ಪ್ರಧಾನ ಮಂತ್ರಿಯವರ ಕಛೇರಿ

 ಗೋರಖ್ ಪುರ ಸಂಸದ್ (ವಿಶೇಷ) ಖೇಲ್ (ಕ್ರೀಡೆ) ಮಹಾಕುಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ


"ಕ್ರೀಡಾ ಮನೋಭಾವವು ಭವಿಷ್ಯದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ"

ಪ್ರಾದೇಶಿಕ ಮಟ್ಟದ ಸ್ಪರ್ಧೆಗಳು ಸ್ಥಳೀಯ ಪ್ರತಿಭೆಗಳ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಇಡೀ ಪ್ರದೇಶದ ಆಟಗಾರರ ನೈತಿಕ ಸ್ಥೈರ್ಯವನ್ನೂ ಹೆಚ್ಚಿಸುತ್ತದೆ" 

ಸಂಸದ್ ಖೇಲ್ ಮಹಾಕುಂಭವು ಹೊಸ ಮಾರ್ಗ, ಹೊಸ ವ್ಯವಸ್ಥೆ"ಯಾಗಿದೆ

ಕ್ರೀಡಾ ಜಗತ್ತಿನಲ್ಲಿ ದೇಶದ ಸಾಮರ್ಥ್ಯವನ್ನು ಎತ್ತಿ ತೋರಿಸುವಲ್ಲಿ ಸಂಸದ್ ಖೇಲ್ ಮಹಾಕುಂಭವು ದೊಡ್ಡ ಪಾತ್ರವನ್ನು ವಹಿಸುತ್ತದೆ" 

ಸಂಸದ್ ಖೇಲ್ ಮಹಾಕುಂಭವು ಕ್ರೀಡೆಯ ಭವಿಷ್ಯದ ಭವ್ಯ ಮೂಲಸೌಕರ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತದೆ" 

ಕ್ರೀಡಾ ಸಚಿವಾಲಯದ ಬಜೆಟ್ ಹಂಚಿಕೆ 2014ಕ್ಕೆ ಹೋಲಿಸಿದರೆ ಸುಮಾರು 3 ಪಟ್ಟು ಹೆಚ್ಚಾಗಿದೆ" 

