ಪ್ರಧಾನ ಮಂತ್ರಿಯವರ ಕಛೇರಿ

ಸರ್ಕಾರದ ಯೋಜನೆಗಳು 13.5 ಕೋಟಿ ಜನರಿಗೆ ಬಡತನದ ಸಂಕೋಲೆಯಿಂದ ಹೊರಬಂದು, ಹೊಸ ಮಧ್ಯಮ ವರ್ಗಕ್ಕೆ ಸೇರಲು ಅನುವು ಮಾಡಿಕೊಟ್ಟಿವೆ: ಪ್ರಧಾನಿ

Posted On: 15 AUG 2023 11:53AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆ ಮೇಲಿಂದ ಭಾಷಣ ಮಾಡಿದರು. ಭಾರತದ ಆರ್ಥಿಕತೆಯು ವಿಶ್ವ ಶ್ರೇಯಾಂಕದಲ್ಲಿ 2014ರಲ್ಲಿ ಇದ್ದ 10ನೇ ಸ್ಥಾನದಿಂದ ಇದೀಗ 2023ರಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟ, ಸರ್ಕಾರಿ ಸವಲತ್ತುಗಳ ವರ್ಗಾವಣೆಯಲ್ಲಿ ಸೋರಿಕೆ ತಡೆಯುವುದು, ಸದೃಢ ಆರ್ಥಿಕತೆಯ ಸೃಷ್ಟಿ ಮತ್ತು ಬಡವರ ಕಲ್ಯಾಣಕ್ಕಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡುವುದರಿಂದ ಈ ಸುಧಾರಣೆ ಕಂಡುಬಂದಿದೆ ಎಂದು ಪ್ರಧಾನಿ ಹೇಳಿದರು. “ಇಂದು, ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ, ದೇಶವು ಆರ್ಥಿಕವಾಗಿ ಸಮೃದ್ಧವಾಗಿರುವಾಗ ಅದು ಬೊಕ್ಕಸವನ್ನು ತುಂಬುವುದಲ್ಲ, ಇದು ನಾಗರಿಕರ ಮತ್ತು ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದನ್ನು ತನ್ನ ನಾಗರಿಕರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಖರ್ಚು ಮಾಡುವ ಸಂಕಲ್ಪ ತೊಡುವ ಸರ್ಕಾರವಿದ್ದರೆ, ಆಗ ಮಾತ್ರ ಅಂತಹ ಅಪರೂಪದ ಪ್ರಗತಿಶೀಲ ಫಲಿತಾಂಶಗಳನ್ನು ಸಾಧಿಸಬಹುದು ಎಂದರು.
 
ಕೇಂದ್ರದಿಂದ ರಾಜ್ಯಗಳಿಗೆ ಹಣ ವರ್ಗಾವಣೆ ರೂ. 30 ಲಕ್ಷ ಕೋಟಿ ರೂ.ನಿಂದ 100 ಲಕ್ಷ ಕೋಟಿ ರೂ.ಗೆ ಏರಿಕೆ
ಕಳೆದ 10 ವರ್ಷಗಳ ಪ್ರಗತಿಯ ವಿವರ ನೀಡಿದ ಪ್ರಧಾನಿ, ಅಂಕಿಅಂಶಗಳು ಬದಲಾವಣೆಯ ಬಲವಾದ ಯೋಶೋಗಾಥೆಯನ್ನು ಹೇಳುತ್ತವೆ. ಪರಿವರ್ತನೆಯು ದೊಡ್ಡದಾಗಿದೆ, ಅದು ರಾಷ್ಟ್ರದ ಅಪಾರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, 10 ವರ್ಷಗಳ ಹಿಂದೆ ಭಾರತ ಸರ್ಕಾರದಿಂದ 30 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ರಾಜ್ಯಗಳಿಗೆ ಹೋಗುತ್ತಿತ್ತು. ಆದರೆ ಕಳೆದ 9 ವರ್ಷಗಳಲ್ಲಿ ಈ ಅಂಕಿಅಂಶ 100 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭಾರತ ಸರ್ಕಾರದ ಖಜಾನೆಯಿಂದ 70 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು, ಇದೀಗ ಅದು 3 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದರು.
 
