ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸಚಿವರಾದ ಶ್ರೀ ಅನುರಾಗ್ ಠಾಕೂರ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ಸಹಾಯಕ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಮೊದಲ ದೆಹಲಿ-ಧರ್ಮಶಾಲಾ-ದೆಹಲಿ ʻಇಂಡಿಗೊʼ ವಿಮಾನಕ್ಕೆ ಹಸಿರು ನಿಶಾನೆ ತೋರಿದರು


ಇಂಡಿಗೋ ವಿಮಾನದಿಂದ ರಾಜ್ಯದ ಅರ್ಧದಷ್ಟು ಜನರಿಗೆ ಅನುಕೂಲವಾಗಲಿದೆ: ಶ್ರೀ ಅನುರಾಗ್ ಠಾಕೂರ್;  ಭಾರತದ ಎಲ್ಲೆಡೆಯಿಂದ ನೇರ ಸಂಪರ್ಕಕ್ಕಾಗಿ ಸಚಿವರ ಮನವಿ

ಮುಂದಿನ 3-4 ವರ್ಷಗಳಲ್ಲಿ 200 ವಿಮಾನ ನಿಲ್ದಾಣಗಳು, ʻವಾಟರ್ ಡ್ರಾಪ್‌ʼಗಳು ಮತ್ತು ʻಹೆಲಿಪೋರ್ಟ್ʼಗಳನ್ನು ಹೊಂದುವ ಗುರಿ ಇರಿಸಿಕೊಳ್ಳಲಾಗಿದೆ: ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ

ಧರ್ಮಶಾಲಾ ವಿಮಾನ ನಿಲ್ದಾಣದ ವಿಸ್ತರಣೆಗೆ 2 ಹಂತದ ಯೋಜನೆ ನಡೆಯುತ್ತಿದೆ, ಅಂತಿಮವಾಗಿ ʻಏರ್ಬಸ್ ಎ 320ʼ ಅನ್ನು ಇಳಿಸುವ ಗುರಿ ಹೊಂದಲಾಗಿದೆ: ಶ್ರೀ ಸಿಂಧಿಯಾ

Posted On: 26 MAR 2023 11:20AM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಹಾಯಕ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಇಂದು ದೆಹಲಿ-ಧರ್ಮಶಾಲಾ-ದೆಹಲಿ ಮೊದಲ ʻಇಂಡಿಗೊ ಏರ್‌ಲೈನ್ಸ್‌ʼ ವಿಮಾನಕ್ಕೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹಿಮಾಚಲ ಪ್ರದೇಶಕ್ಕೆ ಇಂಡಿಗೊ ಸಂಪರ್ಕವನ್ನು ಸುಗಮಗೊಳಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಗುಡ್ಡಗಾಡು ರಾಜ್ಯಕ್ಕೆ ಹಾರದ ಹೊರತು ʻಇಂಡಿಗೊʼ ನೈಜವಾಗಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಶ್ರೀ ಠಾಕೂರ್ ಅವರು ದೊಡ್ಡ ವಿಮಾನ ನಿಲ್ದಾಣಕ್ಕಾಗಿ ಪ್ರತಿಪಾದಿಸಿದರು ಮತ್ತು ಪ್ರಸ್ತುತ ಭಾರತದ ಯಾವುದೇ ಭಾಗದಿಂದ ಹಿಮಾಚಲಕ್ಕೆ ಬರುವ ಪ್ರಯಾಣಿಕರು ದೆಹಲಿಗೆ ಹೋಗಬೇಕು ಮತ್ತು ನಂತರ ಅಲ್ಲಿಂದ ರಾಜ್ಯಕ್ಕೆ ಸಂಪರ್ಕಿಸುವ ವಿಮಾನಗಳನ್ನು ಹತ್ತಬೇಬೇಕಾಗಿದೆ. ದೊಡ್ಡ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ನೇರ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ ಎಂದು ಹೇಳಿದರು.

ದೇಶದಲ್ಲಿ ವಿಮಾನ ನಿಲ್ದಾಣ ಮೂಲಸೌಕರ್ಯಗಳ ತ್ವರಿತ ವಿಸ್ತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಶ್ರೀ ಠಾಕೂರ್, ಅಲ್ಪಾವಧಿಯಲ್ಲಿ ಈ ಸಂಖ್ಯೆ 74 ರಿಂದ 140ಕ್ಕೆ ಏರಿದೆ ಎಂದು ಹೇಳಿದರು. ʻಉಡಾನ್ʼ ಯೋಜನೆಯಿಂದಾಗಿಯೇ ಹವಾಯಿ ಚಪ್ಪಲ್ ಹಾಕುವ ಜನರು ಕೂಡಾ ವಾಯು ಮಾರ್ಗದಲ್ಲಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು.