Posted On: 16 FEB 2023 3:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗೋರಖ್ ಪುರ ಸಂಸದ್ ಖೇಲ್ ಮಹಾಕುಂಭ ಉದ್ದೇಶಿಸಿ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಮಟ್ಟವನ್ನು ತಲುಪಲು ಎಲ್ಲ ಕ್ರೀಡಾಪಟುಗಳು ಶ್ರಮಿಸಿದ್ದಾರೆ ಎಂದರು. ಗೆಲುವು ಮತ್ತು ಸೋಲು ಕ್ರೀಡಾ ಕ್ಷೇತ್ರ ಮತ್ತು ಜೀವನದ ಭಾಗವಾಗಿದೆ ಎಂದು ಒತ್ತಿಹೇಳಿದ ಅವರು, ಎಲ್ಲಾ ಕ್ರೀಡಾಪಟುಗಳು ಗೆಲುವಿನ ಪಾಠವನ್ನು ಕಲಿತಿದ್ದಾರೆ ಎಂದು ಹೇಳಿದರು. ಕ್ರೀಡಾ ಮನೋಭಾವವು ಭವಿಷ್ಯದಲ್ಲಿ ಎಲ್ಲ ಕ್ರೀಡಾಪಟುಗಳಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಖೇಲ್ ಮಹಾಕುಂಭದ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಉಪಕ್ರಮದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕುಸ್ತಿ, ಕಬಡ್ಡಿ ಮತ್ತು ಹಾಕಿಯಂತಹ ಕ್ರೀಡೆಗಳ ಜೊತೆಗೆ ಈ ಸ್ಪರ್ಧೆಯಲ್ಲಿ ಚಿತ್ರಕಲೆ, ಜಾನಪದ ಗೀತೆಗಳು, ಜಾನಪದ ನೃತ್ಯ ಮತ್ತು ತಬಲಾ-ಕೊಳಲು ಇತ್ಯಾದಿ ಕ್ಷೇತ್ರದ ಕಲಾವಿದರೂ ಭಾಗವಹಿಸಿದ್ದಾರೆ ಎಂದು ಉಲ್ಲೇಖಿಸಿದರು. "ಅದು ಕ್ರೀಡಾ ಪ್ರತಿಭೆಯಾಗಿರಲಿ ಅಥವಾ ಕಲೆ-ಸಂಗೀತವಾಗಿರಲಿ, ಅದರ ಸ್ಫೂರ್ತಿ ಮತ್ತು ಅದರ ಚೈತನ್ಯ ಎಲ್ಲವೂ ಒಂದೇ ಆಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಭಾರತೀಯ ಸಂಪ್ರದಾಯಗಳು ಮತ್ತು ಜಾನಪದ ಕಲಾ ಪ್ರಕಾರಗಳನ್ನು ಮುಂದೆ ಕೊಂಡೊಯ್ಯುವ ನೈತಿಕ ಜವಾಬ್ದಾರಿಯ ಬಗ್ಗೆ ಅವರು ಒತ್ತಿ ಹೇಳಿದರು. ಗೋರಖ್ ಪುರದ ಸಂಸತ್ ಸದಸ್ಯ ಶ್ರೀ ರವಿ ಕಿಶನ್ ಶುಕ್ಲಾ ಅವರು ಕಲಾವಿದರಾಗಿ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಕಳೆದ ಕೆಲವು ವಾರಗಳಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದ ಸಂಸದ್ ಖೇಲ್ ಮಹಾಕುಂಭದಲ್ಲಿ ಇದು ಮೂರನೇ ಕಾರ್ಯಕ್ರಮವಾಗಿದೆ. ಭಾರತವು ವಿಶ್ವದ ಕ್ರೀಡಾ ಶಕ್ತಿಯಾಗಬೇಕಾದರೆ ಹೊಸ ಮಾರ್ಗಗಳು ಮತ್ತು ವ್ಯವಸ್ಥೆಗಳನ್ನು ರೂಪಿಸುವ ಆಲೋಚನೆಯನ್ನು ಅವರು ಪುನರುಚ್ಚರಿಸಿದರು. ಪ್ರತಿಭೆಗಳನ್ನು ಉತ್ತೇಜಿಸಲು ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಾದೇಶಿಕ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು ಸ್ಥಳೀಯ ಪ್ರತಿಭೆಗಳನ್ನು ಹೆಚ್ಚಿಸುವುದಲ್ಲದೆ ಇಡೀ ಪ್ರದೇಶದ ಆಟಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದರು. "ಸಂಸದ್ ಖೇಲ್ ಮಹಾಕುಂಭವು ಅಂತಹ ಹೊಸ ಮಾರ್ಗ, ಹೊಸ ವ್ಯವಸ್ಥೆ"ಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಗೋರಖ್ ಪುರ ಖೇಲ್ ಮಹಾಕುಂಭದ ಮೊದಲ ಆವೃತ್ತಿಯಲ್ಲಿ 20,000 ಕ್ರೀಡಾಪಟುಗಳು ಭಾಗವಹಿಸಿದ್ದರು ಈಗ ಆ ಸಂಖ್ಯೆ 24,000ಕ್ಕೆ ಏರಿದೆ, ಇದರಲ್ಲಿ 9,000 ಕ್ರೀಡಾಪಟುಗಳು ಮಹಿಳೆಯರಾಗಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಖೇಲ್ ಮಹಾಕುಂಭದಲ್ಲಿ ಭಾಗವಹಿಸುವ ಸಾವಿರಾರು ಯುವಕರು ಸಣ್ಣ ಪಟ್ಟಣಗಳು ಅಥವಾ ಹಳ್ಳಿಗಳಿಂದ ಬಂದವರು ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಸದ್ ಖೇಲ್ ಮಹಾಕುಂಭವು ಯುವ ಆಟಗಾರರಿಗೆ ಅವಕಾಶಗಳನ್ನು ಒದಗಿಸುವ ಹೊಸ ವೇದಿಕೆಯಾಗಿ ಮಾರ್ಪಟ್ಟಿದೆ ಎಂದರು.

