ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದ  14 ನೇ ಆವೃತ್ತಿಯನ್ನು ಪ್ರಧಾನಮಂತ್ರಿಯವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು

​​​​​​​
ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು

"ಬೆಂಗಳೂರಿನ ಆಗಸವು ನವ ಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಈ ಹೊಸ ಎತ್ತರವೇ ನವ ಭಾರತದ ವಾಸ್ತವವಾಗಿದೆ”

"ದೇಶವನ್ನು ಬಲಪಡಿಸಲು ಕರ್ನಾಟಕದ ಯುವಜನತೆ ತಮ್ಮ ತಾಂತ್ರಿಕ ಪರಿಣತಿಯನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಬೇಕು"

"ಹೊಸ ಚಿಂತನೆ, ಹೊಸ ವಿಧಾನದೊಂದಿಗೆ ದೇಶವು ಮುನ್ನಡೆದರೆ, ಅದರ ವ್ಯವಸ್ಥೆಗಳು ಹೊಸ ಚಿಂತನೆಗೆ ಅನುಗುಣವಾಗಿ ಬದಲಾಗಲು ಆರಂಭಿಸುತ್ತವೆ"

"ಇಂದು, ಏರೋ ಇಂಡಿಯಾ ಕೇವಲ ಪ್ರದರ್ಶನ ಮಾತ್ರವಲ್ಲ, ಇದು ರಕ್ಷಣಾ ಉದ್ಯಮದ ವ್ಯಾಪ್ತಿಯನ್ನು ಮಾತ್ರವಲ್ಲದೆ ಭಾರತದ ಆತ್ಮ ವಿಶ್ವಾಸವನ್ನು ಪ್ರದರ್ಶಿಸುತ್ತದೆ"

"21ನೇ ಶತಮಾನದ ನವ ಭಾರತವು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಪ್ರಯತ್ನದಲ್ಲಿ ಕೊರತೆ ಕಾಣುವುದಿಲ್ಲ"

"ಭಾರತವು ಅತಿ ದೊಡ್ಡ ರಕ್ಷಣಾ ಉತ್ಪಾದನಾ ರಾಷ್ಟ್ರಗಳಲ್ಲಿ ಸೇರ್ಪಡೆಗೊಳ್ಳಲು ತ್ವರಿತ ದಾಪುಗಾಲುಗಳನ್ನು ಹಾಕುತ್ತದೆ ಮತ್ತು ನಮ್ಮ ಖಾಸಗಿ ವಲಯ ಮತ್ತು ಹೂಡಿಕೆದಾರರು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ"

"ಇಂದಿನ ಭಾರತವು ವೇಗವಾಗಿ ಯೋಚಿಸುತ್ತದೆ, ದೂರದೃಷ್ಟಿಯಿಂದ ಯೋಚಿಸುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ"

"ಏರೋ ಇಂಡಿಯಾದ ಕಿವಿಗಡಚಿಕ್ಕುವ ಘರ್ಜನೆಯು ಭಾರತದ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಸಂದೇಶವನ್ನು ಪ್ರತಿಧ್ವನಿಸುತ್ತದೆ"

