ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಜಿ20 ಅಧ್ಯಕ್ಷೀಯ ಸಮನ್ವಯ ಸಮಿತಿಯ ಒಂಬತ್ತನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಅವರು ವಹಿಸಿದರು


ಆಂಡ್ರಾಯ್ಡ್ ಮತ್ತು ಐ.ಒ.ಎಸ್. ಎರಡರಲ್ಲೂ ಡೌನ್ಲೋಡ್ ಮಾಡಲು ಲಭ್ಯವಿರುವ 'ಜಿ20 ಇಂಡಿಯಾ' ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲ ಬಾರಿಗೆ ರೂಪಿಸಲಾಗಿದೆ

ಜಿ20 ಶೃಂಗಸಭೆಯಲ್ಲಿ ಭಾರತೀಯ ಸಾಂಸ್ಕೃತಿಕ ಮತ್ತು ಪ್ರಜಾಪ್ರಭುತ್ವದ ನೀತಿಗಳನ್ನು ವೈವಿಧ್ಯಮಯ ಪ್ರದರ್ಶನಗಳ ಮೂಲಕ ಪ್ರದರ್ಶಿಸಲಾಗುತ್ತದೆ

ನಿರ್ಬಂಧಗಳು ಅನಿವಾರ್ಯವಾಗಿದ್ದರೂ, ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಹೇಳಿದರು.

ಭಾರತ ಮಂಟಪದಲ್ಲಿ ಬಹು-ಸಂಸ್ಥೆಯ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ

Posted On: 30 AUG 2023 5:02PM by PIB Bengaluru

ಆಗಸ್ಟ್ 3,0 2023 ರಂದು ನಡೆದ ಜಿ20 ಸಮನ್ವಯ ಸಮಿತಿಯ 9 ನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ. ಮಿಶ್ರಾ ಅವರು ವಹಿಸಿದ್ದರು. ನವದೆಹಲಿಯಲ್ಲಿ ಜರುಗುವ ಜಿ20 ನಾಯಕರ ಶೃಂಗಸಭೆಗೆ ಲಾಜಿಸ್ಟಿಕಲ್, ಪ್ರೋಟೋಕಾಲ್, ಭದ್ರತೆ ಮತ್ತು ಮಾಧ್ಯಮ-ಸಂಬಂಧಿತ ವ್ಯವಸ್ಥೆಗಳನ್ನು ಒಳಗೊಂಡಂತೆ ಸರ್ವ ವ್ಯವಸ್ಥೆಗಳನ್ನು ಪ್ರಧಾನ ಕಾರ್ಯದರ್ಶಿ ಅವರು ಪರಿಶೀಲಿಸಿದರು. ಈ ಸಭೆಯಲ್ಲಿ ಜಿ20 ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು, ಗೃಹ, ಸಂಸ್ಕೃತಿ, ಮಾಹಿತಿ ಮತ್ತು ಪ್ರಸಾರ ಮತ್ತು ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಭಾರತ ಮಂಟಪದಲ್ಲಿ , ಮೈದಾನ ಮತ್ತು ಇತರ ಸ್ಥಳಗಳಲ್ಲಿ ಕೆಲಸಗಳು ತೃಪ್ತಿಕರವಾಗಿ ನಡೆಯುತ್ತಿವೆ ಎಂಬುದನ್ನು ಖಚಿತಪಡಿಲಾಯಿತು. ವಿಶಿಷ್ಟವಾದ ಭಾರತೀಯ ಅನುಭವಕ್ಕಾಗಿ, ಭಾರತ ಮಂಟಪದಲ್ಲಿ ಸಂಸ್ಕೃತಿ ಮತ್ತು 'ಪ್ರಜಾಪ್ರಭುತ್ವದ ತಾಯಿ' ಎಂಬ ವಿವಿಧ ಪ್ರದರ್ಶನಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ಅವರು ಸ್ಥಳದಲ್ಲಿ ನಟರಾಜ್ ಪ್ರತಿಮೆ ಸ್ಥಾಪನೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ವಿಶೇಷವಾಗಿ ಅತಿಥಿಗಳಿಗಾಗಿ ಹಾಗೂ ಭೇಟಿ ನೀಡುವ ನಾಯಕರುಗಳಿಗಾಗಿ ವಿನ್ಯಾಸಗೊಳಿಸಲಾದ ಕಾರ್ಯಕ್ರಮವನ್ನು ಪರಿಶೀಲಿಸಿದರು.

