ಪ್ರಧಾನ ಮಂತ್ರಿಯವರ ಕಛೇರಿ

ಜಿ 20 ಆರೋಗ್ಯ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರ ವಿಡಿಯೋ ಸಂದೇಶದ ಪಠ್ಯ

Posted On: 18 AUG 2023 3:35PM by PIB Bengaluru

ಗೌರವಾನ್ವಿತರೇ, 

ಮಹಿಳೆಯರೇ ಮತ್ತು ಮಹನೀಯರೇ

ನಮಸ್ಕಾರ!

ಭಾರತದ 1.4 ಶತಕೋಟಿ ಜನರ ಪರವಾಗಿ, ನಾನು ನಿಮಗೆ ಭಾರತಕ್ಕೆ ಮತ್ತು ನನ್ನ ತವರು ರಾಜ್ಯ ಗುಜರಾತ್ ಗೆ ಬಹಳ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ನಿಮ್ಮನ್ನು ಸ್ವಾಗತಿಸಲು ನನ್ನೊಂದಿಗೆ 2.4 ಮಿಲಿಯನ್ ವೈದ್ಯರು, 3.5 ಮಿಲಿಯನ್ ದಾದಿಯರು, 1.3 ಮಿಲಿಯನ್ ಅರೆವೈದ್ಯಕೀಯ ಕ್ಷೇತ್ರದ ತಜ್ಞರು, 1.6 ಮಿಲಿಯನ್ ಫಾರ್ಮಾಸಿಸ್ಟ್ ಗಳು ಮತ್ತು ಭಾರತದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿರುವ ಲಕ್ಷಾಂತರ ಇತರರು ಸೇರಿದ್ದಾರೆ.

ಸ್ನೇಹಿತರೇ, 

ಗಾಂಧೀಜಿಯವರು ಆರೋಗ್ಯವನ್ನು ಎಷ್ಟು ಮುಖ್ಯವಾದ ವಿಷಯವೆಂದು ಪರಿಗಣಿಸಿದ್ದರೆಂದರೆ, ಅವರು ವಿಷಯದ ಬಗ್ಗೆ "ಕೀ ಟು ಹೆಲ್ತ್" ಎಂಬ ಪುಸ್ತಕವನ್ನು ಬರೆದರು. ಆರೋಗ್ಯವಾಗಿರಲು ಮನಸ್ಸು ಮತ್ತು ದೇಹವನ್ನು ಸಾಮರಸ್ಯ ಮತ್ತು ಸಮತೋಲನದ ಸ್ಥಿತಿಯಲ್ಲಿರಿಸಬೇಕು ಎಂದು ಅವರು ಹೇಳಿದರು. ವಾಸ್ತವವಾಗಿ, ಆರೋಗ್ಯವು ಜೀವನದ ಅಡಿಪಾಯವಾಗಿದೆ. ನಮ್ಮಲ್ಲಿ, ಅಂದರೆ ಭಾರತದಲ್ಲಿ, ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ:  :

''आरोग्यं परमं भाग्यं स्वास्थ्यं सर्वार्थसाधनम्''

ಅಂದರೆ, "ಆರೋಗ್ಯವು ಬಹಳ ಶೇಷ್ಠ  ಸಂಪತ್ತು, ಮತ್ತು ಉತ್ತಮ ಆರೋಗ್ಯ ಇದ್ದರೆ ಅದರಿಂದ ಪ್ರತಿಯೊಂದು ಕಾರ್ಯವನ್ನೂ ಸಾಧಿಸಬಹುದು".