Posted On: 13 FEB 2023 10:45AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದ 14 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಏರೋ ಇಂಡಿಯಾ 2023 ರ ಘೋಷವಾಕ್ಯ "ಕೋಟ್ಯಂತರ ಅವಕಾಶಗಳಿಗೆ ರನ್‌ ವೇ”. ಸುಮಾರು 100 ವಿದೇಶಿ ಮತ್ತು 700 ಭಾರತೀಯ ಕಂಪನಿಗಳು ಸೇರಿದಂತೆ 800 ರಕ್ಷಣಾ ಕಂಪನಿಗಳ ಜೊತೆಗೆ 80 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಗಲಿದೆ. ಪ್ರಧಾನಮಂತ್ರಿಯವರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ದೃಷ್ಟಿಕೋನಕ್ಕೆ ಅನುಗುಣವಾಗಿ, ಸ್ವದೇಶಿ ಉಪಕರಣಗಳು/ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವ ಬಗ್ಗೆ ಈ ಪ್ರದರ್ಶನವು ಗಮನ ಕೇಂದ್ರೀಕರಿಸುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಬೆಂಗಳೂರಿನ ಆಗಸವು ನವಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಈ ಹೊಸ ಎತ್ತರವು ನವ ಭಾರತದ ವಾಸ್ತವವಾಗಿದೆ, ಇಂದು ಭಾರತವು ಹೊಸ ಎತ್ತರಗಳನ್ನು ಮುಟ್ಟುತ್ತಿದೆ ಮತ್ತು ಅವುಗಳನ್ನೂ ಮೀರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಏರೋ ಇಂಡಿಯಾ 2023 ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಉಜ್ವಲ ಉದಾಹರಣೆಯಾಗಿದೆ ಮತ್ತು ಈ ಸಮಾರಂಭದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಉಪಸ್ಥಿತಿಯು ಇಡೀ ಜಗತ್ತು ಭಾರತದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಪ್ರಸಿದ್ಧ ಕಂಪನಿಗಳೊಂದಿಗೆ ಭಾರತದ ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ 700 ಕ್ಕೂ ಹೆಚ್ಚು ಪ್ರದರ್ಶಕರ ಭಾಗವಹಿಸುವಿಕೆಯನ್ನು ಅವರು ಪ್ರಸ್ತಾಪಿಸಿದರು. ಏರೋ ಇಂಡಿಯಾ 2023 ರ ಘೋಷವಾಕ್ಯವಾದ 'ಕೋಟ್ಯಂತರ ಅವಕಾಸಗಳಿಗೆ ರನ್‌ ವೇ' ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, ಆತ್ಮನಿರ್ಭರ ಭಾರತದ ಶಕ್ತಿಯು ಪ್ರತಿದಿನವೂ ಹೆಚ್ಚುತ್ತಲೇ ಇದೆ ಎಂದರು.

ಪ್ರದರ್ಶನದ ಜೊತೆಗೆ ಆಯೋಜಿಸಲಾಗುತ್ತಿರುವ ರಕ್ಷಣಾ ಸಚಿವರ ಸಮ್ಮೇಳನ ಮತ್ತು ಸಿಇಒ ದುಂಡುಮೇಜಿನ ಸಭೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ, ಈ ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಏರೋ ಇಂಡಿಯಾದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.

ಭಾರತದ ತಾಂತ್ರಿಕ ಪ್ರಗತಿಯ ಕೇಂದ್ರವಾಗಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಇದರಿಂದ ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಯುವಜನತೆಗೆ ಹೊಸ ದಾರಿಗಳು ತೆರೆದುಕೊಳ್ಳಲಿವೆ ಎಂದರು. ದೇಶದ ಬಲವರ್ಧನೆಗಾಗಿ ತಮ್ಮ ತಾಂತ್ರಿಕ ಪರಿಣತಿಯನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸುವಂತೆ ಕರ್ನಾಟಕದ ಯುವಜನರಿಗೆ ಪ್ರಧಾನಿ ಕರೆ ನೀಡಿದರು.

"ಹೊಸ ಚಿಂತನೆ, ಹೊಸ ವಿಧಾನದೊಂದಿಗೆ ದೇಶವು ಮುನ್ನಡೆದಾಗ ಅದರ ವ್ಯವಸ್ಥೆಗಳು ಹೊಸ ಚಿಂತನೆಗೆ ಅನುಗುಣವಾಗಿ ಬದಲಾಗಲು ಪ್ರಾರಂಭಿಸುತ್ತವೆ, ಏರೋ ಇಂಡಿಯಾ 2023 ನವ ಭಾರತದ ಬದಲಾಗುತ್ತಿರುವ ವಿಧಾನವನ್ನು ಪ್ರತಿಬಿಂಬಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದೆ ‘ಏರೋ ಇಂಡಿಯಾ ಕೇವಲ ಒಂದು ಪ್ರದರ್ಶನ’ಮತ್ತು ‘ಭಾರತಕ್ಕೆ ಮಾರಾಟ ಮಾಡುವ’ ಅವಕಾಶವಾಗಿತ್ತು, ಆದರೆ ಈಗ ಗ್ರಹಿಕೆ ಬದಲಾಗಿದೆ ಎಂದು ಪ್ರಧಾನಿ ಹೇಳಿದರು. "ಇಂದು, ಏರೋ ಇಂಡಿಯಾ ಭಾರತದ ಶಕ್ತಿಯಾಗಿದೆ ಮತ್ತು ಇದು ಕೇವಲ ಪ್ರದರ್ಶನವಲ್ಲ, ಇದು ರಕ್ಷಣಾ ಉದ್ಯಮದ ವ್ಯಾಪ್ತಿಯನ್ನು ಮಾತ್ರವಲ್ಲದೆ ಭಾರತದ ಆತ್ಮ ವಿಶ್ವಾಸವನ್ನು ಪ್ರದರ್ಶಿಸುತ್ತದೆ” ಎಂದು ಪ್ರಧಾನಿ ಹೇಳಿದರು.

