ಗೃಹ ವ್ಯವಹಾರಗಳ ಸಚಿವಾಲಯ

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ನವದೆಹಲಿಯಲ್ಲಿ ಪುಷ್ಪ ನಮನ ಸಲ್ಲಿಸಿದರು


ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಗೃಹ ಸಚಿವರು ಏಕತಾ ಓಟಕ್ಕೆ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಶ್ರೀ ಅಮಿತ್ ಶಾ ರಾಷ್ಟ್ರೀಯ ಏಕತೆಯ ಪ್ರಮಾಣ ವಚನ ಬೋಧಿಸಿದರು
ನಿನ್ನೆ ಗುಜರಾತ್ನ ಮೋರ್ಬಿಯಲ್ಲಿ ಸಂಭವಿಸಿದ ಸೇತುವೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಗೃಹ ಸಚಿವರು ಸಂತಾಪ ಸೂಚಿಸಿದರು

ಸ್ವಾತಂತ್ರ್ಯಾನಂತರ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ ಮತ್ತು ಅದನ್ನು ಸಾಕಾರಗೊಳಿಸುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸರ್ದಾರ್ ಪಟೇಲ್ ಅವರ ಜನ್ಮದಿನದಂದು ನಾವು ಇಂದು ರಾಷ್ಟ್ರೀಯ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ

ಸರ್ದಾರ್ ಸಾಹಿಬ್ ತಮ್ಮ ದಕ್ಷ ರಾಜಕೀಯ ಸಾಮರ್ಥ್ಯದಿಂದ 500 ಕ್ಕೂ ಹೆಚ್ಚು ರಾಜಪ್ರಭುತ್ವಗಳ ಸಂಸ್ಥಾನಗಳನ್ನು ಒಂದುಗೂಡಿಸುವ ಮೂಲಕ ಏಕ ಭಾರತದ ಕನಸನ್ನು ನನಸಾಗಿಸಿದರು

ಆ ದಿನಗಳಲ್ಲಿಯೂ ದೇಶವಿರೋಧಿ ಶಕ್ತಿಗಳು ದೇಶವನ್ನು ವಿಭಜಿಸುವ ಪ್ರಯತ್ನಗಳನ್ನು ಮಾಡಿದವು, ಆದರೆ ಸರ್ದಾರ್ ಸಾಹಿಬ್ ಅವರಿಂದಾಗಿ ನಾವು ಇಂದಿನ ಅಖಂಡ ಭಾರತದ ಭೂಪಟವನ್ನು ನೋಡುತ್ತಿದ್ದೇವೆ

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಗುಲಾಮಗಿರಿಯಿಂದ ಮುಕ್ತವಾದ ಸಮೃದ್ಧ, ಬಲಿಷ್ಠ ಮತ್ತು ಸುಭದ್ರ ಭಾರತದತ್ತ ಸಾಗುತ್ತಿದೆ

2047 ರಲ್ಲಿ ಭಾರತ ಹೇಗಿರಬೇಕು ಎಂಬ ಬಗ್ಗೆ ಸಾಮೂಹಿಕ ಪ್ರತಿಜ್ಞೆಯ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ

Posted On: 31 OCT 2022 2:06PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧಂನಕರ್, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನವದೆಹಲಿಯಲ್ಲಿ ಪುಷ್ಪ ನಮನ ಸಲ್ಲಿಸಿದರು.

ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಗೃಹ ಸಚಿವರು ಏಕತಾ ಓಟಕ್ಕೆ ಚಾಲನೆ ನೀಡಿದರು. ವಿದೇಶಾಂಗ ಸಚಿವ ಶ್ರೀ ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಅಮಿತ್ ಶಾ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ರಾಷ್ಟ್ರೀಯ ಏಕತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ನಿನ್ನೆ ಗುಜರಾತ್ನ ಮೋರ್ಬಿಯಲ್ಲಿ ಸಂಭವಿಸಿದ ಸೇತುವೆ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಶ್ರೀ ಅಮಿತ್ ಶಾ ಅವರು ಸಂತಾಪ ಸೂಚಿಸಿದರು.

ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಕಾರಣ ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸ್ವಾತಂತ್ರ್ಯಾನಂತರ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ ಮತ್ತು ಅದನ್ನು ಸಾಕಾರಗೊಳಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿಯ ಜನ್ಮದಿನದಂದು ನಾವು ರಾಷ್ಟ್ರೀಯ ಏಕತೆಯ ಮಹತ್ವದ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಹೇಳಿದ ತಕ್ಷಣ, ಇಂದಿನ ಅಖಂಡ ಭಾರತದ ಭೂಪಟವು ನಿಮ್ಮ ಮನಸ್ಸಿಗೆ ಬರುತ್ತದೆ. ಸರ್ದಾರ್ ಸಾಹೇಬ್ ಇಲ್ಲದಿದ್ದರೆ, ಇಂದಿನ ವಿಶಾಲವಾದ, ದೃಢವಾದ, ಶಕ್ತಿಯುತ ಭಾರತವು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರೀ ಶಾ ಹೇಳಿದರು.