ಸ್ನೇಹಿತರೇ,

ಆರೋಗ್ಯವು ನಮ್ಮ ನಿರ್ಧಾರಗಳ ಕೇಂದ್ರ ಬಿಂದುವಾಗಿರಬೇಕು ಎಂಬುದನ್ನು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವು ನಮಗೆ ನೆನಪಿಸಿದೆ. ಔಷಧ ಮತ್ತು ಲಸಿಕೆ ವಿತರಣೆಯಲ್ಲಿ ಅಥವಾ ನಮ್ಮ ಜನರನ್ನು ಸ್ವದೇಶಕ್ಕೆ, ಮನೆಗೆ ಮರಳಿ ಕರೆತರುವಲ್ಲಿ ಅಂತರರಾಷ್ಟ್ರೀಯ ಸಹಕಾರದ ಮೌಲ್ಯವನ್ನು ಇದು ನಮಗೆ ತೋರಿಸಿದೆ. ಲಸಿಕೆ ಮೈತ್ರಿ ಉಪಕ್ರಮದ ಅಡಿಯಲ್ಲಿ, ಭಾರತವು ಗ್ಲೋಬಲ್ ಸೌತ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ 300 ಮಿಲಿಯನ್ ಲಸಿಕೆ ಡೋಸ್ ಗಳನ್ನು ಪೂರೈಸಿದೆ. ಪುನಶ್ಚೇತನವು ಸಮಯದ ಅತಿದೊಡ್ಡ ಕಲಿಕೆಗಳಲ್ಲಿ ಒಂದಾಗಿದೆ. ಜಾಗತಿಕ ಆರೋಗ್ಯ ವ್ಯವಸ್ಥೆಗಳು ಸಹ ಪುನಶ್ಚೇತನ ಸ್ವರೂಪದ ಸ್ಥಿತಿಸ್ಥಾಪಕತ್ವವನ್ನು ಹೊಂದಿರಬೇಕು. ಮುಂದಿನ ಆರೋಗ್ಯ ತುರ್ತುಸ್ಥಿತಿಯನ್ನು ತಡೆಗಟ್ಟಲು, ಎದುರಿಸಲು  ಮತ್ತು ಪ್ರತಿಕ್ರಿಯಿಸಲು ನಾವು ಸಿದ್ಧರಾಗಿರಬೇಕು. ಇಂದಿನ ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಇದು ವಿಶೇಷವಾಗಿ ಬಹಳ ಮುಖ್ಯವಾದ ಸಂಗತಿಯಾಗಿದೆ. ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಒಂದು ಭಾಗದಲ್ಲಿನ ಆರೋಗ್ಯ ಸಮಸ್ಯೆಗಳು ವಿಶ್ವದ ಇತರ ಎಲ್ಲಾ ಭಾಗಗಳ ಮೇಲೆ ಬಹಳ ಕಡಿಮೆ ಸಮಯದಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ನಾವು ನೋಡಿದ್ದೇವೆ.

ಸ್ನೇಹಿತರೇ, 

ಭಾರತದಲ್ಲಿ, ನಾವು ಸಮಗ್ರ ಮತ್ತು ಅಂತರ್ಗತ, ಎಲ್ಲರನ್ನೂ ಒಳಗೊಳ್ಳುವ  ವಿಧಾನವನ್ನು ಅನುಸರಿಸುತ್ತಿದ್ದೇವೆ. ನಾವು ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸುತ್ತಿದ್ದೇವೆ, ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಉತ್ತೇಜಿಸುತ್ತಿದ್ದೇವೆ ಮತ್ತು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯು ಸಮಗ್ರ ಆರೋಗ್ಯದ ಸಾರ್ವತ್ರಿಕ ಆಶಯಕ್ಕೆ ಸಾಕ್ಷಿಯಾಗಿದೆ. ಈ ವರ್ಷ,  2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಸಿರಿಧಾನ್ಯಗಳು ಅಥವಾ ಶ್ರೀ ಅನ್ನಾ ಎಂದು ಕರೆಯಲ್ಪಡುವ ಇವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮವು ಪ್ರತಿಯೊಬ್ಬರ ಪುನಶ್ಚೇತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಗುಜರಾತಿನ  ಜಾಮ್ ನಗರದಲ್ಲಿ ಡಬ್ಲ್ಯುಎಚ್ಒ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಸ್ಥಾಪನೆಯು ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಮತ್ತು, ಜಿ 20 ಆರೋಗ್ಯ ಸಚಿವರ ಸಭೆಯೊಂದಿಗೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಯನ್ನು ನಡೆಸುವುದು ಅದರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ. ಸಾಂಪ್ರದಾಯಿಕ ವೈದ್ಯಕೀಯದ/ ಔಷಧದ ಜಾಗತಿಕ ಭಂಡಾರವನ್ನು ನಿರ್ಮಿಸುವುದು ನಮ್ಮ ಜಂಟಿ ಪ್ರಯತ್ನವಾಗಬೇಕು.