"ವಯಸ್ಸನ್ನು ಲೆಕ್ಕಿಸದೆ, ಪ್ರತಿಯೊಬ್ಬರೂ ಸದೃಢವಾಗಿರಲು ಆಂತರಿಕ ಬಯಕೆಯನ್ನು ಹೊಂದಿರುತ್ತಾರೆ", ಎಂದು ಪ್ರಧಾನಮಂತ್ರಿ ಹೇಳಿದರು. ಕ್ರೀಡೆಗಳು ಮತ್ತು ಆಟಗಳು ಗ್ರಾಮೀಣ ಜಾತ್ರೆಗಳ ಭಾಗವಾಗಿದ್ದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಖಾಡಗಳಲ್ಲಿ ವಿವಿಧ ಆಟಗಳನ್ನು ಆಯೋಜಿಸಲಾಗುತ್ತಿತ್ತು ಎಂದು ಸ್ಮರಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ಹಳೆಯ ಪದ್ಧತಿಗಳು ಕ್ಷೀಣಿಸುತ್ತಿವೆ ಎಂದು ವಿಷಾದಿಸಿದರು. ಈಗ ಕಾಲ ಕಳೆಯುವ (ಟೈಮ್ ಪಾಸ್) ಅವಧಿಗಳೆಂದು ಪರಿಗಣಿಸಲಾಗುತ್ತಿರುವ ಶಾಲೆಗಳ ಪಿಟಿ ಪಿರಿಯಡ್ ಬಗ್ಗೆಯೂ ಅವರು ಪ್ರಸ್ತಾಪಿಸಿದ ಅವರು,  ಇದು ದೇಶವು ಮೂರು-ನಾಲ್ಕು ತಲೆಮಾರುಗಳ ಕ್ರೀಡಾ ಕೊಡುಗೆದಾರರನ್ನು ಕಳೆದುಕೊಳ್ಳುವಂತೆ ಮಾಡಿತು ಎಂದು ಹೇಳಿದರು. ಟಿವಿಯಲ್ಲಿ ನಡೆಯುವ ಪ್ರತಿಭಾನ್ವೇಷಣೆ ಕಾರ್ಯಕ್ರಮಗಳಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿವೆ ಮತ್ತು ಕ್ರೀಡಾ ಜಗತ್ತಿನಲ್ಲಿ ದೇಶದ ಸಾಮರ್ಥ್ಯವನ್ನು ಎತ್ತಿ ತೋರಿಸುವಲ್ಲಿ ಸಂಸದ್ ಖೇಲ್ ಮಹಾಕುಂಭ ದೊಡ್ಡ ಪಾತ್ರ ವಹಿಸುತ್ತದೆ ಎಂದರು.

ದೇಶದಲ್ಲಿ ನೂರಾರು ಸಂಸತ್ ಸದಸ್ಯರು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಯುವ ಆಟಗಾರರು ಪ್ರಗತಿ ಸಾಧಿಸಲು ಅವಕಾಶ ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೋಗುತ್ತಾರೆ ಮತ್ತು ಒಲಿಂಪಿಕ್ಸ್ ನಂತಹ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ ಎಂದು ಅವರು ಒತ್ತಿ ಹೇಳಿದರು. "ಸಂಸದ್ ಖೇಲ್ ಮಹಾಕುಂಭವು ಕ್ರೀಡೆಯ ಭವಿಷ್ಯದ ಭವ್ಯ ಮೂಲಸೌಕರ್ಯಕ್ಕೆ ಬಲಿಷ್ಠ ಬುನಾದಿಯನ್ನು ಹಾಕುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಗೋರಖ್ ಪುರದ ಪ್ರಾದೇಶಿಕ ಕ್ರೀಡಾ ಕ್ರೀಡಾಂಗಣದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಸಣ್ಣ ಪಟ್ಟಣಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಗೋರಖ್ಪುರದ ಗ್ರಾಮೀಣ ಪ್ರದೇಶದ ಯುವಕರಿಗಾಗಿ 100 ಕ್ಕೂ ಹೆಚ್ಚು ಆಟದ ಮೈದಾನಗಳನ್ನು ನಿರ್ಮಿಸಲಾಗಿದೆ ಮತ್ತು ಚೌರಿ ಚೌರಾದಲ್ಲಿ ಮಿನಿ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. "ಈಗ ದೇಶವು ಸಮಗ್ರ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಖೇಲೋ ಇಂಡಿಯಾ ಆಂದೋಲನದಡಿ ಇತರ ಕ್ರೀಡಾ ಸೌಲಭ್ಯಗಳ ಜೊತೆಗೆ ಆಟಗಾರರಿಗೆ ತರಬೇತಿ ನೀಡಲು ಆದ್ಯತೆ ನೀಡಿರುವುದನ್ನು ಒತ್ತಿ ಹೇಳಿದರು.