ಸ್ವಾತಂತ್ರ್ಯದ ನಂತರ, ದೇಶವು ಎದುರಿಸಿದ ದೊಡ್ಡ ಸಮಸ್ಯೆ ಎಂದರೆ, 500 ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ರಚಿಸುವುದಾಗಿತ್ತು ಮತ್ತು ಅದರ ರಚನೆಯಲ್ಲಿ ದೇಶದ ಮೊದಲ ಗೃಹ ಮಂತ್ರಿ ಮತ್ತು ಉಪ ಪ್ರಧಾನಿ ಸರ್ದಾರ್ ಸಾಹೇಬರು ಪ್ರಮುಖ ಪಾತ್ರ ವಹಿಸಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ತಮ್ಮ ನೈಪುಣ್ಯತೆ ಮತ್ತು ವಿಶಿಷ್ಟ ರಾಜಕೀಯ ಚಾಣಾಕ್ಷತೆಯಿಂದ ಇಡೀ ದೇಶವನ್ನು ಒಂದುಗೂಡಿಸಿದವರು ಸರ್ದಾರ್ ಸಾಹಿಬ್ ಎಂದು ಅವರು ಹೇಳಿದರು. ಆ ಸಮಯದಲ್ಲಿಯೂ ದೇಶವಿರೋಧಿ ಶಕ್ತಿಗಳು ದೇಶವನ್ನು ವಿಭಜಿಸುವ ಪ್ರಯತ್ನಗಳನ್ನು ಮಾಡಿದವು. ಆದರೆ ಸರ್ದಾರ್ ಸಾಹಿಬ್ ಅವರ ಪ್ರಯತ್ನದಿಂದಾಗಿ ನಾವು ಇಂದಿನ ಸಮಗ್ರ ಭಾರತದ ಭೂಪಟವನ್ನು ನೋಡಲು ಸಾಧ್ಯವಾಯಿತು ಎಂದು ಶ್ರೀ ಶಾ ಹೇಳಿದರು.

2047 ರಲ್ಲಿ ಭಾರತ ಹೇಗಿರಬೇಕು ಎಂಬ ಬಗ್ಗೆ ಸಾಮೂಹಿಕ ಪ್ರತಿಜ್ಞೆಯ ಗುರಿಯನ್ನು ಹೊಂದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಭಾರತವು ತನ್ನ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

130 ಕೋಟಿ ಜನರ ಮತ್ತು ದೇಶದ ರಾಜ್ಯಗಳ ಸಾಮೂಹಿಕ ಸಂಕಲ್ಪವು 2047 ರಲ್ಲಿ ಸರ್ದಾರ್ ಸಾಹೇಬರ ಕಲ್ಪನೆಯ ಭಾರತವನ್ನು ನಿರ್ಮಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ ಎಂದು ಅವರು ಹೇಳಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಲ್ಲಿ ದೇಶವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ ಮತ್ತು ಗುಲಾಮಗಿರಿಯಿಂದ ಮುಕ್ತವಾದ ಸ್ವಾಭಿಮಾನಿ, ಸಮೃದ್ಧ, ಬಲವಾದ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸುವತ್ತ ಸಾಗಿದೆ ಎಂದು ಎಂದು ಶ್ರೀ ಶಾ ಹೇಳಿದರು.

ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಮೂಲಕ ಭಾರತವು ಇಂದು ಹಲವು ರಾಷ್ಟ್ರಗಳ ನಡುವೆ ಹೆಮ್ಮೆಯಿಂದ ನಿಂತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹಲವು ವರ್ಷಗಳಿಂದ ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಕಡೆಗಣಿಸಲು ಪ್ರಯತ್ನಿಸಿದರೂ ಅವರು ತಮ್ಮ  ವ್ಯಕಿತ್ವದಿಂದ ಅಮರರಾಗಿದ್ದಾರೆ ಮತ್ತು ಇಂದು ಸರ್ದಾರ್ ಪಟೇಲ್ ಅವರು ರಾಷ್ಟ್ರದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾರ್ಗವನ್ನು ಅನುಸರಿಸುವ ಪ್ರತಿಜ್ಞೆ ಸ್ವೀಕರಿಸಲು ಇಂದು ದೇಶಾದ್ಯಂತ ಏಕತಾ ಓಟಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಮಹತ್ತರ ಕಾರ್ಯಗಳನ್ನು ಸ್ಮರಿಸಿದ ಶ್ರೀ ಅಮಿತ್ ಶಾ ಅವರು ಸರ್ದಾರ್ ಪಟೇಲ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವಂತೆ ಮತ್ತು 2047 ರ ವೇಳೆಗೆ ಅವರ ಸಂಕಲ್ಪವನ್ನು ಈಡೇರಿಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.

****



(Release ID: 1872502) Visitor Counter : 162