ಮೊದಲ ಬಾರಿಗೆ, ಜಿ20 ಗಾಗಿ 'ಜಿ20 ಇಂಡಿಯಾ' ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ, ಇದು ಈಗ ಆಂಡ್ರಾಯ್ಡ್ ಮತ್ತು ಐ.ಒ.ಎಸ್. ಎರಡರಲ್ಲೂ ಡೌನ್ಲೋಡ್ಗೆ ಲಭ್ಯವಿದೆ. ಭಾರತ್ ಮಂಟಪದಲ್ಲಿ ಸ್ಥಾಪಿಸಲಾಗುತ್ತಿರುವ ‘ಇನ್ನೋವೇಶನ್ ಹಬ್’ ಮತ್ತು ‘ಡಿಜಿಟಲ್ ಇಂಡಿಯಾ ಎಕ್ಸ್ಪೀರಿಯೆನ್ಷಿಯಲ್ ಹಬ್’ ಮೂಲಕ ಜಿ20 ಪ್ರತಿನಿಧಿಗಳು ಮತ್ತು ಮಾಧ್ಯಮದ ಸದಸ್ಯರು ಡಿಜಿಟಲ್ ಇಂಡಿಯಾವನ್ನು ನೇರವಾಗಿ ವೀಕ್ಷಿಸಲಿದ್ದಾರೆ.

ಲಾಜಿಸ್ಟಿಕ್ಸ್ ಭಾಗದಲ್ಲಿ, ಡ್ರಿಲ್ಗಳನ್ನು ನಡೆಸಲಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಡ್ರೆಸ್ ರಿಹರ್ಸಲ್ಗಳನ್ನು ಯೋಜಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯವರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಭದ್ರತಾ ಅಂಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆಯ ನೂತನ ಸೂಚನೆ ನೀಡಲಾಗಿದೆ. ಭದ್ರತೆ ಮತ್ತು ಪ್ರೋಟೋಕಾಲ್ ಕಾರಣಗಳಿಗಾಗಿ ನಿರ್ಬಂಧಗಳನ್ನು ವಿಧಿಸಲಾಗಿದ್ದರೂ ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲತೆ ಉಂಟಾಗುವಂತೆ ಪೂರ್ವ ತಯಾರಿಯ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನ ಕಾರ್ಯದರ್ಶಿ ಅವರು ಹೇಳಿದರು. ನಗರದಲ್ಲಿ ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕಾಗಿದೆ ಎಂದು ಸೂಚನೆ ನೀಡಿದರು. ಇದಲ್ಲದೆ, ಸಂಚಾರ ನಿರ್ಬಂಧಗಳಿಗೆ ಸಂಬಂಧಿಸಿದ ಸಂವಹನಗಳನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗುತ್ತದೆ.

ಶೃಂಗಸಭೆಯ ಮಾಧ್ಯಮ ವ್ಯವಸ್ಥೆಗಳನ್ನು ಸಹ ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು. ವಿದೇಶಿ ಮಾಧ್ಯಮಗಳು ಸೇರಿದಂತೆ ಇಲ್ಲಿಯವರೆಗೆ 3600 ಕ್ಕೂ ಹೆಚ್ಚು ಮನವಿಗಳನ್ನು ಸ್ವೀಕರಿಸಲಾಗಿದೆ ಮತ್ತು ಮಾನ್ಯತೆ ಪತ್ರಗಳನ್ನು ನೀಡಲಾಗುತ್ತಿದೆ. ಭಾರತ ಮಂಟಪದಲ್ಲಿ ಮಾಧ್ಯಮ ಕೇಂದ್ರವು ಈ ವಾರದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ.

ಕುಂದುಕೊರತೆ ಇಲ್ಲದೆ, ತಪ್ಪುರಹಿತ (ನಿಷ್ಪಾಪ) ಶೃಂಗಸಭೆಯನ್ನು ಆಯೋಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಧಾನ ಕಾರ್ಯದರ್ಶಿ ಅವರು ನಿರ್ದೇಶನ ನೀಡಿದರು. ವಿವಿಧ ಏಜೆನ್ಸಿಗಳ ನಡುವೆ ಸುಗಮ ಸಮನ್ವಯಕ್ಕಾಗಿ, ಭಾರತ ಮಂಟಪದಲ್ಲಿ ಬಹು-ಸಂಸ್ಥೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಮುಂದಿನ ಕೆಲವು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮೈದಾನದಲ್ಲಿ ಪೂರ್ವ ಸನ್ನದ್ಧತೆಯ ಸ್ಥಿತಿಗತಿಗಳನ್ನು ಪ್ರಧಾನ ಕಾರ್ಯದರ್ಶಿ ಅವರು ಪರಿಶೀಲಿಸಲಿದ್ದಾರೆ.

***



(Release ID: 1953597) Visitor Counter : 117