ಬಡವರಿಗೆ ಸೂರು ಕಲ್ಪಿಸಲು ಅನುದಾನ 4 ಪಟ್ಟು ಹೆಚ್ಚಳ, ರೈತರಿಗೆ 10 ಲಕ್ಷ ಕೋಟಿ ರೂ. ಯೂರಿಯಾ ಸಬ್ಸಿಡಿ
ಈ ಹಿಂದೆ ಬಡವರಿಗೆ ಮನೆಗಳನ್ನು ನಿರ್ಮಿಸಲು 90 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇಂದು ಅದು 4 ಪಟ್ಟು ಹೆಚ್ಚಾಗಿದೆ. ಅಂದರೆ, ಬಡವರಿಗೆ ಮನೆಗಳನ್ನು ನಿರ್ಮಿಸಲು 4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ.. ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಪ್ರತಿ ಯೂರಿಯಾ ಚೀಲಕ್ಕೆ 3,000 ತಗುಲುತ್ತಿದೆ. ಆದರೆ ನಾವು ರೈತರಿಗೆ 300 ರೂಪಾಯಿಗೆ ಒದಗಿಸುತ್ತಿದ್ದೇವೆ. "ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ 3,000 ರೂಪಾಯಿಗಳಿಗೆ ಮಾರಾಟವಾಗುವ ಯೂರಿಯಾ ಚೀಲಗಳನ್ನು ನಾವು ನಮ್ಮ ರೈತರಿಗೆ 300 ರೂಪಾಯಿಗೆ ಒದಗಿಸುತ್ತೇವೆ. ಆದ್ದರಿಂದ ನಮ್ಮ ಸರ್ಕಾರವು ನಮ್ಮ ರೈತರಿಗೆ ಯೂರಿಯಾದ ಮೇಲೆ 10 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ನೀಡುತ್ತಿದೆ" ಎಂದು ಪ್ರಧಾನಿ ತಿಳಿಸಿದರು.
 
ಮುದ್ರಾ ಯೋಜನೆಯು ಸುಮಾರು 10 ಕೋಟಿ ನಾಗರಿಕರಿಗೆ ಉದ್ಯೋಗದಾತರಾಗಲು ಅನುವು ಮಾಡಿಕೊಟ್ಟಿದೆ
ಮುದ್ರಾ ಯೋಜನೆಯು ಕೋಟ್ಯಂತರ ನಾಗರಿಕರನ್ನು ಉದ್ಯಮಶೀಲರಾಗಲು ಅನುವು ಮಾಡಿಕೊಟ್ಟಿದೆ. ಇತರರಿಗೆ ಉದ್ಯೋಗದಾತರಾಗಲು ಅನುವು ಮಾಡಿಕೊಟ್ಟಿದೆ ಎಂದು ಪ್ರಧಾನಿ ವಿವರಿಸಿದರು. “20 ಲಕ್ಷ ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಮುದ್ರಾ ಯೋಜನೆಯು ನಮ್ಮ ದೇಶದ ಯುವಕರಿಗೆ ಸ್ವಯಂಉದ್ಯೋಗ, ವ್ಯವಹಾರಗಳು ಮತ್ತು ಉದ್ಯಮಗಳಿಗೆ ಅವಕಾಶಗಳನ್ನು ಒದಗಿಸಿದೆ. ಸುಮಾರು 8 ಕೋಟಿ ಜನರು ಹೊಸ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದ್ದು ಕೇವಲ 8 ಕೋಟಿ ಜನರಲ್ಲ, ಪ್ರತಿಯೊಬ್ಬ ಉದ್ಯಮಿಯು ಒಬ್ಬ ಅಥವಾ ಇಬ್ಬರು ವ್ಯಕ್ತಿಗಳಿಗೆ ಉದ್ಯೋಗ ಒದಗಿಸಿದ್ದಾರೆ. 8 ಕೋಟಿ ನಾಗರಿಕರು ಮುದ್ರಾ ಯೋಜನೆಯ ಪ್ರಯೋಜನ ಪಡೆದು, 8-10 ಕೋಟಿ ಹೊಸ ವ್ಯಕ್ತಿಗಳಿಗೆ ಉದ್ಯೋಗ ಒದಗಿಸುವ ಸಾಮರ್ಥ್ಯ  ಸಾಧಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉದ್ಯಮಶೀಲತೆ ವ್ಯವಹಾರಗಳನ್ನು ಬೆಂಬಲಿಸಲಾಯಿತು, ಇದರಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಂಎಸ್ಎಂಇ)ಗಳಿಗೆ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಆರ್ಥಿಕ ಬೆಂಬಲ ನೀಡಲಾಯಿತು. ಇದು ಉದ್ದಿಮೆಗಳು ಮುಳುಗದಂತೆ ತಡೆಯುತ್ತದೆ ಮತ್ತು ಅವರಿಗೆ ಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