ಭಾರತದ ಯಶಸ್ಸುಗಳು ಅದರ ಸಾಮರ್ಥ್ಯಗಳಿಗೆ ಸಾಕ್ಷಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ತೇಜಸ್, ಐಎನ್‌ಎಸ್ ವಿಕ್ರಾಂತ್, ಸೂರತ್ ಮತ್ತು ತುಮಕೂರಿನ ಸುಧಾರಿತ ತಯಾರಿಕಾ ಘಟಕಗಳು ಆತ್ಮನಿರ್ಭರ ಭಾರತದ ಸಾಮರ್ಥ್ಯವಾಗಿದ್ದು, ಅದರೊಂದಿಗೆ ವಿಶ್ವದ ಹೊಸ ಪರ್ಯಾಯಗಳು ಮತ್ತು ಅವಕಾಶಗಳನ್ನು ಜೋಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

"21ನೇ ಶತಮಾನದ ನವ ಭಾರತವು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಅದರ ಯಾವುದೇ ಪ್ರಯತ್ನದಲ್ಲೂ ಕೊರತೆ ಕಾಣುವುದಿಲ್ಲ" ಎಂದು ಪ್ರಧಾನಿಯವರು ಹೇಳಿದರು, ಸುಧಾರಣೆಗಳ ಸಹಾಯದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಯನ್ನು ತರಲಾಗಿದೆ. ದಶಕಗಳಿಂದ ಅತಿದೊಡ್ಡ ರಕ್ಷಣಾ ಆಮದುದಾರನಾಗಿದ್ದ ರಾಷ್ಟ್ರವು ಈಗ ವಿಶ್ವದ 75 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ ಎಂದು ಅವರು ಒತ್ತಿ ಹೇಳಿದರು.

ಕಳೆದ 8-9 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದ ಪರಿವರ್ತನೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, 2024-25ರ ವೇಳೆಗೆ ರಕ್ಷಣಾ ರಫ್ತುಗಳನ್ನು 1.5 ಶತಕೋಟಿಯಿಂದ 5 ಶತಕೋಟಿಗೆ ಕೊಂಡೊಯ್ಯುವ ಗುರಿ ಇದೆ ಎಂದು ಹೇಳಿದರು. "ಇಲ್ಲಿಂದ ಭಾರತವು ಅತಿ ದೊಡ್ಡ ರಕ್ಷಣಾ ಉತ್ಪಾದನಾ ರಾಷ್ಟ್ರಗಳಲ್ಲಿ ಸೇರ್ಪಡೆಗೊಳ್ಳಲು ಕ್ಷಿಪ್ರ ದಾಪುಗಾಲುಗಳನ್ನು ಹಾಕುತ್ತದೆ ಮತ್ತು ನಮ್ಮ ಖಾಸಗಿ ವಲಯ ಮತ್ತು ಹೂಡಿಕೆದಾರರು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು. ಖಾಸಗಿ ವಲಯವು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ಕರೆ ನೀಡಿದರು, ಇದು ಭಾರತದಲ್ಲಿ ಮತ್ತು ಇತರ ಹಲವು ದೇಶಗಳಲ್ಲಿ ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