ಸ್ನೇಹಿತರೇ, 

ಆರೋಗ್ಯ ಮತ್ತು ಪರಿಸರ ಸಾವಯವವಾದಂತಹ ಸಂಬಂಧ ಹೊಂದಿವೆ. ಶುದ್ಧ ಗಾಳಿ, ಸುರಕ್ಷಿತ ಕುಡಿಯುವ ನೀರು, ಸಾಕಷ್ಟು ಪೌಷ್ಠಿಕಾಂಶ ಮತ್ತು ಸುರಕ್ಷಿತ ಆಶ್ರಯ ಆರೋಗ್ಯದ ಪ್ರಮುಖ ಅಂಶಗಳಾಗಿವೆ. ಹವಾಮಾನ ಮತ್ತು ಆರೋಗ್ಯ ಉಪಕ್ರಮವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧದ ಬೆದರಿಕೆಯನ್ನು ಎದುರಿಸಲು ಕೈಗೊಂಡ ಕ್ರಮಗಳು ಸಹ ಶ್ಲಾಘನೀಯ. ಎಎಂಆರ್ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ಮತ್ತು ಇಲ್ಲಿಯವರೆಗಿನ  ಎಲ್ಲಾ ಔಷಧೀಯ ಪ್ರಗತಿಗಳಿಗೆ ಗಂಭೀರ ಅಪಾಯ ಒಡ್ಡುವಂತಹದಾಗಿದೆ. ಜಿ 20 ಆರೋಗ್ಯ ಕಾರ್ಯ ಗುಂಪು 'ಒಂದು ಆರೋಗ್ಯ'ಕ್ಕೆ ಆದ್ಯತೆ ನೀಡಿರುವ ಸಂಗತಿ ನನಗೆ ಸಂತೋಷ ತಂದಿದೆ. 'ಒಂದು ಭೂಮಿ, ಒಂದು ಆರೋಗ್ಯ' ಎಂಬ ನಮ್ಮ ದೃಷ್ಟಿಕೋನವು ಇಡೀ ಪರಿಸರ ವ್ಯವಸ್ಥೆಗೆ - ಮಾನವರು, ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರಕ್ಕೆ ಉತ್ತಮ ಆರೋಗ್ಯವನ್ನು ಕಲ್ಪಿಸುತ್ತದೆ. ಈ ಸಮಗ್ರ ದೃಷ್ಟಿಕೋನವು ಯಾರನ್ನೂ ಹಿಂದುಳಿಯಲು ಅವಕಾಶ ನೀಡಬಾರದು ಎಂಬ ಗಾಂಧೀಜಿಯವರ ಸಂದೇಶವನ್ನು ಹೊಂದಿದೆ.

ಸ್ನೇಹಿತರೇ, 

ಆರೋಗ್ಯ ಉಪಕ್ರಮಗಳ ಯಶಸ್ಸಿನಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಪ್ರಮುಖ ಅಂಶವಾಗಿದೆ. ನಮ್ಮ ಕುಷ್ಠರೋಗ ನಿರ್ಮೂಲನಾ ಅಭಿಯಾನದ ಯಶಸ್ಸಿಗೆ ಇದು ಒಂದು ಪ್ರಮುಖ ಕಾರಣವಾಗಿತ್ತು. ಕ್ಷಯರೋಗ ನಿರ್ಮೂಲನೆ ಕುರಿತ ನಮ್ಮ ಮಹತ್ವಾಕಾಂಕ್ಷೆಯ ಕಾರ್ಯಕ್ರಮವು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಕ್ಷಯರೋಗ ನಿರ್ಮೂಲನೆಗಾಗಿ नि-क्षय मित्र ಅಥವಾ ಸ್ನೇಹಿತರಾಗುವಂತೆ ನಾವು ದೇಶದ ಜನರಿಗೆ ಕರೆ ನೀಡಿದ್ದೇವೆ. ಇದರ ಅಡಿಯಲ್ಲಿ, ಸುಮಾರು 1 ಮಿಲಿಯನ್ ರೋಗಿಗಳನ್ನು ನಾಗರಿಕರು ದತ್ತು ಪಡೆದಿದ್ದಾರೆ. ಈಗ, ನಾವು 2030 ರ ಜಾಗತಿಕ ಗುರಿಗಿಂತ ಮುಂಚಿತವಾಗಿ ಕ್ಷಯ ರೋಗ  ನಿರ್ಮೂಲನೆಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ.