"ಒಂದು ಶ್ರೇಣಿ ಒಂದು ಪಿಂಚಣಿ" ಉಪಕ್ರಮವು ನಮ್ಮ ಸೈನಿಕರಿಗೆ ಭಾರತದ ಖಜಾನೆಯಿಂದ 70,000 ಕೋಟಿ ರೂಪಾಯಿ ಮೊತ್ತದ ಲಾಭವನ್ನು ಹೇಗೆ ತಂದಿತು ಎಂಬುದನ್ನು ನೆನಪಿಸಿಕೊಂಡ ಪ್ರಧಾನಿ, ಯೋಧರಿಗೆ ಗೌರವ ಸಲ್ಲಿಸಿದರು. ನಮ್ಮ ನಿವೃತ್ತ ಸೈನಿಕರ ಕುಟುಂಬಗಳಿಗೆ ಈ ಹಣ ಸಿಕ್ಕಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಇವುಗಳು ಕೆಲವು ಉದಾಹರಣೆಗಳು ಅಷ್ಟೆ. ದೇಶದ ವಿವಿಧ ಮೂಲೆಗಳಲ್ಲಿ ಉದ್ಯೋಗ  ಸೃಷ್ಟಿಸುವ ಮೂಲಕ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಇನ್ನೂ ಹಲವು ಉಪಕ್ರಮಗಳಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ರಾಷ್ಟ್ರದ ಬಜೆಟ್ ವಿವಿಧ ವರ್ಗಗಳಾದ್ಯಂತ ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
 
"13.5 ಕೋಟಿ ಜನರು ಬಡತನದ ಸಂಕೋಲೆ ತೊಡೆದು ಹಾಕಿ, ಹೊಸ ಮಧ್ಯಮ ವರ್ಗವನ್ನು ಪ್ರವೇಶಿಸಿದ್ದಾರೆ"
ಈ ಎಲ್ಲಾ ಪ್ರಯತ್ನಗಳ ಫಲವಾಗಿ 13.5 ಕೋಟಿ ಬಡವರು ಬಡತನದ ಸಂಕೋಲೆಯಿಂದ ಹೊರಬಂದು, ಹೊಸ ಮಧ್ಯಮ ವರ್ಗವನ್ನು ಪ್ರವೇಶಿಸಿದ್ದಾರೆ. ಇದು ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಸಾಧ್ಯವಾಗಿದೆ, ಜೀವನದಲ್ಲಿ ಇದಕ್ಕಿಂತ ದೊಡ್ಡ ತೃಪ್ತಿ ಇನ್ನೊಂದಿಲ್ಲ. ವಸತಿ ಯೋಜನೆಗಳಿಂದ ಹಿಡಿದು ಪಿಎಂ ಸ್ವನಿಧಿ ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳಿಗೆ 50,000 ಕೋಟಿ ರೂಪಾಯಿ ಒದಗಿಸುವುದು ಸೇರಿದಂತೆ ಅನೇಕ ಯೋಜನೆಗಳು ಈ 13.5 ಕೋಟಿ ಜನರನ್ನು ಬಡತನದ ಕಷ್ಟದಿಂದ ಮೇಲಕ್ಕೆತ್ತಲು ಸಹಾಯ ಮಾಡಿವೆ ಎಂದು ಪ್ರಧಾನಿ ಹೇಳಿದರು.

****



(Release ID: 1949153) Visitor Counter : 98