"ಇಂದಿನ ಭಾರತವು ವೇಗವಾಗಿ ಯೋಚಿಸುತ್ತದೆ, ದೂರದೃಷ್ಟಿಯಿಂದ ಯೋಚಿಸುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ" ಎಂದ ಶ್ರೀ ಮೋದಿ, ಅಮೃತ ಕಾಲದಲ್ಲಿ ಭಾರತವನ್ನು ಯುದ್ಧ ವಿಮಾನದ ಪೈಲಟ್‌ಗೆ ಹೋಲಿಸಿದರು. ಭಾರತವು ನಿರ್ಭೀತಿಯ, ಹೊಸ ಎತ್ತರಕ್ಕೆ ಏರಲು ಉತ್ಸುಕವಾಗಿರುವ ರಾಷ್ಟ್ರ ಎಂದು ಪ್ರಧಾನಿ ಹೇಳಿದರು. ಭಾರತವು ಎಷ್ಟೇ ವೇಗದಲ್ಲಿ, ಎಷ್ಟೇ ಎತ್ತರಕ್ಕೆ ಹಾರಿದರೂ ಅದು ಯಾವಾಗಲೂ ಭದ್ರವಾದ ಬೇರುಗಳನ್ನು ಹೊಂದಿರುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

"ಏರೋ ಇಂಡಿಯಾದ ಕಿವಿಗಡಚಿಕ್ಕುವ ಘರ್ಜನೆಯು ಭಾರತದ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಸಂದೇಶವನ್ನು ಪ್ರತಿಧ್ವನಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಭಾರತದಲ್ಲಿ 'ಸುಲಭ ವ್ಯವಹಾರ'ಕ್ಕಾಗಿ ಮಾಡಲಾದ ಸುಧಾರಣೆಗಳನ್ನು ಇಡೀ ಜಗತ್ತು ಗಮನಿಸುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಹೂಡಿಕೆಗಳು ಮತ್ತು ಭಾರತೀಯ ನಾವೀನ್ಯತೆಗಳಿಗೆ ಅನುಕೂಲವಾಗುವ ವಾತಾವರಣವನ್ನು ಸೃಷ್ಟಿಸಲು ತೆಗೆದುಕೊಂಡ ವಿವಿಧ ಕ್ರಮಗಳನ್ನು ಅವರು ವಿವರಿಸಿದರು. ರಕ್ಷಣಾ ಮತ್ತು ಇತರ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಮಾಡಿದ ಸುಧಾರಣೆಗಳು ಮತ್ತು ಕೈಗಾರಿಕೆಗಳಿಗೆ ಪರವಾನಗಿಗಳನ್ನು ನೀಡುವ ಪ್ರಕ್ರಿಯೆಗಳ ಸರಳೀಕರಣವನ್ನು ಅವರು ಪ್ರಸ್ತಾಪಿಸಿದರು. ಈ ವರ್ಷದ ಬಜೆಟ್‌ನಲ್ಲಿ ತಯಾರಿಕಾ ಘಟಕಗಳಿಗೆ ತೆರಿಗೆ ಪ್ರಯೋಜನಗಳನ್ನು ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಬೇಡಿಕೆ, ಪರಿಣತಿ ಹಾಗೂ ಅನುಭವ ಇರುವಲ್ಲಿ ಕೈಗಾರಿಕೆ ಬೆಳವಣಿಗೆ ಸಹಜ ಎಂದು ಪ್ರಧಾನಿ ಹೇಳಿದರು. ಈ ಕ್ಷೇತ್ರವನ್ನು ಬಲಪಡಿಸುವ ಪ್ರಯತ್ನಗಳು ಇನ್ನಷ್ಟು ಬಲವಾಗಿ ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದರು.

ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಉಪಸ್ಥಿತರಿದ್ದರು. 