ವಿಮಾನ ನಿಲ್ದಾಣವು ಒದಗಿಸುವ ಸೇವೆಯ ಪ್ರಮಾಣದ ಬಗ್ಗೆ ಮಾತನಾಡಿದ ಶ್ರೀ ಠಾಕೂರ್, ಧರ್ಮಶಾಲಾ ವಿಮಾನ ನಿಲ್ದಾಣವು ಐದು ಜಿಲ್ಲೆಗಳ ನಡುವೆ ಸುಲಭ ಸಂಪರ್ಕ ಕಲ್ಪಿಸುತ್ತದೆ. ರಾಜ್ಯದ ಅರ್ಧದಷ್ಟು ಜನಸಂಖ್ಯೆಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಈ ಏಕೈಕ ʻಇಂಡಿಗೊʼ ವಿಮಾನವು ರಾಜ್ಯದ ಅರ್ಧದಷ್ಟು ಮತ್ತು ಪಂಜಾಬ್‌ನ ಕೆಲವು ಸ್ಥಳಗಳನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಕೇಂದ್ರದ ಸಹಾಯಕ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಮಾತನಾಡಿ, “ಧರ್ಮಶಾಲಾ ವಿಮಾನ ನಿಲ್ದಾಣವು 1990ರಲ್ಲಿ ತನ್ನ ಮೊದಲ ಹಾರಾಟವನ್ನು ಕಂಡಿತು, ನಂತರ ಅದರ ಕಾರ್ಯಾಚರಣೆಯನ್ನು ವಿಸ್ತರಿಸಿತು. ಈಗ 1376 ಮೀಟರ್ ರನ್‌ವೇಯನ್ನು ಹೊಂದಿದೆ ಎಂದು ಹೇಳಿದರು. ಸ್ಥಳಾವಕಾಶ ಅನುಮತಿಸಿದರೆ ರನ್‌ವೇಯನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಸಚಿವರು ಹೇಳಿದರು. ದಲೈ ಲಾಮಾ ಅವರ ಉಪಸ್ಥಿತಿಯಿಂದಾಗಿ ವಿಮಾನ ನಿಲ್ದಾಣವು ಸಾಕಷ್ಟು ಪ್ರಯಾಣಿಕರ ದಟ್ಟಣೆಗೆ ಸಾಕ್ಷಿಯಾಗುತ್ತದೆ. ಜೊತೆಗೆ ಇಡೀ ವಾಯುವ್ಯ ಹಿಮಾಚಲ ಪ್ರದೇಶಕ್ಕೆ ವಾಯು ಸಂಪರ್ಕವನ್ನು ಒದಗಿಸುತ್ತದೆ. ʻಇಂಡಿಗೊʼ ವಿಮಾನವು ಹಿಮಾಚಲಕ್ಕೆ ಪ್ರವಾಸಿಗರನ್ನು ಹೆಚ್ಚಿಸುತ್ತದೆ ಮತ್ತು ಇದು ರಾಜ್ಯದ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು, ʻʻನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಲ್ಲಿ ಸಾಧಿಸದಿದ್ದನ್ನು ಕಳೆದ 9 ವರ್ಷಗಳಲ್ಲಿ ಸಾಧಿಸಲಾಗಿದೆ. 148 ವಿಮಾನ ನಿಲ್ದಾಣಗಳು, ವಾಟರ್‌ಡ್ರೋಮ್‌ ಮತ್ತು ಹೆಲಿಪೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯನ್ನು 200ಕ್ಕಿಂತ ಅಧಿಕಗೊಳಿಸುವ ಗುರಿಯತ್ತ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈ ಪ್ರಯತ್ನವು ದೊಡ್ಡ ಮೆಟ್ರೋ ವಿಮಾನ ನಿಲ್ದಾಣಗಳು ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ದೂರದ ವಿಮಾನ ನಿಲ್ದಾಣಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು.

ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಸೃಷ್ಟಿಸುವ ಶ್ರೀ ಅನುರಾಗ್ ಠಾಕೂರ್ ಅವರ ಪ್ರಯತ್ನಗಳನ್ನು ಶ್ರೀ ಸಿಂಧಿಯಾ ಶ್ಲಾಘಿಸಿದರು ಮತ್ತು ಅವರ ಕಠಿಣ ಪ್ರಯತ್ನಗಳಿಂದಾಗಿ, ಧರ್ಮಶಾಲಾ ಇಂದು ಪ್ರಾದೇಶಿಕ ಅಥವಾ ರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ನ ಕೇಂದ್ರವಾಗಿದೆ ಎಂದು ಹೇಳಿದರು. ಅವರು ಧರ್ಮಶಾಲಾದಲ್ಲಿನ ಭವ್ಯವಾದ ಕ್ರೀಡಾಂಗಣವನ್ನು ವಿಶ್ವದ ಅತ್ಯುತ್ತಮ ಕ್ರೀಡಾಂಗಣಕ್ಕೆ ಹೋಲಿಕೆ ಮಾಡಿದರು. ಕ್ರಿಕೆಟ್‌ನಿಂದಾಗಿ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಳವಾಗಿದೆ ಮತ್ತು ಇದರ ಶ್ರೇಯಸ್ಸು ಶ್ರೀ ಅನುರಾಗ್ ಠಾಕೂರ್ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಧರ್ಮಶಾಲಾ ವಿಮಾನ ನಿಲ್ದಾಣದ ವಿಸ್ತರಣೆಯಾಗಬೇಕೆಂದು ಶ್ರೀ ಅನುರಾಗ್ ಠಾಕೂರ್ ಅವರು ಮಾಡಿದ ಮನವಿಗೆ ಸಚಿವರು ಸಮ್ಮತಿ ಸೂಚಿಸಿದರು. ಅಲ್ಲದೆ, ಅವರ ಸಚಿವಾಲಯವು ಈಗಾಗಲೇ ಇದಕ್ಕಾಗಿ 2 ಹಂತದ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಮೊದಲ ಹಂತವು ಪ್ರಸ್ತುತ ರನ್‌ವೇಯನ್ನು 1900 ಮೀಟರ್‌ಗೆ ವಿಸ್ತರಿಸುವುದನ್ನು ಒಳಗೊಂಡಿದೆ. ಇದರಿಂದಾಗಿ ಲೋಡ್ ದಂಡದೊಂದಿಗೆ ಇಳಿಯುವ ಟರ್ಬೊಪ್ರೊಪ್ ವಿಮಾನಗಳು ಅಂತಹ ದಂಡವಿಲ್ಲದೆ ಚಲಿಸಲು ಅನುವಾಗಲಿದೆ. ಎರಡನೇ ಹಂತದಲ್ಲಿ ʻಬೋಯಿಂಗ್ 737ʼ ಮತ್ತು ʻಏರ್‌ಬಸ್‌-ಎ 320ʼ ವಿಮಾನಗಳು ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಆಶಯವನ್ನು ಸಾಕಾರಗೊಳಿಸಲು ರನ್‌ವೇಯನ್ನು 3110 ಮೀಟರ್‌ಗೆ ವಿಸ್ತರಿಸುವುದು ಎಂದು ಅವರು ಮಾಹಿತಿ ನೀಡಿದರು. 

ರಾಜ್ಯದಲ್ಲಿನ ತಮ್ಮ ಸಚಿವಾಲಯದ ಇತರ ಸಾಧನೆಗಳ ಬಗ್ಗೆ ಮಾತನಾಡಿದ ಶ್ರೀ ಸಿಂಧಿಯಾ, ಶಿಮ್ಲಾ ವಿಮಾನ ನಿಲ್ದಾಣದಲ್ಲಿ ರನ್‌ವೇ ಪುನಃಸ್ಥಾಪನೆ ಪೂರ್ಣಗೊಂಡಿದೆ ಮತ್ತು ಮಂಡಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಸ್ಥಳ ಅನುಮತಿ ನೀಡಲಾಗಿದೆ ಎಂದರು. ರಾಜ್ಯದಲ್ಲಿ ನಾಗರಿಕ ವಿಮಾನಯಾನ ಮೂಲಸೌಕರ್ಯ ಅಭಿವೃದ್ಧಿಗೆ ತಮ್ಮ ಸಚಿವಾಲಯ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

"ನಾಗರಿಕ ವಿಮಾನಯಾನ ಕ್ಷೇತ್ರವು ಸಂಪೂರ್ಣ ಪ್ರಜಾಸತ್ತಾತ್ಮಕವಾಗಿದೆ. ಮಾನಗಳ ಹಾರಾಟವನ್ನು ಮಾತ್ರ ವೀಕ್ಷಿಸಲು ಸಾಧ್ಯವಿದ್ದವರು ಇಂದು ಅದರಲ್ಲಿ ಹಾರಾಡುತ್ತಿದ್ದಾರೆ," ಎಂದು ಸಚಿವರು ಹೇಳಿದರು. ʻಉಡಾನ್ʼ ಯೋಜನೆಯ ರೂಪದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯು ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆಗೆ 1 ಕೋಟಿ 15 ಲಕ್ಷ ಜನರನ್ನು ಸೇರಿಸಿದೆ ಎಂದು ಹೇಳಿದರು.