 

ಸ್ನೇಹಿತರೇ, 

ಡಿಜಿಟಲ್ ಪರಿಹಾರಗಳು ಮತ್ತು ಆವಿಷ್ಕಾರಗಳು ನಮ್ಮ ಪ್ರಯತ್ನಗಳನ್ನು ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಉಪಯುಕ್ತ ಸಾಧನವಾಗಿವೆ. ದೂರದೂರದ ರೋಗಿಗಳು ಟೆಲಿ-ಮೆಡಿಸಿನ್ ಮೂಲಕ ಗುಣಮಟ್ಟದ ಆರೈಕೆಯನ್ನು ಪಡೆಯಬಹುದು. ಭಾರತದ ರಾಷ್ಟ್ರೀಯ ವೇದಿಕೆಯಾದ ಇ-ಸಂಜೀವನಿ ಇಲ್ಲಿಯವರೆಗೆ 140 ಮಿಲಿಯನ್ ಟೆಲಿ-ಹೆಲ್ತ್ ಸಮಾಲೋಚನೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಭಾರತದ ಕೋವಿನ್ ವೇದಿಕೆ (ಪ್ಲಾಟ್ಫಾರ್ಮ್) ಮಾನವ ಇತಿಹಾಸದಲ್ಲಿ ಅತಿದೊಡ್ಡ ವ್ಯಾಕ್ಸಿನೇಷನ್ ಆಂದೋಲನವನ್ನು  ಯಶಸ್ವಿಯಾಗಿ ಸುಗಮಗೊಳಿಸಿದೆ. ಇದು 2.4 ಬಿಲಿಯನ್ ಲಸಿಕೆ ಡೋಸ್ ಗಳ ವಿತರಣೆಯನ್ನು ಮತ್ತು ಜಾಗತಿಕವಾಗಿ ಪರಿಶೀಲಿಸಬಹುದಾದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ನೈಜ ಸಮಯದಲ್ಲಿ  ಲಭ್ಯವಾಗುವ ಕಾರ್ಯವನ್ನು ನಿರ್ವಹಿಸಿತು. ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮವು ವಿವಿಧ ಡಿಜಿಟಲ್ ಆರೋಗ್ಯ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ. ನಮ್ಮ ಆವಿಷ್ಕಾರಗಳನ್ನು ಸಾರ್ವಜನಿಕ ಒಳಿತಿಗಾಗಿ ಮುಕ್ತವಾಗಿಸೋಣ. ಧನಸಹಾಯದ, ಹಣಕಾಸು ನೆರವು  ಪೋಲಾಗುವುದನ್ನು ತಪ್ಪಿಸೋಣ. ತಂತ್ರಜ್ಞಾನದ ಸಮಾನ ಲಭ್ಯತೆಯನ್ನು ಸುಗಮಗೊಳಿಸೋಣ. ಈ ಉಪಕ್ರಮವು ಜಾಗತಿಕ ದಕ್ಷಿಣದ ದೇಶಗಳಿಗೆ ಆರೋಗ್ಯ ರಕ್ಷಣೆ ವಿತರಣೆಯಲ್ಲಿನ ಅಂತರವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ನಮ್ಮ ಗುರಿಗೆ ನಮ್ಮನ್ನು ಒಂದು ಹೆಜ್ಜೆ ಹತ್ತಿರ ಕರೆದೊಯ್ಯುತ್ತದೆ.

ಸ್ನೇಹಿತರೇ, 

ಮಾನವೀಯತೆಗಾಗಿ ಒಂದು ಪ್ರಾಚೀನ ಭಾರತೀಯ ಆಶಯದೊಂದಿಗೆ ನಾನು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ: सर्वे भवन्तु सुखिनः, सर्वे सन्तु निरामयः ಅಂದರೆ 'ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ'. ನಿಮ್ಮ ಚರ್ಚೆಗಳಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ನಾನು ಬಯಸುತ್ತೇನೆ.

ಧನ್ಯವಾದಗಳು!

****



(Release ID: 1950141) Visitor Counter : 124