ಹಿನ್ನೆಲೆ

ಪ್ರಧಾನಮಂತ್ರಿಯವರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ದೃಷ್ಟಿಕೋನಕ್ಕೆ ಅನುಗುಣವಾಗಿ, ಸ್ವದೇಶಿ ಉಪಕರಣಗಳು/ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವ ಬಗ್ಗೆ ಪ್ರದರ್ಶನವು ಗಮನ ಕೇಂದ್ರೀಕರಿಸುತ್ತದೆ. ಭಾರತ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಪ್ರಧಾನಮಂತ್ರಿಯವರು ನೀಡುತ್ತಿರುವ ಒತ್ತು ಕೂಡ ಪ್ರದರ್ಶಿಸಲ್ಪಡುತ್ತದೆ, ಈ ಕಾರ್ಯಕ್ರಮವು ವಿನ್ಯಾಸ ನಾಯಕತ್ವದಲ್ಲಿ ದೇಶದ ಪ್ರಗತಿ, ಯುಎವಿ ವಲಯದಲ್ಲಿನ ಬೆಳವಣಿಗೆ, ರಕ್ಷಣಾ ಬಾಹ್ಯಾಕಾಶ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ. ಇದಲ್ಲದೆ, ಲಘು ಯುದ್ಧ ವಿಮಾನ (ಎಲ್‌ ಸಿ ಎ)-ತೇಜಸ್, ಹೆಚ್‌ ಟಿ ಟಿ-40, ಡೋರ್ನಿಯರ್ ಲಘು ಉಪಯೋಗಿ ಹೆಲಿಕಾಪ್ಟರ್ (ಎಲ್‌ ಯು ಹೆಚ್), ಲಘು ಯುದ್ಧ ಹೆಲಿಕಾಪ್ಟರ್ ಎಲ್‌ ಸಿ ಹೆಚ್) ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ (ಎ ಎಲ್‌ ಹೆಚ್) ನಂತಹ ದೇಶೀಯ ಏರ್ ಪ್ಲಾಟ್‌ಫಾರ್ಮ್‌ಗಳ ರಫ್ತುಗಳನ್ನು ಉತ್ತೇಜಿಸುತ್ತದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶೀಯ ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್-ಅಪ್‌ಗಳನ್ನು ಸಂಯೋಜಿಸಲು ಮತ್ತು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗಾಗಿ ಪಾಲುದಾರಿಕೆ ಸೇರಿದಂತೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಈ ಪ್ರದರ್ಶನವು ಸಹಾಯ ಮಾಡುತ್ತದೆ.

ಏರೋ ಇಂಡಿಯಾ 2023 80 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಏರೋ ಇಂಡಿಯಾ 2023 ರಲ್ಲಿ ಸುಮಾರು 30 ದೇಶಗಳ ಸಚಿವರು ಮತ್ತು ಜಾಗತಿಕ ಮತ್ತು ಭಾರತೀಯ ಒಇಎಂ ಗಳ 65 ಸಿಇಒ ಗಳು ಭಾಗವಹಿಸುವ ಸಾಧ್ಯತೆಯಿದೆ.

ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವು ಸುಮಾರು 100 ವಿದೇಶಿ ಮತ್ತು 700 ಭಾರತೀಯ ಕಂಪನಿಗಳು ಸೇರಿದಂತೆ 800 ಕ್ಕೂ ಹೆಚ್ಚು ರಕ್ಷಣಾ ಕಂಪನಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಪ್ರದರ್ಶನದಲ್ಲಿ ಭಾಗವಹಿಸುವ ಭಾರತದ ಕಂಪನಿಗಳಲ್ಲಿ ಸೇರಿವೆ, ಇದು ದೇಶದಲ್ಲಿ ಸ್ಥಾಪಿತ ತಂತ್ರಜ್ಞಾನಗಳ ಪ್ರಗತಿ, ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿನ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ. ಏರೋ ಇಂಡಿಯಾ 2023 ರಲ್ಲಿ ಏರ್‌ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್‌ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಉದ್ಯಮ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್‌ಸಿ ರೊಬೊಟಿಕ್ಸ್, ಎಸ್‌ಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸೆನ್ ಮತ್ತು ಟೌಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ ಎ ಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ ಇ ಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿ ಡಿ ಎಲ್) ಮತ್ತು ಬಿಇಎಂಎಲ್ ಲಿಮಿಟೆಡ್ ಭಾಗವಹಿಸುವ ಪ್ರಮುಖ ಕಂಪನಿಗಳಾಗಿವೆ.


*****



(Release ID: 1898796) Visitor Counter : 194