2014ಕ್ಕೆ ಹೋಲಿಸಿದರೆ ಕ್ರೀಡಾ ಸಚಿವಾಲಯದ ಬಜೆಟ್ ಹಂಚಿಕೆ ಸುಮಾರು 3 ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ದೇಶದಲ್ಲಿ ಅನೇಕ ಆಧುನಿಕ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಆಟಗಾರರಿಗೆ ತರಬೇತಿಗಾಗಿ ಲಕ್ಷಾಂತರ ರೂಪಾಯಿಗಳ ನೆರವು ನೀಡುವ ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಅನ್ನು ಅವರು ಎತ್ತಿ ತೋರಿಸಿದರು. ಖೇಲೋ ಇಂಡಿಯಾ, ಫಿಟ್ ಇಂಡಿಯಾ ಮತ್ತು ಯೋಗದಂತಹ ಅಭಿಯಾನಗಳ ಬಗ್ಗೆಯೂ ಅವರು ಮಾತನಾಡಿದರು. ಸಿರಿಧಾನ್ಯಗಳಿಗೆ ದೇಶವು ಶ್ರೀ ಅನ್ನದ ಗುರುತನ್ನು ನೀಡಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಜೋಳ ಮತ್ತು ಸಜ್ಜೆಯಂತಹ ಸಿರಿ ಧಾನ್ಯಗಳು ಮಹಾನ್ ಆಹಾರಗಳ ವರ್ಗಕ್ಕೆ ಸೇರುತ್ತವೆ ಎಂದರು. ಯುವಕರು ಈ ಅಭಿಯಾನಗಳಲ್ಲಿ ಕೈಜೋಡಿಸಬೇಕು ಮತ್ತು ದೇಶದ ಈ ಧ್ಯೇಯವನ್ನು ಮುನ್ನಡೆಸಬೇಕು ಎಂದು ಪ್ರಧಾನಮಂತ್ರಿ ಆಗ್ರಹಿಸಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, "ಇಂದು, ಒಲಿಂಪಿಕ್ಸ್ ನಿಂದ ಹಿಡಿದು ಇತರ ದೊಡ್ಡ ಪಂದ್ಯಾವಳಿಗಳವರೆಗೆ, ನಿಮ್ಮಂತಹ ಯುವ ಆಟಗಾರರು ಮಾತ್ರ ಪದಕಗಳನ್ನು ಗೆಲ್ಲುವ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ" ಎಂದು ಹೇಳಿದರು. ಯುವಕರು ಪ್ರಕಾಶಮಾನವಾಗಿ ಬೆಳಗುತ್ತಾರೆ, ಮತ್ತು ತಮ್ಮ ಯಶಸ್ಸಿನ ಹೊಳಪಿನಿಂದ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಗೋರಖ್ ಪುರದ ಸಂಸತ್ ಸದಸ್ಯ ಶ್ರೀ ರವಿ ಕಿಶನ್ ಶುಕ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****



(Release ID: 1899943) Visitor Counter : 164