಂಗ್ ಟೇಬಲ್‌ಗಳಲ್ಲಿ ಪೌಷ್ಟಿಕಾಂಶದ ಹೆಸರಿನಲ್ಲಿ ಪ್ಯಾಕ್ ಮಾಡಿದ ಆಹಾರದ ಪ್ರವೃತ್ತಿಯನ್ನು ನಾನು ನೋಡುತ್ತೇನೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಿವಿಧ ರೀತಿಯ ಪ್ಯಾಕ್ ಮಾಡಿದ ವಸ್ತುಗಳು ಫ್ಯಾಶನ್ ಆಗಿವೆ. ಪ್ಯಾಕೇಜ್ ಮಾಡಿದ ವಸ್ತುಗಳ ಮೇಲೆ ಪ್ರೋಟೀನ್ ಸಮೃದ್ಧವಾಗಿದೆ ಎಂದು ಬರೆಯಲಾಗಿರುತ್ತದೆ, ನಾವು ಅವುಗಳನ್ನು ಸೇವಿಸುತ್ತೇವೆ. ಆ ಪ್ಯಾಕ್ ಮಾಡಲಾದ ವಸ್ತುಗಳ ಮೇಲೆ ಕಬ್ಬಿಣದ ಅಂಶ ಸಮೃದ್ಧ ಎಂದು ಬರೆಯಲಾಗಿದೆ, ನಾವು ಅವುಗಳನ್ನು ಸಹ ಸೇವಿಸುತ್ತೇವೆ. ಯಾವುದೇ ವಿಚಾರಣೆ ಮಾಡಲ್ಲ. ಅಲ್ಲಿ ಬರೆದಿರುವುದನ್ನು ನೋಡಿಕೊಂಡು ನಾವು ಅವುಗಳನ್ನು ಬಳಸುತ್ತೇವೆ. ಇದನ್ನು ಕೇವಲ 'XYZ ದೇಶದಲ್ಲಿ ತಯಾರಿಸಲಾಗಿದೆ' ಎಂದು ಲೇಬಲ್ ಮಾಡಲಾಗಿರುತ್ತದೆ, ಆದರೆ ನಾವು ಅದನ್ನು ಪ್ರಶ್ನಿಸದೆ ಸ್ವೀಕರಿಸುತ್ತೇವೆ. ನಮ್ಮ ದೇಶದಲ್ಲಿ ಸಿರಿಧಾನ್ಯ ಸೇರಿದಂತೆ ಅನೇಕ ಪೌಷ್ಟಿಕ ಆಹಾರಗಳಿವೆ, ಅವುಗಳು ಹೆಚ್ಚು ಪೌಷ್ಟಿಕವಾಗಿದೆ. ನಮ್ಮ ರೈತರ ಶ್ರಮ ವ್ಯರ್ಥವಾಗಬಾರದು. ಉತ್ತರಾಖಂಡದಲ್ಲಿ ಆಯುಷ್, ಸಾವಯವ ಹಣ್ಣುಗಳು ಮತ್ತು ತರಕಾರಿಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಹಲವಾರು ಅವಕಾಶಗಳಿವೆ. ಇದು ರೈತರಿಗೆ ಮತ್ತು ಉದ್ಯಮಿಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಪ್ಯಾಕೇಜ್ ಮಾಡಿದ ಆಹಾರ ಮಾರುಕಟ್ಟೆಯಲ್ಲಿಯೂ ಸಹ ನಮ್ಮ ಸಣ್ಣ ಕಂಪನಿಗಳ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವಲ್ಲಿ ನೀವು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಇದು ಭಾರತಕ್ಕೆ, ಭಾರತೀಯ ಕಂಪನಿಗಳಿಗೆ, ಭಾರತೀಯ ಹೂಡಿಕೆದಾರರಿಗೆ ಅಭೂತಪೂರ್ವ ಸಮಯ ಎಂದು ನಾನು ನಂಬುತ್ತೇನೆ. ಮುಂದಿನ ಕೆಲವು ವರ್ಷಗಳಲ್ಲಿ, ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನನ್ನ 3ನೇ ಅವಧಿಯಲ್ಲಿ ದೇಶವು ಜಾಗತಿಕವಾಗಿ ಅಗ್ರ 3 ಸ್ಥಾನಗಳಲ್ಲಿರಲಿದೆ ಎಂದು ನಾನು ನಾಗರಿಕರಿಗೆ ಭರವಸೆ ನೀಡುತ್ತೇನೆ. ಸ್ಥಿರ ಸರ್ಕಾರ, ಬೆಂಬಲ ನೀತಿ ವ್ಯವಸ್ಥೆ, ಸುಧಾರಣೆಗಳ ಮೂಲಕ ರೂಪಾಂತರಗೊಂಡ ಮನಸ್ಥಿತಿ ಮತ್ತು ಅಭಿವೃದ್ಧಿಯಲ್ಲಿ ವಿಶ್ವಾಸ - ಈ ಎಲ್ಲಾ ಅಂಶಗಳ ಸಂಗಮವು ಮೊದಲ ಬಾರಿಗೆ ನಡೆಯುತ್ತಿದೆ. ಆದ್ದರಿಂದ, ಈ ಸಮಯವು ಸರಿಯಾದ ಸಮಯ ಎಂದು ನಾನು ಹೇಳುತ್ತೇನೆ. ಇದು ಭಾರತದ ಸಮಯ. ಉತ್ತರಾಖಂಡದ ಜತೆಗೆ ನಿಮ್ಮ ಸ್ವಂತ ಅಭಿವೃದ್ಧಿಗೆ ಕೊಡುಗೆ ನೀಡಿ ಮತ್ತು ಉತ್ತರಾಖಂಡದ ಅಭಿವೃದ್ಧಿಯ ಭಾಗವಾಗುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಯಾವಾಗಲೂ ಹೇಳುತ್ತೇನೆ, ನಾವು ವರ್ಷಗಳಿಂದ ಕಲ್ಪನೆ ಹೊಂದಿದ್ದೇವೆ. ಮಲೆನಾಡಿನ ಯುವಕರು, ಮಲೆನಾಡಿನ ನೀರು ಗುಡ್ಡಗಳ ಅಭಿವೃದ್ಧಿಗೆ ಕೊಡುಗೆ ನೀಡುವುದಿಲ್ಲ ಎನ್ನುತ್ತಾರೆ. ಯುವಕರು ಜೀವನೋಪಾಯಕ್ಕಾಗಿ ಬೇರೆಡೆಗೆ ಹೋಗುತ್ತಾರೆ ಮತ್ತು ನೀರು ಬೇರೆಡೆ ಹರಿಯುತ್ತದೆ. ಆದರೆ ಇದೀಗ ಮಲೆನಾಡಿನ ಯುವಕರು ಕೂಡ ಗುಡ್ಡಗಳ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದು, ಬೆಟ್ಟಗಳ ನೀರಿನಿಂದ ಬೆಟ್ಟ ಗುಡ್ಡಗಳ ಉದ್ದೇಶ ಈಡೇರಲಿದೆ ಎಂದು ಮೋದಿ ನಿರ್ಧರಿಸಿದ್ದಾರೆ. ಹಲವಾರು ಸಾಧ್ಯತೆಗಳನ್ನು ನೋಡಿದಾಗ, ನಮ್ಮ ದೇಶವು ಹೊಸ ಶಕ್ತಿಯೊಂದಿಗೆ ಪ್ರತಿಯೊಂದು ಮೂಲೆಯಲ್ಲೂ ಗಟ್ಟಿಯಾಗಿ ನಿಲ್ಲಬಹುದು ಎಂದು ನಾನು ಈ ಸಂಕಲ್ಪ ಮಾಡಬಲ್ಲೆ. ಆದ್ದರಿಂದ, ನೀವೆಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ, ನೀತಿಗಳಿಂದ ಪ್ರಯೋಜನ ಪಡೆಯಬೇಕು. ಸರ್ಕಾರವು ಪಾರದರ್ಶಕವಾಗಿದೆ, ಎಲ್ಲರಿಗೂ ಮುಕ್ತವಾಗಿರುವ ನೀತಿಗಳನ್ನು ರೂಪಿಸುತ್ತದೆ. ನೀವು ಅದರ ಪ್ರಯೋಜನ ಪಡೆದುಕೊಳ್ಳಬೇಕು.

ನಾವು ಮಾತನಾಡುವುದು ಮಾತ್ರವಲ್ಲದೆ, ನಾವು ಏನು ಹೇಳುತ್ತೇವೆಯೋ ಅದರ ಹಿಂದೆ ದೃಢವಾಗಿ ನಿಂತು ಅದನ್ನು ಪೂರೈಸುತ್ತೇವೆ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ. ಈ ನಿರ್ಣಾಯಕ ಅವಕಾಶದಲ್ಲಿ ನೀವೆಲ್ಲರೂ ಇಲ್ಲಿದ್ದೀರಿ. ಉತ್ತರಾಖಂಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಅನೇಕರು ಹೇಳಿದಂತೆ, ನನ್ನ ಜೀವನವನ್ನು ರೂಪಿಸಿದ ಮಹತ್ವದ ಅಂಶವು ಈ ಭೂಮಿಗೆ ಸಂಬಂಧಿಸಿದ್ದಾಗಿದೆ.  ಏನಾದರೂ ವಾಪಸು ಕೊಡುವ ಅವಕಾಶ ಸಿಕ್ಕರೆ ಅದರ ಖುಷಿಯೇ ಬೇರೆ. ಆದ್ದರಿಂದ, ನಾನು ನಿಮ್ಮನ್ನು ಆಹ್ವಾನಿಸುತ್ತೇನೆ; ಈ ಪುಣ್ಯಭೂಮಿಯ ಆಶೀರ್ವಾದ ಹೊತ್ತುಕೊಂಡು ಇಂದೇ ಕೆಲಸ ಆರಂಭಿಸಿ. ಇದು ಈ ನೆಲದ ಆಶೀರ್ವಾದವಾಗಿರುವುದರಿಂದ ನಿಮ್ಮ ಅಭಿವೃದ್ಧಿ ಪಯಣದಲ್ಲಿ ಯಾವುದೇ ಅಡ್ಡಿ ಇರುವುದಿಲ್ಲ. ತುಂಬು ಧನ್ಯವಾದಗಳು ಮತ್ತು ಶುಭಾಶಯಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 



(Release ID: 1984921) Visitor Counter : 51