ಹಿಮಾಚಲ ರಾಜ್ಯಕ್ಕೆ ʻಉಡಾನ್ʼ ಅಡಿಯಲ್ಲಿ 44 ಮಾರ್ಗಗಳನ್ನು ಒದಗಿಸಲಾಗಿದ್ದು, ಅವುಗಳಲ್ಲಿ 22 ಮಾರ್ಗಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದರು. ರಾಜ್ಯದಲ್ಲಿ ಸಚಿವಾಲಯದ ಸಾಧನೆಗಳನ್ನು ಎತ್ತಿ ತೋರಿಸಿದ ಸಚಿವರು, 2013-14ರಲ್ಲಿ ವಿಮಾನಗಳ ಸಂಪರ್ಕಗಳ ಸಂಖ್ಯೆ ವಾರಕ್ಕೆ 40 ಇದ್ದದ್ದು ಈಗ 110ಕ್ಕೆ ಏರಿದೆ. ಇದು 9 ವರ್ಷಗಳಲ್ಲಿ 175% ಹೆಚ್ಚಳವಾಗಿದೆ ಎಂದು ಹೇಳಿದರು. ವಿಶೇಷವಾಗಿ ಧರ್ಮಶಾಲಾದಲ್ಲಿ 2013-14ರಲ್ಲಿ ವಾರಕ್ಕೆ 28ರಷ್ಟಿದ್ದ ಏರ್‌ ಟ್ರಾಫಿಕ್‌ ಚಲನವಲನ ಕಳೆದ 9 ವರ್ಷಗಳಲ್ಲಿ ಶೇ.110ರಷ್ಟು ಏರಿಕೆಯಾಗಿದ್ದು, ಇಂದು 50ಕ್ಕೆ ಏರಿದೆ ಎಂದರು.

ಹಿಮಾಚಲ ಪ್ರದೇಶದ ಕಾಂಗ್ರಾ ಸಂಸದ ಶ್ರೀ ಕಿಶನ್ ಕಪೂರ್ ಅವರು ಮಾತನಾಡಿ, “ರಾಜ್ಯದ ಜನರಿಗೆ ವಾಯು ಸಂಪರ್ಕಕ್ಕೆ ಈ ವಿಮಾನ ಪ್ರಮುಖ ಕೊಡುಗೆಯಾಗಿದೆ,” ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರಾಜ್ಯವು ಪ್ರವಾಸಿ ಚಟುವಟಿಕೆಯಲ್ಲಿ ಭಾರಿ ಕುಸಿತವನ್ನು ಕಂಡಿತು. ಈಗ ಅದು ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ ಎಂದರು. ಧರ್ಮಶಾಲಾಕ್ಕೆ ಹಾರುವ ವಿಮಾನಗಳ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವುದನ್ನು ಪರಿಗಣಿಸುವಂತೆ ಶ್ರೀ ಕಪೂರ್ ನಾಗರಿಕ ವಿಮಾನಯಾನ ಸಚಿವಾಲಯವನ್ನು ವಿನಂತಿಸಿದರು.

ʻಇಂಡಿಗೊ ಏರ್‌ಲೈನ್ʼ ದೆಹಲಿಯಿಂದ ಧರ್ಮಶಾಲಾಗೆ ದೈನಂದಿನ ವಿಮಾನಗಳನ್ನು ನಿರ್ವಹಿಸಲಿದೆ. ಈ ಹೊಸ ವಲಯವು ʻಇಂಡಿಗೊʼದ ದೈನಂದಿನ ವಿಮಾನಗಳ ಸಂಖ್ಯೆಯನ್ನು 1795ಕ್ಕೆ ಕೊಂಡೊಯ್ದಿದೆ ಅಲ್ಲದೆ, ನಿರ್ಗಮನದ ವಿಷಯದಲ್ಲಿ ʻಇಂಡಿಗೋʼ ಅನ್ನು ವಿಶ್ವದ ಏಳನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿಸಿದೆ.

****



(Release ID: 1910954) Visitor Counter : 108